Thursday, October 13, 2011

ಬಂದೈತಿ ಶೀಗಿ ಹುಣ್ನಿಮಿ........





'
''ಅನ್ನ ಕುಮಾರನ ಬಸರಿ ಅದಾಳ
ನಮ್ಮ ಭೂಮಿತಾಯಿ
ಬಯಕೀ ಊಟ ಉಣಿಸ ಬೇಕ
ಬಂದೈತಿ ಶೀಗಿ ಹುಣ್ಣಿಮಿ''

ಹೀಗೆಂದು ಅಪ್ಪಟ ಜನಪದಮಿಡಿತದ ಗೀತೆ ಬರೆದವರು ಆನಂದ ಕಂದರು.....
ಭೂಮಿಯು ತನ್ನ ಗರ್ಭದಲ್ಲಿ ಅನ್ನ ಕುಮಾರನನ್ನು ಹೊತ್ತುಕೊಂಡು ಮೂಡುಗಾಳಿಗೆ ತೊನೆಯುತ್ತಿದ್ದರೆ, ಬಸುರಿ ಹೆಣ್ಣುಮಗಳು ಸೆರಗಿನಿಂದ ಬೆವರೊರೆಸಿಕೊಳ್ಳುತ್ತ ಉಸ್ಸಪ್ಪ ಅನ್ನುತ್ತಿದ್ದರೂ ಆಕೆಯ ಮನದ ಅವೇದ್ಯ ಸಂವೇದನೆಗಳು ಸುಖದ ಭಾವಗಳು ಅನಾವರಣಗೊಂಡಂತೆ ಅನಿಸುತ್ತದೆ.
ದಸರೆಯ ನಂತರ ಬರುವ ಹುಣ್ಣಿಮೆಯೇ ಈ ಬಸುರಿ ಭೂಮಿತಾಯಿಗೆ ಮಡಿಲು ತುಂಬುವ ದಿನ ಅದೇ ಶೀಗಿ ಹುಣ್ಣಿಮೆ.


''ಹತ್ತಿಯ ಎಳಿಬೆಳಿ ಹಚ್ಚ ಹಸುರಿನ ಪತ್ತಲ ನೇಯ್ದಾವ
ಎಳ್ಳುಪುಂಡಿ ಹೂ ಮಗ್ಗಿ ಹೆಣೆದಾ ಕಸೂತಿ ತೆಗೆದಾದ
ಕುಸುಬಿ ಗೋದಿ ಸಸಿ ಬಸರಿಗೊಪ್ಪವಾಕುಪ್ಪಸ ಹೆಣದಾವ
ಸುತ್ತನ ಬನದಾಗ ಹಕ್ಕಿ ಹಸೆಯ ಹಾಡ್ಯಾವ ಟೂವಿ ಟುವಿ''

ಇದು ಪ್ರಕೃತಿಮಾತೆ ತನ್ನ ಮಗಳಿಗೆ ಉಡಿ ತುಂಬುವ ಸಂಭ್ರಮಕ್ಕೆ ಅಣಿಯಾಗುವ ರೀತಿ ಇದಾದರೆ ಬಸುರಿ ಹುಡುಗಿಗೆ ಮಡಿಲು ತುಂಬುವಂತೆಯೇ ಜನಪದರು ಹಸಿರು ಸೀರೆ ಕುಪ್ಪಸತಂದು ಆಕೆಗೆ ಉಡಿಸಿ ನಂತರ ಅ ಸೀರೆಯನ್ನು ಮನೆ ಮಗಳಿಗೆ ಕೊಡುವ ಪದ್ದತಿ ಇದೆ.
ಪಾಂಡವರ ಪೂಜೆ:- ಶಮೀ ವೃಕ್ಷದಲ್ಲಿ ಆಯುಧಗಳನ್ನು ಪಡೆದು ಯುದ್ಧಕ್ಕೆ ಸನ್ನದ್ಧರಾದ ಪಾಂಡವರನ್ನ ನೆನೆದು ಅವರ ಪ್ರತೀಕವಾಗಿ ಐದುಕಲ್ಲುಗಳನ್ನಿಟ್ಟು ಅವಕ್ಕೆ ಗಂಧ ಕುಂಕುಮ ಧೂಪ ದೀಪದೊಂದಿಗೆಪೂಜಿಸಿ. ಎಡೆ ತೋರಿಸಲಗುತ್ತದೆ. ಈ ಎಡೆಯನ್ನು ಪುರುಷರು ಯಾರೊಂದಿಗೂ ಮಾತನಾಡದೆ ಉಣುವ ಪದ್ದತಿ ಇದೆ.
ಇಲ್ಲಿ ಇನ್ನೊಂದು ವಿಶೇಷ ಎಂದರೆ ಪಾಂಡವರರ ಪೂಜೆಯೊಂದಿಗೆ,ಕಳ್ಳಪೂಜೆ ಎಂಬುದೊಂದು ವಿಚಿತ್ರ ಆಚರಣೆ ಇದೆ ಕುಡುಗೋಲು ಒಂದಕ್ಕೆ ಪುಜೆ ಮಾಡಿ ಅದಕ್ಕೆ ತೋರಿಸಿದ ನೈವೇದ್ಯವನ್ನು ಅದೇ ಕುಡುಗೋಲಿನಿಂದ ಭೂಮಿಯನ್ನು ಅಗೆದು ಅದನ್ನು ಅಲ್ಲೇ ಮುಚ್ಚಬಿಡುತ್ತಾರೆ.

''ಮುಂಗಾರಿನ ನೆಲೆ ಹೊಂದೆಂನಿಟಿನ ಹಂದರ ಹಾಕಯ್ತೆ
ಹೆಸರು ಹುರುಳಿ ಅಲಸಂದಿ ಅವರಿಬಳ್ಳಿ ತ್ಪಾರಣ ಬಿಗಿದೈತೆ
ಹುಚ್ಚೆಳ್ಳಿನ ಹೊಲ ಹೂಗಳ ಅರೆಳಸಿ ಕುಚ್ಚನು ಕಟ್ಟೈತೆ
ಉಡಿಯ ತುಂಬಾಲಕ ಮಾಗಿ ನಿಂತಾವ ನೋಡ ನವಣಿ ಸಾವಿ!''

ಇಷ್ಟು ಸಿಂಗಾರದ ನಡುವೆ ಕುಳಿತ ಭೂಮಿ ತಾಯಿಗೆ ವಿಧವಿಧದ ಅಡುಗೆಯನ್ನು ಮಾಡೀ ಬಡಿಸಿ ಬಯಕೀ ಊಟದ ಸಂಭ್ರಮವನ್ನು ಜನಪದರೂ ಅಸ್ಪಾದಿಸುತ್ತಾರೆ...
ಹೀರಿಕಯಿ ಬದನಿಕಾಯಿ ಕುಂಳಕಾಯಿ ಮಡ್ಕಿ ಹೆಸ್ರುಕಾಳು ಕಡತಿ ಕಾಳುಗಳ ಪ್ರತ್ಯೇಕ ಪಲ್ಯ ಕುಚ್ಚದ ಕಾಯಿ, ಉಂಡ್ಡಡುಬು ಕಸುಬಿ ಹುಗ್ಗಿ ಗರಿಗೆ ಪುಂಡಿಪಲ್ಯೆ ಅಗಸೀ ಎಳ್ಳು ಕರೆಳ್ಳು ಶೇಂಗ ಪುಠಾಣಿ ಚಟ್ನಿಗಳು ರೊಟ್ಟಿ ಚಪಾತಿ ಕಟ್ಟಿನ ಸಾರು.
ಶೇಂಗಾ ಹೋಳಿಗೆ,ಎಳ್ಳುಹೋಳಿಗೆ ಸುರಳಿಹೋಳಿಗೆ.....ಈ ಪಟ್ಟಿ ಮುಗಿಯುವಂಥದ್ದಲ್ಲ ಗರ್ಭಿಣಿಗೆ ಪೌಷ್ಟಿಕ ಮತ್ತು ನಾಲಿಗೆಯ ರುಚಿ ಹೆಚ್ಚಿಸುವ ಆಹಾರವನ್ನು ತಯಾರಿಸಿ, ಅದರೊಂದಿಗೆ, ಚಿಗಳಿ, ಉಪ್ಪಿನಕಾಯಿ, ಕರಿಂಡಿಯನ್ನು ಎಡೆ ಇಡುತ್ತಾರೆ. ಎಳೆ ಸವತೆ ಹೆಸುರಬೇಳೆ ಉಳ್ಳಾಗಡ್ಡಿಯ ಕೊಸಂಬರಿಯೊಂದಿಗೆ ಹೊಲದ ಮರದೊಂದರ ನೆರಳಿನಲ್ಲಿ ಕುಳಿತು ತೊನೆಯುವ ಭತ್ತದ ಹಾಲ್ತೆನೆಯನ್ನು ನೋಡುತ್ತ,ಉಣ್ಣುವ ಸುಖ ಉಂಡವನೇ ಬಲ್ಲ....
ಮುಂಗಾರಿನ ಆರಂಭದಿಂದಲೂ ಬೆವರನ್ನು ಕಾಳಿಯೊಂದಿಗೆ ಬಿತ್ತಿದ ರೈತನು ಫಸಲನ್ನು ನೋಡುತ್ತಾ, ಬಂದ ಬೆಳೆ ಕ್ಷೇಮವಾಗಿ ಮನೆಗೆ ಬರಲಿ ಎಂದು ಆಶಿಸಿ ಆ ತಾಯಿಯನ್ನು ಬೇಡುವಾಗ ಚೊಚ್ಚಲ ಬಸುರಿಯ ಬಾಣಂತನ ಸುಗಮವಾಗಿ ಮುಗಿದು ಕ್ಷೇಮಕರವಾಗಿ ಗಂಡನ ಮನೆಗೆ ಸೇರಿದರೆ ಸಾಕು. ಎಂದು ದೇವರಲ್ಲಿ ಹರಕೆಯಲ್ಲಿ ಕಟ್ಟಿ ಹಾಕುವ ಬಸುರಿಯ ತಾಯಿಯನ್ನು ಕಂಡಂತೆ ಆಗುವುದಂತೂ ನಿಜ....
ಜನಪದರ ಆಚರಣೆಗಳೇ ಹಾಗೆ ಅವುಗಳಲ್ಲಿ ಸಮಷ್ಟಿ ಪ್ರಜ್ಞೆ, ಪ್ರಕೃತಿಯೆಡೆಗೆ ಅಪರಿಮಿತ ಪ್ರೀತಿ ಕಾಣುತ್ತದೆ. ಶೀಗಿ ಹುಣ್ಣಿಮೆ ಅಂಥ ಆಚರಣೆಗಳಲ್ಲೊಂದು, ನೀವೂ ಈ ಶೀಗಿ ಹುಣ್ಣಿಮೆಯನ್ನು ಆಸ್ಪಾದಿಸಿದ್ದರೆ, ಸರಿ ಇಲ್ಲದಿದ್ದರೆ ಆನಂದಕಂದರ ಶೀಗಿ ಹುಣ್ಣಿಮೆ ಗೀತೆಯನ್ನೊಮ್ಮೆ ಖಂಡಿತ ಓದಿ


Sunday, September 25, 2011

ಎಲ್ಲರಿಗೊಪ್ಪೋ ...ಹರಿವೆ ಸೊಪ್ಪು


ಈ ದಿನ ಅಡುಗೆಮನೆಯಿಂದ ಚರ ಚರ ಸಪ್ಪಳ ಅಮ್ಮ ಇಳಿಗೆಮಣೆ ಮೇಲೆ  ಕುಳಿತು ದಾಸರಪದ ಗುನುಗುನಿಸುತ್ತ ಹರಿವೆ ಸೊಪ್ಪು ಹೆಚ್ಚುತ್ತಿದ್ದಳು..ಹಿತ್ತಲಲ್ಲಿ ಬೇಕಾದಅಷ್ಟು ಜಾಗೆ ಅದರಲ್ಲಿ ಆಕೆಯೇ ನೆಟ್ಟು ಬೆಳೆಸಿದ ಹರಿವೆ ಸೊಪ್ಪು...ಇವತ್ತು ಮನೆಮಂದಿ ಎಲ್ಲರು ಎರಡು ತುತ್ತು ಹೆಚ್ಚು ತಿನ್ನುವುದಂತು  ಗ್ಯಾರಂಟಿ  ,,,ಹರಿವೆ ಸೊಪ್ಪಿನ ರುಚಿಯೇ ಅಂಥದ್ದು...
ಹರಿವೆ ಸೊಪ್ಪನ್ನು ನಮ್ಮ ನೆಲದಲ್ಲಿ ಆಹಾರವಾಗಿ ಬಳಸಲು ಯಾರು ಆರಂಭಿಸಿದರೋ ತಿಳಿಯದಾದರು..ಅವರಿಗೊಂದು ಫುಲ್ ನಮಸ್ಕಾರ ಹಾಕಲೇ ಬೇಕು..ಯಾಕಂದ್ರೆ ಮಧ್ಯನಕ್ಕೊಂದು ಪಲ್ಯ ರಾತ್ರಿಗೊಂದು ಸಾರು ,ಸಾಸಿವೆಅಂತೆಲ್ಲ ಬಳಸಲ್ಪಡುವ ಈ ಹರಿವೆ ಸೊಪ್ಪಿನಲ್ಲಿ ಅಪಾರ ಪ್ರಮಾಣದ ಪೌಷ್ಟಿಕಂಶಗಳಿವೆ ..ಹಲವಾರು ಬಾರಿ ನಮಗೆ ಗೊತ್ತಿಲ್ಲದೇ ಹರಿವೆ  ಆಹಾರ್ ರೂಪದ ವೈದ್ಯನಾಗುವುದು ಉಂಟು ,,

ಹರವಿ,ಹರ್ಗಿ,ದಂಟಿನ ಸೊಪ್ಪು ,ಕೀರೇ ಸೊಪ್ಪು,ರಾಜಗೀರ್,ಕಿರ್ಕಸಾಲಿ ಅಂತೆಲ್ಲ ಕರೆಯಲ್ಪಡುವ ಹರಿವೆ ಸೊಪ್ಪಿನ ವೈಜ್ಞಾನಿಕ  ಹೆಸರು amarantus gengetics.ಇದನ್ನು ಚೈನಾ ಸ್ಪಿನಾಶ್ .ಎಂದೂ ಕರೆಯುವುದುಂಟು ಭಾರತ,ಮಲೇಶಿಯಾ ,ತೈವಾನ್ ,ಸೌತ್ ಫೆಸಿಪಿಕ್ಗಳಲ್ಲಿ ಕಾಣಸಿಗುವ ಈ ಹಸಿರು ಕೆಂಪು  ಹರಿವೆಯ ಮೂಲ ಮಾತ್ರ ದಕ್ಷಿಣ ಅಮೇರಿಕ/ಮೆಕ್ಷಿಕೊ ದಲ್ಲಿದೆ ಇದನ್ನು ವಾರ್ಷಿಕ ಬೆಳೆಯಾಗಿಯು ಬೆಳೆಸಲಾಗುತ್ತದೆ.ಹಲವಾರು ಪ್ರಭೇದಗಳಿದ್ದರು  ಮುಖ್ಯವಾಗಿ ೬ ರೀತಿಯ ಹರಿವೆಸೋಪ್ಪಿನ ಪ್ರಭೇದಗಳನ್ನು ಗುರುತಿಸಬಹುದು.

ಔಷದಿಯಾಗಿ ಹರಿವೆ...
 
''ಹಿತ್ತಲದಾಗವರತ್ತಿ ಕರೆದು ಕಳ್ಳ ದನಿಲೆ ಕೇಳತಾಳ

ಹಚ್ಚನ್ನ ಹರವಿ ಸೊಪ್ಪು ತಿನ್ನಂಗಾಗೈತೆ ,ಬಾಲನ ಬವಕಿಯ ಬಯಸಂಗಗೈತೆ....'....''

ಹೀಗೆಂದು ಹಾಡಿದ್ದು ಜನಪದರು...ಗರ್ಭಿಣಿ ಮತ್ತು ಬಾಣಂತಿಯರಿಗೆ ಹರಿವೆಸೊಪ್ಪಿನ ಮಹತ್ವವನ್ನು ಅವರಿಗಿಂತ ಹೆಚ್ಚಿಗೆ ಬಲ್ಲವರ್ಯಾರು??ಗರ್ಭಿಣಿಯರು ಹರಿವೆ ಸೊಪ್ಪನ್ನು ಆಹಾರದಲ್ಲಿ ಬಳಸುವುದಲ್ಲದೆ ಬಟ್ಟಲು ಹರಿವೆ ರಸಕ್ಕೆ ಚಿಟಿಕೆ ಯಾಲಕ್ಕಿ ಪುಡಿ ಮತ್ತು ಜೇನು ಬೆರೆಸಿ ಕುಡಿಯುವುದರಿಂದ ಮಗುವಿನ ಬೆಳವಣಿಗೆಗೆ ಪೂರಕವಾಗುತ್ತದೆ.ಮತ್ತು ಬಾಣಂತಿಯರಿಗೆ ಇದನ್ನು ಕೊಡುವುದರಿಂದ ಎದೆಹಾಲು ವೃದ್ಹಿಸುತ್ತದೆ.ಉತ್ತರ ಕರ್ನಾಟಕದ ಕೆಲಭಾಗಗಳಲ್ಲಿ ಸಟ್ಟಿ ಪೂಜೆಯಂದೇ ಬಾಣಂತಿಯರಿಗೆ  ಹರಿವೆ ಸೊಪ್ಪಿನ ಪಲ್ಯವನ್ನು ನೀಡಲಾಗುತ್ತದೆ.

  • ಕುಂಟಿತ ಬೆಳವಣಿಗೆ ಹೊಂದಿರುವ ಮಕ್ಕಳಿಗೆ ಪ್ರತಿದಿನ ಚಮಚದಷ್ಟು ಹರಿವೆ ಸೊಪ್ಪಿನ ರಸ ಮತ್ತು ನಿಂಬೆರಸವನ್ನು ಬೆರೆಸಿ ಕೊಡುವುದರಿಂದ ಪುಷ್ಟಿ ದೊರಕುವುದು.
  • ಮಲಬದ್ಧತೆ ಬಾಧಿಸುವಾಗ ಹರಿವೆ ಸೊಪ್ಪನ್ನು ಆಹಾರ ರೂಪದಲ್ಲಿ ಸೇವಿಸಿದರೆ ಪರಿಹಾರ ದೊರಕುವುದು.
  • ಗಾಯ,ಮತ್ತು ಬಾವು ಗಳಲ್ಲೂ ಹರಿವೆ ಸೊಪ್ಪಿನ ಲೇಪನ ಮಾಡಿದರೆ ಗುಣ ಕಾಣುತ್ತದೆ 
  • ಹರಿವೆ ಸೊಪ್ಪಿನ ಬಳಕೆ ಹೆಚ್ಹು ಹೆಚ್ಹು ಮಾಡುವುದರಿಂದ ಡಯೇರಿಯ,ಮತ್ತು ಅಜೀರ್ಣಕಾರಕ ಭೆದಿಯನ್ನು ಬಹುಮಟ್ಟಿಗೆ ತಡೆಯಬಹುದು.
  • ಕೀರೇ ಸೊಪ್ಪಿನ ರಸ ನ್ಮತ್ತು ನಿಂಬೆ ರಸವನ್ನು ತಲ್ಕೂದಲಿಗೆ ಹಚ್ಚಿ ಸ್ನಾನ ಮಾಡಿದರೆ ತಲೆಹೊತ್ತಿನ ಸಮಸ್ಯೆ ಕಡಿಮೆಯಾಗಿ ,ಕೂದಲು ಸೊಂಪಾಗಿ ಬೆಳೆಯುವುದು.
  • ಹರಿವೆಸೊಪ್ಪಿಗೆ ರಕ್ತ ಸ್ರಾವವನ್ನು ತಡೆಗಟ್ಟುವ ಶಕ್ತಿಯು ಇದೆ..
  • ಮುಳ್ಳುಹರಿವೆ ಗದ್ದೆ ಬದುಗಳಲ್ಲಿ ಸಾಕಷ್ಟು ಸಿಗುತ್ತದೆ ಇದನ್ನು ಆಹಾರದಲ್ಲಿ ಬಳಸುವುದರಿಂದ ಬೆನ್ನು ,ಕಾಲು ಸೆಳೆತದಿಂದ ಮುಕ್ತಿ ಪಡೆಯಬಹುದು.
  • ಬೇಸಿಗೆಯಲ್ಲಿ ಹರಿವೆ ಸೊಪ್ಪನ್ನು ಸೇವಿಸುವುದರಿಂದ ದೇಹ ತಂಪಾಗಿರುತ್ತದೆ.
  • ಬಾಯಿ ಹುಣ್ಣು ಮತ್ತು ಗಂಟಲ ಕಿರಿಕಿರಿಯಲ್ಲಿ ಹರಿವೆಸೋಪ್ಪನ್ನು ಬೇಯಿಸಿದ ನೀರಿನಿಂದ ಗಾರ್ಗಲ್ ಮಾಡಿದರೆ ಬೇಗ ಗುಣ ಕಾಣುವುದು .
  • ಇದರ ಬೀಜವನ್ನು ಧನ್ಯದನ್ತೆಯು ಬಳಸಲಾಗುತ್ತದೆ ಇದರ ಹಿಟ್ಟಿನಿಂದ ಮಾಡಿದ ಖಾದ್ಯವನ್ನು ಉಪವಾಸಗಳಳಲ್ಲಿ ಸೇವಿಸಲಾಗುತ್ತದೆ,ಇದರಿಂದ ಹಪ್ಪಳ,ರೊಟ್ಟಿಗಳನ್ನು ವಿಶೇಷವಾಗಿ ತಯಾರಿಸುತ್ತಾರೆ.
  •  ಅನಿಮಿಯ ,ರಕ್ತ ದೋಷ ಉಳ್ಳವರು ಅಗತ್ಯವಾಗಿ ಇದನ್ನು ಸೇವಿಸಬೇಕು ಎಂದು ತಜ್ಞರು ಹೇಳುತ್ತಾರೆ .
ಹರಿವೆ ಸೊಪ್ಪಿನಲ್ಲಿ ವಿಟಮಿನ್ ,ಐರನ್.ಕ್ಯಾಲ್ಷಿಯಂ ಗಳು ಹೇರಳವಾಗಿರುವುದರಿಂದ ಪ್ರತಿಯೊಬ್ಬರೂ ಇದನ್ನು ಸೇವಿಸಿ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು.ನಿಮ್ಮ ಹಿತ್ತಲಿನಲ್ಲಿ  ಸ್ವಲ್ಪ ಜಾಗೆ ಇದ್ದರು ನೀವೇ ಬೆಳೆಸಬಹುದು.ಮತ್ಯಾಕೆ ತಡ ಹರಿವೆಯಾ ಹಿರಿಮೆಯನ್ನು ನೀವು ಅನುಭವಿಸಿ..ಬಾಯಿ ರುಚಿಯೊಂದಿಗೆ ಆರೋಗ್ಯವನ್ನು ವೃದ್ಧಿಸಿಕೊಳ್ಳಿ..

Monday, September 12, 2011

ಪಾತ್ರ ಅದಲು- ಬದಲು

 ಮಳೆ ಜೋರಾಗುತ್ತಿದೆ...ಬೇಗ್ ಬೇಗ ಬಾ...ಹಾಗೆನ್ನುತ್ತ ಮಗುವಿನ ಕೈ ಹಿಡಿದುಕೊಂಡು ಓಟದ ನಡಿಗೆ ನಡೆಯುತ್ತಿದ್ದೆ....ಆತನೋ ಅಲ್ಲಿ ನಿಂತ ನೀರಲ್ಲಿ ಪಟ್ಟನೆ ಜಿಗಿದು ಪಚ್ಚ್ಹ್ ಅಂತ ಶಬ್ದ ಮಾಡಿ..ಮೈ ತುಂಬಾ ನೀರು ಮಾಡಿಕೊಳ್ಳುತ್ತಿದ್ದ....ಆತನೊಂದಿಗೆ ನಾನು ತೊಯ್ಯುತ್ತಿದ್ದೆ...ಹಾಗ ಮಾಡಬೇಡ...!ಸುಮ್ನೆ ಬರೋಕಗಲ್ವಾ????ಹಾಗಂತ ಮತ್ತೆ ನಾ ನಡೆಯುತ್ತಿದ್ದೆ...ಮತ್ತೆ ಅವನದು ಅದೇ ಕಥೆ...ತಲೆಯ ಮೇಲೊಂದು ಮೊಟಕಿದೆ...ಬೇಗ ಬಾ ಅಂದ್ರೆ ತರ್ಲೆ..ಅದು ಮಳೆಲಿ...ನಾಳೆ ನೆಗಡಿ ಆಗುತ್ತೆ ಆಗಲೋ ನಾನೆ ಬೈಸ್ಕೊಬೇಕು ನಿನ್ ಪಪ್ಪ ನಾ ಹತ್ರ...ಅಮ್ಮನ್ನಿಗೆ ಯಾಕ ಹೀಗ್ ತೊಂದ್ರೆ ಕೊಡ್ತೀಯ???ಹಾಗಂತ ಕೇಳಿದೆ...ಮಗು ತಲೆಕೆಳಹಾಕಿ ಸುಮ್ಮನೆ ನಡೆಯ ತೊಡಗಿತು.....
ಮಳೆ ಜೋರಾಯಿತು..ನಡೆಯೋಕೆ ಆಗ್ತಿಲ್ಲ..ಅಲ್ಲೇ ಒಂದು ಕಂಪೌಂಡಿನ ಪಕ್ಕದ ಮಾಡಿಗೆ ಆಸರೆಯಂತಿದ್ದ ಮರದ ಕೆಳಗೆ ನಿಂತು ಕೊಂಡ್ವಿ.....

ಮರದ ಮೇಲೆ ಬಿದ್ದ ಮಳೆಹನಿಗಳು...ಎಲೆಗಳ ತುದಿಯಿಂದ ಒಂದಂದಾಗಿ ಉದುರುತ್ತಿದ್ದವು..ಬೀಳು ವ ಮಳೆ ಹನಿಗಳತ್ತ ನಿರಾಯಾಸವಾಗಿ ಕೈ ಚಾಚಿದೆ...ಪ್ರತಿ ಹನಿಯು ಕೈಮೇಲೆ ಬಿದ್ದು ಸಿಡಿಯುತ್ತಿತ್ತು..ಅದನ್ನು ಅನಂದಿಸ ತೊಡಗಿದೆ...ಮನಸು ಹಿಂದೆ ಓಡಿತು...ಮುಂಚೆ ಮಳೆಗಾಲ..ಎಂಬುದು...ಚೈತನ್ಯ ದಾಯಿ.ಸಮಯ..ಆಗಲೇ ಅಲ್ವೇ ಶ್ರಾವಣದ ಸಂಭ್ರಮ..ಅರಿಶಿನ ಕುಂಕುಮ ಪೂಜೆ ಎಂದು ಅಮ್ಮಂದಿರೆಲ್ಲ ಬ್ಯುಸಿ ಯೋ ಬ್ಯುಸಿ..ನಾನೂ ಅವರೊಂದಿಗೆ ಹೋಗುತ್ತಿದ್ದೆ...ರಸ್ತೆಯ ಹೊಂಡಗಳಲ್ಲಿ  ಮಳೆ ನೀರಲ್ಲಿ ಮಾಡಿದ ಚಹಾ ಬಣ್ಣದ ನೀರು...ಕಾಲು ತಡೆಯುವುದೇ ಇಲ್ಲ.. ಒಮ್ಮೆ ಜಿಗಿದು ಬಿಡೋಣ ಅನಿಸಿ ಅದರಲ್ಲಿ ಆತ ಆಡಿದಾಗೆಲ್ಲ  ಅಮ್ಮ ತಲೆಗೊಂದು ಮೊಟಕುತ್ತಿದ್ದಳು...ಯಾವಾಗ್ ಬುದ್ಧಿ ಬರುತ್ತೋ...ಹುಶಾರಿಲ್ದೇ  ಮಲ್ಕೋ...ಶಾಲೆಗೆ  ಮತ್ತೆ ರಜೆ ಹಾಕು ..ಮತ್ತೆ ನೀ ನರಳೋದು...ಇರೋ ಕೆಲಸ ಏನ್ ಕಮ್ಮಿನ ಮತ್ತೆ ನೀ ಇದನ್ನೊಂದು ತಗಲಿಹಾಕಿಕೊಂಡು......ಅಪ್ಪನ ಹತ್ರ ನಾ ಬೈಸ್ಕೊಬೇಕು....''ಅಮ್ಮನ ಸಹಸ್ರಾರ್ಚನೆ ಮುಂದುವರಿಯುತ್ತದೆ......

ಆಗೆಲ್ಲ ನಾ ಅಂದುಕೊಳ್ಳೋದಿತ್ತು ನಾ ಅಮ್ಮ ಆದಾಗ ನನ್ ಮಗು ನಾನು ಇಬ್ಬರು ಮಳೆ ನೀರಲ್ಲಿ ಆಟ ಆಡ್ತೀವಿ..ನಾ ಯಾವತ್ತು ಅಮ್ಮನಂತೆ ನನ್ನ ಮಗುನ ಬೈಯ್ಯಲ್ಲ..ಬರೀ ಮುದ್ದು ಮುದ್ದು ಮುದ್ದು ಅಷ್ಟೇ.. ಇಷ್ಟಕ್ಕೂ ಅಮ್ಮ ಯಾಕೆ ಹೀಗ್ ಆಡ್ತಾಳೆ ಅಂತ ಆಲೋಚಿಸುವಷ್ಟು ಬುದ್ಧಿ  ಬಲಿತಿರಲಿಲ್ಲ....ಬಾಲ್ಯ ದಾಟಿತು...ಅಂದುಕೊಂಡ ಮಾತುಗಳು ಮಾತ್ರ ಮನಸಲ್ಲೇ ಉಳಿದಿದ್ದವು.
 
.ಈಗ ನಾನು ಅಮ್ಮ.... ನಾನೂ ಅಮ್ಮ ನಂತೆ ವರ್ತಿಸಿದೆ....ಪಾತ್ರಗಳು ಅದಲು- ಬದಲಾದಂತೆ ಮನುಷ್ಯನ ಬುದ್ಧಿ  ಮಾತು,ಆಲೋಚನೆ ಎಲ್ಲವು ಬದಲಾಗುತ್ತ????ನಾವ್ಯಾಕೆ ಅಷ್ಟು ಬೇಗ ಬದಲಾಗ್ತೀವಿ????ನಾವು ದೊಡ್ಡೋರು ಅನ್ನೋ ಒಂದು ಅಹಮ್ಮಿನಲ್ಲಿ ಮನಸಿನ ಒಂದು ಮೂಲೆಯಲ್ಲಿ ಅಡಗಿ ಕುಳಿತಿರೋ..ಪುಟ್ಟ ಮಗುವನ್ನು ಹೊರಬರಲು ಬಿಡುವುದೇ ಇಲ್ಲ...ಅಂತರಂಗದಲ್ಲಿ ಬಾಲ್ಯದ ಒರತೆ ಅದೆಲ್ಲೋ ಮುಚ್ಚಿ ಹಾಕಿಬಿಡುತ್ತೇವೆ..ನಮ್ಮ ಕನಸುಗಳು..ನಮ್ಮ ಆಲೋಚನೆಗಳು..ಮೆಟ್ಟಿದ ಮನೆಯ ಅಚ್ಚಲ್ಲಿ ಅಚ್ಹಾಗಿ ಬಿಡುತ್ತವೆ...ನಾವೂ ಅಮ್ಮ ಆಗಿಬಿಡುತ್ತೇವೆ....ಹೊರಗಿನ ಮಳೆಯೊಂದಿಗೆ ಮನಸು ಒದ್ದೆ ಒದ್ದೆ.......

ಅಮ್ಮನಿಗೆ ಒಮ್ಮೆ sorry ಹೇಳ್ಬೇಕು ಅನ್ಕೊಂಡೆ...ಮಳೆ ಕೊಂಚ್ ನಿಂತಂತಾಯಿತು...ಮಗ ಇನ್ನೂ ಗಲ್ಲ ಉಬ್ಬಿಸಿಕೊಂಡೆ ಇದ್ದ ...ಮನೆಗೆ ಬಂದೊಡನೆ ಪುಟ್ಟ  ಪುಟ್ಟ  ಕಾಗದದ ದೋಣಿಗಳೊಂದಿಗೆ ರಸ್ತೆಯಲ್ಲಿ ಹರಿದು ಬರುತ್ತಿದ್ದ ನೀರಲ್ಲಿ ನಮ್ಮ ದೋಣಿಯಾನ ಆರಂಭವಾಯಿತು.. ಮಗು ಸಿಟ್ಟು ಮರೆತು ಮನಸ್ಪೂರ್ತಿ ಆಡ ತೊಡಗಿತ್ತು......ಆಗ ನೆನಪಾದ ಹಾಡುಗಳೆಷ್ಟೋ...ಕವನಗಳೆಷ್ಟೋ.... ಮಗ ''ಅಮ್ಮ  ನೀನು ಗುಡ್ ಗರ್ಲ್ ''ಅಂತ ಸರ್ಟಿಫಿಕೆಟ್ ಬೇರೆ ಕೊಟ್ಟ. ಬಾಲ್ಯದುದ್ಯಾನದಲಿ ಹೂತು ಹೋಗಿದ್ದ.. ಕನಸ ಬೀಜಕ್ಕೆ.ಒಲವಿನೊರತೆಯ ಸಿಂಚನ... ಮನದಲ್ಲಿ ಮಾತ್ರ ಅವೆ ಪ್ರಶ್ನೆಗಳ ಮಹಾಪೂರ ..


(www.vijayanextepaper.com ವಿಜಯನೆಕ್ಷ್ತವಾರಪತ್ರಿಕೆಯ ಅವಳ ಡೈರಿ ಅಂಕಣದಲ್ಲಿ ಪ್ರಕಟಿತ )

Monday, August 29, 2011

ಜನರ ಸಂತೆಯಲ್ಲಿ ಹಕ್ಕಿಗಳೊಂದಿಗೆ... ನಾನು


                                                                                               


ಇಂಥವೆಲ್ಲ ನನ್ನ ಕಣ್ಣಿಗೆ ಯಾಕೆ ಬಿಳುತ್ತವೆಯೋ ಗೊತ್ತಿಲ್ಲ, ದೇಶ ಬಿಟ್ಟು ನನ್ನದಲ್ಲದ ನಾಡಿಗೆ ಬಂದು ನೆಲೆಸಿದರು ಈ ನಂಟು ನನ್ನ ಬಿಡಲೊಲ್ಲದು, ಮದುವೆಯ ನಂತರ ಮೊದಲು ಸಂಸಾರದ ಬಂಡಿ ಹೂಡಿದ್ದು ಬೆಳಗಾವಿಯಲ್ಲಿ, ೨ ನೇ ಅಂತಸ್ತಿನಲ್ಲಿ ನನ್ನ ಪುಟ್ಟ ಗೂಡು , ಅಡಿಗೆ ಮನೆಯ ಕಿಟಕಿ ತೆರೆದ ಕೂಡಲೇ ಕಾಣುತ್ತಿತ್ತು ಅವರ ಬಳಗ. ಹತ್ತಿರದ ಅಂಗಡಿಯ ಬಾಗಿಲಲ್ಲಿ ಅವರು ಎಸೆಯುತ್ತಿದ್ದ ಅಕ್ಕಿಯ ಕಾಳ್ ಆಸೆ ಪಟ್ಟು ಎದುರಿನ ವಿದ್ಯುತ್ ತಂತಿಯ ಮೇಲೆ ಮದುವೆ ಉಟಕ್ಕೆ ಕುಳಿತ ಪಂಕ್ತಿಯಂತೆ ಕೂಡುತ್ತಿದ್ದ ಮುದ್ದು ಮುಖದ ಗುಬ್ಬಿಗಳು.

ನನ್ನ ಕೆಲಸ ಮುಗಿಯಿತೆಂದ ಕೂಡಲೇ, ನಾನು ಅವನ್ನು ನೋಡುತ್ತಾ ಕುಳಿತು ಬಿಡುತ್ತಿದ್ದೆ. ನೋಡಲು ಒಂದೇ ರೀತಿ ಕಂಡರೂ ಅವುಗಳ ಆಕಾರ, ಗಾತ್ರ,ಅವುಗಳ ಚರ್ಯೆ ಬೇರೆಯೇ ಆಗಿರುತ್ತದೆ. ಹತ್ತಿರದಿಂದ ನೋಡಲು ಸಿಗುತ್ತಿದ್ದರಿಂದ ನಾನು ಅವನ್ನು ಗುರುತಿಸ ತೊಡಗಿದ್ದೆ. ಹಾಗೊಂದ್ ದಿನ ನಾನೂ ಕಿಟಕಿಯ ಹೊರಗಿನ ಪುಟ್ಟ ಜಾಗೆಯಲ್ಲೇ ಒಂದಷ್ಟು ಅಕ್ಕಿ ನುಚ್ಚು ಎಸೆದು ಅವಕ್ಕಾಗಿ ಕಾಯುತ್ತ ಕುಳಿತೆ..ಹಾಗೆ ಬಂದೇ ಬಿಡುತ್ತವೆಯೇ ಅವು..?????ಕಾಯಿಸಿದವು..ನಾನೂ ಕಾದೆ ೧..೨..೩...೪...ಹೀಗೆ ದಿನ ಕಳೆದರು ಅವು ಬರಲಿಲ್ಲ. ಅದೊಂದು ದಿನ ಪುಟ್ಟ ಮರಿ ಗುಬ್ಬಿ ನನ್ನ ಕಿಟಕಿಯ ಮೇಲೆಸೆದ  ನುಚ್ಚಿನ ರುಚಿ ನೋಡಲು ಬಂದಿತ್ತು.

ಮೊದಲು ಅದಕ್ಕೂ ಹೆದರಿಕೆ! ಆಮೇಲೆ ಅದು ತನ್ನ ಪರಿವಾರದೊಂದಿಗೆ ಬರ ತೊಡಗಿತು. ಆಮೇಲೆ ದಿನಾಲೂ . ಸಂಖ್ಯೆ ಹೆಚ್ಹಾಗ ತೊಡಗಿದಂತೆ ಒಮ್ಮೆ ಹಾಕಿದರೆ ಸಾಕಾಗದು ಮತ್ತೆ ಮತ್ತೆ ಹಾಕು ಎಂಬಂತೆ ಜಗಳವಾಡುತ್ತಿದ್ದವು. ಅವುಗಳೊಂದಿಗೆ ಒಂದು ಘಟ್ಟಿ ಬಾಂಧವ್ಯ ಬೆಳೆಯತೊಡಗಿತ್ತು. ಇಲ್ಲಿ ಮಾತಾಡಿ ಹಾಳಾಗುವ,ಮಾತಿನ ಇನ್ನೊಂದು ಅರ್ಥ ಹುಡುಕುವ ಪ್ರಮೇಯ ಇರಲಿಲ್ಲ..ಚೀಕ್ ಚಿಕ್ ..ಚೆಂವ್ವ್...ಎಂಬುದನ್ನು ನಾನೂ ನನಗೆ ಬೇಕಾದಂತೆ ಅರ್ಥೈಸ ತೊಡಗಿದ್ದೆ..ಅವುಗಳೊಂದಿಗೆ ಮಾತಾಡುತ್ತಿದ್ದೆ. ಜಗಳ ಮಾಡುತ್ತಿದ್ದೆ   ವಿಚಿತ್ರ ಎಂದರೆ ಅವು ನನ್ನ ಮಾತಿಗೆ ಪ್ರತಿಕ್ರಿಯಿಸುತ್ತಿದ್ದವು ಇದನೆಲ್ಲಾ ನನ್ನ ಪಪ್ಪನಿಗೆ ಫೋನ್ ಮಾಡಿ ಸಂತಸ ಪಡುತ್ತಿದ್ದೆ..ಭಾವುಕ ಜೀವಿಗೆ ಇದೊಂದು ಅಪೂರ್ವ ಅನುಭವ. ವಾಸ್ತವ ವಾದಿ ನನ್ನ ಪತಿ ಕೂಡ ಇದನ್ನು ಆನಂದಿಸ  ತೊಡಗಿದ್ದರು.ಆದಿನ ಕಿಟಕಿಯ ಬಾಗಿಲು ತೆರೆದಿತ್ತು ನಾವು ನಮ್ಮ ಕೋಣೆಯಲ್ಲಿದ್ದೆವು, ಏನೋ ಸದ್ದು ಎರಡು ಗುಬ್ಬಿಗಳು!!!ಸೀದಾ ಒಳಬಂದು ಹಾರಡ ತೊಡಗಿದ್ದವು..ಆದಿನ ನಾ ಅನುಭವಿಸಿದ್ದ ಆ ಸಂತಸ ಅದೆಷ್ಟು ಮಧುರ...

ಅದೆಷ್ಟು ಬೇಗ ಸಮಯ ಸರಿಯಿತು ತಿಳಿಯಲೇ ಇಲ್ಲ. ನಾನೂ‌ ಬಾಣಂತನಕ್ಕೆ ಅಮ್ಮನ ಮನೆಗೆ ಹೊರಟು ನಿಂತೆ. ಅವಕ್ಕೂ ಟಾಟ ಹೇಳಿದ್ದೆ. ಆಮೇಲೆ ನಾ ಬಂದಿದ್ದು ೭ ತಿಂಗಳ ನಂತರ. ಅಲ್ಲಿ ತನಕ ಸ್ಥಗಿತ ವಾಗಿದ್ದ, ನಮ್ಮ ಮಾತುಕತೆ ಮತ್ತೆ ಪ್ರಾರಂಭವಾಗಿತ್ತು .
ನಮಗೂ ಗೊತ್ತಾಗದಷ್ಟು ವೇಗದಲ್ಲಿ ನಮ್ಮ ನೆಲೆ ಬದಲಿಸಬೇಕಾಗಿ ಬಂತು.‌ಮತ್ತೆ ಅವುಗಳಿಂದ ದೂರವಾಗಿದ್ದೆ. ಅಷ್ಟೊತ್ತಿಗಾಗಲೇ ಗುಬ್ಬಿಗಳೊಂದಿಗೆ ಕಾಡು ಪಾರಿವಾಳಗಳು ಜೊತೆಯಾಗಿದ್ದವು...ಅವುಗಳನ್ನು ಬಿಟ್ಟು ಬರುವಾಗ ಆದ ಸಂಕಟ ಯಾರೊಂದಿಗೂ ನಾ ಹಂಚಿ ಕೊಳ್ಳಲಿಲ್ಲ  ಹೇಳಲು ಏನಿತ್ತು???..ಸಾಕಿದ ಹಕ್ಕಿಗಳಲ್ಲ ನನ್ನ ನಂಬೇ ಬಂದವುಗಳಲ್ಲ ಆದರೂ ನನ್ನ ಏಕತಾನತೆಗೆ ಸಂಗಾತಿ ಯಾಗಿ ಒಲುಮೆಯ ಬಾಂಧವ್ಯ ಬೆಸೆದಿದ್ದವು. ಮಾತು ಬರುವ ಮನುಷ್ಯರಿಗಿಂತ ಮಾತು ಬರದ ಈ ಜೀವಿಗಳೇ ಸಾವಿರಪಾಲು ಲೇಸು ಎನಿಸಿದ್ದು ಸುಳ್ಳಲ್ಲ..

ನಂತರ ಮತ್ತೊಂದು ಹಕ್ಕಿಯ ಜೊತೆ ಒಡನಾಟ ಆಯ್ತು. ಆ ಹಕ್ಕಿಯ  ಹೆಸರು ನನಗೆ ಗೊತ್ತಿಲ್ಲ. ಕನ್ನಡಿಯಲ್ಲಿ ತನ್ನ ಬಿಂಬ ಕಂಡು ಅದನ್ನು ಕುಕ್ಕುತ್ತ ಕುಳಿತು ಕೊಳ್ಳುತಿತ್ತು.ಮನೆಯ ಜಗಲಿಯಲ್ಲಿ ನೇತು ಹಾಕಿದ ಒಂದು ಪ್ರಕೃತಿಯ         ಚಿತ್ರಕ್ಕೆ ಬಂದು ಏನೋ ಹುಡುಕುತಿತ್ತು...ಅದೇ ಹಕ್ಕಿ..ಗೊರಟ್ಟಿಗೆ ಗಿಡಕ್ಕೆ ಗೂಡು ಕಟ್ಟಿ ಸಂಸಾರ ಹೂಡಿತ್ತು(..ಅದರ ಕುರಿತು ಬರೆದ ಬರಹ http://bhavanaloka.blogspot.com/2010/12/blog-post_9354.ಹ್ತ್ಮ್ಲ್ ಇಲ್ಲಿ ಓದಬಹುದು..)

ನಂತರ ಈ ನಾಡಿನಲ್ಲಿ(Northern Ireland)
ನಾ ಬಂದ ದಿನದಿಂದಲೇ ಇಲ್ಲಿ ಸ್ನೌಫಾಲ್  ಮೆತ್ತಗೆ ಆರಂಭ ಗೊಂಡಿತ್ತು‌ ಆಗೆಲ್ಲ ಹಾರಾಡುತ್ತಿದ್ದ ಹಕ್ಕಿ ಕಂಡು ಅಂದು ಕೊಳ್ಳುತ್ತಿದ್ದೆ ಅದೆಷ್ಟು ಛಳಿ ಆಗುತ್ತಿರಬಹುದು ಇವಕ್ಕೆ..????ಈ ಸಮಯದಲ್ಲೇ ಅಲ್ಲವೇ ಅವು ಸಾವಿರಾರು ಮೈಲಿ..ವಲಸೆ ಹೋಗುವುದು..ನನ್ನೂರ ಹತ್ತಿರ ಇರುವ ಅತ್ತಿವೆರಿ  ಪಕ್ಷಿ ಧಾಮಕ್ಕೆ ಬಂದು ಗೂಡು ಕಟ್ಟಿ ಸಂಸಾರ ಮಾಡಿದ ಹಕ್ಕಿಗಳು ಇಲ್ಲೂ ಇರಬಹುದ????ಹಾಗೆ ಏನೇನೋ ಆಲೋಚನೆಗಳು.ಮತ್ತು ಇಲ್ಲಿ ಯಾವ ಪಕ್ಷಿಯೊಂದಿಗೆ ನನ್ನ ಬಂಧ ಬೆಳೆಯಲಿದೆಯೋ????ಮನಸ್ಸು ಯಾವಾಗಲಾದರೊಮ್ಮೆ ಕೇಳಿದ್ದು ಸುಳ್ಳಲ್ಲ...

ಹಾಗೆ ಕೇಳಿಕೊಂಡ ಕೊಂಚ ದಿನಕ್ಕೆ ಹಿತ್ತಲಲ್ಲಿ ಪಕ್ಷಿಗಳ ಇಂಚರ..ಆದರೂ ನಾ ಗಮನಿಸಲಿಲ್ಲ..ಗೂಡು ಕಟ್ಟಲು ಮರವು ಇಲ್ಲ‌ ಮತ್ಯಾವ ರೀತಿಯಲ್ಲೂ ಸೂಕ್ತವಲ್ಲದ ಯಮಗಾತ್ರದ  ಸಿಮೆಂಟು ಗೋಡೆಗಳು, ಅಲ್ಲಿ ಹೇಗೆ ಗೂಡು ಕಟ್ಟಿಯಾವು????
ನನ್ನ ಸಂದೇಹ ಮರುದಿನವೇ ಮಾಯಾ. ಅಲ್ಲೊಂದು ಗೂಡು ಅದೂ ಮಣ್ಣಿನ ಗೂಡು. ಹಕ್ಕಿಗಳು ಮಣ್ಣಿನಿಂದ ಗೂಡು ಕಟ್ಟುತ್ತವೆಯೇ????ನಾನು ಹಕ್ಕಿಗಳ ಬಗ್ಗೆ ಅಷ್ಟೇನೂ ಓದಿಕೊಂಡಿಲ್ಲ ಆಗ ಆ ಗೂಡ್ನಲ್ಲಿ ಪುಟ್ಟ ಪುಟ್ಟ ನಾಲ್ಕು ಮರಿಗಳು..ತುಂಬಾ ಆಯಕಟ್ಟಿನ ಸ್ಥಳದಲ್ಲಿ ಗೂಡು ಇದ್ದಿದ್ದ ರಿಂದ ಮರಿಗಳ ಫೋಟೋ ತೆಗೆಯಲು ಹೋಗಿ ಪ್ರತಿಬಾರಿ ಸೋತು ಹೋಗುತ್ತಿದ್ದೆ.ಹಕ್ಕಿಗಳು  ಹೆದರುತ್ತಿದ್ದವು..ಅಧ್ಯೇಗೋ ಮಾಡಿ ಒಂದು ಚಿತ್ರದಲ್ಲಿ ಈ ಹಕ್ಕಿ ಮರಿಗಳು ಸೆರೆಯಾದವು.

ಸ್ವಲ್ಪ ದಿನದ ನಂತರ ಹಾರಾಡಲು ಕಲಿಸುತ್ತಿದ್ದ ಅಮ್ಮ..ಕಲಿಯುತ್ತಿದ್ದ ವಿಧೇಯ ಮರಿಗಳು. ಅವು ಹಾರಿ ಹೋಗಲು ತಯಾರಿ ನಡೆಸಿದ್ದವು. ಯಾಕೋ ಆದಿನ ಭಾಳ ಬೇಜಾರಾಗಿತ್ತು.ಒಂದು ವಾರ ಕಳೆದಿತ್ತಷ್ಟೆ ಮತ್ತೆ ಗೋಡೆಗೆ ಗೂಡು. ಹಸಿ ಮಣ್ಣಿನ ಸುವಾಸನೆ, ಮತ್ತೊಂದು ಮಗದೊಂದು ಗೂಡು. ಮೊಟ್ಟೆ, ಆದರೆ ಆ ಹಕ್ಕಿ ಇನ್ನೂ ನನಗೆ ಅಪರಿಚಿತ ಗೂಡಿನ ಚಿತ್ರ ತೆಗೆದು ಫೆಸ್ಬುಕ್ ನಲ್ಲಿ ಹಾಕಿದೆ. ಬೆಂಗಳೂರಿನ  ಅಂಜಲಿ ರಾಮಣ್ಣ, ೨ ನಿಮಿಷಕ್ಕೆ  ಪ್ರತಿಕ್ರಿಯಿಸಿದರು..THE BARN SWALLOW. ಸರಿ ಕನ್ನಡದ ಹೆಸರೇನು???ಆಗ ಮತ್ತೊಂದು ಪ್ರತಿಕ್ರಿಯೆ. ಧಾರವಾಡದ ಹರ್ಷವರ್ಧನ್ ಶೀಲವಂತ್ ಅವರು ಆ ಹಕ್ಕಿಯ  ಕನ್ನಡದ ಅದೆಷ್ಟು ಚಂದದ ಹೆಸರು ಬರೆದಿದ್ದರು..''ಅಂಬರ ಗುಬ್ಬಿ''ಹೆಸರು ಕೇಳಿಯೇ ರೋಮಾಂಚನ ಆಗಿತ್ತು..ಗೆಳತಿ ಅಂಜಲಿ‌ ಬಾಣಂತನ ಕ್ಕೆ ಅಂಟಿನ್ಉಂಡೆ  ಕಳಿಸಲ ಅಂದ್ರು.

ಇಲ್ಲಿಯ ಹೆಣ್ಣುಮಕ್ಕಳು ಹೆರಿಗೆಯ ನಂತರ ಮಗುವನ್ನು ಬಾಸ್ಕೆಟ್ ನಲ್ಲಿ ಹಾಕಿಕೊಂಡು‌ ಡ್ರೈವ್ ಮಾಡುತ್ತಾರೆ ಹಕ್ಕಿಗಳ ಕತೆ ಏನೋ ಯಾರಿಗ್ಗೊತ್ತು ಅಂದೆ.ಆಗ ಹೇಳಿದ ಮಾತು ಮಾತ್ರ ಮನ ತಟ್ಟಿತ್ತು..''ಏನೇ ಹೇಳಿ ಅಮಿತಾ ಗೂಡು ಕಟ್ಟಿ ಮರಿ ಮಾಡಿ ಮಾತೃತ್ವ ಪಡೆಯುವ ಆ ಆನಂದದ ಮುಂದೆ ಬೇರೆಲ್ಲವನ್ನೂ ನಿವಾಳಿಸಿ ಎಸೆಯಬೇಕು..''ನಿಜ ಅಲ್ಲವೇ? ಬೇರೆಲ್ಲ ವಿಷಯದಲ್ಲಿ ಮನುಷ್ಯ ಸಾಕಷ್ಟು  ತನ್ನದನ್ನು ಸಾಧಿಸಿರಬಹುದು.ಆದರೆ ಮನೇ ,ಮಗು ಮತ್ತು ಅವುಗಳ ಆರೈಕೆ ಬೆಳವಣಿಗೆಯ ವಿಷಯದಲ್ಲಿ ಮಾತ್ರ ಹಕ್ಕಿಯ ಜಾಡನ್ನೇ ಹಿಡಿದ.‌ಆತ ಮಾಡಿದ ಒಂದೇ ಒಂದು ಹೆಚ್ಚುಗಾರಿಕೆ ಎಂದರೆ , ಮಕ್ಕಳನ್ನು ಬೆಳೆಸಿ ಅವುಗಳಿಂದಲೂ ಅದೇ ತೆರನಾದ ಪ್ರೀತಿ ಮಮತೆ ಬಯಸಿದ. ಆದರೆ ಹಕ್ಕಿ ಮಾತ್ರ ತನ್ನ ಕರ್ತವ್ಯ ಮಾಡಿ ತನ್ನಷ್ಟಕ್ಕೆ ಸುಮ್ಮನಾಯಿತು..

ಅದ್ಯಾಕೆ ಇಂತದ್ದೆಲ್ಲ ನನ್ನ ಕಣ್ಣಿಗೆ ಬೀಳುತ್ತೆ ????ಒಂದು ಪುಟ್ಟ ಹಕ್ಕಿ ಮನಸಿನಲ್ಲಿ ಮೂಡಿಸುವ ಭಾವಗಳು ಸಾವಿರ.ಭಾವಗಳನ್ನು ಬೆಳೆಸಲೆಂದೇ ಬಾಂಧವ್ಯ ಬೆಳೆಯುತ್ತವೆಯ???ಸಾವಿರ ಆಲೋಚನೆಗಳ ಇಂಚರ. ಸಧ್ಯಕ್ಕೆ ನಾನು ಅಂಬರ ಗುಬ್ಬಿಯ ಮರಿಗಳೊಂದಿಗೆ ಬ್ಯುಸಿಯೋ ಬ್ಯುಸಿ. ನೀವು ಒಮ್ಮೆ ನಿಮ್ಮ ಅಕ್ಕ ಪಕ್ಕ ಕಣ್ಣು  ಹೊರಳಿಸಿ..ಅಲ್ಲೊಂದು ಪುಟ್ಟ ಮೂಕ ಜೀವಿ ನಿಮ್ಮ ಒತ್ತಡಗಳಿಗೆ  ಮಾತಿಲ್ಲದೆ ಸಾವಿರ ಸಮಾಧಾನ ಹೇಳಬಹುದು. ಒಮ್ಮೆ ಪ್ರಯತ್ನಿಸಿರಿ..ನನ್ನ ಅಂಬರ ಗುಬ್ಬಿಗಳಿಗೆ ನಿಮ್ಮ ಒಲುಮೆ ಹಾರೈಸಿ...

( ೨೮/೦೮/೨೦೧೧ ವಿಜಯ ಕರ್ನಾಟಕ ಸಾಪ್ತಾಹಿಕ ಲವಲವಿಕೆ ಪುರವಣಿಯಲ್ಲಿ ಪ್ರಕಟಿತ )

Monday, August 22, 2011

ಪೋಸ್ಟ್ ಕಾರ್ಡ್ ನಲ್ಲಿ ಉಳಿದು ಹೋದ ಬದುಕು


 ಪತ್ರವೊಂದನು ಬರೆಯದೆ ಎಷ್ಟು ದಿನ ಕಳೆಯಿತು???ಪ್ರಶ್ನೆ...ಹಳೆಯದು...ಇಮೇಲ್,,ಮೊಬೈಲ್ ಮೆಸೇಜ್ ,,,,ಟೆಲಿಫೋನ್ ಭರಾಟೆಯಲ್ಲಿ ಪೆನ್ನು ಕಾಗದಗಳು ಬರೀ ಸಾಂಕೇತಿಕವಾಗಿ ಉಳಿದಿವೆ...ಸಮಯ ಉಳಿತಾಯ..ತತ್ಪರ ಸೇವೆಯಿಂದ...ಈ ನವಯುಗದ ಸಂದೇಶ ಮಾಧ್ಯಮಗಳು ಒಳ್ಳೆಯದು ಹೌದು...ಪತ್ರ ಬರೆಯುವುದು ಹಳೆ ಸ್ಟೈಲು..ಎನ್ನುವುದು ಹಲವರ ಅಂಬೋಣ...ಮತ್ತೆ ಕೆಲವಷ್ಟು ಬಾರಿ ಪತ್ರ ಬರೆಸಿಕೊಂಡವರು ಅದಕ್ಕೆ ಜವಾಬು ಕೊಡದೆ....ಅಂಥ ಸುಂದರ ಅಕ್ಷರ ಬಾಂಧವ್ಯದ ಯೋಗ್ಯರಾಗುವುದೇ ಇಲ್ಲ.....ಪ್ರೇಮಪತ್ರಗಳ ಜಾಗವನ್ನು ಮುದ್ರಿತ ಗ್ರೀಟಿಂಗ್ ಕಾರ್ಡ್ ಗಳು ಆಕ್ರಮಿಸಿದವು....ಹೀಗೆ ಪತ್ರಗಳು....ಗತಕಾಲದ ವೈಭವ ವಾಗಿಬಿಟ್ಟವು......
ಸರಿ..ಪತ್ರ ಬರೆಯೋದು ಬೇಡ....ಹಳೆಯ ಪತ್ರಗಳನ್ನು ಓದದೆ ಎಷ್ಟ್ ದಿನ ಆಯಿತು...???????
ಪತ್ರಗಳಲ್ಲೂ ಹಲವು ವಿಧಗಳಿವೆ...ಶುದ್ಧ ವ್ಯವಹಾರಕ್ಕೆ ಬರೆದ ಪತ್ರಗಳು...ಪ್ರೇಮಕ್ಕೆ...ಮಮಕಾರಕ್ಕೆ  ಆಮಂತ್ರಣಕ್ಕೆ.ಆಯಾ ವಿಷಯಕ್ಕೆ ತಕ್ಕಂತೆ...ಪತ್ರದ ಅಳತೆಯು ನಿರ್ಧಾರವಾಗುತ್ತದೆ ಪುಟಗಟ್ಟಲೆ ಬರೆದ ಪತ್ರಗಳು ಕೆಲವೊಮ್ಮೆ ಬೋರು ಹೊಡೆಸಿರಬಹುದು..  ನೀಲಿ .ಅಂತರ್ದೆಶಿಯ ಪತ್ರದ ಮಡತೆಯಲ್ಲಿನಾಲ್ಕೇ ಸಾಲು ನೋಡಿ ನಿರಾಸೆಯೂ ಆಗಿರಬಹುದು...ಆದರೆ ಪೋಸ್ಟ್ ಕಾರ್ಡ್ ಆಕಾರದಲ್ಲಿ ಚಿಕ್ಕದಾದರೂ...ಅದು ಹೇಳಬೇಕಾದ್ದನ್ನು ಸರಳವಾಗಿ ಹೇಳಿ ಬಿಡುತ್ತದೆ....
ಅಂಥ ಪೋಸ್ಟ್ ಕಾರ್ಡುಗಳನ್ನು... ನಮ್ಮ ತಂದೆ  ಚಿನ್ನದ ಹಾಳೆಗಳೆನೋ..ಎನ್ನುವಷ್ಟು ಜಾಗ್ರತೆಯಿಂದ ಕೂಡಿತ್ತಿದ್ದಾರೆ ೧೯೪೧ ರಿಂದ ೨೦೧೦ ರತನಕದ ಕಾರ್ಡುಗಳಿವೆ.. ಸಮಯ ಸಿಕ್ಕಾಗ..ಮನೆಗೆ ಯಾರಾದರು ಬಂದಾಗ ಫೋಟೋ ಅಲ್ಬುಮ್ಗಳಂತೆ ಈ ಪೋಸ್ಟ್ ಕಾರ್ಡ್ ಗಳು ನೆನಪ ಬುತ್ತಿಯನ್ನು ಬಿಚ್ಚಿಡುತ್ತವೆ....
ಪೋಸ್ಟ್ ಕಾರ್ಡ್ಗಳಲ್ಲಿ ಬರೆದವರು ಪಾತ್ರಗಳಾದವರು........ಹಲವರು...ಕೆಲವರ ಬದುಕು ಸಂಪೂರ್ಣ ಬದಲಾಗಿದೆ...ಕೆಲವರು ಈಗ  ಬದುಕೇ ಇಲ್ಲ ...ಅವೆಲ್ಲ ಪತ್ರಗಳನ್ನು ಓದಿದ ನಂತರ ಹಲವು ಭಾವಗಳು ಮನದಲ್ಲಿ ಹಾದು ಹೋಗುತ್ತವೆ...ಅಂಥ ಮೂರು ದಶಕಗಳ ಪ್ರತಿನಿಧಿಗಳಂತೆ...ಮೂರು ಕಾರ್ಡ್ಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ...ಹೆಚ್ಹು ಸೆಳೆದಿರುವ ...ಮತ್ತು ಕಾರ್ಡ್ ಓದಿದ ನಂತರ ನಡೆದ ಘಟನೆಯನ್ನು ಅರಿಯಲು ಪ್ರಯತ್ನಿಸಿ.. ಬದುಕನ್ನು...ಕೆಲ ಸಾಲುಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡಿರುವೆ...ಕಾಲ ಸವೆದು ಹೋಗಿದೆ...ಬದುಕು ಈ ಕಾರ್ಡ್ ಗಳಲ್ಲಿ ಉಳಿದು ಹೋಗಿದೆ....



ಪೋಸ್ಟ್ ಕಾರ್ಡ್ -1

ಸಾಂಪ್ರತ                                                     ೧೭/೦೨/೧೯೭೦     
..............................................
................................................
ಮಂಜಗುಣಿಯಲ್ಲಿ ವರನೊಬ್ಬ ನಿರುವ ಬಗ್ಗೆ ಗೊತ್ತಾಗಿದೆ..ಅಮ್ಮ ಹೇಳುವಂತೆ
 ಸೌ.ಕಮಲಿನಿ ಗೆ  ಈ ಸಂಭಂಧ ಹೇಳಿ ಮಾಡಿಸಿದ್ದಂಥದ್ದು
ವರ ಪೋಸ್ಟ್ಮ್ ಮನ್ ನಾಗಿ ಕೆಲಸ ಮಾಡುತ್ತಿದ್ದು ತನ್ನದೇ ಸ್ವಂತ  ಜಮೀನು ಹೊಂದಿದ್ದಾನೆ.ತಂದೆ ಇಲ್ಲ
 ತಾಯಿಯು ವಯಸ್ಸದುದರಿಂದ ಆದಷ್ಟು ಬೇಗ ಮದುವೆ ಮಾಡಿಬಿಡಬೇಕು.ಎಂಬದು ಹುಡುಗನ ದೊಡ್ಡಪ್ಪನ 
ವಿಚಾರ.ಆದ ಕಾರಣ ತಾವು ಮತ್ತು ಅಕ್ಕ ಬಂದು ಅಮ್ಮನೊಂದಿಗೆ ಮಂಜುಗುಣಿ ಗೆ ಹೋಗಿ ಬನ್ನಿ..
ಮತ್ತೇನು ವಿಶೇಷ ವಿಲ್ಲ.ನಮ್ಮ ಮನೆಯ ಕೆಂಪಿ ಕಂದು ಹಾಕಿತು.ಇದು ಎರಡನೇ ಸಲ.ಮತ್ತೆ ಹೀಗೆ ಆದರೆ ಅದನ್ನು 
ಮಾರಾಟ ಮಾಡುವುದು ಎಂಬ ಆಲೋಚನೆ ಇದೆ......ಮಕ್ಕಳಿಗೆಲ್ಲ ಆಶಿರ್ವಾದ..ಮತ್ತು ಪ್ರೀತಿ....
ಮತ್ತೆಲ್ಲ ಆರಂ 
ಇಂತಿ ತಮ್ಮ 
ರಾಮದಾಸ.
...............................ಕಮಲಿನಿಗೆ  ಮದುವೆ ಗೊತ್ತಾಯಿತು ...ಅದು ಎರಡನೇ ಸಂಬಂಧ.ಮೊದಲೇ ೪ ಮಕ್ಕಳಿದ್ದವು...ಆಕೆ ಒಪ್ಪುವ ಮೊದಲೇ ತನ್ನ ಮನದಲ್ಲಿದ್ದದ್ದನ್ನು ಹೇಳಿ ಬಿಟ್ಟಿದ್ದಳು..೪ ಮಕ್ಕಳಿಗೆ ತಾಯಿ ಆಗಲೂ ನಾ ಸಿದ್ಧ..ಆದ್ದರೆ ವರನಿಗೆ ಕುಡಿತದ ಅಭ್ಯಸವೊಂದು ಇರದಿದ್ದರಷ್ಟೇ..ಸಾಕು.
..ಮನೆಯಲ್ಲಿ ತನ್ನ ಬೆನ್ನಿಗೆ ವಯಸ್ಸಿಗೆ ಬಂದ ತಂಗಿಯರು..ತಮ್ಮಂದಿರು...ತನ್ನನ್ನು ಮದುವೆ ಆಗುವವ ಒಳ್ಳೆ ಅನುಕೂಲಸ್ತ..ತನ್ನಿಂದ ತವರಿನ  ಪರಿಸ್ತಿತಿ ಸುಧಾರಿಸಿದರೆ ಅದೇ ಒಂದು ನೆಮ್ಮದಿ....ಮಕ್ಕಳೇನು ???ಇಲ್ಲಿ ಚಿಕ್ಕ ತಂಗಿ ತಮ್ಮಂದಿರನ್ನು ಸಾಕಿಲ್ಲವೇ??ಹಾಗೆ..ಮುದ್ದು ಪ್ರೀತಿಯಿಂದ ಎಲ್ಲವನ್ನು ಗೆಲ್ಲಲು ಸಾಧ್ಯ...
ಸಂಬಂಧ ತಂದವ ಹತ್ತಿರದ ಸಂಬಂಧಿ...ಎಲ್ಲಕ್ಕೂ ಹೂ ಅಂದು ಅದನ್ನು ಹೊಂದಿಸಿದ್ದ ..ಮದುವೆಯು ಆಯ್ತು...ಮೊದಲ ವಾರದಲ್ಲೇ..ಗೊತ್ತಾಯಿತು..ತಾನು ಏನು ಇರಬಾರದು ಅಂದು ಕೊಂಡಿದ್ದಲೋ..ಅದರ ನಷೆಯಲ್ಲೇ...ಮತ್ತ ....ತೂ..ರಾ..ಡು...ತ್ತ.....ನಾಲ್ಕು ವರ್ಷದಲ್ಲಿ ಎರಡು ಮಕ್ಕಳು...ಬದುಕು...ಹೇಗೋ ಸಾಗಿತ್ತು....
ತವರಿಗೆ ತನ್ನ ಮನೆಯ ಗುಟ್ಟು ಎಂದು ಬಿಟ್ಟು ಕೊಡಲಿಲ್ಲ...ಒತ್ತಡದಲ್ಲಿ ಒರಟು ಮಾತುಗಳು ಬರುತ್ತಿದ್ದವು....ಒಡಲಲ್ಲಿ ಎರಡು ಮಕ್ಕಳು...ಅಷ್ಟರಲ್ಲಿ ಆತ ಇಲ್ಲವಾದ ಅನುಕೂಲ ಗಳೆಲ್ಲ ಮರೆಯಾದವು..ಸಂಭಂಧಿಗಳು ಪರಿಚಯವಿಲ್ಲವೇನೋ...ಎಂಬಂತೆ ವರ್ತಿಸಿದರು..
ನಂತರ ????? ಕಲಿತ ಹೊಲಿಗೆ,ಕೈ ಹಿಡಿದಿತ್ತು...ಬಡತನ ಬಾಲ್ಯದಿಂದಲೇ ಸ್ವಾಭಿಮಾನ ಕಲಿಸಿತ್ತು...ಸಾಕೆ???ಅಂಗಡಿಗೆ ಸಾಮಾನು ಕಟ್ಟುವ ಕಾಗದದ ಪೊಟ್ಟಣ..ಶಾವಿಗೆ ಹಪ್ಪಳ..ಆಕೆ ಎಲ್ಲವನ್ನು ಮಾಡಿದಳು.............
ಕಷ್ಟ ,???ಹಾಗೆಂದರೇನು???ಊಹ್ಹ್ ಅದಾ???ನನ ಆತ್ಮೀಯ ಗೆಳತಿ...ಅನ್ನೋ ಮಟ್ಟಕ್ಕೆ ಘಟ್ಟಿ ಆಗಿತ್ತು ಮನಸು......................ಇಷ್ಟೆಲ್ಲಾ ಆದ ನಂತರ ನನಗನಿಸಿದ್ದು.....;-ಕಮಲಿನಿ ಮಂಜುಗುಣಿಯ ವರನೊಂದಿಗೆ ಮದುವೆ ಆಗಿದ್ದರೆ????ಆರಾಂ ಇರುತ್ತಿದ್ದಳೆನೋ.....ಯಾಕೆ ಆ ಸಂಭಂಧವನ್ನು ಮುಂದುವರಿಸಲಿಲ್ಲ..ಆಕೆಯ ಬದುಕು ಏನಾಗಿ ಹೋಯ್ತು ಛೇ...

ಪೋಸ್ಟ್ ಕಾರ್ಡ್ -೨
೧೩/೮/೧೯೫೬ 
ಆತ್ಮೀಯ ಭಾವ,
..................ಸೌ. ಇಂದಿರೆ ಗಂಡು ಮಗುವಿಗೆ ಜನ್ಮ ನೀಡಿದ್ದು ಮತ್ತು ಯಾವುದೊ ದೈಹಿಕ ತೊಂದರೆಯಿಂದ
 ಶಿಶು ತೀರಿಕೊಂಡಿದ್ದು ಕೇಳಿ ಅತೀವ ಕಷ್ಟ ಎನಿಸಿತು...ನಿಮಗಾದ ಬೇಸರಕ್ಕೆ ಹೇಗೆ ಸಮಾಧಾನ ಹೇಳಬೇಕು 
ಎಂಬುದು ತಿಳಿಯುತ್ತಿಲ್ಲ...
ನಿಮ್ಮ ಮನೆಯಲ್ಲಿ ಹಿಂಡುವ ಆಕಳೊಂದಿದೆ ಎಂಬುದನ್ನು ಮಾತು ಮಾತಲ್ಲಿ ಹೇಳಿದ ನೆನಪು..
.ಸಧ್ಯಕ್ಕೆ ಶಾರದೆಗೆ ಎದೆಹಾಲು ಸಾಕಾಗುತ್ತಿಲ್ಲ ಹೀಗೆ ಬಿಟ್ಟರೆ ಶಿಶು ದಿನದಿಂದ ದಿನಕ್ಕೆ ಕೃಷ ವಾಗುತ್ತ..ಜೀವಕ್ಕೆನಾದರು ಆದೀತು
ಎಂಬ ಹೆದರಿಕೆ ಕಾಡುತ್ತಿದೆ...ದಯಮಾಡಿ ಕೆಲದಿನಗಳ ಮಟ್ಟಿಗೆ..ಆಕಳನ್ನು ಇಲ್ಲಿ ಕಳಿಸಿದರೆ ಜೀವ ಉಳಿಸಿದ ಪುಣ್ಯ ನಿಮಗೇ ಬರುತ್ತದೆ...
ಅವಕಾಶವಾದಿ ಅಂದುಕೊಳ್ಳದೆ..ದಯಮಾಡಿ ನನ್ನ ಅಗತ್ಯತೆ ಮನಗೊಂಡು ತಾವು ನನಗೆ...ಉಪಕರಿಸುತೀರಿ ಎಂದು ನಂಬಿದ್ದೇನೆ..
ಇಂತಿ ತಮ್ಮ 
ದತ್ತಾತ್ರೇಯ...
........................................ಇಂದಿರೆಗೆ ಮನಸು ಒಪ್ಪುತ್ತಿಲ್ಲ ...ಜೀವನಾಧಾರಕ್ಕೆ ಅಂತ ಇರುವುದು..ಅದೊಂದೇ ಆಸ್ತಿ..ಹೊಲದಲ್ಲಿ ಈ ಬಾರಿ ಬೆಳೆಯೇ ಇಲ್ಲ...ಹೈನ ಮಾರಿ ಕೊಂಚ ಅನುಕೂಲ ಆಗಿತ್ತು........ಅದನ್ನು ಕೊಟ್ಟು ಬಿಟ್ಟರೆ?????..ವಾಪಸು ಕೊಡುತ್ತಾರೋ ಇಲ್ಲವೋ..ಸತ್ತ ಮಗುವಿನ ದುಃಖ ಒಂದೆಡೆ ಆದರೆ ಇದ್ದವರ ಬದುಕು ನಡೆಸಬೇಕಾದ ಅನಿವಾರ್ಯತೆ ಒಂದೆಡೆ...ಸಂಬಂಧದ ಮರ್ಯಾದೆ ಒಂದೆಡೆ...ಎಷ್ಟಾದರೂ ತಂಗಿಯದೆ ಮಗು.ವಿಕಲ್ಪಗಳಿಲ್ಲದ ಸಮಸ್ಯೆ ಇರುವುದೇ???ಮಾಡುವುದಾದರೂ ಏನು???
ಮರುದಿನ ನಸುಕಿಗೆ  ಪತಿ...ವೈದೆಹಿಯನ್ನು ಕರೆದು ಕೊಂಡು ತಂಗಿಮನೆಗೆ ಹೊರಟುಹೋದರು...ಹೋಗುವಾಗ ವೈದೇಹಿಗೆ ಕುಂಕುಮವಿಟ್ಟು ಎರಡು ಚಮಚ ಎಣ್ಣೆ ಕಿವಿಗೆ ಬಿಟ್ಟು..ಕಾಲ್ಮುಗಿದು..ಬೇಗ ಬಾ...ನಿನ್ನ ಅಗತ್ಯವಿದೆ ನನಗೆ...ನೀನು ನನ್ನ ಮನೇ ಲಕ್ಷ್ಮಿ...ಅಂದು ಕಣ್ಣೀರು  ಸುರಿಸಿದ್ದಳು...ಇಂದಿರೆ...
ಪತಿ..ಸುಸ್ತಾಗಿ ಬಂದು ಕಲ್ಲು ಮಂಚದ ಮೇಲೆ ಮಲಗಿದ್ದರು...ಆಸರೆಗೆ...ಮಜ್ಜಿಗೆ ಕೊಡುವಾಗ...ಮತ್ತೆಂದೋ ಹೀಗೆ ಮಜ್ಜಿಗೆ ಕೊಡುವುದು ಅನ್ನಿಸಿ ವೈದೇಹಿ ಮತ್ತೆ ಮತ್ತೆ ನೆನಪಾದಳು...ಜೊತೆಗೆ ಆಕೆಯ ಪುಟ್ಟ ಕಂದ ಸೋಮಿ..ಅಲ್ಲೊಂದು ಆಕಳು ವೈದೇಹಿಯ ಬಣ್ಣದ್ದೇ...ಅರೆ ವೈದೆಹಿಯೇ...ಕಣ್ಣಲ್ಲಿ ನೀರು'''''
............................. ಮತ್ತೆ ವೈದೇಹಿ..ಸಾಯುವ ವರೆಗೂ..ಇಂದಿರೆಯ ಮನೆಯಲ್ಲೇ ಇದ್ದಳು....ಅಲ್ಲಲ್ಲ ತನ್ನ ಮನೆಯಲ್ಲೇ ಇದ್ದಳು

(ನನಗನ್ನಿಸಿದ್ದು...;-ಮನುಷ್ಯರಿಗಿಂತ ಪ್ರಾಣಿಗಳಿಗೆ ಸಂವೇದನೆ ಜಾಸ್ತಿಯೇನೋ...ತನ್ನ ಅಗತ್ಯ ನಿಜವಾಗಿ ಯಾರಿಗಿದೆ ಎಂಬುದು...ವೈದೆಹಿಯೇ ನಿರ್ಧರಿಸಿದ್ದಳು
...ಸಂಭಂಧಗಳಿಗೆ ಇಗಿರುವ ಬೆಲೆ ಏನು???)

ಪೋಸ್ಟ್ ಕಾರ್ಡ್ -೩
೨೫/೮/೧೯೬೨ 
ತೀರ್ಥರೂಪ ತಂದೆಯವರಲ್ಲಿ...
ನಿಮ್ಮ ಮಗಳು ಬೇಡುವ ಆಶಿರ್ವಾದಗಳು...ನಾನು ಆರಾಂ ಇದ್ದೇನೆ..ನಿಮ್ಮ ಕುಶಲತೆಯ ಬಗ್ಗೆ ತಿಳಿಸುತ್ತಿರಿ..
ಇಲ್ಲಿ ಮಳೆ ಇನ್ನು ನಿಲ್ಲುವ ಸೂಚನೆ ತೋರಿಸಿಲ್ಲ..ಬಟ್ಟೆಗಳು ಒಣಗುತ್ತಿಲ್ಲ..ಮನೆಮಂದಿಯ ಅಷ್ಟು ಬಟ್ಟೆಗಳನ್ನು
 ತೊಳೆದು ಹಾಕುತ್ತೇನೆ ಆದ್ದರಿಂದ..ಒಣಗಿಸಲು ಜಾಗವಿಲ್ಲ...ನಾಳೆ ಬಿಸಿಲು ಬಂದರೆ ..ಮಗುವಿನ ಹೊದಿಕೆಗಳನ್ನು ತೊಳೆದು ಹಾಕಬೇಕು..
ಅತ್ತೆ..ಶ್ರೀಮತಕ್ಕ,ವಸಂತ ಎಲ್ಲರು ಗೋಕರ್ಣ ಮುರುಡೆಶ್ವರಕ್ಕೆ ಹೋಗಿ ಬಂದರು,ಕಾಯಿ ಕೀಳುವವರು ಬರುತ್ತಾರೆ ಎಂದು ನಾನೆ ಹೋಗಲಿಲ್ಲ..
ಮಸಾಲೆ ಕಲ್ಲು ತುಂಬಾ ಸಣ್ಣದಿದೆ..ದೊಡ್ಡ ಕಲ್ಲು ತಂದರೆ ಶೇರು ಅಕ್ಕಿಯ ದೋಸೆ ಹಿಟ್ಟು ರುಬ್ಬಬಹುದು..ಅದಕ್ಕೆ ದೊಡ್ಡ ಕಲ್ಲು ತರುತ್ತಾರಂತೆ
ಅತ್ತೆಯವರಿಗೆ ನಾನು ರುಬ್ಬಿದರೆ ಸಮಾಧಾನ..
ನಿನ್ನೆ ಬದನೇಕಾಯಿ ಬಜ್ಜಿ ಮಾಡಿ ಮಾವಿನ ಹಿಂಡಿಗೆ ಪುಡಿ ಕುಟ್ಟಿ ಇಟ್ಟಿದ್ದೆ..ಮತ್ತೆ ಎರಡು ರೀತಿಯ ಪಲ್ಯ ಮಾಡಬೇಕಿತ್ತು
..ಶೈಲು ಕೈ ಬಿಡಲಿಲ್ಲವಾದ್ದರಿಂದ ಅತ್ತೆಯವರೇ ಮಾಡಬೇಕಾಯಿತು..ರಾತ್ರಿಯಿಡಿ ಕೈ ನೋವು ಎಂದು ನರಳುತ್ತಿದ್ದರು..ಪಾಪ..!
ನಾನೆ ಬೀಸಿನೀರ ಶಾಖ ಕೊಟ್ಟು ಉಪ್ಪಿನ ಎಣ್ಣೆ ಹಚಿದೆ...ರಾತ್ರಿ ಇಡಿ ನಿದ್ದೆ ಮಾಡಲಿಲ್ಲ ಅವರು ಪಾಪ.!
ಹಂಡೆ ದೊಡ್ಡದಿದೆ ಒಮ್ಮೆ ನೀರು ಕಾಯಿಸಿದರೆ ಮನೆಮಂದಿಗೆಲ್ಲ ಆಗುತ್ತೆ ಅಂತ ಸಂಜೆಯೇ ನೀರು ಕೆಳ ತೋಟದ ಭಾವಿಯಿಂದ ನೀರು ಸೇದಿ..
ಕಾಯಿಸಿಪ್ಪೆ ಹಾಕಿ ಹುರಿ ಹಾಕಿ ಇಡುತ್ತೇನೆ ಆದ್ದರಿಂದ...ಎಲ್ಲರ ಸ್ನಾನ ಬೇಗ ವಾಗಿ..ಕೆಲಸಕ್ಕೆ ಅನುಕೂಲವಾಗುತ್ತದೆ..
ಇದನ್ನು ವಸಂತನ ಕೈಯ್ಯಲ್ಲಿ ಪೋಸ್ಟ್ ಮಾಡಲು ಕೊಡುತ್ತೇನೆ..ಪತ್ರವನ್ನು ತಾಯಿಯವರಿಗೂ ಓದಲು ಕೊಡಿ ಉತ್ತರ ಜರೂರ್ ಬರೆಯಿರಿ ..
ತಂಗಿ ತಮ್ಮಂದಿರಿಗೆ ಪ್ರೀತಿ...ನಿಮ್ಮ ಆರೋಗ್ಯದ ಕಡೆ ಗಮನವಿರಲಿ...ನನ್ನ ಬಗ್ಗೆ ಚಿಂತೆ ಮಾಡಬೇಡಿ..ನಾನು ಆರಾಂ ಇದ್ದೇನೆ..
ಇಂತಿ ನಿಮ್ಮ ಮಗಳು
ಉಮಾ 
(ನನಗನ್ನಿಸಿದ್ದು.;-ಈ ಪತ್ರವನ್ನು ಅದೆಷ್ಟು ಬಾರಿ ಓದಿದ್ದೇನೆ ನನಗೆ ಗೊತ್ತಿಲ್ಲ.....ಅದೆಷ್ಟು ಗೌಪ್ಯತೆಯಿಂದ ತನ್ನ ಪರಿಸ್ತಿತಿಯನ್ನು ತವರಿಗೆ ತಿಳಿಸಿದ್ದಾರೆ...ಪತ್ರದ ಕೊನೆಯಲ್ಲಿ ತಾಯಿಯವರಿಗೆ ಪತ್ರ ಓದಲು ಕೊಡಿ ಎಂಬುದನ್ನು ಒತ್ತಿ ಬರೆದಿದ್ದರ ಹಿಂದೆ ಅದೆಷ್ಟು ಅರ್ಥ ಅಡಗಿದೆ..??ತಂದೆ ಆದವಗೆ ..ತನ್ನ ಮಗಳು ಕೊಟ್ಟ ಮನೆಯಲ್ಲಿ ಎಲ್ಲರ ನ್ನು ಅರ್ಥ ಮಾಡಿಕೊಂಡು ಸಂಸಾರದ ಬಂಡಿಯನ್ನು ಸರಿದಾರಿಯಲ್ಲಿ ಒಯ್ಯುತ್ತಿದ್ದಾಳೆ ಎಂಬ ಹೆಮ್ಮೆ ಆದರೆ...ತಾಯಿಗೆ ತನ್ನ ಮದ್ದಿನ ಮಗಳು ತನ್ನ ವಯಸ್ಸಿಗಿಂತ ಮೀರಿದ ಜವಾಬ್ದಾರಿ ಹೊತ್ತು ಅದೆಷ್ಟು ಕಷ್ಟ ಪಡುತ್ತಿದ್ದಾಳೆ..ಎಂಬ ಸಂಕಟ...ಹೆಣ್ಣು ಜೀವ ಅದೆಷ್ಟು ಸಂವೇದನಾಶೀಲ, ಎಲ್ಲಿ ಏನು ಎಷ್ಟು ಇರಬೇಕೋ ಅಷ್ಟಷ್ಟೇ ಒದಗಿಸುವ....ಒಂದು ನಿಸ್ಪೃಹ ಜೀವ ...ಆದರೆ ಶ್ರೇಯಸ್ಸು ಮಾತ್ರ ಯಾವತ್ತು ಅವಳ ಪಾಲಿಗಿಲ್ಲ ....)

ಇನ್ನೂ ಇವೆ  ಪೋಸ್ಟ್ ಕಾರ್ಡ್ ಗಳು ಅದರಲ್ಲಿ ....ಸುಮಾರು ,,ಹಲವಾರು ಬದುಕುಗಳು ಅವನ್ನು ಹುಡುಕುತ್ತ ಅವರಲ್ಲಿ ನನ್ನ ಅನ್ವೇಷಿಸುವ ನಾನು......
  

Tuesday, May 24, 2011

ಬಯಸಿದ್ದೆಲ್ಲ ನಮಗೇ ಸಿಗಬೇಕೆಂಬ ಹಠವಾದರೂ ಏಕೆ??


ಉಷಾ ಕಟ್ಟೆಮನೆ ಅವರ ಬ್ಲಾಗು ಓದುತ್ತಿದ್ದೆ ...ಪ್ರೆಮಿಸಿದವನ ಕಣ್ಣು ಕಿತ್ತ ಘಟನೆಯೊಂದರ ಕುರಿತಾದ ಬರಹವದು....ಅದನ್ನು ಓದುತ್ತ ಓದುತ್ತ ಹಸಿರಾದ ನೆನಪೊಂದನ್ನು ಅಕ್ಷರದಲ್ಲಿ ಬಂಧಿಸಿಡುವ ಪ್ರಯತ್ನ ಮಾಡುತ್ತಿರುವೆ...
ನಾನು  ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದ ದಿನಗಳವು...ನನ್ನೂರಿಂದ  ವಿಶ್ವವಿದ್ಯಾಲಯ ಸುಮಾರು ೭೪ ಕಿ ಮಿ ದೂರ..ದಿನ ಬೆಳಿಗ್ಗೆ ೮ ಕ್ಕೆ ನಾನು ಮನೆಯಿಂದ ಹೊರಡುತ್ತಿದ್ದೆ ..ಆ ಸಮಯದಲ್ಲಿ ಲಭ್ಯವಿದ್ದ ಬಸ್ಸುಗಳಲ್ಲಿ ವಿದ್ಯಾರ್ಥಿಗಳೇ ತುಂಬಿರುತ್ತಿದ್ದರು...ನಾ ಮುಂದು ನೀ ಮುಂದು ಎಂದು ಸೀಟು ಹಿಡಿಯೋದು...ಕಿಟಕಿಯಿಂದಲೇ ಕರ್ಚೀಪು ಎಸೆಯೋದು..ಹೇಗೋ ಒಂದು ಸೀಟು ಗಿಟ್ಟಿಸಿ ಕುಳಿತುಕೊಂಡರೆ ಹುಬ್ಬಳ್ಳಿ ತನಕ ಯಾವುದೊ ರಗಳೆ ಇಲ್ಲ....

ನಂತರ ಪುಟ್ಟ ಕಾಡು..ಬಿದಿರುಮೆಳೆ..ಬಾಚಣಿಕಿ ಡ್ಯಾಮ್ ..ಗಳನ್ನು ದಾಟಿದ ನಂತರ ಸಿಗುವುದು ತಡಸ್ ಎಂಬ ಪುಟ್ಟ ಊರು ..ಅಲ್ಲೊಂದಿಷ್ಟು ವಿದ್ಯಾರ್ಥಿಗಳು ತುಂಬುತ್ತಿದ್ದರು ...ಬಸ್ಸು ತುಂಬಿದ ಗರ್ಭಿಣಿಯಂತೆ..ಅಲ್ಲೇ ಸಿಗುತ್ತಿದ್ದಳಾಕೆ...ಕೃಷ್ಣನ ತಾಯಿಯ ಹೆಸರವಳದು...ಸ್ನೇಹಿತೆ ಅಂತ ಹೇಳಲಾರೆ...ಸುಮ್ಮನೆ ನಗುತ್ತಿದ್ದಳು..ಅಥವಾ ದೂರದಿಂದಲೇ ಕೈ ಬೀಸುತ್ತಿದ್ದಳು..ಆಕೆಗೆ ಯಾವತ್ತು ಸೀಟ್ ಸಿಗುತ್ತಿರಲಿಲ್ಲ...ನಿಂತ ವಿದ್ಯಾರ್ಥಿಗಳ ಬ್ಯಾಗು,ಪುಸ್ತಕ ಕುಳಿತವರ ಮಡಿಲಲ್ಲಿ ಆರಾಂ ಮಾಡುತ್ತಿದ್ದವು...ಹಾಗೆ...ಪ್ರತಿ ದಿನ ಅಲ್ಲದಿದ್ದರೂ..ಹೆಚ್ಚಿನ ಸಂಧರ್ಭದಲ್ಲಿ ಆಕೆ ಮತ್ತು ನಾನು ಬಸ್ ನಲ್ಲಿ ಭೇಟಿ ಆಗುತ್ತಿದ್ದೆವು...

ಚಂದದ ಹುಡುಗಿ...ಆಕೆಗೂ ಕನಸುಗಳಿದ್ದವು..ಮಧ್ಯಮವರ್ಗದ ಎಲ್ಲಾ ಹುಡುಗಿಯರಿಗೆ ಇರೋ  ಹಂಗೆ ಆಕೆಗೂ ಬಾನು ಮುಟ್ಟೋ ಕನಸಿತ್ತು...ಗಂಡ ಮನೇ ಮಕ್ಕಳ ಬಗ್ಗೆ ಸುಂದರ ಕಲ್ಪನೆಗಳಿದ್ದವು.ಇದೆಲ್ಲ ಇದ್ದ ಮೇಲೆ....ಹದಿವಯಸ್ಸಿಗೆ ಈ ಜಾಯಮಾನದಲ್ಲಿ ಕಂಪಲ್ಸರಿ ಅನ್ನೋ ಒಂದು ಅಫ್ಫೆರೂ ಇತ್ತು...ಹಾಗಂತ ಅವಳೇನು ನನ್ ಬಳಿ ಹೇಳಿರಲಿಲ್ಲ...ಗೆಳತಿಯರ ತಮಾಷೆ...,ಆಕೆಯ ಸುಖಾಸುಮ್ಮನೆ ನಗು..ಕಣ್ಣಂಚಿನ ತಿರುಚು .ಮೌನದಲ್ಲಿ ಮಾತು...ಇವೆಲ್ಲ ಅದಕ್ಕೆ ಪೂರಕವಾಗಿದ್ದವು...ಅದೇನು ಅಪರಾಧ ಅಲ್ಲ ಬಿಡಿ....

ಆದಿನ ಬೆಳಿಗ್ಗೆ ಕಪ್ಪು ಬಣ್ಣದ ಉಡುಗೆಯಲ್ಲಿ ಚಂದ ಕಾಣುತ್ತಿದ್ದಳು ...ಅದೇ ಹೂ ನಗು...ಹಾಯ್ !ಅನ್ನೋ ರೀತಿಯ ಒಂದು ಕೈ ಬೀಸೋ ಮೂಲಕ ಮಾತಿಲ್ಲದೆ ಮಾತಾಡಿದ್ದಳು ಹುಡುಗಿ....ಹುಬ್ಬಳ್ಳಿ ಬಂತು ಸೀಟು ಹಿಡಿಯುವಾಗ ಇರೋ ಅವಸರದ ಮೂರು ಪಟ್ಟು ಅವಸರ ಇಳಿಯುವಾಗ...ಮತ್ತೆ ಬೇರೆ ಬಸ್ಸ ಹಿಡಿಬೇಕಲ್ಲ..''ಕ್ಲಾಸಸ್ ತಪ್ಪುತ್ತೆ..''ಇವತ್ತು ಮುಗೀತು ಮತ್ತೆ ಗೈರು ನಾ ಕ್ಲಾಸ್ ಗೆ..ಅಂತ..ಎಲ್ಲರು ಮಾತಾಡ್ತಾ ದೂಡಾಟ ಮಾಡಿಕೊಂಡು  ಇಳಿದು ಹೋಗಿದ್ದೆವು ಎಂದಿನಂತೆ...
ನನಗದು ಮಾಮೂಲು ದಿನ..ತರಗತಿ ಮುಗಿಸಿಕೊಂಡು..ಪಾವಟೆ ನಗರ ಬಸ್ ನಲ್ಲಿ ಪುನ್ಹ್ಹ್ ವಾಪಾಸ್ ಹುಬ್ಬಳ್ಳಿಗೆ....

ಸಿರ್ಸಿ-ಹುಬ್ಬಳ್ಳಿ-ಸಿರ್ಸಿ ಬಸ್ಸಿನ ಗಾಜುಗಳ ಮೂಲಕ...ಕೆಳಗೆ ನಿಂತು ತಮ್ಮ ಗಮ್ಯ ತಲುಪುವ ತರತುರಿಯಲ್ಲಿರುವವರನ್ನು.ಗುಟ್ಕ ತಿಂದು ಹಲ್ಲಿನ ಸಂದಿಯಿಂದ ಛೀಎಂದು ಕೆಟ್ಟದಾಗಿ ಉಗುಳಿ ಹೀರೋ ಪೋಸ್ ಕೊಡೋರನ್ನ..ಮಂಗಳೂರು ಬಸ್ಸುಗಳನ್ನು ಕಾಯುವ ಪಕ್ಕಾ ಬಯಲುಸೀಮಿ ಬಾಂಡ್ ಸೀರೆ ಉಟ್ಟ  ಕುರಿ ಮಂದೆಯ ಯಜಮಾನಿಯನ್ನ ಬಸ್ಸು ಹೊರಡೋತನಕ..ನೋಡೋದು...ಏನೇನೋ..ಕಲ್ಪನೆಗಳಿಗೆ ಕಾವುಕೊಡೋದು...ಆ ಸಮಯಕ್ಕೆ ಸಂಜೆ ವಾಣಿ ಪೇಪರ್ ಮಾರೋ ಕನ್ನಡಕದ ಅಜ್ಜನಿಗೆ ಪರಿಚಯದ ನಗೆ ನಕ್ಕು ಇತ್ತ ತಿರುಗಿದರೆ ಅಷ್ಟೊತ್ತಿಗೆ ಡ್ರೈವರ್ ಬಂದಿರುತ್ತಾನೆ...

ಆದಿನ ಮಾತ್ರ ಅಜ್ಜನ ಮುಖದಿಂದ ದೃಷ್ಟಿ ಪೇಪರ್  ನತ್ತ ಹೊರಳಿತು...ಕಿವಿ ಅಜ್ಜನ ಮಾತುಗಳಿಗೆ ಶ್ರುತಿ ಯಾಗಿತ್ತು...
''ಹುಬ್ಬಳ್ಳಿ ಅಯೋಧ್ಯ ಹೋಟೆಲ್ ನಲ್ಲಿ ಯುವತಿ ಕೊಲೆ..ಬಿಸಿ ಬಿಸಿ ಸುದ್ದಿ.''.ಅಂದು ಅಜ್ಜ ಕೂಗಿ ಪೇಪರ್ ಮಾರುತ್ತಿದ್ದ....ಹುಬ್ಬಳ್ಳಿ ಹಳೆ ಬಸ್ ನಿಲ್ದಾಣ ದ ಎದುರಿಗೆ ದೃಷ್ಟಿ ಹಾಯಿಸಿದರೆ ಕಾಣೋದೆ ಅಯೋಧ್ಯ ಹೋಟೆಲು...ಅಲ್ಲಿ ಕೊಲೆ....ಛೇ...
ಕೂತುಹಲಕ್ಕೆ ಬಿದ್ದು ಪೇಪರ್ ತಗೊಂಡೆ...ಕೊಲೆಯಾದವಳ  ಫೋಟೋ ನೋಡಿ  ಕೈಕಾಲು ಒಮ್ಮೆ ತಣ್ಣಗಾಗಿ ಹೋಯಿತು...ಆಕೆ ನನ್ನ ಹೂ ನಗೆಯ ಹುಡುಗಿ...ಬಸ್ಸು ಊರು ತಲುಪಿದರೂ ನನಗೆ ಸಾವರಿಸಿಕೊಳ್ಳಲಾಗಲಿಲ್ಲ ...ಕೊಲೆ ಮಾಡಿದವ ಅವಳ ಪ್ರೀತಿ ಗೆ ಪಾತ್ರನಾದ ಹುಡುಗನೇ...ಯಾಕೋ ಆದಿನ ಮನೆಗೆ ಬಂದು ಯಾರೊಂದಿಗೂ ಏನು ಹೆಚಿಗೆ ಮಾತಾಡಲು ಆಗಲಿಲ್ಲ....

ಹುಡುಗ ಬಲು ಪೋಸ್ಸೇಸಿವ್ ...ಪ್ರೀತಿ ವಿಷಯ ಮನೆಯಲ್ಲಿ ತಿಳಿದಿದೆ..ಹಿರಿಯರು ಕಲಿಕೆ ಮುಗಿದು ಒಂದು ಹಂತಕ್ಕೆ ಬಂದ ಮೇಲೆ ಮದುವೆ ಮಾಡಲು ಒಪ್ಪಿದ್ದಾರೆ...ಅಷ್ಟರಲ್ಲಿ ಹುಡುಗ ಓದು ಅಲ್ಲಿಗಲ್ಲಿಗೆ ಅನ್ನೋವಂತೆ ಅಲಕ್ಷಿಸಿದ್ದಾನೆ ಅನಿಸುತ್ತೆ..ಹುಡುಗಿ ಹೊಸ ಕಾಲೇಜ್ ಸೇರಿ ಹೊಸ ಜಗಕ್ಕೆ ಮೊಗ ಮಾಡಿದ್ದಾಳೆ ಹೊಸ ಸ್ನೇಹಿತರು..ಹೊಸ ಪ್ರಪಂಚ...ಅಲ್ಲಿ ಕೆಲವೊಮ್ಮೆ ಇವನಿಗೆ ಸಮಯ ಕೊಡೋದು ಅಸಾಧ್ಯ..ಎನಿಸಿರಬೇಕು...ಆ ಪರಮ ಪೋಸ್ಸೇಸಿವ್ ಹುಡುಗ...ತನ್ನ ವಸ್ತು ಬೇರೆಯವರ ಒಡನಾಟದಲ್ಲಿ ಖುಷಿಯಾಗಿದ್ದನ್ನು ಸಹಿಸದೆ...ಆಕೆಯನ್ನು ಪೀಡಿಸಿ...ಪೀಡಿಸಿ..ಕೊನೆಗೆ ಈ ನಿರ್ಧಾರ ಮಾಡಿದ್ದಾನೆ....

ಕಾರಣ ಏನೇ ಇರಲಿ....ಪ್ರೀತಿಸಿದ ಪ್ರತಿ ವಸ್ತು ,ಜೀವ ನಮ್ಮ ಅಧೀನವಾಗಿರಬೇಕು ಅನ್ನೋ ಹಠವಾದರೂ ಏಕೆ???ಪ್ರೀತಿಸಿ ಪ್ರೀತಿ ನೀಡಿದ ಜೀವವನ್ನು ಅಷ್ಟು ನಿರ್ದಯತೆಯಿಂದ ಚಾಕು ಇರಿದು ಕೊಲ್ಲುವಾಗ ಅವನೆಂಥ ಅಮಾನುಷ ಸ್ತಿತಿಗೆ ತಲುಪಿರಬಹುದು???ಇಷ್ಟಕ್ಕೂ ಆ ವಯಸ್ಸಿನಲ್ಲಿ ಪ್ರೀತಿ ಎಂಬುದನ್ನು ಅವರಿಬ್ಬರು ಯಾವ ರೀತಿ ಅರ್ಥೈಸಿರಬಹುದು???ಪಾರ್ಕು,ಹೋಟೆಲ್ ,ಸುತ್ತಾಟ??? ಸಿನೆಮ ಟಾಕಿಸ್ ಕತ್ತಲಲ್ಲಿ ಬೆಚ್ಚಗೆ ಕೈ ಕೈ ಹಿಡಿದು ಕೂಡುವುದ????ಅಥವಾ..ಪ್ರೀತಿಸಿದವರು ಜೀತಕ್ಕೆ ಬಿದ್ದಂತೆ ಕೇವಲ ನಮ್ಮನ್ನಷ್ಟೇ ಗಮನಿಸಬೇಕು ಅನ್ನೋ ಹುಂಬತನವ???ಅಥವಾ ಸಮಾಜಕ್ಕೆ..ಅದರ ಕೆಡುತ್ತಿರುವ ಸ್ವಾಸ್ಥದ ಅರಿವು ಮೂಡಿಸಲು ಪ್ರಕೃತಿಯೇ ರೂಪಿಸಿದ ಸಂಚ???ಹೀಗೆ ಏನೇನೋ ಪ್ರಶ್ನೆಗಳು.....ನನ್ನ ಮನದಲ್ಲಿ ತೆರೆಗಳಂತೆ ಬಂದು ಬಂದು ಕಾಡಿದವು...

ಯಾವ ಧೈರ್ಯದಿಂದ ತಂದೆ ತಾಯಿ ಜೀವ ಬಸಿದು ಎದೆಯೆತ್ತರ ಬೆಳೆಸಿದ ಮಗುವನ್ನು ಕಲಿಕೆಗೋ,ಕೆಲಸಕ್ಕೋ ದೂರ ಕಳಿಸಿಯಾರು????ಬೆಳಿಗ್ಗೆ ತಿಂಡಿ ತಿಂದು ಹೋದ ಮಗಳು ರಾತ್ರಿ ಉಟಕ್ಕೆ ಬರುತ್ತಾಳೋ ಇಲ್ಲವೋ ಅನ್ನುವ ಆತಂಕ ಅಮ್ಮನ ಮನದ ತುಂಬಾ ....ಅಪ್ಪನ ದುಗುಡ ಮಾತ್ರ ಯಾರೊಂದಿಗೂ ಹೇಳುವಂಥದ್ದಲ್ಲ...ಆತ ಎಷ್ಟೆಂದರೂ ತಂದೆ....ತನ್ನ ಮಗು ಬೆಳೆದು ಏನಾದರು ಸಾಧನೆ ಮಾಡುತ್ತೆ...ಮನೆತನಕ್ಕೆ ಕೀರ್ತಿ ತರುತ್ತೆ ಅನ್ನೋ ಕನಸು ಕನಸೋ ತಂದೆ ತಾಯಿಗೆ ಬೆಳೆದ ಮಕ್ಕಳು ಕೊಡೊ ಬಹುಮಾನವಾದರು ಎಂಥದ್ದು...???

ಮರುದಿನ...ಆಕೆ ಮನೇ ಮುಂದೆ ಜನರ ಸಂತೆ...ಅಳು ಕೂಗು..ಕೇಳುತಿತ್ತು..ಸಂದಣಿ ಜಾಸ್ತಿ ಆಗಿ ಬಸ್ಸು ಕೂಡ ಹೋಗದಾಗಿತ್ತು...ಸುಮ್ಮನೆ ಕಣ್ಣನು ಮುಚ್ಹಿ ಕೊನೆ ಬಾರಿ ಆಕೆಯನ್ನು ನೋಡಿದಾಗ ಅಚ್ಚಾದ ಚಿತ್ರ..ಸ್ಮರಿಸಿದೆ...ಮಾತಾಡದೆ..ಯು ಸಾವಿರಾ ಮಾತುಗಳನ್ನು ಮನದಲ್ಲಿ ಬೆಳೆಸಿ ಹೊರಟು ಹೋಗಿದ್ದಳು ಹುಡುಗಿ...ಜನ ಎಲ್ಲವನ್ನು ಬೇಗ ಮರೆತು ಬಿಡುತ್ತಾರೆ...ಒಂದು ವಾರ ಹದಿನೈದು ದಿನ ..ಬರೀ ಅವೇ ಮಾತು..ನಂತರ ಮತ್ತೆ...ಬಸ್ಸಿನಲ್ಲಿ ಮೆತ್ತಗೆ ಹಾಡುಗಳು...ಹರಟೆಗಳು ಆರಂಬ ವಾದವು...ಎಂದಿನಂತೆ..ಜನ ಅದನ್ನು ಮರೆತರು ನಾನು ಕೂಡ...ಆದರೆ ಆಕೆ ಮನದಲ್ಲಿ ಹಸಿರಾಗೇ ಇದ್ದಾಳೆ..

ಆ ಹುಡುಗ ಎದುರಿಗೆ ಸಿಕ್ಕರೆ ನಾ ಕೇಳಲೇ ಬೇಕಾದ ಪ್ರಶ್ನೆಯೊಂದಿದೆ''ಪ್ರೀತಿಸಿದ ಪ್ರತಿ ವಸ್ತು ನಮ್ಮದಾಗಲೇಬೇಕೆಂಬ ಹಠವಾದರು ಏಕೆ???ಆಕೆ ಸತ್ತಳು ನೀ ಬದುಕಿದ್ದೀಯ???''ಪ್ರಶ್ನೆಗಳಿಗೆ ಪ್ರಜ್ಞೆ ಇದ್ದವರು ಉತ್ತರಿಸಿಯಾರು..ಸ್ವಯಂ ಪ್ರಜ್ಞೆ  ಇಲ್ಲದವನಿಗೆ ಶಾಸ್ತ್ರ-ನಿಯಮ ಗಳು ಕೂಡ ಬದಲಿಸಲಾರವು ..ಅಲ್ಲವೇ...??? 

Saturday, April 30, 2011

ಎಲ್ಲಿ ಹೋದವು ಆ ವೈಶಾಖದ ದಿನಗಳು …..

ಶಿವರಾತ್ರಿ ಮುಗಿಯೇತೆಂದರೆ ಸಾಕು…ಪರೀಕ್ಷೆ ತಯಾರಿಗಳು ಆರಂಭ ವಾಗುತ್ತಿದ್ದವು ಮತ್ತೇನು ಬಂದೆ ಬಿಡ್ತು ಯುಗಾದಿ …ಕೆಲವೊಮ್ಮೆ ಎಪ್ರಿಲ್  ೧೦ ರ ನಂತರ ಕೆಲವೊಮ್ಮೆ ಅದಕ್ಕಿಂತ ಮುಂಚೆ…ಸರಿ ಈಗ ಅಜ್ಜಿ ಮನೆ ಪ್ರವಾಸಕಕ್ಕೆ ತಯಾರಿ ಶುರು…
ಅಜ್ಜಿ ಮನೆಯಲ್ಲಿ ಇಗ ಮರದ ತುಂಬಾ ಮಾವು ಹಲಸು,ಅಜ್ಜನ ಕಿಟಿಪಿಟಿ ಒಂದನ್ನು ಬಿಟ್ಟರೆ ….ಅಜ್ಜಿ ಮನೆ ಎಂಬುದು ಅಧ್ಭುತ ಮಾಯಾಲೋಕ…ನನ್ನ ಎಲ್ಲಾ ಅಕ್ಕ ಅಣ್ಣಂದಿರು…ಅಲ್ಲಿ ಬಂದಿರುತ್ತಿದ್ದರು…ಎಲ್ಲಾ ಸೇರಿ ಆ ಎರಡು ತಿಂಗಳು ..ಖುಷಿಯನ್ನು ಲೂಟಿ ಮಾಡುತ್ತಿದ್ದೆವು…ಅದೂ ಮೇ …..ತಿಂಗಳು ಮದುವೆ, ಮುಂಜಿ, ಚೌಲ ….ಒಂದೇ ಎರಡೇ…ಅಜ್ಜಿ ಜೊತೆಗೆ ಹೋಗಲು ನಾ ಮುಂದು ನೀ ಮುಂದು ಎಂದು ಲಡಾಯಿ..ಮಾಡುತ್ತಿದ್ದ ಆ ದಿನಗಳು…
ಅಜ್ಜನಿಗೆ ಮಕ್ಕಳೆಂದರೆ ಅಷ್ಟಕ್ಕಷ್ಟೇ…ಆತ ಯಾವತ್ತೂ ಮೊಮ್ಮೊಕ್ಕಳಿಗೆ ಸಲಿಗೆ ಕೊಟ್ಟಿರಲಿಲ್ಲ…ನಮಗೂ ಅವ ದೊಡ್ಡ ಪ್ರತಿಸ್ಪರ್ಧಿಯಂತೆ… ಭಾಸವಾಗುತ್ತಿದ್ದ …ಬೇಕಂತಲೇ ಅವನಿಗೆ ತೊಂದರೆ ಕೊಡುತ್ತಿದ್ದೆವು…ಆ ದಿನ ಬಾಯಿರಿಗಳ ಮನೆತನಕ ಶಾರ್ಟ್ ಕಟ್ನಲ್ಲಿ ಹೋಗಲು ಹೋಗಿ ಮರದ ಬೇರಿಗೆ ಎಡವಿ ಮೂತಿ ಚಚ್ಚಿ ಕೊಂಡು ಆಸ್ಪತ್ರೆ ಸೇರಿದ ಅಜ್ಜ…ಇನ್ನೆರಡು ದಿನ ಬಿಟ್ಟು ಬರಲಿ ಎಂದು ಆಶಿಸುತ್ತಿದ್ದ ಆ ದಿನಗಳು….
ಘಂಟೆ ಒಂದಾಯಿತು ….ಈಗ ಬಸವ ಅವನ ಉಷಾ ಐಸ್ ಕ್ರೀಮ್ ಡಬ್ಬಿ ತಳ್ಳಿಕೊಂಡು ಅಷ್ಟು ದೂರದ ಕುಂದಾಪುರದಿಂದ ಬರುವ ಸಮಯ,,,,ಬೆಲ್ಲದ ಕ್ಯಾಂಡಿಯ ಮೇಲಿನ ಶಾವಿಗೆಯನ್ನು ನೆನೆದು ಕುಳಿತಲ್ಲೇ ಕುಪ್ಪಳಿಸಿದ…ಆ ದಿನಗಳು…
ಅಜ್ಜಿ ಮನೆಯ ದನಗಳಿಗೂ ನಮಗೂ ಅವಿನಾಭಾವ ಸಂಬಂಧ…ವಾನರ ಸೇನೆಯೊಂದಿಗೆ ಮೇಯಲು ಹೊರಡುವ ಅವಕ್ಕೂ ಎಷ್ಟು ಉತ್ಸಾಹ…ನಮಗೆ ಅವಕ್ಕಿಂತ ಹೆಚ್ಚು ಖುಷಿ ಕಾರಣ ಅಲ್ಲಿ ಹೊಳೆಯಲ್ಲೂ ಮುಳುಗಿ ಮೀಯುವ ತುಡಿತ….ಹಾಗೆ ನೀರಾಟದಲ್ಲಿ ನಿರತರಾದಾಗ ದನಗಳು ಎಲ್ಲಿ ಹೋದವೆಂದು ತಿಳಿಯದೆ ಹುಡುಕುತ್ತಿದ್ದ …. ಆ ದಿನಗಳು….
ಕುಟುಂಬದ ಹಿರಿಯ ದಂಪತಿಗಳಾದ ಅಜ್ಜ ಅಜ್ಜಿಯರನ್ನು ಭೇಟಿಯಾಗಲು ಬರುತ್ತಿದ್ದ ದೂರದೂರಿನ ನೆಂಟರು..ಅವರು ಹೋಗುವಾಗ ಕೊಡುತ್ತಿದ್ದ ಆ ಕನಕಾಂಬರ ಬಣ್ಣದ ನೋಟು….ಅದನ್ನು ಉಳಿದವರಿಗೆ ತೋರಿಸಿ ಹೊಟ್ಟೆ ಉರಿಸುತ್ತಿದ್ದ ಆ ದಿನಗಳು….
ದೈವದ ಪೂಜೆಗೆ ಹೋದಾಗ ಭಟ್ಟರು ಕೊಡುತ್ತಿದ್ದ ಸಿಂಗಾರ ಹೂ ವನ್ನು ಲೆಕ್ಕಮಾಡಿ ಒಳ್ಳೆಯದೋ ಕೆಟ್ಟದ್ದೋ ….ಎಂದು ಭವ್ಯ ಭವಿಷ್ಯ ವನ್ನು ತಮ್ಮ,ತಂಗಿಯನ್ದಿರಿಗೆ ಹೇಳುವ ಆ ದಿನಗಳು….ನಾಗದೇವರ ದರ್ಶನ ಬಂದಾಗ …ಭವಿಷ್ಯ ನುಡಿಯುತ್ತಿದ್ದರು….ತಪ್ಪಾದರೆ ಹೇಳುತ್ತೀದ್ದರು…ಆಗೆಲ್ಲ ಏನೋ ಹೆದರಿಕೆ…ಎಲ್ಲ್ಲಿ ಪಾತ್ರಿ..ಮುಟ್ಟಾದವರನ್ನು  ಮುಟ್ಟಿ ಸ್ನಾನ ಮಾಡದ ಹುಡುಗಿ ಇಲ್ಲಿದ್ದಾಳೆ ಎಂದು ಹೇಳಿ ಬಿಟ್ಟರೆ ಎಂದು ಅಂಜುತ್ತ …ದೇವರೇ ಕಾಯ್ಯಪ್ಪ ಎಂದು ಅದೇ ನಾಗದೇವರಿಗೆ ಬೇಡಿ ಕೊಳ್ಳುವ ಆ ದಿನಗಳು….
ಹಳೆ ಬೆಟ್ಟಿಗೆ ಹೋಗಿ ರಂಗೋಲಿ ಪುಡಿಯಂಥ ನುಣುಪಿನ ಮರಳನ್ನು ತುಂಬಿಕೊಂಡು ಬಂದು ಹಾಗೆ ಬರುವಾಗ ಹಾಡಿಗೆ ಹೊಕ್ಕು ಕಾಡು ದಾಲ್ಚೀನಿ ಎಲೆಗಳನ್ನು ಸೇರಿಸಿ ತಂದಾಗ…ಚಿಕ್ಕಿ ಹೇಳಿದ ಹಾಡಿ ದೆವ್ವದ ಕತೆ ಕೇಳಿ ಜ್ವರ ಬಂದು ಮಲಗಿದ ಆ ದಿನಗಳು…
ಆನೆಗುಡ್ಡೆ ಮೂದ್ಗಣಪತಿ ಗೆ ಒಡೆಸಿದ ಕಾಯನ್ನು ಒಣಗಿಸಿ ಎಣ್ಣೆ ಮಾಡಿ ತಂದಾಗ ….ಆ ಕೊಬ್ಬರಿ ಹಿಂಡಿಯನ್ನು ಕದ್ದು ಕದ್ದು ಮೆದ್ದು,,ಗಂಟಲು ನೋವು ಬರಿಸಿಕೊಂಡ ಆ ದಿನಗಳು….ಮರದಿಂದ ಬಿದ್ದು ಗದ್ದ ಒಡೆದುಕೊಂಡ ಅಣ್ಣನಿಗೆ  ಏನಾಯಿತೋ ???ಅಂತ ಕೇಳದೆ ಹೆದರಿ ಓಡಿ ಬಂದ ಆ ದಿನಗಳು..
ಬೆಣಸು,ಮಡಕೆ ಹಣ್ಣು,ಪಿರಗಿ,ಚಿಪ್ಪಲ್ಗೆಂಡೆ ಅಂಥ ಅಪರೂಪದ ಕಾಡು ಹಣ್ಣುಗಳನ್ನು ಆಯಲು ಹೋಗಿ …ದಾರಿ ತಪ್ಪಿ ಕಾಡಲೆದ ದಿನಗಳು….ಚಿಕ್ಕಮ್ಮನ ಕತೆಗಳಿಗೆ ತಣ್ಣನೆ ತೆರೆದು ಕೊಳ್ಳುತ್ತಿದ್ದ ರಾತ್ರಿಗಳು…ಮತ್ತೆ ಗಂಜಿ ಊಟದೊಂದಿಗೆ  ಮಾವಿನ ಹಿಂಡಿ,ತಂಗಳು ಕುಚ್ಚಲಕ್ಕಿ ಅನ್ನದೊಂದಿಗೆ ಅಪ್ಪೆ ಮಿಡಿ ಉಪ್ಪಿನಕಾಯಿಯ ಆ ಅವರ್ಣನೀಯ ರುಚಿಯನ್ನು ಮೊದಲಿಗೆ ಉಂಡ ಆ ದಿನಗಳು……
ಶಾಲೆ ಶುರುವಾಗುವ ಎರಡು ದಿನ ಮೊದಲು………………………………….
ಅಮ್ಮ ಬಂದು ಕರೆದು ಕೊಂಡು ಹೋಗುವಲ್ಲಿಗೆ ಮುಗಿಯುವ ನನ್ನ ಬಾಲ್ಯದ ವೈಶಾಕದ ದಿನಗಳು…..
ಎಲ್ಲಿ ಹೋದವು ಈ ವೈಶಾಖದ ದಿನಗಳು…
ಈಗ ..ಏನಿಲ್ಲ ನಾವು ಅನುಭವಿಸಿದ ಖುಷಿಯನ್ನು ನೆನೆಪಿನ ಬುಟ್ಟಿಯಿಂದ ತೆಗೆದು ನೋಡಿ ನೋಡಿ ಮುತ್ತಿ ತಟ್ಟಿ ಮತ್ತೆ ಹಾಗೆ ಇತ್ತಿಡಬೇಕು..ಈಗಿನ ವೈಶಾಕಗಳು,,,,ವೆಕೇಶನ್ ಕ್ಲಾಸ್ ಗಳಲ್ಲೋ…ಮುಂಬರುವ ತರಗತಿಯ ಪಾಠಗಳನ್ನು ಕಲಿಯುವುದರಲ್ಲೋ …ಕಳೆದು ಹೋಗುತ್ತಿವೆ…ಅಜ್ಜಿ ,ಮತ್ತು ಅಜ್ಜಿ ಮನೆ ಎಂಬ ಎರಡು ಮಧುರ ಪದಗಳು ನಮ್ಮ ಮಕ್ಕಳ ವರ್ತಮಾನದಿಂದ ನಾವೇ ಅತಿ ನಿಷ್ಕರುಣೆಯಿಂದ ಎತ್ತಿಟ್ಟಿಬಿಟ್ಟಿದ್ದೇವೆ…
ದೂರದೂರಿನ ಪ್ರವಾಸ ಅಲ್ಲದಿದ್ದರೂ ಸರಿ ನಮ್ಮ ಮಕ್ಕಳಿಗೆ ನಾವು ಅನುಭವಿಸಿದ ಈ ಸುಮಧುರ ಸುಂದರ ವೈಶಾಖದ ದಿನಗಳನ್ನು ಅನುಭವಿಸಲು ಬಿಡೋಣ…ಅವರ ಬಾಲ್ಯದೊಂದಿಗೆ  ನಾವು ಮತ್ತೆ ಮಕ್ಕಳಾಗೋಣ ….

Sunday, April 17, 2011

ಬಂಗಾರ ಯಾಕ ಬೇಕ??ನಾವ್ ಚಂದ್ ಕಾಣಾಕ

ಲಮಾಣಿ ಜಿಲ್ ಝಿಲ್ ಝಿಲ್ 
ನಾನು ಬರ್ತೆನ್ ನಿಲ್ ನಿಲ್ 
ಕಟ್ಟ್ಗಿ ಹೊರಿ ಚಲ್ ಚಲ್ 
ಹೀಗೆಂದು ಬಾಲವಾಡಿ ಅಕ್ಕವರು ರಾಗವಾಗಿ ಹೇಳಿಕೊಡುತ್ತಿದ್ದರೆ ನಮ್ಮ ಪುಟ್ಟ ಕಂಗಳಿಗೆ ಕಾಣುತ್ತಿದ್ದುದು ತಲೆಯ ಮೇಲೆ ಭಾರವಾದ  ಕಟ್ಟಿಗೆ ಹೊರೆಯನ್ನಿತ್ತು ಕೊಂಡು ಆ ಭಾರವನ್ನು ಬ್ಯಾಲೆನ್ಸ್ ಮಾಡಲು ಸೊಂಟವನ್ನು ಅತ್ತ ಇತ್ತ ತಿರುಗಿಸುತ್ತಾ ವೇಗವಾಗಿ ನಡೆಯುತ್ತಾ ಬರುತ್ತಿದ್ದ ತೆಳು ಕಾಯದ  ಲಂಬಾಣಿ ಮಹಿಳೆಯರು .ಅಪರಿಮಿತ ದೈಹಿಕ ಶ್ರಮ ಅವರಿಗೆ ಈ ಸುಂದರ ಮತ್ತು ಮಟ್ಟಸವಾದ ದೇಹವನ್ನು ವರವಾಗಿ ಕೊಟ್ಟಿರಬೇಕು .
ಲಂಬಾಣಿ ಮಹಿಳೆಯರು ಕಲಾತ್ಮಕತೆಯ ಪ್ರತ್ಯಕ್ಷ ರೂಪ.ಕರಕುಶಲ ದೇವಿಯರು ಮೈದಾಳಿ  ನಿಂತಂತೆ ಭಾಸವಾಗುತ್ತಾರೆ ಇತ್ತೀಚಿಗೆ ಕರಕುಶಲ ಕಲೆಗಳು ಮತ್ತು ಕಸೂತಿ ಗಳ ಬಗ್ಗೆ ಪಟ್ಟಣದ ಜನರಲ್ಲಿ ಆಸಕ್ತಿ ಹೆಚ್ಚಾಗಿದ್ದು ಎಷ್ಟು ಬೆಲೆಯಾದರೂ ಅದನ್ನು ಕೊಂಡು ತಂದು ತೊಟ್ಟು ಖುಷಿ ಪಡುತ್ತಾರೆ ಕೆಲವೊಮ್ಮೆ ಡಿಸೈನರ್ ಮೊರೆ ಹೋಗುವುದು ಉಂಟು. ಆದರೆ ಲಂಬಾಣಿ ಮಹಿಳೆಯರು  ತಮ್ಮ ಉಡುಪನ್ನು ತಾವೇ ಡಿಸೈನ್ ಮಾಡಿಕೊಳ್ಳುತ್ತಾರೆ ,ಹಳೆಯ ಬಟ್ಟೆಗಳನ್ನು ರಂಗು ರಂಗಿನ ದಾರದಲ್ಲಿ ಬಂದಿಸಿ .ಕನ್ನಡಿ ಯನ್ನು ಪೋಣಿಸಿ ಮಣಿಗಳನ್ನು ಜೋಡಿಸಿ ಅದ್ಭುತ ರೂಪವನ್ನು ಕೊಡುತ್ತಾರೆ ..ಇವರ ಈ ಉಡುಪಿನ ವಿಭಿನ್ನತೆ ಅವರ ಬುಡಕಟ್ಟಿಗೆ ವಿಶಿಷ್ಟ ಮೆರಗನ್ನು ತಂದಿತ್ತಿದೆ...
ಈಗಿನ ಚನಿಯ ಚೋಲಿ ,ಘಾಗರ ಇವೆಲ್ಲ ಇವರ ಉಡುಪಿನ ಪರಿಷ್ಕೃತ ರೂಪಗಳು.ನಾವು ಹಬ್ಬ ಹರಿದಿನ ಗಳಲ್ಲಿ ಮದುವೆ ಸಮಾರಂಭಗಳಲ್ಲಿ ಮನ ಬಂಗಾರ ಹೇರಿಕೊಂಡು ಸಿಂಗಾರ ಗೊಂದರೆ ಇವರು ಮಾತ್ರ ಸದಾಭರಣ ಸುಂದರಿಯರು.ವಿಶೇಷ ಸಂದರ್ಭ ಗಳಲ್ಲಿ ಇವರ ಆ ಸೌಂದರ್ಯ ಪ್ರಜ್ಞೆ ಇನ್ನು ಹೆಚ್ಹು ಪ್ರಕಟ ಗೊಳ್ಳುತ್ತದೆ.
ಬಾಲ್ಯದಿಂದಲೂ ಇವರೊಂದಿಗಿದ್ದ ನಿಕಟತೆ ಆತ್ಮೀಯತೆ ಅವರ ಜೀವನ ಶೈಲಿಯ ಬಗ್ಗೆ ಸಹಜ ವಾಗಿಯೇ ಕುತೂಹಲ ಹುಟ್ಟಿಸಿದ್ದವು ಪ್ರಸ್ತುತ ಅವರ ಆಭರಣ ಗಳಬಗ್ಗೆ ಅವರ ಮಾತುಗಳಲ್ಲೇ ವಿವರಿಸುವ ಪ್ರಯತ್ನ ನನ್ನದು..

ಲಂಬಾಣಿ ಮಹಿಳೆರ ಆಭರಣಗಳು ತಾಮ್ರ ಬೆಳ್ಳಿ ,ಹಿತ್ತಾಳೆ ,ಅಲುಮಿನಿಯಂ ಗಳಿಂದ ಮಾಡಲ್ಪಟ್ಟಿವೆ .ಕಾಡಿನಲ್ಲಿ ಅಲೆಯುತ್ತ ಯಾವುದೊ ಸಂದರ್ಭದಲ್ಲಿ ನಾಡಲ್ಲಿ ನೆಲೆಸಿದ್ದರೂ ಕಾಡಿನ ನೆನಪಲ್ಲೇ ಇರುವಂತೆ ಇವರ ಆಭರಣಗಳಲ್ಲಿ  ಪ್ರಾಣಿ ಜನ್ಯ ಸಸ್ಯ ಜನ್ಯ ವಸ್ತುಗಳು ಕಾಣಲು ಸಿಗುತ್ತವೆ .(ಉದಾ ;ದಂತ ,ಉಣ್ಣೆ,ಕವಡೆ )ಚಿನ್ನದ ಬಳಕೆ  ಇವರಲ್ಲಿ  ತೀರ  ಕಡಿಮೆ  ,ಆಧುನಿಕತೆಗೆ ತೆರೆದುಕೊಂಡ ಕೆಲವು ಪರಿವಾರಗಳು ಸಮಾಜದ ಇತರ ಸಮುದಾಯದೊಂದಿಗೆ  ಸಮಾನತೆಯ ಗುಂಗಿಗೆ ಬಿದ್ದು ಚಿನ್ನದ ಆಭರಣ ಮಾಡಿಸುವುದುಂಟು .ಆದರೆ  ಅವರ  ಪಾರಂಪರಿಕ  ಆಭರಣದ  ಎದುರಿಗೆ  ಇದರ ಚಂದ ನಿಲ್ಲುವುದಿಲ್ಲ..
ಭೂರಿಯ 



ನಸುನಗೆಯ ಮುಖದ ಲಂಬಾಣಿ ಸ್ತ್ರೀ ಯಾ ನಸಭಾರಣ ಈ ಭೂರಿಯ ಸೂಕ್ಷ್ಮ ಕುಸುರಿಯ ಗೋಲಾಕಾರದ ಮೂಗುತಿಯನ್ನು ತೊಡುತ್ತಾರೆ ಇದು ಸುಮಂಗಲಿಯ ಸಂಕೇತ ಮದುವೆಯಲ್ಲಿ ಕನ್ಯೆ ತನ್ನ ತಾಯಿಯಿಂದ ಬಳುವಳಿಯ ರೂಪದಲ್ಲಿ ಪಡೆಯುವ ಆಭರನ ಇದು.ಇದರೊಂದಿಗೆ ಚೋಟ್ಲ ,ಚುಡೋ,ಘುಗರಿ ,ಅಂಕಡಾ ಇವುಗಳು ಸುಮಂಗಲಿಯ ಆಭರಣಗಳು ಇವು ತಾಳಿಗೆ ಸಮವಾದವುಗಳು..ಆಟಿ,ಮಾಟ್ಲಿ ಎಂಬ ಆಭರಣಗಳು ಇವರ ಸಂಗ್ರಹದಲ್ಲಿವೆ .
ಕಾಂಚಲಿ
ಇದು ಉಡುಗೆ ಆಗಿದ್ದರು ಆಭರಣ ಪಟ್ಟಿಗೆ ಸೇರಿಸುವುದು ಸೂಕ್ತ ಎಂಬುದು ನನ್ನ ಅನಿಸಿಕೆ..ಕಾರಣ ಕಾನ್ಚಲಿ ಎಂಬ ಈ ಕುಪ್ಪಸ ರೂಪದ ಉಡುಗೆ ಗೆ ಅಪೂರ್ವ ಕಸೂತಿಗಳಿವೆ ಗಾಜಿನ ಚೂರುಗಳ ಸಿಂಗಾರ,ಕವಡೆಯ ಅಲಂಕಾರವಿದೆ ಬೆನ್ನಿನ ಭಾಗ ತೆರೆದಿರುತ್ತದೆ ಭುಜದ ಮೇಲೆ ಮತ್ತು ಸೊಂಟದ ಹತ್ತಿರ ಎರಡು  ಲಾಡಿಗಳನ್ನು  ಜೋಡಿಸಿ  ಮೈಕಟ್ಟಿಗೆ  ತಕ್ಕಂತೆ ಅದನ್ನು ಹೊಂದಿಸಿಕೊಳ್ಳುತ್ತಾರೆ .ಇದಕ್ಕೆ ಚಾಟಿಯ ಎಂಬ ಗಾಜಿನ ಪಟ್ಟಿ ಇರುತ್ತದೆ ತಮಗೆ ಬೇಕಾದ ಬಣ್ಣದ ದಾರಗಳಿಂದ ಅವರಿಗೆ ಬೇಕಾದ ವಿನ್ಯಾಸದಲ್ಲಿ ಸ್ವತ್ ತಾವೇ ಅದನ್ನು ಹೊಲಿದು ಕೊಳ್ಳುತ್ತಾರೆ
ಘಾಗರಾ 
ಇದು ಲಂಗ .ಮೊದಲು ಎರಡು ಅಂಗೈಗಲದ ಕಸೂತಿ ಪಟ್ಟಿಗೆ ನೆರಿಗೆಗೆಳನ್ನು ಜೋಡಿಸಿ ವಿಸ್ತಾರವಾದ ಲಂಗ ಹೊಲಿದುಕೊಲ್ಲುತ್ತಾರೆ ನೆರಿಗೆಯ ಅಂಚಿಗೂ ಕಸೂತಿಯ ಕರಾಮತ್ತು ಕಾಣುತ್ತದೆ...ಘಗಾರವನ್ನು ಮೊದಲು ೫ ಭಾಗಗಳಾಗಿ ಪ್ರತ್ಯೇಕವಾಗಿ  ಹೊಲಿದು ಏಕತ್ರ ವಾಗಿಸುವುದು ಇದರ ವಿಶೇಷ ಇದರಲ್ಲಿ .ನಾಯಿ ಉಗುರು ,ಚಿಗಣಿ ,ಗಾಳಿಯ ಪೆಟ್ತ್ಯ,ಟೆಕ ,ಲೆಪೋ ,ಎಂಬ ಹೆಸರಿಸ ಕಸೂತಿಗಳನ್ನು ತೆಗೆದಿರುತ್ತಾರೆ,
ಚಾಟಿಯ
ಚಾಟಿಯ ಎಂಬುದು ದಾವಣಿ ಇದರ ಅಂಚಿಗೆ ಕನ್ನಡಿಯ ಕಸೂತಿ ಇದ್ದು ,ಪೈಸೆಗಳನ್ನು ಮಟ್ಟಸವಾಗಿ ಜೋಡಿಸಿರುತ್ತಾರೆ ಇದನ್ನು ghunghat ಎನ್ನುತ್ತಾರೆ .ಚಾಟಿಯಾದ ಮೇಲೆ ಚಂದದ ಕಸೂತಿಗಳು ನೋಡುಗರ ಕಣ್ಮನ ಸೆಳೆಯುತ್ತವೆ.


ವಾಂಕಿಯ 
ಇದು ಬೆಳ್ಳಿಯ ಆಭರಣ ಚಂದ್ರಾಕಾರದ ಬಿಲ್ಲೆಗೆ ನಾಣ್ಯ ಮತ್ತು ಗಿಲಕಿಗಳನ್ನು ಜೋಡಿಸಿದ ಸರ ಇದು ,ಇದರೊಂದಿಗೆ ನಮ್ಮ ಕಾಸಿನ ಸರದಂತೆ ಕಾಣುವ ರಪಿಯ ಹಾರ,ವಿಭಿನ್ನ ವಿನ್ಯಾಸದ ಹಾನ್ಸಲಿ ಗಳನ್ನೂ ತೊಡುವುದೆಂದರೆ..ಇವರಿಗೆ ಬಲು ಪ್ರೀತಿ..ಈ ಸರಗಳ ಜೊತೆ ಬಣ್ಣ ಬಣ್ಣದ ಮಣಿ ಸರಗಳನ್ನು ಇವರು ತೊಡುತ್ತಾರೆ ಇದನ್ನು ಲಾಲ್ಡಿ ಎಂದು ಕರೆಯುತ್ತಾರೆ .ಇವುಗಳಲ್ಲೂ ಹಲವು ವಿಧಗಳುಂಟು.ಲಾಲ್ಡಿ ಹಾರ ಪರಿಹಾರ ,ಪಟಿಯಾ(ಕತ್ತಿಗೆ ಒತ್ತಿಕೊಂಡಿರುವ ಮಣಿ ಸರ )ಇವುಗಳನ್ನು ಸಂಗ್ರಹಿಸಿತ್ತುಕೊಂಡು ಅವರೇ ಹೆಣೆದು ಕೊಂಡು ಧರಿಸುವುದು ಉಂಟು.
ಖಣ ಖಣ ಕಂಕಣ
ಬಂಜಾರ ಹೆಂಗಳೆಯರನ್ನು ನೋಡಿದ ಕೂಡಲೇ ಕಣ್ಮನ ಸೆಳೆಯುವುದು ಅವರ ಕೈ ಬಳೆಗಳು ಕೈ ಮಧ್ಯ ಭಾಗ ದಿಂದ ಪೂರ್ತಿ ತೋಳುಗಳಲ್ಲಿ ಈ ಬಳೆಗಳು ರಾರಾಜಿಸುತ್ತವೆ ,,ಬಿಳಿ ಬಿಳಿ ಬಣ್ಣದ ದಂತಿ ಚೂಡಿ ಗಳೆಂದರೆ ಇವರ ಮೆಚ್ಹಿನ ಆಭರಣಗಳು .ಇವಲ್ಲದೆ ಪತ್ಲಿ.ಬೋದ್ಲು ,ಮತ್ತು ಗಾಜಿನ ಬಾಳೆಗಳು ಕೂಡ ಇವರು ಇಷ್ಟ ಪಟ್ಟು ಧರಿಸುತ್ತಾರೆ
ಇದರೊಂದಿಗೆ ಕಸೂಟಿಯ ಎಂಬ ತೋಳಬಂದಿ ಮತ್ತೊಂದು  ಆಕರ್ಷಣೆ.ಕಸೂಟಿಯ ದ ಮೇಲ್ಭಾಗದಲ್ಲಿ ಕಾನ್ಚಲಿಯ ಕವಡೆಗಳು ಬರುವುದರಿಂದ ಅದರ ಮೆರಗು ಮತ್ತಷ್ಟು ಹೆಚುತ್ತದೆ... 
ಇನ್ನುಳಿದಂತೆ ಅನುಕೂಲ ಇದ್ದವರು ಡಾಬು ತೊಡುವುದುಂಟು..ಕಿವಿಗೆ ಕನಿಯಕಾಲಿಗೆ ತಾಮ್ರದ ವಂಕಿಯ ಝಾಂಜರ ,ಫೂಲಿ ಗಳನ್ನೂ ತೊಡುತ್ತಾರೆ...ಇಷ್ಟೇ ಅಲ್ಲದೆ ಇನ್ನು ಹಲವು ವಿಶಿಷ್ಟ ಆಭರಣಗಳು ಇವರ ಸಂಗ್ರಹದಲ್ಲಿವೆ...ivannu ಕೂತಲಿ ಎಂಬ ತಮ್ಮ ಉಡುಪು ಮತ್ತು ಆಭರಣ ಸಂಗ್ರಹಿಸುವ ಚೀಲದಲ್ಲಿ ಕತ್ತಿದುತ್ತಾರೆ ಹಬ್ಬ ಮದುವೆ ಸಂಭ್ರಮದಲ್ಲಿ ನಿತ್ಯಕ್ಕಿಂತ ಹೆಚ್ಹು ಶೃಂಗಾರ ಗೊಳ್ಳುವುದು ರೂಡಿ ,
ಕಾಂತನಿಲ್ಲದ ಮೇಲೆ ....
ಸಿಂಗಾರ ಎಂಬುದು ಹೆಣ್ಣಿನ ಹಕ್ಕಾದರೂ ಮದುವೆ ಆದನಂತರ ಅದಕ್ಕೆ ವಿಶೇಷ ಮೆರಗು ಸೇರಿಕೊಳ್ಳುವುದು ಸಹಜ.ಪತಿ ಮರಳಿ ಬಾರದಲ್ಲಿಗೆ ಹೋದನೆಂದರೆ ಸಿಂಗಾರದ ಬಯಕೆ ಮನದ ಮೂಲೆ ಸೇರುತ್ತದೆ ..ಮನ ಬಯಸಿದರೂ ಕೆಲವೊಮ್ಮೆ ಸಮಾಜದ ಹೆದರಿಕೆ ಕಾಡುವುದುಂಟು..ಆದರೆ ಈ ವಿಷಯದಲ್ಲಿ ಲಂಬಾಣಿ ಮಹಿಳೆ ತನ್ನ ಸ್ವಾತಂತ್ರಇನ್ನು ಉಳಿಸಿಕೊಂಡಿದ್ದಾಳೆ.ಭೂರಿಯ ಮತ್ತೆ ಕೆಲವು ಸೌಭಾಗ್ಯದ ಸಂಕೇತ ಎಂದು ನಂಬುವ ಆಭರಣ ಬಿಟ್ಟು ಮತ್ತೆಲ್ಲ ವನ್ನು ಆಕೆ ಧರಿಸಿ ಸಿಂಗಾರ ಗೊಳ್ಳಬಹುದು..
ವೈಧವ್ಯ ಬಂದಾಗ ಲಂಬಾಣಿ ಮಹಿಳೆಯರ ಮೈ ಮೇಲಿಂದ ಬುತ್ತಿ ಆಭರಣವನ್ನು ತೆಗೆದಿಡುತ್ತಾರೆ ಎಂದು ಮಾತು ಮಾತಲ್ಲಿ ನಾನು ಸಂದರ್ಶಿಸಿದ ಭೀಮವ್ವ ಚವ್ಹಾನ್ ಹೇಳಿದರು.
ಲಂಬಾಣಿಗರು ತಮ್ಮ ಬಟ್ಟೆಯಲ್ಲಿ ಕಾಜಿನ ಬಿಲ್ಲೆಗಳನ್ನು ಹೆಚ್ಹಾಗಿ ಬಳಸುತ್ತಾರೆ ಕಾರಣ ಅವರ ಅಲೆಮಾರಿ ಬದುಕು.ಕಾಡಿನಲ್ಲಿ ಅಲೆಯುವಾಗ ಪ್ರಾಣಿಗಳಿಂದ ಬಚಾವಾಗಲು ಪ್ರತಿಫಲಿಸುವ ಕನ್ನಡಿಯ ಸಹಾಯ ಪಡೆದಿರಬಹುದು ಆಗಿನ ಉಪಾಯ ಈಗ ಸಂಸ್ಕೃತಿಯ ಒಂದು ವಿಶಿಷ್ಟ್ ಭಾಗವಾಗಿ ರೂಪು ಗೊಂಡಿದೆ.
ಇತ್ತೀಚಿನ ದಿನಗಳಲ್ಲಿ ಲಂಬಾಣಿ ಯುವತಿಯರು ಅವರ ಸಾಂಪ್ರದಾಯಿಕ ಉಡುಪುಗಳನ್ನು ತೊದುವುದರಲ್ಲಿ ಆಸಕ್ತಿ ತೋರುತ್ತಿಲ್ಲ .ಹಳೆ ಮಂದಿಯ ಆಭರಣ ಅಟ್ಟ ಸೇರಿವೆ...ಅನ್ನುವ ಕೊರಗು ಹಿರಿಯರದು...
 ತನ್ನ ಮನೆಯ ಆರ್ಥಿಕ ಪರಿಸ್ತಿತಿಯ ಸುಧಾರಣೆಗೆ ತನ್ನಲ್ಲಿರುವ ಎಲ್ಲ ಚಿನ್ನವನ್ನು ಮಾರಿ .ಕೊನೆಗೆ ಏನು ಇಲ್ಲದಾಗ ಪ್ರಕೃತಿ ಮೂಲದ ಸದಾ ತನ್ನ ಬಳಿಯೇ ಇರುವಂಥ ಕೃತಕ ಆಭರಣದ ಮೊರೆಹೊಗಿರಬಹುದೇನೋ.ಅದಕ್ಕೆ ಕವಡೆಯನ್ನು ಅವರು ಚಿನ್ನ ಭಾಗ್ಯ ದಾಯಕ ಎಂದು ಇವರು ನಂಬುತ್ತಾರೆ .ಇವರ ವಿಶಿಷ ವಿನ್ಯಾಸದ ಆಭರಣವನ್ನು ತಯಾರಿಸಿ ಕರ್ನಾಟಕದ ಹಲವೆಡೆ ಚದುರಿ ನೆಲೆನಿಂತಿರುವ ಇವರಿಗೆ ಪೂರೈಸುವ ವ್ಯಕ್ತಿಗೆ ರಾಂಗ್ ಎಂದು ಇವರು ಕರೆಯುತ್ತಾರೆ .
ಲಂಬಾಣಿ ಮಹಿಳೆಯರು ಪೀತಾಂಬರದ ನಡುವೆ ಜರಿ ಎಳೆಗಳಂತೆ......ಎಂದು ಮಾಜಿ ಪ್ರಧಾನಿ ದಿ .ಇಂದಿರಾ ಗಾಂಧಿ ಹೇಳಿದ್ದನ್ನು ಡಾ.ಹರಿಲಾಲ್ ಪವಾರ್ ತಮ್ಮ ಬರಹ ಒಂದರಲ್ಲಿ ಉಲ್ಲೇಖಿಸಿದ್ದಾರೆ ...ಇವರ ವರ್ಣಮಯ ಬದುಕನ್ನು ನೋಡಿದಾಗ ಇದು ನಿಜ ಎನಿಸುತ್ತದೆ ...ಬಡತನ ,ಎಂಬುದು ಅವರ ನಗುವನ್ನು ಕಸಿಯುತ್ತಿದೆ..ಆದರು ಇವರ ಶ್ರೀಮಂತ ಸಂಸ್ಕೃತಿ ಜಾನಪದ ಲೋಕಕ್ಕೆ ಕಳಸ ಪ್ರಾಯ.
(ಎಪ್ರಿಲ್ ೧೫ ,೨೦೧೦  ಸಖಿ  ಪಾಕ್ಷಿಕದಲ್ಲಿ ಪ್ರಕಟಿತ )




Monday, March 28, 2011

ಚಳಿಗಾಲ ಬೇಸಿಗೆಗಳ ನಡುವೆ ಪುಷ್ಪ ಸೇತುವೆ -spring




        ಚಳಿಗಾಲ ಮೆತ್ತಗೆ ನಡೆದು ಹೋಗಿದೆ..ಇನ್ನೀಗ ಬೇಸಿಗೆಯ ಬಿರುಸು ಶುರುವಾಯಿತು ,,,,,ಆದರೆ ಈ ನಡುವೆ ಇರುವ ಒಂದಷ್ಟು ದಿನಗಳ ಸುಂದರ ಸಮಯ'' ನನ್ನನ್ನೇಕೆ ಗಮನಿಸುತ್ತಿಲ್ಲ ???''ಎಂದು ತನ್ನ ಕಂಪಿನಿಂದಲೇ ಕೇಳುತ್ತಿದೆ...

ಅದೇ ಸ್ಪ್ರಿಂಗ್ ...ಪುಷ್ಪಕ ವಿಮಾನದಲ್ಲಿ ವಸುಧೆ ವಿಹರಿಸುವಂತೆ ,ಆಟಮ್ ತಿಂಗಳುಗಳಲ್ಲಿ ಬೆತ್ತಲಾದ ವೃಕ್ಷಗಳು ನಸು ನಾಚಿ ಮೆತ್ತಗೆ ಹೂವಿನ ಸೀರೆ ಉಟ್ಟಂತೆ.ಭಾರತದಲ್ಲಿ ಸ್ಪ್ರಿಂಗ್ ಎಂಬುದು ಮಕರ ಸಂಕ್ರಮಣದ ನಂತರ ಯುಗಾದಿ ಮುಗಿಯುವ ತನಕದ ಅವಧಿ....ಚಿಗುರು ಮೂಡುವ ಹೊತ್ತು....
ಪಶ್ಚಿಮ ದೇಶಗಳಲ್ಲಿ ಸ್ಪ್ರಿಂಗ್ ಎಂಬುದು ಸುಮ ಸೌರಭ ಹೊತ್ತು ತರುವ ಕಾಲ,ಹಿಮಪಾತ ಮಂಜು ಮುಸುಕಿದ ವಾತಾವರಣದಿಂದ ಏಕತಾನತೆಯಲ್ಲಿದ್ದ ಜನರಿಗೆ ಹೊಂಬಿಸಿಲಿನೊಂದಿಗೆ ಹೊಸ ಚಲನೆಯನ್ನು ಕೊಡುವ ಕಾಲ...ಅದಕ್ಕೆ ಸ್ಪ್ರಿಂಗ್ ಎಂಬುದು ಇಲ್ಲಿಯ ಜನರಿಗೆ ಚೈತನ್ಯ ಕಾಲ....ಆಂಗ್ಲರ ನಾಡಿಗೆ  ವಲಸೆ ಬಂದ ನಂತರ ಪ್ರತಿದಿನವೂ  ಒಂದು ಹೊಸ ಅನುಭವ ಬಣ್ಣವಿಲ್ಲದ ವಿಂಟರ್ ನಿಂದ ಬೇಸತ್ತು ಹೋಗಿದ್ದ ಮನಸಿಗೆ ಇಗಷ್ಟೆ  ಆಗಮಿಸಿರುವ ಸ್ಪ್ರಿಂಗ್ ಮನೆಯಂಗಳದಲ್ಲಿ ಹಬ್ಬಿದ ಮಲ್ಲಿಗೆಬಳ್ಳಿಗೆ ಹೂ ಬಿಟ್ಟು ಬೆಳದಿಂಗಳಲ್ಲಿ ಆ ಘಮವನ್ನು ಆಘ್ರಾನಿಸಿದಷ್ಟು ಹಿತ ಹಿತ...ನಮ್ಮ ನಾಡಿನಲ್ಲೂ ಹೂಗಳಿಗೆ ಬರವೇ..???.ಚಂದದ ಹೆಸರಿನೊಂದಿಗೆ ಅದಕ್ಕೂ ಚಂದದ ಘಮಗಳನ್ನು ನೆನಪ ಬುಟ್ಟಿಯಲ್ಲಿ ಉಳಿಸಿವೆ...ಆದರಿವು ಹೊಸ  ಹೂಗಳು...ದುಬಾರಿ ಹೂಗುಚ್ಹದಲ್ಲಿ ಕಾಣಸಿಗುವ ಜನಸಾಮಾನ್ಯರಿಗೆ ಅಪರೂಪದ ಹೂವುಗಳು.ಇಲ್ಲಿ ಎಲ್ಲ ದಿಕ್ಕಿನಲ್ಲೂ ಅರಳಿ ನಗುತ್ತಿವೆ..

ಇದಕ್ಕಿಂತ ಹಳದಿ ಮತ್ತೆ ಎಲ್ಲೂ ಸಿಗಲಾರದು ಎನ್ನುವಷ್ಟು ಗಾಢ ವರ್ಣದ ದಫ್ಫುಡಿಲ್ಸ್ ,,,ತಿಳುಗುಲಾಬಿ ಪೀಚ್ ಬ್ಲಾಸಂ ,ಬಿಳುಪಿನ ಮ್ಯಗ್ನೋಲಿಯ ..,ನಸು ನಾಚಿದ ಸುಂದರಿ ತಲೆತಗ್ಗಿಸಿ ನಿಂತಂತೆ ಇರುವ ಸ್ನೋಡ್ರಾಪ್ ಹೂವುಗಳು,ಅರಳಲೋ ಬೇಡವೋ???ಎಂಬ ಪ್ರಶ್ನೆ ಮುಂದಿಟ್ಟುಕೊಂಡೇ ನಮ್ಮ ನೋಡುವ ಟುಲಿಪ್ಸ್,ನಮ್ಮ ಅಂಗಳದಲ್ಲಿ ಅರಳುವ ಪನ್ನೀರ್ ಗುಲಾಬಿಯ ಸೋದರಿಯಂತೆ ಕಾಣುವ ಕೆಮೆಲಿಯ ,ಮಳೆಗಾಲದಲ್ಲಿ  ಅಲ್ಲೆಲ್ಲೋ ಮರದ ಮೇಲೆ ತೂಗಿ ನಲಿಯುವ ಸೀತದಂಡೆ ಯಂಥಹ ಚೆರ್ರಿ ಪ್ಲಾಂ ....ಹಸಿರು ಹಸಿರು ಹಾಸಿನಲ್ಲಿ ಸೇವಂಥಿಗೆಯಂಥ ಬಿಳಿ ಹಳದಿ ಹೂಗಳು....ಅದನ್ನು ವಿವರಿಸುವುದು ಶಬ್ಧಗಳಿಗೆ ದುಬಾರಿ ಎನಿಸುತ್ತದೇನೋ....

ರಸ್ತೆಯಲ್ಲಿ ನಡೆಯುತ್ತಿದ್ದರೆ ಅದೆಂಥದೋ ಆಹ್ಲಾದ .....ನಮಗಾಗಿ ಅರಳಿ ನಗುತ್ತಿವೆಯೇನೋ ಎಂಬ ಭಾವ ಸಹಜ...ಬಣ್ಣಗಳು ಕಣ್ಣಿಗೆ ಮುದವಿತ್ತರೆ,ಮೆತ್ತಗೆ ಬೀಸುವ ಗಾಳಿ ವಿಭಿನ್ನ ಕಂಪನ್ನು ಸೂಸುತ್ತವೆ...ಮೊದಲ ಬಾರಿ ಸ್ಪ್ರಿಂಗ್ ನೋಡುವ ಭಾವುಕ ಹೃದಯದ ಆನಂದ ವರ್ಣಿಸಲಸದಳ....ಹಾದಿಯ ಇಬ್ಬದಿಯಲ್ಲೂ ಗುಲ್ಮೊಹರ್ ಗಳು ಅರಳಿ ನಿಂತಾಗ ಮುಂಜಾನೆಯ ಮೊದಲ ಜಾವದಲ್ಲಿ ಹಾಡು ಗುನುಗುನಿಸುತ್ತ ಹೋಗುವಾಗಿನ ಸಾರ್ಥಕತೆ....
ಜನರು ಅಪರಿಚಿತರಿರಬಹುದು..ಆದರೆ ಹೂಗಳು ಅವು ಎಲ್ಲಿ ಇದ್ದರು ನಮ್ಮನ್ನು ಗುರುತಿಸುತ್ತವೆ...ನಮ್ಮನ್ನು ನೋಡಿ ನಗುತ್ತವೆ..
ಇದು ಕವಿ ಸಮಯ ....ಸ್ಪ್ರಿಂಗ್ ಎಂಬ ಈ ಮಧುರಾನುಭೂತಿ ಯಲ್ಲಿ ಕವಿತೆಯನ್ನು ಬರೆಯಲಾರದೆ ಇರಲಾರ ಕವಿ...ಆಂಗ್ಲ ಕವಿ ವರ್ಯರ ಹಲವು ರಚನೆಗಳಿಗೆ ಸ್ಫೂರ್ತಿ ಈ ಸದಾಬಹಾರ ಕಾಲ...
..
ಹಿಂದೂಸ್ತಾನಿ ಸಂಗೀತದ ಬಹಾರ್ ರಾಗವನ್ನು ಸೃಷ್ಟಿಸಿದ್ದು ಈ ಸಮಯದಲ್ಲೇ ಇರಬಹುದೇನೋ???ಯುರೋಪ್ ಪ್ರವಾಸಕ್ಕೂ ಇದು ಸಕಾಲ .ನನಗಿದುಮೊದಲ ಸ್ಪ್ರಿಂಗ್ ...ಬನ್ನಿ ನೀವು ನನ್ನೊಂದಿಗೆ ಈ ಅನುಭವವನ್ನು ಸವಿಯಿರಿ













(೨೭ ಮಾರ್ಚ್ ೨೦೧೧ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)

Monday, January 17, 2011

ಮೋಂಬತ್ತಿಯ ಬೆಳಕಲ್ಲಿ...

ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ
ನಿನ್ನ ಜೊತೆ ಇಲ್ಲದೆ ಮನ ವಿಭ್ರಾಂತ....
ಸುಮ್ಮನೆ ಗುನುಗಿಕೊಳ್ಳುತ್ತಾ..ಹೊಸ್ತಿಲ ಮೇಲೆ ನಿಂತಿದ್ದೆ...ತುಳಸಿ ಕಟ್ಟೆಯ ಮೇಲೆ ಹಚ್ಚಿದ ದೀಪ.ಗಾಳಿಯೊಂದಿಗೆ ''ನಾನೂ ಸರಸಿ ನೀನು ಅರಸ,,'' ಎಂದು ಹಾಡಿಕೊಳ್ಳುತ್ತಿರಬಹುದ???ಅನ್ನೋ ಯೋಚನೆ...ಮನೆಯೊಳಗೇ ಗವ್ವೆನ್ನುವ ಮೌನ...ಹೊರಗೆ ...ಗಾಳಿಯ ಸದ್ದಾದರೂ ಇದೆಯಲ್ಲ....ಹೆಚ್ಹು ಹೊತ್ತು ಹೊಸ್ತಿಲ ಮೇಲೆ ಹೆಣ್ಣುಮಕ್ಕಳು ನಿಲ್ಲುವಂತಿಲ್ಲ..ಮುಸ್ಸಂಜೆಯಲ್ಲಿ....ಹಾಗೆಂದು ಅಜ್ಜಿ ಹೇಳಿದ್ದು...ನಡುಮನೆಯ ಗೋಡೆಗಡಿಯಾರ ೧೨ ಹೊಡೆದಾಗ ಬಡಿದುಕೊಳ್ಳುವಂತೆ ನನ್ ಮನಸಲ್ಲೂ ಸದ್ದು....
ಒಳಗೆ ಬಂದೆ...ಮುಸ್ಸಂಜೆ ಸಮಯ ಕದವನ್ನು ಹಾಕುವಂತಿಲ್ಲ...ಲಕ್ಸ್ಖ್ಮಿ ಒಳಬರುವ ಹೊತ್ತು...
''ಯಾಕೆ ಅಲ್ಲೇ  ನಿಂತಿದ್ದಿ ಒಳಬಂದು ನನ್ನೊಂದಿಗಾದ್ರು  ಮಾತಾಡಬಾರದ'''???
ಯಾರು??ಯಾರದು,,??
''ನಾನು ಮೊಂಬತ್ತಿ..''
ನನ್ನ ಏಕಾಂತ ನೋಡಿ ಅದಕ್ಕೂ ಕಿರಿ ಕಿರಿ ಆಗಿರಬೇಕು...''ನಿನ್ನೊಂದಿಗೇನು ಮಾತು??''ಅನ್ನುವ ಧಿಮಾಕು ನನ್ನದು...
''ನಿನ್ನ ಒಳದಳಲ ನಾನಲ್ಲದೇ ಇನ್ಯಾರು ತಿಳಿದಾರು ಹುಡುಗಿ ಬಾ ನಿನಗೆ ಸಮಾಧಾನ ಹೇಳುವೆ..''
''ನಿನ್ನ ಹತ್ತಿರ ಏನು ಹಂಚಿ ಕೊಳ್ಳಲಿ..??ಇನ್ನೆರಡು ಘಂಟೆ ಅಷ್ಟೇ ನಿನ್ನ ಆಯಸ್ಸು ..ನಂತರ ಮತ್ತೆ ನಾನೊಬ್ಬಳೆ ನನ್ನ ಏಕಾಂತದೊಡನೆ...''
''ನಿನೋಬ್ಬಳೆ???ನಿನ್ನ ಏಕಾಂತದೊಂದಿಗೆ??ಏಕಾಂತದೊಡನೆ  ಸಖ್ಯ ಎಲ್ಲರಿಗು ಸಾಧ್ಯವಾಗದು ಹುಡುಗಿ.ಏಕಾಂತ ನಿನ್ನೊಂದಿಗೆ ಇರುವಾಗ  ನೀ ಹೇಗೆ ಒಬ್ಬಳೇ ಆದಿಯ??ನಿನ್ನೊಂದಿಗೆ ನಿನ್ನ ದಿವ್ಯ ಏಕಾಂತವಿದೆ...''
ಆದರೆ ಅದಕ್ಕೆ ಜೀವವಿಲ್ಲ..ಅದು ನನ್ನೊಡನೆ ಮಾತಾಡುವುದಿಲ್ಲ...ನನಗೇ ಮಾತಾಡಬೇಕು..ಮೌನದ ಸಿಂಪಿಯಿಂದ ಮಾತೆಂಬ ಮುತ್ತುಗಳನ್ನು  ಚಲ್ಲಬೇಕು..ಅದನ್ನಾರಿಸುವ ಒಬ್ಬ ಸಂಗಾತಿ ಬೇಕು..ಅದನ್ನು ಸುರಿದು..ಪೋಣಿಸುವ ಜೊತೆಗಾರ ಬೇಕು...ನಿನ್ನ ಏಕಾಂತಕ್ಕಿದು ಸಾಧ್ಯವೇ??
''ಸಾಧ್ಯ...ಆದರೆ ಏಕಾಂತದ ದಿವ್ಯ ಮೌನದ ಮಧುರ ನಾದವನ್ನು ಆಲಿಸಲು ನಿನಗೆ ಸಾಧ್ಯವೇ ಹುಡುಗಿ??''
ಮೌನದ ನಾದ??ಅದು ಮೌನ ಅದನ್ನಾಲಿಸುವುದು  ಹೇಗೆ ??
ಮೊಂಬತ್ತಿಯ ಮೌನ .....
ಯಾಕೆ ಮೌನ...ಏನಾದ್ರು ಮಾತಾಡು... ಈಗಾದ್ರು ಸಮಾಧಾನ ಎಂದೆ. ಮತ್ತೆ ಮಾತಾಡದೆ..ಸುಮ್ಮನ್ನಿದ್ದಿ...ನೋಡು ಹೇಳಬೇಕಾದ್ದನ್ನು ಹೇಳಿಬಿಡು...ನಿನ್ನರ್ಧ ಜೀವ ಕರಗಿ ಹೋಗಿದೆ...ನೀ ಪೂರ್ತಿ ಮುಗಿದು ಹೋಗುವ ಮುನ್ನ ನನ್ನ ಮತ್ತು ಈ ಏಕಾಂತದ  ಸಖ್ಯ ಮಾಡಿಸಿ ಹೋಗು...ಕೇಳುತ್ತಿರುವೆಯ????ಏ ಮೊಂಬತ್ತಿ...
ಹ್ಮ್ಮ್ಮ್...ಕೇಳಿಸಿಕೊಂಡೆ...ನೋಡು ನನ್ನ ಮೌನವನ್ನ ನೀನು ಹೇಗೆ ಬೇಕಾದರೂ ಅರ್ಥೈಸಿಕೊಳ್ಳಬಹುದು..???
ಹಾಗೆಂದರೆ ಏನರ್ಥ...??
ಕತ್ತಲೆ..ಮತ್ತು ಬೆಳಕಿಗಿರುವುದು ನಿನ್ನ ಕಣ್ಣು ರೆಪ್ಪೆಯ ಅಂತರ..ಅಷ್ಟೇ...ರೆಪ್ಪೆ ಮುಚ್ಚಿತ್ತಿದ್ದಿ ಅಂದರೆ..ಜಗವೆಲ್ಲ ಜಗಮಗಿಸುತ್ತಿದ್ದರು..ನಿನ್ನ ಕಣ್ಣಲ್ಲಿ ಬರಿ ಕತ್ತಲೆ....ರೆಪ್ಪೆ ತೆರೆದರೆ ಮತ್ತೆ ನೀ ಆ ಬೆಳಕಿಗೆ..
ಬೆಳಕೆಂದರೆ ಬರಿ ಕಣ್ಣಿಗೆ ಕಾಣುವ ಬೆಳಕಲ್ಲ...ನಿನ್ನಾತ್ಮದ  ಬೆಳಕು...ಕೇಳು ಹುಡುಗಿ ನಿನ್ನೊಳಗಿನ ಆ ದಿವ್ಯ ಏಕಾಂತದ ಬೆಳಕು...ಅದನ್ನು ಹುಡುಕು...ಆ ಏಕಾಂತದೊಡನೆ ಮಾತಾಡು..ಅಲ್ಲಿ ಪ್ರಶ್ನೆಯು ನೀನೆ ಉತ್ತರವೂ ನೀನೆ...ಮತ್ತೇಕೆ ಸಂಗಾತಿಯ ಹಂಬಲ...????
ನಿನ್ನೊಳಗಿನ ನೀನು ನಿನಗೆ ಸಿಗುವತನಕ...ಈ ಸಂಜೆಗಳ ಇಳಿಗತ್ತಲೆಯು ನಿನ್ನ ಪಾಲಿನ ಬೆಳದಿಂಗಳಗುವತನಕ.....ಮ...ತ್ತೆ.......

ಕಣ್ಣು ಮುಚ್ಚಿ ಮೋಂಬತ್ತಿಯ ಮಾತನ್ನು ಆಲಿಸುತ್ತಿದ್ದ ನನಗೇ..ಮತ್ತೆ ಏಕಾಂತ..ಕಣ್ಣು ತೆರೆದರೆ ಕತ್ತಲೆ...ಬತ್ತಿ ಆರಿಹೋದ ವಾಸನೆ....ಮತ್ತೆ ನಾ ಕೊರಗಲಿಲ್ಲ...ಮೊಂಬತ್ತಿ ನನ್ನ ಬಿಟ್ಟು ಹೋಗಿದ್ದಕ್ಕೆ...ನನ್ನೊಳಗಿನ ನಾನು ನನಗೇ ಸಿಗುವ ತನಕ....
ಈಗ...ಕುವೆಂಪು ಬರೆದ ಗೀತೆ...ನನ್ನ ಏಕಾಂತವನ್ನಳುತ್ತಿತ್ತು..
ಅಂತರತಮ ನೀ ಗುರು ..ನೀ  ಆತ್ಮ ತಮೋಹಾರಿ ....
ಹೀಗಿತ್ತು ಮೊಂಬತ್ತಿ ಒಡನೊಂದು ಏಕಾಂತದ ಸಂಜೆ...

Wednesday, January 12, 2011

ಉತ್ಸಾಹದ ಮೂಟೆ ಹೊತ್ತು ತರುವ ಹಬ್ಬಗಳೆಲ್ಲಿ ಹೋದವು???

ನಾಳೆ ಅಲ್ಲ ನಾಡಿದ್ದು ಮಕರ ಸಂಕ್ರಮಣ....ಎಳ್ಳು ಬೆಲ್ಲ ಕೊಟ್ಟು ಒಳ್ಳೊಳ್ಳೆ ಮಾತಾಡಿ ಅಂತ ಕುಸುರೆಳ್ಳನ್ನು ಕೊಟ್ಟು ಹಿರಿಯರಿಗೆ ಕಾಲಿಗೊಂದು ಉದ್ದಂಡ ನಮಸ್ಕಾರ ಹಾಕಿ ಹೊಸ ಬಟ್ಟೆ ಯಾ ಜರ ಜರ ಸಪ್ಪಳದಲ್ಲೇ ಮೈ ಮರೆಯುತ್ತಿದ್ದ  ಸಂಕ್ರಮಣಗಳು ,ಆ ಸಡಗರ ಮರೆಯಾಗಿ ಎಷ್ಟೋ ವರ್ಷಗಳಾದವು...ಇವತ್ತು ಮನಸಿಗೆ ಬಂದಿದ್ದು ಅದೇ ವಿಷಯ...ಅವರಿವರ ವಿಷಯ ಯಾಕೆ ??ನಾನೆ  ಅಮ್ಮನ ರೇಷ್ಮೆ ಸೀರೆ ಹರಿದು ಅದನ್ನು ಲಂಗ ಮಾಡಿ   ಅದಕ್ಕೊಂದು ಪುಟ್ಟ ಸೀರೆ ರವಿಕೆ ಹೋಲಿಸಿಕೊಂಡು ದಾವಣಿ ಹಾಕಿಕೊಂಡು...ಮನೆ ಮನೆಗೆ ಎಳ್ಳು ಹಂಚೋಕೆ ಹೋಗುವ ಸಂಭ್ರಮವನ್ನ ಮನಸ್ಪೂರ್ತಿ ಅನುಭವಿಸಿದ್ದೇನೆ...


ಸಂಕ್ರಾಂತಿ  ಹಬ್ಬ  ಬರುವ ೨ ತಿಂಗಳು ಮುಂಚಿನಿಂದಲೇ  ನಮ್ಮ ತಯಾರಿ ಶುರು ...ಅಂಥದ್ದೇನು  ತಯಾರಿ ಅಂದಿರಾ????ಆಗ ನಾವು ಮಾರುಕಟ್ಟೆಯಲ್ಲಿ ಸಿಗುವ  ಸಕ್ಕರೆ ಗುಳಿಗೆಗಳನ್ನು ತರುತ್ತಿರಲಿಲ್ಲ...ಮನೆಯಲ್ಲೇ  ಎಳ್ಳು ತಯಾರಿಸುತ್ತಿದ್ದೆವು...ಸಕ್ಕರೆಪಾಕ ವನ್ನು ೭ ಬಾರಿ ಸೋಸಿ -ಕಾಸಿ  ಅದಕ್ಕೆ ನಿಂಬೆ ಹಣ್ಣು ಹಿಂಡಿ ಸುಧಾರಸ ಎಂಬ ಪಾಕ ತಯಾರಿಸಿ...ಎಳ್ಳು,ಗೋಡಂಬಿ ಬೀಜ,ಕುಂಬಳ ಬೀಜದ ಒಳತಿರುಳು,ಜೀರಿಗೆ,ಬಡೆಸೋಪು,ಲವಂಗ ,ಶೇಂಗ,ಪುಟಾಣಿ.ಹೀಗೆ ಎಲ್ಲವನ್ನು ಒಂದು ಹರಿವಾಣದಲ್ಲಿ ಹಾಕಿ  ಕೆಂಡ ಹಾಕಿದ ಶೇಗಡಿ ಮೇಲೆ ಆ ಹರಿವಾಣ ಇಟ್ಟು,,,ಒಂದೆರಡು ಚಮಚ ಸುಧಾರಸ ಹಾಕಿ ...ಮೆತ್ತಗೆ ಕೈ ಆಡಿಸಬೇಕು...ಅದು ನಸುಕಿನಲ್ಲಿ ಎದ್ದು..ಏಕೆಂದರೆ ಛಳಿ ಬಿದ್ದಷ್ಟು ಎಳ್ಳಿನ ಮೇಲೆ ಸಕ್ಕರೆ ಮುಳ್ಳುಗಳು ಏಳುತ್ತವೆ...ಅದಕ್ಕೆ ಸೂರ್ಯನ ದರ್ಶನ ಆಗಬರದಂತೆ......


ಇನ್ನೇನು ಜನೆವರಿ ತಿಂಗಳ ೧೫ ಬಂದೆ ಬಿಡ್ತು ....ಅನ್ನೋ ಹೊತ್ತಿಗೆ ಈ ಎಳ್ಳುಗಳು ಬಿಳಿ ಬಿಳಿ ಅರಳು ಮಲ್ಲಿಗೆಯ ನಗುವನ್ನು ಶೆಗಡಿಯ ಬಿಸಿಯಲ್ಲೇ  ನಗುತ್ತವೆ...ನಂತರದ್ದು ಅದನ್ನು ಎಲ್ಲಾ ಬಂಧು ಬಾಂಧವರಿಗೆ  ಕಳಿಸುವ ಕಾರ್ಯಕ್ರಮ..ಕಾಮತ್ ಮಾಮನ ಅಂಗಡಿಗೆ ಹೋಗಿ...ಚಂದದ ಗ್ರೀಟಿಂಗ್ ತಂದು ಅಥವಾ ಎಷ್ಟೋ ದಿನಗಳಿಂದ ಪುಸ್ತಕದಲ್ಲಿ ಒಣಗಿಸಿಟ್ಟ ಗುಲ್ಮೊಹರ್ ,ಹೂವು ,ಎಳೆಗಳು ಗುಲಾಬಿ ಪಕಳೆಗಳನ್ನು ಬಳಸಿ ಆಸ್ಥೆ ಯಿಂದ ಗ್ರೀಟಿಂಗ್ ತಯಾರಿಸಿ...ಅಲ್ಲಿ  ಇಲ್ಲಿಂದ ಕದ್ದು ಕೆಲ ಸಾಲುಗಳನ್ನು ಬರೆದು...ತಯಾರಿಸಿದ ಎಳ್ಳು ಹಾಕಿ...ಅಂಚೆ ಪೆಟ್ಟಿಗೆಗೆ ಹಾಕಿದರೆ ಏನೋ ಒಂದು ದೊಡ್ಡ ಸಮಾಧಾನ...ಕೆಲವೊಮ್ಮೆ ಸ್ಟಾಂಪ್ ಮರೆತು ಗ್ರೀಟಿಂಗ್ಸ್ ನನಗೇ ವಾಪಾಸ್ ಸಿಕ್ಕಿದ್ದೂ ಉಂಟು...
ಸಂಕ್ರಾಂತಿಯದಿನ ಅದು ನಮ್ಮದೇ ದಿನ...ಆ ದಿನ ಆಬ್ಲಿಗೆ...ಅಂದರೆ ಕನಕಾಂಬರ ಹೂ ಮುಡಿಯಲೆಬೇಕಂತೆ,,,ಅದು ಆ ಹೊತ್ತಿಗೆ ಅರಳುವ ಹೂವು...ನಮ್ಮಕಡೆ ಪ್ರತಿ ಮನೆಯಲ್ಲೂ ಮಾರು..ಅಲ್ಲದಿದ್ದರೂ ಮೊಳ  ಅಬ್ಬಲಿಗೆ  ಸಿಕ್ಕೆಸಿಗುತ್ತೆ...ಅದಲ್ಲದಿದ್ದರು...ಆಡುಸೋಗೆ  ಹೂವು ಅಬ್ಬಲಿಗೆಯಂತೆ ಕಾಣುವ ಬಿಳಿ ಹೂ ..ಅದನ್ನು ನನ್ನ ಸೋದರತ್ತೆ ಅಕ್ಕರೆಯಿಂದ ದಂಡೆ ಕಟ್ಟಿ ನನ್ನ ನಾಗರ ಜಡೆಗೆ  ಮುಡಿಸಿ...ಸಿಂಗಾರ 
ಮಾಡುತ್ತಿದ್ದನ್ನು ಮರೆಯಲಾದೀತೇ..??ನಂತರ ಮನೆ ಮನೆ ತಿರುಗಾಡಿ ...ಪುಟ್ಟ ಸ್ಟೀಲ್ ಡಬ್ಬಿ ಖಾಲಿ ಆಗುತ್ತೇನೋ ಅನ್ನೋ ಭಯದಲ್ಲೇ..ನಾಲ್ಕೇ ಕಾಳು  ಕೊಟ್ಟು ನನ್ನ ಡಬ್ಬಿ ,ನಿನ್ನ ಡಬ್ಬಿ ಅಂತ ತಂಗಿ ನಾನೂ ಜಗಳ ಮಾಡುತ್ತ ..ರಸ್ತೆಲೇ ಮಾತು ಬಿಟ್ಟು...ಮತ್ತು ದೋಸ್ತಿ ನೂ ಆಗಿ ಮನೆಗೆ ಮರಳುತ್ತಿದ್ದ ದೃಶ್ಯ...ಇವತ್ತಿಗೂ ನಿಚ್ಚಳ .......
ಮತ್ತೊಂದು ವಿಶೇಷ  ಅಂದ್ರೆ ಸಂಕ್ರಾಂತಿಯ ಜಾತ್ರೆಗಳು....ನಮ್ಮೂರಿಂದ  ೫-೬ ಮೈಲಿ ದೂರ ಇರೋ ಸಾಲಗಾಂವಿ ಯಲ್ಲಿ ಬಾಣನ್ತೆವ್ವ ದೇವಿ ಯಾ ಜಾತ್ರೆ,ದನಗಳ ಸಂತೆ  ಆಗುತ್ತೆ ...ಅಲ್ಲಿ ಮಾವಿನ ತೋಪಿನ ನಡುವೆ  ಅಂಗಡಿ ಗಳು ...ಎಷ್ಟ್ ಚಂದ...ಅಲ್ಲೇ ಊಟ ಕಟ್ಟಿಕೊಂಡು ಹೆಗೆಡೆರ್ ಅಡಿಕೆ ತೋಟದಲ್ಲಿ  ಕೂತು ಊಟ ಮುಗಿಸಿ...ಜೋಕಾಲಿ..ಮಿರ್ಚಿ ಭಜಿ ,,,ಕಬ್ಬಿನಹಾಲು ,,,ಮಂಡಕ್ಕಿ ಖಾರದಾಣಿ. ತಂದು ಒಂದಷ್ಟನ್ನು ಕಟ್ಟಿಸಿ ಕೊಂಡು ಬಂದರೆ...ಇನ್ನೊಂದ್ ಜಾತ್ರೆ ಬರೋತನ್ಕ ಅದರ ಉಮೇದಿ ಜಾರಿಯಲ್ಲಿರುತ್ತೆ,,,,ಮತ್ತು ಎಷ್ಟೋ ''ಚಾಳಿ ಟೂ ''ಗಳು ಮತ್ತೆ ಗೆಳೆತನ ವಾಗಿ ಮಾರ್ಪಡುವ ಸದವಕಾಶ ಈ ಹಬ್ಬದಲ್ಲಿ  ಬಹಳ ....
ಹೈಸ್ಕೂಲು ಮುಗಿಯೋ ಹೊತ್ತಿಗೆ  ಈ ಜಾತ್ರೆ ಗೆ ಹೋಗೋ ಉತ್ಸಾಹ  ಕಡಿಮೆ ಆಗುತ್ತ  ಬಂತು ..ಅದಕ್ಕೆ ಕಾರಣ ..ಮತ್ತೆ ಯಾವತ್ತಾದ್ರು ವಿವರಿಸ್ತೀನಿ..........ಕಾಲೇಜ್ ಗಳಲ್ಲಂತು ಇಲ್ಲವೇ ಇಲ್ಲ ಅನ್ನೋಷ್ಟು ಕಡಿಮೆ ಎಳ್ಳು,ಕಡಿಮೆ ತಿರುಗಾಟ ,,ಅಬ್ಬಲಿಗೆ  ಮುಡಿದದ್ದು ಕಡಿಮೆಯೇ...
ಹಾ ಮರೆತೇ  ಬೆಳಗಾವಿ,,,ಸೋಲ್ಹಪುರ್  ಗಳಲ್ಲಿ ಮಕ್ಕಳಿಗೆ ಬೊರೆ ಹಣ್ಣು ಮಂಡಕ್ಕಿಯ ಸ್ನಾನ ಮಾಡಿಸಲಾಗುತ್ತೆ...ಸಂಜೆಗೆ ಆರತಿ ಮಾಡುವುದು ಇದೆಯಂತೆ...ಇದು ನನ್ನ ಅತ್ತೆಯ ತವರುಮನೆಯ ನೆನಪಿಂದ ಹೆಕ್ಕಿದ್ದು...
ಆದರೆ ಈಗ ಈ ಉತ್ಸಾಹ ಇಲ್ಲ....ನನಗೇ ಇಲ್ಲವೋ??ನನ್ನ ವಾರಗೆಯವರೆಲ್ಲರಿಗೆ ಹೀಗೆಯೋ??ಅಥವಾ ಈಗಿನ ದಿನಮಾನದ ಮಕ್ಕಳಲ್ಲಿ ಈ ಹಬ್ಬಗಳ ಬಗ್ಗೆ ಆಕರ್ಷಣೆ ಕಡಿಮೆ ಆಗಿದೆಯೋ ಗೊತ್ತಿಲ್ಲ...ಒಟ್ಟಿನಲ್ಲಿ ಸಂಕ್ರಮಣ ವೆ ಏಕೆ ಯಾವ ಹಬ್ಬಗಳಲ್ಲೂ ಮೊದಲಿನ ಸ್ವಾರಸ್ಯ ಇಲ್ಲ ಅನಿಸುತ್ತೆ ..ನಾವು ದೊಡ್ಡವರಾಗಿ ಬಿಟ್ವ???ಅಥವ ನಮ್ಮ ಮಕ್ಕಳಿಗೆ ಈ ಹಬ್ಬಗಳ  ನಿಜವಾದ ರುಚಿಯನ್ನು ಉಣಿಸಲು ವಿಫಲವಾದೆವ  ಗೊತ್ತಿಲ್ಲ...ಯಾಕೋ ನೀರಸ  ಅನ್ನೋ ವಂಥ ವಾತಾವರಣ...
ನನಗನಿಸಿದ ಮಟ್ಟಿಗೆ ..ಶಹರದ ಗಾಳಿ ಬಹು ಜೋರಾಗೆ ಬೀಸಿದೆ...ಮೊದಲಿನವರ ತಾಳ್ಮೆ,ಸಹನೆ ,ಇರದು ನಮ್ಮಲ್ಲಿಲ್ಲ...ಹಬ್ಬಗಳೆಂದರೆ ನಮ್ಮ ಮನಸಿಗೆ ಬರುವುದು ಎರಡೇ ವಿಷಯ,,,೧)ಹಬ್ಬ ಯಾವ ವಾರ ಬಂದಿದೆ...(ಇದು ಸರದಿ ರಜೆಗಾಗಿ )....೨)ಈ ಬಾರಿಯ ರಜೆಯಲ್ಲಿ ಯಾವ ಬಾಕಿ ಕೆಲಸ ಪೂರೈಸ ಬಹುದು ಅಥವಾ ಎಷ್ಟು ವಿರಮಿಸ ಬಹುದು...
ಹೀಗೆ  ಮುಂದುವರಿದರೆ...ಒಂದು ದಿನ  ನಮ್ಮ ಹಬ್ಬಗಳು ಕೇವಲ ಕ್ಯಾಲೆಂಡರ್  ನಲ್ಲಿ ಕೆಂಪು ಅಕ್ಷರವಾಗಿ ಉಳಿದು ಹೋಗುತ್ತೇನೋ...ಅಲ್ಲವೆ??.....ಹೊಸವರ್ಷದ ಮೊದಲ ಪೋಸ್ಟ್ ಇದು...೧೨ ದಿನಗಳ ನಂತರ ..ಈ ಬಾರಿಯಾದರೂ ಆಲಸ್ಯದ ಸೂತಕ ತೊಳೆದು ಹೋಗಿದೆ ಅನ್ಕೋತೀನಿ....
ಬ್ಲಾಗ್  ಸ್ನೇಹಿತರೆಲ್ಲರಿಗೂ ಸಂಕ್ರಮಣದ  ಶುಭಾಶಯಗಳು,,,, 

Saturday, December 18, 2010

ಹಕ್ಕಿ,ಹಾವು ಮತ್ತು ನಾವು

ಅಮ್ಮ ಬೆಳಿಗ್ಗೆ ನೇ ಹೇಳಿದ್ರು ...ಗೊರಟ್ಟಿಗೆ ಗಿಡಕ್ಕೆ ಒಂದು ಹಕ್ಕಿ ಗೂಡು ಕಟ್ಟಿದೆ ಅಂತ, ನನಗೆ ಅದನ್ನ ನೋಡೋ ತನಕ ಸಮಾಧಾನ ಇಲ್ಲ ...ಜಿಟಿ ಜಿಟಿ ಮಳೆ. ನಮ್ಮೂರಲ್ಲಿ ಮಳೆ ಬಂತು ಅಂದ್ರೆ ಕಾಲು ಹುಗಿದು ಹೋಗೋ ಕೆಸರು ಗುಂಡಿ...ಆದ್ರೂ ಅದನ್ನ ತೋರಿಸು ಅಂತ ಅಮ್ಮನ ಹಿಂದೆ ಹೋದೆ ...ಅಮ್ಮ ಪುಟ್ಟ ಗೊರಟ್ಟಿಗೆ ಗಿಡದಲ್ಲಿ ಅದರಷ್ಟೇ ಪುಟ್ಟ ಗೂಡೊಂದನ್ನು ತೋರಿಸಿದರು..ಆ ದಿನ ಖಾಲಿ ಇತ್ತು ಹಕ್ಕಿ ಯಾವುದು  ಅಂತ ನೋಡಬೇಕಲ್ಲ...?
ಮರುದಿನ ಮುಂಜಾನೆ ಮತ್ತೆ ನಮ್ಮ ವೀಕ್ಷಣೆ ಆರಂಭ ಆಯಿತು...ಅಮ್ಮ ನನಗಿಂತ ಮುಂಚೆ ಏಳ್ತಾಳೆ ಅದಕ್ಕೆ ಮುಂದಿನ ಯಾವ ಸುದ್ದಿ ಇದ್ದರು ಆಕೆ ಕಡೆ ಇಂದಾನೆ ಸಿಗೋದು ನನಗೆ...ಆ ದಿನದಿಂದ ಅದು ನಮ್ಮ ದಿನಚರಿ ಆಯ್ತು..
ಒಂದು ವಾರದೊಳಗೆ ಅಲ್ಲಿ ಬಂದು ಹೋಗೋ ಪುಟ್ಟ ಹಳದಿ ಹೊಟ್ಟೆಯ ಕಂದು ಮೈ ಬಣ್ಣದ ಹಕ್ಕಿ ದಂಪತಿಗಳು ನಮ್ಮ ಕಣ್ಣಿಗೆ ಕಾಣಿಸಿ ಕೊಂಡವು.ಮತ್ತೆರಡು ದಿನ ಬಿಟ್ಟು ಅಮ್ಮ ಮಲಗಿದ ನನ್ನ ಎಬ್ಬಿಸಿ ''ಎರಡು ಮೊಟ್ಟೆ ಹಾಕಿದೆ ನೋಡು ಬಾ,,'' ಅಂದ್ರು ನಾನೂ ಓಡಿದೆ ಪುಟಾಣಿ ಮೊಟ್ಟೆಗಳು ಅವು ಕೂಡ ಕಂದು ಬಣ್ಣದ್ದು...ಆ ದಿನದಿಂದ ದಿನಾಲೂ ಅವುಗಳದ್ದೊಂದು ಫೋಟೋ ತೆಗೆಡಿದುತ್ತಿದ್ದೆ..೨ ರಿಂದ ೩.೪ ಮೊಟ್ಟೆಗಳ ತನಕ ....ಇಗ ಮೊಟ್ಟೆ ಯಾವಾಗ ಒಡೆದು ಪುಟ್ಟ ಮರಿಗಳು ಹೊರ ಬರುತ್ತವೆ ಅನ್ನೋ ಕಾತರ...
ಅದಾದ ಮತ್ತೊಂದು ವಾರ ಮೊಟ್ಟೆಗಳು ಸುಮ್ಮನೆ ಗೂಡಿನಲ್ಲಿ ಮಲಗಿದ್ದವು..ಹಕ್ಕಿಗಳು ನಾವು ಬಂದ ಕೂಡಲೇ ಓಡಿ ಹೊಗ್ತಿದ್ವು...ನಾವು ಇತ್ತ ಬಂದ ಕೂಡಲೇ..ಮತ್ತೆ ಮೊಟ್ಟೆಗೆ ಕಾವಲು...
ಆದಿನ ಮೊದಲ ೨ ಮೊಟ್ಟೆ ಬಿರುಕು ಬಿಟ್ಟಿದ್ದನ್ನು ನೋಡಿ ಏನೋ ಉಲ್ಲಾಸ...ಆದ್ರೆ ಪಪ್ಪಾ ಮತ್ತು ಅಮ್ಮ ಇಬ್ಬರು ಬೈದರು'' ಮನುಷ್ಯರ ವಾಸನೆ ಬಂತು ಅಂದ್ರೆ ಅವು ಮೊಟ್ಟೆ ಮುಟ್ಟಲ್ಲ ಹತ್ತಿರ ಹೋಗಬೇಡಿ ''ಸರಿ ಆ ದಿನ ಫೋಟೋ ಇಲ್ಲ .....ಆದ್ರೆ ಮರುದಿನ ಯಾರಿಗೂ ಗೊತ್ತಿಲ್ಲದಂತೆ ಗೂಡಿನ ಹತ್ತಿರ ಹೋದರೆ ೩ ಮರಿಗಳು...
ಇನ್ನೊಂದು ದಿನ ದ ಅಂತರ ದಲ್ಲಿ ೪ ಮರಿಗಳು ಹೊರ ಬಂದವು.....ಆಹಾರಕ್ಕೆ ಬಾಯಿ ತೆರೆದರೆ ಪುಟ್ಟ ಹೂವುಗಳು ಅರಳಿದಂತೆ ಅನಿಸ್ತಿತ್ತು...
ಎಷ್ಟ್ ಬೇಗ ಅವಕ್ಕೆ ರೋಮ ಮೂದಿದವೆಂದರೆ ಮೊದಲಿನ ರೂಪ ನೆನೆಪಿಸಿ ಕೊಳ್ಳಲು ಮೊದಲಿನ ಫೋಟೋ ನೋಡಬೇಕಿತ್ತು...
ಇನ್ನೇನು ಮತ್ತೊಂದು ವಾರದಲ್ಲಿ ಅವು ಬಾನಿಗೆ ....ಈ ಅನುಭವ ನನಗೆ ಪೂರ್ಣಚಂದ್ರ ತೇಜಸ್ವಿ ಅವರ ಸುಸ್ಮಿತ ಮತ್ತು ಹಕ್ಕಿ ಮರಿ ಪಾಠ ನೆನಪಿಸ್ತಿತ್ತು..
ಎಷ್ಟು ಬೇಗ ಬೆಳೆದವು ಒಂದು ತಿಂಗಳಲ್ಲಿ .....ಅವುಗಳು ಕನಸುತ್ತಿರಬೇಕು..ನಾವು ಹಾರ್ತೀವಿ ಅಮ್ಮ ಅಪ್ಪನಿಗಿಂತ ಮೆಲ್ಸ್ತರ ದಲ್ಲಿ ....ಆದರೆ ಅಂದು ಕೊಂಡಿದ್ದೆಲ್ಲ ಆಗುತ್ತ???
ಆದಿನ ನಾ ಇರಲಿಲ್ಲ...ತಂಗಿ ಫೋನ್ ನಲ್ಲಿ ಹಕ್ಕಿ ಮರಿಗಳನ್ನು ಹಾವು ತಿಂತಿದೆ ...ನಮಗೂ ಏನು ಮಾಡೋಕೆ ಆಗ್ತಿಲ್ಲ ..ಅಪ್ಪ ಅಮ್ಮ ಹಕ್ಕಿಗಳು ಕೆಟ್ಟದಾಗಿ ಚೀರ್ತಿವೆ ಅಂದಳು ..ನಂಗೆ ಈಡಿ ದಿನ ಅದೇ ತಲೆಯಲ್ಲಿ...ಛೇ ಏನಾಯಿತು ಇದು ....
ಹಕ್ಕಿಗಿಂತ ಹಾವು ಬಲಶಾಲಿ ನಿಜ ಆದ್ರೆ ಹಾವಿಗಿಂತ ನಾವು ಮಿಗಿಲಲ್ಲವೇ??
ನಾವು ಉಳಿಸಬಹುದಿತ್ತು ಅದನ್ನ ....ಅದಕ್ಕೆ ಪಪ್ಪಾ ಹೇಳಿದ್ರು''ಜೀವ ಸಂಕುಲಕ್ಕೆ ಅವದ್ದೆ ಒಂದು ನಿಯಮ ಇದೆ...ನೀ ಇಲ್ಲಿ ಹಾವನ್ನು ಹೊಡೆದು ಹಕ್ಕಿ ಮರಿಯನ್ನ ಉಳಿಸಿದರೆ ಅಲ್ಲಿ ಹಾವಿನ ಮರಿಯು ಇರಬಹುದೇನೋ ಅಲ್ವೇ??''ಹಾವಿನ ಮರಿ ಅವುಗಳ ಜೊತೆ ಇರಲ್ಲ..ನಾನೆಂದೆ...''ಇದು ಉದಾಹರಣೆ..ಅಷ್ಟೇ..ನಿನಗೆ ಅದರೊದಿಗೆ ಭಾವನಾತ್ಮಕ ಸಂಭಂಧ ...ಹಾವಿಗೆ ತನ್ನ ಆಹಾರ..''

ಪಪ್ಪ್ ನ ತರ್ಕ ನನಗೇಕೋ ಇಷ್ಟಾ ಆಗ್ಲಿಲ್ಲ...ಬೇಜಾರು ಕೆಲದಿನಗಳಲ್ಲಿ ಕಡಿಮೆ ಆಗುತ್ತ ಬಂತು..ಮತ್ತೊಂದು ಹೊಸ ಮುಂಜಾನೆ ..''ಅಮಿತಾ  ಮತ್ತೆ ಪೇರಳೆ ಮರಕ್ಕೆ ಗೂಡು.''ಅಂತ ಅಮ್ಮ ಕೂಗಿದರು..ಆದ್ರೆ ಆದಿನ ನಾನೆ ನನ್ನ ಗೂಡು ಅರಸಿಕೊಂಡು ಸಾವಿರಾರು ಮೈಲಿ ದೂರ ಹಾರಲಿದ್ದೆ...

ಕಾಡುವ ಘಮಗಳು -೨

  • ಮಧ್ಯಾನ್ಹ ಹೊತ್ತು ಆಕಾಶವಾಣಿ ಬಿತ್ತರಿಸುವ ೮೦ ರ ದಶಕದ ಹಾಡುಗಳು.ಮತ್ತು ಕುಂದಾಪುರದ ಕೋಣಿಯಲ್ಲಿ ಅಜ್ಜಿ ಕೊದ್ದೆಲ್ ಮತ್ತು ಬಟಾಟೆ ಪದಾರ್ಥಕ್ಕೆ ಹಾಕುತ್ತಿದ್ದ ಬೆಳ್ಳುಳ್ಳಿ ಒಗ್ಗರಣೆ ಘಮ...ಈಗಲೂ ಆ ಹಾಡುಗಳನ್ನು ಕೇಳಿದಾಗ ಆ ಹಿತವಾದ ಘಮ ಅಜ್ಜಿ ಮನೆ ..ನನ್ನ ಮುದ್ದಿಸಿ ಅಟ್ಟಕ್ಕೇರಿಸಿ ಇಟ್ಟಿರುವ ಅಜ್ಜಿ ನೆನೆಪಾಗಿ ಬಿಡುತ್ತಾರೆ....
  • ದುಂಡುಮಲ್ಲಿಗೆ...ಅದು ಯಾವಕಾಲದಲ್ಲೂ ನನಗೆ ನೆನೆಪಾಗಿ ಕಾಡುವುದು ಹಳೆಮನೆಯ ಹಿತ್ತಲಲ್ಲಿ ಹಬ್ಬಿದ್ದ ಹಂದರದ ಬಿಳಿ ಚಿಕ್ಕೆಗಳಂತೆ...ಬೇಸಿಗೆಯ ಬಿಸಿಗಾಳಿ ಅದರೊಂದಿಗೆ ದುಂಡು ಮಲ್ಲಿಗೆಯ  ಘಮ...ತುಳಸಿ ಕಟ್ಟೆಯಮೇಲೆ ಕುಳಿತು ಬೆಳದಿಂಗಳ ಬೆಳಕಲ್ಲಿ ನನ್ನ ಉದ್ದ ಕೂದಲ ನೆರಳು ನೋಡಿ ಖುಷಿ ಪಡುವ ಕ್ಷಣ ...ಅಂಗಳದಲ್ಲಿ ಕೂತು ಬೆಳದಿಂಗಳೂಟ ಮಾಡುವ ಆ ಉಮೇದಿಯ ದಿನಗಳು...ಈಗ ಹಳೆಮನೆಯು ಇಲ್ಲ ಮಲ್ಲಿಗೆ ಹನ್ದರವು ಇಲ್ಲ ಘಮ ಮಾತ್ರ ಹಾಗೆ ಉಳಿದು ಹೋಗಿದೆ..
  • ಆಕೆಯ ಹೆಸರು ಡೀನಾ ಉತ್ತರಕನ್ನಡದ ಕೊಂಕಣಿಗರ ಸಂಸ್ಕೃತಿ ಯಾ ಬಗ್ಗೆ PHD ಅಧ್ಯಯನ ಮಾಡುತ್ತಿದ್ದಳು..ನಾನಿನ್ನು ಆಗ ೩ ನೆ ತರಗತಿ..ಆಕೆ ನಂಗೆ ನೆನಪಾಗೋದೆ ಆಕೆ ಹಾಕಿಕೊnaಳ್ಳುತ್ತಿದ್ದ ಒಂದು ಸುಗಂಧದಿಂದ...
  • ಮಗುವಿನ ಘಮ ...ನಾ ನನ್ನ ಬದುಕಲ್ಲಿ ಮೊದಲು neನೋಡಿದ ಮಗು ಅದು ನನ್ನ ರಾಣಿ ಅಂತ ಕರೆಯುವ ಸುಲೋಚನ ಅತ್ತೆ ..ಆಕೆಯ ಮಗು ...ಅದರ ಮುದ್ದು ಕೈಗಳು ಕೆಂಪು ಕಟ್ಟಿದ ಕಾಲು ,ಮಗು ಒಂದು ವಿಸ್ಮಯದ ಲೋಕ ...ಅನಿಸಿತ್ತು ನನಗೆ.ಎಲ್ಲಕ್ಕಿಂತ ಹೆಚ್ಹಾಗಿ ಅದರ ಹತ್ತಿರ ಬರುತ್ತಿದ್ದ ಬೇಬಿ ಪೌಡರ್ ಘಮ,ಮೈಗೆ ಹಚ್ಹುವ ಕೆಂಪು ಬೇರಿನ ಎಣ್ಣೆ......ಸ್ನಾನ ಮಾಡಿ ಬಂದ ನಂತರ ಹಾಕುವ ಲೋಭಾನ ....ಗಂಧ ದ ಸಾಣೆಯಲ್ಲಿ ತೇಯುವ ಬಜೆ ಬೇರಿನ ಪರಿಮಳ...ಎಳೆಮಗು ನನಗೆ ನೆನಪಾಗೋದೆ ಹಾಗೆ.
  • ಮಾವಿನಕಾಯಿ..ಹ್ಮ್ಮ್ಮ್ ನೆನಪು ಬಂತೆಂದರೆ ಹಿಂದೆ ನೆನಪಾಗೋದು ವಾರ್ಷಿಕ ಪರೀಕ್ಷೆಗಳು ..ಯುಗಾದಿ ಹಬ್ಬ....ಗೆಳೆಯರೊಂದಿಗೆ  ನೀರು ಇಂಗುತ್ತಿರುವ ಹೊಂಡ ,ಕೆರೆಗಳಿಗೆ ಮೀನು ಹಿಡಿಯಲು ಹೋಗುವುದು...ಆ ಸಮಯದಲ್ಲಿ ಉದುರುವ ಬೂರುಗದ ಬೀಜಗಳು...ಮನೆಯಲ್ಲಿ ಪ್ರತಿದಿನ ಕಡ್ಡಾಯ ಎಂಬಂತೆ ಮಾಡುವ ಮಾವಿನಕಾಯಿ ಅಡುಗೆಗಳು..ಇನ್ನು ಏನೇನೋ...
ಈ ಘಮಗಳ ಕಥೆ ಮುಗಿಯುವಂಥದ್ದಲ್ಲ ....ಹೇಳಿದರೆ ಹಾಗೆ ಹೇಳ್ತಾನೆ ಹೋಗಬಹುದು.....ಮನೆಗೊಂದು ಘಮ ...ಒಲಿದ ಮನಸಿಗೊಂದು ,ಮುನಿದ ಮನಸಿಗೆ ಮತ್ತೊಂದು ಘಮ ಓಲೈಕೆಗೆ ಇನ್ನೊಂದು ಘಮ ...ಹೀಗೆ ಬದುಕೆಲ್ಲ ಘಮದ ಸೆರಗಲ್ಲಿ .....ನೆನಪಿನ ಘಮದಲ್ಲ್ಲಿ ........

Monday, December 13, 2010

ಕಾಡುವ ಘಮಗಳು ......1

ಮನುಷ್ಯನಿಗೆ ದೇವರು ಕೊಟ್ಟ ಮಹತ್ತರ ಉಡುಗೊರೆ ಮೂಗು..ಅದಿಲ್ಲದಿದ್ದರೆ ಪ್ರಕೃತಿಯ ಅದೆಷ್ಟೋ ಸ್ವಾರಸ್ಯ ನಮ್ಮ ಅರಿವಿಗೆ ಬರುತ್ತಿರಲಿಲ್ಲವೇನೋ...ಅದಕ್ಕಂತ ದೇವರಿಗೆ special thanks ಹೇಳಲೇ ಬೇಕು ....ಈ ಮೂಗಿರುವುದರಿಂದಲೇ..ಅಲ್ವೇ ಪ್ರತಿಯೊಂದು ಘಟನೆ ಪ್ರತಿಯೊಂದು ವ್ಯಕ್ತಿ ,ಹೂವು ,ಪ್ರಾಣಿ,ಒಂದೊಂದು ಘಮ ದಿಂದ ನಮ್ಮ ಸ್ಮರಣೆಯಲ್ಲಿ ಉಳಿದು ಬಿಡುತ್ತಾರೆ ....
ನನ್ನ ಬಾಲ್ಯ ದಿಂದಲೂ ನನಗದು ಅಭ್ಯಾಸ..ಪ್ರಾಯಶಃ ಪ್ರತಿಯೊಬ್ಬರಿಗೂ ಇರುತ್ತದೋ ಏನೋ ಗೊತ್ತಿಲ್ಲ....ಹೊಸ ಸ್ಥಳಗಳು .ಹೊಸ ಜನರು ,ಕೆಲವೊಮ್ಮೆ ಘಟನೆಗಳು ಘಮಗಳೊಂದಿಗೆ ಬೆಸೆದು ನನ್ನ್ನ ಮನಸಿನಲ್ಲಿ ಅಚ್ಚಾಗಿ ಬಿಡುತ್ತದೆ...ಅಂಥದ್ದೇ ಕೆಲವನ್ನು ಬರೆದಿಡುವ ಉಮೇದಿನಲ್ಲಿದ್ದೇನೆ .......

  • ಇದು ಎಲ್ಲರಿಗು ಆಗಿರೋ ಅನುಭವ...ಮೊದಲ ಮಳೆ ಬಂದಾಗ ಬರೊ ಹಸಿಮಣ್ಣ ವಾಸನೆ...ವಾಸನೆಯೊಂದಿಗೆ ನೆನಪುಗಳು..ನಾವು ಸಿರಸಿ ರಸ್ತೆಯ ಮನೆಯಲ್ಲಿರುವಾಗ ...ಸೋರುತ್ತಿದ್ದ ಮಾಳಿಗೆ,ಅಲ್ಲಲ್ಲಿ ಪಾತ್ರೆಗಳನ್ನಿಡುತ್ತಿದ್ದುದು,ಅದೇ ಸಮಯಕ್ಕೆ ಅಮ್ಮ ಮಾಡಿ ಕೊಡುತ್ತಿದ್ದ ಸಬ್ಬಸಿಗೆ ಪಲ್ಯ ಅಕ್ಕಿ ರೊಟ್ಟಿ..ಕೆಲವೊಮ್ಮೆ ಕದ್ದು ಮುಚ್ಹಿ ಮಾಡುತ್ತಿದ್ದ ಕೆರೆಮೀನಿನ ಸಾರು,ಅಕ್ಕಿ ಹಪ್ಪಳ...ಮಳೆ ನಿಂತ ಮೇಲೆ ಹಿತ್ತಲಲ್ಲಿ ಬರುತ್ತಿದ್ದ ಕಂಚಿ ಮರದ ಎರಡನೇ ಬೆಳೆಗೆ ಬಂದ ಹೂವಿನ ವಿಲಕ್ಷಣ ಘಮ ....ನೀರಲ್ಲಿ ಹಾಕಿಟ್ಟ ಕಳಿಲೆ...ಹಲಸಿನ ತೊಳೆ,ಮಾವಿನಕಾಯಿ ,ಅಡಿಗೆಗಳು.....ಹ್ಮ್ಮ್ಮ್ !!!!!!
  • ದೇವಿಮನೆ ಘಟ್ಟ...ಅದು ನೆನಪಾಗೋದೆ ಅದರ ಕಾಡು  ಹೂಗಳ  ಘಮದಿಂದ...ಅದು ಶಿರಸಿ ಮತ್ತು ಕುಮಟೆ ಪೇಟೆ ಗಳನ್ನೂ ಸೇರಿಸುವ ಪುಟ್ಟ ಕಾಡಿನ ಹಾದಿ ಅಂದುಕೊಂಡು ನಾ ಆ ೬೬ ಮೈಲು ಗಳನ್ನೂ ಬರಿ ಕಾಡು ನೋಡುತ್ತಾ  ಕಳೆದು ಬಿಡುತ್ತಿದ್ದೆ ,ಇನ್ನೇನು ಅಘನಾಶಿನಿ ಬಂದೆ ಬಿಡ್ತಾಳೆ ....ಆಕೆಯ ಹೆಸರನ್ನು ಕೇಳಿದ ಕೊಡಲೇ ನೆನಪಾಗೋದು ಹಸಿ.ತಾಜಾ ಮೀನಿನ ಘಮ...ಜೊತೆಗೆ ಕೆಂಪು ಮಣ್ಣು ...(ಮೀನು ತಿನ್ನದವರಿಗೆ ಈ ಘಮದ ಭಾಗ್ಯ ಇಲ್ಲ ..ಮೂಗಿಗೆ ಕರವಸ್ತ್ರ)
  • ಮಂಗಳೂರು ಮಲ್ಲಿಗೆ.....ಈ ಘಮ ಎಂದಕೂಡಲೇ ನೆನೆಪಗೋದು south canara ಮದುವೆಗಳು ...ಬೇಸಿಗೆಯ ಬೆವರಿನಲ್ಲು ಜಗಮಗಿಸುವ ಸೀರೆ ಉಟ್ಟು ..ಬಸ್ಸಿಗೆ ಕಾದು ಜನ ಜಂಗುಳಿಯಲ್ಲಿ ಭೋಜನ ಮುಗಿಸಿ ಅಲ್ಲೇ ಕಾಮೆಂಟ್ ಒಗೆದು ಬರುವ ನಾರೀಮಣಿಗಳು.ಮತ್ತು ಚಿಕ್ಕವರಿದ್ದಾಗ ತಲೆತುಂಬ ಮಲ್ಲಿಗೆ ಮುಡಿಸಿ ಕನ್ನಡಿಯ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದು ..ಒಣಗಿ ಹೋದರೂ ಘಮ ಬಿಡದ ಆ ಮಲ್ಲಿಗೆಯ ಸಾರ್ಥಕತೆ 
  • ಉದಬತ್ತಿ (ಅಗರಬತ್ತಿ)........ಕೆಲವು ಅಗರಬತ್ತಿಗಳು ಎಷ್ಟು ಮರೆತರು ಆ ಘಟನೆ ಯೊಂದಿಗೆ ನೆನೆಪಿನಲ್ಲೇ ಘಮಘಮಿಸುತ್ತವೆ...ಚವತಿ ಹಬ್ಬದಂದು.ಪಪ್ಪ್ ಯಾವುದೊ ಸಿಟ್ಟಿನಲ್ಲಿ ನಮಗೆ ಹೊಡೆದದ್ದು...ಪರೀಖ್ಸೆ ಹೊತ್ತಿಗೆ ವಾಂತಿ ಭೇದಿ ಶುರುವಾಗಿ ಆಸ್ಪತ್ರೆಯ ಅತಿಥಿ ಆಗಿದ್ದು ...ಆ ಸಮಯದಲ್ಲಿ ಹಚ್ಹುತ್ತಿದ್ದ ಬತ್ತಿಯ ಘಮ ಈಗ ಆಘ್ರಾನಿಸಿದರು ಮತ್ತೆ ವಾಕರಿಕೆ ಬರುವುದಂತೂ ನಿಜ...
  • ಬೆಂಗಳೂರಿನ ಬೀದಿಗಳಲ್ಲಿ ಕಾಫಿ ಘಮ ...ಅವನೊಂದಿಗೆ ಹಸಿದ ಹೊಟ್ಟೆಯಲ್ಲಿ ಲಾಲಬಾಗ್ ಸುತ್ತಾಡಿ ..ಕೊನೆಯಲ್ಲಿ ನಾಚಿ ನಾಚಿ ಹಸಿದ ವಿಷಯ ಹೇಳಿ ಅಕ್ಕಿರೊಟ್ಟಿ ತಿಂದಿದ್ದು .ಬೈಸಿ ಕೊಂಡಿದ್ದು...ಎದೆತುಂಬಿ ಹಾಡುವೆನು..,ಎಂದು ಮರೆಯದ ಹಾಡು,ಮನತುಂಬಿ ಹಾಡುವೆನು ಕಾರ್ಯಕ್ರಮಗಳ  ಚಿತ್ರೀಕರಣ...(ಮುಂದುವರಿಯುವುದು.....)

Friday, December 10, 2010

ಗೆಳೆಯನ ಕವಿತೆಗಳು...

ಭಾವ ಜೀವಿಗಳಿಗೆ..ಉಡುಗೊರೆ ಅಂದ್ರೆ ಏನಾದ್ರೂ ಆದೀತು ...ನವಿಲುಗರಿ ,ಮಲ್ಲಿಗೆ ದಂಡೆ,ಹೊಳೆಯಲ್ಲಿ ನೆನೆಯುತ್ತ ಕುಳಿತ  ಸಪಾಟು ಕರಿಕಲ್ಲು,ಚಿತ್ರವಿದ್ದ ಕಪ್ಪೆಚಿಪ್ಪು,ಇವುಗಳಲ್ಲೂ ಬಹುಪಾಲು ಪುಸ್ತಕಗಳು ,ಪತ್ರಗಳು ....ನಾನಿಲ್ಲಿ ಬರುವ ಮುಂಚೆ ನನಗೆ ಬಂದ ಅಂತ ಭಾವನಾತ್ಮಕ ಉಡುಗೊರೆಗಳಲ್ಲಿ ಗೆಳೆಯ ಬರೆದ ಕೆಲ ಕವಿತೆಗಳನ್ನು ನಿಮ್ಮೊಂದಿಗೂ ಹಂಚಿಕೊಳ್ಳೋಣ ಅನ್ನೋ ಯೋಚನೆ ಓದಿ ಹೆಂಗಿವೆ ಹೇಳಿ...

ಒಲವ ಚಾದರಿನೊಳಗೆ
ಒಲವ ಚಾದರಿನೊಳಗೆ
ಚಲುವ ಕನಸುಗಳು
ಕಾಲುಚಾಚಿ ಕನವರಿಸುತಿದೆ
ಎಲ್ಲೋ ಇರುವ ನಿನ್ನ ನೆನೆದು........

ಹೊಂಟ ಹಕ್ಕಿಸಾಲ
 ಹಿಂದಿಂದೆ ಕಣ್ಣ ಕೀಲಿಸಿ
ನಡೆದರೂ...
ಬಲಿಯದ,ಪ್ರೀತಿ ರೆಕ್ಕೆಗೆ ;
ನಿನ್ನ ಪ್ರೀತಿ ಶಕ್ತಿಯದೆ ನೆನೆಪು...!

ಭಾವನಾ....
ಲೋಕದ ಭಾವ -ಬಂಧುರದಿ
ಒಲವೆನ್ನಲಾರದ ದ್ವಂದ್ವದ
ಮೌನಕ್ಕೂ....
ಮಾತಿನ ಚಡಪಡಿಕೆ ..

ಹಾಡೊಮ್ಮೆ,ನಗುವೊಮ್ಮೆ ..
ಸುಮ್ಮನೆ ಮಾತೊಮ್ಮೆ
ನಿನ್ನ ಪರಿಗಿದೋ ಎದೆತಾಳ ಗಪ್ ಚಿಪ್ ..
ನೀ ಮಾತ್ರ ಸರಾಗ ....

ಒಲವ ಚಾದರ ಹೊದ್ದಾಗಿದೆ..
ಆಸೆ ನಿದ್ದೆ ಹತ್ತಾಗಿದೆ..
ಕನಸ ಕುದುರೆ ಏರಿ ಬರೊ ನಿನ್ನ ಕನವರಿಕೆಯೊಂದೆ ..
ನನ್ನ ಮುಂದಿರೋ ಚಿತ್ರ...
 
 ೨.
ಯಾರೋ ಸಿಕ್ಕರು
ಚಂದ್ರ ಮುಖಿಯಂತೆ ,
ಮತ್ಯಾರೋ ಸಿಕ್ಕರು
ಕಥೆಒಳಗಿನ ಅಪ್ಸರೆಯಂತೆ
ಯಾರನ್ನ ಕಣ್ಣ ರೆಪ್ಪೆಯೋಲು ಕಾದಿದ್ದೆವೋ ..ಅವರೆ
ಕಣ್ಣೀರ ಹನಿಯಂತೆ ಹೊರ ನಡೆದರು
.೩

ಕಣ್ಣೇರು ಇರದಿದ್ದರೆ
ಕಂಗಳು ಇಷ್ಟು ಸುಂದರ ಅನಿಸುತ್ತಿರಲಿಲ್ಲ ..
ನೋವೆ ಇರದಿದ್ರೆ ..
ಖುಷಿಗೆ ಬೆಲೆಯೇ ಇರ್ತಿರ್ಲಿಲ್ಲ
ಬೇಡದೆ ದೇವರು ಕೊಟ್ಟರೆ ಪ್ರಾರ್ಥನೆ ಭಕ್ತಿಗೆ ಗೆ ಅರ್ಥವೇ ಇರುತ್ತಿರಲಿಲ್ಲ...

        -೪
ಕಣ್ಣ ದಾರಿಯ ತುಂಬಾ ,
ನಿನ್ನ ನೆನಪ ಮೈಲುಗಲ್ಲು,,,,
ಹಳೆ ಹಾಡುಗಳ ನಿಲ್ದಾಣಗಳು..
ಪ್ರೀತಿ ಮಾತ್ ಸಾಲು ಮರಗಳು
..................ಎಲ್ಲಾ..........
ನೆನಪಾಗುತ್ತಿವೆ ...
ಹೇಳು ಕವಿತೆಯಂಥ ಹುಡುಗಿಯೇ
ಬದುಕಿನ ಯಾವ ತಿರುವಿನಲ್ಲಿ
ನನಗಾಗಿ ಕಾದು ನಿಂತಿರುವೆ ...
ದಣಿದರೂ...
ದೂರದೂರಿನವರೆಗೂ
ನಡೆದೇ ಬರುವೆ ಕಾಯುವೆಯಾ//????
        -ಸಂತೇಬೆನ್ನೂರು ಫೈಜ್ನಟ್ರಾಜ್

Wednesday, December 8, 2010

ಹೊಸ ಯುಗದ ಮಕ್ಕಳು ....

ನನ್ನ ತಂದೆ ಮಾಡಿದ ಅಭ್ಯಾಸ ಅದು ದಿನ ಕಥೆ ಹೇಳೋದು.ನನ್ನಿಂದ ಶುರು ಆದ ಈ ರೂಡಿ ನನ್ನ ಮಗನಿಗೂ ಬಂತು...ಭಾರತ ದಲ್ಲಿದ್ದಾಗ ನನಗೆ ಯಾವುದೇ ತಕರಾರು ಗಳಿರಲಿಲ್ಲ ...ಆದ್ರೆ ಈಗ ಈ ಕಥೆ ಹೇಳೋ ಪ್ರವರ ನನಗೆ ಬಹಳ ಕಿರಿ ಕಿರಿ ತರ್ತಿದೆ ....
ಯಾವುದೊ ಕಾಲದಲ್ಲಿ ನೋಡಿದ ಫಿಲ್ಮ್ಒಂದರ ಕಥೆ ಕೇಳಿ ನಾ ಒಂದು ಸೀನ್ ಬಿಡದೆ ಕಣ್ಣಿಗೆ ಕಟ್ಟಿದಂತೆ ಹೇಳಬಲ್ಲೆ ಆದ್ರೆ ಮಕ್ಕಳ ಕಥೆಗಳು ಹಾಗಲ್ಲ ಅದಕ್ಕೆ ಬೇರೇನೆ ಶಕ್ತಿ ಬೇಕು ಕಥೆಯ ಮಧ್ಯ ಅವರು ಕೇಳೋ ಮುಗ್ಧ ,ಉದ್ಧಟ,ಪ್ರಶ್ನೆ ಗೆ ಉತ್ತರ ಕೊಡ್ಬೇಕು...ಅದು ನಿಜಕ್ಕೂ ಕಷ್ಟದ ಕೆಲಸ...ಕೆಲವೊಮ್ಮೆ ಹೇಳಿದ ಕಥೆಯನ್ನೇ ಹತ್ತುಬಾರಿ ಹೇಳ್ಬೇಕು.  ಒಂದು ಪದ ತಪ್ಪಾದರೂ ' ನೀ ಆಗ ಹೇಳಬೇಕಾದರೆ ಅದನ್ನ ಹೇಳಿರಲಿಲ್ಲ ಸುಳ್ಳ್ ಕಥೆ ಹೇಳ್ತೀಯ.ನನಗೆ' ಅನ್ನೋ ಪದವಿ ಬೇರೆ ...ಅಷ್ಟು ಕಥೆ ಗಳನ್ನ ಹುಡುಕಿ ತರಬೇಕಲ್ಲ...?????

ಹಾಗೆ ನಾನು ನನ್ನ ಶಾಲಾ ದಿನಗಳಲ್ಲಿ  ಅಕ್ಕವರಿಂದ ಕೇಳಿದ ಒಂದು ಕಥೆಯನ್ನು ನನ್ನ ಮಗನಿಗೆ ಹೇಳಿದೆ.........ಆ ಕಥೆ ಹೀಗಿದೆ
ರಾಮಪ್ಪ ಮತ್ತು ಭೀಮಪ್ಪ ಒಬ್ಬ ಗುರುಗಳ ಹತ್ತಿರ ವಿದ್ಯಾಭ್ಯಾಸಕ್ಕಾಗಿ ನಿಂತಿರುತ್ತಾರೆ ..ಅವರ ವಿದ್ಯಾರ್ಜನೆ  ಮುಗಿದ ದಿನ ಗುರುಗಳು ಅವರಿಬ್ಬರನ್ನು ಕರೆದು ಪುಟ್ಟ ಚೀಲದ ತುಂಬಾ ಕಡಲೆ ಬೀಜವನ್ನು ಕೊಟ್ಟು ನಿಮಗೆ ಒಳ್ಳೆದಾಗಲಿ ಇದರೊಂದಿಗೆ ನನ್ನ ಆಶಿರ್ವಾದ ವಿದೆ..೫ ವರ್ಷಗಳ ನಂತರ ನೀವು  ಮತ್ತೆ ಬಂದು ನನ್ನ ಭೇಟಿ ಮಾಡಿ  ಎಂದು ಹೇಳಿ ಬಿಳ್ಕೊಡುತ್ತಾರೆ   
ಹೀಗೆ ಹೊರಟ ಗೆಳೆಯರು ತಮ್ಮ ತಮ್ಮ ಊರು ತಲಪಿಕೊಳ್ತಾರೆ .ರಾಮಪ್ಪ ಗುರುಗಳು ಕೊಟ್ಟ ಕಡಲೆ ಬೀಜಗಳನ್ನ ದೇವರ ಮುಂದಿಟ್ಟು ಶೃದ್ಧೆ ಯಿಂದ  ದಿನ ಪೂಜಿಸುತ್ತಾನೆ..ಮತ್ತೆ ತನಗೆ ಒಳ್ಳೆದಾಗಲಿ ಅಂತ ಬೇಡಿಕೊಳ್ಳುತ್ತಾನೆ..................
ಇತ್ತ ಭೀಮಪ್ಪ  ಗುರುಗಳು ಕೊಟ್ಟ ಕಡಲೆ ಬೀಜ ಗಳನ್ನ ಬಿತ್ತಿ ಬೆಳೆತೆಗೆದು ವ್ಯಾಪಾರ ವ್ಯವಹಾರ ದಲ್ಲಿ ಪಳಗುತ್ತಾನೆ ೫ ವರ್ಷಗಳಲ್ಲಿ ದೊಡ್ಡ ವ್ಯಾಪಾರೀ ಎನಿಸಿಕೊಳ್ಳುತ್ತಾನೆ...
ಆ ದಿನ ಅವರು ಗುರುಗಳನ್ನು ಭೇಟಿ ಮಾಡುವ ದಿನ ..ಇಬ್ಬರೂ ಶಿಷ್ಯರನ್ನು ಗುರುಗಳು ಸ್ವಾಗತಿಸುತ್ತಾರೆ..ರಾಮಪ್ಪ ಗುರುಗಳ ಬಗ್ಗೆ ಅಸಮಧಾನ  ತೋರಿಸುತ್ತಾನೆ ಎಷ್ಟು ಪೂಜೆ ಮಾಡಿದರು ತನಗೆ ಒಳ್ಳೆಯದಗಲಿಲ್ಲ ದರಿದ್ರ ಹೋಗಲಿಲ್ಲ ಅಂತೆಲ್ಲ ದೂರುತ್ತಾನೆ...
ಭೀಮಪ್ಪ ತಾನು  ಆ ಕಡಲೆ ಯನ್ನೇ ತನ್ನ ಬಂಡವಾಳ ಮಾಡಿಕೊಂಡು  ಧನವಂತನಾದದ್ದನ್ನು  ವಿವರಿಸುತ್ತಾನೆ...
ಗುರುಗಳು ಒಬ್ಬ ಶಿಷ್ಯನಿಗೆ ತಮ್ಮ ಮೆಚ್ಹುಗೆ ಸೂಚಿಸಿ ಆಶೀರ್ವದಿಸುತ್ತಾರೆ ಆ ಶಿಷ್ಯ ಯಾರು????

ಈ ಪ್ರಶ್ನೆಯನ್ನು ನಮಗೆ ಕೇಳಿದಾಗ  ನಾವು ರಾಮಪ್ಪ ಎಂದು ..ಅವನು ಗುರುಗಳ ಉಡುಗೊರೆ ಯನ್ನ ಅಷ್ಟು ವರ್ಷ ಕಾದುಕೊಂದು ಪೂಜಿಸಿದ್ದಾನೆ ಗುರುಗಳು ಅವನಿಗೆ ಪ್ರಸನ್ನರಾಗಿ ವರ ಕೊಡುತ್ತಾರೆ ...ಎಂದು ಹೇಳಿದ್ದೆವು...ಆಮೇಲೆ ಅಕ್ಕವರು ಅದು ತಪ್ಪು ಕಲಿತ ವಿದ್ಯೆ ಯನ್ನು ಜೀವನಕ್ಕೆ ಅನ್ವಯಿಸಿಕೊಂಡು ಮುಂದೆ ಬರುವವನೆ ನಿಜವಾದ  ಶಿಷ್ಯ.....ಅಂದ್ರು ನಮಗೆ ಮನಸಲ್ಲೇ...ಆಲೋಚನೆ ''ಛೆ ನಾನ್ ಯಾಕೆ ಇ ಉತ್ತರ ಆಲೋಚನೆ ಮಾಡಲಿಲ್ಲ...ಅಕ್ಕವರನ್ನು ಪ್ರಸನ್ನ ಮಾಡಲು ಹೋಗಿ ತಪ್ಪು ಉತ್ತರ ಹೊಳೆಯಿತಲ್ಲ  ಛೆ....'' ಅಂತೆಲ್ಲ ............



ನಿನ್ನೆ  ಇದೆ ಕಥೆಯನ್ನ ನನ್ನ ಮಗನಿಗೆ ಹೇಳಿದೆ ..ಮತ್ತು ಅಕ್ಕವರ ಸ್ಟೈಲ್ ನಲ್ಲೆ ಕೊನೆಗೆ ಪ್ರಶ್ನೆ ಕೇಳಿದೆ......ನನ್ನ ಮಗ ಹೇಳಿದ''ಭೀಮಪ್ಪ ಒಳ್ಳೆಯ ಶಿಷ್ಯ'' ನನಗೆ  ಅಕ್ಕವರು ಹೇಳಿದಂತೆ ಇವನಿಗೆ ವಿವರಣೆ ಕೊಟ್ಟು ಹೇಳಿ  ತಿಳಿದವಳು ಅನಿಸಿಕೊಳ್ಳುವ  ಹಂಬಲ  ಆದ್ರೆ ಇವನ ಉತ್ತರ ಕೇಳಿ ಮತ್ತೆ ಇರುಸು ಮುರುಸು... 


....ಯಾಕೆ? ಮತ್ತೆ ನನ್ನ ಪ್ರಶ್ನೆ...ಅಮ್ಮ ಅವನ ಹತ್ತಿರ ದುಡ್ಡು ಇದೆ ..ಅದಕ್ಕೆ.......  ಅವ ಹೇಳಿದ್ದು ಕೇಳಿ ಸ್ವಲ್ಪ ಹೊತ್ತು ಮಾತು ಹೊರಡಲಿಲ್ಲ.........ಅವತ್ತು ನಾವು  ೧ ನೆ ಕ್ಲಾಸ್ನಲ್ಲಿದ್ದೆವು  ನನ್ನ ಮಗನಿಗೆ ೪ ವರ್ಷ...
ಛೇ ನಾ ಅಷ್ಟು ಯೋಚಿಸ್ಲಿಲ್ವಲ್ಲ  ಅಂತ ಅನಿಸ್ತು..
ಬದಲಾದದ್ದು ಕಾಲವಾ? ಮಕ್ಕಳ ?ಯೋಚಿಸುವ ರೀತಿಯ?....ತಿಳಿತೀಲ್ಲ..ಹೊಸಯುಗ ಜನಿಸುವ ಮಗುವಿನ ತಲೆಯಲ್ಲೂ  ಏನೋ ನಮಗಿಲ್ಲದ  ಒಂದು ತಂತ್ರಾಂಶ  ಅಳವಡಿಸುತ್ತಿದೆ ಅನಿಸುತ್ತಿದೆ,,,,ಇರಲಿ ಮಕ್ಕಳು ನಮ್ಮವೇ  ಅಲ್ವಾ???

Friday, December 3, 2010

ಬೆಕ್ಕಿನ ಬಾಣಂತನ

ಆಕೆಯ ಹೆಸರು ಐಶ್ವರ್ಯ ,,,ಮನೆಯ ಹತ್ತಿರವಿದ್ದ ಫಾರೆಸ್ಟ್ ಡಿಪೋ ದಿಂದ ಹಾಡು ಬರುತ್ತಿದ್ದಾಗ..ನನ್ನ ಗೆಳತಿ ಮಂಗಳ ಕರೆದು.'ಅಮಿತಾ ನಿನಗೆ ಬೆಕ್ಕಿನ ಮರಿ ಬೆಕ??'ಅಂದ್ಲು...ಬೆಕ್ಕು ,ನಾಯಿ ಅಂದ್ರೆ ನಮ್ಮ ಜನ್ಮದ ಬಂಧುಗಳು ....ಮನೆಯಲ್ಲಿ ಬೆಕ್ಕಿನ ಮರಿ ಇತ್ತಾದರೂ ಅದನ್ನ ನೋಡಿದ ಮೇಲೆ ಇಲ್ಲವೆನ್ನಲು ಆಗಲೇ ಇಲ್ಲ ದಪ್ಪ ಬಾಲದ ಉದ್ದ ರೋಮದ ಆ ಬೆಕ್ಕಿನ ಮರಿಯನ್ನ ಎತ್ತ್ಕೊಂಡ್ ಬಂದೆ...ಆದ್ರೆ ನನ್ನ ಅಮ್ಮನಿಗೆ ಸಂಭಾಳಿಸೋದು ದೊಡ್ಡ ಕಷ್ಟ,,,ಅಮ್ಮನಿಗೆ ಅಡಿಗೆಕೊಣೆಯಲ್ಲಿ ಓಡಾಡೋ ಆ ಜೀವಿಯನ್ನ ಕಂಡರೆ ಅಷ್ಟಕ್ಕಷ್ಟೇ,,,ಅದಕ್ಕೆ ನಮ್ಮದೊಂದು ಪುಟ್ಟ ಡ್ರಾಮಾ ಟೀಂ ಇದೆ...ಬೆಕ್ಕಿನ ವಿಷಯ ಬಂದಾಗ ......ಹಿತ್ತಲ ಬಾಗಲಲ್ಲಿ ಬೆಕ್ಕನ್ನ ಬಿಟ್ಟು..ಮುಂದಿನ ಪಡಸಾಲೆಯಲ್ಲಿ ಏನು ಗೊತ್ತಿಲ್ಲದವರಂತೆ ಬಂದು ಕೂತು ಬಿಡ್ತೀವಿ..ಬೆಕ್ಕು ಮನೆಗೆ ಬಂದು ಸೇರಿದರೆ ಒಳ್ಳೇದು ಅನ್ನೋ ಒಂದು ನಂಬಿಕೆಯಲ್ಲೇ...ಅಮ್ಮ ಪಾಪ ಅದನ್ನ ಒಲ್ಲದ ಮನಸಲ್ಲೇ ಒಳಗೆ ಸೇರಿಸುತ್ತಾಳೆ ....

ಆಮೇಲೆ ಬೆಕ್ಕಿನ ತಲೆಗೆ ಎಣ್ಣೆ ಸವರಿ ಅಡಿಗೆ ಒಲೆಯ ಸುತ್ತ ೩ ಬಾರಿ ತಿರುಗಿಸಿದರೆ ಆ ದಿನದಿಂದ ಅದು ನಮ್ಮ ಬೆಕ್ಕು...ಹಾಗೆ ಬಂದನಂತರ ಅದಕ್ಕೆ ನಾಮಕರಣ ಸಾಮಾನ್ಯವಾಗಿ ಯಾವ ದಿನ ತಂದಿದ್ದೆವೋ ಆ ವಾರದ ಹೆಸರಿನ ಆರಂಭದ ಅಕ್ಷರ ದಲ್ಲೇ ಹೆಸರಿಡೋದು ನಮ್ಮ ಅಲಿಖಿತ ನಿಯಮ..ಆದ್ರೆ ಈ ಬಾರಿ ಆ ಬೆಕ್ಕಿನ ಮರಿಯ ಅದಾ,ನಜಾಕತ್, ನೋಡಿ ಅದಕ್ಕೆ ಐಶ್ವರ್ಯ  ಅನ್ನೋ ಹೆಸರಿಟ್ವಿ...

ಹಾಗೆ ಬಂದು ಸೇರಿದ ಬಿಲ್ಲಿ ನಮ್ಮ ಮನೆಯ ಎಲ್ಲರ ಮುದ್ದು...ಆಕೆಯನ್ನ ಹೇಗೆ ಮುದ್ದೆ ಮಡಿ ಹೇಗೆ ತಿರುಚಿ ಮಲಗಿಸಿದರು ಆಕೆ ಅದೇ ಆಕಾರ ದಲ್ಲಿ ಮಲಗಿರುತ್ತಿದ್ದಳು..ಮೈ ಶಾಖ್,ಅಡುಗೆ ಒಲೆಯ ಹಿಂದಿನ ಬಿಸಿಗೆ ಮಲಗುವುದೆಂದ್ರೆ ಅದಕ್ಕೆ ಪ್ರಾಣ...
ದಿನಕಳೆದಂತೆ ಇನ್ನು ಚಂದ ಇನ್ನು ಆಕರ್ಷಣೀಯವಾಗಿ ಕಾಣೋ ಆಕೆಯ ಹೊಟ್ಟೆ ದಿನದಿಂದ ದಿನಕ್ಕೆ ದೊಡ್ಡದಾಗುತ್ತಾ ಬಂತು...ನಮಗೆಲ್ಲ ಖುಷಿ ,,,,,ಮುದ್ದಿನ ಮಗಳು ಬಾಣಂತನಕ್ಕೆ ಬಂದಂತೆ..
ಬೆಕ್ಕುಗಳು ಕತ್ತಲಲ್ಲೇ ಮರಿ ಹಾಕುತ್ತವೆ..ಹಾಕಿದ ಮೊದಲಮರಿ ತಿಂದುಹಾಕುತ್ತವೆ,೭ ಜಾಗೆ ಬದಲಿಸುತ್ತವೆ...ಹೀಗೆ ಏನೇನೋ ನಂಬಿಕೆಗಳಿವೆ...ಬೆಕ್ಕಿನ ಬಗ್ಗೆ .....ಆದರೆ ಅದೆಲ್ಲ ಸುಳ್ಳು..ಅನ್ನೋದು ನಂಗೆ ಮನವರಿಕೆ ಮಾಡಿಕೊಟ್ಟಿದ್ದೆ ಐಶ್ವರ್ಯ ...

ಆದಿನ ನಮ್ಮ ಹಳೆಮನೆ ಮೂಲೆ ಕೋಣೆಯಲ್ಲಿ ಓದುತ್ತ ಕುಳಿತಿದ್ದೆ...ಐಶು ಬಂದು ನನ್ ಕಾಲ್ ಮೇಲೆ ಮಲಗಿತು ಅದು ಯಾವತ್ತಿನ ರೂಡಿ..ಆದರೆ ಇವತ್ತು ಪ್ರತಿದಿನದಂತಲ್ಲ ಏನೋ  ಹೇಳೋರ್ ಥರ ಪುಸ್ತಕ ವನ್ನ ಪರಚೋದು ..ಕಾಲುಒಮ್ಮೆಲೇ ನೆಟ್ಟಗೆ ಮಾಡಿಒದರೋದು..ಹಾಗೆಲ್ಲ ಮಾಡೋಕೆ ಶುರು ಮಾಡಿತು..

ಅದು ಮಾಡ್ತಿರೋದ್ ನೋಡಿದ್ರೆ ಅನಿಸ್ತಿತ್ತು ಅದಕ್ಕೆ ಹೊಟ್ಟೆನೋವು ಬಂದಿದೆ ....ಮರಿ ಹಾಕಲು ಅದಕೆ ಕತ್ತಲೆ ಬೇಕಲ್ಲ ??ನ ಎದ್ದು ಹೋಗಿ ಬಿಡಲ..ಅನ್ನೋ ಯೋಚನೆ ಬಂತಾದರೂ..ನನ್ನ ಮೈ ಮೇಲಂತೂ ಮರಿ ಹಾಕಲ್ಲ ಅನ್ನೋ ಒಂದು ವಿಶ್ವಾಸ ದೊಂದಿಗೆ ಅದನ್ನ ತೊಡೆಯಮೇಲೆ
ಮಲಗಿಸಿ ಕೊಂಡು ಸುಮ್ಮನೆ ಅದರ ತಲೆ ಹೊಟ್ಟೆ ಕೊರಳನ್ನ ಸವರುತ್ತ ಕುಳಿತೆ ....
ನನ್ನ ಅರಿವಿಗೆ  ಬರೋ ಮುಂಚೆಯೇ  ನನ್ನ ತೊಡೆಮೇಲೆ ಬಿಲ್ಲಿ ಮರಿ ಹಾಕಿಬಿಟ್ಟಿತ್ತು...ಆ ಅನುಭವ ಎಲ್ಲರಿಗು ಸಿಗಲ್ಲ...ಕೆಲವರಿಗೆ ಹೇಸಿಗೆ ,ಕೆಲವರಿಗೆ ಅಯ್ಯೋ ರಾಮ್ ರಾಮನ ನೆನಪು....ಕೆಲವರಿಗೆ ನನ್ ಡ್ರೆಸ್ ಚಿಂತೆ ,,,,,ಆದ್ರೆ ನನಗೆ ಆ ಅನುಭವ ಎಷ್ಟು ರೋಮಾಂಚನ ತಂದಿತ್ತು ಅಂದ್ರೆ ಮುಂದಿನ ೩ ಮರಿಗಳು ಅದು ನನ್ ತೊಡೆಮೇಲೆ ಹಾಕಿ..ಕೆಳಗೆ ನಿಂತು ಹೊಕ್ಕಳಬಳ್ಳಿ ತನ್ನ ಹಲ್ಲಿನಿಂದ ತುಂಡು ಮಾಡಿ ಮತ್ತೆ     ತೊಡೆಮೇಲೆ ಬಂದು ಮಲಗ್ತಿತ್ತಾದ್ರು ..ನಾನು ಬಾರಿ ಅದು ಹುಡುಗಿ ಯಿಂದ ಅಮ್ಮ ಆಗಿ ಪರಿವರ್ತನೆ ಗೊಂಡ ರೀತಿ...ಅದನ್ನ ನಿರ್ವ್ಹಹಿಸೋ ಪರಿ ಕಂಡು ಮಾತೆ ನಿಂತು ಹೋದಂತಾಗಿದ್ದೆ ......

ಅದಕ್ಕೆ ಯಾರು ಹೇಳಿಕೊಟ್ಟರು??ಕಣ್ಣು ಬಿಡದ ಆ ಮರಿಗಳನ್ನು ತನ್ನ ಮೊಲೆಗೆ ಅಂಟಿಸಿಕೊಂಡು ಹಾಲುಣಿಸುವ ಪರಿ..ಮರಿಯ ಮಯ್ಯಸುತ್ತ ಇರೋ ಜಿಡ್ಡು ನೆಕ್ಕಿ ಅದನ್ನ ಶುಭ್ರ ಗೊಳಿಸೋ ರೀತಿ...ಪ್ರಕೃತಿ ಎಷ್ಟು ಅಧ್ಭುತ ಅಲ್ವಾ??ನನಗನಿಸಿದ ಮಟ್ಟಿಗೆ ಬೆಕ್ಕಿನ ಬಾಣಂತನ ದಷ್ಟು ಸ್ವಚ್ಹ ಶುಭ್ರ   ಮತ್ತ್ಯಾವ ಜೀವಿಯೂ ಮಾಡಿಕೊಳ್ಳಲು ಸಾಧ್ಯವೇ ಇಲ್ಲವೇನೋ......
ಏನೇ ಹೇಳಿ..ಇದೊಂದು ಜೀವಿತ ಕಾಲದ ಅಮೂಲ್ಯ ಅನುಭವ ...ಅದಕ್ಕೆ ಅಕ್ಷರ ರೂಪ ಕೊಡುವುದು ಕಷ್ಟ್ ಅನಿಸುತ್ತೆ ಆದ್ರೂ..ನೀವು ನನ್ನನ್ನ ಎಂದಾದರು ಭೇಟಿ ಆದ್ರೆ ಅದನ್ನ ಮಾತಲ್ಲಿ ವಿವರಿಸೋ ಪ್ರಯತ್ನ ಖಂಡಿತ ಮಾಡೇನು....
ಅಲ್ಲಾದ್ರೂ ನಾನೆ ಸೋಲ್ತೇನೆ...
ಐಶು ಈಗಿಲ್ಲ...ಆದ್ರೆ ಅವಳ ನೆನೆಪು ನನಗೇ ಹೆರಿಗೆ ನೋವು ಬಂದಾಗ..ತೀವ್ರವಾಗಿ ಕಾಡಿತ್ತು...ಹೀಗಿತ್ತು ನನ್  ಬೆಕ್ಕಿನ ಬಾಣಂತನದ ಕಥೆ..

Thursday, December 2, 2010

ಐರಿಶ್ ನಾಡಿನಲ್ಲಿ ನಾ..ಭಾರತದ ಕುವರಿ

ನೋಡನೋಡುತ್ತಲೇ ತಿಂಗಳು ಕಳೆಯಿತು ...ನಾ ಬರುವಾಗ ಇಲ್ಲಿನ ಮರಗಳು ಹಸಿರೆಂದೆರೇನು ಅನ್ನೋದು ನಮಗೆ ಗೊತ್ತೇ ಇಲ್ಲ ಅನ್ನೋ ಹಾಗೆ ಕೆಂಪು ಎಲೆಗಳನ್ನ ಹೊತ್ತು ಮಡಿ ಸೀರೆ ಉಟ್ಟು ಮದುವೆಗೆ ಹೊರತು ನಿಂತ ನೀರೆಯರಂತೆ   ಕಾಣುತ್ತಿದ್ದವು .ಆಗ ಇಲ್ಲಿ ಆಟೊಮ್ ತಿಂಗಳು ....
ಇಗ ಮರದ ಬಣ್ಣ ಬಿಡಿ ನೆಲವು  ಕಾಣದಷ್ಟು ಹಿಮ ಹೊದ್ದುಕೊಂಡಿದೆ...

ಇದೆಲ್ಲ ಹೊಸ ಅನುಭವಗಳು..ಮೊದಲ ಅನುಭವಗಳು..ಬದುಕಿನಲ್ಲಿ ಬರುವ ಪ್ರತಿ ಮೊದಲುಗಳು ಅವರ್ಣನೀಯ..ಹಾಗೆ ಇದುಕೂಡ...
ಮೊದಮೊದಲಂತೂ ಬಿಳಿಯರನ್ನು ನೋಡಿದರೆ ಹೆಂಗೋ ಅನಿಸೋದು .ಭಾರತ ದಲ್ಲಿ ಅವರನ್ನು ಕಂಡರೆ ಮಾತಾಡಿಸಿ ಗೆಳೆತನ ಮಾಡಿಕೊಂಡು ಅವರನ್ನು ಮನೆಗೆ ಕರೆದುಕೊಂಡು ಹೋಗಿ ಅಥಿತಿ ಸತ್ಕಾರ್   ಮಾಡುತ್ತಿದ್ದವಳು ನಾನೇನಾ ಅಂತ ನನಗೆ ಅನುಮಾನ .....

ಆದಿನ ಮಾರ್ಕೆಟ್ ಗೆ ಹೋದಾಗ ಇವರ ಹತ್ತಿರ ಅಂದೆ ಎಲ್ಲ ಹೋದರು ಈ ಬಿಳಿಯರೇ  ಕಾನಿಸುತ್ತಾರೆ.. ಸ್ವಲ್ಪ ದಿನ ಹೋದರೆ  ಕಣ್ಣು ಬಿಳಿ ಆಗುತ್ತೆ ಇವರನ್ನ ನೋಡಿ...ಅದಕ್ಕೆ ಇವರು 'ನೀ ಇರೋದು   ಅವರ ದೇಶದಲ್ಲೇ ಅನ್ನೋದು ನೆನಪಿಡಬೇಕು ನೀನು ಅಂದ್ರು...ಅದು ಹೌದಲ್ಲವೇ..ಅವರ ಮನೆಗೆ ಬಂದು ಅವರನ್ನ್ ನೋಡಿದರೆ ಕಷ್ಟ ಆಗುತ್ತೆ ಅಂತ ಹೇಳಿದ್ರೆ???

ಆದ್ರೆ ಒಂದ್ ವಿಷ್ಯ ವಿಚಿತ್ರ ಅನಿಸಿದ್ದು ....ಸೂರ್ಯ ಮುಳುಗದ ನಾಡು ಅಂತೆಲ್ಲ ಹೊಗಳಿಸಿಕೊಳ್ಳುವ ಇಂಗ್ಲೆಂಡ್ ದೇಶದಲ್ಲಿ ಸೂರ್ಯ ಬರೋದೆ ಅಪರೂಪ...ಪಾಪ ಅವನಿಗೂ ಛಳಿ. ಸ್ನೌ ಫಾಲ್ ,ನೋಡಿ ಬೇಜಾರ್ ಬಂದಿರಬೇಕು..
ಬಿಸಿಲು ಬಂದರೂ ಅದು ಮೈಗೆ ತಾಗಲ್ಲ....

ನನ್ನ ಅಜ್ಜಿ ಯಾವಾಗಲು ಹೇಳೋ ಗಾದೆ ಒಂದಿದೆ,'ಹೊಸ ಮಡಿಕೆ ಕೊಣ್ ಕೊಣ್ ' ಅಂತ ನನ್ನದು ಹಾಗೆ ಮಗುವಿನಂತೆ.ಅಚ್ಹರಿ ತವಕ ಕುತೂಹಲ ದಿಂದ ಹೊಸತನ ಬದುಕಲ್ಲಿ ಬಂದ ಬದಲಾವಣೆ ಸ್ವಾಗತಿಸುತ್ತಿದ್ದಿನಿ ..ಅದಕ್ಕೆ ಇಷ್ಟೆಲ್ಲಾ ವಿವರಣೆ...
ಸ್ವಲ್ಪ ದಿನದ ನಂತರ ಅದೇ ಜೀವನ ಅಭ್ಯಾಸ ಆಗಿ ಹೋಗುತ್ತೆ .....
ಪೌಂಡ್  ಗಳನ್ನ  ರೂಪಾಯಿ ಗೆ ಬದಲಾಯಿಸಿ...ಯಪ್ಪಾ ಇಷ್ಟಾ?ಅಂತ ಬಾಯಿ ಮೇಲೆ ಪೂರ್ತಿ ಕೈ ಇತ್ತು ಕಣ್ಣು ಅರಳಿಸೋದು ಇನ್ನು ಬಿಟ್ಟಿಲ್ಲ...ಅದು ಕಡಿಮೆ ಅದಾಗ ಮತ್ತೊಂದ್ ಪೋಸ್ಟ್ ...till than bye

Wednesday, October 6, 2010

Fwd: kalasige





ಪ್ರತಿ ರಜೆಯಲ್ಲೂ ಅಜ್ಜಿ ಮನೆಯಲ್ಲಿ ಕ್ಯಾಂಪ್ ಹಾಕಿದರೂ ಈ ಬಾರಿ ಅಜ್ಜಿ ಇಂದ ಉಪಯುಕ್ತ ಮಾಹಿತಿ ಪಡೆದ ಹೆಮ್ಮೆ ನನಗೆ..ಗೆಣಸಿನ ಹಪ್ಪಳ ಗಳನ್ನ ಮೆಲ್ಲುತ್ತ ಅಜ್ಜಿ ಜೊತೆ ಹರಟೆ ಹೊಡೆಯುತ್ತಿದ್ದಾಗ  ಪಕ್ಕದ ಮನೆಯಾಕೆ  ಕೊಡದಂತೆ ಹೊತ್ತು ತಂದ ಕಟ್ಟಿಗೆಯ ವಸ್ತುವೊಂದು ನನ್ನ  ಗಮನ ಸೆಳೆಯಿತು ,ಅಜ್ಜಿಯನ್ನ ಕೇಳಲು ಅವರು ಅದನ್ನ ಕಳಸಿಗೆ ಅಂತ ಹೇಳಿ  ಅದರ ವಿವರ ಕೊಡೋದಿಕ್ಕೆ ಪ್ರಾರಂಭಿಸಿದರು.
ಸೇರು,ಪಾವು, ಕಾಲುಪಾವು ಹೀಗೆ ಅನೇಕ ಅಳತೆ ಗಳನ್ನ ನಾವು ಕೇಳಿಯೇ ಇರ್ತೀವಿ ಕಳಸಿಗೆ ಕೂಡ ಭತ್ತವನ್ನ ಅಳೆಯಲು ಇರುವ ಮಾಪು 
೩ ಕಳಸಿಗೆ ಬತ್ತ ಹಾಕಿದರೆ ಒಂದು ಅಕ್ಕಿ ಮೂಟೆ ಆಗುತ್ತೆ ಅನ್ನೋದು ಇವರ ಲೆಕ್ಕಾಚಾರ. 
digital ಯುಗದಲ್ಲೂ ಕುಂದಾಪುರದ  ಪುಟ್ಟ ಹಳ್ಳಿ ಕೋಣಿ ಯಲ್ಲಿ  ಈ ಕ್ರಮದಲ್ಲೇ  ಜನಪದರು ಇನ್ನು ತಮ್ಮ ಕೃಷಿ ಕಾಯಕಕ್ಕೆ,ಮೆರಗು ನೀಡುತ್ತಿದ್ದಾರೆ
ಮತ್ತು ಸುತ್ತ ಮುತ್ತಲ ಜನರೆಲ್ಲಾ ಕಳಸಿಗೆ  ಒಯ್ಯಲು ಬರುವುದು  ನನ್ನ ಅಜ್ಜಿ ತಾರಮ್ಮನ ಮನೆಗೆ.
ಹಳೆಯ ವಸ್ತು ಗಳೆಲ್ಲ ಅಟ್ಟ ಸೇರಿ ಕಾಲ ವಾದರೂ ಈ ಕಳಸಿಗೆ ತನ್ನ ಅಸ್ತಿತ್ವ ಉಳಿಸಿಕೊಂಡಿದ್ದು  ಸಾಹಸ ವಲ್ಲದೆ ಮತ್ತೇನು ????