Tuesday, November 26, 2013

ಅಣ್ಣ...ನಿನಗೆ ಶುಭಾಶಯ

ಆಗ ನನಗೆ ಸರಿಯಾಗಿ ಇಂಟರ್ನೆಟ ಕಂಪ್ಯೂಟರ್ ಬಳಕೆ ಬರುತ್ತಿರಲಿಲ್ಲ ದೂರದೇಶದಲ್ಲಿದ್ದ ಇವರೊಂದಿಗೆ ಈಡಿ ದಿನ ಫೋನ್ ನಲ್ಲಿ ಮಾತಾಡಲು ಆಗುತ್ತಿರಲಿಲ್ಲ ಅದಕ್ಕೆ ಅನಿವಾರ್ಯತೆಯ ದೆಸೆಯಿಂದ ನಾನು ದಿನ ಕರ್ನಾಟಕ ವಿಶ್ವವಿದ್ಯಾಲಯದ ಕಂಪ್ಯೂಟರ್ ಲ್ಯಾಬಿಗೆ ಕನಿಷ್ಠ ಒಂದು ಘಂಟೆ ಹೋಗಿ ಅಕ್ಕ ಪಕ್ಕದವರನ್ನು ಕೇಳಿ ಸ್ವಲ್ಪ ಸ್ವಲ್ಪ  ಕಂಪ್ಯೂಟರ್ ಕಲಿಯತೊಡಗಿದ್ದೆ.

ಹಾಗೊಂದುದಿನ  ಯಾರೋ ಲಾಗ್ ಆಫ ಮಾಡದೆ ಬಿಟ್ಟು ಹೋದ ಸಿಸ್ಟಂ ಮುಂದೆ ಕುಳಿತಾಗ ಕನ್ನಡ ಅಕ್ಷರಗಳು ಕಂಡಿದ್ದವು
ಅದರಿಂದ ಇನ್ನೊಂದು ಮತ್ತೊಂದು ಪುಟ ತೆರೆಯುತ್ತಲೇ ಹೋದವು ಹಾಗೆ ಸಿಕ್ಕಿದ್ದು ಅವ ನಂಗೆ . ಆತ ನಗುವ ಚಂದಿರನ ಬಗ್ಗೆ ಬರೆದಿದ್ದ (ಆಗ ನಕ್ಷತ್ರ  ಗಳು ಚಂದ್ರನ ಕಣ್ಣುಗಳಂತೆ ಚಂದ್ರ ನಕ್ಕಂತೆ ಬಾಂದಳ ಚಿತ್ತಾರ ಬರೆದಿತ್ತು ) ಹಾಗೆ ಒಂದೊಂದೇ ಬರಹ ಓದುತ್ತ ಹೋಗಿ ಅಲ್ಲೇ ಇದ್ದ ಅವನ ಮಿಂಚಂಚೆ ವಿಳಾಸಕ್ಕೆ ಒಂದು ಪುಟ್ಟ ಪತ್ರ ಬರೆದಿದ್ದೆ  (ಈ ಬರಹಗಳಿದ್ದ ಇ-ಪುಟಗಳನ್ನ ಬ್ಲಾಗ್ ಅಂತಾರೆ ಅಂತ ತಿಳಿದಿದ್ದು ಸ್ವಲ್ಪ ತಡವಾಗಿ) ನಗುವ ಚಂದಿರನ ಉಳಿದ ಫೋಟೋ ಗಳನ್ನು ಕಳಿಸಲಾದೀತೇ ??? ಎಂದು . ಮರುದಿನ ಅವನ ಉತ್ತರ ಬಂದಿತ್ತು ಹಾಗಾಗಿತ್ತು ನಮ್ಮಿಬ್ಬರ ಪರಿಚಯ ಅವನ ಇಮೇಲ್ ವಿಳಾಸದಲಿದ್ದ ಸಂಖ್ಯೆ ಅವ ಜನಿಸಿದ ಇಸವಿ ಮತ್ತು ಅವ ನನಗಿಂತ ದೊಡ್ಡವನು ಅನ್ನೋದು ನನ್ನ  ಊಹೆ ನಿಜವಾಗಿತ್ತು.  ಅವನ ಬರಹಗಳನ್ನ ಓದುತ್ತ ಓದುತ್ತ ಪದೇ ಪದೇ ಮನಸಿಗೆ ಬರುತ್ತಿದ್ದ ಭಾವ ಎಂದರೆ ‘’ ಹಿಂದೊಮ್ಮೆ ನಾನು ಹೀಗೆ ಬರೆಯುತ್ತಿದ್ದೆ ಅದೇ ಧಾಟಿಯಲ್ಲಿ ‘’ ಈಗ್ಯಾಕೆ ಆಗ್ತಿಲ್ಲ ..... ಯಾಕೋ ಅವನ ಮೇಲೆ ಹೊಟ್ಟೆಕಿಚ್ಚು ಶುರುಆಗಿತ್ತು ...

ಹಾಗೆ ಒಂದು ದಿನ ಹುಬ್ಬಳ್ಳಿಯ ಹಳೆ  ಬಸ್ಸ ನಿಲ್ದಾಣದ  ಹತ್ತಿರ ಒಂದು ಪುಸ್ತಕದಂಗಡಿಯಲ್ಲಿ ಸಖಿ ಎಂಬ ಪತ್ರಿಕೆ ನೋಡಿದ್ದೆ  ಅದರಲ್ಲೂ ಈ ನಗುವ ಚಂದಿರ ಕಳುಹಿಸಿದವನ ಅನುವಾದಿತ ಕತೆ ಬರುತ್ತಿದ್ದವು. ಅವನ ಮೇಲೆ ಹೊಟ್ಟೆಕಿಚ್ಚು ಜಾಸ್ತಿ ಆಗಿತ್ತು
ಹಾಗೆ ನೋಡಿದರೆ ಅದೆಷ್ಟು ಲೇಖನಗಳು ಅದೆಷ್ಟು ಹೊಸ ವಿಚಾರಗಳು ,ಹೊಸ ಹೆಸರುಗಳು ಆದರೆ ನನಗೆ ಹೊಟ್ಟೆಕಿಚ್ಚು ಆಗುತ್ತಿದ್ದುದು ಇವನ ಮೇಲೆ ಯಾಕೋ ಗೊತ್ತಿಲ್ಲ , ಸ್ಪೂರ್ತಿ ಯೋ ಹಠವೋ ಒಟ್ಟಿನಲ್ಲಿ ೪ ವರುಷಗಳ ನಂತರ ನಾನು ಒಂದು ಪುಟ್ಟ ಬರಹವನ್ನ ಸಖಿಗೆ ಕಳಿಸಿದ್ದೆ , ಅದನ್ನು ಮೆಚ್ಚಿ ಅವರ ಕಡೆಯಿಂದ ನನಗೆ ಫೋನ್ ಬಂತು ಮತ್ತೆ ಬರೆಯುತ್ತೀರಾ ಎಂದು ?? ಮನಸ್ಸು ಹೊಸ ರೀತಿಯಲ್ಲಿ ಆಲೋಚಿಸ ತೊಡಗಿತ್ತು ಪ್ರತಿ ಘಟನೆಯನ್ನು ಭಿನ್ನ ದೃಷ್ಟಿಕೋನದಲ್ಲಿ ಅವಲೋಕಿಸತೊಡಗಿದ್ದೆ
ಸಖಿ ಪತ್ರಿಕೆಯ ದೆಸೆಯಿಂದ ನನಗೆ ಅದೆಷ್ಟು ಒಳ್ಳೆಯ ಸ್ನೇಹಿತರು ಮಾರ್ಗದರ್ಶಕರು ದೊರೆತರು ಅವರೆಲ್ಲರ ಕುರಿತು ಮತ್ತೊಮ್ಮೆ ಬರೆಯುತ್ತೇನೆ , ಹಾಗೆ ನನ್ನ ಬರವಣಿಗೆ ಮತ್ತೆ ನನ್ನ ಕೈಗೆ ದೊರಕಿದಾಗ ಅವನ ಮೇಲಿದ್ದ ಒಂಥರ ಹೊಟ್ಟೆಕಿಚ್ಚು, ಅದೆಂಥದೋ ಮಮಕಾರ , ಆರಾಧನೆಯಲ್ಲಿ ಬದಲಾಗಿತ್ತು. ಅದೊಂದು ಸಾರಿ ನಾನು ಅವನು ಬರೆದ ಲೇಖನ ಅಕ್ಕ ಪಕ್ಕದ ಪುಟಗಳಲ್ಲಿ ಪ್ರಕಟ ವಾಗಿತ್ತು   ಅದೆಷ್ಟು ಸಂಭ್ರಮ ಅನುಭವಿಸಿದ್ದೆ ನಾನು , ಆತ ಮಾತ್ರ ಯಾವತ್ತು ನನ್ನನ್ನ ಹೊಗಳಲಿಲ್ಲ  . ಎಲ್ಲವನ್ನೂ ಸುಮ್ಮನೆ ಗಮನಿಸುತ್ತಿದ್ದನೇನೋ!!!

ಆಮೇಲೆಲ್ಲ ಏನು ಬರೆದರೂ ಅವನಿಗೆ  ಇಮೇಲ್ ಮಾಡೋದು ರೂಡಿ , ಒಂದುಸಾರಿ ಇಮೇಲ್ ಮಾಡುವಾಗ ಸಬ್ಜೆಕ್ಟ್ ನಲ್ಲಿ ಕಾಮೆಂಟ್ಸ್ ಪ್ಲೀಸ್  ಅಂದು ಬರೆದಿದ್ದೆ  ಲೇಖನ ಓದುವ ಮುನ್ನ ಅವನ ಉತ್ತರ ಬಂದಿತ್ತು ‘’ ಬರಹಗಳನ್ನೂ ಓದೋಕೆ ಅಂತ ಬರೀ ಪ್ರಶಂಸೆ ಪಡೆಯೋಕೆ ಅಲ್ಲ !! ‘’ ಹೀಗೆ ಪ್ರತಿ ಘಟ್ಟದಲ್ಲೂ ಅವ ನನ್ನ ಕಿವಿ ಹಿಂಡಿದ ದೂರ ಇದ್ದೇ  ನನ್ನ ತಿದ್ದಿದ , ಅತಿ ಭಾವುಕಿ ನಾನು ತೀರ ಪ್ರಾಕ್ಟಿಕಲ್ ಅನ್ನಿಸುವ ಅವನು ...

ಆ ತನಕ ನಮ್ಮ ಬಾಂಧವ್ಯ ಇಮೇಲ್ ಮತ್ತು ಮೊಬೈಲ ಮೆಸೇಜ್ ಗಳಿಗೆ ಸೀಮಿತವಾಗಿತ್ತು, ಒಂದು ಭಾನುವಾರ ನಾ ಅವನಿಗೆ ಫೋನ್ ಮಾಡಿ ಮಾತಾಡಿದೆ. ಆಮೇಲೆ ಸಮಯ ಸಿಕ್ಕಾಗಲೆಲ್ಲ , ಅವನಿಗೆ ಪುರುಸೊತ್ತಿದ್ದಾಗ ಸುಮ್ಮನೆ ಅವನ ತಲೆ ತಿಂತಿದ್ದೆ ಇಷ್ಟಾದರೂ ಅವನ ನನ್ನ ಬಾಂಧವ್ಯಕ್ಕೆ ಸ್ನೇಹ ಅನ್ನುವ ಹೆಸರೇ ಇತ್ತು .

ಆ ವರುಷದ  ರಕ್ಷಾ ಬಂಧನದಂದು ಅವನ ಹತ್ತಿರ ಕಾಡಿ ಬೇಡಿ ಅವನ ವಿಳಾಸ ತಗೊಂಡು ಅವನಿಗೊಂದು ರಾಖಿ ಕಳಿಸಿದೆ.ಅವತ್ತಿಗಾಗಲೇ ನಾನು ಯಾರನ್ನು ಅಣ್ಣ ಅಂತ ಕರೆಯದೆ ವರುಷಗಳೇ ಕಳೆದಿದ್ದವು. ಬಾಲ್ಯದಿಂದಲೂ ನಾನು ಬಯಸಿದ್ದ ಅಣ್ಣ ಎಂಬ ಕಂಫರ್ಟ್ ಜೊನ ನನಗ್ಯಾವತ್ತು ಸಿಕ್ಕಿರಲಿಲ್ಲ , ಅತಿಯಾಗಿ  ಗೌರವಿಸಿದ್ದವರು ನನ್ನ ಸ್ವಾಭಿಮಾನ ಕ್ಕೆ ಪೆಟ್ಟು ಕೊಟ್ಟಿದ್ದರು , ಅವತ್ತಿಂದ ನಾನು ಯಾರನ್ನು ಅಣ್ಣ ಅಂತ ಕರೆಯುತ್ತಲೇ ಇರಲಿಲ್ಲ ಅಷ್ಟಕ್ಕೂ ಹುಡುಗಿ ಹುಡುಗ ಪ್ರೀತಿಯಿಂದ ಇರೋಕೆ ಅಕ್ಕರೆ ತೋರಿಸೋಕೆ ಒಂದು ನಿರ್ದಿಷ್ಟ ಸಂಬಂಧ ಅಗತ್ಯವಿದೆ ಎಂದು ಯಾವತ್ತು ನನಗೆ ಅನಿಸಿರಲಿಲ್ಲ ಅದನ್ನೆಲ್ಲ ಮೀರಿ ಇವನಿಗೆ ರಾಖಿ ಕಳಿಸುವ ಮನಸ್ಸಾಗಿತ್ತು ಅವ ಅದನ್ನು ಕಟ್ಟಿ ಕೊಂಡನೋ ಹಾಗೆ ಇಟ್ಟನೊ ಗೊತ್ತಿಲ್ಲ ಅವತ್ತಿಂದ ಅವ ನನಗೆ ಅಣ್ಣ ಆಗಿದ್ದ ಮೊದಲಿಂದಲೂ ಅಣ್ಣ ನೆ ಆಗಿದ್ದವನನ್ನ ಅವತ್ತು ಅಣ್ಣ ಅಂತ ಕರೆದಿದ್ದೆ  ಅಷ್ಟೇ !!
ನನ್ನ ಪಾಸ್ಪೋರ್ಟ್ ಕೆಲಸಕ್ಕೆ ಬೆಂಗಳೂರಿಗೆಹೋದಾಗ ಅವ ನನ್ನ ಭೇಟಿ ಆಗೋಗೆ ಬಂದಿದ್ದ ಜೋತೆಗೊಂದು ಡೈರಿ ಮಿಲ್ಕ್
ನನ್ನ ಬಸ್ಸ ಬಿಡುವವರೆಗೂ ನನ್ನ ಪಕ್ಕ ಕುಳಿತು ‘’ ಕೆರ್ಫುಲ್ಲಾಗಿ ಹೋಗು ಹುಷಾರು ‘’ ಅಂದು ಬಿಳ್ಕೊದುವಾಗ ಅದೆಷ್ಟು ಅಕ್ಕರೆ ಇತ್ತು ಅವನ ದನಿಯಲ್ಲಿ. ಎಷ್ಟೋ ವಿಘ್ನಗಳ ನಂತರ ನಾನು ಬಂದು ಯುಕೆ ಸೇರಿಕೊಂಡೆ ನಂತರವೂ ಅವ ಹಾಗೆ ಇದ್ದ ಯಾರು ಇಲ್ಲ ಅಂದು ಬಿಕ್ಕುವಾಗ ಯಾಕೆ ನಾನಿಲ್ಲವ ಅನ್ನುವ ದನಿಯಾಗಿ . ಈ ನಡುವೆ ಅವ ಒಮ್ಮೆ ಅಮೆರಿಕೆಗೆ ಹೋಗಿ ಬಂದ ಅಲ್ಲಿಯೂ ನಾವು ಸ್ಕೈಪ್ ನ ದಯೆಯಿಂದ ಮಾತಾಡುತ್ತಲೇ ಇದ್ದೆವು ...

ಬಂದು ಒಂದೂವರೆ ವರುಷಕ್ಕೆ ಊರಿಗೆ ಹೋಗಿದ್ದೆ  ವಾಪಾಸು ಬರುವ ಮೊದಲು ಅವನನು ನೋಡಬೇಕೆನಿಸಿತ್ತು. ಬಾ ಎಂದಿದ್ದೆ ನನಗಾಗಿ ೧.೦೦ ಘಂಟೆ ಕನ್ನಡಭವನದ ಮುಂದೆ ಕಾದಿದ್ದ , ಅದೆಷ್ಟು ಹೊತ್ತು ಮಾತಾಡಿದ್ದೆವು ಏನು ಅಂತ ಕೇಳಿದರೆ ಇಬ್ಬರಿಗೂ ನೆನಪಿಲ್ಲ !! ಮಾತಾಡಿ ಸುಸ್ತಾದ ಅವನಿಗೆ ಇರುವೆ ಹತ್ತಿದ ಪರಾಟ ತಿನ್ನಿಸಿದ್ದೆ  ಬೈದು ಬೈದು ತಿಂದಿದ್ದ . ವಾಪಸು  ಬರುವ ಮುನ್ನ ಅಲ್ಲೇ ಕ್ಯಾಂಟೀನಿನಲ್ಲಿ ಚಾ ಕುಡಿಯಲು ಹೋದೆವು ಖಾಲಿಯಾದ ಛಾಯಾ ಕಪ್ಪನ್ನು ಸೋರ್ರ್ರ್ ಎಂದು ಶಬ್ದ ಮಾಡುತ್ತ ಕುಡಿಯುತ್ತಲಿದ್ದ ಅವನನ್ನು ನೋಡಿ  ಅವ ಪಕ್ಕಾ ನನ್ನ ಅಣ್ಣನೆ ಎಂದು ಅನಿಸಿತ್ತು. ಯಾವುದೇ ತೋರಿಕೆ , ಗರ್ವ ಇಲ್ಲದ ಸರಳ ಜೀವಿ .

ನಾ ಅಷ್ಟು ಮೆಚ್ಚುವ ಅಣ್ಣನಿಂದ ಒಂದೇ ಒಂದು ಹೊಗಳಿಕೆ ಮೆಚ್ಚಿಗೆ ಪಡೆಯಲು  ನಾನು  ಹವಣಿಸಿದ್ದೇನೆ ಬಹಳ ಕಾದಿದ್ದೇನೆ ,
ತುಂಬಾ ಕಂಜೂಸು ಮನುಷ್ಯ , ಅಪ್ಪಿ ತಪ್ಪಿಯೂ ಒಳ್ಳೆ ಮಾತು ಹೇಳಲ್ಲ  ಏನೇ ಬರೆದರೂ ಏನೇ ಹೇಳಿದರು ಅದಕ್ಕೆ ಅವನ ತಕರಾರು ಇರುತ್ತೆ , ಏನಾದರು ಹೇಳಿಕೊಡು ಅಂದಾಗ ‘’ ನಾ ಯಾಕ ಹೇಳಿ ಕೊಡಲಿ ನೀ ಕಲಿ’’ ರಿಸರ್ಚ್ ಅಂಡ್ ಡೆವಲೋಪ್ಮೆಂಟ್’’ ಮಾಡು ಆಗಷ್ಟೇ ನೀ ಬೆಳಿತೀಯ ಅಂತಾನೆ . ನನ್ನ ಫೆಸ್ಬೂಕ್  ನ ಯಾವುದೇ ಸ್ಟೇಟಸ್ ಗೆ ಕಂಮೆಂಟ್ ಕೊಡಲು ನೆನಪಿರದಿದ್ದರು ನಾನು ಸ್ವಲ್ಪ ಜಾಸ್ತಿ ಆಕ್ಟಿವ್ ಆದಾಗ ‘’ ಭಾಳ ಆಯ್ತು ನಿಂದು’’ ಅಂತ ಒಂದು ಮೆಸೇಜ್ ನಿಂದ ಮೊಟಕುತ್ತಾನೆ.

ಅವನ ಬಗ್ಗೆ ಬರೆಯೋಕೆ ಸಾಕಷ್ಟಿದೆ........  ಎಂದು ಇಲ್ಲದ್ದು ಈವತ್ಯಾಕೆ ಅಂತೀರಾ? ನನ್ನ ಅಣ್ಣ ಮದುವೆ ಅಗ್ತಿದ್ದಾನೆ . ಅತ್ತಿಗೆ ಬಂದಮೇಲೆ ಹೇಗೋ ಏನೋ ? (ತಂಗಿಯ ಸಹಜ ಕಳವಳ ) ನಮ್ಮ ಮನೆಯ ಚಿಕ್ಕಪ್ಪಂದಿರು ಮದುವೆ ಆಗುವಾಗ ನಾನು ಅಳುತ್ತಿದ್ದೆ  ಇನ್ನು ಅವರು ನನಗೆ ಮುದ್ದು ಮಾಡುವುದಿಲ್ಲ ಎಂದು , ಈಗ ಹಾಗೆ ಮನಸು ಒಂದೆಡೆ ಖುಷಿ ಮತ್ತೊಂದೆಡೆ ದುಗುಡ ಅನುಭವಿಸ್ತಿದೆ , ಅಣ್ಣ ತಂಗಿ ಆಗಲು ಒಡಹುಟ್ಟಿದವರಾಗಬೇಕಿಲ್ಲ , ಒಡಹುಟ್ಟಿದ ಅಣ್ಣ ಇಷ್ಟು ಮುದ್ದಿಸಬೇಕೆನ್ನುವ ಕಾನೂನು ಇಲ್ಲ ಎಲ್ಲ ನಸೀಬಿನ ಮಾತು .
ಈ ಅಣ್ಣ ತಂಗಿ ಬಾಂಧವ್ಯದ ಬಗ್ಗೆ  ನಂಬಿಕೆಯೇ ಇಲ್ಲದ ಹೊತ್ತಲ್ಲಿ ನನಗೆ ದೇವರು ಕರುಣಿಸಿದ ವರ ಅವನು..
ಅವನ ಪ್ರೀತಿ ನನ್ನ ಮೇಲೆ ಯಾವತ್ತಿಗೂ ಹೀಗೆ ಇರಲಿ ಅತ್ತಿಗೆ ಬಂದ ಮೇಲೂ.



ಪ್ರೀತಿಯ ಅಣ್ಣ .
ಮದುವೆಯ ದಿನದ ಹಾರ್ದಿಕ ಶುಭಾಶಯಗಳು
 ಇಬ್ಬರೂ ಖುಷಿಯಾಗಿರಿ ಯಾವತ್ತು !!
ನಿನ್ನ ಮದುವೆಗೆ ಬರಲಾಗುತ್ತಿಲ್ಲ , ಅದಕ್ಕೆ ಮುಂದಿನ ಸಾರಿ ಬಂದಾಗ ನಾ ಹೇಳಿದ
ಹೋಟೆಲಿಗೆ ಉಟಕ್ಕೆ ಕರ್ಕೊಂಡು  ಹೋಗು ,
ನಿನ್ನ ಮದುವೆಗೆ ಎರಡು ದಿನ ಮೊದಲು ಬಂದು
ಮದುವೆ ಮುನ್ನಾದಿನ  ಸಂಗೀತ ಕಚೇರಿ ಮಾಡ್ತೀನಿ ಅಂತ ಹೇಳಿದ್ದೆ ನಿನಗೆ ನೆನಪಿದೆಯೋ ಇಲ್ಲವೋ
ಆದರೆ ಎಲ್ಲ ಮಿಸ್ ಮಾಡ್ತಾ ಇದ್ದೀನಿ.. ನನ್ನ ಲೆಕ್ಕದ ಸೀರೆ ತೆಗೆದಿಡು  ...
ಪ್ರೀತಿಯಿಂದ
ನಿನ್ನ

ಅಮಿತಿ 

Thursday, August 1, 2013

ಮಾರ್ಬಲ್ ಆರ್ಚ್ ಕೇವ್ಸ್ - ಗುಹಾಂತರಂಗದೊಳಗೊಂದು ದಿನ



 ಮನುಷ್ಯನ ತಣಿಯದ  ಕುತೂಹಲ ಅದೆಷ್ಟೋ ಆವಿಷ್ಕಾರಗಳಿಗೆ ಕಾರಣ ವಾಗಿದೆ , ಮಾನವನ ಪ್ರತಿ ಹೊಸ ಹುಡುಕಾಟದ ಅಂತ್ಯದಲ್ಲಿ ನಿಸರ್ಗ ಮತ್ತೊಂದು ಒಗಟನ್ನು ಬಿಸಾಕಿ ನಗುತ್ತ ನಿಲ್ಲುತ್ತದೆ ಮಾನವ ಮತ್ತೆ ಹುಡುಕುತ್ತಾನೆ ಹುಡುಕುತ್ತಲೇ ಇರುತ್ತಾನೆ , ನಿಸರ್ಗದ ಚಲುವು ಮತ್ತು ಮಾನವನ ಕೌಶಲ್ಯ ಎರಡು ಜೊತೆಗೆ ನಿಂತು ಮಾತನಾಡುವುದು ಅಪರೂಪಕ್ಕೆ ಕಾಣಸಿಗುವ ದೃಶ್ಯ , ಅಂಥದ್ದೊಂದ್ದು ನಿಸರ್ಗ ದ ವಿಸ್ಮಯ ಮತ್ತು ಮಾನವನು ಅತಿ ಜತನದಿಂದ ಅದರ ಮೂಲರೂಪಕ್ಕೆ ಧಕ್ಕೆ ಬಾರದಂತೆ ಕಾದುಕೊಂಡಿರುವ ಅಪರೂಪದ ಸ್ಥಳವೇ  ನೋರ್ದರ್ನ್ ಐರ್ಲಾಂಡ್ ನ '' ಮಾರ್ಬಲ್ ಆರ್ಚ್ ಕೇವ ''

 ಭೂಮಿಯ ಮೆಲ್ಪದರಿನಲ್ಲಿ ರೂಪುಕೊಳ್ಳುವ ಅನೇಕರೀತಿಯ ಗುಹೆಗಳನ್ನು ತಜ್ಞರು ಗುರುತಿಸುತ್ತಾರೆ ಮತ್ತು ಅವುಗಳು ರೂಪುಗೊಂಡಿರುವ ರೀತಿ ವಿನ್ಯಾಸ ಲಕ್ಷಣ ಗಳನ್ನ ಗಮನಿಸಿ ಗುಹೆಗಳನ್ನು ಹಲವು ರೀತಿಯಲ್ಲಿ ವಿಂಗಡಿಸುತ್ತಾರೆ ಅವುಗಳಲ್ಲಿ ಕೆಲವು ಇಲ್ಲಿವೆ .
೧, ಸೊಲ್ಯುಶನ್ ಕೇವ್ಸ್
ಸುಣ್ಣದ ಕಲ್ಲು ಮತ್ತು ನೀರಿನ ನಿರಂತರ ಸಹಚರ್ಯ ರೂಪಿಸುವ ಗುಹೆಗಳು .

೨,ವೋಲ್ಕಾ ಕೇವ್ಸ್
ಭೂಮಿಯೊಳಗಿಂದ ಉಕ್ಕುವ ಲಾವಾ , ಜ್ವಾಲಾಮುಖಿಗಳು ತಣಿದು ಹೋದಮೇಲೆ ಉಂಟಾದ ಗುಹೆಗಳು

೩,ತಲುಸ್ ಕೇವ್ಸ್
ಎತ್ತರ ಪರ್ವತ ಪ್ರದೇಶದಿಂದ ನೈಸರ್ಗಿಕ ವೈಪರಿತ್ಯ ಗಳಿಂದ  ಕಲ್ಲುಗಳು ಉರುಳಿ ಪರ್ವತದ ಕೆಳಭಾಗದಲ್ಲಿ ಉಂಟುಮಾಡುವ ಗುಹೆಗಳು.

೪.ಸೀ ಕೇವ್ಸ್
ಸಮುದ್ರದ ನೀರು ಮತ್ತು ದಡ ದಲ್ಲಿರುವ ಕಲ್ಲುಬಂಡೆಗಳ ಘರ್ಷಣೆ ಮತ್ತು ಮರಳು ತೆರೆಯೊಂದಿಗೆ ಸ್ಥಳಾಂತರ ಗೊಳ್ಳುವಾಗ ಉಂಟಾಗುವ ಗುಹೆಗಳು

೫ ಗ್ಲಸಿಯರ್ ಕೇವ್ಸ್
ಗ್ಲಾಸಿಯರ್ ಹಿಮಬಂಡೆ ಗಳಿಂದ ಉಂಟಾಗುವ ಗುಹೆ , ಕಾಣಲು ಮಂಜಿನ ಮಹಲಿನಂತೆ ಕಂಡರೂ ವಾಸ್ತವದಲ್ಲಿ ಇದು ಸಶಕ್ತ ಗುಹೆಯಾಗಿರುತ್ತದೆ . ಇಂಥ ಗ್ಲಸಿಯರ್ ಹಿಮದ ನಡುವೆಯೇ ೪೦೦ ವರ್ಷಗಳ ಕಾಲ ನಮ್ಮ ಕೇದಾರನಾಥ್ ದೇವಸ್ತಾನ ಧ್ಯಾನ ಮಾಡುತಿತ್ತು  ಎಂಬುದು ತಜ್ಞರ ಅಂಬೋಣ

ಮಾರ್ಬಲ್ ಆರ್ಚ್ ಕೇವ್ಸ್
ನೋರ್ದರ್ನ್  ಐರ್ಲಾನ್ದ್  ನ  ಫರ್ಮಾನಾ  ಕೌಂಟಿ  ವ್ಯಾಪ್ತಿಯಲ್ಲಿ  ಬರುವ ಮಾರ್ಬಲ್ ಆರ್ಚ್ ಕೇವ ಸಂಶೋಧಿಸಿದ್ದು ಫ್ರಾನ್ಸ್ ನ ಸ್ಪೆಲಿಯೋಲೋಜಿಸ್ಟ್ (speleology-study of caves and other karts) ಎಡ್ವರ್ಡ್ ಅಲ್ಫ್ರೆಡ್ ಮಾರ್ಟೆಲ್ , ೧೮೯೫ರಲ್ಲಿ ಈತ ಮತ್ತು ಡಬ್ಲಿನ್ ವಾಸಿ ನಿಸರ್ಗ ತಜ್ಞ ಜೆಮೀ ಒಂದು ಕ್ಯಾನ್ವಾಸ್ ಬೋಟಿನಲ್ಲಿ ಆರಂಭ ದ್ವಾರದಿಂದ ಸುಮಾರು ೩೦೦ ಮೀಟರ್ ದೂರದ ಗುಹೆಯ ಮಾರ್ಗ ಕ್ರಮಿಸಿ ನಕ್ಷೆ ಮಾಡಿ ಇಟ್ಟರು . ನಂತರ ಕ್ರಮವಾಗಿ ಹಲವು ಆಸಕ್ತರು ಸೇರಿ ಸುಮಾರು ೪. ೫ ಕಿಲೋಮೀಟರ್ ಗಳಷ್ಟು ಉದ್ದದ ಈ ಗುಹೆಯನ್ನು ಎಲ್ಲರ ಗಮನಕ್ಕೆ ತಂದರು 
.
ಮಾರ್ಬಲ್ ಆರ್ಚ್ ಕೇವ  ಸುಣ್ಣದ ಕಲ್ಲುಗಳಿಂದ ಉಂಟಾದ ಗುಹೆ . ಈ ಗುಹೆಯ ಒಳಗೆ ಶೃ -ಕ್ರೋಪ್ಪ, ಅಗ್ಹಿಂರಾನ್ , ಒವೆನ್ಬ್ರಾನ್ ಹೆಸರಿನ   ೩ ನದಿಗಳ ಸಂಗಮವಾಗುತ್ತದೆ . ಮತ್ತು ಇಲ್ಲಿ ಉಂಟಾಗಿರುವ ಭೌಗೊಲಿಕ  ಬದಲಾವಣೆಗಳು ,ಕಲ್ಲು ಗಳ ಮೇಲಿನ ವಿನ್ಯಾಸಗಳು ಮಿಲಿಯನ  ವರ್ಷಗಳ ಕಾಲ  ಈ ಮೂರು ನದಿಗಳ ಏರಿಳಿತ ಮತ್ತು ಹರಿಯುವಿಕೆಯ ಪರಿಣಾಮಗಳೇ.
೨೦೦೮ರಲ್ಲಿ ಯುನೆಸ್ಕೋ  ಈ ಪ್ರದೇಶವನ್ನು ''ಗ್ಲೋಬಲ್ ಜಿಯೋ ಪಾರ್ಕ್ '' ಎಂದು ಘೋಷಿಸಿತು . ೧೯ನೇ  ಶತಮಾನದಿಂದಲೇ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು ಆಗಿದ್ದ ಈ ಸ್ಥಳ ೨೦೦೮ ರ ನಂತರ ಯೂರೋಪಿನ ಮುಖ್ಯ ಪ್ರವಾಸಿ ಸ್ಥಳಗಳ ಪಟ್ಟಿಯಲ್ಲಿ ಬಂದಿತು.
ಐರ್ಲ್ಯಾಂಡ್ ಗೆ ಭೇಟಿ ಕೊಟ್ಟವರು ಇದನ್ನು ನೋಡದೆ ಮರಳಿದರೆ ಅವರ ಪ್ರವಾಸ ಅಪೂರ್ಣ ಎಂದೇ ಅರ್ಥ !!

ಸಾಂಪ್ರದಾಯಿಕ  ದ್ವಾರ ಹೊಕ್ಕಿದ ನಂತರ  ೧೫೦ ಮೆಟ್ಟಿಲು ಮತ್ತು ಒಂದೂವರೆ ತಾಸಿನ  ನಿರಂತರ ನಡಿಗೆ ,  ಗುಹೆಯೊಳಗೆ ಹರಿಯುವ ನದಿಯಲ್ಲಿ ೫ ನಿಮಿಷದ ದೋಣಿಯಾನ , ದೋಣಿಯಲ್ಲಿ ಕುಳಿತಾಗ ಕಲ್ಲಿನ ಕಮಾನುಗಳಿಂದ ಒಸರುವ ನೀರ ಒರತೆ , ಕಡಿದಾದ ಭಾಗದಲ್ಲಿ ನಡೆಯುತ್ತಿರುವಾಗ  ಪಟ್ಟನೆ ಎದುರಾಗುವ ಬಂಡೆಗಳು. ಅದೇನೇನೋ ವಿನ್ಯಾಸಗಳು ಅಲ್ಲೇಲ್ಲೊ ಹಿಮ ತುಂಬಿ ಕೊಂಡಂತೆ , ಮತ್ತೊಂದೆಡೆ ಹೂಕೋಸು ಅರಳಿದಂತೆ , ಒಮ್ಮೆ ಆಕಳ ಕೆಚ್ಚಲು , ಮತ್ತೊಮ್ಮೆ ಪುಟ್ಟ ಕುಟೀರ , ಅದೋ ಆ ಕಲ್ಲು ಆಕಳ ಕಿವಿಯನ್ತಿದೆ  ಅಂದು ಕೊಂಡು  ಈಚೆ ತಿರುಗಿದರೆ  ಭಯಂಕರ ರಾಕ್ಷಸ ಬಾಯಿ ತೆರೆದು ನಿಂತಂತೆ!!!   ಅದು ಭೂಮಿಯ ಪದರ  ಅಮ್ಮನ ಮಡಿಲಿನಂತೆ ತಂಪು ತಂಪು . ನೆಲ ಕಾಣುವ ನೀರು ಹಿತ ನೀಡಿದರೆ ಕೆಲವೊಂದೆಡೆ  ಕಪ್ಪಗಿನ ಕಂದಕ ಭಯ ಹುಟ್ಟಿಸುತ್ತವೆ ಸಧ್ಯಕ್ಕೆ ಈ ಗುಹೆಯ ೧ ಭಾಗ ಮಾತ್ರ ಪ್ರವಾಸಿಗರು ನೋಡಬಹುದು ಉಳಿದ ೩ ಭಾಗ ನೀರು ತುಂಬಿಕೊಂಡಿದೆ. ಚಳಿಗಾಲದಲ್ಲಿ ಈ ಸ್ಥಳ ಪೂರ್ತಿಯಾಗಿ ಮುಚ್ಚಿರುತ್ತದೆ , ಜೊತೆಗೆ  ತಾಪಮಾನ ಮತ್ತು ಏರಿಳಿತದ ದಾರಿಯ ಕಾರಣದಿಂದ ಅಸ್ತಮ ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಈ ಗುಹೆಯನ್ನು ನೋಡುವುದು ಸ್ವಲ್ಪ ಕಷ್ಟಕರ ,

ಪೃಥೆ ಯ ಅಧ್ಭುತ ಅಂತರಾಳ ದಲ್ಲಿ  ಇದು ನನ್ನ ಎರಡನೇ ಪ್ರವಾಸ  , ನನ್ನ ಮಗ ನಾನು ಸ್ಪರ್ಧೆಗೆ ಬಿದ್ದವರಂತೆ ಅದು ನೋಡು , ಇದು ನೋಡು ಅಂದು ನನ್ನ ಪತಿದೇವರ ಪ್ರಾಣ ತಿಂದಿದ್ದೇವೆ ಜೊತೆಗೆ ಕರ್ನಾಟಕದ  ಸಂಗೀತ ಬಂದುಗಳು  ಅವರ ನಗೆ ಚಟಾಕಿಗಳು , ನಗುವಿನ ಪರಿಚಯವೇ ಇಲ್ಲದ ನಮ್ಮ ಗೈಡ್. ಪ್ರಯಾಣದಲ್ಲಿ ಮೆಟ್ಟಿಲುಗಳನ್ನು ಕಂಡ ಕೂಡಲೇ ನನಗೆ ಆಗುತ್ತಿದ್ದ ತಳಮಳ !! ಒಂದೂವರೆ ತಾಸಿನ ಈ ಪಯಣದ ನಂತರ ಹಸಿವಿನಿಂದ ಹೈರಾಣಾಗಿ ತಿಂದು ಮುಗಿಸಿದ ಒಂದು ಕುಕ್ಕರ್ ಫುಲ್ ಬಿಸಿಬೇಳೆ ಭಾತ್ ಮತ್ತು ಸ್ಯಾಂಡ್ವಿಚ್ ನಮ್ಮ ಪಾಲಿನ ಅಮೃತ ವಾಗಿದ್ದು ಪ್ರವಾಸದ ಎಡಿಶನಲ್  ವಿಷಯಗಳು .

ಅಲ್ಲಿ ನಾನು ಫೋಟೋ ಕ್ಲಿಕ್ಕಿಸಲು ಪರದಾಡಿದ್ದು ಮತ್ತೊಂದು ಕತೆ , ನನ್ನ  ಕಣ್ಣಿಗೆ ಕಂಡಷ್ಟು ನನ್ನ ಕ್ಯಾಮರಾ ಕಣ್ಣಿಗೆ ಕಾಣಲಿಲ್ಲ  ಕತ್ತಲೆ  ಅನ್ನೋ ನೆವ ಹೇಳಿತು  ಆದರು ಒಂದಷ್ಟು ಚಿತ್ರಗಳಿವೆ ಇಲ್ಲಿ ನೋಡಿ
















Monday, June 24, 2013

ನನ್ನದೆಂಬುವ ಹಮ್ಮು ಬೇಕು ದೇವಾ ...



ಬೆಳಿಗ್ಗೆ ಸ್ಯಾಂಡ್ವಿಚ್ ಮಾಡಿಕೊಟ್ಟೆ ,ಮೊದಲ ತುತ್ತಿಗೆ ಮುಖ ಹುಳ್ಳಗೆ ಮಾಡಿಕೊಂಡು '' ಏನಿದು ಈರುಳ್ಳಿ ಹಾಕಬೇಡ ಅಂದ್ರೆ ಅರ್ಥ ಆಗಲ್ವಾ?ಅದರಲ್ಲೂ ಈ ಸ್ವೀಟ್ ಚಿಲ್ಲಿ ಸಾಸ್ ಛೆ ರುಚಿ ನೆ ಕೆಡಿಸಿಬಿಟ್ಟೆ '' ಅಂದು ಕೋಳಿ  ನೆಲ ಕೆದರಿದಂತೆ ಅದನ್ನು ಚೂರು ಚೂರು ಮಾಡಿ ಹಾಗೆ ಬಿಟ್ಟು ಹೋದರು . ಮಗನ ಅಧ್ವಾನ ಕೇಳಬೇಡಿ ಲಿವಿಂಗ್ ರೂಮಿಗೆ ನೀರಿನ ಬಕೆಟ್ ಎತ್ತಿ ತಂದು ರೂಂ ಪೂರ್ತಿ ನೀರು ಮಾಡಿಟ್ಟ  , ಸಾರೀ ಅಂದು ಮತ್ತೆ ಅವನ ಕೆಲಸ ಮುಂದುವರಿಸಿದ. ಅಯ್ಯೋ ನಾ ನಿಲ್ಲಲು ರೆಡಿ ಆದರೆ ಗಡಿಯಾರ ನಿಲ್ಲಬೇಕಲ್ಲ ??? ಅದರಲ್ಲೂ ಬೆಳಗಿನ ಆ ಮೂರು ಘಂಟೆಗಳು ಮಿಕ್ಸಿ ಮೂರನೇ ಸುತ್ತಿಗೂ ಅಷ್ಟು ವೇಗ ಇರಲಿಕ್ಕಿಲ್ಲ . ಆಮೇಲೆ ನಿಧಾನವಾದರೂ ಪ್ರಾಧಾನ್ಯತೆ ಇರುವ ಎಲ್ಲ ಕೆಲಸ ಮಾಡಬೇಕು ಕಸ ಮುಸುರೆ , ಬಟ್ಟೆ , ಆದಿನದ ಅಡುಗೆ , ಮನೆಯ ಪ್ರತಿಸದಸ್ಯನ ನಾಲಿಗೆಯ ರುಚಿಗೆ ಹೊಂದಿಕೊಳ್ಳುವಂತೆ ಹೊಂದಿಸುವ ಹೊತ್ತಿಗೆ ಸಂಜೆ ಆಗಿರುತ್ತೆ ,ಮತ್ತೆ ಅವರು ಬರುವ ಮುನ್ನ ಮನೆಯ ಹಾಲ್  ಲಕಳಕಿಸುತ್ತ ಇರಬೇಕು ಇಲ್ಲವಾದಲ್ಲಿ '' ಬೆಳಿಗ್ಗಿಂದ ಏನು ಮಾಡಿದೆ ?? ಮನೆ ಎಷ್ಟ್ ಕೊಳಕಾಗಿದೆ ನೋಡು '' ಅಂದು ಅವರ ಲಂಚ್ ಬ್ಯಾಗು , ಮತ್ತೊಂದಿಷ್ಟು ಆಫಿಸ್ ಕಾಗದಪತ್ರಗಳನ್ನು ಸೋಫಾ ಮೇಲೆ ಎಸೆದು ಹಾಗಲಕಾಯಿ  ಮುಖ ಮಾಡಿಕೊಂಡು ಮೆತ್ತ ಸೇರಿಕೊಳ್ಳುತ್ತಾರೆ . 


                                    ************************************



  ಇವರು ''ದೊಡ್ಡ ''ಕೆಲಸದಲ್ಲಿದ್ದಾರೆ , ಎಲ್ಲ ಯೋಗ್ಯತೆ ಇದ್ದಾಗ್ಯೂ ಅವರ ಹುದ್ದೆಗೆ ಸರಿ ಹೊಂದುವಂತ ಕೆಲಸ ಮಾಡುವಷ್ಟು ವಿದ್ಯಾರ್ಹತೆ ನನಗಿಲ್ಲ , 
ಚಿಕ್ಕಪುಟ್ಟ ಕೆಲಸ ಮಾಡಲು ಅವರು ಅನುಮತಿ ಕೊಡಲ್ಲ ಹಲವು ಕಿರಿ ಕಿರಿ ಜಗಳು ಮುನಿಸುಗಳ ನಂತರ ನನಗೆ ನಾನೇ ಸಮಾಧಾನ ಮಾಡಿಕೊಂಡಿದ್ದೇನೆ, ಹೊರಗೆ ಹೋಗಿ ದುಡಿಯುವ ಆಸೆ ಬಿಟ್ಟಿದ್ದೇನೆ  ಅವರನ್ನು ಖುಷಿಯಾಗಿತ್ತಾರೆ ನಾನು ಖುಷಿ ನನ್ನ ಮನೆಯು ಖುಷ ಖುಶಿ. ಇದೆಲ್ಲದರ ನಡುವೆ ಯಾವುದೇ ಪಾರ್ಟಿ ಗೆ ಹೋಗಲಿ ಸಭೆ ಸಮಾರಂಭಗಳಿಗೆ ಹೋಗಲಿ ''ನೀವು ಏನು ಮದ್ಕೊಂದಿದೀರ ಮೇಡಂ ''ಅನ್ನುವ ಪ್ರಶ್ನೆಗೆ ನಾನು  ''ಹೌಸ್ ವೈಫ್'' ಎನ್ನುವ ಮೊದಲೇ , ಅವಳು ಮನೆಯಲ್ಲಿ ಹಾಯಗಿದ್ದಾಳೆ .. ಅವಳಿಗ್ಯಾಕೆ ಕಷ್ಟ , ಸುಮ್ಮನೆ ಅಡುಗೆ , ಮನೆ ಕೆಲಸ ನೋಡಿಕೊಂಡು ಇರಲಿ ಅಂತ  ಅದೇ ಆರಂ ನೋಡಿ ''.... ಅನ್ನುವ ಇವರ ಮಾತುಗಳು ನನ್ನ ತುಂಬಾ ಘಾಸಿ ಮಾಡುತ್ತವೆ . ಅಷ್ಟು ಸುಲಭವ ಮನೆ ಕೆಲಸ  ನಿಜ ಎಲ್ಲರು ಮಾಡೋದೇ , ಆದರು ಮಾಡುವ ಪ್ರತಿಯೊಬ್ಬರಿಗೂ ಗೊತ್ತು ಅದು ಸುಲಭವಲ್ಲ ಹಾಗಂತ ನಿಭಾಯಿಸಲಾಗದ್ದು ಕೂಡ ಅಲ್ಲ . ಅವನ ಕಷ್ಟದ ದುಡ್ಡನ್ನು ಎಚ್ಚರಿಕೆಯಿಂದ  ಖರ್ಚು ಮಾಡಿ , ಕೂಡಿಟ್ಟು , ಎಲ್ಲವನ್ನು ಹಿತ ಮಿತವಾಗಿ ಇಟ್ಟಿರುವುದು ನಾನಲ್ಲವೇ ??? ಅದಕ್ಕೊಂದು ಮೆಚ್ಚಿಗೆಯ ನುಡಿ ಆಡಿದರೆ ಅದು ಮತ್ತೊಂದು ಯುಗಕ್ಕೆ ಸಾಕು. 
                                    *************************************



ನನಗೆ ಈ ಹೊರಗೆ ಕೆಲಸ ಮಾಡೋದು , ಹಣ ಸಂಪದಿಸೂದು ಯಾವತ್ತಿಗೂ ಇಷ್ಟವಿಲ್ಲದ ವಿಷಯ , ಅಮ್ಮ ಅಪ್ಪ ಇಬ್ಬರು ದುಡಿ ದುಡಿದು , ಕೊನೆಗೆ ನಮ್ಮ ಹತ್ತಿರ ಮಾತದೊಕು ಸಮಯ ಇರುತ್ತಿರಲಿಲ್ಲ , ಎಷ್ಟೋ ಸಾರಿ ತಾಳ್ಮೆಗೆಟ್ಟು ಎಲ್ಲ ಮಾಡೋದು ನಿಮಗೋಸ್ಕರ ಅಂತ ನಂಗು ತಮ್ಮನಿಗೂ ಅಪರಾಧಿ ಭಾವ ಮೊದಿಸಿದ್ದನ್ನು ನೆನಪಿಸಿ ಕೊಂಡರೆ ಈ ಕೆಲಸ ಮಾಡೋದರ ಸಹವಾಸ ಬೇಡ ಅನಿಸುತ್ತೆ ಽಅದರೆ ನ ಮೆಟ್ಟಿದ ಮನೆಯ ಎಲ್ಲರು ಗಾಣದೆತ್ತು ಗಳು . ಎಲ್ಲರು ದುಡಿಬೇಕು , ಮತ್ತು ಮನೆಯನ್ನು ನೋಡಬೇಕು . ಎಷ್ತೊಸಾರಿ ಎಲ್ಲಾದರೂ ಓಡಿ  ಹೋಗಬೇಕು ಅನಿಸುತ್ತೆ , ಅಸಾಹಯಕತೆ , ಭಯ ಎಲ್ಲವು ಒಟ್ಟೊಟ್ಟಿಗೆ ... ಇಷ್ಟು ಆದ ಮೇಲು ಒಂದೇ ಒಂದು ಒಳ್ಳೆ ಮಾತಿಲ್ಲ . 


                                     *************************************

ಇದು ನನ್ನ ಕತೆ  ಅವಳ ಕತೆ , ನಮ್ಮ ನಿಮ್ಮಂಥ ಎಲ್ಲ ಭಾವುಕ ಮನಸಿನ ಒಡತಿಯರ ಕತೆ . ಅಲ್ಲಿ ಕನಸುಗಳ ಉದ್ಯಾನೊಂದು ಪರದೆಯ ಹಿಂದೆ ಮರೆಯಾಗಿ ಹೋಗಿದೆ , ನಮ್ಮಲ್ಲಿರುವ ಪುಟ್ಟ ತುಂಟ ಹುಡುಗಿಯೊಬ್ಬಳು ಬಿಕ್ಕಳಿಸುತ್ತ ಅಲ್ಲೆಲ್ಲೋ ಮೂಲೆಯಲ್ಲಿ ಅವಿತಿದ್ದಾಳೆ . ಭವಿತವ್ಯದ ಬಗೆಗೆ ಸಂದೇಹಗಳಿವೆ ಭೂತ ಭೂತದಂತೆ ಆಗೀಗ ಬಂದು ಕಾಡುತ್ತದೆ , ಅವೆರಡರ  ಕಣ್ಣ ಮುಚ್ಚಾಲೆಗೆ  ವರ್ತಮಾನ ಪಡಸಾಲೆ ಯಾಗಿದೆ . ನಾವು ಜಗತ್ತಿನ ಅತ್ಯುನ್ನತ ಹುದ್ದೆಯಲ್ಲಿರುವವರು ,ಆದರೆ ಆ ಹುದ್ದೆಗೊಂದು ಹೆಸರು ಕೊಡಲು ಯಾರಿಗೂ ನೆನಪಿಲ್ಲ , ನಾವು ಹೌಸ್ ವೈಫ್ , ಹೋಂ ಮೇಕರ್ , ಅಮ್ಮ , ಹೆಂಡತಿ , ಅತ್ತಿಗೆ ಸೊಸೆ ಮತ್ತಿನ್ನೇನೇನೋ ಹೆಸರು ಹೊತ್ತುಕೊಂಡು ಬದುಕುತ್ತಿರುವ ಥಾಂಕ್ ಲೆಸ್ ಲೇಬರ್ಸ್ .

''ನಿನಗೆನ್ ಹೇಳು ಆರಾಮಾಗಿ ಟಿವಿ ನೋಡ್ಕೊಂಡ್  ಮನೇಲ್ ಇರ್ತೀಯ 
'' ಬೆಳಿಗ್ಗಿಂದ ಏನು ಮಾಡಿದೆ?''
''ನಿನ್ ಹಾಗೆ ನನಗೆನಾದ್ರು  ಫ್ರೀ ಟೈಮ್ ಇದ್ದಿದ್ದಿದ್ರೆ.....''
'' ನಿಂಗೇನು ಅರ್ಥ ಆಗಲ್ಲ ''
''ನೀನೋಬ್ಳೆನ  ಮನೆಕೆಲಸ ಆಫೀಸ್ ಕೆಲಸ ಮಾಡೋದು ? ನೋಡ್ ನಂ ಫ್ರೆಂಡ್ ಹೆಂಡತಿ ನಾ ''
''ಏನು ಅಡುಗೆ ಮಾಡ್ತಿಯೋ ... ''
''ಎಷ್ಟ್ ಸಾರಿ ಹೇಳಿದೀನಿ ನಾ ಬರೋ ಮೊದಲೇ ಆ ಮಕ್ಕಳ ಹೋಂ ವರ್ಕ್ ಮಾಡಿಸಿಬಿಡು  ಸುಮ್ಮನೆ ಕಿರಿ ಕಿರಿ.. ''
'' ಮಧ್ಯಾನ ಮಲಗಬೇಡ , ಸಂಜೆ ಮಾಡೋ ಕೆಲಸ ಮಧ್ಯಾನ ನೆ ಮಾಡಿ ಮುಗ್ಸು , ಸಂಜೆ ಹೋಗಿ ತರಕಾರಿ ತರಬಹುದು ಅಲ್ವಾ??
ಮಾತಿಗೇನು ಕಮ್ಮಿ ನಾ ??/??

ಹೀಗೆಲ್ಲ ಹೇಳಿದಮೇಲೆ ನಮಗೂ ಕೆಲವೊಮ್ಮೆ (ಬಹಳಷ್ಟು ಸಲ ) ಅನಿಸುವುದುಂಟು ನಿಜಕ್ಕೂ ನಾವೇನು ಮಾಡುತ್ತಿಲ್ಲವಾ ? . ದಿನದ ಬಹು ಸಮಯ ನಮಗೂ ಸಮಯ ಕೊಟ್ಟು ಕೊಳ್ಳದಷ್ಟು ಕೆಲಸ ಮಾಡುತ್ತೇವೆ ಯಾರಿಗಾಗಿ??ಹಾಗಿದ್ದರೆ ಇದೆಲ್ಲ ಕೆಲಸವೇ ಅಲ್ಲವ??ಎಲ್ಲ ಮಾಡಿದ ಮೇಲು ಛೆ ಇದರಲ್ಲಿ ನಾ  ಹಿಂದುಳಿದೆ  , ಅವರಿಗೆ ಖುಷಿ ಮಾಡಲು ಆಗಲಿಲ್ಲ , ಅವರನ್ನು ಖುಷಿಯಾಗಿ ಇಡಲಿಲ್ಲ ಅನ್ನೋ ಅಪರಾಧಿ ಪ್ರೆಜ್ನೆಯ ಹೊರತು ನಮಗೆ ಸಿಗುವ ಧನ್ಯತೆಯಾದರು  ಏನು ?? ಎಷ್ಟು ಮಾಡಿದರು ಸಮಾಧಾನ ಇಲ್ಲ ಅನ್ನುವ ಸಿಡಿ ಮಿಡಿ ಯನ್ನು ,ಧಾರಾವಾಹಿಯ ದುಷ್ಟ ಪಾತ್ರಗಳನ್ನು ಬಯ್ಯುತ್ತಲೋ , ಮಗು ಸುಮ್ಮನೆ ಕೇಳುತ್ತದೆ ಅನ್ನುವ ಕಾರಣಕ್ಕೆ ಗಂಟಲು ಜೋರು ಮಾಡಿಯೋ ಸಿಟ್ಟು ಹೊರ ಹಾಕಲು ಪ್ರಯತ್ನಿಸುತ್ತೇವೆ ,ಆಗೆಲ್ಲ ಮನೆಯ ಹಿರಿಯರು ಹೇಳುವ ''ನೀ ಈ ಮನೆ ನಂದಾದೀಪ, ಲಕ್ಷ್ಮಿ'' ಮುಂದಿನ ಮಾತುಗಳನ್ನು ಕೇಳುವ ತಾಳ್ಮೆ ಉಳಿದಿರುತ್ತದಾ ? ಸಹನೆ ಕಟ್ಟೆ  ಒಡೆದು ಕಣ್ಣು ಕಾವೇರಿ . 
ಗೃಹಲಕ್ಷ್ಮಿ  ಅನ್ನೋ ಹಣೇಪಟ್ಟಿ ಈಗೀಗ ಗ್ರಹಣ ದಂತೆ ಭಾಸವಾಗುತ್ತಿದೆ , ನಮ್ಮ ಚೈತನ್ಯಕ್ಕೆ ಸಮಾಜ ತೊಡಿಸಿರುವ ಕವಚವೇನೋ  , ಎಲ್ಲ ಕೆಲಸಕ್ಕೂ ಅದರದೇ ಆದ ಗೌರವ ಇದೆ ಅನ್ನುವ ಚಿಂತನಾ ಶೀಲರು ಕೂಡ ಮನೆಯ ಕೆಲಸದ ವಿಷಯ ಬಂದಾಗ ''ಅದು ಒಂದು ಕೆಲಸವ ?'' ಅಂದು ತಾತ್ಸಾರದ ನಗು ನಗುವುದುಂಟು,


ಹೀಗೆ ಸುಮ್ಮನೆ ಹೇಳೋ ಮಾತಲ್ಲ , ಒಂದಷ್ಟು ವರುಷಗಳ ಹಿಂದೆ ನಡೆದ ಜನಗಣತಿಯಲ್ಲಿ ನಮ್ಮನ್ನು ನಿರುದ್ಯೋಗಿ, ಆರ್ಥಿಕವಾಗಿ ನಿರುತ್ಪಾದಕರು ಎಂದು ಖೈದಿ/ ಭಿಕ್ಷುಕರ ಪಟ್ಟಿಯಲ್ಲಿ  ಸೇರಿಸಿದ್ದರ ಉಲ್ಲೇಖ ಓದಿ ನಗಬೇಕೋ ಅಳಬೇಲೋ ಅರ್ಥವಾಗಲಿಲ್ಲ ,
''ರಾಷ್ಟೀಯ ಕೌಟುಂಬಿಕ ಸ್ವಾಸ್ಥ್ಯ -III '' ಸರ್ವೇ ಪ್ರಕಾರ ಕೇವಲ ೧೮ .೬೫ ಪ್ರತಿಶತ ಹೆಣ್ಣುಮಕ್ಕಳಿಗೆ ಮಾತ್ರ ತಮ್ಮ ಮನೆಯ ಬಹುಪಾಲು ಅರ್ಥಿಕ ಆಗು ಹೋಗುಗಳನ್ನು ನಿರ್ವಹಿಸುವ ಸ್ವಾತಂತ್ರ ಇದೆ . 
೧೮.೨ ಪ್ರತಿಶತ ಸ್ತ್ರೀಯರಿಗೆ ತಮ್ಮ ಆರೋಗ್ಯ-ಅನಾರೋಗ್ಯ ಚಿಕಿತ್ಸೆ ಪಡೆಯುವ  ಅವಕಾಶ ಇದೆ . ಮಹಿಳೆಯೊಬ್ಬಳು ತನ್ನ ಕುಟುಂಬ  , ಸಂಬಂಧಿಕರನ್ನು , ಸಮಾರಂಭಗಳಲ್ಲಿ ಭಾಗವಹಿಸುವ ನಿರ್ಧಾರಗಳನ್ನು ಕೂಡ ೮೯ ಪ್ರತಿಶತ ಗಂಡಸರೇ ನಿರ್ಧರಿಸುತ್ತಾರೆ . ಎಂಬುದು ಅಂಕಿಅಂಶಗಳು ತಿಳಿಸುತ್ತವೆ . 

ಹಾಗೆಂದು ನಮ್ಮನ್ನು ನಾವೆ  ''ಥಾಂಕ್ ಲೆಸ್ ಲೆಬರ್ಸ್ '' ಅಂದುಕೊಂಡು ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೆ ಸುಮ್ಮನೆ ದಿನ ನೂಕುವುದು ಎಷ್ಟು ಸರಿ ???
ನಾವು ಹೆಚ್ಚು ಅವರು ಕಡಿಮೆ , ಎಂದು ಬೀಜವೃಕ್ಷ ನ್ಯಾಯ ಮಾಡುವ ಕಾಲ ಕಳೆದು ಹೋಗಿದೆ ಆದರೆ ಮಾನಸಿಕವಾಗಿ ನಮ್ಮ ಕೆಲಸವನ್ನು ಪ್ರೀತಿಸುವ , ಅದನ್ನರಿತು ಅದಕ್ಕೆ ಬೇಕಾದ ಮಾನಸಿಕ ಸ್ಥೈರ್ಯ ಬೆಳೆಸಿಕೊಳ್ಳಬೇಕಾದ  ಸಮಯ ಇದು . ಎಷ್ಟೋ ವರ್ಷಗಳಿಂದ ಕರ್ತವ್ಯ ಧರ್ಮ ಎಂದೆಲ್ಲ ನಡೆದು ಕೊಂದು ಬಂದಿರುವ ಈ ವಿಷಯಗಳು ಈಗ ಮೆತ್ತಗೆ ಮನಸ್ಸನ್ನು ಕೊರೆಯುವ ಸಂಗತಿಗಳಾಗಿ ಮಾರ್ಪಟ್ಟಿವೆ . 
'' ನಮ್ಮದು ಧನ್ಯತೆ ಇರದ ಯಾಂತ್ರಿಕ ಕೆಲಸ , ಅಲ್ಲಿ ನಿಜವಾದ ಹೊಗಳಿಕೆ ಇಲ್ಲ ಮೆಚ್ಚುಗೆ ಇದ್ದರು ಅಭಿವ್ಯಕ್ತಿ ಕಡಿಮೆ  ಸಂಬಳ ವಂತೂ ಇಲ್ಲವೇ ಇಲ್ಲ , ಪ್ರಮೋಶನ್ ಇಲ್ಲ , ಗಡಿಯಾರ ನಾವೇ ಆಯ್ದು ತರುತ್ತೇವೆ ಆದರೆ ಅದರ ಸಮಯದ ಹಂಗು ನಮಗಿಲ್ಲ , ಅಷ್ಟಕ್ಕೂ ನಾವು ಏನು ಮಾಡುತಿದ್ದಿವಿ  ಅನ್ನೋದೇ ನಮಗೆ ಗೊತ್ತಿಲ್ಲ . '' ಹೀಗೆಲ್ಲ ಅನಿಸುವುದು ಸಹಜವೇ ,,, ಆಗೆಲ್ಲ ನಮ್ಮಲ್ಲಿ ನಾವು ಪವಾರ್ ಬೂಸ್ಟರ್ ಗಳನ್ನ ತುಂಬಿಕೊಳ್ಳಬೇಕು, 

ಸಂಬಳ ವಿಲ್ಲದಿರೆ ಎನು?(ನಮಗೂ ಸಂಬಳ ಕೊಡಬೇಕು ಅನ್ನುವ ಯೊಜನೆ ಭಾರತ ದಂಥಹ ದೇಶದಲ್ಲಿ ಪ್ರಸ್ತಾಪವಾಗಿತ್ತು ಅನ್ನೋದೇ ಖುಷಿಯ ವಿಚಾರ) ನಮಗಿರುವ ಆತ್ಮ ತೃಪ್ತಿ ಎಲ್ಲ ಕೊರತೆಯನ್ನು ನೀಗಿಸಿ ಬಿದುತ್ತದೆ. ಬೆಳಿಗ್ಗೆ ಎದ್ದಾಗಲೇ ಕನ್ನಡಿಯಲ್ಲೊಮ್ಮೆ ನೋಡಿಕೊಂಡು ನಿಮಗೆ ನೀವು ಹೇಳಿಕೊಂಡು ಬಿಡಿ , '' ನಾವು ಥಾಂಕ್ ಲೆಸ್ ಲೆಬರ್ಸ್ ಏಕೆಂದರೆ ನಮಗೆ ಧನ್ಯವಾದ ಹೇಳುವ ಪದಗಳು ಇನ್ನು ಹುಟ್ಟಿಲ್ಲ , ನಮಗೆ ನಾವೇ ಸಾಟಿ , ವೆಲ್ ಡನ್ '' 
ಎಲ್ಲ ಅಪಸವ್ಯಗಳ ನಡುವೆಯೂ ನಿಮ್ಮನ್ನು ನೀವು ಮೆಚಿಕೊಳ್ಳಲು ಮರೆಯದಿರಿ ಯಾಕೆಂದರೆ ಎಲ್ಲರಿಗಿಂತ ಹೆಚ್ಚಾಗಿ ನಿಮ್ಮೊಂದಿಗೆ ಇರುವುದು ನೀವೇ . 
ಉದ್ಯೋಗಸ್ತೆ ಯಾಗಿರಲಿ , ಮನೆ ವಾಳ್ತೆ ನೋಡುವ ಮಹಿಳೆಯಾಗಲಿ  ನಿಮ್ಮ ಬಗ್ಗೆ  ಹೆಮ್ಮೆ , ಅಂತಕರಣ ಪ್ರೀತಿ ಹುಟ್ಟಿಸಿ ಕೊಳ್ಳಿ , ಆದರದು ಸ್ವಾನುಕಂಪ  ಅಹಂಕಾರ ಆಗದೆ ನೋಡಿಕೊಳ್ಳಿ ...