Sunday, June 15, 2014

ಹಿಂಗ್ಯಾಕೆ ಹಿಂಗ್ಯಾಕೆ...ಇದು ಮಿಡ್ ಲೈಫ್ ಕ್ರೈಸಿಸ್ ..



                                                                     
ಯಾಕೋ ಈ ನಡುವೆ ಮನಸು ಯಾವಾಗಲು ವಿಷಾದದ ನಡುಗಡ್ಡೆ. ಎಲ್ಲರೊಂದಿಗೆ ನಗುತ್ತ ಇರುತ್ತೇನೆ ಆದರೂ ಮನಸು ಮುಸು ಮುಸು  ಅಳುತ್ತದೆ. 

 ಏನೋ ಕಳೆದುಕೊಂಡ ಭಾವ ಹಾಗಂತ ನನಗ್ಯಾರು ಇಲ್ಲ ಅಂತಲ್ಲ ,ತುಂಬು ಕುಟುಂಬ ಪತಿ ಮಕ್ಕಳು ಎಲ್ಲರು ಇದ್ದಾರೆ  ನನ್ನ ಸುತ್ತ ಆದರೆ 

ನನ್ನೊಳಗಿಲ್ಲಾ  ,ನನ್ನ ಜೊತೆಗಿದ್ದವರೆಲ್ಲ ಅದೆಲ್ಲೋ ಮುಟ್ಟಿದ್ದಾರೆ ನಾನು ಇಲ್ಲೇ ನಿಂತು ಅವರನ್ನು ಬೆರಗುಗಣ್ಣಿಂದ ನೋಡುತ್ತೇನೆ ತುಳಸಿ ದೀಪ ಹಚ್ಚಿಟ್ಟು

 ಬರುವಾಗ ಸುಮ್ಮನೆ ತಾರೆಗಳನ್ನೊಮ್ಮೆ ನೋಡಿದಂತೆ ,ಅವರಿಗೆ ಆಗಿದ್ದು ನನಗೇಕೆ ಆಗಲಿಲ್ಲ ????ಬಹುಷಃ ನನ್ನ ಬದುಕಿನ ಆರಂಭವೇ ಸರಿ 

ಇರಲಿಕ್ಕಿಲ್ಲ..ನಾ ಹಲವು ವಿಷಯಗಳಲ್ಲಿ ತಪ್ಪು ನಿರ್ಧಾರ ಮಾಡಿದ್ದೆ ಅನಿಸುತ್ತೆ...ಇಂತಹ ನಿರರ್ಥಕ ಯೋಚನೆಗಳು ನಿಲ್ಲೋದೇ ಇಲ್ಲ . ಇಲ್ಲದ ಪ್ರಶ್ನೆಗಳು

 ಹುಟ್ಟುತ್ತಿವೆ  ಉತ್ತರ ಕೊಡುವವರು ಯಾರು ?ಎಲ್ಲರು ತಮ್ಮ ತಮ್ಮ ಬದುಕಲ್ಲಿ ಬ್ಯುಸಿ ,''ಅಮ್ಮ ನೀನಿಲ್ಲದೆ ಊಟವೇ  ಸೇರಲ್ಲ ಅನ್ನುತ್ತಿದ್ದ ಮಗ ಈಗೀಗ

 ''ಅಮ್ಮ ಏನಂತ ಅಡುಗೆ ಮಾಡ್ತೀಯ'' ಅಂತಾನೆ..'' ಮಗಳು ಮೊನ್ನೆ ಮೊನ್ನೆ ತಾನೆ ನೀ ಜಡೆ ಹಾಕಿದರೆ ಸರಿ ಆಗೋದು ಅಂದು ಜಗಳಕ್ಕೆ ಕೂಡೋಳು

 ಇತ್ತೀಚಿಗೆ ಕೂದಲತ್ತ ಕೈ ಚಾಚಿದರೆ ಕಿಲೋಮೀಟರ್ ದೂರ ಹೋಗುತ್ತಾಳೆ..ನಿನಗೆನ್ ಗೊತ್ತು ???ಸುಮ್ಮನಿರಮ್ಮ ನಿಂಗ್ ಗೊತ್ತಾಗಲ್ಲ ಹಾಗೆಂದೇ

 ಇಬ್ಬರ ಮಾತುಗಳು ಆರಂಭವಾಗುತ್ತೆ , ಮತ್ತೆ ಇವರು ಅವರ ಜಗದಲ್ಲಿ ಕಳೆದುಹೋಗಿದ್ದಾರೆ ಮನೇ ನೋಡಲು ನಾನಿದ್ದೇನೆ ಅನ್ನೋ ಧೈರ್ಯದಲ್ಲಿ.ಒಮ್ಮೆ

 ಆ ಮನೆಕಯುವವಳ ಸ್ಥಿತಿ ಏನಾಗಿದೆ ಅಂತ ಕೂಡ ನೋಡದೆ ಹಾಯಾಗಿದ್ದಾರೆ  ಇತ್ತೀಚಿಗೆ ಇವರು ಟಿವ ನೋಡುತ್ತಾ ಒಂದು ಕಪ್ ಕಾಫಿ ಕೇಳಿದರು

 ಇಲ್ಲದ ಸಿಟ್ಟು ಬರುತ್ತೆ , ನಿಜ ಜಗತ್ತು ಓಡುತ್ತಿದೆ ನಾನು ಅದರ ವೇಗಕ್ಕೆ ಹೊಂದಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ ಆದರೆ ಮನಸು ರಚ್ಚೆ ಹಿಡಿದು

 ಅಳುವ ಮಗುವಾಗಿದೆ ನಾ ಒಂಟಿ ಅನ್ನೋ ವರಾತ  ಶುರು ಮಾಡುತ್ತೆ ಪದೇ ಪದೇ ...ಆಯುಷ್ಯ ಕಳೆಯುತ್ತಿದೆ , ಸೌಂದರ್ಯ ಕುಂದುತ್ತಿದೆ , ಕೆಲವೊಮ್ಮೆ

 ಗುರುತಿಲ್ಲದ ಜನರ ನಡುವೆ ಹೋಗಿ ಉಳಿದು ಬಿಡಲ?..ಯಾರಿಗೂ ಹೇಳದಂತೆ ಎಲ್ಲಿಗಾದರೂ ಹೋಗಿಬಿಡಲ ?? ಅನ್ನೋ ಆಲೋಚನೆಗಳು

 ....ಬದುಕನ್ನು ಮತ್ತೆ ಎಲ್ಲಿಂದ್ ಆರಂಭಿಸಲಿ  ನನ್ನನು ನಾ ಎಲ್ಲಿಂದ ಮತ್ತೆ ತಂದು ಕೊಂಡು ನನ್ನೊಳಗೆ ಸ್ಥಾಪಿಸಿಕೊಳ್ಳಲಿ ?? ಕೆಲವೊಮ್ಮೆ ನಾ ಬಹಳ

 ಸ್ವಾರ್ಥಿ ಆಗುತ್ತಿದ್ದೆನೇನೋ ಅನಿಸುತ್ತೆ , ಮತ್ತೊಮ್ಮೆ ಇಷ್ಟುದಿನ ನಾ ಇವರೆಲ್ಲರಿಗಾಗಿ ಬದುಕಿದೆ ಈಗ ನನಗಾಗಿ ಬದುಕುವ ಸಮಯ

 ಅನಿಸುತ್ತೆ..ಅನಿಸಿದ್ದಷ್ಟೇ ಕ್ಷಣ ಮತ್ತೆ ಅದೇ ವಿಷಾದ ಸುತ್ತಿಕೊಳ್ಳುತ್ತೆ .

೪೦ ರ ಹರೆಯದ ನನ್ನ ಪರಿಚಿತರೊಬ್ಬರು ತಮ್ಮ ಮನಸ್ಸನ್ನು ಹೀಗೆ ಎಳೆ ಎಳೆ ಯಾಗಿ ಬಿಚ್ಚಿಡುತ್ತಲೇ ಹೋದರು, ನಾನೂ ಸುಮ್ಮನೆ ಕೇಳುತ್ತಿದ್ದೆ ,ಅದಕ್ಕೆ ಸರಿಯಾಗಿ ಸಾಮಾಜಿಕ ಜಾಲ ತಾಣದಲ್ಲಿ  ನಾವೇ ಸೃಷ್ಟಿಸಿಕೊಂಡಿರುವ ಪುಟ್ಟ ಗುಂಪು  ಇದೆ ಅಲ್ಲಿ ಗೆಳತಿಯೊಬ್ಬಳು  ಇದೆ ವಿಷಯವನ್ನು ಪ್ರಸ್ತಾಪಿಸಿದ್ದಳು ಎಲ್ಲರ ಪ್ರತಿಕ್ರಿಯೆಗಳು ಒಂದೊಂದು ಬಣ್ಣದ ಗರಿಗಳಂತೆ  ಉತ್ತರಿಸಿದವರು ಎಲ್ಲರು ೪೦ರ ಆಸುಪಾಸಿನವರು ,ಬಹುತೇಕರು ಉದ್ಯೋಗಸ್ತರು ಸಮಾಜದ ಮುಖ್ಯವಾಹಿಸಿಯಲ್ಲಿರುವವರು ಅವರಿಗೆ ನಡುವಯಸ್ಸು ಮತ್ತು ಅದರ ಕಿರಿ ಕಿರಿಗಳು ಅಷ್ಟಾಗಿ ಕಾಡಿಸಿಲ್ಲ, ಅದರ ಕಾಟ ಯಾರಿಗೂ ತಪ್ಪಿಲ್ಲ ಆದರೂ ಅದರಿಂದ ಅವರು ತಮ್ಮಲ್ಲಿರುವ ಸೃಜನಶೀಲತೆ ,ವೃತ್ತಿಪರತೆ ಮತ್ತು ಆತ್ಮವಿಶ್ವಾಸದಿಂದ ಹೊರಬಂದಿದ್ದಾರೆ ಆದರೆ ಸಮಾಜದಲ್ಲಿರುವ  ಪ್ರತಿಯೊಬ್ಬ ಮಹಿಳೆಯ ದೃಷ್ಟಿಕೋನ ಭಿನ್ನ ಅವರು ಬದುಕು ನಡೆಸಿಕೊಂಡು ಬಂದ ರೀತಿ ಭಿನ್ನ ಬದುಕುತ್ತಿರುವ ರೀತಿ ಭಿನ್ನ  ಕೆಲವರನ್ನು ಈ ಸಮಯ ಅತಿಯಾಗಿ ಕಾಡುತ್ತದೆ,ಕೆಲವರಿಗೆ ತಮಗೆನಾಗುತ್ತಿದೆ ಅನ್ನುವ ಅರಿವೇ ಇಲ್ಲದಂತೆ ಜೊತೆಗಿರುವವರನ್ನು ಸಮಸ್ಯೆಗೆ ಸಿಲುಕಿಸುತ್ತಾರೆ..

ಏನಿದು ಮಿಡ್ ಲೈಫ್ ಕ್ರೈಸಿಸ್ ???
೪೦ ರ ಆಸುಪಾಸು ..ಇದು ಬದುಕಿನ ಸಂಧಿ ಕಾಲ , ಜವಾಬ್ದಾರಿಗಳನ್ನು ನಿಭಾಯಿಸುತ್ತಾ  ಬದುಕನ್ನು ಏಳುತ್ತಾ ಬೀಳುತ್ತಾ ಬದುಕುತ್ತ ಬಂದಾಗ  ಈ ಹಂತದಲ್ಲಿ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ ಉದ್ಯೋಗ ,ಸಂಸಾರ , ಭವಿತವ್ಯ ಎಲ್ಲದರ ಬಗ್ಗೆ ಒಂದು ಪ್ರಶ್ನೆ ಸಂಶಯ ಮತ್ತು ಅದರ ಸಾರ್ಥಕತೆಯ ಬಗ್ಗೆ ಪ್ರಶ್ನೆಗಳು ಹುಟ್ಟಲು ಆರಂಭವಾಗುತ್ತವೆ,,ಸ್ತ್ರೀ ಜೀವನದ ಬಹುಮುಖ್ಯ ಕಾಲಘಟ್ಟ ಇದು ಅವಳ ಮೆನೋಪಾಸ್ ಸಮಯವೂ ಹೌದು ,
ದೇಹದಲ್ಲಾಗುವ ಹಾರ್ಮೋನು ಬದಲಾವಣೆಗಳು ಮನಸಿನಲ್ಲಿ ಹಲವು ಗೊಂದಲ ಪ್ರಶ್ನೆ ಹುಟ್ಟಿಸಿ ಬದುಕಿನಲ್ಲಿ ಒಂದು ಬಗೆಯ ವಿಷಣ್ಣತೆ ತಂದಿಡುತ್ತದೆ. ಕೆಲವೊಮ್ಮೆ ಅತೀರೆಕದ ವರ್ತನೆ ಕಂದು ಬಂದರೆ ಕೆಲವರು ಮಂಜುಗಡ್ಡೆಯಂತೆ ಹೊರಗೆ ತಂಪು ಒಳಗೆ ಬೆಂಕಿಯಾಗುತ್ತಾರ , ಭಾರತದ ಕುಟುಂಬ ಪಧತಿ  ಹೆಂಡತಿಮೆಲೆಯೇ ಅವಲಂಬಿಸಿರುವ ಗಂಡ ಮತ್ತವರ ಕೆಲ ಅಭ್ಯಾಸಗಳು ಹೆಂಡತಿಗೆ ಕಟ್ಟಿ ಹಾಕಿದಂತ ಅನುಭವ ನೀಡುತ್ತದೆ    ಈ ನಡುವಯಸ್ಸು ತಂದಿಡುವ ಮಾನಸಿಕ ತುಮುಲಗಳು ಅವುಗಳಿಂದಾಗಿ ಹೊರಬರುವ ವೈಪರಿತ್ಯಗಳ ಕೆಲವು ಸಾಮಾನ್ಯ ಲಕ್ಷಣಗಳು ಇಂತಿವೆ.
  • ಉದ್ಯೋಗ ಬಿಟ್ಟು ಬಿಡುವ ಮನಸ್ಸು 
  • ಹಿಂದೆ ಅತಿ ಪ್ರೀತಿಯಿಂದ ಮಾಡುತ್ತಿದ್ದ ಕೆಲಸಗಳ ಬಗ್ಗೆ ಅಸಡ್ಡೆ .
  • ಯಾವ ಕೆಲಸವನ್ನು ಪೂರ್ತಿ ಮಾಡುವತ್ತ ತಗ್ಗುತ್ತಿರುವ ಗಮನ ,ಕುಂದುತ್ತಿರುವ ಏಕಾಗ್ರತೆ 
  • ವಿನಾಕಾರಣ ಕೋಪ ,ಮತ್ತು ಅಸಹನೆ 
  • ಇಷ್ಟು ದಿನ ಇಲ್ಲದ ಕೆಲವು ಸಾಹಸ ಪ್ರವೃತ್ತಿಗೆ ಇಳಿಯಲು ಹಪ ಹಪಿಸುವುದು (ಬೈಕ್ ಓಡಿಸುವುದು ,ಸ್ಪೋರ್ಟ್ಸ್ ಕಾರ್ ಖರೀದಿಸುವುದು,ಸಿಗರತೆ,ಮಧ್ಯ ಸೇವನೆ ,ಕ್ರೀಡೆ  ಹೊಸ ಬಗೆಯ ಸಂಗೀತ ಸಂಗೀತೊಪಕರಣ ನುಡಿಸುವ  ಮನಸು  ಟ್ರೆಕ್ಕಿಂಗ್ , ಮೊದರ್ನ್ ಡ್ರೆಸ್ಸಿಂಗ್ ಸೆನ್ಸ್  ..)
  • ನಿದ್ರಾ ಹೀನತೆ 
  • ಶಿಸ್ತು ರಹಿತ ಆಹಾರ ಕ್ರಮ 
  • ಸಾವಿನ ಕುರಿತು ಅತೀವ ಕೂತುಹಲ 
  • ಖಿನ್ನತೆ 
  • ಹೊಸದನ್ನೇನೋ ಮಾಡುವ ಉಮೇದಿ ಮತ್ತು ಅಷ್ಟೇ ಬೇಗ ಅದರಿಂದ ಹೊರ ಬರುವ ಮನಸ್ಸು..
  • ವಿವಾಹ ಬಾಹಿರ ಸಂಬಂಧಗಳ ಕುರಿತು ಆಸಕ್ತಿ 
  • ಇಷ್ಟುದಿನ ಪ್ರೀತಿಸಿದ ಕುಟುಂಬ  ಒಮ್ಮೆಲೇ ಬಂಧನ ಅನಿಸಲು ಆರಂಬಿಸುವುದು
  • ಪದೇ ಪದೇ ಕಾಡುವ ಒಂಟಿತನ 
  • ಕ್ಷಣ ಕ್ಷಣ ಬದಲಾಗುವ ಆಸಕ್ತಿಗಳು 
  • ಸಂಶಯ ಪ್ರವೃತ್ತಿ 
ಇವಷ್ಟೇ ಅಲ್ಲದೆ ಇನ್ನು ಹಲವು ಲಕ್ಷಣಗಳನ್ನು ಗುರುತಿಸಬಹುದು. ಇದನ್ನೆಲ್ಲಾ  ನೋಡುವಾಗ ಹಳೆಯ ದಿನ ಮಾನಗಳಲ್ಲಿ ಈ ವೈಪರೀತ್ಯ ಇರಲಿಲ್ಲವೇ?? ಎಂಬ ಪ್ರಶ್ನೆ ಮೂಡುವುದು ಸಹಜ.  ಆ ಸಮಯದ ಸಾಮಾಜಿಕ ಪರಿಸರ ಮತ್ತು ಬೆಳೆದು ಬಂದ ರೀತಿಯೇ ಅವರನ್ನು ಈ ಮಾನಸಿಕ ಸ್ತಿತ್ಯಂತರದಿಂದ ಪಾರು ಮಾಡುತ್ತಿದ್ದು , ಮತ್ತು ಆಕೆಗೆ ಆಯ್ಕೆ ಮಾಡುವ ಸ್ವಾತಂತ್ರ ಇದ್ದಿದ್ದು ಕೂಡ ಕಡಿಮೆಯೇ.

ಈ ಶತಮಾನದಲ್ಲಿ  ಶಿಕ್ಷಣ ,ವಿಜ್ಞಾನ  ಗಂಡು ಹೆಣ್ಣಿನ ಬದ್ಧತೆಯಲ್ಲಿ ಕಾಣುತ್ತಿರುವ ಕ್ರಾಂತಿಕಾರಕ ಬದಲಾವಣೆಗಳು , ಅಣು ಕುಟುಂಬ ಪದ್ಧತಿ ,ಇವೆಲ್ಲ ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ಬೆಳೆದು ಬಂದ ಸಾಮಾನ್ಯ ಮತ್ತು ಮನಶ್ರೀಮಂತಿಕೆ ಹೊಂದಿದ ಮಹಿಳೆಗೆ ನುಂಗಲಾರದ ತುತ್ತಾಗಿವೆ , ಇಷ್ಟವಾಗದ್ದನ್ನು ಕಷ್ಟ ಪಟ್ಟು ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತಿದೆ , ಮನೆ  ಮತ್ತು ಮನೆಯ ಸರ್ವತೋಮುಖ ಅಭಿವೃದ್ಧಿಯೇ ಜೀವನದ ಧ್ಯೇಯ ಎಂಬ ಆಲೋಚನೆಯೇ ತಲೆಯಲ್ಲಿತ್ತುಕೊಂಡ ಮಹಿಳೆಗೆ ಈ ಬದಲಾಗುವ ವಾತಾವರಣ ಅಬಧ್ರತೆ ತಂದಿಡುತ್ತದೆ . ಮತ್ತು ಅವಳ ಅಸ್ತಿತ್ವದ ಬಗ್ಗೆ ಪ್ರಶೆಗಳನ್ನು ಬಿತ್ತುತ್ತದೆ.
 ಅವಳಿಗರಿವಿಲ್ಲದಂತೆ ಅವಳ ದೈನಂದಿನ ಚಟುವಟಿಕೆಗಳ ಮೇಲೆ ಪ್ರಭಾವ ಬೀರಲು ಆರಂಭಿಸುತ್ತದೆ , ವಯಸ್ಸು ತಂದಿಡುವ ಬೊಜ್ಜು ,ಸಕ್ಕರೆಕಾಯಿಲೆ ,ಮಂಡಿನೋವು , ಮತ್ತಿತರ  ದೈಹಿಕ ತೊಂದರೆಗಳು ಮಾನಸಿಕ ಸ್ಥೈರ್ಯವನ್ನು ಕುಂದಿಸಿ ಬಿಡುತ್ತವೆ. ಹೆಚ್ಚುತ್ತಿರುವ ಖರ್ಚು , ಮನೇ ನಿಭಾಯಿಸುವ ಹೊರೆ ,ತಗ್ಗುತ್ತಿರುವ ಆಯುಷ್ಯ, ಸಿಗದ ಆನಂದ , ಬೆಳೆದು ತನ್ನ ಅಂಕೆಯಿಂದ ಹೊರ ಹೋಗುತ್ತಿರುವ ಮಕ್ಕಳು , ತಾನು ಯಾರಿಗೂ ಬೇಡವಾದವಳು ಎಂಬ ಮನೋಭಾವನೆ ಬೇಡ ಬೇಡವೆಂದರೂ ಮನದಲ್ಲಿ ಬೆಳೆಯತೊದಗುತ್ತದೆ. ವೃತ್ತಿನಿರತ ಮಹಿಳೆಯರಲ್ಲಿ ಕೆಲವೊಮ್ಮೆ ತಮ್ಮ ಜೊತೆಗಾರರು ಸಹೋದ್ಯೋಗಿಗಳು ಮೇಲ್ಮಟ್ಟಕ್ಕೆ ಹೋಗುತ್ತಿರುವುದು ಯೋಗ್ಯತೆ ಇದ್ಯಾಗ್ಯು ನಾವು ನಿಂತಲ್ಲೇ ನಿಂತು ಹೋಗಿದ್ದು ಅತೀವ ನೋವು ತರುತ್ತದೆ. ಅದರೊಂದಿಗೆ ಈ ಮುಂದಿನ ಕಾರಣಗಳು ಸೇರಿಕೊಳ್ಳುತ್ತವೆ 

ಸ್ವಂತಿಕೆ ಕಳೆದುಕೊಳ್ಳುವ ಭಯ 
೪೦ -೫೦ ರ ನಡುವಿನ ಹೆಂಗಳೆಯರ ಮನಸ್ಸಲ್ಲಿ ಪದೇ ಪದೇ ತಮ್ಮ ಅಸ್ತಿತ್ವದ ಬಗ್ಗೆ ಪ್ರಶ್ನೆಗಳೇಳುತ್ತವೆ ,ತಮ್ಮ ಜೀವನದ ಉದ್ದೇಶವಾದರು ಏನು ಎನ್ನುವ ಬಗ್ಗೆ ನಿರರ್ಥಕ ಆಲೋಚನೆ ಗಳು ಹುಟ್ಟಿಕೊಳ್ಳುತ್ತವೆ ಮಕ್ಕಳು ಬೆಳೆಯುತ್ತಿದ್ದಾರೆ,ಅವಳು ಹಿಂದೊಮ್ಮೆ ಅಂದುಕೊಂಡಂತೆ ಅವರವರ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ ,ಪತಿ ತನ್ನ ಕೋಟೆ ಕಟ್ಟುವ ಕೆಲಸದಲ್ಲಿ ನಿರತ ಆದರೆ ಇಷ್ಟುವರ್ಷದಿಂದ ರೂಡಿಸಿಕೊಂಡು ಬಂದ ಜೀವನಶೈಲಿ,ಮಾಡಿಕೊಂಡು ಬಂದ ಕೆಲಸಗಳಿಂದ ಹಟಾತ್ತನೆ ನಿವೃತ್ತಿ ಸಿಕ್ಕಿರುವುದು ಕೆಲವೊಮ್ಮೆ ಅತೀವ ಮಾನಸಿಕ ನೋವು ಕೊಡುತ್ತದೆ 

ಪತಿಯೂ  ಅಷ್ಟೇ ಪಾಲುದಾರ 
ಪತಿಯೇ ಪರದೈವ ಎಂದು ನಂಬುವ ನಾರೀಮಣಿ ಗಳ ಮನಸಲ್ಲಿ ಪತಿ ಒಬ್ಬ ಒಳ್ಳೆ ಸ್ನೇಹಿತನು ಆಗಬಲ್ಲ ಎಂಬವಿಚಾರವನ್ನು ಬೆಳೆಯಲು ಬಿಡದಂತೆ ಗಂಡಸರು ವರ್ತಿಸುತ್ತಾರೆ , ಕೆಲವೊಮ್ಮೆ ಇದೆ ಸಂದರ್ಭದಲ್ಲಿ ಪತಿಯ ನಡುವಯಸ್ಸಿನ ಹುಚ್ಚಾಟಗಳನ್ನು ಕಣ್ಣೆದುರೇ ಕಾಣುವ ಆಕೆಗ್ ಸಂಬಂಧದ ಮೇಲಿನ ವಿಶ್ವಾಸ ಸಡಿಲ ಗೊಳ್ಳುತ್ತದೆ 
                   ಈ ಕಾರಣಕ್ಕೆ ಹಲವಾರು ಬಾರಿ ವಿವಾಹ ಬಾಹಿರ ಸಂಬಂಧಕ್ಕೆ ಒಂದು ನಿಷ್ಕಲ್ಮಶ ಸ್ನೇಹಕ್ಕೆ ಹೆಣ್ಣು ಜೀವ ಹಾತೊರೆಯುತ್ತದೆ , ಅಲ್ಲಿ ದೈಹಿಕ ಸುಖಕ್ಕಿಂತ ತನ್ನ ಮಾತನ್ನು ಯಾರದ್ರೂ ಕೇಳಲಿ ನನ್ನೋಳಗನ್ನು ಅರಿಯಲಿ ಎಂಬ ತವಕ ಹೆಚ್ಚಿನದ್ದು ಎಂಬುದನ್ನು ಸಂಶೋಧನೆಗಳು ಪುಷ್ಟೀಕರಿಸಿವೆ. ಮಹಿಳೆಯ ಈ ಭಾವನೆಯ ಜೀಕು ಜೋಕಾಲಿಯ ಪಯಣದಲ್ಲಿ ಪತಿ , ಮಕ್ಕಳು  ಕುಟುಂಬದವರ  ಸಹಕಾರ ಅಗತ್ಯ . ಹಾಗೆಂದು ಇದು ಕೇವಲ ವಿವಾಹಿತ ಹೆಣ್ಣುಮಕ್ಕಳ ತೊಂದರೆ ಅಲ್ಲ , ಹೆಚ್ಚೋ ಕಡಿಮೆಯೋ ಈ ವಯಸ್ಸಿನ ಎಲ್ಲಾ ಹೆಂಗಳೆಯರು ಈ ಭಾವ ಬದಲಾವಣೆಯ ಹೊಸ್ತಿಲನ್ನು ದಾಟಿ ಹೋಗಲೇಬೇಕು. ಸಂಶೋದನೆಯ ಪ್ರಕಾರ ಹೆಂಗಸರು ಸರಿಸುಮಾರು ೪೬ನೆ ವಯಸಿಗೆ ಈ ನಡುವಯಸ್ಸಿನ ಕಿರಿಕಿರಿಗೆ ತುತ್ತಾಗುತ್ತಾರೆ ಮತ್ತು ಈ ಅವಧಿ ೨-೫ ವರ್ಷ , ಪುರುಷರಲ್ಲಿ ಇದು ೩-೧೦ ವರ್ಷಗಳಕಾಲ ಮನೆಮಾಡಿರುತ್ತದೆ

ಏನು ಮಾಡಬಹುದು ??
  • ನಿಮ್ಮ ವೈದ್ಯರನ್ನು ಭೇಟಿಮಾಡಿ 
 ಮೊದಲೇ ಹೇಳಿದಂತೆ ಈ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆ ನಡುವಳಿಕೆಯಲ್ಲಿ ಬದಲಾವಣೆ ತಂದಿಡುತ್ತದೆ.ಈ ನಿಟ್ಟಿನಲ್ಲಿ ತಿಳಿದವರ ಮಾರ್ಗದರ್ಶನ ಮನಸಿಗೆ ಎಷ್ಟೋ ನೆಮ್ಮದಿ ನೀಡುತ್ತದೆ ಜೊತೆಗೆ ಆಗುವ ಹಲವಾರು ದೈಹಿಕ ತೊಂದರೆಗಳು ಕೂಡ ಕಿರಿ ಕಿರಿ ತಂದೊಡ್ಡಬಹುದು ,ನಿಮ್ಮ ವೈದ್ಯರು ಇದಕ್ಕೆ ಪರಿಹಾರ ಸೂಚಿಸಿ ನಿಮ್ಮ ಕಳವಳ ಕಡಿಮೆ ಮಾಡುತ್ತಾರೆ , ತಕ್ಕುದಾದ ವೈದ್ಯಕೀಯ ಸಲಹೆ ಔಷದೊಪಚರ ಕೂಡ ನೀಡಬಹುದು,ಆದರೆ ಯಾವುದೇ ಕಾರಣಕ್ಕೆ ಸ್ವ ವೈದ್ಯರಾಗಬೇಡಿ ನೋವಿಗೊಂದು ಮಾತ್ರೆ ನಿದ್ದೆಗೊಂದು ಮಾತ್ರೆ ಎಂಬಂತೆ ತೆಗೆದುಕೊಳ್ಳುತ್ತಾ ಹೋದರೆ ನಿಮ್ಮ ನಗು ವಾಪಾಸ್ ತಂದು ಕೊಡಲು ನೇಮ್ಮಡಿ ಮರಳಿ ತರಲು ಮಾರುಕಟ್ಟೆಯಲ್ಲಿ ಯಾವ ಮಾತ್ರೆಗಳು ಇಲ್ಲ ಎಂಬುದು ನೆನಪಿರಲಿ.ಕೊನೆಯ ಪಕ್ಷ ನಿಮ್ಮ ಜನುಮದಿನದಂದು ನಿಮ್ಮ ರುಟೀನ್  ಹೆಲ್ತ್ ಚೆಕಪ್ ಮಾಡಿಸ್ಕೊಳ್ಳಿ, ಈ ಸಮಯದಲ್ಲಿ ಸ್ತನ ಕಾನ್ಸೆರ್, ಗರ್ಭಕೋಶ ದ ಸ್ಮಿಯರ್ ಟೆಸ್ಟ್ , ಕೊಲೆಸ್ಟ್ರಾಲ್ ,ಥೈರಾಯಿಡ್  ಪರೀಕ್ಷೆಗಳು ನಿಮ್ಮ ಚೆಕಪ್ ನಲ್ಲಿ ಸೇರಿಕೊಂಡಿರಲಿ  
  • ನಿಮ್ಮ ದೈಹಿಕ ಸ್ವಾಸ್ಥ ಕಾಪಾಡಿಕೊಳ್ಳಿ 
''೧೬ ವರುಷದಲ್ಲಿ ನಿಮಗಿರುವ ಸೌಂದರ್ಯ ದೇವರು ನಿಮಗಿತ್ತ ಉಡುಗೊರೆ , ೬೧ ರಲ್ಲಿ ನಿಮಗಿರುವ ಚಲುವು ಏನಿದ್ದರು ಅದೂ ನಿಮ್ಮ ಗಳಿಕೆ ,'' ಹೀಗೊಂದು ಮಾತಿದೆ ಮನೆಯ ಎಲ್ಲರ ಯೋಗಕ್ಷೇಮ ನೋಡಿಕೊಳ್ಳುವ ನಾವು ನಮ್ಮ ದೇಹದ ಬಗ್ಗೆ ಅತಿಯಾದ ನಿಷ್ಕಾಳಜಿ ವಹಿಸುತ್ತೇವೆ, ಒಡೆದ ಹಿಂಗಾಲಿನಿಂದ ಹಿಡಿದು  ನೆರೆತ ಕೂದಲ ತನಕ ಯಾವುದನ್ನೂ ಅಷ್ಟಾಗಿ ಗಮನಿಸುವುದೇ ಇಲ್ಲ ,ಯಾಕೆ ,,ಇನ್ನಾರಿಗೆ ಮೆಚಿಸಲು ಮಾಡಲಿ ಎಂಬ ಉದಫೆಯೊಂದು ನಮ್ಮ ಆಲೋಚನೆಗಳಲ್ಲಿ ಹೊಕ್ಕಿರುತ್ತದೆ ,ಸೌಂದರ್ಯ ಮತ್ತು ಸ್ವಾಸ್ಥ ಹೆಣ್ಣಿನ ಜೀವನದ ಅವಿಭಾಜ್ಯ ಅಂಗಗಳು. ವಯಸ್ಸು ಯಾವತ್ತಿಗೂ ಅದಕೆ ಅಡ್ದಿ ಅಲ್ಲ ಆಕರ್ಷಣೀಯವಾಗಿ ಕಾಣುವುದು ನಿಮ್ಮ ಅಧಿಕಾರ ಮತ್ತು ಹಕ್ಕು.
ಪೌಷ್ಟಿಕ ಆಹಾರ ,ಒಳ್ಳೆಯ ನಿದ್ದೆ , ನಿಮ್ಮ ದೇಹದೊಂದಿಗೆ ಮನಸ್ಸನ್ನು ಸ್ವಸ್ಥ ಇಡಬಲ್ಲುದು 
  • ಹಂಚಿಕೊಳ್ಳಿ
 ಎಷ್ಟೇ ದೃಡ ಮನಸು ಕಠಿಣ ಮನಸ್ಸು ಹೊಂದಿದವರು ಕೆಲವು ಸಂದರ್ಭದಲ್ಲಿ ತುಂಬಾ ಮಾನಸಿಕ ದುರ್ಬಲತೆ ಅನುಭವಿಸುತ್ತಾರೆ , ಮನಸು ಸ್ಪ್ರಿಂಗ್ ಇದ್ದಂತೆ ಅದರ ಮೇಲೆ ಅದೆಷ್ಟು ಒತ್ತಡ ಹಾಕುತ್ತೆವೋ ಅದೂ ಅಷ್ಟೇ ಜೋರಾಗಿ ಹಾರುತ್ತದೆ ,
ಆ ಕಾರಣದಿಂದ ನಿಮಗೇನನಿಸುತ್ತದೆ ಎಂಬುದನ್ನು ನಿಮ್ಮ ನಂಬಿಗೆಯ ವ್ಯಕ್ತಿಯೊಡನೆ ಹಂಚಿಕೊಳ್ಳಿ , ಈಗ ಇಂಟರ್ನೆಟ್ನಲ್ಲಿ ಇಂತಹ ಸಮಸ್ಯೆಗಳ ಬಗ್ಗೆ ಸಮಾನ ಮನಸ್ಕರು ಫೋರಮ್ ಮಾಡಿಕೊಂಡು ಒಳ್ಳೆಯ ಚರ್ಚೆ ನಡೆಸುತ್ತಾರೆ ಅದರಲ್ಲೂ ಭಾಗಿಆಗಬಹುದು ,ಸಮಸ್ಯೆ ಇರುವುದು ನನಗಷ್ಟೇ ಅಲ್ಲ  ನನ್ನಂಥ ಎಲ್ಲಾ ಹೆಣ್ಣು ಮಕ್ಕಳಿಗೆ ಎಂಬುದು ನಮ್ಮ ಚಿತ್ತದಲ್ಲಿ ಮೂಡಬೇಕು.ಅಸಲಿಗೆ ಇದೊಂದು ಸಮಸ್ಯೆ ಅಲ್ಲ ಮನಸು ,ದೇಹ  ತನ್ನ ಕೊಲೆಯನ್ನು ಕೊಡವಿಕೊಳ್ಳುವ ಹೊತ್ತು ಅನ್ನುವ ಪಾಸಿಟಿವ್  ಆಲೋಚನೆ ಇರಲಿ.
  • ಮತ್ತಷ್ಟು ಕನಸು ಹೊಸೆಯಿರಿ 
ಒಮ್ಮೆ ನೀವು ಹೊಸೆದ ಕನಸಿಗೆ ನನಸಿನ ರಂಗು ಬಳಿದು ಸುಂದರ ಮಾಡಿದ್ದೀರಿ ,ಈಗ ನಿಮ್ಮ ಜೀವನದ ಸಂಧಿ ಕಾಲ ಹೊಸ ಕನಸು ಹೊಸೆಯಿರಿ ,ಹೊಸ ಕಲಿಕೆ ಆರಂಭವಾಗಲಿ , ಹತ್ತಿರವಾದರು ಸರಿಯೇ ಪುಟ್ಟ  ಪುಟ್ಟ ಪ್ರವಾಸ ಮಾಡುತ್ತಿರಿ ,ಏಕತಾನತೆಯ ಜೀವನದಿಂದ ಹೊರಬರಲು ದಿನಚರಿಯಲ್ಲಿ ಸ್ವಲ್ಪ ಟ್ವಿಸ್ಟ್ ತನ್ನಿ ,ತೋಟದಲ್ಲೊಂದು ಊಟ ,ಟೆರೆಸ್ ಮೇಲೆ ತಾರೆಗಳನ್ನು ನೋಡುತ್ತಾ ಒಂದಷ್ಟು ಘಂಟೆ ನಿದ್ದೆ. ನಿಮ್ಮ ಬಾಲ್ಯಕಾಲದಲ್ಲಿ ರೂಡಿಸಿಕೊಂಡ ಹವ್ಯಾಸಗಳು ,ಪುಟ್ಟ ಮಕ್ಕಳೊಂದಿಗೆ ಅಡುಗೆ ಆಟವೋ ಕುಂಟ ಬೀಲ್ಲೆಯನ್ನೋ ಒಮ್ಮೆ ಟ್ರೈ ಮಾಡಿ 
ಹೊಸದನ್ನು ಮನಸ್ಪೂರ್ತಿ ಆಸ್ವಾದಿಸಿ ,ಮಕ್ಕಳಿಗೂ  ಪತಿಗೂ  ಕುಟುಂಬದ ಎಲ್ಲಾ ಸದಸ್ಯರಿಗೆ ನಿಮ್ಮ ಹೊಸ ರೂಪ ವಿಚಿತ್ರ ಎನ್ನಿಸಿದರೂ ನಿಮ್ಮ ಮಾನಸ ಚೈತನ್ಯಕ್ಕೆ ಇದು ಅಗತ್ಯ ಎಂಬುದನ್ನು ಮರೆಯದಿರಿ 
  • ಸಕಾರಾತ್ಮಕ ಚಿಂತನೆ 
ನೀವೆಷ್ಟು ಭಾಗ್ಯಶಾಲಿಗಳು  ಅಂದು ನಿಮಗನಿಸಿದ ಆ ಎಲ್ಲಾ ಧನ್ಯತೆಯ ಕ್ಷಣಗಳನ್ನು ಪಟ್ಟಿ ಮಾಡಿ ಮತ್ತು ಪದೇ ಪದೇ ಅದನ್ನು ಮನನ ಮಾಡಿ ,ನಿಮ್ಮ ಹಾಜರಿ ಅಗತ್ಯ ನಿವಿಲ್ಲದೆ ಹೋಗಿದ್ದರೆ ಈ ಕೆಲಸ ಆಗುತ್ತಲೇ ಇರಲಿಲ್ಲ ಎಂಬಂಥ ಸಂದರ್ಭಗಳನ್ನು ಬರೆದಿಡಿ. ನಾನು ನಿರ್ಲಕ್ಷಿಸಲ್ಪತ್ತಿದ್ದೇನೆ ಎಂಬ ಭಾವ ತನ್ನಿಂದ ತಾನೇ ಮಾಯವಾಗ ತೊಡಗುತ್ತದೆ .ಅಗತ್ಯ ಬಿದ್ದರೆ ಯಾವ ಕೌನ್ಸಿಲರ್ ಜೊತೆಗೆ ಮುಕ್ತ ಮಾತುಕತೆ ಮಾಡಲು ಹಿಂಜರಿಯಬೇಡಿ , ಸಂಗೀತ ,ಧ್ಯಾನ  ,ಯೋಗ ಪ್ರಾಣಯಾಮಗಳು ಈ ನಿಟ್ಟಿನಲ್ಲಿ ತುಂಬಾ ಸಹಕಾರಿ.ಸೃಜನಶೀಲ ಕೆಲಸದಲ್ಲಿ ತೊಡಗಿಕೊಳ್ಳಿ ಮನಸಿಗನಿಸಿದ್ದನ್ನು ಬರೆದಿಡಿ ,ಬರವಣಿಗೆ ಮಾನಸಿಕ ಒತ್ತಡ ಕಡಿಮೆ ಮಾಡಬಲ್ಲದು,
  • ನಿಮ್ಮ ಸಂಗಾತಿಯೊಡನೆ ಮಾತಾಡಿ 
ಹಲವಾರು ಸಲ ನಾವು  ಮಾತಾಡುವುದೇ ಇಲ್ಲ ,ಈ ಕಾರಣದಿಂದ ನಮ್ಮ ಸಮಸ್ಯೆಗಳು ಒತ್ತಡಗಳು ಮತ್ತು ಅಸಮಧಾನ ಗಳನ್ನು ಜೀವನ ಸಂಗಾತಿಯೊಂದಿಗೆ ಹಂಚಿಕೊಳ್ಳುವುದರಲ್ಲಿ ನಾವು ಹಿಂದೆಬೀಳುತ್ತೇವೆ. ನಿಮ್ಮ ಸಂಗಾತಿಯೊಡನೆ ಕಳೆದ ಮಧುರ ಕ್ಷಣಗಳು , ನೀವು ಅವರ ಬಗ್ಗೆ ಏನೆಂದು ಆಲೋಚಿಸುವಿರಿ ಎಂಬಲ್ಲ ವಿಷಯಗಳನ್ನು ಅರಿಯುವ -ತಿಳಿಸುವ ತವಕ ಅವರಲ್ಲಿ ನೀವೇ ಮೂಡಿಸಬೇಕಿದೆ ,ಮತ್ತು ನಿಮ್ಮ ಯಶಸ್ವೀ ದಾಂಪತ್ಯದ ನಂತರವೂ ಕೆಲವೊಮ್ಮೆ'' ಇವಳು ಇಷ್ಟೇ ''ಎನ್ನುವ ಭಾವ ಸಂಗಾತಿಯ ಮನದಲ್ಲಿ ಬರುವುದುಂಟು ಅದನ್ನು ಮೀರಿಯೂ ನೀವು ಬೆಳೆಯಲು ಯತ್ನಿಸಿ , ನಿಮ್ಮ ಅಂತರಂಗದಲ್ಲಿ ಬಚ್ಚಿಟ್ಟ ನಿಮ್ಮ ಚೈತನ್ಯವನ್ನು ಹೊರತರಲು ಯತ್ನಿಸಿ ,

ಬದುಕು ಇಷ್ಟೇನಾ ??? ಎಂಬ ಪ್ರಶ್ನೆಯನ್ನು  ''ಅರೆ ಏನೇನೆಲ್ಲ ಇದೆ ಈ ಲೈಫ್ ನಲ್ಲಿ ..ಎಷ್ಟೆಲ್ಲಾ ಇದೆ ಇನ್ನು ..''  ಎಂದು ಬದಲಾಯಿಸಿಕೊಳ್ಳಿ . ಜೀವನ್ಮುಖಿ ಭಾವ ಜೀವನದ ಪ್ರತಿ ಹಂತದಲ್ಲೂ ಅಗತ್ಯ ,ಮತ್ತು ಯಾವುದೇ ರೀತಿಯ ಸಮಸ್ಯೆ ಅಸಮಧಾನ ,ಅತಿರೇಕಗಳಿಗೆ ಸಲಹೆ ಸೂಚನೆಗಳನ್ನು ಯಾರು ಬೇಕಾದರೂ ಕೊಡಬಹುದು ಆದರೆ ಅದನ್ನು ಪಾಲಿಸಬೇಕಾದವರು  ನಾವೇ . ಆದರಿಂದ ಜೀವನದ ಪ್ರತಿ ಸಮಸ್ಯೆಗೆ ಉತ್ತರವೊಂದಿದೆ ..ಅದನ್ನು ಹುಡುಕುವ ಯತ್ನ ಸದಾ ಜಾರಿಯಲ್ಲಿಡಬೇಕಿದೆ ಹಾಗಿದ್ದಾಗ ಮಾತ್ರ ಈ ಮಿಡ್ ಲೈಫ್  ಕ್ರೈಸಿಸ್ ಎಂಬ ಸುಳಿಯಿಂದ ಹೊರ ಬಂದು. ನಮ್ಮ ಅನುಭವ ರಸ ಸಾರದ ರುಚಿ ಹೆಚ್ಚಿಸಲು ಸಾಧ್ಯ .

4 comments: