Saturday, April 1, 2023

ಬದುಕು ಬದಲಿಸಿದವರು

 


                       ನಾನು ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ ಸಮಯ ಓದಿಗಿಂತ ಕಾರ್ಯಕ್ರಮ, ಯುವತಿ ಮಂಡಲ , ಸಂಗೀತ , ಕಸೂತಿ , ಪೇಂಟಿಂಗ್ ಅಂದುಕೊಂಡೆ ಓಡಾಡುತ್ತಿದ್ದೆ ಪಪ್ಪ ಯಾವತ್ತೂ ಈ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಲಿಲ್ಲ ಆದರೆ ಅಮ್ಮ ಮಾತ್ರ ಸದಾ ಓದು ಓದು ಎಂಬ ಮಾತ್ರವನ್ನು ನನ್ನ ಮುಂದೆ ಜಪಿಸುತ್ತಿದ್ದಳು, ಮನೆಗೆ ಬಂದ ಅತಿಥಿ, ಬಂಧು ಬಳಗದವರು ನನ್ನ ಬಗ್ಗೆ ಮೆಚ್ಚಿಗೆ ವ್ಯಕ್ತ ಪಡಿಸಿದರೆ ಅಮ್ಮ ಅವರ ಮುಂದೆಯೇ ಓದೊದು ಒಂದು ಬಿಟ್ಟು ಮತ್ತೆಲ್ಲ ಮಾಡ್ತಾಳೆ ಅವಳು ಪಠ್ಯ ಪುಸ್ತಕ ಧೂಳು ತಿಂತಿವೆ ಪರೀಕ್ಷೆಯಲ್ಲಿ ಏನು ಬರೀತಾಳೋ ದೇವರಿಗೆ ಗೊತ್ತು ಅಂತ ದೂರು ಹೇಳುತ್ತಿದ್ದಳು. ಅಷ್ಟೊತ್ತು ನನ್ನ ಕೊಂಡಾಡಿದ ಅದೇ ಬಂಧು ಬಳಗ , ಸ್ನೇಹಿತರು ''ಅಯ್ಯೋ ಓದಬೇಕು ಅಲ್ವಾ? ಇದೆಲ್ಲ ಸ್ವಲ್ಪ ದಿನ ಚಂದ ಮುಂದೆ ನೌಕರಿ ಮಾಡಬೇಕೆಂದರೆ ಮಾರ್ಕ್ಸ್ ಕಾರ್ಡ್ ಮೇಲೆ ನಾಲ್ಕು ಮಾರ್ಕ್ಸ್ ಇರಬೇಕಲ್ವಾ ಅಂದು ತಮ್ಮ ಮಾತಿನ ಧಾಟಿ ಬದಲಿಸುತ್ತಿದ್ದರು. ನಾನು ಅದ್ಯಾವ ಮಾತನ್ನು ಕೇಳುತ್ತಿರಲಿಲ್ಲ ಅಮ್ಮ ಹೇಳೋದು ನಿಲ್ಲಿಸುತ್ತಿರಲಿಲ್ಲ. 

ಇಂತಹ ಸಂಧರ್ಭದಲ್ಲೇ ನಾನು ಸುನಿತಾ ಜಾಧವ್ ಅವರನ್ನ  ಭೇಟಿಯಾಗಿದ್ದು ರಾಷ್ಟ್ರೀಯ ಸ್ವಯಂ ಸೇವಿಕಾ ಸಮೀತಿಯ ಪ್ರಚಾರಕಿಯಾಗಿದ್ದ ಅವರು ಕೆಲವು ಭೇಟಿಯ ನಂತರ ನಮ್ಮ ಮನೆಗೆ ಬಂದಿದ್ದರು , ಅಮ್ಮನ ಎದುರು ನಿಮ್ಮ ಮಗಳ ನೋಡಿದ್ರ ನಂಗ ಭಾಳ ಖುಷಿ ಆಗ್ತದ ರೀ, ಎಷ್ಟು ಚಲೋ ಬೆಳಸೀರಿ ನೀವು ಅಂದು ಇನ್ನೇನೋ ಹೇಳೋಕೆ ಮುಂಚೆಯೇ ಅಮ್ಮ ಅವಳ ಎಂದಿನ ಅಸಮಾಧಾನ ಹೊರಗೆ ಹಾಕಿದಳು '' ಅಭಾಸ ಮಾಡಲ್ಲ ಕಾಲೇಜ್ ಪುಸ್ತಕ ಮುಟ್ಟಲ್ಲ ಬರೀ ಮರದಂಗಿ ಉಲನ್ ಸೂಜಿ ದಾರ ಅಂದು ದಿನ ಎಲ್ಲ ಕಳೀತಾಳೆ ಅಂತೆಲ್ಲ ಒಂದೇ ಸಮನೆ ಹೇಳೋಕೆ ಶುರು ಮಾಡಿದಳು. ಅಮ್ಮನ ಮಾತನ್ನು ಸಮಾಧಾನವಾಗಿ ಕೇಳಿದ ಅವರು '' ನನಗ್ ನಿಮ್ಮ ಮಾತು ಅರ್ಥ ಆಗ್ತದ ರೀ ನಾನು ಕಾಲೇಜು ಪ್ರೊಫೆಸ್ಸರ್ ಇದ್ದೀನಿ , ಓದಬೇಕು ಬರೀಬೇಕು ಅದನ್ನ ಎಲ್ಲಾರು ಮಾಡ್ತಾರ, ಆದ್ರ ಇಂಥ ವಿದ್ಯೆ ಎಲ್ಲಾರಿಗೂ ಒಲಿಯಾಂಗಿಲ್ಲ ರೀ. ಅಕಿ ಹಿಂಗ ಹಾಡ ಹೇಳ್ಕೋತ , ಮದರಂಗಿ ಹಾಕೋತ , ರಂಗೋಲಿ , ಕಸೂತಿ ಮಾಡ್ಕೊಂಡ್ ಇರ್ಲಿ ಬಿಡ್ರಿ . ಮುಂದ ಯಾವತ್ತೂ ಅಕಿಗೇ ಬೇಜಾರ್ ಅನ್ನೋದು ಬರುದಿಲ್ಲ ಯಾಕಂದರ ಯಾರ್ ಇಲ್ಲ ಅಂದ್ರೂ ಇವ ಆಕಿ ಜೋಡಿ ಇರ್ತಾವು'' ಅಂದು ಅಮ್ಮನಿಗೆ ಸಮಾಧಾನ ಮಾಡಿದ್ದರು. ಇದು ಅಮ್ಮನಿಗೆ ಎಷ್ಟು ಅರ್ಥವಾಯಿತೋ ಗೊತ್ತಿಲ್ಲ ನನಗೆ ಮಾತ್ರ ಮನಸಲ್ಲಿ ಉಳಿದು ಹೋಯಿತು. ಆಮೇಲೆ ಒಂದೆರಡು ಸಲವೇ ನಾವು ಭೇಟಿ ಆಗಿದ್ದು.ಆದರೂ  ಅವರು ಹೇಳಿದ  ಆ ಮಾತುಗಳನ್ನ ಅದೆಷ್ಟು ಸಲ ಮನನ ಮಾಡಿಕೊಂಡಿದ್ದೇನೋ ಏನೋ ! ಈ ಹವ್ಯಾಸಗಳಿಂದ ನನ್ನ ಬದುಕು ಎಷ್ಟು ಸುಂದರ ಅನಿಸಿದಾಗೆಲ್ಲ ಸುನೀತಕ್ಕನ ಆ ಮಾತುಗಳು ಮನಃಪಟಲದ ಮೇಲೆ ಮೂಡಿ ಮಿಂಚುತ್ತಿತ್ತು.  ೨೦೨೦ ರ ವರ್ಷ ಪೂರ್ತಿ ಮನೆಯಲ್ಲಿರಬೇಕಾದ ಅನಿವಾರ್ಯತೆ ತಂದಿಟ್ಟ ಈ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ನಾನು ಈ ಹವ್ಯಾಸಗಳಿಂದಾಗಿಯೇ ಒಮ್ಮೆಯೂ ''ಛೆ ಬೇಜಾರು! ಅಂತಾಗಲೋ,'' ಸಮಯ ಹೇಗೆ ಕಳೆಯಲಿ'' ಎಂತಾಗಲೋ ಅನಿಸದಿದ್ದಾಗ, ಅಂದು ಸುನೀತಕ್ಕ ಹೇಳಿದ ಮಾತುಗಳು ಮತ್ತೆ ಮತ್ತೆ ನೆನಪಾದವು. 

ಇದಾಗಿ ಅದೆಷ್ಟೋ ವರ್ಷಗಳ ನಂತರ ನನಗೆ ಬೆಲ್ಫಾಸ್ಟ್ ನಲ್ಲಿ ನೆಲೆಸಿದ  ಹೊರದೇಶದ ಕಲಾವಿದರ ಸೆಮಿನಾರ್ ಒಂದರಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು , ಬೆಳಿಗ್ಗೆಯಿಂದ ಸಂಜೆತನಕ ಇದ್ದ ಆ ಕಾರ್ಯಕ್ರಮಕ್ಕೆ ನೂರಾರು ಕಲಾವಿದರು ಆಗಮಿಸಿದ್ದರು, ಭಾಷಣಗಳ ಮೇಲೆ ಭಾಷಣಗಳು ನಡೆಯುತ್ತಿದ್ದವು , ನಾನು ಸುಮ್ಮನೆ ಒಂದು ಹಸಿರು ಬಣ್ಣದ ಹಾಳೆಯಲ್ಲಿ ಕಪ್ಪು ಶಾಯಿ ಪೆನ್ನಿನಿಂದ ವಾರ್ಲಿ ಚಿತ್ತಾರಗಳನ್ನು ಬಿಡಿಸುತ್ತ ಅವರ ಮಾತುಗಳನ್ನ ಕೇಳುತ್ತಿದ್ದೆ , ಊಟದ ವಿರಾಮ ಇದ್ದಾಗ ಭಾರತೀಯರಂತೆ ಕಾಣುತ್ತಿದ್ದ ಒಬ್ಬ ಮಹಿಳೆ ಬಂದು ನನ್ನನ್ನು ಮಾತನಾಡಿಸಿದರು '' ನೀನು ಮಹಾರಾಷ್ಟ್ರದವಳ ?'' ಎಂದರು ನಾನು ಅಲ್ಲ ಕನ್ನಡತಿ ಎಂದೆ ನೀ ಬಿಡಿಸುತ್ತಿರುವ ಆ ಚಿತ್ರ ಮಹಾರಾಷ್ಟ್ರ ಮೂಲದ್ದು , ನಾ ಇಲ್ಲಿಗೆ ಬಂದು ೧೮ ವರ್ಷ ಆದರೂ ಒಮ್ಮೆಯೂ ಯಾರು ಇದನ್ನ ಇಲ್ಲಿ ಪ್ರದರ್ಶಿಸಿದ್ದು ನೋಡಿಲ್ಲ, ನನಗೆ ತುಂಬಾ ಖುಷಿ ಆಯಿತು ಅಂದರು. ಒಂದು ಸರಳ ಚಿತ್ರಕಲೆ ನೋಡಿ ಅಷ್ಟು ಭಾವುಕರಾಗುವ ಅಗತ್ಯವಿದೆಯೇ ಎಂದು ಹಲವರಿಗೆ ಅನಿಸಬಹುದು, ಇದೊಂಥರಾ ವಿದೇಶದ ನೆಲದಲ್ಲಿ ನಮ್ಮ ಇಷ್ಟದ ಹಾಡು ಸ್ಪೀಕರ್ ನಲ್ಲಿ ಜೋರಾಗಿ ಕೇಳಿಸುತ್ತಿದ್ದರೆ , ಪಿಜ್ಜಾ , ಫ್ರೈ ಮೆನುವಿನಲ್ಲಿ ಬರಗೆಟ್ಟ ಕಂಗಳಿಗೆ ಬೆಣ್ಣೆ ದೋಸೆ , ಇಡ್ಲಿ ವಡೆ ಕಾಣಿಸಿದರೆ , ಕೆಂಪು ಇಟ್ಟಿಗೆಯ ಒಂದೇ ನಮೂನೆಯ ವಿಕ್ಟೋರಿಯನ್ ಶೈಲಿ ಮನೆಗಳ ಸಾಲಿನಲ್ಲಿ ಒಂದು ಮನೆಯ ಮುಂದೆ ತೋರಣ ವೊ ರಂಗೋಲಿಯೂ ಕಂಡರೆ ಆಗುವ ಖುಷಿ, ಸಂಭ್ರಮ ಅವರಿಗೂ ವರ್ಲಿ ಕಲೆ ಯನ್ನು ನೋಡಿ ಆಗಿತ್ತು. 

ಅವರ ಹೆಸರು ವಸುಂಧರಾ ಕಾಂಬ್ಳೆ ಮುಂಬೈ ಮೂಲದವರು , ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಹಲವಾರು ವರ್ಷಗಳ ಕಾಲ ಇತಿಹಾಸ ಪಾಠ ಮಾಡುತ್ತಿದ್ದರು ಕಾರಣಾಂತರಗಳಿಂದ ೧೯೯೫ರಲ್ಲಿ ಬೆಲ್ಫಾಸ್ಟ್ ಗೆ ಬಂದು ನೆಲೆಸಿದರು, ಸ್ಥಳೀಯ ರಾಜಕೀಯದಲ್ಲಿ  ತೊಡಗಿಸಿಕೊಂಡಿದ್ದ ವರು  ೬ ವರ್ಷಗಳ ಕಾಲ ಸ್ಥಳೀಯ ಪಕ್ಷವೊಂದರ ಕೌನ್ಸಿಲರ್ ಕೂಡ ಆಗಿದ್ದರು. ರೇಸಿಸಂ ನ್ನು ತೀವ್ರವಾಗಿ ಖಂಡಿಸುತ್ತಾ ತಮಗೆ ಸಾಧ್ಯವಾದಾಗಲೆಲ್ಲ ಈ ನಾಡಿಗೆ ವಲಸೆಬಂದ ಹಲವು ದೇಶದ ಜನರಿಗೆ ಅವರು ಸಹಾಯ ಮಾಡುತ್ತಿದ್ದರು. ಇಷ್ಟಲ್ಲದೆ ಹೊಲಿಗೆ, ಕಸೂತಿ, ಸಮಾಜ ಸೇವೆ. ಸದಾ ಕಾಲ ಒಂದಲ್ಲ ಒಂದು ಕೆಲಸ ಮಾಡುತ್ತಲೇ ಇರುವ ಅವರನ್ನು ನೋಡಿದರೆ ಬಿಡುವಿರದ ದಣಿವಾಗದ ಜೀವನ್ಮುಖಿ ಇವರು ಅನಿಸುತ್ತಿತ್ತು .  ಒಂದಷ್ಟು ಹಿರಿಯ ಜೀವಗಳನ್ನು ಸೇರಿಸಿ intercultural friendship club ಎಂದು ಶುರುಮಾಡಿ ಹಲವಾರು ಕಲೆ , ಸಂಗೀತ , ಕರಕುಶಲ ತರಗತಿಗಳನ್ನು ನಡೆಸುತ್ತ ಅದರ ಮೂಲಕ ನನಗೆ ಹಲವಾರು ವಾರ್ಲಿ ಕಲೆಯ ವರ್ಕಶಾಪ್ ಮಾಡಲು ಅವಕಾಶ ಮಾಡಿ ಕೊಟ್ಟರು. ತರಗತಿ ಉದ್ದಕ್ಕೂ ಇದು ನನ್ನ ಊರಿನ ಕಲೆ , ಅಂತ ಖುಷಿಯಿಂದ ಹೇಳುತ್ತಲೇ ಇದ್ದರು. ಮನಸು ಬಂದಾಗ ಬುದ್ಧಿ ಮಾತು ಹೇಳುತ್ತಿದ್ದರು , ''ಜನರನ್ನು ಒಮ್ಮೆಲೇ ನಂಬಬೇಡ , ಮನಸಿನ ನೋವುಗಳನ್ನು ಯಾರ ಮುಂದೆಯೂ ಹರವಬೇಡ,' ಅಂತ ಯಾವಾಗಲೂ ಹೇಳುತ್ತಿದ್ದರು. 
ಒಮ್ಮೆ ಮನೆಗೆ ಬಂದಾಗ ವಾಲ್ನಟ್ ಬರ್ಫಿ ಮಾಡಿದ್ದೆ. ನಿಂಗೆ ಬೇಜಾರ್ ಇಲ್ಲ ಅಂದ್ರೆ ನಂಗೆ ಇದನ್ನ ಕಟ್ಟಿ ಕೊಡು ನಾನು ಮನೆಗೆ ಹೋಗಿ ಆರಂ ಆಗಿ ತಿಂತೇನೆ ಅಂದು ಕೊಟ್ಟಿಸಿಕೊಂಡು ಹೋಗಿದ್ದರು. ಗೀತಾ ದತ್ , ಲತಾ ಮಂಗೇಶ್ಕರ್ ಹಾಡುಗಳನ್ನ ಹಾಡು ಅಮಿತಾ ನನಗೆ ನಿನ್ನ ದನಿಯಲ್ಲಿ ಅವನ್ನ ಕೇಳಬೇಕು ಅಂತ ಭೇಟಿ ಆದಾಗಲೆಲ್ಲ ಹೇಳುತ್ತಿದ್ದರು. ನಾನು ಏನೇ ಚಿಕ್ಕ ಕಲೆ ಸಂಗೀತ, ಅಡುಗೆ ಬಗ್ಗೆ ಪೋಸ್ಟ್ ಮಾಡಿದರು ಅವರ ಉತ್ತರ , ಒಂದು ಶಾಭಾಷಗಿರಿ ನನ್ನ ತಲುಪುತ್ತಿತ್ತು. ಒಮ್ಮೆ '' ಎಷ್ಟು ಚನ್ನಾಗಿ ಇದನ್ನೆಲ್ಲಾ ರೂಡಿಸಿಕೊಂಡಿದೀಯ ಹೀಗೆ ಇರು ಇದರಿಂದ ನಿನ್ನ ಮನಸು ನಿರ್ಮಲವಾಗಿರುತ್ತದೆ ಆದರೆ ಯಾರಿಗೂ ಫ್ರೀ ಸರ್ವಿಸ್ ಮಾಡಬೇಡ'' ಮಕ್ಕಳಿಗೆ ಶಾಲೆಯಲ್ಲಿ ಕಲಾಸ್ವಾಧನೆಯನ್ನು ಮೊದಲು ಹೇಳಿಕೊಡಬೇಕು ನೋಡು. ಎನ್ನುತ್ತಿದ್ದರು 

ವಸುಂಧರಾ ಅವರು ಹೇಳುವ ಮಾತುಗಳು ನನಗೆ ಸುನೀತಕ್ಕ ನ  ನೆನಪಿಸುತ್ತಿತ್ತು. ಈ ಪೆಂಡಮಿಕ್ ಸಮಯದಲ್ಲಿ ನಾನು ವಸುಂಧರಾ ಅವರ ಪೋಸ್ಟ್ ಗಳಿಗಿಮೆ ಲೈಕ್ ಹಾಕುವುದನ್ನು ಬಿಟ್ಟರೆ ಒಮ್ಮೆಯೂ ಮಾತನಾಡುವ ಪ್ರಯತ್ನ ಮಾಡಲೇ ಇಲ್ಲ , ಹೋದವಾರ ಯಾವುದೋ ವಾಲೆಂಟಿಯರ್ ಗ್ರೂಪಿನೊಂದಿಗೆ ಶ್ರಮದಾನ ಮಾಡಿದ್ದರ ಬಗ್ಗೆ ಪೋಸ್ಟ್ ಹಾಕಿದ್ದರು ಅದಾದ ಎರಡೇ ದಿನಕ್ಕೆ ಇಹಲೋಕದ ಯಾತ್ರೆ ಮುಗಿಸುತ್ತಾರೆಂಬ ಸುಳಿವು ಯಾರಿಗೂ ಇರಲಿಲ್ಲವೇನೋ. 
ಇತ್ತ ತಂಗಿ ಹುಬ್ಬಳ್ಳಿಯಿಂದ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಸುದ್ದಿಚಿತ್ರ ಕಳಿಸಿದ್ದಳು ಸುನೀತಕ್ಕ ಕೂಡ ಇದೆ ವಾರ ಹೃದಯಾಘಾತದಿಂದ ತೀರಿಕೊಂಡರು. ಮನಸಿಗೆ ಆದ ವಿವ್ಹಲತೆಯನ್ನು ದುಃಖಅನ್ನಲಾ, ಯಾತನೆ ಅನ್ನಲಾ ಗೊತ್ತಾಗುತ್ತಿಲ್ಲ. ನೆನೆದು ವಿದಾಯ ಹೇಳುವುದರ  ಹೊರತಾಗಿ ಇನ್ನೇನೂ  ಮಾಡಲಾರೆ  ಅವರಿಬ್ಬರ ನೆನಪು ಸದಾ ಹಸಿರು



ಕಾಗದದ ವಿಮಾನ

                            ಮೊದಲ ಬಾರಿ ಆ ಅಚ್ಚರಿಯನ್ನು ಕಂಡಿದ್ದು ಒಂದನೇ ತರಗತಿಯಲ್ಲಿರುವಾಗ, ಪುಟ್ಟ ಹಾಳೆಯನ್ನು ಅಡ್ಡ ಉದ್ದ  ಹೇಗೇಗೋ ಮಡುಚುತ್ತ ಚಂದದೊಂದು ವಿಮಾನ ಮಾಡಿ ಗಾಳಿಯಲ್ಲಿ ಹಾರಿ ಬಿಡುವುದು. ಈ ವಿಮಾನ ಮಾಡಲು ಬೇಕಾಗುವ ಹಾಳೆಗೆ ಅಳತೆಯ ಗೋಜಿಲ್ಲ, ಗಾಳಿಯಲ್ಲೊಮ್ಮೆ ಜುಂಯ ಎಂದು ಹಾರಿ ಭೂಮಿಗೆ ಇಳಿಯುವಾಗ ಮಟ್ಟಸವಾದ ನೆಲವೂ ಬೇಕಿಲ್ಲ, ಬಾನ ಮುಟ್ಟುವ ಆಸೆ ಹೊತ್ತು ಹಾರುವ ಈ ವಿಮಾನ ಒಂದಷ್ಟು ದೂರ ಹೋಗುತ್ತಲೇ ಕೈಕಾಲು ಕೊಡವಿಕೊಂಡು ನೆಲದಮೇಲೆ ಬಿದ್ದು ಮೈ ನೋಯಿಸಿಕೊಂಡಾಗ ಅಳುವುದಿಲ್ಲ, ಆದ ಅಪಘಾತದ ಸುಳಿವೂ ಕೊಡದಂತೆ ಮತ್ತೆ ಹಾರಲು ಸಿದ್ಧವಾಗುತ್ತದೆ. ಆಹಾ ಎಂಥ ಮಜವಾದ ಆಟ ಇದು, 


ನಾ ಇದ್ದ ಊರಲ್ಲಿ ಆಕಾಶವೇನೋ ಇತ್ತು ಸ್ವಚಂದವಾಗಿ ಹಾರಾಡೋ  ಹಕ್ಕಿಗಳೂ ಅಸಂಖ್ಯ, ಆದರೆ ನಿಜವಾದ ವಿಮಾನಗಳು ನೋಡ ಸಿಗುತ್ತಿದ್ದುದು ಮಾತ್ರ ಅಪರೂಪ, ಹಾಗೆ ಗುಡುಗಿನ ತಮ್ಮನಂತೆ ಭಾಸವಾಗುವ ಸದ್ದೊಂದು ಬಾನ ಒಡಲಿಂದ ಕೇಳಿಸತೊಡಗಿತೆಂದರೆ ಹೌದು ಅದು ವಿಮಾನವೇ, ಅದನ್ನ ನೋಡಲು ನಾವೆಲ್ಲಾ ಮಕ್ಕಳು ತರಗತಿಯ ಮಧ್ಯದಲ್ಲೇ ಅಕ್ಕವರ ಅನುಮತಿಗೂ ಕಾಯದೆ ತರಗತಿಯಿಂದ ಹೊರಗೆ ಹೋಗಿ ಆಕಾಶ ನೋಡುತ್ತಾ ನಿಲ್ಲುತ್ತಿದ್ದೆವು, ಆ ದಿನ ಮೋಡವಿದ್ದರೆ ಬರೀ ಆ ಗುಂಯ್ ಎಂಬ ಸದ್ದಲ್ಲೇ ಸಮಾಧಾನ ಮಾಡಿಕೊಳ್ಳುತ್ತ 'ಹ್ಯಾಪಮಾರಿ' ಹಾಕೊಂಡು ತರಗತಿಯೊಳಗೆ ಹೋಗಿ ಕೂತು ಒಂದಷ್ಟು ಬಯ್ಯಿಸಿಕೊಳ್ಳುತ್ತಿದ್ದೆವು. ಅದು ಎಲ್ಲ ವಿದ್ಯಾರ್ಥಿಗಳನ್ನೂ ಒಟ್ಟಿಗೆ ಬಯ್ಯುವ session ಆಗಿತ್ತಾದ್ದರಿಂದ ಯಾರಿಗೂ ಬೇಜಾರಾಗುತ್ತಿರಲಿಲ್ಲ ,ವಿಮಾನ ಕಾಣಿಸದೆ ಹೋಗಿದ್ದಕ್ಕಷ್ಟೇ ನಮ್ಮ ಮುಖದಮೇಲೆ ನಿರಾಸೆ ಇರುತ್ತಿತ್ತಾದರೂ ಅಕ್ಕವರಿಗೆ ತಾವು ಬೈದಿದ್ದಕ್ಕೆ ಮಕ್ಕಳು ಮೆತ್ತಗಾದರು ಅನ್ನುವ ಒಂದು ಭ್ರಮೆ ಹುಟ್ಟಿ ಅವರು ಮತ್ತಷ್ಟು ದನಿ ಏರಿಸುತ್ತಿದ್ದರು. 

ಈ ಘಟನೆಯಾದ ಒಂದುವಾರ ಶಾಲೆಯ ಸುತ್ತಮುತ್ತ ಸಾಕಷ್ಟು ಹಳೆಯ ವಿಮಾನಗಳು ಕಾಣಸಿಗುತ್ತಿದ್ದವು, ಎಲ್ಲೆಂದರಲ್ಲಿ ಕೆಲವೊಮ್ಮೆ ತರಗತಿಯ ಮಧ್ಯವೇ ಏರೋಪ್ಲೇನ್ ಮಾಡುತ್ತಾ ಸಿಕ್ಕಿಬಿದ್ದು ಊಟಕ್ಕೆ ಬಿಟ್ಟಾಗ ಆಡಲು ಮಾಡಿಟ್ಟುಕೊಂಡಿದ್ದ ಅಷ್ಟೂ ವಿಮಾನಗಳು ಸೀಜ್ ಆಗಿ ಅಕ್ಕವರ ಟೇಬಲ್ ಡ್ರಾವರ್ ಸೇರಿ ಬಿಡುತ್ತಿದ್ದವು. 
ಜೊತೆಗೆ ಈ ಹಾಳೆ ವಿಮಾನಗಳನ್ನು ಮಾಡುವ ಪ್ರತಿಭೆ ಮೆರೆಯುತ್ತಿದ್ದುದು ಮಾತ್ರ ಕೊನೆಯ ಬೆಂಚಿನ , ಅಕ್ಕವರಿಗಿಂತ ಉದ್ದ ಇದ್ದ ಹುಡುಗರು,ಇದೊಂದು ಕಾರಣಕ್ಕೆ ತರಗತಿಯ ಉಳಿದೆಲ್ಲ ಮಕ್ಕಳು ಆ ಕೊನೇ ಬೆಂಚಿನ ಸುತ್ತ ಮುತ್ತಿಕೊಳ್ಳುತ್ತಿದ್ದೆವು. ಆಗೆಲ್ಲ ಈ ಜಾಣ ಹುಡುಗರು ಪೆನ್ಸಿಲ್ ಶಾರ್ಪ್ ಮಾಡುತ ಇನ್ನಿಲ್ಲದಂತೆ ಗಣಿತದ ಸಮಸ್ಯೆಗಳನ್ನು ಬಿಡಿಸಿ ಬಿಡಿಸಿ ರಾಶಿ ಹಾಕುತ್ತಿದ್ದರು, ನಾವು ಮಾತ್ರ ಆ ಜೋರು ಹುಡುಗರು ಚೌಕಾಕಾರದ ಹಾಳೆಯನ್ನು ಮೂತಿ ರೆಕ್ಕೆ ಬಾಲ ಬರುವಂತೆ ಮಡಚಿ ಅದಕ್ಕೊಂಚೂರು ಫೂಅಂತ ಗಾಳಿ ಊದಿ ಹಾರಿಸಲು ಸಿದ್ಧ ಮಾಡಿ ನಮ್ಮ ಕೈಗೆ ಕಾಗದದ ವಿಮಾನ ಕೊಡುವುದನ್ನೇ ಕಾಯುತ್ತ ನಿಂತಿರುತ್ತಿದ್ದೆವು.  

ಒಮ್ಮೊಮ್ಮೆ ಅಂತೂ ಜಾಣ ಹುಡುಗರಲ್ಲೊಬ್ಬ ಕೊನೆ ಬೆಂಚಿನ ಸುತ್ತ ಜಾತ್ರೆಪೇಟೆ ಮಾಡಿದವರ ಹೆಸರನ್ನು ಕಪ್ಪುಹಲಗೆಯಮೇಲೆ ಬರೆದು ಬಿಟ್ಟಿದ್ದ, ಅಕ್ಕವರು ಹುಣಸೆ ಅಡ್ಡರದಿಂದ ಕೈ ಮೇಲೆ ರಪರಪನೆ ಕೊಟ್ಟಿದ್ದರು, 
ಹಾಗೆ ಹೊಡೆಯುವಾಗ ''ಛಡಿ ಛಮ್ ಛಮ್ ವಿದ್ಯಾ ಘಮ್ ಘಮ್'' ಅಂತ ಮಂತ್ರದಂತೆ ಹೇಳುತ್ತಾ ಪ್ರಸಾದ ಕೊಡುವ ಆ ಪ್ರಕ್ರಿಯೆ ನಮಗೆಲ್ಲರಿಗೂ ನೀರುಕುಡಿದಷ್ಟೇ ಅಭ್ಯಾಸವಾಗಿತ್ತು. 
ಆ ಹಾಳೆ ವಿಮಾನದ ಕಥೆ ಇಷ್ಟಕ್ಕೆ ಮುಗಿದರೆ ಏನು ಮಜಾ ಹೇಳಿ? 

ಆ ದಿನ ಉದ್ದ ಕೂದಲಿನ ದುಂಡುಕಣ್ಣಿನ ಹುಡುಗಿ ''ಪ್ರಕಾಶಾ ನಂಗೂ ಕಲಸ ಕೊಡ ವಿಮಾನ ಮಾಡೋದು'' ಎಂದಾಗ ಪ್ರಕಾಶ ಮತ್ತಷ್ಟು ಪ್ರಕಾಶಮಾನನಾಗಿ ಆಕೆಯನ್ನು ಪಕ್ಕದಲ್ಲೇ ನಿಲ್ಲಿಸಿಕೊಂಡು ಪ್ರತಿ ಅಂಚನ್ನು ಮಡಚಿ ಮತ್ತೆ ಅದನ್ನು ಬಿಡಿಸಿ ಆಕೆಯಿಂದ ಮಾಡಿಸಿ ಅಂತೂ ಇಂತೂ ಆಕೆಗೆ ವಿಮಾನ ಮಾಡುವುದನ್ನ ಹೇಳಿಕೊಟ್ಟ. ಹಾಗೆ ಒಮ್ಮೆಗೆ ಬರಲು ಅದೇನು ಸರಳ ವಿಷಯವೇ? ಮರುದಿನ ಗುಲಾಬಿ ಹಾಳೆಯಲ್ಲಿ  ಮುದ್ದಾದ ವಿಮಾನ ಆಕೆ ಕುಳಿತುಕೊಳ್ಳುತ್ತಿದ್ದ ಜಾಗೆಯಲ್ಲಿ ಇತ್ತು. ಆಕೆಯ ದುಂಡು ಕಣ್ಣು ಅರಳಿ ಮಲ್ಲಿಗೆಯಾಗುವುದನ್ನು ನೋಡಲು ಪ್ರಕಾಶ ಕಾದಿದ್ದ, ಇನ್ನೇನು ಆ ವಿಮಾನ ಆಕೆ ಎತ್ತಿಕೊಳ್ಳಬೇಕು ಅಷ್ಟರಲ್ಲಿ ಅಕ್ಕವರು ಬಂದು ಅದನ್ನು ಹರಿದು ಚೂರು ಮಾಡಿ ಕಸದ ಬುಟ್ಟಿಗೆಸದರು. ಆ ದಿನ ಪ್ರಕಾಶ ಮಂಕು ಮಂಕಾಗಿ ಸದ್ದಿಲ್ಲದೇ ಅತ್ತು ಕಣ್ಣೀರಾಗಿದ್ದ. ತನ್ನ ಮೊದಲ ಪ್ರೇಮಪತ್ರ ಹಾಗೆ ಹರಿದು ಚೂರು ಚೂರಾಗಿ ತಿಪ್ಪೆ ಸೇರಿದರೆ ಯಾವ ಮನಸುತಾನೇ ಸಹಿಸಿಕೊಂಡೀತು? ಹಾಗಂತ ಅವನ ಸ್ನೇಹಿತರು ಬೇಸರದಿಂದ ಹೇಳುತ್ತಿದ್ದನ್ನು ಕೇಳಿಸಿಕೊಂಡಾಗಲೇ ಅವನ ದುಃಖಕ್ಕೆ ಕಾರಣ ತಿಳಿದಿದ್ದು. 

ಉದ್ದ ಕೂದಲಿನ ಹುಡುಗಿಗೆ ಇದು ಗೊತ್ತಾಯಿತೋ ಇಲ್ಲವೋ ನನಗಂತೂ ಗೊತ್ತಿಲ್ಲ , ಆ ದಿನದಿಂದ ನಾನು ಮಾತ್ರ ನನ್ನ ಹತ್ತಿರ ಹಾರಿ ಬಂದ, ಅಲ್ಲಿ ಇಲ್ಲಿ ಸಿಕ್ಕ ಎಲ್ಲ ಪೇಪರ್ ವಿಮಾನಗಳನ್ನ ಇಸ್ತ್ರಿಮಾಡಿಟ್ಟ ರೇಷ್ಮೆ ಸೀರೆಯ ಮಡಿಕೆ ಬಿಚ್ಚುವಂತೆ ಜಾಗ್ರತೆಯಾಗಿ ತೆಗೆದು ನೋಡುತ್ತಿದ್ದ್ದ, ಯಾರದೋ ಪ್ರೇಮ ನಿವೇದನೆಯ ಪರಿಯನ್ನು ಅನುಭವಿಸಲು, ನನಗೂ ಯಾರಾದರೂ ಹೀಗೆಯೇ ರಾಕೆಟ್ ಪತ್ರಗಳನ್ನು ಬರೆದು ಅದು ಇನ್ಯಾರದೋ ಕೈಗೆ ಸಿಕ್ಕಿಬಿಟ್ಟರೆ ಅನ್ನೋ ಒಂದು ಭಯವು ಇತ್ತು. ನನ್ನ ಪುಣ್ಯವೋ, ಯಾವ ಜನ್ಮದ ಶಾಪವೋ ನನಗೆ ಪ್ರೇಮಪತ್ರ ಬರೆಯುವ ಧೈರ್ಯ ಒಬ್ಬರೂ ಈ ತನಕವೂ ಮಾಡಲಿಲ್ಲ, ಹಾಗೊಂದು ಕನಸು ಉಳಿದೆ ಹೋಯಿತು. 
ಈಗಲೂ ನನಗೆ ಈ ಪೇಪರ್ ವಿಮಾನ ಕಂಡಾಗಲೆಲ್ಲ ಅವನ್ನು ಬಿಡಿಸಿ ನೋಡಬೇಕು ಅನ್ನೋ ಬಯಕೆ ಹುಟ್ಟುವುದುಂಟು. ನಿಜವಾದ ವಿಮಾನದಲ್ಲಿ ಮೊದಲ ಬಾರಿ ಕುಳಿತಾಗಲೂ ಆಗದ ಖುಷಿ ಮೊತ್ತ ಮೊದಲ ಬಾರಿಗೆ ಸುದ್ದಿಪತ್ರಿಕೆಯಲ್ಲಿ ಮಾಡಿ ಹಾರಿಸಿದ ವಿಮಾನ ಕೊಟ್ಟಿತ್ತು.  ಈ ವಿಮಾನಗಳು ಎಲ್ಲಿಂದ ಎಲ್ಲಿಗೂ ಹಾರಬಹುದು ಥೇಟ್ ಪಕ್ಷಿಗಳಂತೆ, ಯಾವ ಗಡಿಯ ಹಂಗಿಲ್ಲದೆ, ಚೆಕ್ಇನ್, ಸೆಕ್ಯೂರಿಟಿ, ಗೇಟ್ ಕ್ಲೋಸ್ , ಎಂಬ ಮಿತಿಗಳಿಲ್ಲದೆ, ಬರೀ ನಾಲ್ಕು ಮೂಲೆಯ ಹಾಳೆಯ ಮಡಿಕೆಗಳು ವಿಮಾನವಾಗಿ ಕನಸುಗಳಿಗೆ ರೆಕ್ಕೆಯಾಗಿ ಕ್ರಮಿಸುವ ದೂರ ಕಡಿಮೆಯಿರಬಹುದು, ಆದರೆ ಇವು ಮನಸಲ್ಲಿ ಮೂಡಿಸಿದ ಕಾಮನಬಿಲ್ಲು ಮಾತ್ರ ಸದಾ ರಂಗು ರಂಗು.   
Picture credits:Google



Thursday, June 9, 2022

ಸೋಮು


ನಮ್ಮನೆಯಲ್ಲಿ ಬಂದ , ತಂದ  ,ಸೇರಿಕೊಂಡ ನಾಯಿಗಳು ಹಲವು ಅವುಗಳಲ್ಲಿ ಕೆಲವಂತೂ ನಮ್ಮ ಬದುಕಿನ ಭಾಗವೇ ಆಗಿಹೋದವು, ಅಂಥ ಒಂದು ಜೀವ ‘’ಸೋಮು “ .

ಆಗ ನಾನು ಏಳನೇ ತರಗತಿಯಲ್ಲಿದ್ದೆ  ಬೇಬಿ ಶ್ಯಾಮಲಿ ಯ ಯಾವುದೋ ಸಿನಿಮ ನೋಡಿ ನನಗೂ ಕುದುರೆಯಂತೆ ಓಡುವ , ಅದರ ಸರಪಳಿಯನ್ನು ಹಿಡಿದು ನಾನು ಹೇಳಿದಾಗ ನಿಲ್ಲುವ ನಾಯಿಯೊಂದು ಬೇಕಿತ್ತು , ಹಾಗೆ ಸಿಕ್ಕ ಸಿಕ್ಕ ದಾರಿನಾಯಿ ಗಳ ಕೊರಳಿಗೆ ಕಾತಿ ಹಗ್ಗ ಕಟ್ಟಿ ಇದನ್ನು ಪ್ರಯತ್ನಿಸಿದ್ದು ಇದೆ ಆಗೆಲ್ಲ , ಆ ನಾಯಿಗಳು ಓಡುವುದಿರಲಿ ನಡೆಯುವುದೇ ಇಲ್ಲ ಎಂದು ನೆಲಕ್ಕೆ ಕಾಲು  ಊರಿ ಹಟಕ್ಕೆ ಬೀಳುತ್ತಿದ್ದವು. ನೋಡುಗರಿಗೆ  ಆ ದೃಶ್ಯ ಯಮ ಪಾಶ ಹಾಕಿ ನಾಯಿಯನ್ನ ಕರೆದೊಯ್ಯುತ್ತಿರುವಂತೆ ಕಾಣುತ್ತಿತ್ತೋ ಏನೋ ! ಎಲ್ಲರು ಬಯ್ಯೋದೆ, ಆಗ ಮಾತ್ರ ತುಂಬಾ ವಿಧೇಯ ವಾದ ಒಂದು ನಾಯಿ ಬೇಕು ಮತ್ತು ಅದು ಈಗಲೆಬೇಕು ಎನಿಸಿದ್ದು ಅದೆಷ್ಟ ಸಲವೋ.

ಹಾಗೊಂದು ಮುಂಜಾನೆ ಟಿಬೆಟಿಯನ್ ಕಾಲನಿಯಲ್ಲಿ ಕೇಸ್ ನೋಡಲು ಹೋಗಿದ್ದ ಪಪ್ಪಾ (ನನ್ನ ಪಪ್ಪಾ ಪಶುವೈದ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು ) ಹತ್ತಿಯಂತೆ ಮೆತ್ತಮೆತ್ತನೆ ಇದ್ದ ಅಂಗೈ ಅಗಲದ ಪುಟ್ಟ ನಾಯಿಮರಿ ತಂದಿದ್ದರು, ಅದಕ್ಕಾಗ ೧೫ ದಿನವಷ್ಟೇ ! ಅದೆಷ್ಟು ಸಂಬ್ರಮ ನನಗು ತಂಗಿಗೂ, ಮನೆಯ ಮುಂದಿದ್ದ  ನಮ್ಮ ಶಾಲೆಯಿಂದ  ನೆವ ಹೇಳಿಕೊಂಡು ನಾಯಿಮರಿ ನೋಡಲು ಬರುತ್ತಿದ್ದೆವು. ನಮ್ಮ ಮನೆಯಲ್ಲೊಂದು ರೂಡಿ , ಸಾಕುಪ್ರಾಣಿ ಯಾವ ದಿನ ಬರುತ್ತದೆ ಅದೇ ವಾರದ ಮೊದಲ ಅಕ್ಷರದಿಂದ ಅದ್ರ ಹೆಸರು ಇಡುವುದು , ಈಗ ನಮ್ಮಲ್ಲಿ ಬಂದ ನಾಯಿ ಮರಿ ಸೋಮವಾರ ಮುಂಜಾನೆ ಬಂದಿತ್ತು ಅದಕ್ಕೆಂದೇ ಸರ್ವ ಸಮ್ಮತಿಯಿಂದ ಅದನ್ನು ಸೋಮು ಎಂದು ಕರೆಯಲಾಯಿತು. ಇನ್ನು ಕೇಳಿ ಈ ಸೋಮು ಯಾಕೆ ಇಷ್ಟು ವಿಶಿಷ್ಟ ವಿಶೇಷ  ಎಂದು.

ಸೋಮು ಗೆ ನಮ್ಮಲ್ಲಿನ ಇತರ ನಾಯಿಗಳಿಗಿಂತ ಹೆಚ್ಚಿನ ಅಕ್ಕರೆ ಮುದ್ದು ದೊರೆತಿದ್ದು ಅದು ಜೂಲಿ ನಾಯಿ  ಎಂದು, (ಪೋಮೆರಿಯನ್ ಕ್ರಾಸ್ ಬ್ರೀಡ) ಅದನ್ನು ಸೂಕ್ಷ್ಮವಾಗಿ ಸಾಕಬೇಕು ಸಿಕ್ಕ್ಸಿಕ್ಕಿದ್ದನ್ನ ತಿನ್ನೋಕೆ ಕೊಡಬಾರದು, ಅದಕ್ಕೆ ಹೊಸ ಉಟದ ಬಟ್ಟಲು ಏನೇನೋ ನಿಯಮಗಳನ್ನ ನಾನು ನನ್ನ ತಂಗಿ ಮಾಡಿಕೊಂಡಿದ್ದವು ಮತ್ತು ಅವು ಬರೀ ನಿಯಮಗಳಾಗೆ ಉಳಿದವು. ಅದು ಬಲು ಸ್ವತಂತ್ರ ಸ್ವಭಾವದ ನಾಯಿ ಅದಕ್ಕೆ ಸರಪಳಿ ಕಂಡರೆ ಆಗುತ್ತಿರಲಿಲ್ಲ. ಅದಕ್ಕೆ ಕೆಲವು ವಿಚಿತ್ರ ರೂಡಿಗಳಿದ್ದವು,

ಅದಕ್ಕೆ ತಿರುಗುವ ಹುಚ್ಚು, ಪಪ್ಪಾ ಸೈಕಲ್ ಸ್ಟಾಂಡ್ ತೆಗೆಯುತ್ತಲೇ ಅದಕ್ಕೆ ಹುಚ್ಚು ಖುಷಿಯಾಗುತ್ತಿತ್ತು ಸೈಕಲ್ ಗೆ ಬೆನ್ನತ್ತಿ  ಓದಲು ಶುರು ಮಾಡುತ್ತಿತ್ತು ಪಪ್ಪಾ ಎಲ್ಲೆಲ್ಲಿ ನಿಲ್ಲಿಸುತ್ತಾರೋ ಯಾವ ಯಾವ ಅಂಗಡಿಗೆ ಹೋಗುತ್ತಾರೋ ಅಲ್ಲಲ್ಲಿ ಹೋಗಿ ನಿಂತು ಅವರ ಜೊತೆಗೆ ವಾಪಸ್ ಬರುತ್ತಿತ್ತು. ಕೆಲವೊಮ್ಮೆ ಅದನ್ನು ಇತರ ನಾಯಿಗಳ ಆಕ್ರಮಣದಿಂದ ಕಾಪಾಡುವುದೇ ಕೆಲಸವಾಗುತ್ತಿತ್ತು , ಜೊತೆಗೆ ನನ್ನ ಮನೆಮಂದಿ ಇದ್ದಾರೆ ಅನ್ನೋ ಹುರುಪಿನಲ್ಲಿ ತನ್ನ ತಾಕತ್ತಿಗೆ ಮೀರಿದ ಜಗಳದಲ್ಲಿ ಭಾಗಿ ಆಗಲು ಹೋಗ್ತಿತ್ತು, ಇವೆಲ್ಲ ಕಿರಿಕಿರಿ ನಿಲ್ಲಿಸಲು ಪಪ್ಪಾ ಒಂದು ಉಪಾಯ ಮಾಡಿದರು ಒಂದು ಪ್ಲಾಸ್ಟಿಕ್ ಕೈಚೀಲದಲ್ಲಿ ಅ ಸೋಮುವನ್ನು ಹಾಕಿದರು ಅದನ್ನ ಸೈಕಲ್ ಹಾಂಡಲ್ಗೆ ತೂಗು ಹಾಕಿದರು . ಸೋಮು ಆ ಚೀಲದಿಂದ ತನ್ನೆರಡು ಕಾಲು ಮತ್ತು ಕತ್ತು ಆಚೆ ಹಾಕಿ ಹೊರಗಿನ ದೃಶ್ಯ ಆಗು ಹೋಗು ನೋಡುತ್ತಿತ್ತು , ಇದು ದಿನದ ರೂಡಿ ಆಯಿತು ಆ ಚೀಲವನ್ನ ತನ್ನ ಆಸ್ತಿಯಂತೆ ನೋಡುತ್ತಿತ್ತು,

ಮನೆಗೆ ಯಾರೇ ನೆಂಟರು ಬರಲಿ ಸೋಮುವಿನ ಉತ್ಸಾಹ ಇಮ್ಮಡಿಸುತ್ತಿತ್ತು, ಅದರ ಖುಷಿ ಇರುವುದು ಅವರೊಂದಿಗೆ ಪೇಟೆ ಸುತ್ತಬಹುದು ಎನ್ನೋ ಆಲೋಚನೆಯಲ್ಲಿ. ಅವರು ವಾಪಸ್ ಹೋಗುವಾಗ ಬಸ ನಿಲ್ದಾಣಕ್ಕೆ ಇದು ಹೋಗುತಿತ್ತು ಬಸ್ ಬಂತು ಎಂದ ಕೂಡಲೇ ಎಲ್ಲರಿಗಿಂತ ಮೊದಲು ತಾನೇ ಹತ್ತಿ ಕೊನೆ ಸೀಟಿನ ಕೆಳಗೆ ಹೋಗಿ ಅಡಗಿ ಕೊಳ್ಳುತ್ತಿತ್ತು. ಮೊದೆಲೆರಡು ಸಲ ಮುದ್ದು ತಮಾಷೆ ಎನಿಸಿದ ಈ ಅಭ್ಯಾಸ ಆಮೇಲಾಮೇಲೆ ಕಿರಿಕಿರಿ ಆಗತೊಡಗಿತು. ನಂತರದಲ್ಲಿ ಮನೆಗೆ ಬಂದ ಸಂಬಂಧಿಕರು ಹೊರಟು ನಿಲ್ಲುವ ಮೊದಲೇ ಇದನ್ನು ಕಟ್ಟಿ ಹಾಕುತ್ತಿದ್ದೆವು. ಆಗ ಅದರ ಆಕ್ರೋಶ ನೋಡಬೇಕು.!

ಹಾಗೇ ಇನ್ನೊಮ್ಮೆ ಪಪ್ಪನ ಸಹೋದ್ಯೋಗಿ ಒಬ್ಬರ ಮದುವೆಗೆ ಬಾಳೆಹೊನ್ನೂರಿನ ಹತ್ತಿರದ ಹಳ್ಳಿಗೆ ಹೋಗುವುದಿತ್ತು, ಅವರು ಒಂದು ಮಿನಿ ಬಸ ವ್ಯವಸ್ಥೆ ಮಾಡಿದ್ದರು ಅದರಲ್ಲಿ ಎಲ್ಲಕ್ಕಿಂತ ಮೊದಲು ಹತ್ತಿ ಕೂತಿದ್ದು ಸೋಮು. ಅದನ್ನು ಎಲ್ಲರು ಗಮನಿಸಿದ್ದು ತುಂಬಾ ತಡವಾಗಿ .ತುಂಬಾ ದೂರ ಕ್ರಮಿಸಿದ್ದರಿಂದ ಅದನ್ನು ವಾಪಸ್ ಬಿಡುವ ಮಾತೇ ಇರಲಿಲ್ಲ. ಅವರ ಮದುವೆಯ ಬುಂದಿಉಂಡೆ ಊಟ ಮಾಡಿ ವಧುವರರನ್ನು ಭೇಟಿ ಮಾಡಿ ಅವರ ಮದುವೆ ವಿಡಿಯೋದಲ್ಲೂ  ಕಾಣಿಸಿಕೊಂಡಿತು.

ಅದಕ್ಕೆ ಇನ್ನೊಂದು ಪ್ರೀತಿಯ ವಿಷಯ ಕುರುಕಲು ತಿಂಡಿ ಮತ್ತು ಮೀನು . ಪಪ್ಪಾ ಅವಕ್ಕೆಂದೇ ರಸ್ಕ ಟೋಸ್ಟ್ ಪ್ಯಾಕ್ಗಳನ್ನ  ನಡುಬಾಗಿಲಿನ ಮೇಲಿದ್ದ ಮೊಳೆ ಗೆ ತೂಗು ಹಾಕುತ್ತಿದ್ದರು . ತನಗೆ ಬೇಕಾದಾಗೆಲ್ಲ ಅದು ಕತ್ತು ಮೇಲೆ ಮಾಡಿ ನೋಡುತ್ತಿತ್ತು.

ಸೆಖೆ ಅನಿಸಿದಾಗ ಸೀಲಿಂಗ್ ಫ್ಯಾನ್ ಸ್ವಿಚ್ ಕಡೆಗೆ ನೋಡಿ ಮಿದು ದನಿಯಲ್ಲಿ ಬೊಗಳುವುದನ್ನು ನೋಡಲೆಂದೇ ನಾವು ಫ್ಯಾನ್ ಹಾಕುತ್ತಿರಲಿಲ್ಲ.

ಸೋಮುವಿನ ಮತ್ತೊಂದು ವಿಲಕ್ಷಣ ಗುಣ ವರುಷಕ್ಕೆಮ್ಮೆ ಗುಳೇ ಹೋಗುತ್ತಿದ್ದುದು. ಶ್ರಾವಣ ಮಾಸದಲ್ಲಿ ನಮ್ಮಲ್ಲಿ ಕಪ್ಪು-ಕಡಿ (ಮೀನು ಇತ್ಯಾದಿ..) ತರುತ್ತಿರಲಿಲ್ಲ , ಪ್ರತಿವರುಷ ಈ ಸಮಯದಲ್ಲಿ ಸೋಮು ಮನೆಬಿಡುತ್ತಿದ್ದ ಅವ ಎಲ್ಲಿ ಹೋದ ಎಂಬುದರ ಸುಳಿವೇ ಇರುತ್ತಿರಲ್ಲ್ಲ ಮೊದಮೊದಲು ಹೆಂಡತಿ ಹುಡುಕಿಕೊಂಡು ಹೋಗಿರಬೇಕು ಎಂದು ತಮಾಷೆ ಮಾಡಿ ನಗುತ್ತಿದ್ದ ನಾವು  ಎರಡು ತಿಂಗಳಾದರೂ ಬರದಿದ್ದಾಗ  ಸಿಕ್ಕ ಸಿಕ್ಕವರಲ್ಲಿ ಕೇಳಿ  ಅವನ ರೂಪವನ್ನು ವರ್ಣಿಸುತ್ತ ಎಲ್ಲಾದರೂ ಕಂಡರೆ ದಯಮಾಡಿ ತಿಳಿಸಿ ಎಂದು ವಿನಂತಿಸುತ್ತಿದ್ದೆವು.

ಆ ವರುಷ ವು ಹಾಗೆ ಹೋದವನು ಬಾರದಿದ್ದಾಗ , ಯಾರೋ ಪಪ್ಪನಿಗೆ ಹೇಳಿದರು ನಿಮ್ಮ ನಾಯಿ ಒಬ್ಬ ಡಾಕ್ಟರ್ ಮನೆಯಲ್ಲಿದೆ. ಕಟ್ಟಿಯೇ ಇಡುತ್ತಾರೆ , ಒಮ್ಮೆ ಕೇಳಿ ನೋಡಿ ಅಂದರು. ಪಪ್ಪಾ ಹೋಗಿ ಅವರನ್ನು ಕೇಳಿದರೆ ಅವರು ನಾನು ಇದನ್ನ ೩೦೦ ರುಪಾಯಿ ಕೊಟ್ಟು ಕೊಂಡುಕೊಂಡಿದ್ದೇನೆ ಅಂದರು , ನಿಮ್ಮದೇ ಅನ್ನಲಿಕ್ಕೆ ಸಾಕ್ಷಿ ಏನು ? ಪಪ್ಪನ ದನಿ ಕೇಳಿದ್ದೆ ಹಿತ್ತಲಿನಿಂದ ಸೋಮು ಜೋರು ದನಿಯಲ್ಲಿ ಕೂಗ ತೊಡಗಿದ್ದ .  ಸುಮಾರು ಹೊತ್ತಿನ ವಾದ ವಿವಾದ ದ ನಂತರ ಸೋಮುವಿನ ಸರಪಳಿ ಬಿಚ್ಚಿ ಅವನನ್ನು ಮನೆಗೆ ಕಳಿಸಿಕೊಡಲಾಗಿತ್ತು.

ನಾನು ಕೆಲವೊಮ್ಮೆ ಬೆಳಗಿನ ಮೊದಲ ಬಸ್ಸಿಗೆ ಧಾರವಾಡ ಹೋಗಬೇಕಾದರೂ ಪ್ರತಿಬಾರಿ ಸೋಮು ನಾನು ಬಸ್ಸು ಹತ್ತುವ ತನಕ ಇದ್ದು ನನ್ನ ಕಳಿಸಿಕೊಟ್ಟೆ ಮನೆಗೆ ಮರಳುತ್ತಿದ್ದ .

ಹಾಗೆ ಒಮ್ಮೆ ಮನೆಯಿಂದ ಹೋದವನು ವಾಪಾಸ್ ಬರಲೇ ಇಲ್ಲ ಅವನ ಗುಣ ಗೊತ್ತಿದ್ದ ನಾವು ಜಾಸ್ತಿ ಚಿಂತೆ ಮಾಡಲೂ ಇಲ್ಲ ಸುಮಾರು ತಿಂಗಳ ಹತ್ತಿರ ಇಲ್ಲವಾದಾಗ ಚಿಂತೆ ಶುರುವಾಯಿತು, ಎಲ್ಲ ಕಡೆ ಹುಡುಕಿದರೂ ಸೋಮುವಿನ ಯಾವ ಸುಳಿವು ಸಿಗಲಿಲ್ಲ ಯಾರೋ ಕದ್ದುಕೊಂಡು ಹೋದರು ಎಂದೆ ಭಾವಿಸಿ ಕದ್ದವರಿಗೆ ಶಪಿಸುತ್ತಾ ಇದ್ದರು ಅಮ್ಮ .

ಹಾಗೊಂದು ದಿನ ತಂಗಿ ಹಿತ್ತಲ ಮೂಲೆಗೆ ಹೋದಾಗ , ಕಪ್ಪು ಬಿಳಿ ರೋಮದ ರಾಶಿ ಕಂಡಾಗಲೇ ಸೋಮು ಸತ್ತು ಹೋಗಿದ್ದು ನಮಗೆ ತಿಳಿದದ್ದು. ಅವ ಕಳದು ಹೋಗಿದ್ದರೆ ಚನ್ನಾಗಿತ್ತು  ಕಡೆ ಪಕ್ಷ ಮತ್ತೆ ಮನೆಗೆ ಬರುತ್ತಾನೆ ಅನ್ನೋ ನಿರೀಕ್ಷೆ ಇರುತಿತ್ತು, ನಮ್ಮಲ್ಲಿ ಯಾವಾಗಲು ಹೇಳೋದಿದೆ ನಂಬಿಗಸ್ತ ನಾಯಿ ಮನೆಮಂದಿ ಮುಂದೆ ಪ್ರಾಣ ಬಿಡುವುದಿಲ್ಲ, ಯಜಮಾನನ ಮನಸ್ಸು ಎಂದಿಗೂ ನೋಯಬಾರದು  ಎನ್ನುವ ಕಾರಣಕ್ಕೆ . ಸೋಮು ಹಾಗೆ ಹೇಳದೆ ಕೇಳದೆ ಹೋಗಿಬಿಟ್ಟ .

ಈಗ ಸೋಮು ಇದ್ದಿದ್ದರೆ ೨೧ ವರುಷದವನಾಗುತ್ತಿದ್ದ .ಇಂದಿಗೂ ಸೋಮು ಎಂದರೆ ಆ ತುಂಟ ಮುದ್ದು ನಾಯಿಮರಿಯ ಮುಖ ಕಣ್ಣು ಮುಂದೆ ಬರುತ್ತದೆ. ಅವ ನೆನಪುಗಳಲ್ಲಿ ಯಾವಾಗಲು ಜೀವಂತ .


Tuesday, February 8, 2022

ನೂಲಿನ ತೇರು - ೩


ಮಾರ್ಗರೇಟ್ ನನ್ನ ಮಗಳ ಮುಖವನ್ನ ಮೆತ್ತಗೆ ರಂಗೋಲಿಯ ಚಿಕ್ಕಿಗಳನ್ನು ಜೋಡಿಸುವಂತೆ ಕಣ್ಣು , ಗದ್ದ , ಕಿವಿ, ತುಟಿಯಮೇಲೆ ತನ್ನ ಬೆರಳನ್ನ ಅತ್ತಿಂದಿತ್ತ ಸರಿದಾಡಿಸುತ್ತಿದ್ದಳು , ಕಣ್ಣಿನ ಬಣ್ಣ ಏನು ? ಕೂದಲು? ಹುಬ್ಬು ಅಂದು ಮತ್ತೆ ಮುಟ್ಟಿ ನೋಡಿದಳು. ಕಣ್ಣೆವೆ ನೋಡು ಎಷ್ಟು ಚನ್ನಾಗಿದೆ ಎಂದು ಮುಖ ಅರಳಿಸಿದಳು.

ಆಕೆಯ ಸಂಭ್ರಮ ನೋಡುವುದೇ ನನಗೆ ಖುಷಿ.


 ಮಾರ್ಗರೆಟ್ ಆಗ ಅರವತ್ತರ ಆಸುಪಾಸಿನಲ್ಲಿದ್ದಳು , ಮಕ್ಕಳು ಎಂದರೆ ಅತೀ ಪ್ರೀತಿ ಆಕೆಗೆ .ನನಗೆ ಆಗಾಗ ಪೇರೆಂಟಿಂಗ್ ಟಿಪ್ ಕೊಡುತ್ತಿದ್ದಳು ಹುಟ್ಟುಗುರುಡಿಯಾದ ಆಕೆ , ಜಗತ್ತನ್ನು ಅದಮ್ಯ ಪ್ರೀತಿ ಅಕ್ಕರೆಯಿಂದ ನೋಡುವುದು ಆಕೆಯ ಮಾತುಗಳಲ್ಲೇ ತಿಳಿಯುತ್ತಿತ್ತು.  ಆಕೆ ಹೇಳುವ ವಿಷಯಗಳನ್ನು ಕಲ್ಪಿಸುವುದು, ನನಗೆ ತುಂಬಾ ಹಿತ ಕೊಡುವ ಕೆಲಸವಾಗಿತ್ತು. 


ಆಕೆ ತನ್ನ ಜೀವನದಲ್ಲಿ ನಡೆದ ಹಲವು ಘಟನೆಗಳನ್ನು ತುಂಬಾ ರಸವತ್ತಾಗಿ ವಿವರಿಸುತ್ತಿದ್ದಳು


'' ಒಂದು ದಿನ ನಮ್ಮ ಬ್ಲೈಂಡ್ ಆರ್ಟಿಸ್ಟ್ ಸಂಘದ ಕಾರ್ಯಕ್ರಮಕ್ಕೆ  ಸೆಲೆಬ್ರಿಟಿ ಆರ್ಟಿಸ್ಟ್ ನ ಕರೆಸಿದ್ವಿ ಆಕೆ ನೋಡೋಕೆ ತುಂಬಾ ಸುಂದರವಾಗಿದ್ದಾಳೆ ಅಂತ ಎಲ್ಲರೂ ಹೇಳಿತ್ತಿದ್ದರು, ಆದಿನ ಆಕೆ ಬರುತ್ತಾಳೆಂದೇ ಅದೆಷ್ಟೋ ಯುವಕರು ಕಾರ್ಯಕ್ರಮಕ್ಕೆ ಬಂದಿದ್ದರಂತೆ, ಆದರೆ ಅನಿವಾರ್ಯ ಕಾರಣದಿಂದ ಆಕೆಗೆ ಬರಲಾಗುತ್ತಿಲ್ಲ ಎಂಬುದು ಸಂಘಟಕರ ಮೂಲಕ ನನಗೆ ಮೊದಲೇ ತಿಳಿದಿತ್ತು. ನನ್ನ ಪಕ್ಕ ಕುಳಿತಿದ್ದ ಅಂಧ ಯುವಕ  ತನ್ನ ಪರಿಚಯ ಹೇಳಿಕೊಂಡು ತಾನು ಆ ಅತಿಥಿಯ ಅಭಿಮಾನಿ ಆಕೆಯನ್ನು ಇವತ್ತು ಮಾತಾಡಿಸಬಹುದು ಎನ್ನುವುದನ್ನು ನೆನೆದೆ ನನಗೆ ಖುಷಿ ಆಗುತ್ತಿದೆ ಅಂದು ಉತ್ಸಾಹದಲ್ಲಿ ಹೇಳುತ್ತಲೇ ಇದ್ದ , ನನಗೆ ಆ ಗಳಿಗೆಗೆ ಆ ಹುಡುಗನ ಬಗ್ಗೆ ತುಂಬಾ ಪಾಪ ಅನಿಸಿತು , ಮರುಕ್ಷಣವೇ ನನ್ನ ತರಲೇ ಬುದ್ಧಿ ಏನೋ ಆಲೋಚಿಸಿ'' "ನನಗೂ ನಿನ್ನಂಥ ಅಭಿಮಾನಿಯನ್ನು ನೋಡಿ ತುಂಬಾ ಖುಷಿ ಆಗುತ್ತಿದೆ, ನನ್ನ ಮೇಲೆ ಇಷ್ಟು ಪ್ರೀತಿ ಇಟ್ಟಿರುವುದಕ್ಕೆ ಧನ್ಯವಾದ ಅಂದೆ" ನನ್ನನ್ನೇ ಆ ನಟಿ ಎಂದುಕೊಂಡ  ಆತ ಈ ನೆಲದ ಮೇಲೆ ಇರ್ಲಿಲ್ಲ ಅಷ್ಟು ಖುಷಿಯಿಂದ ಉಬ್ಬಿ ಹೋದ. ನಾನು ಮೆತ್ತಗೆ ಅಲ್ಲಿಂದ ಜಾಗ ಖಾಲಿ ಮಾಡಿದೆ.ನಾನು ಮಾಡಿದ್ದು ತಪ್ಪು ಗೊತ್ತು ಆದರೇ ಆ ಹುಡುಗನ ಮಾತಿನಲ್ಲಿದ್ದ ಖುಷಿಯ ಮುಂದೆ ಎಲ್ಲವು ಗೌಣ ಅನ್ನಿಸ್ತು.'' ಆಕೆ ಹೀಗೆ ಕಥೆಯ ಸುರಳಿಯನ್ನು ಬಿಚ್ಚಿಡುತ್ತಿದ್ದರೆ ನನಗೆ ನನ್ನ ಅಜ್ಜಿ ಯನೆನಪು ಉಕ್ಕಿ ಉಕ್ಕಿ ಬರುತ್ತಿತ್ತು.     


ಮಾರ್ಗರೆಟ್ ಮತ್ತು ಅವಳಂಥ ಅನೇಕ ವಿಶೇಷ ವ್ಯಕ್ತಿತ್ವಗಳನ್ನ ನಾ ಭೇಟಿ ಆಗಿದ್ದು '' ಓಪನ್ ಆರ್ಟ್ಸ್ ಕಮ್ಮ್ಯುನಿಟಿ ಕ್ವಾಯರ್'' ಎಂಬ ಅನನ್ಯ ಸಂಗೀತ ಸಂಘಟನೆಯಲ್ಲಿ. ಇದು Northern Ireland ನ ಪ್ರಸಿದ್ಧ ಕ್ವಾಯರ್. ಇದು ಹಲವಾರು ಕಾರಣಗಳಿಂದ ಜನರ ಪ್ರೀತಿ ಮೆಚ್ಚುಗೆ, ಗೌರವಕ್ಕೆ ಪಾತ್ರವಾಗಿದೆ. ಕ್ವಾಯರ ಎಂದರೆ  ''ಸಮೂಹ ಸೃಷ್ಟಿಸುವ ಸಂಗೀತ'' ಎನ್ನಬಹುದೇನೋ , ಪ್ರತಿಯೊಬ್ಬ ಸದಸ್ಯನ ಧ್ವನಿಯ(ರೇಂಜ್) ಅನುಗುಣವಾಗಿ ಇಲ್ಲಿ ನಾಲ್ಕು ರೀತಿಯ ಗುಂಪು ಮಾಡಿರುತ್ತಾರೆ, ಬೇಸ್ (ಮಂದ್ರ ಸಪ್ತಕ ), ಆಲ್ಟೊ(ಮಧ್ಯ ಸಪ್ತಕ) , ಅಪ್ಪರ್ ಆಲ್ಟೊ (ಮಧ್ಯ/ ತಾರ ಸಪ್ತಕ), ಸಪ್ರಾನೋ (ತಾರ ಸಪ್ತಕ) ಈ ತೆರನಾಗಿ ಒಂದೇ ಹಾಡಿನ ವಿವಿಧ ಸಾಲುಗಳನ್ನು ವಿವಿಧ ಗಾಯಕರು ವೈವಿಧ್ಯಮಯವಾಗಿ ಆದರೆ ಒಟ್ಟಿಗೆ ಹಾಡುತ್ತಾರೆ. ಹೀಗೆ ಹೊಮ್ಮಿದ  ಒಂದು ಹಾಡು ಕೇಳುಗನನ್ನು ತಲುಪುವಾಗ ಅದರ ಸೌಂದರ್ಯ ಇಮ್ಮಡಿಯಾಗುತ್ತದೆ  ಅದನ್ನು ಕೇಳುವ ಆನಂದ ಬಲ್ಲವನೇ ಬಲ್ಲ. ಇಂಥ ನೂರಾರು ಕ್ವಾಯರಗಳು ಪ್ರತಿ ಊರಲ್ಲೂ ಸಿಗುತ್ತವೆ.


ಆದರೆ ಓಪನ್ ಆರ್ಟ್ಸ್ ಎಂಬುದು ವಿಶೇಷ ಏಕೆಂದರೆ ಇದು ಅಂಗವಿಕಲ ಕಲಾವಿದರ ಅಭಿವೃದ್ಧಿಗೆಂದು ೨೧ ವರ್ಷಗಳ ಹಿಂದೆ ಹುಟ್ಟಿಕೊಂಡ ಸಂಸ್ಥೆ  ಆದರೆ ಕಲೆಯಲ್ಲಿ ಆಸಕ್ತಿ ಇರುವ ಎಲ್ಲರಿಗೂ ಇದು ತೆರೆದ ಮನಸ್ಸಿನಿಂದ ಸ್ವಾಗತಿಸುತ್ತದೆ ಚಿತ್ರಕಲೆ,ನಾಟಕ, ನೃತ್ಯ, ಸಂಗೀತ , ಗ್ಯಾಮಲಾನ್ ಎಂಬ ಸಂಗೀತೋಪಕರಣಗಳ ಆರ್ಕೆಸ್ಟ್ರಾ ಹೀಗೆ ವಿವಿಧ ರೀತಿಯ ಕಲಾಭಿವ್ಯಕ್ತಿಗೆ ವೇದಿಕೆಯಾಗಿ ಸಶಕ್ತವಾಗಿ ಬೆಳೆದಿರುವ ಸಂಸ್ಥೆ. ಈ Open Arts. 



ಬೆಲ್ಫಾಸ್ಟ್ ಗೆ ಬಂದ ಆರಂಭದಲ್ಲಿ ಒಂದು ಕಾರ್ಯಕ್ರಮದಲ್ಲಿ ಈ ಕ್ವಾಯರ್ ಗಾಯನ ಕೇಳಿದ್ದೆ ಕೇಳಿದ್ದು, ನನಗೆ ಒಮ್ಮೆಯಾದ್ರೂ ಇದರಲ್ಲಿ ಹಾಡಬೇಕು ಅನ್ನುವ ಹುಚ್ಚು ಹಿಡಿದಿತ್ತು, ಸ್ವಲ್ಪೇ ದಿನಕ್ಕೆ open arts community choir ಗೆ ಆಡಿಷನ್ ಕೊಡಲು ಹೋದೆ , ನನಗೆ ಇಂಗ್ಲಿಷ್ ರೈಮ್ ಬಿಟ್ಟರೆ ಇನ್ನಾವುದೇ ಆಂಗ್ಲ ಹಾಡುಗಳು ಬರುತ್ತಿರಲಿಲ್ಲ. ಅದ್ಯಾವ ಧೈರ್ಯದಲ್ಲಿ ಅಲ್ಲಿಗೆ ಹೋದೆ ಅನ್ನುವುದು ಈಗಲೂ ಸೋಜಿಗ ತರುತ್ತದೆ. ಒಂದು ಕನ್ನಡ  ಹಾಡನ್ನೇ ಹಾಡಿ ಧ್ವನಿ ಪರೀಕ್ಷೆಯಲ್ಲಿ ಆಯ್ಕೆ ಆಗಿದ್ದೆ . 

ಮರು ದಿನದಿಂದ ಅಭ್ಯಾಸಕ್ಕೆ ಕರೆದಿದ್ದರು ಕೇಳುವಾಗ ಎಷ್ಟು ಮಧುರ ಎನಿಸಿತ್ತೋ , ಕಲಿಕೆ ಅಷ್ಟು ಸುಲಭವಲ್ಲ ಅನ್ನುವುದು ಮೊದಲ ದಿನವೇ ಗೊತ್ತಾದರೂ ಕಲಿಯುವ ಹಸಿವೆ ಜಾಸ್ತಿ ಇತ್ತಾದ್ದರಿಂದ ಸುಮ್ಮನೆ ಹೋಗುತ್ತಿದ್ದೆ. 


ನಾನು ಈ ಮೊದಲೆಂದೂ ವಿದೇಶಿ ಭಾಷೆಯ ಹಾಡುಗಳನ್ನ ಕೇಳಿರಲಿಲ್ಲ , ಕಲಿಯುವ ಅವಕಾಶವಂತೂ ಇರಲೇ ಇಲ್ಲ. ಓಪನ್ ಆರ್ಟ್ಸ್ ನ ದೆಸೆಯಿಂದಾಗಿ ಇಂಗ್ಲಿಷ ಅಷ್ಟೇ ಅಲ್ಲದೆ ಐರಿಷ್  , ಫ್ರೆಂಚ್, ಹಂಗೇರಿಯನ್ , ಆಫ್ರಿಕನ್ , ರಷ್ಯನ್  ಹಾಡುಗಳನ್ನು ಕಲಿಯುವ ಅವಕಾಶ ದೊರೆಯಿತು.


ಆನ್(Anne) , ಬೆವರ್ಲಿ(Beverley) ,ಅಲನ್ (Alan)ಎಂಬ ಮೂರು ಸಂಗೀತಗಾರರು ನಮಗೆ ಗುರುಗಳು. ನಾವು ಒಮ್ಮೆ'' ಜಯ ನಾರಾಯಣಿ ನಮೋಸ್ತುತೇ '' ಎನ್ನುವ ಸ್ತುತಿಯನ್ನು ಕೂಡ ಅಭ್ಯಾಸ ಮಾಡಿ ವೇದಿಕೆಯಲ್ಲಿ ಹಾಡಿದ್ದೆವು. ಈ ತಂಡದ ವಿಶೇಷತೆಯೇ ಅದು ಜಗತ್ತಿನ ಮೂಲೆಮೂಲೆಯ ವಿವಿಧ ಭಾಷೆಯ ಹಾಡುಗಳನ್ನು ತಂದು ಕಲಿತು ಇತರರಿಗೂ ಕಲಿಸುತ್ತಾರೆ. ನಾವು ಈ ಹಾಡುಗಳನ್ನು ವೇದಿಕೆಮೇಲೆ ಹಾಡುವಾಗ ಸಂಜ್ಞಾ ಭಾಷೆಯಲ್ಲಿ ಮೂಗ ಮತ್ತು ಕಿವುಡರಿಗೆ ಅದರ ಅರ್ಥ ತಿಳಿಸುವ ಒಬ್ಬ sign language interpreter ಕೂಡ ಇರುತ್ತಾರೆ.  


ಇವರೊಂದಿಗೆ ನಾನು ಹಲವಾರು ಪ್ರವಾಸ ಮಾಡಿದ್ದೇನೆ , ಅವುಗಳಲ್ಲಿ ನನ್ನ ಮೆಚ್ಚಿನದು llangollen international music festival ಅದೊಂದು ಅವಿಸ್ಮರಣೀಯ ಪ್ರವಾಸ , ನಾನು ಆ ವರೆಗೆ ಪ್ರಪಂಚದ ಅಷ್ಟೊಂದು ದೇಶಗಳ ಕಲಾವಿದರನ್ನ ಒಟ್ಟಿಗೆ ಒಂದೇ ವೇದಿಕೆಯಡಿ ನೋಡೇ ಇರಲಿಲ್ಲ ,ಕೆಲವೊಂದು ದೇಶದ ಹೆಸರೂ ಈ ವರೆಗೆ ಕೇಳಿರಲಿಲ್ಲ. ಭಾರತ ಮೊದಲ್ಗೊಂಡು ಎಲ್ಲ ದೇಶಗಳ ನೃತ್ಯ /ಸಂಗೀತ ತಂಡಗಳು ಅಲ್ಲಿದ್ದವು. ದಿನವಿಡೀ ಹಾಡು ನೃತ್ಯ ಸಂಜೆ ಪ್ರಸಿದ್ಧ ಕಲಾವಿದರಿಂದ ಕಾರ್ಯಕ್ರಮಗಳು. 


  ಆಗಲೇ ಮಾರ್ಗರೇಟ್ ನ ತುಂಟತನ , ಮರೆಡ್ ನ ಅಡುಗೆ ಪ್ರೀತಿ, ಒಮ್ಮೆಯೂ ಅಡುಗೆ ಮಾಡದ ಸಾಂಡ್ರಾ , ಆಂಡ್ರಿಯಾ ಮತ್ತವಳ ಗೈಡ್ ಡಾಗ್ ಜೇಟಾ, ಕೇಟಿ ಎಂಬ ನೀಲಿ ಕಣ್ಣುಗಳ ಅಂಧ ಹುಡುಗಿ , ಅಲ್ಲಿದ್ದ ಹಲವರ ಪ್ರೇಮಕಥೆಗಳು, ಚಹಾ ಪ್ರೀತಿ, ಎಲ್ಲವನ್ನ ನಾನು ಬೆರಗು ಕಣ್ಣಲ್ಲಿ ನೋಡುತ್ತಾ , ಅವರೊಂದಿಗೆ ನಗುತ್ತ , ಅವರ ಅಂತರಂಗದ ಕಥೆಗಳಿಗೆ ಭಾವುಕಳಾಗಿ ಕಣ್ಣೀರಾಗುತ್ತಾ, ಸ್ಪರ್ಧೆ ಗೆದ್ದಾಗ ಪುಟ್ಟ ಮಕ್ಕಳಂತೆ ಖುಷಿ ಪಡುತ್ತಾ ಪ್ರತಿ ನಿಮಿಷವನ್ನ ಅನುಭವಿಸಿದ್ದೇನೆ. 


ಹಾಗೊಂದು ದಿನ ಕ್ವಾಯರ್ ಪ್ರಾಕ್ಟಿಸ್ ಮುಗಿದ ನಂತರ ನಮ್ಮ ಟೀಚರ್ ಆನ್ ಎಲ್ಲ ಸದಸ್ಯರಿಗೆ ಜಿಂಜರ್ ಬ್ರೆಡ್ಗಳನ್ನ ತಂದಿದ್ದಳು ಅವು ಗುಂಪಿನ ಪ್ರತಿಸದಸ್ಯರ ಪ್ರತಿಕೃತಿಗಳಂತಿದ್ದವು. ಒಂದು ಜಿಂಜೆರ್ ಬ್ರೆಡ್ ಗೆ ಬೊಟ್ಟು ಇಟ್ಟು ಉದ್ದ ಕೂದಲು ಮತ್ತು ಸೀರೆ ಉಡಿಸಿ ಅಲಂಕಾರ ಮಾಡಿದ್ದಳು. ಆ ಇಡೀ ಗುಂಪಿನಲ್ಲಿ ನಾನೊಬ್ಬಳೇ ವಿದೇಶಿ ಸದಸ್ಯೆ , ಆದರೆ ಅವರು ಅದನ್ನ ಸಂಭ್ರಮಿಸುವ ನನ್ನನ್ನು ಆದರಿಸುವ ರೀತಿ ಈ ಛಳಿಯ ನಾಡಲ್ಲೂ ನನ್ನ ಅಸ್ತಿತ್ವವನ್ನ ಬೆಚ್ಚಗೆ ಇಟ್ಟಿದೆ. 


 








ಗೆಳೆಯ - ಗೆಳತಿ

 ಆತ ಗೆಳೆಯ...

ಬಹು ದಿನದ ಗೆಳೆಯ...

ಆಕೆ ಚಲುವೆ ಆತನ ಗೆಳತಿ..


ಅವಳನ್ನು ನೋಡಿದೆ 

ಖುಷಿಯಾಗಿದ್ದಳು...

ಕಣ್ಣಗಳು ಪ್ರೇಮವಾಗಿದೆ 

ಎಂದು ಒತ್ತೊತ್ತಿ ಹೇಳುತ್ತಿದ್ದವು..


ಅವನನ್ನು ನೋಡಿದೆ...

ಅವ ತನ್ನ ಒಂದು ಮಂಡಿಯೂರಿ ಕುಳಿತು 

ತನ್ನ ವರಿಸುವಂತೆ 

ಆಕೆಯನ್ನು ಕೇಳುತ್ತಿದ್ದ...


ಆಕೆ ತನ್ನ ಕೈ ಆತನ 

ಕೈಗಿತ್ತಳು...

ಮರುಕ್ಷಣ ಅನಾಮಿಕೆಯ ಸುತ್ತ 

ವಜ್ರದುಂಗುರ...


ಆಕೆ..

ಜಗತ್ತಿನಚ್ಚರಿಯೆಲ್ಲ 

ಆಕೆಯ ಕಣ್ಣುಗಳಲ್ಲೇ ಇದೆ ಎಂಬುದನ್ನು 

ಸಾಬೀತು ಪಡಿಸುವಲ್ಲಿ 

ಬ್ಯುಸಿ 


ಈ ಚಲುವೆ ಗೆಳತಿ....

ತನ್ನ ಸೊತ್ತಾದ ಬಗ್ಗೆ ಅವನಿಗೊಂದು...

ದುಷ್ಟ ಅಹಂ..


ಪ್ರೀತಿ ಆದ ಮೇಲೆ ಗೆಳೆತನ 

ಮುಗಿದು ಹೋಗುತ್ತೆ...

ನಿಜ...


ಈಗ ಅವರು..ಜನರೆದುರು ಕಾಣುವುದೇ ಇಲ್ಲ 

ಬರಿ ಇಳಿ ಸಂಜೆಯಲ್ಲಿ 

ದೂರ ದೂರದ ಪಾರ್ಕುಗಳ ಇಕ್ಕೆಲುಗಳ ಕತ್ತಲಲ್ಲಿ..

ಸುಮ್ಮನೆ ಕುಳಿತಿರುತ್ತಾರೆ..


ಮುಂಚಿನಂತೆ ಇಗ ಆಕೆ ತನ್ನುಳಿದ

ಗೆಳೆಯರೊಡನೆ 

ದಿಲ್ ಖೋಲ್ ಕೆ ನಗುವುದಿಲ್ಲ...

ನಕ್ಕರೂ..ಅದೂ ಆತನ ಗಮನಕ್ಕೆ 

ಬರದಿರಲಿ ಎಂಬ ಪ್ರಾರ್ಥನೆ 

ಸದಾ ಇರುತ್ತದೆ...ಪೋಸ್ಸೆಸ್ಸಿವ್ ಅನ್ನುವುದು ಉಸಿರುಗಟ್ಟಿಸುವ ಪದ.


ಅಪ್ಪ ಅಮ್ಮನ ಕಣ್ಣುಗಳೊಂದಿಗೆ

ಬೆಸುಗೆ ಆಗಿ ಅದೆಷ್ಟು ದಿನವಾಯಿತೋ..

ಓದು ಎಂಬುದು ಎಲ್ಲದಕ್ಕೂ 

ಸಬೂಬು ..


ಅದೊಂದು 'ಹ್ಮ್ಮ್ ' yes!!!

ಅದೆಷ್ಟು ಸಂಬಂಧಗಳನ್ನು 

ಮುಗಿಸಿ ಹಾಕುತ್ತಿದೆ ..ಛೇ!

ಹಾಗೆ ಆಕೆ,

ಯೋಚಿಸುತ್ತಿರೆ 

ಆತ ಮತ್ತೊಂದು ಯುದ್ಧಕ್ಕೆ

ಹೊರಡುತ್ತಾನೆ..



ಗಂಡು ಜೀವಕ್ಕೆ ಪ್ರೇಮ..

ಅದು ಬರೀ

ಆಕೆಯನ್ನು ಗೆದ್ದ ಹಮ್ಮು...

ಆಕೆಗೆ ಮಾತ್ರ..ಅವನನ್ನು ಪಡೆದು..

ಎಲ್ಲವನ್ನು ತೊರೆದ

     ಹಮ್ಮು  ಮತ್ತು  गम ಗಳ ನಡುವಿನ ನಡುಗುವ ಸೇತು


ಈಗವರು ಮಾತಾಡುವುದಿಲ್ಲ

ದೇಹಗಳು ಮಾತಾಡುತ್ತವೆ.


ನಂತರ ಮೌನವಿರುತ್ತದೆ..ಅಷ್ಟೇ!

ಮೌನಕ್ಕೆ ನೂರು ಅರ್ಥ...

ರಂಗೋಲಿಯಂಥ ಹುಡುಗ

ರಂಗೋಲಿಯಂಥ ಹುಡುಗ, 


ಇಂದು ನಿನ್ನ ಆ ಮಾತಿನ

ಚಿಕ್ಕಿಯಿಂದ ಈ ಮಾತಿನ ಚಿಕ್ಕಿಗೆ

ಎಳೆಯುತ್ತಿದ್ದ ಸರಳ ವಕ್ರ ರೇಖೆಗಳನ್ನು 

ಮಿಸ್ ಮಾಡಿಕೊಳ್ಳುತ್ತಿದ್ದೇನೆ, 


ಯಾಕೆ ಹೀಗೆ..

ನಿನಗೀಗ ಬೆಳಗಿನ ಜಾವದ 

ಸಿಹಿ ನಿದ್ದೆ.. 

ಕನಸಲ್ಲಿ ನಗುತ್ತಿದ್ದೀಯಾ ? 

ಏನೋ ಕನವರಿಸುತ್ತಿದ್ದಿಯ? 


ನನಗೊಂದು ದಿವ್ಯ ಶಕ್ತಿ 

ಇದ್ದಿದ್ದೇ ಆದರೆ

ನಾ ಒಮ್ಮೆ ನಿನ್ನ ಕೋಣೆಯನ್ನೊಮ್ಮೆಹೊಕ್ಕಿ 

ನಿನ್ನ ಹಣೆ ನೇವರಿಸಿ

ಬರುತ್ತಿದ್ದೆ... 


ಹ್ಮ್ ಅಷ್ಟೇ!

ಹೆಚ್ಚು ಕಡಿಮೆ ಏನು ಇಲ್ಲ!

ನೀ ಕಾಡುವುದಿಲ್ಲ ಪ್ರೇಮಿಯಂತೆ, 

ನೀ ಬೇಡುವುದಿಲ್ಲ ಯಾಚಕನಂತೆ, 

ನೀ ನಿರ್ಲಿಪ್ತ , ನಿತ್ಯತೃಪ್ತ


ಹಾಗಂದು ಕೊಳ್ಳುತ್ತಲೇ

ಮತ್ತಷ್ಟು ತುಂಟತನ ಮಾಡುವ

ಪುಟ್ಟ ಪೋರನಾಗುತ್ತಿ| 


ಗದರಬೇಕು ಅನಿಸುತ್ತೆ, 

ನಿನಗೆ ನಾ , ನನಗೆ ನೀ ಕಾಡಿದಷ್ಟು 

ನೆನಪಾದಷ್ಟು ಆಗುವುದಿಲ್ಲ

ಗೊತ್ತು... 

ಅದು ನಿನ್ನ ಸಮಸ್ಯೆಯಲ್ಲಬಿಡು



ನೀನಿರುವುದಕ್ಕೇ,

ನಾನು ಮಾತ್ರ ಶ್ರಾವಣದ ನವಿಲು.. 

ಚೈತ್ರದ ಚಿಗುರು, ಒಗರು ಒಗರು

ನನ್ನದೊಂದು ಅವಸ್ಥೆ...

ನಾನೀಗ ನಿನ್ನ

ಧ್ಯಾನಸ್ಥೆ.. 

- ಸಖಿ

ಆತ್ಮ ಸಾಂಗತ್ಯ

ಶತ ಶತಮಾನಗಳಿಂದ, ಈ ಬಿಡುವಿರದ ಯಾವಾಗಲೂ ನಾಳೆಯಬಗ್ಗೆಯೇ ಯೋಚಿಸುವ ಪ್ರಸ್ತುತ ಕಾಲಘಟ್ಟದ ವರೆಗೂ, ಮನುಷ್ಯ ಅಂದು ಇಂದು ಮುಂದೂ ಎಂಬಂತೆ ಪ್ರೀತಿಯ ಹಂಬಲವನ್ನು ಎಗ್ಗಿಲ್ಲದೆ ಉಳಿಸಿಕೊಂಡು ಬಂದಿದ್ದಾನೆ, ಪ್ರೀತಿ ಎಂಬುದೇ ಹಾಗೆ ನಮ್ಮ ನೋವುಗಳಿಗೆ ಮುಲಾಮು ಜೊತೆಗೆ ಅಷ್ಟೇ ನೋವು ಕೊಡುವ ಅದೃಶ್ಯ ಆಯುಧವೂ ಕೂಡ.


ಪ್ರೀತಿಗೆ ಹಲವು ಮುಖ ಹೆತ್ತವರ ವಾತ್ಸಲ್ಯ ಭರಿತ ಪ್ರೀತಿ, ಒಡಹುಟ್ಟಿದವರ ಅಕ್ಕರೆಯ ಪ್ರೀತಿ, ಕಾಳಜಿ ಸ್ನೇಹದಿಂದ ಒಸರುವ ಗೆಳೆತನದ ಪ್ರೀತಿ, ನಮ್ಮ ಮೇಲೆ ನಂಬಿಕೆ ಇಟ್ಟವರು ಕೊಡುವ ಗೌರವ ಪೂರ್ವಕ ಪ್ರೀತಿ. ಜೀವನದುದ್ದಕ್ಕೂ ಜೊತೆಗಿರುತ್ತೇವೆ ಎಂದು ಸಪ್ತಪದಿ ತುಳಿದ ಗಂಡು ಹೆಣ್ಣಿನ ನಡುವಿನ ದಾಂಪತ್ಯ ಪ್ರೀತಿ, ಅಪ್ಪ ಅಮ್ಮನ ಮೇಲೆ ಮಕ್ಕಳಿಗಿರುವ ಹಕ್ಕಿನ ಪ್ರೀತಿ, ಗುರು ಶಿಷ್ಯರ ನಡುವಿನ ದಿವ್ಯ ಪ್ರೀತಿ, ದೇವರು ಎಂಬ ಪರಿಕಲ್ಪನೆಯ ಜೊತೆಗೇ ಹುಟ್ಟಿಕೊಳ್ಳುವ ಸಮರ್ಪಣಾ ಭಾವದ ಪ್ರೀತಿ, ಈ ಪಟ್ಟಿ ಮುಗಿಯುವಂಥದ್ದಲ್ಲ. 



ಆದರೂ ಎಲ್ಲಕ್ಕಿಂತ ಹೆಚ್ಚು ಚರ್ಚಿತವಾಗಿ, ಪುಸ್ತಕ ಗ್ರಂಥ , ಪುರಾಣಗಳನ್ನು ಬರೆಸಿಕೊಂಡದ್ದು ಮಾತ್ರ ಈ ಗಂಡು ಹೆಣ್ಣಿನ ನಡುವಿನ ಅದಮ್ಯ ಪ್ರೀತಿ. ಪ್ರೀತಿಯ ಪರಿಭಾಷೆಯನ್ನು ಒಂದೇ ವ್ಯಾಖ್ಯೆಯಲ್ಲಿ ಹಿಡಿದಿಡಲಾಗದಿದ್ದರೂ ಗಂಡು ಹೆಣ್ಣಿನ ನಡುವೆ ಹುಟ್ಟುವ ದೈಹಿಕ ಆಕರ್ಷಣೆ ಪ್ರೀತಿಯ ಬಹುಮುಖ್ಯ ಕಾರಣಗಳಲ್ಲೊಂದು.

ನೋಟ , ಮಾತುಗಳಿಂದ ಶುರುವಾದ ಪ್ರೀತಿ, ಮಿಲನದ  ಮಾಧುರ್ಯವನ್ನು ಮೇಳೈಸಿಕೊಂಡು ಪರಿಪೂರ್ಣವಾಗಲು ಹಾತೊರೆಯುತ್ತದೆ. ಹಲವಾರು ಬಾರಿ ದೈಹಿಕ ಕಾಂಕ್ಷೆಗಳಿಗೆ ಹುಟ್ಟಿಕೊಂಡ ನಾಯಿಕೊಡೆಯಂಥ ಪ್ರೀತಿಯ ಅಪಭ್ರಂಶಗಳು ಈ ಜಗದಲ್ಲಿ ಲೆಕ್ಕವಿಲ್ಲದಷ್ಟು. 


ಒಂದು ಪ್ರೇಮ ಏರ್ಪಟ್ಟಿದೆ ಎಂದರೆ ಅದಕ್ಕೊಂದು ಹೆಸರು ಬೇಕೇಬೇಕು, ಜಗತ್ತು ಕೇಳುತ್ತದೋ ಇಲ್ಲವೋ ಅದು ಕೇಳುವ ಮೊದಲು ನಾವೇ  ಆ ಬಾಂಧವ್ಯಕ್ಕೆ ಹೆಸರುಕೊಟ್ಟು ಜಗತ್ತಿಗೆ ಸಾರಿ ಹೇಳಬೇಕು ಅನ್ನುವ ತುಡಿತದಲ್ಲಿರುತ್ತೇವೆ. 

ಆದರೆ ಗಂಡು ಹೆಣ್ಣಿನ ಪ್ರೀತಿ ಬರೀ ದೈಹಿಕ ಆಕರ್ಷಣೆಯೇ?ಅಷ್ಟಕ್ಕೂ ಪ್ರೀತಿಸುವ ಮನಸುಗಳು ತಮ್ಮ ಸಂಗಾತಿಯಲ್ಲಿ ಹುಡುಕುವ ಬಯಸುವ ಗುಣಗಳೇನು? ಎಂಬುದಕ್ಕೆ ಇನ್ನು ಉತ್ತರ ಸಿಕ್ಕಿಲ್ಲ. ಇವೆಲ್ಲವನ್ನು ಮೀರಿದ ಬರೀ ಭಾವಬಂಧುರದಲ್ಲಿ ಹುಟ್ಟುಕೊಳ್ಳುವ ಸ್ವಾರ್ಥ ರಹಿತ ಪ್ರೀತಿ ಈ ಜಗದಲ್ಲಿದೆಯೇ ?


 ಹೀಗೆ ಯೋಚಿಸುವಾಗಲೆಲ್ಲ ನನ್ನ ಮನಸ್ಸಿನಲ್ಲಿ ಅಕ್ಕನ ವಚನಗಳಲ್ಲಿ ಬರುವ 'ಆತ್ಮ ಸಾಂಗತ್ಯ' ಎಂಬ ಪದ ಸಿಕ್ಕಿ ಹಾಕಿಕೊಳ್ಳುತ್ತದೆ.

ಎಷ್ಟು ಚಂದದ ಕಲ್ಪನೆ ಇದು.ನಾವು ದೇಹದ ಬಯಕೆಗೆ, ಇಹದ ಬೇಕು ಬೇಡಗಳಿಗೆ ನಮ್ಮ ನೋವು ನಲಿವುಗಳಿಗೆ ಸ್ಪಂದಿಸಲೆಂದೇ ಸಂಗಾತಿಯನ್ನು ಹುಡುಕುತ್ತೇವೆ, ಎಂಥ ಆದರ್ಶ ಪ್ರೇಮಿಗಳು, ಗಂಡ ಹೆಂಡತಿ, ಆದರೂ ಆ ಬಾಂಧವ್ಯದಲಿ ಪುಟ್ಟ ಸ್ವಾರ್ಥವಿದ್ದೆ ಇದೆ. ಆತ್ಮ ಸಾಂಗತ್ಯ ಎಂಬುದು ಇದೆಲ್ಲದಕ್ಕೆ ಮೀರಿದ್ದು. 


 ಆತ್ಮ ಸಾಂಗತ್ಯ ಭಿನ್ನವಾಗಿ ತೋರುವುದೇ ಇಲ್ಲಿ, ಈ ರೀತಿಯ ಪ್ರೀತಿಯಲ್ಲಿ ಎಂದಿಗೂ ದೈಹಿಕ ಕಾಂಕ್ಷೆಗಳು ಇರುವುದಿಲ್ಲ. ಅದು ಮಾನಸಿಕ ಸಾಂಗತ್ಯಕ್ಕೆ ಹಾತೊರೆಯುತ್ತಿರುವಾಗ ಸಿಕ್ಕ ಪ್ರೇಮದ ಸಿಹಿನೀರ ಝರಿ. ಇಂಥ ಬಾಂಧವ್ಯಗಳನ್ನು ನಮ್ಮಸುತ್ತಲಿನ ಜಗತ್ತಿಗೆ ವಿವರಿಸುವುದು ನಿಜಕ್ಕೂ ಕಷ್ಟ. ಅದರಲ್ಲೂ ಒಂದು ಹೆಣ್ಣು ಗಂಡಿನ ನಡುವೆ ಒಂದು ಚಂದದ ಮಾತಿನ ವಿನಿಮಯವಾದರೂ ಲೆಕ್ಕ ಕೇಳುವ ಈ ಜಗತ್ತಿಗೆ ಲಾಭ ನಷ್ಟ , ಬೇಕು ಬೇಡದ ಹಂಗಿಲ್ಲದೆ ಇರುವ ಸಂಬಂಧದ ಬಗ್ಗೆ ತಿಳಿಸಿ ಹೇಳಿದರೂ ಅರ್ಥವಾಗುವುದೇ?ಅಂಥ ಪರಿಪಕ್ವತೆ ನಮ್ಮ ಮನಸ್ಸುಗಳಿಗಿದೆಯೇ? 


ನೀವು ಮೊದಲ ಬಾರಿಗೆ ಯಾರನ್ನೋ ಭೇಟಿ ಆದಾಗಲೇ ಅವರನ್ನು ಅದೆಷ್ಟೋ ವರ್ಷದಿಂದ ಬಲ್ಲೆವು , ಅರೇ! ಇವರನ್ನೇ ಅಲ್ಲವೇ ನಾ ಇಷ್ಟು ದಿನದಿಂದ ಹುಡುಕುತ್ತಿದ್ದುದು, ನನ್ನ ಬದುಕಿನ ಚಿತ್ರದ ಬಣ್ಣ ಬಳಿಯದೆ ಬಿಟ್ಟ ಆ ಖಾಲಿಯನ್ನು ರಂಗಾಗಿಸಲು ,ನಮ್ಮನ್ನು  ಪರಿಪೂರ್ಣ ಮಾಡಲೆಂದೇ ನಮ್ಮೆಡೆಗೆ ನಡೆದು ಬಂದವರು ಅನ್ನಿಸಿ ಅವರೆಡೆಗೆ ಮನಸ್ಸು ವಾಲುತ್ತಲೇ ಹೋಗುತ್ತದೆ. ಹಾಗೆಂದು ನೀವು ದಿನ ಭೇಟಿ ಆಗಬೇಕು ಜೊತೆಯಲ್ಲಿ ಸಮಯ ಕಳೆಯಬೇಕು ಎಂಬ, ನಿಮ್ಮ ದಿನಚರಿಯನ್ನು ಒಪ್ಪಿಸಬೇಕು 

ಜನ್ಮದಿನವನ್ನು ನೆನಪಿಡಬೇಕು, ಉಡುಗೊರೆಗಳ ವಿನಿಮಯವಾಗಬೇಕೆಂಬ ಯಾವ ನಿಯಮಗಳಿಗೂ ಒಳಗಾಗದ ಅನನ್ಯ ಬಂಧವಿದು. 


ಆ ಸಂಗಾತಿಯು ಅಷ್ಟೇ, ನಮ್ಮನ್ನು ನಗಿಸುತ್ತಾರೆ ಅತ್ತಾಗ ಕಣ್ಣೊರೆಸುತ್ತಾರೆ,ನಮ್ಮ ಪಥದಿಂದ ಸ್ವಲ್ಪ ಅತ್ತಿತ್ತ ಸರಿದರು ಎಚ್ಚರಿಸುತ್ತಾರೆ, ಪ್ರೀತಿ ಗೌರವದಿಂದಲೇ ನಮ್ಮ ಅಂತರಂಗದ ಊನಗಳನ್ನೂ ಸ್ವೀಕರಿಸುತ್ತಾರೆ. 

ಆ ಜೀವದ ಎದುರು ಯಾವ ಗುಟ್ಟುಗಳು ಇರುವುದಿಲ್ಲ, ನಾನೇ ಸರಿ ಎಂಬ ವಾದ ವಿವಾದಗಳು ಇರುವುದಿಲ್ಲ. 

ಜೊತೆ ಜೊತೆಗೆ ಬೆಳೆಯುವ ಬೆಳೆಸುವ ಪ್ರೇಮದ ಪರಿಯದು.ಆ ಜೀವದ ಸಾಂಗತ್ಯದ ಹೊರತು ಇನ್ನೇನೂ  ಬಯಸುವುದಿಲ್ಲ ಆ ಜೀವ. 


ಮೊದಲೆಲ್ಲ ಪತ್ರ ಮೈತ್ರಿ ಎಂಬ ಸುಂದರ ಲೋಕವೊಂದಿತ್ತು 

ಅಲ್ಲಿ ಅಕ್ಷರಗಳಿಂದ ಮಾತ್ರವೇ ಮನಸ್ಸನ್ನು ಆವರಿಸಿ ಹೊಸತೊಂದು ಜಗತ್ತನ್ನು ಪರಿಚಯಿಸಿ ಪುಸ್ತಕ, ಗಜಲ್,ಜಗತ್ತಿನ ಕೌತುಕಗಳ ಬಗ್ಗೆ ಬರೆದು ಎಷ್ಟೆಲ್ಲ ಕಲಿಯಲು ಇದೆ ಎಂದು ತೋರಿಸಿಕೊಟ್ಟ ಆ ಪತ್ರಮಿತ್ರರು ಆ ಕಾಲದ ಆತ್ಮಸಂಗಾತಿಗಳು.


ಪತ್ರದ ಕಾಲ ಮುಗಿದು ಫೋನ್ ಬಂದಾಗ ಪ್ರೀತಿಯು ಅಕ್ಷರಗಳಿಂದ ಮಾತಿಗೆ ಹರಿಯಿತು. ನಂತರ orkut , facebook, twitter ಗಳ ಕಾಲದಲ್ಲಿ ನಮ್ಮಂತೆ ಯೋಚಿಸುತ್ತಾರೆ, ಎಷ್ಟು ಸಾಮ್ಯತೆ ನಮ್ಮ ಆಲೋಚನೆಗಳಲ್ಲಿ ಎಂಬ ಭಾವ ಮೂಡಿಸಿದ ಬಂಧಗಳು ಹಲವು. 


ಇತ್ತೀಚಿನ ದಿನಗಳಲ್ಲಿ, ಬರಹ ಫೋಟೋ ವಿಡಿಯೋ ಹಂಗಿಲ್ಲದೆ ಬರೀ ಧ್ವನಿಯ ಮೂಲಕ ಹಲವು ಮನಸುಗಳನ್ನು ಒಂದೆಡೆ ಸೇರಿಸಿ ಮನಸಿನಮಾತನ್ನು ಕೇಳಲು ಶ್ರೋತೃಗಳನ್ನು ಒದಗಿಸಿ ಕೊಟ್ಟಿದ್ದು ಕ್ಲಬ್ ಹೌಸ್ ಎನ್ನುವ ಜಾಲತಾಣ. ಇಲ್ಲಿ ನನಗೆ ಹಾಡು ಮಾತಿನ ಸಂತೆಯಲ್ಲಿ ಹಾಗೆ ಒಮ್ಮೆಲೇ ಸಿಕ್ಕು 

ಪ್ರೀತಿಯನ್ನಷ್ಟೇ ಕೊಡುತ್ತ, ಎಲ್ಲಿಯೂ ಸಭ್ಯತೆಯ ಚೌಕಟ್ಟು ಮೀರದ ಒಲವ ತುಂಬಿ, ಹೊಸ ಹೊಸ ಸವಾಲುಗಳನ್ನು ಕೊಟ್ಟು ಅದನ್ನು ಬಿಡಿಸಿ ಸಾಧಿಸಿ ಎದುರಿಗೆ ನಿಂತಾಗಲೊಮ್ಮೆ ಅಪ್ಪನಂತೆ ಹೆಮ್ಮೆ ಪಡುತ್ತ, ಅಣ್ಣನಂತೆ ನೆತ್ತಿ ನೇವರಿಸುವ, ಅಮ್ಮನಂತೆ ಪ್ರೀತಿಯ ಮಾಡಿಲಾಗುವ ತಿದ್ದಿ ಬುದ್ದಿ ಹೇಳಿ ಗುರುವಾಗುವ ವ್ಯಕ್ತಿತ್ವ ನನಗೆ ಆತ್ಮಸಂಗಾತಿ ಎನಿಸುತ್ತಾರೆ.


ಆತ್ಮ ಸಾಂಗತ್ಯ ಎಂಬುದು, ಭಾಷೆ, ಗಡಿ ,ವಯಸ್ಸು ಎಂಬ ಮೆರೆಯನ್ನು ಮೀರಿದ್ದು. ಮನದ ಭಾವಗಳನ್ನು ಬರಿದು ಮಾಡಿಕೊಳ್ಳುತ್ತಲೇ ಮತ್ತೆ ಮತ್ತೆ ತುಂಬಿಕೊಳ್ಳುವ ಈ

ಆತ್ಮಸಖ್ಯಕ್ಕೆ ಪ್ರತಿಯೊಬ್ಬರ ಪರಿಭಾಷೆ ಬೇರೆಯೇ ಇರಬಹುದು. 

ನಾವೆಲ್ಲರೂ ಮಾತಿನಲ್ಲಿ ಪ್ಲೇಟಾನಿಕ್ ಪ್ರೀತಿ ಎಂದು ಉಲ್ಲೇಖಿಸುತ್ತೇವೆ, ಅಂಥ ಪ್ರೀತಿಯನ್ನು ಎಲ್ಲರೂ ಬಯಸುತ್ತೇವೆ ಆದರೆ ಆ ಪ್ರೀತಿಗೆ ಬೇಕಾದ ಮನೋಸ್ಥೈರ್ಯವನ್ನು , ಭಾವನೆಗಳಲ್ಲಿ ಲಾಲಿತ್ಯ ವನ್ನು ಬೆಳೆಸಿಕೊಳ್ಳುವ ಅಗತ್ಯತೆ ಬಹುವಾಗಿ ಇದೆ. 

ಸಂಬಂಧಗಳಿಗೆ ಹೆಸರುಕೊಟ್ಟು ಅದರ ಸುತ್ತ ಬೇಲಿ ಹಾಕಿ ಅದನ್ನು ಜಗತ್ತಿಗೆ ಪರಿಚಯಿಸುವ ತುರ್ತುಗಳು ನಿಂತರೆ  ನಮ್ಮ ಸುತ್ತ  ಆತ್ಮ ಸಾಂಗತ್ಯ, ಪ್ಲೇಟಾನಿಕ್ ಪ್ರೇಮದ ಉದಾಹರಣೆಗಳು ಹೆಚ್ಚಾಗಬಹುದೇನೋ.

Friday, October 22, 2021

ನಾರಾಯಣಿ

ನಾವು ದಿನಾಲು ಹಲವಾರು ಜನರನ್ನು ಭೇಟಿ ಆಗುತ್ತೇವೆ. ಕೆಲವು ತೀರಾ ವ್ಯವಹಾರಿಕ ಭೇಟಿಗಳು ಮತ್ತಷ್ಟು ನಗು ವಿನಿಮಯದ ಭೇಟಿಗಳಾದರೆ , ಒಂದಷ್ಟು ತಪ್ಪಿಸಿಕೊಳ್ಳಲು ನೆವ ಹುಡುಕುವಂತೆ ಮಾಡುವ ನೀರಸ ಭೇಟಿಗಳು. ಆದರೆ ಕೆಲವೊಂದು ಮಾತ್ರ ಜೀವನ ಪೂರ್ತಿ ನೆನಪುಳಿದು ಬದುಕಿಗೆ ಕನ್ನಡಿ ತೋರಿ ನಮ್ಮನ್ನು ತಿದ್ದಿ ತೀಡಲು ಅನುವು ಮಾಡುವ , ಬದುಕಿಗೆ ಹೊಸ ಹೊಳವನ್ನು ಕೊಡುವ ಭೇಟಿಗಳು. ಯಾರೂ ಯಾರನ್ನೂ ಸುಮ್ಮನೆ ಭೇಟಿ ಯಾಗುವುದಿಲ್ಲ ಎಲ್ಲದಕ್ಕೂ ಒಂದು ಅನೂಹ್ಯ ಕಾರಣ ಇದ್ದೆ ಇರುತ್ತದೆ. ನಮಗೆ ಸಿಗುವ ಕೆಲವರು ನಮ್ಮಿಂದ ಒಳ್ಳೆಯದನ್ನು ಕಲಿತರೆ , ಹಲವಾರು ಮಂದಿ ನಮಗೆ ಸಿಹಿ ಬುತ್ತಿಯನ್ನು ಕಳಿಸಿ ಉಣಿಸಿಯೂ ಹೋಗುತ್ತಾರೆ. ಸ್ವಲ್ಪ ಮಂದಿ ಕಹಿ ಕಾಡೆ ಕುಡುಸುವುದು ಉಂಟು. ಹೊಸದನ್ನೇನೋ ಹುಡುಕಾಡುವ ಚಿಕ್ಕ ಚಿಕ್ಕ ಘಟನೆಗಳಲ್ಲಿ ಜೀವನಪಾಠ ಹುಡುಕುವ ನನ್ನಂಥ ಅನೇಕರಿಗೆ ದೂರದ ಊರುಗಳಲ್ಲಿ ಅಥವಾ ಹೊರದೇಶದಲ್ಲಿ ಭೇಟಿಯಾಗುವ ವಿಲಕ್ಷಣ ವ್ಯಕ್ತಿಗಳು ಅವರ ಕಥೆಗಳು ಅವರು ನಡೆದು ಬಂದ ಹಾದಿ ನಮಗೆ ಅದೆಂಥದೋ ಹುರುಪು ಸಂಭ್ರಮ ಆಶ್ಚರ್ಯ ತರುತ್ತವೆ. ಅಂತಹದೇ ಒಂದು ಆಕಸ್ಮಿಕ ವಿಶೇಷ ಭೇಟಿಯ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ. ಆ ದಿನ ಒಂದು ಮೆಸ್ಸೇಜ್ ಬಂತು , 'ನನ್ನ ಮಕ್ಕಳಿಗೆ ಜೊತೆಗೆ ನನಗೂ ಸಂಗೀತ ಕಲಿಯಬೇಕಿದೆ, ನೀವು ಕಲಿಸುತ್ತೀರಾ ?'' ಹೌದು, ಅಂತ ಅಂದಮೇಲೆ ಒಂದಷ್ಟು ಮೆಸೇಜ್ ವಿನಿಮಯವಾದವು, ಮತ್ತು ತರಗತಿಯ ದಿನಾಂಕ ಸಮಯ ನಿಗದಿಯಾದ ಮೇಲೆ , ಆಕೆಯ ಹೆಸರು ಕೇಳಿದೆ , ''ನಾರಾಯಣಿ'' ಎಂದಳು ಮನದಲ್ಲಿ ಈಕೆ ಆಂಧ್ರಮೂಲದ ಮಹಿಳೆ ಇರಬೇಕು ಅನ್ನುವ ಭಾವ ಬಿಟ್ಟರೆ ಇನ್ನಾವ ಕುತೂಹಲ ಇರಲಿಲ್ಲ ಆಕೆಯ ತರಗತಿ ನಿಗದಿ ಆದ ದಿನ ಸಂಜೆ ಕರೆಗಂಟೆ ಆದಾಗ, ಸಂಜೆ ನಸುಗತ್ತಲು ಆವರಿಸಿತ್ತು ಬಾಗಿಲಿನ ಗಾಜಿನ ಮೂಲಕ ಕಂಡಿದ್ದು ಎರಡು ಕೆಂಚುಗೂದಲ ಮಕ್ಕಳು ಮತ್ತವರ ಅಮ್ಮ. ''we are here here for music class'' ಎಂದರು. ನಾರಾಯಣಿ ?ಎಂದು ಪ್ರಶ್ನಾರ್ಥಕವಾಗಿ ಕೇಳಿದೆ , ಹೌದು ಎಂದು ನಗುತ್ತ ಉತ್ತರಿಸಿದಳು. ಒಳ ಬರುತ್ತಲೇ ಇಬ್ಬರೂ ಮಕ್ಕಳಿಗೆ ನನ್ನ ಕಾಲಿಗೆ ನಮಸ್ಕರಿಸಲು ತಿಳಿಸಿದಳು , ಆಕೆಯು ವಂದಿಸಿ ತರಗತಿ ಗೆ ನಾವು ಸಿದ್ಧ ಎಂದಳು. ಆದರೆ ನನಗೆ ಇದೆಲ್ಲ ಅಚ್ಚರಿ , ಕುತೂಹಲ ಮೂಡಿಸಿತ್ತು ಭಾರತೀಯ ಮೂಲದ ಮಕ್ಕಳು ಬಂದಾಗಲೂ ಚಪ್ಪಲಿ ಬಿಟ್ಟು ಒಳಬನ್ನಿ ಅನ್ನುವ ಮಾತನ್ನು ನಾನೇ ಹೇಳಬೇಕಾದ ಸಂಧರ್ಭಗಳನ್ನ ಎದುರಿಸಿದ್ದ ನನಗೆ , ತಲ ಬಾಗಿಲಲ್ಲೇ ಅವರು ಗುರು ಎಂದು ನಮಸ್ಕರಿಸಿ ಗೌರವಿಸಿದ ರೀತಿ ನನ್ನನು ಪೂರ್ತಿ ಆವರಿಸಿತ್ತು . ಅವರು ಸಿದ್ಧರಿದ್ದರು ಇದನ್ನು ನಿರೀಕ್ಷಿಸಿರದ ನಾನು ಇನ್ನು ಹಾಗೆ ಬೆಪ್ಪಾಗಿ ನಿಂತಿದ್ದೆ . ಹಾಗೆ ಆ ದಿನ ಶುರುವಾದ ನಮ್ಮ ಸಂಗೀತ ತರಗತಿ ಗಳು ಕೆಲ ತಿಂಗಳು ಸಾಗಿತು, ದಿನ ಕಳೆದಂತೆ ನಾರಾಯಣಿ ಮತ್ತು ಅವರ ಕುಟುಂಬದ ಬಗ್ಗೆ ತಿಳಿದು ಕೊಳ್ಳುವ ಸದವಾಕಾಶವು ದೊರೆಯಿತು. ಭಾರತದ ಬಗ್ಗೆ ಆಕೆಗಿರುವ ಭಕ್ತಿ ,ಪ್ರೀತಿ , ಅಕ್ಕರೆ ಅದನ್ನು ಆಕೆಯ ಮಾತಿನಲ್ಲೇ ಕೇಳಬೇಕು, ಭಾರತದಲ್ಲಿರುವ ಎಲ್ಲರೂ ಯಾವುದೋ ಒಂದು ಶಕ್ತಿಯನ್ನು ಪ್ರಾರ್ಥಿಸುತ್ತಾರೆ, ಆ ಪ್ರಾರ್ಥನೆಯ ಶಕ್ತಿಯ ನಿರಂತರತೆಯೇ ಆ ದೇಶಕ್ಕೆ ಅಷ್ಟು ವಿಶೇಷತೆ ಕೊಟ್ಟಿದೆ ಅಂದು ತನ್ಮಯಳಾಗುವ ನಾರಾಯಣಿ ಮೂಲತಃ ಅರ್ಜೆಂಟೀನಾ ದೇಶದವಳು. ಆಕೆಯ ಅಪ್ಪ ಅಮ್ಮನಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಅತೀವ ಪ್ರೀತಿ ಭಾರತದ ಬಗ್ಗೆ ಬರೀ ಓದಿ ಗೊತ್ತಿದ್ದ ಅವರು ಅವರ ಮಕ್ಕಳಿಗೆ ಭಾರತೀಯ ಹೆಸರುಗಳನ್ನೇ ಇಟ್ಟರು. ನಾರಾಯಣಿ ಸುಮಾರು ೧೦ ವರ್ಷದವಳಿರುವಾಗ ಆಕೆಗೆ ಹುಷಾರು ತಪ್ಪಿತು ಆ ಕಾರಣದಿಂದ ಆಕೆಯ ಶಾಲೆ ಅರ್ಧಕ್ಕೆ ನಿಂತಿತು , ಆದರೆ ಆಕೆಯ ತಾಯಿ ಶಾಲೆಯ ಅನುಮತಿ ಪಡೆದು ಆಕೆಗೆ ಮನೆಯಲ್ಲೇ ಪಾಠ ಕಲಿಸಲು ಆರಂಭಿಸಿದರು, ಜೊತೆಗೆ ಆಕೆಯ ಕಾಯಿಲೆಗೆ ಆಯುರ್ವೇದ ಮತ್ತು ಭಾರತೀಯ ಮನೆಮದ್ದುಗಳ ಮೊರೆ ಹೊಕ್ಕರು. ದಿನ ಕಳೆಯುತ್ತಾ ನಾರಾಯಣಿ ಅರೋಗ್ಯ ಸುಧಾರಿಸಿತು , ಶಾಲೆಯಲ್ಲಿ ಒಂದು ವರ್ಷದಲ್ಲಿ ಕಲಿಯುವ ಪಠ್ಯಕ್ರಮವನ್ನ ಆಕೆ ಆರೇ ತಿಂಗಳಲ್ಲಿ ಕಲಿತಿದ್ದಳು , ಇದನ್ನು ಗಮನಿಸಿದ ತಂದೆ ತಾಯಿ ಆಕೆಗೆ ಹೋಂ ಸ್ಕೂಲಿಂಗ್ ಮಾದರಿಯಲ್ಲೇ ಕಲಿಕೆಯನ್ನು ಮುಂದುವರಿಸಿ, ಆಗ ಅರ್ಜೆಂಟೀನಾದಲ್ಲಿ ಶುರುವಾದ ಗುರುಕುಲ ಮಾದರಿಯ ಶಾಲೆಯಲ್ಲಿ ವೇದ , ಯೋಗ , ಉಪಾಸನಾ ವಿಧಿಗಳನ್ನ , ಕೃಷಿ ತೋಟಗಾರಿಕೆಗಳಂಥ ಜೀವನಾವಶ್ಯಕ ಕಲಿಕೆಯನ್ನು ಕಲಿಯಲು ಅನುವು ಮಾಡಿಕೊಟ್ಟರು. ಕೆಲ ವರುಷಗಳಲ್ಲಿ ನಾರಾಯಣಿ ತನ್ನ ಆರ್ಕಿಟೆಕ್ಚರ್ ಪದವಿ ಮುಗಿಸಿ ಯುರೋಪ್ ಗೆ ಬಂದಳು , ಅಲ್ಲಿಯೇ ಆಕೆ ತನ್ನ ಜೀವನ ಸಂಗಾತಿಯನ್ನು ಭೆಟ್ಟಿಯಾದಳು. ಆತ ಸ್ಪ್ಯಾನಿಷ್ ಹುಡುಗ ಆದರೆ ಅವನೂ ಸನಾತನ ಧರ್ಮದ ಆರಾಧಕ, ಪೂಜಕ, ಅತಿ ಕಠಿಣ ಪಾವನ ಚಾರಣ ಎನಿಸಿರುವ ಗಂಡಕಿ ಯಾತ್ರೆ ಯನ್ನು ಮಾಡಿ ಬಂದಿದ್ದ ,ನಿತ್ಯ ಪೂಜೆ ಅನುಷ್ಠಾನ ಮಾಡುವ ಇವರನ್ನು ದೇವರೇ ನಿಂತು ಜೊತೆ ಮಾಡಿದ ಎಂದರೆ ಅದು ಉತ್ಪ್ರೇಕ್ಷೆಯಾಗದು ಭಾರತೀಯ ಸಂಪ್ರದಾಯದಂತೆ ಮದುವೆಯಾದ ಈ ಜೋಡಿ ,ಮೊದಲ ಮಗುವಿನ ಬಗ್ಗೆ ಆಲೋಚನೆ ಬರುತ್ತಲೇ ಚರಕ ಸಂಹಿತೆಯನ್ನು ಓದಲು ಶುರು ಮಾಡಿದ್ದರಂತೆ. ಅದೆಷ್ಟು ಶ್ರೀಮಂತ ದೇಶ ಭಾರತ ಬಗೆದಷ್ಟು ಜ್ಞಾನ ,ನಮ್ಮ ಮಗು ಭಾರತದಲ್ಲೇ ಹುಟ್ಟಬೇಕು ಎಂದು ನಮ್ಮ ಬಯಕೆಯನ್ನು ಶ್ರೀ ಹರಿ ಪೂರ್ಣ ಮಾಡಿದ ನಮ್ಮ ಮಗಳು ಮಥುರೆಯಲ್ಲೇ ಹುಟ್ಟಿದಳು ಅದಕ್ಕೆ ರಾಧಿಕಾ ಎಂದು ಹೆಸರಿಟ್ಟು, ನಂತರ ಹುಟ್ಟಿದ ಮಗನಿಗೆ ಗೋಪಿ ಹೆಸರಿಟ್ಟೆವು ಎಂದು ಧನ್ಯತೆಯಿಂದ ನೆನೆಯುತ್ತಾಳೆ. ಈ ಕುಟುಂಬದ ಇನ್ನೊಂದು ವಿಶಿಷ್ಟತೆ ಎಂದರೆ ಇವರು ಪೂಜಿಸುವ ಸಾಲಿಗ್ರಾಮಗಳು , ೨೭೫ !! ನಾನು ಈ ಅಷ್ಟು ಸಂಖ್ಯೆಯ ಒಟ್ಟಿಗೆ ಈ ವರೆಗೂ ನೋಡಿರಲಿಲ್ಲ, ಸಾಲಿಗ್ರಾಮಗಳನ್ನು ನಮ್ಮಲ್ಲಿ ಹಾಗೆ ಮನೆಗಳಲ್ಲಿ ಇಟ್ಟುಕೊಳ್ಳುವುದು ತೀರಾ ಅಪರೂಪ, ಅದಕ್ಕೆ ತುಂಬಾ ಕಟ್ಟುನಿಟ್ಟಿನ ಪೂಜೆ ಆಗಬೇಕಂತೆ ನೀವು ಹೇಗೆ ಧೈರ್ಯ ಮಾಡಿದಿರಿ ಎಂಬ ನನ್ನ ಪೆದ್ದು ಪ್ರಶ್ನೆಗೆ ನಸುನಗುತ್ತಾ '' ದೇವರ ಕುರಿತು ಭೀತಿಯ ಬದಲು ಪ್ರೀತಿ ಹುಟ್ಟಿದ ದಿನ ನಮ್ಮ ಇಡೀ ಪ್ರಪಂಚ ಸ್ವರ್ಗವಾಗುತ್ತದೆ, ಆತನ ಬಗ್ಗೆ ಭಯ ಯಾಕೆ ? ಆತನೇ ಅಲ್ಲವೇ ನಮ್ಮನ್ನ ಸೃಷ್ಟಿಸಿದವನು , ನಮ್ಮ ಕರ್ಮ ಕೈಂಕರ್ಯಗಳು ಸರಿಯಾಗಿದ್ದರೆ ಮುಗೀತು ಇನ್ನಾರಿಗೂ ನಾವು ಹೆದರುವ ಅಗತ್ಯವಿಲ್ಲ . ಮಗಳು ಹುಟ್ಟುವಾಗ ನಮ್ಮ ಹತ್ತಿರ ೫೦೦ ಸಾಲಿಗ್ರಾಮಗಳಿದ್ದವು , ನಾವು ಎಲ್ಲಿ ಹೋದರೂ ಎಲ್ಲೆಡೆ ಅವನ್ನು ಕರೆದುಕೊಂಡು ಹೋಗುತ್ತಿದ್ದೆವು . ಆಮೇಲೆ ಮತ್ತಷ್ಟು ಬಂದವು ಕೆಲವಷ್ಟನ್ನು ಸ್ನೇಹಿತರಿಗೆ ಕೊಟ್ಟೆವು , ಅದು ಸಾಲಿಗ್ರಾಮದ ಇಚ್ಛೆ "ತಾನು ಯಾರ ಮನೆಗೆ ಹೋಗಬೇಕು" ಅಂತ ಅದೇ ನಿರ್ಧರಿಸುತ್ತದೆ , ನಾವು ಅದರ ಸೇವಕರು ಅಷ್ಟೇ! ನಮ್ಮ ಮನೆಯಲ್ಲಿ ಎಲ್ಲ ಸಾಲಿಗ್ರಾಮಕ್ಕೆ ಮಕ್ಕಳು ಪೂಜೆ ಮಾಡ್ತಾರೆ ಅದಕ್ಕೆ ಲಾಲಿ ಹಾಡುತ್ತಾರೆ ಅವಗಳೊಂದಿಗೆ ಇಬ್ಬರೂ ಮಾತಾಡುತ್ತಾರೆ. ನಾವು ದಿನ ಮಾಡುವ ಅಡುಗೆಯನ್ನೇ ನೈವೇದ್ಯ ಮಾಡುತ್ತೇವೇ ಅಂದರೆ ದೊಡ್ಡಸ್ತಿಕೆ ಆಗುತ್ತದೆ ಅವು ನಮ್ಮಿಂದ ಸೇವೆ ಮಾಡಿಸಿಕೊಳ್ಳುತ್ತಿವೆ. ಅಷ್ಟಕ್ಕೂ ನಾನು ಅಂದರೆ ಯಾರು..ಅವನದೇ ಒಂದು ಅಂಶ ಅಲ್ಲವೇ ? ಎಂದು ನಾರಾಯಣಿ ಪ್ರಶ್ನಿಸುತ್ತಾಳೆ. ನಾರಾಯಣಿಯ ಇಬ್ಬರೂ ಮಕ್ಕಳು ಹೋಂ ಸ್ಕೂಲಿಂಗ್ ನಲ್ಲೆ ಕಲಿಯುತ್ತಾರೆ. ನಾನು ಶಾಲೆಗೆ ಕಲಿಸುವ ಪ್ರಯತ್ನ ಮಾಡಿದೆ, ಆದರೆ ಅವರಿಗೆ ಅದು ಇಷ್ಟವಾಗಲಿಲ್ಲ , ಮತ್ತೆ ನೊರ್ದರ್ನ್ ಐರ್ಲಾಂಡ್ ನ ಶಿಕ್ಷಣ ಇಲಾಖೆ ಹೋಮ್ ಸ್ಕೂಲಿಂಗ್ ಗೆ ತುಂಬಾ ಸಹಾಯ ಮಾಡುತ್ತದೆ , ಹೀಗಾಗಿ ಮಕ್ಕಳು ಯಾವುದೇ ಒತ್ತಡಕ್ಕೆ ಬೀಳದೆ ಕಲಿಯುವಿಕೆ ಜೊತೆಗೆ ಈಜು , ಇನ್ನಿತರ ಕಲಿಕೆಯನ್ನು , ಸಂಗೀತ ಭಾರತೀಯ ನೃತ್ಯವನ್ನ ಕೂಡ ಕಲಿಯುತ್ತಿದ್ದಾರೆ ಕಲಿಯುವಿಕೆಗೆ ಅಂತ್ಯವೆಲ್ಲಿ ನಿಮಗೆ ಆಸಕ್ತಿ ಇರಬೇಕು ಅಷ್ಟೇ ಮತ್ತೆ ಇಲ್ಲಿ ರಜೆ ಇರುವುದಿಲ್ಲ ಮಕ್ಕಳ ಕಲಿಕೆ ನಿರಂತರ ಒಂದಲ್ಲ ಒಂದು ಅವರ ಮೆಚ್ಚಿನ ವಿಷಯಗಳನ್ನು ಕಲಿಯುತ್ತಲೇ ಇರುತ್ತಾರೆ. ಸ್ಪ್ಯಾನಿಶ ನಮ್ಮ ಮಾತೃಭಾಷೆ , ಜೊತೆಗೆ ನಾವು ದೇವನಾಗರಿಯನ್ನು ಕಲಿಸುತ್ತಿದ್ದೇವೆ . ಇಂಗ್ಲಿಷ್ ಕೂಡ ಮಾತಾಡುತ್ತಾರೆ. ಭಾರತ ದಲ್ಲಿ ನಮಗೆ ರಕ್ತ ಸಂಬಂಧಿಗಳು ಯಾರು ಇಲ್ಲ , ಆದರೆ ಪ್ರತಿ ರಜೆಗೂ ನಾವು ಭಾರತಕ್ಕೆ ಹೋಗುತ್ತೇವೆ ವಸುಧೈವ ಕುಟುಂಬಕಂ ಎಂಬುದನ್ನ ನಂಬಿದ್ದೇನೆ , ಹಳ್ಳಿ ಗಳಲ್ಲಿ ತಿಂಗಳುಗಳ ಕಾಲ ಉಳಿಯುತ್ತೇವೆ, ನಾನು ಬಹಳಷ್ಟು ಅನಿವಾಸಿ ಭಾರತೀಯ ಮಕ್ಕಳೊಂದಿಗೆ ಪಾಲಕರೊಂದಿಗೆ ಮಾತಾಡಿದ್ದೇನೆ , ಅವರಿಗೆ ಭಾರತ ಎಂದರೆ ಪ್ರವಾಸಿ ತಾಣ , ಬಿಸಿಲು ಸೆಖೆ ಧಗೆ, ಸ್ವಚ್ಛತೆ ಇಲ್ಲದ ಊರು/ದೇಶ , ಎಂಬಂಥ ಭಾವನೆಗಳೇ, ನನ್ನ ಮಕ್ಕಳಿಗೆ ಭಾರತ ಎಂದರೆ ಪ್ರಾಣ ಪ್ರತಿ ಸಲ ವಾಪಸ ಬರುವಾಗ ಕಣ್ಣೀರು ಹಾಕುತ್ತ ಫ್ಲೈಟ್ ಹತ್ತುತ್ತಾರೆ. ಭಾರತದ ಮಹತ್ತನ್ನು ನೀವ್ಯಾಕೆ ನಿಮ್ಮ ಮಕ್ಕಳಿಗೆ ಸರಿಯಾಗಿ ತಿಳಿಸಿಕೊಡುತ್ತಿಲ್ಲ? ಎಂಬ ಪ್ರಶ್ನೆಯನ್ನ ವಿನಮ್ರವಾಗಿ ಕೇಳುತ್ತಾಳೆ. ವೃತ್ತಿ ಮತ್ತು ಮಕ್ಕಳ ಶಿಕ್ಷಣ ಜೊತೆಗೆ ಈ ವೃತನಿಷ್ಠ ಬದುಕನ್ನು ನಡೆಸುವುದು ಕಠಿಣ ಅನಿಸುವುದಿಲ್ಲವಾ ? ಎಂದು ಕೇಳಿದ್ದಕ್ಕೆ, ಕಷ್ಟ , ಹಾ ದೇಹಕ್ಕೆ ಅನಿಸುತ್ತದೆ ಕೆಲವೊಮ್ಮೆ! ಆದರೆ ಆತ್ಮಕ್ಕೆ ಸದಾ ನೆಮ್ಮದಿಯೇ. ಬೆಳಿಗ್ಗೆ ಮಕ್ಕಳ ಕಲಿಕೆಗೆ ನಾನು ಸಮಯ ವ್ಯಯಿಸಲೇ ಬೇಕು. ಆದ್ದರಿಂದ ನನ್ನ ವೃತ್ತಿ ಸಂಬಂಧಿ ಕೆಲಸಗಳನ್ನು ತಡರಾತ್ರಿ ಮಾಡುತ್ತೇನೆ ಕೆಲವರು ಸಿನಿಮಾ ಅಥವಾ ಸಿರೀಸ್ ನೋಡಲು ನಿದ್ದೆ ಗೆಡುವುದಿಲ್ಲವಾ ? ಹಾಗೆ ಅಂದುಕೊಳ್ಳಿ. ಮಕ್ಕಳಿಗೆ ಮುಂಜಾನೆ ಬೇಗನೆ ಏಳುವ ಅಭ್ಯಾಸವಾಗಿದೆ. ಅವರು ನಿತ್ಯದ ಪೂಜೆ , ಮಂತ್ರ , ಅವರ ಕಲಿಕೆಯ ಆಯಾ ದಿನದ ಅಭ್ಯಾಸ ಶುರು ಮಾಡುತ್ತಾರೆ. ಮತ್ತು ಇದೆಲ್ಲ ನಾವು ಖುಷಿ ಯಿಂದ ಮಾಡುತ್ತೇವೆ ಯಾರನ್ನೋ ಮೆಚ್ಚಿಸಲೋ, ಯಾವುದೋ ಕ್ರಾಂತಿ ಮಾಡಲೋಸುಗವಲ್ಲ ಇದು ನಾವು ಆಯ್ದುಕೊಂಡ ಪುರಾತನ ಭಾರತೀಯರು ಜೀವಿಸಿ ಸಿದ್ಧಿಸಿಕೊಂಡ ಜೀವನ ಪದ್ಧತಿ. ಆದರೆ ಆಧುನಿಕ ಜೀವನ ಕ್ಕೆ ತಕ್ಕಂತೆ ಕೆಲ ಬದಲಾವಣೆಗಳು ಬೇಕಾಗುತ್ತವೆ. ಆದರೆ ಎಲ್ಲದ್ದಕ್ಕೂ ಆ ಮೂಲ ಮತ್ತು ನಮಗೆ ದಾರಿ ದೀಪ ಎನ್ನುತ್ತಾಳೆ ನಮ್ಮ ನಾರಾಯಣಿ. ಒಮ್ಮೆ ನೃತ್ಯ ರೂಪಕದಲ್ಲಿ ಕೃಷ್ಣನ ವೇಷ ತೊಟ್ಟ ಆಕೆಯ ಕಪ್ಪು ಬಿಳುಪು ಚಿತ್ರವನ್ನ ತೆಗೆದಿದ್ದೆ. ನನಗೆ ಅಂದು ನಿಜಕ್ಕೂ ಕೃಷ್ಣ ಕಾಣಿಸಿದ್ದ. -ಅಮಿತಾ ರವಿಕಿರಣ್

Wednesday, February 17, 2021

ಪ್ರೇಮಕ್ಕೊಂದು ಬೀಗ ಮುದ್ರೆ!




ನೀವು ವಿದೇಶ ಪ್ರಯಾಣ ಮಾಡಿದ್ದಾದರೆ , ಅಲ್ಲಿನ ಸೇತುವೆಗಳನ್ನ ಗಮನಿಸಿದ್ದೀರಾ ? ವಿಶೇಷ ವಾಗಿ ಯುರೋಪಿಯನ್ ರಾಷ್ಟ್ರಗಳಲ್ಲಿ , ಎಲ್ಲ ಸೇತುವೆಗಳಮೇಲೆ ತೂಗಿ ಬಿದ್ದ ಗೊಂಚು  ಗೊಂಚಲು ಬಣ್ಣ ಬಣ್ಣದ ವಿವಿಧ ಆಕಾರದ ಬೀಗಗಳು ? ಚಳಿ, ಮಳೆ, ಗಾಳಿ, ಹಿಮ, ಎಲ್ಲವನ್ನು ಸೇತುವೆ ಯೊಂದಿಗೆ ತಾವು ಭರಿಸಿ ಅಲ್ಲೇ ತುಕ್ಕು ಹಿಡಿದು ಯಾವುದೋ ವೃತ ತೊಟ್ಟ ಸಂಯಮಿಯಂತೆ , ಏನಿವು ? ಯಾಕೆ ಹೀಗೆ ? ಇವನ್ಯಾಕೆ ಲವ್ ಲಾಕ್ ಅಂತಾರೆ? ಹೀಗೊಂದಿಷ್ಟು ಪ್ರಶ್ನೆಗಳು ನನಗೂ ಹುಟ್ಟಿದ್ದವು , ಮೊದಲ ಬಾರಿ ನಾನು ಇಂಥದೇ ಒಂದು ಸೇತುವೆ ಮೇಲೆ ನಡೆದಾಡುತ್ತಾ ಆ ಕೀಲಿಗಳ ಮೇಲೆ ಬರೆದಿರುವ ಜೋಡು ಹೆಸರುಗಳನ್ನ ಓದುತ್ತ ಹೋದಾಗ. ಉತ್ತರ ಹುಡುಕುತ್ತ ಹೋದಾಗಲೇ ತಿಳಿದಿದ್ದು   ಆ ಸಣ್ಣ  ಯಕಶ್ಚಿತ್ ಬೀಗಗಳು ಪ್ರಾಚೀನ , ಬೃಹದ್, ಘಟ್ಟಿ  ಸೇತುವೆಗಳನ್ನು ಅಲುಗಿಸಿದ ಕಥೆ ಗಳು.  
 
ಅದು ೧೯೧೪ ರ ಸಮಯ ಜಗತ್ತು ಮೊದಲ ಮಹಾಯುದ್ಧದ ಬೇಗೆಯಲ್ಲಿ ನರಳುತಿತ್ತು, ಯುರೋಪಿನಾದ್ಯಂತ ಒಂದು ರೀತಿಯ ಅಸ್ಥಿರತೆ ಮನೆ ಮಾಡಿದ್ದ ಸಮಯವದು , 
ದ್ವೇಷದ ದಳ್ಳುರಿಯಲ್ಲಿ ರಾಷ್ಟ್ರ ರಾಷ್ಟ್ರಗಳು ಕಿತ್ತಾಡುತ್ತಿರೆ , ಅದೇ ಸಂದರ್ಭದಲ್ಲಿ ಪ್ರೀತಿಯ ಸಂಕೇತವೆಂಬಂತೆ , ಆಶಾವಾದಕ್ಕೆ ಸಾಕ್ಷಿಹೇಳುವಂಥ ಒಂದು ಸಂಪ್ರದಾಯ ಶುರುವಾಗಿದ್ದು ಮಾತ್ರ ಮೆತ್ತನೆ ಇತಿಹಾಸದ ಪುಟ ಸೇರಿಹೋಯಿತು , ಅದರ ಮೇಲಿದ್ದ ಯುದ್ಧದ ಕಹಿ ನೆನಪುಗಳ ಹಾಳೆಗಳು ಅದೆಷ್ಟು ಭಾರವಾಗಿದ್ದವೆಂದರೆ  ಈ ಮನ ಹಿಂಡುವ ಪ್ರೇಮಕಥೆ ಕಥೆ ಅದು ಹುಟ್ಟು ಹಾಕಿದ ವಿಲಕ್ಷಣ ಆಚರಣೆಯ ಹಿನ್ನೆಲೆ, ಐತಿಹ್ಯವಾಗಿ ಜಗತ್ತಿನೆಲ್ಲೆಡೆಯ ಜನರಿಗೆ ತಿಳಿಯಲು ಮತ್ತೆ ೫೦ ವರ್ಷಗಳೇ ಹಿಡಿದವು. 

ಸರ್ಬಿಯಾ ದೇಶದಲ್ಲಿ ಯುದ್ಧದ ಬಿಸಿ ಜೋರಾಗಿತ್ತು , ಆದರೆ ಯುವ ಹೃದಯಗಳು ಮಾತ್ರ ಇಹ ಪರಡಾ ದ ಪರಿವಿಲ್ಲದೆ  ಪ್ರೇಮದ ಗುಂಗಿನಲ್ಲಿ ಕಳೆದು ಹೋಗಿದ್ದವು ಅಂಥದೇ ಒಂದು ಜೋಡಿ ರೆಲ್ಯಾ ಎಂಬ ಸೈನಿಕ  ಮತ್ತು ನ್ಯಾಡಾ ಎಂಬ ಸುಂದರ ಸುಮನಸ್ಸಿನ ಹುಡುಗಿಯದು. ಇಬ್ಬರು ಮಾಡಿಕೊಳ್ಳದ ಆಣೆ ಪ್ರಮಾಣಗಳಿಲ್ಲ , ಕಾಣದ ಕನಸಿಲ್ಲ ದಿನಾಲು ಆ ಊರಿನಲ್ಲಿದ್ದ ಸೇತುವೆಯ ಬಳಿ ಭೆಟ್ಟಿ ಆಗಿ ತಮ್ಮ ಭಾವಿ ಜೀವನದ ಕನಸನ್ನು ಕಾಣುತ್ತಿದ್ದರು. ಅವರ ಪ್ರೇಮ ಸ್ವರಗಳು ರಾಗವಾಗಿ ಹೊಮ್ಮುವ ಮೊದಲೇ ರೇಲ್ಯಾ ನಿಗೆ ಸೈನ್ಯದ ಕರೆಬಂತು , ಯುದ್ಧಭೂಮಿಗೆ ಹೊರಡಲೇ ಬೇಕಾಯಿತು, ಈ ವಿಷಯ ಕೇಳಿ ತಪ್ತಳಾದ ನ್ಯಾಡಾ ಅವನನ್ನು ಯುದ್ಧಕ್ಕೆ ಹೋಗದಿರುವಂತೆ ವಿನಂತಿಸುತ್ತಾಳೆ , ಗೋಗರೆಯುತ್ತಾಳೆ ದುಃಖಿಸುತ್ತಾಳೆ, ತಾವು ಕಂಡ ಕನಸುಗಳೆಲ್ಲ ನನಸು ಮಾಡಲು ತಾನು ಯುದ್ಧದಿಂದ ಮರಳಿ ಬಂದು ಆಕೆಯೊಂದಿಗೆ ಬಾಳಿ ಬದುಕುವೆನೆಂದು ಭಾಷೆ ಕೊಟ್ಟ ರೇಲ್ಯಾ ಹೊರಟು  ಹೋಗುತ್ತಾನೆ. 

ಆತನ ಹಾದಿ ಕಾಯುತ್ತ ನ್ಯಾಡಾ ದಿನ ಆ ಸೇತುವೆ ಮೇಲೆ ಕುಳಿತು ತಾವು ಜೊತೆಯಾಗಿ ಕಳೆದ ಗಳಿಗೆಗಳನೆನೆದು ತಮ್ಮ ಮುಂದಿನ ದಿನಗಳ ಬಗ್ಗೆ ಕನಸ ಹೆಣೆಯುತ್ತಾ ದಿನ ದೂಡುತ್ತಾಳೆ, ಆದರೆ ರೆಲ್ಯಾ ಮಾತ್ರ ಮರಳುವುದಿಲ್ಲ , ಆಮೇಲೆ ಅವನ ಜೊತೆಗಾರರಿಂದ ರೇಲ್ಯಾ ಬೇರೆ ಒಂದು ಹುಡುಗಿಯನ್ನು ಮದುವೆಯಾಗಿ ಸಂಸಾರ ಹೂಡಿರುವುದು ನ್ಯಾಡಾ ಗೆ ತಿಳಿಯುತ್ತದೆ ಅದೇ ನೋವಿನಲ್ಲಿ ಆಕೆ ಕೊನೆಯುಸಿರೆಳೆಯುತ್ತಾಳೆ. ಊರಿನ ಎಲ್ಲ ಯುವತಿಯರು ಆ ಸಮಯದಲ್ಲಿ ನ್ಯಾಡಾ ಮತ್ತು ರೆಲ್ಯಾ ಭೇಟಿ ಆಗುತ್ತಿದ್ದ ಆ ಸೇತುವೆಗೆ , ಗೌರವ ಪೂರ್ವಕವಾಗಿ, ತಮ್ಮ ಪ್ರೇಮ ಬಾಂಧವ್ಯಗಳು ಸುಖಾಂತ್ಯ ಕಾಣುವಂತೆ ಪ್ರಾರ್ಥಿಸಿ , ಒಂದು ಬೀಗದ ಮೇಲೆ ಪ್ರೇಮಿಗಳ ಹೆಸರನ್ನು ಬರೆದು ಸೇತುವೆಗೆ ತೂಗಿಬಿಟ್ಟು ಬೀಗದ ಕೈಯ್ಯನ್ನು ನದಿನೀರಲ್ಲಿ ಎಸೆಯುವ ಸಂಪ್ರದಾಯ ಶುರು ಮಾಡಿದರು. ಆ ಸೇತುವೆಯನ್ನು ಪ್ರೇಮ ಸೇತುವೆ ''Bridge of hope'' ಎಂದು ಕರೆಯಲಾಯಿತು. 
 ಡೇಸಾಂಕ ಮಾಕ್ಸಿಮೋವಿಕ್ ಎಂಬ ಪ್ರಸಿದ್ಧ ಸರ್ಬಿಯನ್ ಕವಯಿತ್ರಿ  ''prayer of love'' ಎನ್ನುವ ತನ್ನ ಪದ್ಯದಲ್ಲಿ ಈ ಘಟನೆಯನ್ನು ವಿವರಿಸುವ ತನಕ ಬಹುಜನರಿಗೆ ಇದು ಅಜ್ಞಾತವಾಗಿಯೇ ಉಳಿದಿತ್ತು. ಆ ನಂತರ ಈ ರೂಡಿ ಯುರೋಪಿನಾದ್ಯಂತ ಹರಡುತ್ತಾ ಹೋಯಿತು, ಆದರೂ ಈ ರೂಡಿ ಹುಟ್ಟಿಕೊಂಡ ಮೂಲದ ಬಗ್ಗೆ ಹಲವು ಕಥೆಗಳಿವೆ.  ೫೦೦ ವರ್ಷದ ಹಿಂದಿನಕತೆಗಳನ್ನು ಕೂಡ ಉಲ್ಲೇಖಿಸುತ್ತಾರೆ.    ಕೆಲವೊಬ್ಬರು ಇದು ಯುರೋಪಿಗೆ ಪೌರಾತ್ಯ  ದೇಶಗಳಿಂದ ಬಂತು ಎಂತಲೂ ಹೇಳುತ್ತಾರೆ , ಮೂಲ ಏನೇ ಇರಲಿ ,ಆದರೆ ಈ ಪುಟ್ಟ ಬೀಗ ಮುದ್ರೆ ಸೇತುವೆಗೆ ಜೋತು ಬಿಡುವ, ಮೊದಲ ನೋಟಕ್ಕೆ ನಿರುಪದ್ರವಿ ಅನಿಸುವ ಈ ಸಂಪ್ರದಾಯ ಹಲವು ಸರಕಾರಗಳ, ಪಾಲಿಗೆ ದುಃಸ್ವಪ್ನ ವಾದದ್ದು ಮಾತ್ರ ಸತ್ಯ. 

ಇಟಲಿಯ ಫ್ಲಾರೆನ್ಸ್ ನಗರದಲ್ಲಿರುವ ೧೩೪೫ ರಲ್ಲಿ ಕಟ್ಟಲಾಗಿದೆ ಎನ್ನಲಾದ ponte veccio ಎಂಬ ಪ್ರಸಿದ್ಧ ಸೇತುವೆಗೆ ಪ್ರೇಮಿಗಳು ತೂಗಿ ಬಿಟ್ಟ ಬೀಗಗಳ ಸಂಖ್ಯೆ ಅದೆಷ್ಟಿತ್ತೆಂದರೆ ಆ ಭಾರಕ್ಕೆ ಸೇತುವೆ ಬಾಗಲು ಶುರುವಾಯಿತು, ನಂತರ ಸುಮಾರು ಐದುವರೆ ಸಾವಿರಗಳಷ್ಟು ಬೀಗಗಳನ್ನು ಸೇತುವೆಯಿಂದ  ತೆಗೆಸಲಾಯಿತು. ಐರ್ಲೆಂಡ್ ದೇಶದಲ್ಲಿರುವ ಡಬ್ಲಿನ್ ನಗರದ  ಹಾ'ಪೆನ್ನಿ ಸೇತುವೆಯ ಕತೆಯೂ ಹೀಗೆ , ೨೦೧೨ರಲ್ಲಿ ಈ ಬೀಗಗಳನ್ನು ನಗರ ಪಾಲಿಕೆಯವರು ತೆಗೆದು ಹಾಕಿದರು. 

ಎಲ್ಲಕ್ಕಿಂತ ಹೆಚ್ಚು ಬೀಗ ಬಿಗಿಸಿಕೊಂಡ ಸೇತುವೆ ಪ್ಯಾರಿಸ್ ನ The Pont des Arts ಎನ್ನುವ ಐತಿಹಾಸಿಕ , ವಿಶಿಷ್ಟ ವಿನ್ಯಾಸದ ಈ ಸೇತುವೆಗೆ ಪ್ರೇಮಿಗಳು ಜಡಿದದ್ದು  ಸುಮಾರು ೭೦,೦೦೦ ಬೀಗಗಳು. ಸೇತುವೆ ಈ ಭಾರ ಇನ್ನು ತಾಳದು ಎನಿಸಿದಾಗ ಅಲ್ಲಿನ ಸರಕಾರ ಅವನ್ನು ತೆಗೆಸುವ ಆದೇಶ ನೀಡಿತ್ತು. ೨೦೧೯ ರ ನಂತರ ಪ್ರೇಮಿಗಲು ಇಲ್ಲಿ ಬೀಗ ಮುದ್ರೆ ಹಾಕುವುದನ್ನು ಸರಕಾರ ನಿಷೇಧಿಸಿದೆ ಆದರೂ ನಿಮಗೆ ಅಲ್ಲಿ ಇಲ್ಲಿ ಪ್ರೇಮಿಗಳ ಹೆಸರಿನೊಂದಿಗೆ ಚಂದದ ಪ್ಯಾಡ್ ಲಾಕ್ ಗಳು ಕಾಣಸಿಗುತ್ತವೆ. 
ಈ ಸಮಸ್ಯೆಗೆ ಒಳ್ಳೆಯ ಪರಿಹಾರ ಕಂಡುಕೊಂಡಿದ್ದು ಮಾತ್ರ ಮಾಸ್ಕೋ ನಗರ, ಇಲ್ಲಿನ ಆಡಳಿತಮಂಡಳಿ ಸೇತುವೆಯ ಮುಂಭಾಗದಲ್ಲಿ ಕಬ್ಬಿಣದ ಮರದ ಆಕೃತಿಯನ್ನು ನಿಲ್ಲಿಸಿ ಅದಕ್ಕೆ ಬೀಗಗಳನ್ನು ಹಾಕಲು ವಿನಂತಿಸಿತ್ತು , ಈಗ ಅಂತಹ  ಮರಗಳ ಸಂಖ್ಯೆ ಹೆಚ್ಚಾಗಿದೆ. 

ಯಾರೋ ಶುರು ಮಾಡಿದ ಒಂದು ಆಚರಣೆಯನ್ನು ಅದರ ಹಿನ್ನೆಲೆಯೂ ಗೊತ್ತಿರದೆ ನಾವೂ ಪಾಲಿಸುತ್ತೇವೆ , ನಮಗೆ ಅದು ಟ್ರೆಂಡ್  ಆಗಿಯೂ ಮನ ಸೆಳೆದಿರಬಹುದು, ಅಥವಾ ಆಶಾವಾದ, ನಂಬಿಕೆ ಜೊತೆಗೆ ನಮ್ಮ ಪ್ರೀತಿಯು ಸದಾ ನಳ ನಳಿಸುತ್ತಿರಲಿ ಎಂಬ ಭಾವವೂ ಇರಬಹುದು. ಒಟ್ಟಿನಲ್ಲಿ ಪ್ರೀತಿ ಎಂಬ ಮಾಯೆಯನ್ನು ಪುಟ್ಟ ಬೀಗದಲ್ಲಿ ಬಂಧಿಸಿ ಕೀಲಿಕೈಯ್ಯನ್ನು ಚಲನಶೀಲ ನದಿಯ ಒಡಲಿಗೆ ಎಸೆದು ನಮ್ಮನು ಯಾರೂ ಅಗಲಿಸಲಾರರು ಎಂಬ ಮನದ ದನಿ ಒದಗಿಸುವ ಆ ನಿರಮ್ಮಳ ಭಾವವೇ ಇದರ ಒಳಗುಟ್ಟು. 

Monday, January 18, 2021

ನೂಲಿನ ತೇರು - ೨

 ಮಾತು ಮೌನದ ಸಂಕದ ಮೇಲೆ


ನೀವೇನು ಕೆಲಸ ಮಾಡೋದು ಅಲ್ಲಿ ? ಹೀಗೊಂದು ಪ್ರಶ್ನೆ ಅದೆಷ್ಟು ಜನ ಕೇಳಿದ್ದಾರೆ ಅಂತ ಲೆಕ್ಕ ಮಾಡಲು ಹೋಗಿಲ್ಲ , ಆದರೆ ಅವರು ಹಾಗೆ ಕೇಳಿದಾಗೆಲ್ಲ ನನಗೆ ನಾನೇ ಕೇಳಿಕೊಳ್ಳುತ್ತೇನೆ , ಹೌದು ''ನೀ ಏನು ಕೆಲಸ ಮಾಡುತ್ತಿ  ಅಮಿತಾ ?'' ವೃತ್ತಿ ಪ್ರವೃತ್ತಿ ಎರಡು ಒಂದೇ ಆಗಿರುವ ಒಂದಷ್ಟು ನಶೀಬ್ವಾನ್ ಜನರಲ್ಲಿ ನಾನು ಒಬ್ಬಳು ಅಂತ ನನಗೆ ನಾನು ಹೇಳಿಕೊಳ್ತೇನೆ. 


ಮೊದಲೆಲ್ಲ ಸಂಗೀತ ಕಲಾವಿದೆ ಅಂತ ಪರಿಚಯಿಸಿಕೊಳ್ಳುತ್ತಿದ್ದ  ನನ್ನನ್ನ ಕಲ್ಚರಲ್ ಫೆಸಿಲಿಟೇಟರ್ /ಕಲ್ಚರಲ್ ಅಂಬಾಸಿಡರ್ ಮಾಡಿದ್ದೂ ಈ ನಾರ್ದರ್ನ್ ಐರ್ಲೆಂಡ್ ಎಂಬ ದೇಶ. ನಾನು ಹವ್ಯಾಸ ಎಂದು ಕಲಿತ ಮದರಂಗಿ, ರಂಗೋಲಿ , ಸಾಂಜಿ  , ವರ್ಲಿ , ಹಸೆ , ಮಂಡಲ, ಭಾರತೀಯ ಸಾಂಪ್ರದಾಯಿಕ ಅಡುಗೆ ಹೀಗೆ ಎಲ್ಲವನ್ನು ಪ್ರೀತಿಯಿಂದ ನಾನು ಇಲ್ಲಿ ಜನರಿಗೆ ಅವಕಾಶ ಸಿಕ್ಕಾಗಲೆಲ್ಲ ಹೇಳಿ ಕೊಟ್ಟಿದ್ದೇನೆ , ಅವರು ಅಷ್ಟೇ ಆದರದಿಂದ ಅಕ್ಕರೆಯಿಂದ ಅಂಥ ಅವಕಾಶಗಳನ್ನ ಪದೇ ಪದೇ ಕೊಟ್ಟು ನನ್ನ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. 


ಇದೊಂದು ಕಾರಣದಿಂದಲೇ ನಾನು ಈ ಪುಟ್ಟ ದೇಶದ ಮೂಲೆ ಮೂಲೆ ಸುತ್ತಿದ್ದೇನೆ ಈ ಸುತ್ತಾಟಗಳು ಅದೆಷ್ಟು ದೇಶ, ಭಾಷೆಯವರೊಂದಿಗೆ ಬೆರೆಯುವ , ಅಪರೂಪದ ಅನುಭವಗಳನ್ನ ಒದಗಿಸಿ, ಬದುಕಿನ ಬಗೆಗೆ ಭಿನ್ನ ದೃಷ್ಟಿಕೋನ ಬೆಳೆಸಿಕೊಳ್ಳುವಲ್ಲಿ ಸಹಾಯ ಮಾಡಿವೆ. 


ಭಾರತೀಯ ಸಂಸ್ಕೃತಿಯ ಬಗ್ಗೆ ಒಲವು ಹೆಮ್ಮೆ ತುಸು ಹೆಚ್ಚೆ ಇರುವ ನನಗೆ, ಇತರ ಸಂಸ್ಕೃತಿಗಳ ಬಗ್ಗೆಯೂ ಕುತೂಹಲ ,ಗೌರವ ಮೂಡಿಸುವಲ್ಲಿ ಈ ಕೆಲಸ ಸಹಾಯ ಮಾಡಿದ್ದಲ್ಲದೆ, ಕೆಲವೊಮ್ಮೆ ಮನಸಿನ್ನ ಸೂಕ್ಷ್ಮ ಭಾವಗಳನ್ನು ಕೆದಕಿ ಹಾಕಿದೆ, ಹೀಗ್ಯಾಕೆ ? ಅನ್ನುವ ಪ್ರಶ್ನೆಯನ್ನ ಪದೇ ಪದೇ ಕೇಳಿಕೊಳ್ಳುವಂತೆ ಮಾಡಿದೆ. 



ಅಂಥದ್ದೇ ಒಂದು ದಿನ,  ಮದರಂಗಿಯ ಕುರಿತು ಇದ್ದ workshop ನಲ್ಲಿ,  ಮೆಹಂದಿಯ ಇತಿಹಾಸ , ಅದರ ಔಷದೀಯ ಉಪಯೋಗ , ಅದು ಜನಪ್ರಿಯತೆ  ಪಡೆದ ಬಗೆ  ಹೀಗೆ ಎಲ್ಲವನ್ನ ವಿವರಿಸಿ , ಅಜ್ಜಿ ಮನೆಯಿಂದ ತಂದು ಲ್ಯಾಮಿನೇಟ್ ಮಾಡಿ ಇಟ್ಟುಕೊಂಡ ಒಂದಷ್ಟು ಮದರಂಗಿ ಎಲೆಗಳು , ಪುಡಿ , ಎಲ್ಲ ತೋರಿಸಿ , ಕೊನೆಯಲ್ಲಿ ಭಾಗವಹಿಸಿದ, ಜೊತೆಗೆ ಬಂದ ಎಲ್ಲರಿಗೂ ಮದರಂಗಿ ಹಾಕುವ ಕ್ರಮ.

ಕಾರ್ಯಾಗಾರದಲ್ಲಿ ಇದ್ದ ಇಪ್ಪತ್ತು ಜನ ಮೆಹಂದಿ ಹಾಕುವ ಸಮಯ ಬಂದಾಗ ಎಪ್ಪತ್ತು -ನೂರು ಆಗುವುದು ಹೇಗೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. 


 ಎಂದಿನಂತೆ ಸರತಿಯಲ್ಲಿ ನಿಂತ ಮಕ್ಕಳಿಗೆ ಪುಟ್ಟದೊಂದು ಚಿತ್ತಾರ ಬಿಡಿಸಿ ಕಳಿಸುತ್ತಿದ್ದೆ , ಏನು ಚಿತ್ರ ಬೇಕು ಅಂದಾಗ ಅವು ತಮ್ಮ ಮನೀಷೆಯನ್ನು ಹೊರ ಹಾಕುತ್ತವೆ , ಡ್ರಾಗನ್ ,ವೂಲ್ಫ್ ,ನಾಯಿ ,ಹಲ್ಲಿ  ಮೊಸಳೆ ..ಹೀಗೆ ಏನೇನೋ ,ಒಂದಷ್ಟು ಹೆಸರು ಬರೆಸಿಕೊಳ್ಳುತ್ತವೆ,  ಫುಟ್ಬಾಲ್ ತಂಡದ ಹೆಸರು , ಮೊದಲ ಪ್ರೇಮದಲ್ಲಿ ಬಿದ್ದ ಕೆಲ ಹುಡುಗರು ಚಿಕ್ಕದಾಗಿ ಹುಡುಗಿಯ ಹೆಸರಿನ ಮೊದಲಕ್ಷರ ಬಿಡಿಸಿಕೊಂಡು ಮುಖದ ತುಂಬಾ ಸಾರ್ಥಕ್ಯ ಹೊತ್ತು ಹೋಗುತ್ತವೆ , ಕೆಲವೊಂದಷ್ಟು ಬರಿ ವೈನ್ ಗ್ಲಾಸ್ , ಸಿಗರೇಟ್ ತಲೆಬುರುಡೆ ಚಿತ್ರ ಬಿಡಿಸು ಅಂದಾಗ ಬುರುಡೆಗೆ ಒಂದು ಮೊಟಕೋಣ ಅನಿಸೋದು ಸುಳ್ಳಲ್ಲ ಅದೇನೇನೋ ಪ್ರಶ್ನೆಗಳು, ಕೊಟ್ಟ ಉತ್ತರಕ್ಕೆ ಹುಟ್ಟುವ ಮತ್ತಷ್ಟು ಮಾತುಗಳು , ಬಹಳಷ್ಟು ಸಲ ನಾನು ತಲೆ ಎತ್ತುವಮೊದಲೇ ಇನ್ನೊಂದು ಕೈ ನನ್ನ ಮುಂದೆ ಸಿದ್ಧವಾಗಿರುತ್ತದೆ, ಮತ್ತವರ ಪ್ರಶ್ನೆಗಳು.


 ಹೀಗೆ ನಡೆಯುತ್ತಿರುವಾಗ  ಅದರಲ್ಲೊಬ್ಬ ಪುಟ್ಟ ಹುಡುಗ ಬಂದು ನನ್ನೆದುರಿಗೆ ಕುಳಿತುಕೊಂಡ, ಯಾವುದೇ ಮಾತು ಅವನಿಂದ ಬಾರದಿದ್ದಾಗ ,  ನಾನೇ ಮುಖವೆತ್ತಿ  ಏನು ಬಿಡಿಸಲಿ?ಎಂದು ಕೇಳಿದೆ   ..ಕೈಗಳ ಮೇಲೆ ರಂಗೋಲಿ ಚಿಕ್ಕಿ ಇಟ್ಟಂತೆ  ಮಾಡಿ ತೋರಿಸಿದ ,ಸ್ಟಾರ್ ಬಿಡಿಸಲ ಅಂತಾ ಕೇಳಿದ ಮೇಲೂ   ಆತನ ವರ್ತನೆಯಲ್ಲಿ ಏನು ಭಿನ್ನತೆ ಕಾಣಲಿಲ್ಲ. ಸುಮಾರು ಸರಿ ಕೇಳಿದ ಮೇಲೆ ನನ್ನ ಕಣ್ಣು ಗಳಲ್ಲಿ ಏನೋ ಹುಡುಕಿದಂತೆ ಅವುಗಳನ್ನೇ ನೋಡುತ್ತಿದ್ದ ,''ನನ್ನ ಮನಸ್ಸಿಗೆ ಬಂದಿದ್ದು ಬಿಡಿಸಲ ? ಅಂದೆ, ಉತ್ತರಿಸದೆ ಮತ್ತೆ ಕೈ ಮೇಲೆ ಚಿಕ್ಕಿ ಹಾಕುತ್ತಿದ್ದ ಅವನ ಕೈ ಮೇಲೆ ಮೂರು ನಕ್ಷತ್ರಗಳನ್ನು ಬಿಡಿಸಿ ಮುಗೀತು ಅನ್ನುವಂತೆ ನೋಡಿದೆ, ಚಿತ್ರ ಬಿಡಿಸಿಕೊಂಡ ಮಕ್ಕಳು ಖುಷಿಯಿಂದ Thankyou , you are the best lady in the world" ಅನ್ನುವ ಕಾಮನ್ ಡೈಲಾಗ್ ಕೇಳಲಿಕ್ಕೆ ಖುಷಿ ಆಗುತ್ತದೆ ಜೊತೆಗೆ  ಮದರಂಗಿ ಹಾಕಿಕೊಂಡ ಕೈಯ್ಯನ್ನ ಕಾಳಜಿಯಿಂದ ಎತ್ತಿಕೊಂಡು ಮತ್ತೆ ಮತ್ತೆ ಚಿತ್ತಾರ ನೋಡಿಕೊಳ್ಳುವುದನ್ನ ನೋಡಿದರೆ ನಗುವೂ ಬರುತ್ತದೆ.


 ಆದರೆ ಈ ಮಗು ಹಾಗೇನು ಹೇಳದೆ ಬರೀ ಖುಷಿ ಹೊತ್ತ ಕಣ್ಣುಗಳಿಂದ ನನ್ನ ನೋಡುತ್ತಿತ್ತು , ಅಷ್ಟರಲ್ಲಿ ಹಿಂದಿನಿಂದ ಬಂದ ಅವರಪ್ಪ'' ಥಾಂಕ್ ಯು ಹೇಳು '' ಅಂದ. ಮಗು ನಿಷ್ಕಲ್ಮಶ ನಗುವಿನೊಂದಿಗೆ ಖುಷಿ ತುಂಬಿಕೊಂಡ ಕಣ್ಣುಗಳನ್ನ ಅರಳಿಸುತ್ತ  ಥಾಂಕ್ ಯು ಹೇಳಿತು ಆದರೆ , ಅಲ್ಲಿ ಶಬ್ದಗಳೇ ಇರಲಿಲ್ಲ ,ಸನ್ನೆಯಷ್ಟೇ! ಆ ಕಾರ್ಯಕ್ರಮ ಮುಗಿಸಿ ಮನೆಗೆ ಬಂದಮೇಲೂ ನನಗೆ ಆ ಮಗುವಿನ ಖುಷಿ ತುಂಬಿದ ನೀಲಿ ಕಣ್ಣುಗಳು , ಮತ್ತು ಆ ಸನ್ನೆ ಪದೇ ಪದೇ ನೆನಪಾಗುತ್ತಿತ್ತು. 


 ಆ ಮಗುವಿಗೆ ಮಾತಾಡಲು ಬರುವುದಿಲ್ಲವ? ಅದೊಂದು ಭಾವವೇ ನನ್ನ ಪೂರ್ತಿ ಹಿಂಡಿ ಹಾಕಿತು , ಕಣ್ಣು  ತುಂಬಿ ಕೊಂಡವು , ಮತ್ತೆ ಆ ಮಗುವಿನ ಥಾಂಕ್ ಯು ಸಂಜ್ಞೆ ನೆನಪಾಗಿ ಏನೋ ಯಾತನೆ. ಹಾಗಂತ ಆ ಮಗು ನಾನು ನೋಡಿದ ಮೊದಲ ಮಾತುಬಾರದ ವ್ಯಕ್ತಿಯಲ್ಲ , ಆದರೆ ಅವ ನೆನಪಿಸಿದ್ದು ಮಾತ್ರ ಹಲವರನ್ನ , ಬಾಲ್ಯದಿಂದ ನಾ ಇಲ್ಲಿಗೆ ಬರುವ ತನಕ ನಾ ನೋಡಿದ ಎಲ್ಲ ಮಾತು ಬರದವರನ್ನ , ಕಣ್ಣಲ್ಲಿ ಸದಾ ಆಶಾವಾದ ಸೂಸುವವರನ್ನ ,   ಅವರೊಂದಿಗೆ ಬೆಸೆದುಕೊಂಡ ನನ್ನ ನೆನಪುಗಳನ್ನು.


 ನನ್ನ ಅಜ್ಜಿ ಮನೆಯ ಹತ್ತಿರದಲ್ಲಿದ್ದ ಗೀತ (ಮೂಕಿ ಅಂತಾನೆ ಅವಳ ನಿಕ್ ನೇಮ್), ಶಿರಸಿಯ ನೀಲೆಕಣಿ ಆಟೋ ಗ್ಯಾರೇಜನವರ  ಮಗಳು ವಿಭಾ , ನನ್ನ ತವರು ಮುಂಡಗೋಡಿನ ಆ ಬಿಳಿ ಧಿರಿಸು ,ಟೋಪಿ ತೊಟ್ಟುಕೊಂಡು, ಮಕ್ಕಳನ್ನ ಕಂಡರೆ ಉರಿದು ಬೀಳುತ್ತಿದ್ದ ಮತ್ತು ನಾನು ಹಾಡುತ್ತೇನೆ ಅನ್ನೋ ಒಂದೇ ಕಾರಣಕ್ಕೆ ನನ್ನತ್ತ ಒಂದು ವಿಶೇಷ ಕಳಕಳಿ ತೋರುತ್ತಿದ್ದ ಆದರೆ ನನ್ನ ಹಾಡನ್ನ ಒಮ್ಮೆಯೂ ಕೇಳದ ಆ ಮೂಗಪ್ಪ .  

ಬೆಳಗಾವಿಯ ಮಾರುತಿಗಲ್ಲಿಯ ಹನುಮಪ್ಪನ ಗುಡಿಯೊಳಗೆ ಶನಿವಾರಕ್ಕೊಮ್ಮೆ ಸೇರಿ ಮೀಟಿಂಗ್ ನಡೆಸುತ್ತ  ಮೌನದಲ್ಲೇ  ಗಂಭೀರ ಮಾತುಕತೆ ನಡೆಸುತ್ತ ತಮ್ಮ ಲೋಕದಲ್ಲಿ ಕಳೆದು ಹೋಗಿ..ನಮ್ಮಂಥವರಿಗೆ ಸೋಜಿಗವಾಗುತ್ತಿದ್ದ ಆ ಮೂಕರ ಗುಂಪು. ಮನಸ ಕಪಾಟಿನ ತಳದ ಅರಿಯಲ್ಲಿ ಬೆಚ್ಚಗೆ ಸೇರಿಕೊಂಡಿರುವ ಬರ್ಫಿ, ಖಾಮೋಶಿಯಂಥ  ಸಿನಿಮಾ ಪಾತ್ರಗಳು , ಯಾಕೋ ಇವೆಲ್ಲ ನೆನಪಾಗಿ ಮತ್ತೆ ಮತ್ತೆ ಕಣ್ಣು ತೇವತೇವ.


ಇದು ಕನಿಕರ ಅಥವಾ ಅನುಕಂಪ ಅಲ್ಲವೇ ಅಲ್ಲ! ಯಾಕೋ ಅನಿಸೋಕೆ ಶುರು ಆಗಿದೆ '' ನಾವ್ಯಾಕೆ  ಇಷ್ಟು ಮಾತಾಡ್ತೀವಿ .ಎಲ್ಲದ್ದಕ್ಕೂ ನನ್ನ ಅಭಿಪ್ರಾಯ ಕೊಡಲೇಬೇಕು ಅನ್ನುವ ಹಠ ಮಾಡುವ ಮನಸು, ಮಾತಾಡಲೇಬೇಕಾದ ಅನಿವಾರ್ಯತೆ ಇದ್ದಾಗ, ಯಾರೋ ನಾವಾಡುವ ಒಂದು ಒಳ್ಳೆ  ಮಾತಿಗೆ ಕಾಯುತ್ತಿರುವಾಗ, ಬೇಕಂತಲೇ ವಹಿಸುವ ಜಾಣ ಮೌನ ,  ನಾವ್ಯಾಕೆ ಇಷ್ಟು ಮಾತಾಡುತ್ತೇವೆ ಅವರ್ಯಾಕೆ ಅಷ್ಟು ಮೌನ???? ಮೌನದಲ್ಲೂ ಮಾತಾಡುವ ಅವರು  ಮಾತು ಮಾತಿನಲ್ಲೂ ಊನ ಹುಡುಕುವ ನಾವು.

(ಉದಯವಾಣಿ , ವಿಶೇಷ ಪುರವಣಿ ದೇಸಿಸ್ವರದಲ್ಲಿ ನೂಲಿನ ತೇರು ಎಂಬ ಅಂಕಣ ದಲ್ಲಿ ಪ್ರಕಟಿತ)

ನೂಲಿನ ತೇರು - ೧



ನಾನು ಇದ್ದದ್ದೇ ಹಾಗೆ ವೈದೇಹಿಯವರ ಕವನದ "ಅಡುಗೆ ಮನೆ ಹುಡುಗಿಯಂತೆ" , ನನ್ನ ಊರಿನಲ್ಲಿ ಅಪರೂಪಕ್ಕೆ ಆಕಾಶದಲ್ಲಿ ವಿಮಾನದ ಸದ್ದು  ಮೋಡದೊಳಗಿಂದ ಕೇಳಿಸಿದರೆ ಸಾಕು ಅದನ್ನು ನೋಡಲು ಅಂಗಳಕ್ಕೆ ಓಡಿಬಂದು ಅದಕ್ಕೆ ಕೈಬೀಸಿ ಅದು ಮರೆಯಾಗುವವರೆಗೂ ಕಣ್ಣು ತುಟಿ ಅರಳಿಸಿ ಬಾನಿಗೆ ಮೊಗಮಾಡಿ ನಿಲ್ಲುವ ಖುಷಿ,  ಮೊದಲ ಬಾರಿ ವಿಮಾನ ಹತ್ತಿ ಈ ದೇಶಕ್ಕೆ ಬರುವಾಗ ಇರಲೇ ಇಲ್ಲ ಎಂದರೆ ನೀವು ನಂಬಲೇ ಬೇಕು. 


ನೆಲದ ಪ್ರೀತಿ ಹಚ್ಚಿಕೊಂಡ ನನ್ನಂಥ ಅದೆಷ್ಟೋ ಅನಿವಾಸಿ ಭಾರತೀಯರು ಪ್ರತಿಬಾರಿ ಭಾರತಕ್ಕೆ ಬಂದು ಮರಳುವಾಗ ವರುಷಕ್ಕಾಗುವಷ್ಟು ಭಾವತಂತುಗಳನ್ನ ಹೊತ್ತು ತರುತ್ತಾರೆ , ನಾನು ನನ್ನ ಸ್ನೇಹಿತೆಯರು ಸೇರಿ ಇದಕ್ಕೆ 'ಇಂಧನ/fuel" ಎಂದು ಕರೆಯುವುದುಂಟು. ಯಾಕೆಂದರೆ ಇಲ್ಲಿ,  ನಮ್ಮದಲ್ಲದ ನೆಲದಲ್ಲಿ ಬದುಕಬಂಡಿ ನಡೆಸಲು ಈ ಇಂಧನ ವೇ ಜೀವಾಳ.


ಆದರೂ ಒಮ್ಮೊಮ್ಮೆ ತಾಯಿನಾಡು ಅದೆಷ್ಟು ನೆನಪಾಗುತ್ತದೆಂದರೆ ಮನಸು ಪುಟ್ಟ ಮಗುವಿನಂತಾಗಿ ಅಮ್ಮನ ಮಡಿಲನ್ನು ಬಯಸುತ್ತದೆ. ಇಲ್ಲಿ ಇರುವ ಎಷ್ಟೋ ಅಪರಿಚಿತ ಮುಖಗಳಲ್ಲಿ , ನಮ್ಮ ಆಪ್ತರ , ಮನಸಿಗೆ ಹತ್ತಿರದವರ ಛಾಯೆ ಅರಸುತ್ತದೆ, ಕೆಲವೊಮ್ಮೆ ಅಂಥ ಚಿಕ್ಕ ಖುಷಿ ದಕ್ಕಿಯೂ ಬಿಡುತ್ತದೆ.


ಬೆಲ್ಫಾಸ್ಟ್ ಅನ್ನುವ ಈ ಪುಟ್ಟ, ಸುಂದರ ನಗರಿಯಲ್ಲಿ ನನಗೆ ನನ್ನೂರಿನ ಯಾರನ್ನೋ ನೆನಪಿಸುವ ಹಲವಾರು ಮುಖ ಮನಸುಗಳಿವೆ, ಅಂಥವರಲ್ಲಿ ಒಬ್ಬ ಈ ಯೊಹಾನ್ , 


ಯುರೋಪಿಯನ್ ದೇಶಗಳಲ್ಲಿ ರಸ್ತೆಗಳ ಅಕ್ಕ ಪಕ್ಕ ಹಾಡು ಹೇಳುತ್ತಾ , ಗಿಟಾರ್ ನುಡಿಸುತ್ತ ,ಕಲಾಪ್ರದರ್ಶನ ಮಾಡುತ್ತಾ  ಕೆಲವರು ನಿಂತಿರುತ್ತಾರೆ ಇಂಥವರನ್ನ ''ಬಸ್ಕರ್'' ಎಂದು ಕರೆಯುತ್ತಾರೆ, ಇವರು ಹಾಡುವುದನ್ನ ನಿಂತು ಕೇಳಿ ಚಪ್ಪಾಳೆ ತಟ್ಟಿ  ಹಣ ಕೊಡುವ ಮಂದಿಯೂ ಇದ್ದಾರೆ, 


 ಒಮ್ಮೆ ಇರುವ ಕಲಾವಿದ ಮತ್ತೊಮ್ಮೆ ಅದೇ ಜಾಗೆಯಲ್ಲಿ ನಿಮಗೆ ಕಾಣ ಸಿಗುವುದಿಲ್ಲ, ಹಣ ಬಯಸುತ್ತಾರಾದರೂ ಇವರು ಭಿಕ್ಷುಕರಲ್ಲ, ಭಿಕ್ಷೆ ಬೇಡುವುದು ಇಲ್ಲಿ ಅಪರಾಧ ಆದರೆ "ಬಸ್ಕಿಂಗ್" ಮಾನ್ಯ! ಹದಿಹರೆಯದ ಮಕ್ಕಳಿಂದ  ಹಿಡಿದು  ಇಳಿವಯಸ್ಸಿನವರೂ ಬಸ್ಕಿಂಗ್  ಮಾಡುವುದು ಇಲ್ಲಿ ಸರ್ವೇ ಸಾಮಾನ್ಯ , ಕ್ರಿಸ್ಮಸ್ , ಈಸ್ಟರ್ , ಬೇಸಿಗೆ ರಜಗಳಲ್ಲಿ ಇದು ಇನ್ನೂ ಜಾಸ್ತಿ. ಸಂಗೀತಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಇದು ಒಳ್ಳೆ ವೇದಿಕೆಯನ್ನೂ ಕಲ್ಪಿಸಿಕೊಡುತ್ತದೆ.


 ಆಗ ನಾನು ಬೆಲ್ಫಾಸ್ಟ್ ಗೆ ಬಂದ  ಹೊಸತು ನನಗೆ ಈ ಬಸ್ಕಿಂಗ್ ಮಾಡುವವರನ್ನ ನೋಡುವುದೆಂದರೆ ಅತೀ ಖುಷಿಯ ಸಂಗತಿಯಾಗಿತ್ತು, ಆ ದಿನ ಮಗುವನ್ನು ಶಾಲೆಗೆ ಬಿಟ್ಟು ಅಂಗಡಿಗೆ ಏನೋ ತರಲು ಹೋದವಳಿಗೆ ಕಣ್ಣಿಗೆ ಬಿದ್ದವನೇ ಈ ಯೊಹಾನ್ , ಕೈಯ್ಯಲ್ಲಿ ಅದೆಂಥದೋ ವಿಚಿತ್ರ ಇನ್ಸ್ಟ್ರುಮೆಂಟ್ ಹಿಡಿದು ಕೊಂಡು ಒಂದೇ ಸಮ ಅದೇನೋ ಟ್ಯೂನ್ ನುಡಿಸುತ್ತಿದ್ದ , 


ನನ್ನ ಅಜ್ಜನ ವಯಸ್ಸಿರಬಹುದು , ಎದುರಿಗೊಂದು ಗೊಂಬೆ ಮತ್ತು ಚಿಕ್ಕ ಪ್ಲಾಸ್ಟಿಕ್ ಬುಟ್ಟಿ ಇಟ್ಟುಕೊಂಡು ಹೋಗು ಬರುವವರಿಗೆಲ್ಲ  ಚಂದದ ನಗು ಒಂದನ್ನ ಕೊಡುತ್ತಿದ್ದ , ಅವನ ಆ ಬುಟ್ಟಿಗೆ ನಾಣ್ಯ ಎಸೆದವರಿಗೆ hornviolin ನಾದ ಹೊಮ್ಮಿಸುತ್ತಲೇ ತಲೆಬಾಗಿ ಗೌರವ ಸಲ್ಲಿಸುತ್ತಿದ್ದ , ಅದ್ಯಾಕೋ ಯೋಹಾನ್ ನಗು ನನಗೆ ತುಂಬಾ ಹಿತವೆನಿಸಿತು , ತುಂಬು ನಗು, ನಿಷ್ಕಲ್ಮಶ ನಗು, 

ಆ ದಿನದಿಂದ ನಾನು ಸಿಟಿ ಸೆಂಟರ್  ಹೋದಾಗಲೆಲ್ಲ, ಯೊಹಾನ್ ಇದ್ದಲ್ಲಿ ಹೋಗಿ ಅವನ ನಗುಮುಖ ನೋಡಿ ಅವನು  ಆ "ವಾಯಲಿನಪಿಟ್" (ವಾಯಲೀನ್+ಟ್ರಂಪೆಟ್) ಲ್ಲಿ ನುಡಿಸುವ ರಷ್ಯನ್ ಹೇಂಗೇರಿಯನ್ ಜನಪದ ಸಂಗೀತದ ತುಣುಕು ಕೇಳಿ ಬಂದರೆ ಅದೇನೋ ಹಿತ , ಕೋಟ್ ಕಿಸೆಯಲಿ ಸಂಗ್ರಹವಾದ ಪೆನ್ನಿಗಳನ್ನು ಅವನ ಬುಟ್ಟಿಗೆ ಹಾಕಿ ಅವನಿಂದ ಆ ಮುಗುಳ್ನಗೆ ಪಡೆಯುವುದೆಂದರೆ ನನಗೆ ಅತೀ ಇಷ್ಟದ ಕೆಲಸವಾಗಿಬಿಟ್ಟಿದೆ. 


ಯೊಹಾನ್ ಕಳೆದ ೮ ವರ್ಷಗಳಿಂದ ಒಂದೇ ಜಾಗೆಯಲ್ಲಿ ನಿಂತು ಬಸ್ಕಿಂಗ್ ಮಾಡುತ್ತಿದ್ದಾನೆ , ತನ್ನನು ಅಂತಾರಾಷ್ಟ್ರೀಯ ಸಂಗೀತ ಕಲಾವಿದ ಎಂದು ಕರೆದುಕೊಳ್ಳುವ ಇವನು  ಅದಕ್ಕೆ ಹೇಳುವ ಕಥೆಯೂ ಸ್ವಾರಸ್ಯಕರ,  ನಾನು ಮೂಲತಃ ರುಮೇನಿಯಾದವನು ಇಲ್ಲಿಗೆ ಬರುವ ಮೊದಲು ಯುಗೋಸ್ಲಾವಾಕಿಯ , ಹಂಗೇರಿ , ರಷ್ಯಾ ಗಳಲ್ಲಿ ಹೀಗೆ ಕಳೆದ ೩೦ ವರುಷಗಳಿಂದ ನಾನೇ ಸೃಷ್ಟಿಸಿದ ಈ ವಾದ್ಯ ನುಡಿಸಿದ್ದೇನೆ , ಜನರನ್ನ ರಂಜಿಸಿದ್ದೇನೆ, ಅದಕ್ಕೆ ನಾನು ವಿಶ್ವಕಲಾವಿದ ಎಂದು ತನ್ನ ಆ ನಗುವಿನಿಂದ ಎದುರಿನವರ ಮುಖದಲ್ಲೂ ನಗು ಹೊಮ್ಮಿಸುತ್ತಾನೆ . 

  

  ಬೆಳಿಗ್ಗೆ ಒಂಬತ್ತಕ್ಕೆ ಬಂದು ತನ್ನ ಕೆಲಸ ಶುರು ಮಾಡಿ ಸಂಜೆ ಆರಕ್ಕೆ ಮನೆಗೆ ಮರಳುತ್ತಾನೆ , ಇತ್ತೀಚಿಗೆ ಜನ ಸಾಮಾನ್ಯರೇ ಅವನನ್ನ '' Belfast music icon'' ಎಂದು ಕರೆಯುವದನ್ನ ನೋಡಿದರೆ ಅವನು ಅದೆಷ್ಟು ಜನರ ಪ್ರೀತಿ ಪಡೆದಿದ್ದಾನೆ ಎಂಬುದನ್ನ ವಿವರಿಸಿ ಹೇಳಬೇಕಿಲ್ಲ. ಒಂದು ದಿನ ಅವ ಆ ಜಾಗೆಯಲ್ಲಿ ಇಲ್ಲ ಎಂದರೆ ಮನಸಿಗೆ ಕಸಿವಿಸಿ ಆಗುವುದು ಸುಳ್ಳಲ್ಲ.


ಅವನನ್ನು ನೋಡಿದಾಗಲೆಲ್ಲ ನನಗೆ ನೆನಪಾಗುವುದು ಧಾರವಾಡ ದ ಗಜಾನನ ಮಹಾಲೆ (ಮಹಾಲೆ ಮಾಮ್) ಅವರ ನಗುವು ಹೀಗೆ ಇತ್ತು , ನನ್ನಂಥ ಅದೆಷ್ಟು ಚಿಕ್ಕ ಪುಟ್ಟ ಕಲಾವಿದರಿಗೆ ಸಹಾಯ ಮಾಡಿಲ್ಲ ಅವರು,  ಹಾರ್ಮೋನಿಯಂ ಸಾಥಿಗೆ ಬಂದರೂ ಒಮ್ಮೆಯೂ ಸಂಭಾವನೆ ಸ್ವೀಕರಿಸಿದವರಲ್ಲ , ''ಮುಂದ ನೀ ದೊಡ್ಡ ಹೆಸರು ಮಾಡ್ತಿಯಲ್ಲ ಆವಾಗ ಕೊಡು ಈಗ ಬ್ಯಾಡ '' ಅಂತ ಹೇಳಿ ತಲೆ ನೇವರಿಸಿ ಆಶೀರ್ವಾದ ಮಾಡುತ್ತಿದ್ದರು. ಗಾಯನದಲ್ಲಿ ತಪ್ಪುಗಳಾದರೆ ಕಾರ್ಯಕ್ರಮದ ನಂತರ ಬಂದು ಮೆತ್ತಗಿನ ಧ್ವನಿಯಲ್ಲಿ ಅದನ್ನು ತಿದ್ದಿ ಹೇಳಿಕೊಡುತ್ತಿದ್ದರು. ಎದುರು ಬದುರು ಸಿಕ್ಕಾಗ "ಆರಾಮ್ ಅದೀರಲ್ಲ" ಎಂದು ಮೆತ್ತಗೆ ಕೇಳಿ.. "ಆರಂ ಇರ್ರಿ" ಅನ್ನುವಾಗಿನ ಆ ಮಂದಸ್ಮಿತ ಇನ್ನೂ ಕಣ್ಣ ಮುಂದೇ ಇದೆ. 


ಯೊಹಾನ್ ಬೆಲ್ಫಾಸ್ಟ್ ಎಂದು ಹುಡುಕಿದರೆ ಅವನ ಹೆಸರಿನಲ್ಲಿ ಗೂಗಲ್ ಪೇಜ್ ತೆರೆದುಕೊಳ್ಳುತ್ತದೆ ,  ಮಹಾಲೆ ಮಾಮ ನನ್ನ ಮನಸಿನ ಪುಟಗಳಲ್ಲಿ....

ಬಂಗಾರದೆಲೆಯ ಸಿಂಗಾರ ನಮ್ಮ ಭೂಮಿತಾಯಿಗೆ

 ಶರದೃತುವಿನಾಕಾಶ ಬೆಳದಿಂಗಳಾ ಲಾಸ್ಯ 

ಮಂದಾಮಿಲನ ಹಾಸ ನೋಡೇ ಸಖಿ  ನೀ….


ಈ ಹಾಡನ್ನು ನಾನೇ ಅದೆಷ್ಟು ಬಾರಿ ಹಾಡಿಲ್ಲ ಆದರೆ ಶರದೃತು ಎಂದರೆ, ಚಳಿಗಾಲದ ಆರಂಭ ,ನವರಾತ್ರಿ , ಮೆತ್ತಗೆ ಒಡೆಯಲು  ಶುರುವಾಗುವ ಚರ್ಮ ಹಿಮ್ಮಡಿ , ಹಾಸಿಗೆ ಹೊದಿಕೆಗಳಿಗೆ ವ್ಯಾಸಲೀನ್, ಬೊರೋಲೀನ್ ಗಳ ಕಮಟು, ಇಷ್ಟು ಬಿಟ್ಟು ಬೇರಾವ ಭಾವ ನನ್ನ ಮನದಲ್ಲಿ ಸುಳಿಯುತ್ತಿರಲಿಲ್ಲ. 


ನಾನು ನಾರ್ದರ್ನ್ ಐರ್ಲೆಂಡ ಗೆ ಬಂದಿದ್ದು ಅಕ್ಟೋಬರ್ ತಿಂಗಳ ಕೊನೆಯದಿನ,  ಮೊದಲ ಮುಂಜಾವು ಕಿಟಕಿ ಪರದೆ ಸರಿಸಿ ನೋಡಿದರೆ ಎಲ್ಲ ಮರಗಳು ಅರಿಶಿನ ಕುಂಕುಮ ಹಿಡಿದು, "ಸ್ವಾಗತ ನಿನಗೆ ನಮ್ಮೂರಿಗೆ " ಎನ್ನುವಂತೆ ನಿಂತಿದ್ದವು. ಆ ಚಂದ ಇನ್ನು ನನ್ನ ಕಣ್ಣ ಮುಂದೆ ಕಟ್ಟಿದಂತಿದೆ.


 ನಮ್ಮ ಶರದೃತು ಇಲ್ಲಿನ ಆಟಮ್ ಕಾಲ . ಚಿಕ್ಕ ಚೈತ್ರದಂತೆ ಭಾಸವಾಗುತ್ತದೆ. 

ಜೂನ್ ತಿಂಗಳಿಂದ ಸೆಪ್ಟೆಂಬರ್ ಮೊದಲ ವಾರದವರೆಗೆ ಇರುವ ಬೇಸಿಗೆಯ ಬಿಸಿಯನ್ನೆಲ್ಲ ಈ ಎಲೆಗಳೇ ಹೀರಿಕೊಂಡವೇನೋ ಆ ಸೆಖೆ ತಾಳಲಾಗದೆ ಮರದಿಂದ ಹಣ್ಣು ಹಣ್ಣಾಗಿ ಬೀಳುತ್ತಿವೆ ಏನೋ ಎಂಬಂತೆ ಸಿಗಮೋರ್, ಮೇಪಲ್, ಮರದ ಎಲೆಗಳು ಬಣ್ಣ ಬದಲಿಸಿಕೊಂಡು ಒಂದೊಂದಾಗಿ ಉದುರಿ ದಾರಿ ಗುಂಟ ಬಣ್ಣದ ಗುಡಾರ ಹಾಸುತ್ತವೆ.


ನಾ ಇರುವ ಪ್ರದೇಶದಲ್ಲಿ ಮರಗಳ ಎಲೆಗಳು ಹಳದಿ ನವಿರುಗೆಂಪು ಬಣ್ಣಕ್ಕೆ ತಿರುಗಿ, ಉದುರುತ್ತವೆ, ಆದರೆ ಯುಕೆ ಯ ಇನ್ನು ಕೆಲವು ಭಾಗಗಳಲ್ಲಿ ಇವೆ ಜಾತಿಯ ಮರಗಳ ಎಲೆಗಳು ರಕ್ತಗೆಂಪು ಬಣ್ಣ ಹೊದ್ದು ಎಲೆ ಉದುರಿಸುತ್ತಾ ಬರಿದಾಗಿ ಚಳಿಗೆ ನಲುಗಲು  ಸಿದ್ಧವಾಗುತ್ತವೆ.. 


ಫಾಲ್ ಸೀಸನ್ ಎಂದು ಕರೆಯಲ್ಪಡುವ ಈ ಕಾಲ ಅದೆಷ್ಟೋ ಕವಿಗಳಿಗೆ ಸ್ಪೂರ್ತಿ ಕೊಟ್ಟು ತನ್ನ ಮೇಲೆ ಪದ್ಯ ಬರೆಯಲು ಪ್ರೇರೇಪಿಸಿದೆ , ಎಷ್ಟೇ ಒಳ್ಳೆಯ ಛಾಯಾಗ್ರಾಹಕರಾದರೂ, ಕಣ್ಣು ಗ್ರಹಿಸುವಷ್ಟು ಚಂದದ ಫಾಲ್ /ಆಟಮ್ ಚಿತ್ರಗಳನ್ನು ಕ್ಲಿಕ್ಕಿಸಲಾರರು ,ಆ ನೋಟವೇ ಅಂಥದ್ದು .



ಒಮ್ಮೊಮ್ಮೆ ಊರಿನಲ್ಲಿ ಬೇಸಿಗೆಗೆ ಅರಳುವ ಕಕ್ಕೆ ಹೂ, ಒಮ್ಮೊಮ್ಮೆ ಸೇವಂತಿಗೆ , ಕೆಲವೊಮ್ಮೆ ಚಿನ್ನದ ಎಲೆಗಳನ್ನೇ ಮರಕ್ಕೆ ಕಟ್ಟಿದ್ದಾರೇನೋ ಅನ್ನುವ ಭಾವ ಈ ಹಳದಿ ಮರಗಳನ್ನ ನೋಡಿದರೆ ಸ್ಪುರಿಸುತ್ತದೆ.