Friday, October 22, 2021

ನಾರಾಯಣಿ

ನಾವು ದಿನಾಲು ಹಲವಾರು ಜನರನ್ನು ಭೇಟಿ ಆಗುತ್ತೇವೆ. ಕೆಲವು ತೀರಾ ವ್ಯವಹಾರಿಕ ಭೇಟಿಗಳು ಮತ್ತಷ್ಟು ನಗು ವಿನಿಮಯದ ಭೇಟಿಗಳಾದರೆ , ಒಂದಷ್ಟು ತಪ್ಪಿಸಿಕೊಳ್ಳಲು ನೆವ ಹುಡುಕುವಂತೆ ಮಾಡುವ ನೀರಸ ಭೇಟಿಗಳು. ಆದರೆ ಕೆಲವೊಂದು ಮಾತ್ರ ಜೀವನ ಪೂರ್ತಿ ನೆನಪುಳಿದು ಬದುಕಿಗೆ ಕನ್ನಡಿ ತೋರಿ ನಮ್ಮನ್ನು ತಿದ್ದಿ ತೀಡಲು ಅನುವು ಮಾಡುವ , ಬದುಕಿಗೆ ಹೊಸ ಹೊಳವನ್ನು ಕೊಡುವ ಭೇಟಿಗಳು. ಯಾರೂ ಯಾರನ್ನೂ ಸುಮ್ಮನೆ ಭೇಟಿ ಯಾಗುವುದಿಲ್ಲ ಎಲ್ಲದಕ್ಕೂ ಒಂದು ಅನೂಹ್ಯ ಕಾರಣ ಇದ್ದೆ ಇರುತ್ತದೆ. ನಮಗೆ ಸಿಗುವ ಕೆಲವರು ನಮ್ಮಿಂದ ಒಳ್ಳೆಯದನ್ನು ಕಲಿತರೆ , ಹಲವಾರು ಮಂದಿ ನಮಗೆ ಸಿಹಿ ಬುತ್ತಿಯನ್ನು ಕಳಿಸಿ ಉಣಿಸಿಯೂ ಹೋಗುತ್ತಾರೆ. ಸ್ವಲ್ಪ ಮಂದಿ ಕಹಿ ಕಾಡೆ ಕುಡುಸುವುದು ಉಂಟು. ಹೊಸದನ್ನೇನೋ ಹುಡುಕಾಡುವ ಚಿಕ್ಕ ಚಿಕ್ಕ ಘಟನೆಗಳಲ್ಲಿ ಜೀವನಪಾಠ ಹುಡುಕುವ ನನ್ನಂಥ ಅನೇಕರಿಗೆ ದೂರದ ಊರುಗಳಲ್ಲಿ ಅಥವಾ ಹೊರದೇಶದಲ್ಲಿ ಭೇಟಿಯಾಗುವ ವಿಲಕ್ಷಣ ವ್ಯಕ್ತಿಗಳು ಅವರ ಕಥೆಗಳು ಅವರು ನಡೆದು ಬಂದ ಹಾದಿ ನಮಗೆ ಅದೆಂಥದೋ ಹುರುಪು ಸಂಭ್ರಮ ಆಶ್ಚರ್ಯ ತರುತ್ತವೆ. ಅಂತಹದೇ ಒಂದು ಆಕಸ್ಮಿಕ ವಿಶೇಷ ಭೇಟಿಯ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ. ಆ ದಿನ ಒಂದು ಮೆಸ್ಸೇಜ್ ಬಂತು , 'ನನ್ನ ಮಕ್ಕಳಿಗೆ ಜೊತೆಗೆ ನನಗೂ ಸಂಗೀತ ಕಲಿಯಬೇಕಿದೆ, ನೀವು ಕಲಿಸುತ್ತೀರಾ ?'' ಹೌದು, ಅಂತ ಅಂದಮೇಲೆ ಒಂದಷ್ಟು ಮೆಸೇಜ್ ವಿನಿಮಯವಾದವು, ಮತ್ತು ತರಗತಿಯ ದಿನಾಂಕ ಸಮಯ ನಿಗದಿಯಾದ ಮೇಲೆ , ಆಕೆಯ ಹೆಸರು ಕೇಳಿದೆ , ''ನಾರಾಯಣಿ'' ಎಂದಳು ಮನದಲ್ಲಿ ಈಕೆ ಆಂಧ್ರಮೂಲದ ಮಹಿಳೆ ಇರಬೇಕು ಅನ್ನುವ ಭಾವ ಬಿಟ್ಟರೆ ಇನ್ನಾವ ಕುತೂಹಲ ಇರಲಿಲ್ಲ ಆಕೆಯ ತರಗತಿ ನಿಗದಿ ಆದ ದಿನ ಸಂಜೆ ಕರೆಗಂಟೆ ಆದಾಗ, ಸಂಜೆ ನಸುಗತ್ತಲು ಆವರಿಸಿತ್ತು ಬಾಗಿಲಿನ ಗಾಜಿನ ಮೂಲಕ ಕಂಡಿದ್ದು ಎರಡು ಕೆಂಚುಗೂದಲ ಮಕ್ಕಳು ಮತ್ತವರ ಅಮ್ಮ. ''we are here here for music class'' ಎಂದರು. ನಾರಾಯಣಿ ?ಎಂದು ಪ್ರಶ್ನಾರ್ಥಕವಾಗಿ ಕೇಳಿದೆ , ಹೌದು ಎಂದು ನಗುತ್ತ ಉತ್ತರಿಸಿದಳು. ಒಳ ಬರುತ್ತಲೇ ಇಬ್ಬರೂ ಮಕ್ಕಳಿಗೆ ನನ್ನ ಕಾಲಿಗೆ ನಮಸ್ಕರಿಸಲು ತಿಳಿಸಿದಳು , ಆಕೆಯು ವಂದಿಸಿ ತರಗತಿ ಗೆ ನಾವು ಸಿದ್ಧ ಎಂದಳು. ಆದರೆ ನನಗೆ ಇದೆಲ್ಲ ಅಚ್ಚರಿ , ಕುತೂಹಲ ಮೂಡಿಸಿತ್ತು ಭಾರತೀಯ ಮೂಲದ ಮಕ್ಕಳು ಬಂದಾಗಲೂ ಚಪ್ಪಲಿ ಬಿಟ್ಟು ಒಳಬನ್ನಿ ಅನ್ನುವ ಮಾತನ್ನು ನಾನೇ ಹೇಳಬೇಕಾದ ಸಂಧರ್ಭಗಳನ್ನ ಎದುರಿಸಿದ್ದ ನನಗೆ , ತಲ ಬಾಗಿಲಲ್ಲೇ ಅವರು ಗುರು ಎಂದು ನಮಸ್ಕರಿಸಿ ಗೌರವಿಸಿದ ರೀತಿ ನನ್ನನು ಪೂರ್ತಿ ಆವರಿಸಿತ್ತು . ಅವರು ಸಿದ್ಧರಿದ್ದರು ಇದನ್ನು ನಿರೀಕ್ಷಿಸಿರದ ನಾನು ಇನ್ನು ಹಾಗೆ ಬೆಪ್ಪಾಗಿ ನಿಂತಿದ್ದೆ . ಹಾಗೆ ಆ ದಿನ ಶುರುವಾದ ನಮ್ಮ ಸಂಗೀತ ತರಗತಿ ಗಳು ಕೆಲ ತಿಂಗಳು ಸಾಗಿತು, ದಿನ ಕಳೆದಂತೆ ನಾರಾಯಣಿ ಮತ್ತು ಅವರ ಕುಟುಂಬದ ಬಗ್ಗೆ ತಿಳಿದು ಕೊಳ್ಳುವ ಸದವಾಕಾಶವು ದೊರೆಯಿತು. ಭಾರತದ ಬಗ್ಗೆ ಆಕೆಗಿರುವ ಭಕ್ತಿ ,ಪ್ರೀತಿ , ಅಕ್ಕರೆ ಅದನ್ನು ಆಕೆಯ ಮಾತಿನಲ್ಲೇ ಕೇಳಬೇಕು, ಭಾರತದಲ್ಲಿರುವ ಎಲ್ಲರೂ ಯಾವುದೋ ಒಂದು ಶಕ್ತಿಯನ್ನು ಪ್ರಾರ್ಥಿಸುತ್ತಾರೆ, ಆ ಪ್ರಾರ್ಥನೆಯ ಶಕ್ತಿಯ ನಿರಂತರತೆಯೇ ಆ ದೇಶಕ್ಕೆ ಅಷ್ಟು ವಿಶೇಷತೆ ಕೊಟ್ಟಿದೆ ಅಂದು ತನ್ಮಯಳಾಗುವ ನಾರಾಯಣಿ ಮೂಲತಃ ಅರ್ಜೆಂಟೀನಾ ದೇಶದವಳು. ಆಕೆಯ ಅಪ್ಪ ಅಮ್ಮನಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಅತೀವ ಪ್ರೀತಿ ಭಾರತದ ಬಗ್ಗೆ ಬರೀ ಓದಿ ಗೊತ್ತಿದ್ದ ಅವರು ಅವರ ಮಕ್ಕಳಿಗೆ ಭಾರತೀಯ ಹೆಸರುಗಳನ್ನೇ ಇಟ್ಟರು. ನಾರಾಯಣಿ ಸುಮಾರು ೧೦ ವರ್ಷದವಳಿರುವಾಗ ಆಕೆಗೆ ಹುಷಾರು ತಪ್ಪಿತು ಆ ಕಾರಣದಿಂದ ಆಕೆಯ ಶಾಲೆ ಅರ್ಧಕ್ಕೆ ನಿಂತಿತು , ಆದರೆ ಆಕೆಯ ತಾಯಿ ಶಾಲೆಯ ಅನುಮತಿ ಪಡೆದು ಆಕೆಗೆ ಮನೆಯಲ್ಲೇ ಪಾಠ ಕಲಿಸಲು ಆರಂಭಿಸಿದರು, ಜೊತೆಗೆ ಆಕೆಯ ಕಾಯಿಲೆಗೆ ಆಯುರ್ವೇದ ಮತ್ತು ಭಾರತೀಯ ಮನೆಮದ್ದುಗಳ ಮೊರೆ ಹೊಕ್ಕರು. ದಿನ ಕಳೆಯುತ್ತಾ ನಾರಾಯಣಿ ಅರೋಗ್ಯ ಸುಧಾರಿಸಿತು , ಶಾಲೆಯಲ್ಲಿ ಒಂದು ವರ್ಷದಲ್ಲಿ ಕಲಿಯುವ ಪಠ್ಯಕ್ರಮವನ್ನ ಆಕೆ ಆರೇ ತಿಂಗಳಲ್ಲಿ ಕಲಿತಿದ್ದಳು , ಇದನ್ನು ಗಮನಿಸಿದ ತಂದೆ ತಾಯಿ ಆಕೆಗೆ ಹೋಂ ಸ್ಕೂಲಿಂಗ್ ಮಾದರಿಯಲ್ಲೇ ಕಲಿಕೆಯನ್ನು ಮುಂದುವರಿಸಿ, ಆಗ ಅರ್ಜೆಂಟೀನಾದಲ್ಲಿ ಶುರುವಾದ ಗುರುಕುಲ ಮಾದರಿಯ ಶಾಲೆಯಲ್ಲಿ ವೇದ , ಯೋಗ , ಉಪಾಸನಾ ವಿಧಿಗಳನ್ನ , ಕೃಷಿ ತೋಟಗಾರಿಕೆಗಳಂಥ ಜೀವನಾವಶ್ಯಕ ಕಲಿಕೆಯನ್ನು ಕಲಿಯಲು ಅನುವು ಮಾಡಿಕೊಟ್ಟರು. ಕೆಲ ವರುಷಗಳಲ್ಲಿ ನಾರಾಯಣಿ ತನ್ನ ಆರ್ಕಿಟೆಕ್ಚರ್ ಪದವಿ ಮುಗಿಸಿ ಯುರೋಪ್ ಗೆ ಬಂದಳು , ಅಲ್ಲಿಯೇ ಆಕೆ ತನ್ನ ಜೀವನ ಸಂಗಾತಿಯನ್ನು ಭೆಟ್ಟಿಯಾದಳು. ಆತ ಸ್ಪ್ಯಾನಿಷ್ ಹುಡುಗ ಆದರೆ ಅವನೂ ಸನಾತನ ಧರ್ಮದ ಆರಾಧಕ, ಪೂಜಕ, ಅತಿ ಕಠಿಣ ಪಾವನ ಚಾರಣ ಎನಿಸಿರುವ ಗಂಡಕಿ ಯಾತ್ರೆ ಯನ್ನು ಮಾಡಿ ಬಂದಿದ್ದ ,ನಿತ್ಯ ಪೂಜೆ ಅನುಷ್ಠಾನ ಮಾಡುವ ಇವರನ್ನು ದೇವರೇ ನಿಂತು ಜೊತೆ ಮಾಡಿದ ಎಂದರೆ ಅದು ಉತ್ಪ್ರೇಕ್ಷೆಯಾಗದು ಭಾರತೀಯ ಸಂಪ್ರದಾಯದಂತೆ ಮದುವೆಯಾದ ಈ ಜೋಡಿ ,ಮೊದಲ ಮಗುವಿನ ಬಗ್ಗೆ ಆಲೋಚನೆ ಬರುತ್ತಲೇ ಚರಕ ಸಂಹಿತೆಯನ್ನು ಓದಲು ಶುರು ಮಾಡಿದ್ದರಂತೆ. ಅದೆಷ್ಟು ಶ್ರೀಮಂತ ದೇಶ ಭಾರತ ಬಗೆದಷ್ಟು ಜ್ಞಾನ ,ನಮ್ಮ ಮಗು ಭಾರತದಲ್ಲೇ ಹುಟ್ಟಬೇಕು ಎಂದು ನಮ್ಮ ಬಯಕೆಯನ್ನು ಶ್ರೀ ಹರಿ ಪೂರ್ಣ ಮಾಡಿದ ನಮ್ಮ ಮಗಳು ಮಥುರೆಯಲ್ಲೇ ಹುಟ್ಟಿದಳು ಅದಕ್ಕೆ ರಾಧಿಕಾ ಎಂದು ಹೆಸರಿಟ್ಟು, ನಂತರ ಹುಟ್ಟಿದ ಮಗನಿಗೆ ಗೋಪಿ ಹೆಸರಿಟ್ಟೆವು ಎಂದು ಧನ್ಯತೆಯಿಂದ ನೆನೆಯುತ್ತಾಳೆ. ಈ ಕುಟುಂಬದ ಇನ್ನೊಂದು ವಿಶಿಷ್ಟತೆ ಎಂದರೆ ಇವರು ಪೂಜಿಸುವ ಸಾಲಿಗ್ರಾಮಗಳು , ೨೭೫ !! ನಾನು ಈ ಅಷ್ಟು ಸಂಖ್ಯೆಯ ಒಟ್ಟಿಗೆ ಈ ವರೆಗೂ ನೋಡಿರಲಿಲ್ಲ, ಸಾಲಿಗ್ರಾಮಗಳನ್ನು ನಮ್ಮಲ್ಲಿ ಹಾಗೆ ಮನೆಗಳಲ್ಲಿ ಇಟ್ಟುಕೊಳ್ಳುವುದು ತೀರಾ ಅಪರೂಪ, ಅದಕ್ಕೆ ತುಂಬಾ ಕಟ್ಟುನಿಟ್ಟಿನ ಪೂಜೆ ಆಗಬೇಕಂತೆ ನೀವು ಹೇಗೆ ಧೈರ್ಯ ಮಾಡಿದಿರಿ ಎಂಬ ನನ್ನ ಪೆದ್ದು ಪ್ರಶ್ನೆಗೆ ನಸುನಗುತ್ತಾ '' ದೇವರ ಕುರಿತು ಭೀತಿಯ ಬದಲು ಪ್ರೀತಿ ಹುಟ್ಟಿದ ದಿನ ನಮ್ಮ ಇಡೀ ಪ್ರಪಂಚ ಸ್ವರ್ಗವಾಗುತ್ತದೆ, ಆತನ ಬಗ್ಗೆ ಭಯ ಯಾಕೆ ? ಆತನೇ ಅಲ್ಲವೇ ನಮ್ಮನ್ನ ಸೃಷ್ಟಿಸಿದವನು , ನಮ್ಮ ಕರ್ಮ ಕೈಂಕರ್ಯಗಳು ಸರಿಯಾಗಿದ್ದರೆ ಮುಗೀತು ಇನ್ನಾರಿಗೂ ನಾವು ಹೆದರುವ ಅಗತ್ಯವಿಲ್ಲ . ಮಗಳು ಹುಟ್ಟುವಾಗ ನಮ್ಮ ಹತ್ತಿರ ೫೦೦ ಸಾಲಿಗ್ರಾಮಗಳಿದ್ದವು , ನಾವು ಎಲ್ಲಿ ಹೋದರೂ ಎಲ್ಲೆಡೆ ಅವನ್ನು ಕರೆದುಕೊಂಡು ಹೋಗುತ್ತಿದ್ದೆವು . ಆಮೇಲೆ ಮತ್ತಷ್ಟು ಬಂದವು ಕೆಲವಷ್ಟನ್ನು ಸ್ನೇಹಿತರಿಗೆ ಕೊಟ್ಟೆವು , ಅದು ಸಾಲಿಗ್ರಾಮದ ಇಚ್ಛೆ "ತಾನು ಯಾರ ಮನೆಗೆ ಹೋಗಬೇಕು" ಅಂತ ಅದೇ ನಿರ್ಧರಿಸುತ್ತದೆ , ನಾವು ಅದರ ಸೇವಕರು ಅಷ್ಟೇ! ನಮ್ಮ ಮನೆಯಲ್ಲಿ ಎಲ್ಲ ಸಾಲಿಗ್ರಾಮಕ್ಕೆ ಮಕ್ಕಳು ಪೂಜೆ ಮಾಡ್ತಾರೆ ಅದಕ್ಕೆ ಲಾಲಿ ಹಾಡುತ್ತಾರೆ ಅವಗಳೊಂದಿಗೆ ಇಬ್ಬರೂ ಮಾತಾಡುತ್ತಾರೆ. ನಾವು ದಿನ ಮಾಡುವ ಅಡುಗೆಯನ್ನೇ ನೈವೇದ್ಯ ಮಾಡುತ್ತೇವೇ ಅಂದರೆ ದೊಡ್ಡಸ್ತಿಕೆ ಆಗುತ್ತದೆ ಅವು ನಮ್ಮಿಂದ ಸೇವೆ ಮಾಡಿಸಿಕೊಳ್ಳುತ್ತಿವೆ. ಅಷ್ಟಕ್ಕೂ ನಾನು ಅಂದರೆ ಯಾರು..ಅವನದೇ ಒಂದು ಅಂಶ ಅಲ್ಲವೇ ? ಎಂದು ನಾರಾಯಣಿ ಪ್ರಶ್ನಿಸುತ್ತಾಳೆ. ನಾರಾಯಣಿಯ ಇಬ್ಬರೂ ಮಕ್ಕಳು ಹೋಂ ಸ್ಕೂಲಿಂಗ್ ನಲ್ಲೆ ಕಲಿಯುತ್ತಾರೆ. ನಾನು ಶಾಲೆಗೆ ಕಲಿಸುವ ಪ್ರಯತ್ನ ಮಾಡಿದೆ, ಆದರೆ ಅವರಿಗೆ ಅದು ಇಷ್ಟವಾಗಲಿಲ್ಲ , ಮತ್ತೆ ನೊರ್ದರ್ನ್ ಐರ್ಲಾಂಡ್ ನ ಶಿಕ್ಷಣ ಇಲಾಖೆ ಹೋಮ್ ಸ್ಕೂಲಿಂಗ್ ಗೆ ತುಂಬಾ ಸಹಾಯ ಮಾಡುತ್ತದೆ , ಹೀಗಾಗಿ ಮಕ್ಕಳು ಯಾವುದೇ ಒತ್ತಡಕ್ಕೆ ಬೀಳದೆ ಕಲಿಯುವಿಕೆ ಜೊತೆಗೆ ಈಜು , ಇನ್ನಿತರ ಕಲಿಕೆಯನ್ನು , ಸಂಗೀತ ಭಾರತೀಯ ನೃತ್ಯವನ್ನ ಕೂಡ ಕಲಿಯುತ್ತಿದ್ದಾರೆ ಕಲಿಯುವಿಕೆಗೆ ಅಂತ್ಯವೆಲ್ಲಿ ನಿಮಗೆ ಆಸಕ್ತಿ ಇರಬೇಕು ಅಷ್ಟೇ ಮತ್ತೆ ಇಲ್ಲಿ ರಜೆ ಇರುವುದಿಲ್ಲ ಮಕ್ಕಳ ಕಲಿಕೆ ನಿರಂತರ ಒಂದಲ್ಲ ಒಂದು ಅವರ ಮೆಚ್ಚಿನ ವಿಷಯಗಳನ್ನು ಕಲಿಯುತ್ತಲೇ ಇರುತ್ತಾರೆ. ಸ್ಪ್ಯಾನಿಶ ನಮ್ಮ ಮಾತೃಭಾಷೆ , ಜೊತೆಗೆ ನಾವು ದೇವನಾಗರಿಯನ್ನು ಕಲಿಸುತ್ತಿದ್ದೇವೆ . ಇಂಗ್ಲಿಷ್ ಕೂಡ ಮಾತಾಡುತ್ತಾರೆ. ಭಾರತ ದಲ್ಲಿ ನಮಗೆ ರಕ್ತ ಸಂಬಂಧಿಗಳು ಯಾರು ಇಲ್ಲ , ಆದರೆ ಪ್ರತಿ ರಜೆಗೂ ನಾವು ಭಾರತಕ್ಕೆ ಹೋಗುತ್ತೇವೆ ವಸುಧೈವ ಕುಟುಂಬಕಂ ಎಂಬುದನ್ನ ನಂಬಿದ್ದೇನೆ , ಹಳ್ಳಿ ಗಳಲ್ಲಿ ತಿಂಗಳುಗಳ ಕಾಲ ಉಳಿಯುತ್ತೇವೆ, ನಾನು ಬಹಳಷ್ಟು ಅನಿವಾಸಿ ಭಾರತೀಯ ಮಕ್ಕಳೊಂದಿಗೆ ಪಾಲಕರೊಂದಿಗೆ ಮಾತಾಡಿದ್ದೇನೆ , ಅವರಿಗೆ ಭಾರತ ಎಂದರೆ ಪ್ರವಾಸಿ ತಾಣ , ಬಿಸಿಲು ಸೆಖೆ ಧಗೆ, ಸ್ವಚ್ಛತೆ ಇಲ್ಲದ ಊರು/ದೇಶ , ಎಂಬಂಥ ಭಾವನೆಗಳೇ, ನನ್ನ ಮಕ್ಕಳಿಗೆ ಭಾರತ ಎಂದರೆ ಪ್ರಾಣ ಪ್ರತಿ ಸಲ ವಾಪಸ ಬರುವಾಗ ಕಣ್ಣೀರು ಹಾಕುತ್ತ ಫ್ಲೈಟ್ ಹತ್ತುತ್ತಾರೆ. ಭಾರತದ ಮಹತ್ತನ್ನು ನೀವ್ಯಾಕೆ ನಿಮ್ಮ ಮಕ್ಕಳಿಗೆ ಸರಿಯಾಗಿ ತಿಳಿಸಿಕೊಡುತ್ತಿಲ್ಲ? ಎಂಬ ಪ್ರಶ್ನೆಯನ್ನ ವಿನಮ್ರವಾಗಿ ಕೇಳುತ್ತಾಳೆ. ವೃತ್ತಿ ಮತ್ತು ಮಕ್ಕಳ ಶಿಕ್ಷಣ ಜೊತೆಗೆ ಈ ವೃತನಿಷ್ಠ ಬದುಕನ್ನು ನಡೆಸುವುದು ಕಠಿಣ ಅನಿಸುವುದಿಲ್ಲವಾ ? ಎಂದು ಕೇಳಿದ್ದಕ್ಕೆ, ಕಷ್ಟ , ಹಾ ದೇಹಕ್ಕೆ ಅನಿಸುತ್ತದೆ ಕೆಲವೊಮ್ಮೆ! ಆದರೆ ಆತ್ಮಕ್ಕೆ ಸದಾ ನೆಮ್ಮದಿಯೇ. ಬೆಳಿಗ್ಗೆ ಮಕ್ಕಳ ಕಲಿಕೆಗೆ ನಾನು ಸಮಯ ವ್ಯಯಿಸಲೇ ಬೇಕು. ಆದ್ದರಿಂದ ನನ್ನ ವೃತ್ತಿ ಸಂಬಂಧಿ ಕೆಲಸಗಳನ್ನು ತಡರಾತ್ರಿ ಮಾಡುತ್ತೇನೆ ಕೆಲವರು ಸಿನಿಮಾ ಅಥವಾ ಸಿರೀಸ್ ನೋಡಲು ನಿದ್ದೆ ಗೆಡುವುದಿಲ್ಲವಾ ? ಹಾಗೆ ಅಂದುಕೊಳ್ಳಿ. ಮಕ್ಕಳಿಗೆ ಮುಂಜಾನೆ ಬೇಗನೆ ಏಳುವ ಅಭ್ಯಾಸವಾಗಿದೆ. ಅವರು ನಿತ್ಯದ ಪೂಜೆ , ಮಂತ್ರ , ಅವರ ಕಲಿಕೆಯ ಆಯಾ ದಿನದ ಅಭ್ಯಾಸ ಶುರು ಮಾಡುತ್ತಾರೆ. ಮತ್ತು ಇದೆಲ್ಲ ನಾವು ಖುಷಿ ಯಿಂದ ಮಾಡುತ್ತೇವೆ ಯಾರನ್ನೋ ಮೆಚ್ಚಿಸಲೋ, ಯಾವುದೋ ಕ್ರಾಂತಿ ಮಾಡಲೋಸುಗವಲ್ಲ ಇದು ನಾವು ಆಯ್ದುಕೊಂಡ ಪುರಾತನ ಭಾರತೀಯರು ಜೀವಿಸಿ ಸಿದ್ಧಿಸಿಕೊಂಡ ಜೀವನ ಪದ್ಧತಿ. ಆದರೆ ಆಧುನಿಕ ಜೀವನ ಕ್ಕೆ ತಕ್ಕಂತೆ ಕೆಲ ಬದಲಾವಣೆಗಳು ಬೇಕಾಗುತ್ತವೆ. ಆದರೆ ಎಲ್ಲದ್ದಕ್ಕೂ ಆ ಮೂಲ ಮತ್ತು ನಮಗೆ ದಾರಿ ದೀಪ ಎನ್ನುತ್ತಾಳೆ ನಮ್ಮ ನಾರಾಯಣಿ. ಒಮ್ಮೆ ನೃತ್ಯ ರೂಪಕದಲ್ಲಿ ಕೃಷ್ಣನ ವೇಷ ತೊಟ್ಟ ಆಕೆಯ ಕಪ್ಪು ಬಿಳುಪು ಚಿತ್ರವನ್ನ ತೆಗೆದಿದ್ದೆ. ನನಗೆ ಅಂದು ನಿಜಕ್ಕೂ ಕೃಷ್ಣ ಕಾಣಿಸಿದ್ದ. -ಅಮಿತಾ ರವಿಕಿರಣ್

Wednesday, February 17, 2021

ಪ್ರೇಮಕ್ಕೊಂದು ಬೀಗ ಮುದ್ರೆ!




ನೀವು ವಿದೇಶ ಪ್ರಯಾಣ ಮಾಡಿದ್ದಾದರೆ , ಅಲ್ಲಿನ ಸೇತುವೆಗಳನ್ನ ಗಮನಿಸಿದ್ದೀರಾ ? ವಿಶೇಷ ವಾಗಿ ಯುರೋಪಿಯನ್ ರಾಷ್ಟ್ರಗಳಲ್ಲಿ , ಎಲ್ಲ ಸೇತುವೆಗಳಮೇಲೆ ತೂಗಿ ಬಿದ್ದ ಗೊಂಚು  ಗೊಂಚಲು ಬಣ್ಣ ಬಣ್ಣದ ವಿವಿಧ ಆಕಾರದ ಬೀಗಗಳು ? ಚಳಿ, ಮಳೆ, ಗಾಳಿ, ಹಿಮ, ಎಲ್ಲವನ್ನು ಸೇತುವೆ ಯೊಂದಿಗೆ ತಾವು ಭರಿಸಿ ಅಲ್ಲೇ ತುಕ್ಕು ಹಿಡಿದು ಯಾವುದೋ ವೃತ ತೊಟ್ಟ ಸಂಯಮಿಯಂತೆ , ಏನಿವು ? ಯಾಕೆ ಹೀಗೆ ? ಇವನ್ಯಾಕೆ ಲವ್ ಲಾಕ್ ಅಂತಾರೆ? ಹೀಗೊಂದಿಷ್ಟು ಪ್ರಶ್ನೆಗಳು ನನಗೂ ಹುಟ್ಟಿದ್ದವು , ಮೊದಲ ಬಾರಿ ನಾನು ಇಂಥದೇ ಒಂದು ಸೇತುವೆ ಮೇಲೆ ನಡೆದಾಡುತ್ತಾ ಆ ಕೀಲಿಗಳ ಮೇಲೆ ಬರೆದಿರುವ ಜೋಡು ಹೆಸರುಗಳನ್ನ ಓದುತ್ತ ಹೋದಾಗ. ಉತ್ತರ ಹುಡುಕುತ್ತ ಹೋದಾಗಲೇ ತಿಳಿದಿದ್ದು   ಆ ಸಣ್ಣ  ಯಕಶ್ಚಿತ್ ಬೀಗಗಳು ಪ್ರಾಚೀನ , ಬೃಹದ್, ಘಟ್ಟಿ  ಸೇತುವೆಗಳನ್ನು ಅಲುಗಿಸಿದ ಕಥೆ ಗಳು.  
 
ಅದು ೧೯೧೪ ರ ಸಮಯ ಜಗತ್ತು ಮೊದಲ ಮಹಾಯುದ್ಧದ ಬೇಗೆಯಲ್ಲಿ ನರಳುತಿತ್ತು, ಯುರೋಪಿನಾದ್ಯಂತ ಒಂದು ರೀತಿಯ ಅಸ್ಥಿರತೆ ಮನೆ ಮಾಡಿದ್ದ ಸಮಯವದು , 
ದ್ವೇಷದ ದಳ್ಳುರಿಯಲ್ಲಿ ರಾಷ್ಟ್ರ ರಾಷ್ಟ್ರಗಳು ಕಿತ್ತಾಡುತ್ತಿರೆ , ಅದೇ ಸಂದರ್ಭದಲ್ಲಿ ಪ್ರೀತಿಯ ಸಂಕೇತವೆಂಬಂತೆ , ಆಶಾವಾದಕ್ಕೆ ಸಾಕ್ಷಿಹೇಳುವಂಥ ಒಂದು ಸಂಪ್ರದಾಯ ಶುರುವಾಗಿದ್ದು ಮಾತ್ರ ಮೆತ್ತನೆ ಇತಿಹಾಸದ ಪುಟ ಸೇರಿಹೋಯಿತು , ಅದರ ಮೇಲಿದ್ದ ಯುದ್ಧದ ಕಹಿ ನೆನಪುಗಳ ಹಾಳೆಗಳು ಅದೆಷ್ಟು ಭಾರವಾಗಿದ್ದವೆಂದರೆ  ಈ ಮನ ಹಿಂಡುವ ಪ್ರೇಮಕಥೆ ಕಥೆ ಅದು ಹುಟ್ಟು ಹಾಕಿದ ವಿಲಕ್ಷಣ ಆಚರಣೆಯ ಹಿನ್ನೆಲೆ, ಐತಿಹ್ಯವಾಗಿ ಜಗತ್ತಿನೆಲ್ಲೆಡೆಯ ಜನರಿಗೆ ತಿಳಿಯಲು ಮತ್ತೆ ೫೦ ವರ್ಷಗಳೇ ಹಿಡಿದವು. 

ಸರ್ಬಿಯಾ ದೇಶದಲ್ಲಿ ಯುದ್ಧದ ಬಿಸಿ ಜೋರಾಗಿತ್ತು , ಆದರೆ ಯುವ ಹೃದಯಗಳು ಮಾತ್ರ ಇಹ ಪರಡಾ ದ ಪರಿವಿಲ್ಲದೆ  ಪ್ರೇಮದ ಗುಂಗಿನಲ್ಲಿ ಕಳೆದು ಹೋಗಿದ್ದವು ಅಂಥದೇ ಒಂದು ಜೋಡಿ ರೆಲ್ಯಾ ಎಂಬ ಸೈನಿಕ  ಮತ್ತು ನ್ಯಾಡಾ ಎಂಬ ಸುಂದರ ಸುಮನಸ್ಸಿನ ಹುಡುಗಿಯದು. ಇಬ್ಬರು ಮಾಡಿಕೊಳ್ಳದ ಆಣೆ ಪ್ರಮಾಣಗಳಿಲ್ಲ , ಕಾಣದ ಕನಸಿಲ್ಲ ದಿನಾಲು ಆ ಊರಿನಲ್ಲಿದ್ದ ಸೇತುವೆಯ ಬಳಿ ಭೆಟ್ಟಿ ಆಗಿ ತಮ್ಮ ಭಾವಿ ಜೀವನದ ಕನಸನ್ನು ಕಾಣುತ್ತಿದ್ದರು. ಅವರ ಪ್ರೇಮ ಸ್ವರಗಳು ರಾಗವಾಗಿ ಹೊಮ್ಮುವ ಮೊದಲೇ ರೇಲ್ಯಾ ನಿಗೆ ಸೈನ್ಯದ ಕರೆಬಂತು , ಯುದ್ಧಭೂಮಿಗೆ ಹೊರಡಲೇ ಬೇಕಾಯಿತು, ಈ ವಿಷಯ ಕೇಳಿ ತಪ್ತಳಾದ ನ್ಯಾಡಾ ಅವನನ್ನು ಯುದ್ಧಕ್ಕೆ ಹೋಗದಿರುವಂತೆ ವಿನಂತಿಸುತ್ತಾಳೆ , ಗೋಗರೆಯುತ್ತಾಳೆ ದುಃಖಿಸುತ್ತಾಳೆ, ತಾವು ಕಂಡ ಕನಸುಗಳೆಲ್ಲ ನನಸು ಮಾಡಲು ತಾನು ಯುದ್ಧದಿಂದ ಮರಳಿ ಬಂದು ಆಕೆಯೊಂದಿಗೆ ಬಾಳಿ ಬದುಕುವೆನೆಂದು ಭಾಷೆ ಕೊಟ್ಟ ರೇಲ್ಯಾ ಹೊರಟು  ಹೋಗುತ್ತಾನೆ. 

ಆತನ ಹಾದಿ ಕಾಯುತ್ತ ನ್ಯಾಡಾ ದಿನ ಆ ಸೇತುವೆ ಮೇಲೆ ಕುಳಿತು ತಾವು ಜೊತೆಯಾಗಿ ಕಳೆದ ಗಳಿಗೆಗಳನೆನೆದು ತಮ್ಮ ಮುಂದಿನ ದಿನಗಳ ಬಗ್ಗೆ ಕನಸ ಹೆಣೆಯುತ್ತಾ ದಿನ ದೂಡುತ್ತಾಳೆ, ಆದರೆ ರೆಲ್ಯಾ ಮಾತ್ರ ಮರಳುವುದಿಲ್ಲ , ಆಮೇಲೆ ಅವನ ಜೊತೆಗಾರರಿಂದ ರೇಲ್ಯಾ ಬೇರೆ ಒಂದು ಹುಡುಗಿಯನ್ನು ಮದುವೆಯಾಗಿ ಸಂಸಾರ ಹೂಡಿರುವುದು ನ್ಯಾಡಾ ಗೆ ತಿಳಿಯುತ್ತದೆ ಅದೇ ನೋವಿನಲ್ಲಿ ಆಕೆ ಕೊನೆಯುಸಿರೆಳೆಯುತ್ತಾಳೆ. ಊರಿನ ಎಲ್ಲ ಯುವತಿಯರು ಆ ಸಮಯದಲ್ಲಿ ನ್ಯಾಡಾ ಮತ್ತು ರೆಲ್ಯಾ ಭೇಟಿ ಆಗುತ್ತಿದ್ದ ಆ ಸೇತುವೆಗೆ , ಗೌರವ ಪೂರ್ವಕವಾಗಿ, ತಮ್ಮ ಪ್ರೇಮ ಬಾಂಧವ್ಯಗಳು ಸುಖಾಂತ್ಯ ಕಾಣುವಂತೆ ಪ್ರಾರ್ಥಿಸಿ , ಒಂದು ಬೀಗದ ಮೇಲೆ ಪ್ರೇಮಿಗಳ ಹೆಸರನ್ನು ಬರೆದು ಸೇತುವೆಗೆ ತೂಗಿಬಿಟ್ಟು ಬೀಗದ ಕೈಯ್ಯನ್ನು ನದಿನೀರಲ್ಲಿ ಎಸೆಯುವ ಸಂಪ್ರದಾಯ ಶುರು ಮಾಡಿದರು. ಆ ಸೇತುವೆಯನ್ನು ಪ್ರೇಮ ಸೇತುವೆ ''Bridge of hope'' ಎಂದು ಕರೆಯಲಾಯಿತು. 
 ಡೇಸಾಂಕ ಮಾಕ್ಸಿಮೋವಿಕ್ ಎಂಬ ಪ್ರಸಿದ್ಧ ಸರ್ಬಿಯನ್ ಕವಯಿತ್ರಿ  ''prayer of love'' ಎನ್ನುವ ತನ್ನ ಪದ್ಯದಲ್ಲಿ ಈ ಘಟನೆಯನ್ನು ವಿವರಿಸುವ ತನಕ ಬಹುಜನರಿಗೆ ಇದು ಅಜ್ಞಾತವಾಗಿಯೇ ಉಳಿದಿತ್ತು. ಆ ನಂತರ ಈ ರೂಡಿ ಯುರೋಪಿನಾದ್ಯಂತ ಹರಡುತ್ತಾ ಹೋಯಿತು, ಆದರೂ ಈ ರೂಡಿ ಹುಟ್ಟಿಕೊಂಡ ಮೂಲದ ಬಗ್ಗೆ ಹಲವು ಕಥೆಗಳಿವೆ.  ೫೦೦ ವರ್ಷದ ಹಿಂದಿನಕತೆಗಳನ್ನು ಕೂಡ ಉಲ್ಲೇಖಿಸುತ್ತಾರೆ.    ಕೆಲವೊಬ್ಬರು ಇದು ಯುರೋಪಿಗೆ ಪೌರಾತ್ಯ  ದೇಶಗಳಿಂದ ಬಂತು ಎಂತಲೂ ಹೇಳುತ್ತಾರೆ , ಮೂಲ ಏನೇ ಇರಲಿ ,ಆದರೆ ಈ ಪುಟ್ಟ ಬೀಗ ಮುದ್ರೆ ಸೇತುವೆಗೆ ಜೋತು ಬಿಡುವ, ಮೊದಲ ನೋಟಕ್ಕೆ ನಿರುಪದ್ರವಿ ಅನಿಸುವ ಈ ಸಂಪ್ರದಾಯ ಹಲವು ಸರಕಾರಗಳ, ಪಾಲಿಗೆ ದುಃಸ್ವಪ್ನ ವಾದದ್ದು ಮಾತ್ರ ಸತ್ಯ. 

ಇಟಲಿಯ ಫ್ಲಾರೆನ್ಸ್ ನಗರದಲ್ಲಿರುವ ೧೩೪೫ ರಲ್ಲಿ ಕಟ್ಟಲಾಗಿದೆ ಎನ್ನಲಾದ ponte veccio ಎಂಬ ಪ್ರಸಿದ್ಧ ಸೇತುವೆಗೆ ಪ್ರೇಮಿಗಳು ತೂಗಿ ಬಿಟ್ಟ ಬೀಗಗಳ ಸಂಖ್ಯೆ ಅದೆಷ್ಟಿತ್ತೆಂದರೆ ಆ ಭಾರಕ್ಕೆ ಸೇತುವೆ ಬಾಗಲು ಶುರುವಾಯಿತು, ನಂತರ ಸುಮಾರು ಐದುವರೆ ಸಾವಿರಗಳಷ್ಟು ಬೀಗಗಳನ್ನು ಸೇತುವೆಯಿಂದ  ತೆಗೆಸಲಾಯಿತು. ಐರ್ಲೆಂಡ್ ದೇಶದಲ್ಲಿರುವ ಡಬ್ಲಿನ್ ನಗರದ  ಹಾ'ಪೆನ್ನಿ ಸೇತುವೆಯ ಕತೆಯೂ ಹೀಗೆ , ೨೦೧೨ರಲ್ಲಿ ಈ ಬೀಗಗಳನ್ನು ನಗರ ಪಾಲಿಕೆಯವರು ತೆಗೆದು ಹಾಕಿದರು. 

ಎಲ್ಲಕ್ಕಿಂತ ಹೆಚ್ಚು ಬೀಗ ಬಿಗಿಸಿಕೊಂಡ ಸೇತುವೆ ಪ್ಯಾರಿಸ್ ನ The Pont des Arts ಎನ್ನುವ ಐತಿಹಾಸಿಕ , ವಿಶಿಷ್ಟ ವಿನ್ಯಾಸದ ಈ ಸೇತುವೆಗೆ ಪ್ರೇಮಿಗಳು ಜಡಿದದ್ದು  ಸುಮಾರು ೭೦,೦೦೦ ಬೀಗಗಳು. ಸೇತುವೆ ಈ ಭಾರ ಇನ್ನು ತಾಳದು ಎನಿಸಿದಾಗ ಅಲ್ಲಿನ ಸರಕಾರ ಅವನ್ನು ತೆಗೆಸುವ ಆದೇಶ ನೀಡಿತ್ತು. ೨೦೧೯ ರ ನಂತರ ಪ್ರೇಮಿಗಲು ಇಲ್ಲಿ ಬೀಗ ಮುದ್ರೆ ಹಾಕುವುದನ್ನು ಸರಕಾರ ನಿಷೇಧಿಸಿದೆ ಆದರೂ ನಿಮಗೆ ಅಲ್ಲಿ ಇಲ್ಲಿ ಪ್ರೇಮಿಗಳ ಹೆಸರಿನೊಂದಿಗೆ ಚಂದದ ಪ್ಯಾಡ್ ಲಾಕ್ ಗಳು ಕಾಣಸಿಗುತ್ತವೆ. 
ಈ ಸಮಸ್ಯೆಗೆ ಒಳ್ಳೆಯ ಪರಿಹಾರ ಕಂಡುಕೊಂಡಿದ್ದು ಮಾತ್ರ ಮಾಸ್ಕೋ ನಗರ, ಇಲ್ಲಿನ ಆಡಳಿತಮಂಡಳಿ ಸೇತುವೆಯ ಮುಂಭಾಗದಲ್ಲಿ ಕಬ್ಬಿಣದ ಮರದ ಆಕೃತಿಯನ್ನು ನಿಲ್ಲಿಸಿ ಅದಕ್ಕೆ ಬೀಗಗಳನ್ನು ಹಾಕಲು ವಿನಂತಿಸಿತ್ತು , ಈಗ ಅಂತಹ  ಮರಗಳ ಸಂಖ್ಯೆ ಹೆಚ್ಚಾಗಿದೆ. 

ಯಾರೋ ಶುರು ಮಾಡಿದ ಒಂದು ಆಚರಣೆಯನ್ನು ಅದರ ಹಿನ್ನೆಲೆಯೂ ಗೊತ್ತಿರದೆ ನಾವೂ ಪಾಲಿಸುತ್ತೇವೆ , ನಮಗೆ ಅದು ಟ್ರೆಂಡ್  ಆಗಿಯೂ ಮನ ಸೆಳೆದಿರಬಹುದು, ಅಥವಾ ಆಶಾವಾದ, ನಂಬಿಕೆ ಜೊತೆಗೆ ನಮ್ಮ ಪ್ರೀತಿಯು ಸದಾ ನಳ ನಳಿಸುತ್ತಿರಲಿ ಎಂಬ ಭಾವವೂ ಇರಬಹುದು. ಒಟ್ಟಿನಲ್ಲಿ ಪ್ರೀತಿ ಎಂಬ ಮಾಯೆಯನ್ನು ಪುಟ್ಟ ಬೀಗದಲ್ಲಿ ಬಂಧಿಸಿ ಕೀಲಿಕೈಯ್ಯನ್ನು ಚಲನಶೀಲ ನದಿಯ ಒಡಲಿಗೆ ಎಸೆದು ನಮ್ಮನು ಯಾರೂ ಅಗಲಿಸಲಾರರು ಎಂಬ ಮನದ ದನಿ ಒದಗಿಸುವ ಆ ನಿರಮ್ಮಳ ಭಾವವೇ ಇದರ ಒಳಗುಟ್ಟು. 

Monday, January 18, 2021

ನೂಲಿನ ತೇರು - ೨

 ಮಾತು ಮೌನದ ಸಂಕದ ಮೇಲೆ


ನೀವೇನು ಕೆಲಸ ಮಾಡೋದು ಅಲ್ಲಿ ? ಹೀಗೊಂದು ಪ್ರಶ್ನೆ ಅದೆಷ್ಟು ಜನ ಕೇಳಿದ್ದಾರೆ ಅಂತ ಲೆಕ್ಕ ಮಾಡಲು ಹೋಗಿಲ್ಲ , ಆದರೆ ಅವರು ಹಾಗೆ ಕೇಳಿದಾಗೆಲ್ಲ ನನಗೆ ನಾನೇ ಕೇಳಿಕೊಳ್ಳುತ್ತೇನೆ , ಹೌದು ''ನೀ ಏನು ಕೆಲಸ ಮಾಡುತ್ತಿ  ಅಮಿತಾ ?'' ವೃತ್ತಿ ಪ್ರವೃತ್ತಿ ಎರಡು ಒಂದೇ ಆಗಿರುವ ಒಂದಷ್ಟು ನಶೀಬ್ವಾನ್ ಜನರಲ್ಲಿ ನಾನು ಒಬ್ಬಳು ಅಂತ ನನಗೆ ನಾನು ಹೇಳಿಕೊಳ್ತೇನೆ. 


ಮೊದಲೆಲ್ಲ ಸಂಗೀತ ಕಲಾವಿದೆ ಅಂತ ಪರಿಚಯಿಸಿಕೊಳ್ಳುತ್ತಿದ್ದ  ನನ್ನನ್ನ ಕಲ್ಚರಲ್ ಫೆಸಿಲಿಟೇಟರ್ /ಕಲ್ಚರಲ್ ಅಂಬಾಸಿಡರ್ ಮಾಡಿದ್ದೂ ಈ ನಾರ್ದರ್ನ್ ಐರ್ಲೆಂಡ್ ಎಂಬ ದೇಶ. ನಾನು ಹವ್ಯಾಸ ಎಂದು ಕಲಿತ ಮದರಂಗಿ, ರಂಗೋಲಿ , ಸಾಂಜಿ  , ವರ್ಲಿ , ಹಸೆ , ಮಂಡಲ, ಭಾರತೀಯ ಸಾಂಪ್ರದಾಯಿಕ ಅಡುಗೆ ಹೀಗೆ ಎಲ್ಲವನ್ನು ಪ್ರೀತಿಯಿಂದ ನಾನು ಇಲ್ಲಿ ಜನರಿಗೆ ಅವಕಾಶ ಸಿಕ್ಕಾಗಲೆಲ್ಲ ಹೇಳಿ ಕೊಟ್ಟಿದ್ದೇನೆ , ಅವರು ಅಷ್ಟೇ ಆದರದಿಂದ ಅಕ್ಕರೆಯಿಂದ ಅಂಥ ಅವಕಾಶಗಳನ್ನ ಪದೇ ಪದೇ ಕೊಟ್ಟು ನನ್ನ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. 


ಇದೊಂದು ಕಾರಣದಿಂದಲೇ ನಾನು ಈ ಪುಟ್ಟ ದೇಶದ ಮೂಲೆ ಮೂಲೆ ಸುತ್ತಿದ್ದೇನೆ ಈ ಸುತ್ತಾಟಗಳು ಅದೆಷ್ಟು ದೇಶ, ಭಾಷೆಯವರೊಂದಿಗೆ ಬೆರೆಯುವ , ಅಪರೂಪದ ಅನುಭವಗಳನ್ನ ಒದಗಿಸಿ, ಬದುಕಿನ ಬಗೆಗೆ ಭಿನ್ನ ದೃಷ್ಟಿಕೋನ ಬೆಳೆಸಿಕೊಳ್ಳುವಲ್ಲಿ ಸಹಾಯ ಮಾಡಿವೆ. 


ಭಾರತೀಯ ಸಂಸ್ಕೃತಿಯ ಬಗ್ಗೆ ಒಲವು ಹೆಮ್ಮೆ ತುಸು ಹೆಚ್ಚೆ ಇರುವ ನನಗೆ, ಇತರ ಸಂಸ್ಕೃತಿಗಳ ಬಗ್ಗೆಯೂ ಕುತೂಹಲ ,ಗೌರವ ಮೂಡಿಸುವಲ್ಲಿ ಈ ಕೆಲಸ ಸಹಾಯ ಮಾಡಿದ್ದಲ್ಲದೆ, ಕೆಲವೊಮ್ಮೆ ಮನಸಿನ್ನ ಸೂಕ್ಷ್ಮ ಭಾವಗಳನ್ನು ಕೆದಕಿ ಹಾಕಿದೆ, ಹೀಗ್ಯಾಕೆ ? ಅನ್ನುವ ಪ್ರಶ್ನೆಯನ್ನ ಪದೇ ಪದೇ ಕೇಳಿಕೊಳ್ಳುವಂತೆ ಮಾಡಿದೆ. 



ಅಂಥದ್ದೇ ಒಂದು ದಿನ,  ಮದರಂಗಿಯ ಕುರಿತು ಇದ್ದ workshop ನಲ್ಲಿ,  ಮೆಹಂದಿಯ ಇತಿಹಾಸ , ಅದರ ಔಷದೀಯ ಉಪಯೋಗ , ಅದು ಜನಪ್ರಿಯತೆ  ಪಡೆದ ಬಗೆ  ಹೀಗೆ ಎಲ್ಲವನ್ನ ವಿವರಿಸಿ , ಅಜ್ಜಿ ಮನೆಯಿಂದ ತಂದು ಲ್ಯಾಮಿನೇಟ್ ಮಾಡಿ ಇಟ್ಟುಕೊಂಡ ಒಂದಷ್ಟು ಮದರಂಗಿ ಎಲೆಗಳು , ಪುಡಿ , ಎಲ್ಲ ತೋರಿಸಿ , ಕೊನೆಯಲ್ಲಿ ಭಾಗವಹಿಸಿದ, ಜೊತೆಗೆ ಬಂದ ಎಲ್ಲರಿಗೂ ಮದರಂಗಿ ಹಾಕುವ ಕ್ರಮ.

ಕಾರ್ಯಾಗಾರದಲ್ಲಿ ಇದ್ದ ಇಪ್ಪತ್ತು ಜನ ಮೆಹಂದಿ ಹಾಕುವ ಸಮಯ ಬಂದಾಗ ಎಪ್ಪತ್ತು -ನೂರು ಆಗುವುದು ಹೇಗೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. 


 ಎಂದಿನಂತೆ ಸರತಿಯಲ್ಲಿ ನಿಂತ ಮಕ್ಕಳಿಗೆ ಪುಟ್ಟದೊಂದು ಚಿತ್ತಾರ ಬಿಡಿಸಿ ಕಳಿಸುತ್ತಿದ್ದೆ , ಏನು ಚಿತ್ರ ಬೇಕು ಅಂದಾಗ ಅವು ತಮ್ಮ ಮನೀಷೆಯನ್ನು ಹೊರ ಹಾಕುತ್ತವೆ , ಡ್ರಾಗನ್ ,ವೂಲ್ಫ್ ,ನಾಯಿ ,ಹಲ್ಲಿ  ಮೊಸಳೆ ..ಹೀಗೆ ಏನೇನೋ ,ಒಂದಷ್ಟು ಹೆಸರು ಬರೆಸಿಕೊಳ್ಳುತ್ತವೆ,  ಫುಟ್ಬಾಲ್ ತಂಡದ ಹೆಸರು , ಮೊದಲ ಪ್ರೇಮದಲ್ಲಿ ಬಿದ್ದ ಕೆಲ ಹುಡುಗರು ಚಿಕ್ಕದಾಗಿ ಹುಡುಗಿಯ ಹೆಸರಿನ ಮೊದಲಕ್ಷರ ಬಿಡಿಸಿಕೊಂಡು ಮುಖದ ತುಂಬಾ ಸಾರ್ಥಕ್ಯ ಹೊತ್ತು ಹೋಗುತ್ತವೆ , ಕೆಲವೊಂದಷ್ಟು ಬರಿ ವೈನ್ ಗ್ಲಾಸ್ , ಸಿಗರೇಟ್ ತಲೆಬುರುಡೆ ಚಿತ್ರ ಬಿಡಿಸು ಅಂದಾಗ ಬುರುಡೆಗೆ ಒಂದು ಮೊಟಕೋಣ ಅನಿಸೋದು ಸುಳ್ಳಲ್ಲ ಅದೇನೇನೋ ಪ್ರಶ್ನೆಗಳು, ಕೊಟ್ಟ ಉತ್ತರಕ್ಕೆ ಹುಟ್ಟುವ ಮತ್ತಷ್ಟು ಮಾತುಗಳು , ಬಹಳಷ್ಟು ಸಲ ನಾನು ತಲೆ ಎತ್ತುವಮೊದಲೇ ಇನ್ನೊಂದು ಕೈ ನನ್ನ ಮುಂದೆ ಸಿದ್ಧವಾಗಿರುತ್ತದೆ, ಮತ್ತವರ ಪ್ರಶ್ನೆಗಳು.


 ಹೀಗೆ ನಡೆಯುತ್ತಿರುವಾಗ  ಅದರಲ್ಲೊಬ್ಬ ಪುಟ್ಟ ಹುಡುಗ ಬಂದು ನನ್ನೆದುರಿಗೆ ಕುಳಿತುಕೊಂಡ, ಯಾವುದೇ ಮಾತು ಅವನಿಂದ ಬಾರದಿದ್ದಾಗ ,  ನಾನೇ ಮುಖವೆತ್ತಿ  ಏನು ಬಿಡಿಸಲಿ?ಎಂದು ಕೇಳಿದೆ   ..ಕೈಗಳ ಮೇಲೆ ರಂಗೋಲಿ ಚಿಕ್ಕಿ ಇಟ್ಟಂತೆ  ಮಾಡಿ ತೋರಿಸಿದ ,ಸ್ಟಾರ್ ಬಿಡಿಸಲ ಅಂತಾ ಕೇಳಿದ ಮೇಲೂ   ಆತನ ವರ್ತನೆಯಲ್ಲಿ ಏನು ಭಿನ್ನತೆ ಕಾಣಲಿಲ್ಲ. ಸುಮಾರು ಸರಿ ಕೇಳಿದ ಮೇಲೆ ನನ್ನ ಕಣ್ಣು ಗಳಲ್ಲಿ ಏನೋ ಹುಡುಕಿದಂತೆ ಅವುಗಳನ್ನೇ ನೋಡುತ್ತಿದ್ದ ,''ನನ್ನ ಮನಸ್ಸಿಗೆ ಬಂದಿದ್ದು ಬಿಡಿಸಲ ? ಅಂದೆ, ಉತ್ತರಿಸದೆ ಮತ್ತೆ ಕೈ ಮೇಲೆ ಚಿಕ್ಕಿ ಹಾಕುತ್ತಿದ್ದ ಅವನ ಕೈ ಮೇಲೆ ಮೂರು ನಕ್ಷತ್ರಗಳನ್ನು ಬಿಡಿಸಿ ಮುಗೀತು ಅನ್ನುವಂತೆ ನೋಡಿದೆ, ಚಿತ್ರ ಬಿಡಿಸಿಕೊಂಡ ಮಕ್ಕಳು ಖುಷಿಯಿಂದ Thankyou , you are the best lady in the world" ಅನ್ನುವ ಕಾಮನ್ ಡೈಲಾಗ್ ಕೇಳಲಿಕ್ಕೆ ಖುಷಿ ಆಗುತ್ತದೆ ಜೊತೆಗೆ  ಮದರಂಗಿ ಹಾಕಿಕೊಂಡ ಕೈಯ್ಯನ್ನ ಕಾಳಜಿಯಿಂದ ಎತ್ತಿಕೊಂಡು ಮತ್ತೆ ಮತ್ತೆ ಚಿತ್ತಾರ ನೋಡಿಕೊಳ್ಳುವುದನ್ನ ನೋಡಿದರೆ ನಗುವೂ ಬರುತ್ತದೆ.


 ಆದರೆ ಈ ಮಗು ಹಾಗೇನು ಹೇಳದೆ ಬರೀ ಖುಷಿ ಹೊತ್ತ ಕಣ್ಣುಗಳಿಂದ ನನ್ನ ನೋಡುತ್ತಿತ್ತು , ಅಷ್ಟರಲ್ಲಿ ಹಿಂದಿನಿಂದ ಬಂದ ಅವರಪ್ಪ'' ಥಾಂಕ್ ಯು ಹೇಳು '' ಅಂದ. ಮಗು ನಿಷ್ಕಲ್ಮಶ ನಗುವಿನೊಂದಿಗೆ ಖುಷಿ ತುಂಬಿಕೊಂಡ ಕಣ್ಣುಗಳನ್ನ ಅರಳಿಸುತ್ತ  ಥಾಂಕ್ ಯು ಹೇಳಿತು ಆದರೆ , ಅಲ್ಲಿ ಶಬ್ದಗಳೇ ಇರಲಿಲ್ಲ ,ಸನ್ನೆಯಷ್ಟೇ! ಆ ಕಾರ್ಯಕ್ರಮ ಮುಗಿಸಿ ಮನೆಗೆ ಬಂದಮೇಲೂ ನನಗೆ ಆ ಮಗುವಿನ ಖುಷಿ ತುಂಬಿದ ನೀಲಿ ಕಣ್ಣುಗಳು , ಮತ್ತು ಆ ಸನ್ನೆ ಪದೇ ಪದೇ ನೆನಪಾಗುತ್ತಿತ್ತು. 


 ಆ ಮಗುವಿಗೆ ಮಾತಾಡಲು ಬರುವುದಿಲ್ಲವ? ಅದೊಂದು ಭಾವವೇ ನನ್ನ ಪೂರ್ತಿ ಹಿಂಡಿ ಹಾಕಿತು , ಕಣ್ಣು  ತುಂಬಿ ಕೊಂಡವು , ಮತ್ತೆ ಆ ಮಗುವಿನ ಥಾಂಕ್ ಯು ಸಂಜ್ಞೆ ನೆನಪಾಗಿ ಏನೋ ಯಾತನೆ. ಹಾಗಂತ ಆ ಮಗು ನಾನು ನೋಡಿದ ಮೊದಲ ಮಾತುಬಾರದ ವ್ಯಕ್ತಿಯಲ್ಲ , ಆದರೆ ಅವ ನೆನಪಿಸಿದ್ದು ಮಾತ್ರ ಹಲವರನ್ನ , ಬಾಲ್ಯದಿಂದ ನಾ ಇಲ್ಲಿಗೆ ಬರುವ ತನಕ ನಾ ನೋಡಿದ ಎಲ್ಲ ಮಾತು ಬರದವರನ್ನ , ಕಣ್ಣಲ್ಲಿ ಸದಾ ಆಶಾವಾದ ಸೂಸುವವರನ್ನ ,   ಅವರೊಂದಿಗೆ ಬೆಸೆದುಕೊಂಡ ನನ್ನ ನೆನಪುಗಳನ್ನು.


 ನನ್ನ ಅಜ್ಜಿ ಮನೆಯ ಹತ್ತಿರದಲ್ಲಿದ್ದ ಗೀತ (ಮೂಕಿ ಅಂತಾನೆ ಅವಳ ನಿಕ್ ನೇಮ್), ಶಿರಸಿಯ ನೀಲೆಕಣಿ ಆಟೋ ಗ್ಯಾರೇಜನವರ  ಮಗಳು ವಿಭಾ , ನನ್ನ ತವರು ಮುಂಡಗೋಡಿನ ಆ ಬಿಳಿ ಧಿರಿಸು ,ಟೋಪಿ ತೊಟ್ಟುಕೊಂಡು, ಮಕ್ಕಳನ್ನ ಕಂಡರೆ ಉರಿದು ಬೀಳುತ್ತಿದ್ದ ಮತ್ತು ನಾನು ಹಾಡುತ್ತೇನೆ ಅನ್ನೋ ಒಂದೇ ಕಾರಣಕ್ಕೆ ನನ್ನತ್ತ ಒಂದು ವಿಶೇಷ ಕಳಕಳಿ ತೋರುತ್ತಿದ್ದ ಆದರೆ ನನ್ನ ಹಾಡನ್ನ ಒಮ್ಮೆಯೂ ಕೇಳದ ಆ ಮೂಗಪ್ಪ .  

ಬೆಳಗಾವಿಯ ಮಾರುತಿಗಲ್ಲಿಯ ಹನುಮಪ್ಪನ ಗುಡಿಯೊಳಗೆ ಶನಿವಾರಕ್ಕೊಮ್ಮೆ ಸೇರಿ ಮೀಟಿಂಗ್ ನಡೆಸುತ್ತ  ಮೌನದಲ್ಲೇ  ಗಂಭೀರ ಮಾತುಕತೆ ನಡೆಸುತ್ತ ತಮ್ಮ ಲೋಕದಲ್ಲಿ ಕಳೆದು ಹೋಗಿ..ನಮ್ಮಂಥವರಿಗೆ ಸೋಜಿಗವಾಗುತ್ತಿದ್ದ ಆ ಮೂಕರ ಗುಂಪು. ಮನಸ ಕಪಾಟಿನ ತಳದ ಅರಿಯಲ್ಲಿ ಬೆಚ್ಚಗೆ ಸೇರಿಕೊಂಡಿರುವ ಬರ್ಫಿ, ಖಾಮೋಶಿಯಂಥ  ಸಿನಿಮಾ ಪಾತ್ರಗಳು , ಯಾಕೋ ಇವೆಲ್ಲ ನೆನಪಾಗಿ ಮತ್ತೆ ಮತ್ತೆ ಕಣ್ಣು ತೇವತೇವ.


ಇದು ಕನಿಕರ ಅಥವಾ ಅನುಕಂಪ ಅಲ್ಲವೇ ಅಲ್ಲ! ಯಾಕೋ ಅನಿಸೋಕೆ ಶುರು ಆಗಿದೆ '' ನಾವ್ಯಾಕೆ  ಇಷ್ಟು ಮಾತಾಡ್ತೀವಿ .ಎಲ್ಲದ್ದಕ್ಕೂ ನನ್ನ ಅಭಿಪ್ರಾಯ ಕೊಡಲೇಬೇಕು ಅನ್ನುವ ಹಠ ಮಾಡುವ ಮನಸು, ಮಾತಾಡಲೇಬೇಕಾದ ಅನಿವಾರ್ಯತೆ ಇದ್ದಾಗ, ಯಾರೋ ನಾವಾಡುವ ಒಂದು ಒಳ್ಳೆ  ಮಾತಿಗೆ ಕಾಯುತ್ತಿರುವಾಗ, ಬೇಕಂತಲೇ ವಹಿಸುವ ಜಾಣ ಮೌನ ,  ನಾವ್ಯಾಕೆ ಇಷ್ಟು ಮಾತಾಡುತ್ತೇವೆ ಅವರ್ಯಾಕೆ ಅಷ್ಟು ಮೌನ???? ಮೌನದಲ್ಲೂ ಮಾತಾಡುವ ಅವರು  ಮಾತು ಮಾತಿನಲ್ಲೂ ಊನ ಹುಡುಕುವ ನಾವು.

(ಉದಯವಾಣಿ , ವಿಶೇಷ ಪುರವಣಿ ದೇಸಿಸ್ವರದಲ್ಲಿ ನೂಲಿನ ತೇರು ಎಂಬ ಅಂಕಣ ದಲ್ಲಿ ಪ್ರಕಟಿತ)

ನೂಲಿನ ತೇರು - ೧



ನಾನು ಇದ್ದದ್ದೇ ಹಾಗೆ ವೈದೇಹಿಯವರ ಕವನದ "ಅಡುಗೆ ಮನೆ ಹುಡುಗಿಯಂತೆ" , ನನ್ನ ಊರಿನಲ್ಲಿ ಅಪರೂಪಕ್ಕೆ ಆಕಾಶದಲ್ಲಿ ವಿಮಾನದ ಸದ್ದು  ಮೋಡದೊಳಗಿಂದ ಕೇಳಿಸಿದರೆ ಸಾಕು ಅದನ್ನು ನೋಡಲು ಅಂಗಳಕ್ಕೆ ಓಡಿಬಂದು ಅದಕ್ಕೆ ಕೈಬೀಸಿ ಅದು ಮರೆಯಾಗುವವರೆಗೂ ಕಣ್ಣು ತುಟಿ ಅರಳಿಸಿ ಬಾನಿಗೆ ಮೊಗಮಾಡಿ ನಿಲ್ಲುವ ಖುಷಿ,  ಮೊದಲ ಬಾರಿ ವಿಮಾನ ಹತ್ತಿ ಈ ದೇಶಕ್ಕೆ ಬರುವಾಗ ಇರಲೇ ಇಲ್ಲ ಎಂದರೆ ನೀವು ನಂಬಲೇ ಬೇಕು. 


ನೆಲದ ಪ್ರೀತಿ ಹಚ್ಚಿಕೊಂಡ ನನ್ನಂಥ ಅದೆಷ್ಟೋ ಅನಿವಾಸಿ ಭಾರತೀಯರು ಪ್ರತಿಬಾರಿ ಭಾರತಕ್ಕೆ ಬಂದು ಮರಳುವಾಗ ವರುಷಕ್ಕಾಗುವಷ್ಟು ಭಾವತಂತುಗಳನ್ನ ಹೊತ್ತು ತರುತ್ತಾರೆ , ನಾನು ನನ್ನ ಸ್ನೇಹಿತೆಯರು ಸೇರಿ ಇದಕ್ಕೆ 'ಇಂಧನ/fuel" ಎಂದು ಕರೆಯುವುದುಂಟು. ಯಾಕೆಂದರೆ ಇಲ್ಲಿ,  ನಮ್ಮದಲ್ಲದ ನೆಲದಲ್ಲಿ ಬದುಕಬಂಡಿ ನಡೆಸಲು ಈ ಇಂಧನ ವೇ ಜೀವಾಳ.


ಆದರೂ ಒಮ್ಮೊಮ್ಮೆ ತಾಯಿನಾಡು ಅದೆಷ್ಟು ನೆನಪಾಗುತ್ತದೆಂದರೆ ಮನಸು ಪುಟ್ಟ ಮಗುವಿನಂತಾಗಿ ಅಮ್ಮನ ಮಡಿಲನ್ನು ಬಯಸುತ್ತದೆ. ಇಲ್ಲಿ ಇರುವ ಎಷ್ಟೋ ಅಪರಿಚಿತ ಮುಖಗಳಲ್ಲಿ , ನಮ್ಮ ಆಪ್ತರ , ಮನಸಿಗೆ ಹತ್ತಿರದವರ ಛಾಯೆ ಅರಸುತ್ತದೆ, ಕೆಲವೊಮ್ಮೆ ಅಂಥ ಚಿಕ್ಕ ಖುಷಿ ದಕ್ಕಿಯೂ ಬಿಡುತ್ತದೆ.


ಬೆಲ್ಫಾಸ್ಟ್ ಅನ್ನುವ ಈ ಪುಟ್ಟ, ಸುಂದರ ನಗರಿಯಲ್ಲಿ ನನಗೆ ನನ್ನೂರಿನ ಯಾರನ್ನೋ ನೆನಪಿಸುವ ಹಲವಾರು ಮುಖ ಮನಸುಗಳಿವೆ, ಅಂಥವರಲ್ಲಿ ಒಬ್ಬ ಈ ಯೊಹಾನ್ , 


ಯುರೋಪಿಯನ್ ದೇಶಗಳಲ್ಲಿ ರಸ್ತೆಗಳ ಅಕ್ಕ ಪಕ್ಕ ಹಾಡು ಹೇಳುತ್ತಾ , ಗಿಟಾರ್ ನುಡಿಸುತ್ತ ,ಕಲಾಪ್ರದರ್ಶನ ಮಾಡುತ್ತಾ  ಕೆಲವರು ನಿಂತಿರುತ್ತಾರೆ ಇಂಥವರನ್ನ ''ಬಸ್ಕರ್'' ಎಂದು ಕರೆಯುತ್ತಾರೆ, ಇವರು ಹಾಡುವುದನ್ನ ನಿಂತು ಕೇಳಿ ಚಪ್ಪಾಳೆ ತಟ್ಟಿ  ಹಣ ಕೊಡುವ ಮಂದಿಯೂ ಇದ್ದಾರೆ, 


 ಒಮ್ಮೆ ಇರುವ ಕಲಾವಿದ ಮತ್ತೊಮ್ಮೆ ಅದೇ ಜಾಗೆಯಲ್ಲಿ ನಿಮಗೆ ಕಾಣ ಸಿಗುವುದಿಲ್ಲ, ಹಣ ಬಯಸುತ್ತಾರಾದರೂ ಇವರು ಭಿಕ್ಷುಕರಲ್ಲ, ಭಿಕ್ಷೆ ಬೇಡುವುದು ಇಲ್ಲಿ ಅಪರಾಧ ಆದರೆ "ಬಸ್ಕಿಂಗ್" ಮಾನ್ಯ! ಹದಿಹರೆಯದ ಮಕ್ಕಳಿಂದ  ಹಿಡಿದು  ಇಳಿವಯಸ್ಸಿನವರೂ ಬಸ್ಕಿಂಗ್  ಮಾಡುವುದು ಇಲ್ಲಿ ಸರ್ವೇ ಸಾಮಾನ್ಯ , ಕ್ರಿಸ್ಮಸ್ , ಈಸ್ಟರ್ , ಬೇಸಿಗೆ ರಜಗಳಲ್ಲಿ ಇದು ಇನ್ನೂ ಜಾಸ್ತಿ. ಸಂಗೀತಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಇದು ಒಳ್ಳೆ ವೇದಿಕೆಯನ್ನೂ ಕಲ್ಪಿಸಿಕೊಡುತ್ತದೆ.


 ಆಗ ನಾನು ಬೆಲ್ಫಾಸ್ಟ್ ಗೆ ಬಂದ  ಹೊಸತು ನನಗೆ ಈ ಬಸ್ಕಿಂಗ್ ಮಾಡುವವರನ್ನ ನೋಡುವುದೆಂದರೆ ಅತೀ ಖುಷಿಯ ಸಂಗತಿಯಾಗಿತ್ತು, ಆ ದಿನ ಮಗುವನ್ನು ಶಾಲೆಗೆ ಬಿಟ್ಟು ಅಂಗಡಿಗೆ ಏನೋ ತರಲು ಹೋದವಳಿಗೆ ಕಣ್ಣಿಗೆ ಬಿದ್ದವನೇ ಈ ಯೊಹಾನ್ , ಕೈಯ್ಯಲ್ಲಿ ಅದೆಂಥದೋ ವಿಚಿತ್ರ ಇನ್ಸ್ಟ್ರುಮೆಂಟ್ ಹಿಡಿದು ಕೊಂಡು ಒಂದೇ ಸಮ ಅದೇನೋ ಟ್ಯೂನ್ ನುಡಿಸುತ್ತಿದ್ದ , 


ನನ್ನ ಅಜ್ಜನ ವಯಸ್ಸಿರಬಹುದು , ಎದುರಿಗೊಂದು ಗೊಂಬೆ ಮತ್ತು ಚಿಕ್ಕ ಪ್ಲಾಸ್ಟಿಕ್ ಬುಟ್ಟಿ ಇಟ್ಟುಕೊಂಡು ಹೋಗು ಬರುವವರಿಗೆಲ್ಲ  ಚಂದದ ನಗು ಒಂದನ್ನ ಕೊಡುತ್ತಿದ್ದ , ಅವನ ಆ ಬುಟ್ಟಿಗೆ ನಾಣ್ಯ ಎಸೆದವರಿಗೆ hornviolin ನಾದ ಹೊಮ್ಮಿಸುತ್ತಲೇ ತಲೆಬಾಗಿ ಗೌರವ ಸಲ್ಲಿಸುತ್ತಿದ್ದ , ಅದ್ಯಾಕೋ ಯೋಹಾನ್ ನಗು ನನಗೆ ತುಂಬಾ ಹಿತವೆನಿಸಿತು , ತುಂಬು ನಗು, ನಿಷ್ಕಲ್ಮಶ ನಗು, 

ಆ ದಿನದಿಂದ ನಾನು ಸಿಟಿ ಸೆಂಟರ್  ಹೋದಾಗಲೆಲ್ಲ, ಯೊಹಾನ್ ಇದ್ದಲ್ಲಿ ಹೋಗಿ ಅವನ ನಗುಮುಖ ನೋಡಿ ಅವನು  ಆ "ವಾಯಲಿನಪಿಟ್" (ವಾಯಲೀನ್+ಟ್ರಂಪೆಟ್) ಲ್ಲಿ ನುಡಿಸುವ ರಷ್ಯನ್ ಹೇಂಗೇರಿಯನ್ ಜನಪದ ಸಂಗೀತದ ತುಣುಕು ಕೇಳಿ ಬಂದರೆ ಅದೇನೋ ಹಿತ , ಕೋಟ್ ಕಿಸೆಯಲಿ ಸಂಗ್ರಹವಾದ ಪೆನ್ನಿಗಳನ್ನು ಅವನ ಬುಟ್ಟಿಗೆ ಹಾಕಿ ಅವನಿಂದ ಆ ಮುಗುಳ್ನಗೆ ಪಡೆಯುವುದೆಂದರೆ ನನಗೆ ಅತೀ ಇಷ್ಟದ ಕೆಲಸವಾಗಿಬಿಟ್ಟಿದೆ. 


ಯೊಹಾನ್ ಕಳೆದ ೮ ವರ್ಷಗಳಿಂದ ಒಂದೇ ಜಾಗೆಯಲ್ಲಿ ನಿಂತು ಬಸ್ಕಿಂಗ್ ಮಾಡುತ್ತಿದ್ದಾನೆ , ತನ್ನನು ಅಂತಾರಾಷ್ಟ್ರೀಯ ಸಂಗೀತ ಕಲಾವಿದ ಎಂದು ಕರೆದುಕೊಳ್ಳುವ ಇವನು  ಅದಕ್ಕೆ ಹೇಳುವ ಕಥೆಯೂ ಸ್ವಾರಸ್ಯಕರ,  ನಾನು ಮೂಲತಃ ರುಮೇನಿಯಾದವನು ಇಲ್ಲಿಗೆ ಬರುವ ಮೊದಲು ಯುಗೋಸ್ಲಾವಾಕಿಯ , ಹಂಗೇರಿ , ರಷ್ಯಾ ಗಳಲ್ಲಿ ಹೀಗೆ ಕಳೆದ ೩೦ ವರುಷಗಳಿಂದ ನಾನೇ ಸೃಷ್ಟಿಸಿದ ಈ ವಾದ್ಯ ನುಡಿಸಿದ್ದೇನೆ , ಜನರನ್ನ ರಂಜಿಸಿದ್ದೇನೆ, ಅದಕ್ಕೆ ನಾನು ವಿಶ್ವಕಲಾವಿದ ಎಂದು ತನ್ನ ಆ ನಗುವಿನಿಂದ ಎದುರಿನವರ ಮುಖದಲ್ಲೂ ನಗು ಹೊಮ್ಮಿಸುತ್ತಾನೆ . 

  

  ಬೆಳಿಗ್ಗೆ ಒಂಬತ್ತಕ್ಕೆ ಬಂದು ತನ್ನ ಕೆಲಸ ಶುರು ಮಾಡಿ ಸಂಜೆ ಆರಕ್ಕೆ ಮನೆಗೆ ಮರಳುತ್ತಾನೆ , ಇತ್ತೀಚಿಗೆ ಜನ ಸಾಮಾನ್ಯರೇ ಅವನನ್ನ '' Belfast music icon'' ಎಂದು ಕರೆಯುವದನ್ನ ನೋಡಿದರೆ ಅವನು ಅದೆಷ್ಟು ಜನರ ಪ್ರೀತಿ ಪಡೆದಿದ್ದಾನೆ ಎಂಬುದನ್ನ ವಿವರಿಸಿ ಹೇಳಬೇಕಿಲ್ಲ. ಒಂದು ದಿನ ಅವ ಆ ಜಾಗೆಯಲ್ಲಿ ಇಲ್ಲ ಎಂದರೆ ಮನಸಿಗೆ ಕಸಿವಿಸಿ ಆಗುವುದು ಸುಳ್ಳಲ್ಲ.


ಅವನನ್ನು ನೋಡಿದಾಗಲೆಲ್ಲ ನನಗೆ ನೆನಪಾಗುವುದು ಧಾರವಾಡ ದ ಗಜಾನನ ಮಹಾಲೆ (ಮಹಾಲೆ ಮಾಮ್) ಅವರ ನಗುವು ಹೀಗೆ ಇತ್ತು , ನನ್ನಂಥ ಅದೆಷ್ಟು ಚಿಕ್ಕ ಪುಟ್ಟ ಕಲಾವಿದರಿಗೆ ಸಹಾಯ ಮಾಡಿಲ್ಲ ಅವರು,  ಹಾರ್ಮೋನಿಯಂ ಸಾಥಿಗೆ ಬಂದರೂ ಒಮ್ಮೆಯೂ ಸಂಭಾವನೆ ಸ್ವೀಕರಿಸಿದವರಲ್ಲ , ''ಮುಂದ ನೀ ದೊಡ್ಡ ಹೆಸರು ಮಾಡ್ತಿಯಲ್ಲ ಆವಾಗ ಕೊಡು ಈಗ ಬ್ಯಾಡ '' ಅಂತ ಹೇಳಿ ತಲೆ ನೇವರಿಸಿ ಆಶೀರ್ವಾದ ಮಾಡುತ್ತಿದ್ದರು. ಗಾಯನದಲ್ಲಿ ತಪ್ಪುಗಳಾದರೆ ಕಾರ್ಯಕ್ರಮದ ನಂತರ ಬಂದು ಮೆತ್ತಗಿನ ಧ್ವನಿಯಲ್ಲಿ ಅದನ್ನು ತಿದ್ದಿ ಹೇಳಿಕೊಡುತ್ತಿದ್ದರು. ಎದುರು ಬದುರು ಸಿಕ್ಕಾಗ "ಆರಾಮ್ ಅದೀರಲ್ಲ" ಎಂದು ಮೆತ್ತಗೆ ಕೇಳಿ.. "ಆರಂ ಇರ್ರಿ" ಅನ್ನುವಾಗಿನ ಆ ಮಂದಸ್ಮಿತ ಇನ್ನೂ ಕಣ್ಣ ಮುಂದೇ ಇದೆ. 


ಯೊಹಾನ್ ಬೆಲ್ಫಾಸ್ಟ್ ಎಂದು ಹುಡುಕಿದರೆ ಅವನ ಹೆಸರಿನಲ್ಲಿ ಗೂಗಲ್ ಪೇಜ್ ತೆರೆದುಕೊಳ್ಳುತ್ತದೆ ,  ಮಹಾಲೆ ಮಾಮ ನನ್ನ ಮನಸಿನ ಪುಟಗಳಲ್ಲಿ....

ಬಂಗಾರದೆಲೆಯ ಸಿಂಗಾರ ನಮ್ಮ ಭೂಮಿತಾಯಿಗೆ

 ಶರದೃತುವಿನಾಕಾಶ ಬೆಳದಿಂಗಳಾ ಲಾಸ್ಯ 

ಮಂದಾಮಿಲನ ಹಾಸ ನೋಡೇ ಸಖಿ  ನೀ….


ಈ ಹಾಡನ್ನು ನಾನೇ ಅದೆಷ್ಟು ಬಾರಿ ಹಾಡಿಲ್ಲ ಆದರೆ ಶರದೃತು ಎಂದರೆ, ಚಳಿಗಾಲದ ಆರಂಭ ,ನವರಾತ್ರಿ , ಮೆತ್ತಗೆ ಒಡೆಯಲು  ಶುರುವಾಗುವ ಚರ್ಮ ಹಿಮ್ಮಡಿ , ಹಾಸಿಗೆ ಹೊದಿಕೆಗಳಿಗೆ ವ್ಯಾಸಲೀನ್, ಬೊರೋಲೀನ್ ಗಳ ಕಮಟು, ಇಷ್ಟು ಬಿಟ್ಟು ಬೇರಾವ ಭಾವ ನನ್ನ ಮನದಲ್ಲಿ ಸುಳಿಯುತ್ತಿರಲಿಲ್ಲ. 


ನಾನು ನಾರ್ದರ್ನ್ ಐರ್ಲೆಂಡ ಗೆ ಬಂದಿದ್ದು ಅಕ್ಟೋಬರ್ ತಿಂಗಳ ಕೊನೆಯದಿನ,  ಮೊದಲ ಮುಂಜಾವು ಕಿಟಕಿ ಪರದೆ ಸರಿಸಿ ನೋಡಿದರೆ ಎಲ್ಲ ಮರಗಳು ಅರಿಶಿನ ಕುಂಕುಮ ಹಿಡಿದು, "ಸ್ವಾಗತ ನಿನಗೆ ನಮ್ಮೂರಿಗೆ " ಎನ್ನುವಂತೆ ನಿಂತಿದ್ದವು. ಆ ಚಂದ ಇನ್ನು ನನ್ನ ಕಣ್ಣ ಮುಂದೆ ಕಟ್ಟಿದಂತಿದೆ.


 ನಮ್ಮ ಶರದೃತು ಇಲ್ಲಿನ ಆಟಮ್ ಕಾಲ . ಚಿಕ್ಕ ಚೈತ್ರದಂತೆ ಭಾಸವಾಗುತ್ತದೆ. 

ಜೂನ್ ತಿಂಗಳಿಂದ ಸೆಪ್ಟೆಂಬರ್ ಮೊದಲ ವಾರದವರೆಗೆ ಇರುವ ಬೇಸಿಗೆಯ ಬಿಸಿಯನ್ನೆಲ್ಲ ಈ ಎಲೆಗಳೇ ಹೀರಿಕೊಂಡವೇನೋ ಆ ಸೆಖೆ ತಾಳಲಾಗದೆ ಮರದಿಂದ ಹಣ್ಣು ಹಣ್ಣಾಗಿ ಬೀಳುತ್ತಿವೆ ಏನೋ ಎಂಬಂತೆ ಸಿಗಮೋರ್, ಮೇಪಲ್, ಮರದ ಎಲೆಗಳು ಬಣ್ಣ ಬದಲಿಸಿಕೊಂಡು ಒಂದೊಂದಾಗಿ ಉದುರಿ ದಾರಿ ಗುಂಟ ಬಣ್ಣದ ಗುಡಾರ ಹಾಸುತ್ತವೆ.


ನಾ ಇರುವ ಪ್ರದೇಶದಲ್ಲಿ ಮರಗಳ ಎಲೆಗಳು ಹಳದಿ ನವಿರುಗೆಂಪು ಬಣ್ಣಕ್ಕೆ ತಿರುಗಿ, ಉದುರುತ್ತವೆ, ಆದರೆ ಯುಕೆ ಯ ಇನ್ನು ಕೆಲವು ಭಾಗಗಳಲ್ಲಿ ಇವೆ ಜಾತಿಯ ಮರಗಳ ಎಲೆಗಳು ರಕ್ತಗೆಂಪು ಬಣ್ಣ ಹೊದ್ದು ಎಲೆ ಉದುರಿಸುತ್ತಾ ಬರಿದಾಗಿ ಚಳಿಗೆ ನಲುಗಲು  ಸಿದ್ಧವಾಗುತ್ತವೆ.. 


ಫಾಲ್ ಸೀಸನ್ ಎಂದು ಕರೆಯಲ್ಪಡುವ ಈ ಕಾಲ ಅದೆಷ್ಟೋ ಕವಿಗಳಿಗೆ ಸ್ಪೂರ್ತಿ ಕೊಟ್ಟು ತನ್ನ ಮೇಲೆ ಪದ್ಯ ಬರೆಯಲು ಪ್ರೇರೇಪಿಸಿದೆ , ಎಷ್ಟೇ ಒಳ್ಳೆಯ ಛಾಯಾಗ್ರಾಹಕರಾದರೂ, ಕಣ್ಣು ಗ್ರಹಿಸುವಷ್ಟು ಚಂದದ ಫಾಲ್ /ಆಟಮ್ ಚಿತ್ರಗಳನ್ನು ಕ್ಲಿಕ್ಕಿಸಲಾರರು ,ಆ ನೋಟವೇ ಅಂಥದ್ದು .



ಒಮ್ಮೊಮ್ಮೆ ಊರಿನಲ್ಲಿ ಬೇಸಿಗೆಗೆ ಅರಳುವ ಕಕ್ಕೆ ಹೂ, ಒಮ್ಮೊಮ್ಮೆ ಸೇವಂತಿಗೆ , ಕೆಲವೊಮ್ಮೆ ಚಿನ್ನದ ಎಲೆಗಳನ್ನೇ ಮರಕ್ಕೆ ಕಟ್ಟಿದ್ದಾರೇನೋ ಅನ್ನುವ ಭಾವ ಈ ಹಳದಿ ಮರಗಳನ್ನ ನೋಡಿದರೆ ಸ್ಪುರಿಸುತ್ತದೆ. 







ಅಂತರಂಗದ ಅಳಲು













ಹಾಗೆ ದಿನಕ್ಕೆಷ್ಟು ಬಾರಿ scroll 
ಮಾಡುತ್ತೇನೋ ಗೊತ್ತಿಲ್ಲ, 
ನೂರಾರು ಅಂಕಿಗಳು
ಪ್ರತಿ ಐದು ಜೋಡಿ ಸಂಖ್ಯೆಗಳಿಗೊಂದು ಹೆಸರು.

ಅಲ್ಲಿ ಒಂದಾದರೂ
ಮನಸಿನ ತುಮುಲ ತಿಳಿಮಾಡುವ, 
ನೋವಾಗಿದೆ ಮನಸಿಗೆ ಎಂದರೆ , 
ನಾನಿಲ್ಲವೇ ನಿನಗೆ ಎಂದು ಅಕ್ಕರೆ ಒಸರುವ
ಆರ್ದ್ರ ದನಿ ಸಿಗುವುದಿಲ್ಲ.ಆದರೂ ಹೇಳಿಕೊಳ್ಳುತ್ತೇವೆ
ಅವರಿವರ ಮುಂದೆ.

ಎಲ್ಲರೂ ಕೇಳುತ್ತಾರೆ 
ಕೇಳುವವರಿಲ್ಲ ಎಂದಲ್ಲ
ಮತ್ತದೇ ಕೇಳುತ್ತಾರೆ, 
ಅವರಿಗೆ ಬೇಕನಿಸಿದ್ದು
ಬೇಕಾದಂತೆ ಅರ್ಥೈಸಿಕೊಳ್ಳುತ್ತಾರೆ, 

ಸಾಧಾರಣ ಎಷ್ಟಿರಬಹುದು ಮನಸಿನ ಸ್ಟೋರೇಜ್ 
ಎಡಿಟ್ , ಡಿಲೀಟ್,ಆಡ್ ನ್ಯೂ ವರ್ಡ್
ಎಲ್ಲವೂ ಮನದಲ್ಲೇ, 
ಸಂದರ್ಭಕ್ಕೆ ತಕ್ಕಂತೆ, 
ಅನುಕೂಲ ಸಿಂಧು, ಸೀಮಾತೀತ ಮನಸು.

ಮನಸಿನ ಅದ್ಯಾವುದೋ
ಅಲೆಗಳ ಹೊಡೆತಕ್ಕೆ ಸಿಕ್ಕು
ಅರೆಜೀವ ಮಾತ(ನೊಂದು) 
ಹೇಳಿರುತ್ತೇವೆ, ಕೇಳುವವರಿದ್ದಾರೆಂದು.
ಮಾತಾಡಿ ಹಗುರಾಗಿ ಮರೆತೇ ಬಿಡುತ್ತೇವೆ.

ಅದಾರದೋ ಮನದ ಕಿನಾರೆಯಲ್ಲಿ
ಅಂದೆಂದೋ ಸತ್ತುಬಿದ್ದ ಆ ಮೀನಿನಂಥ 
ಚಂಚಲ, ಈಗ ನಿಶ್ಚಲ ಮಾತನ್ನ 
ಒಣಗಿಸಿ ಉಪ್ಪು ಸವರಿ ಅದೆಲ್ಲೋ ಹೊಗೆ ಸಂದಿಯಲ್ಲಿ ತೂಗು ಹಾಕುತ್ತಾರೆ.

ಆ ದಿನ ಅದ್ಯಾರೋ ಬರುತ್ತಾರೆ
ಮಾತಿನ ಭೋಜನ ಶುರುವಾಗುತ್ತದೆ
ಹೊಸ ಹೊಸ ಮಾತು, ಯಾರ ಅಂಗಳದ ಹಪ್ಪಳವೋ
ಯಾರ ಮಹಡಿಯಲ್ಲಿ ಒಣಗಿದ ಸಂಡಿಗೆಯೋ.
ಚಪ್ಪರಿಸುತ್ತಾರೆ. 

ಹಾ ಈಗ ಇವರ ಸರದಿ, 
ನೋಡಿ!ನೋಡಿ ಇಲ್ಲಿ
ನನ್ನಲ್ಲಿದೆ ಆ ಕೊಳೆತ ಮೀನು, ಅದೆಷ್ಟು ಜತನದಿಂದ ಕಾದಿರಿಸಿದ್ದೆ ಗೊತ್ತಾ? 
Just for you people!!

ವಾಸನೆ ಬರುತ್ತಿದೆ.
ಮೀನು ತಿನ್ನುವವರು ಆಹಾ ಎಂದರೆ, 
ತಿನ್ನದವರು ಮೂಗು ಮುಚ್ಚಿಕೊಂಡು
ಕಿವಿ, ಕಣ್ಣು, ಅರಳಿಸಿಕೊಂಡು
ಕೂತಿದ್ದಾರೆ. 
ಕೊಳೆತು ,ಒಣಗಿ, ಮಾತೆಂಬ ಆ ಮೀನು 
ಊರೆಲ್ಲ ಗುಲ್ಲೆಬ್ಬಿಸಿ 
ಇಲ್ಲದ ಬಾಲ ಸೇರಿಸಿಕೊಂಡು
ಬಣ್ಣಗಳನ್ನು ಹಚ್ಚಿಕೊಂಡು
ಮತ್ತೆ ನನ್ನ ಅಕ್ಕ ಪಕ್ಕ ಹೊಸ ಜೀವ ಪಡೆದು 
ಹರಿದಾಡುತ್ತಿದೆ

ನಂಬಬೇಕೆ?
ಮತ್ತೆ ಈ ಅಳಲ ಹೇಳಲು ಹೊಸ 
ಅಂಕಿಗಳನ್ನು 
ಹುಡುಕಬೇಕೆ? 

ಅಮಿತಾ ರವಿಕಿರಣ್