Friday, October 28, 2011

'ನಾಳೆ ಬಾ'' ಅನ್ನೊಂಗಿಲ್ಲ ಇದು ಹಲೋವಿನ್

ಪ್ರತಿ ಸೋಮವಾರ ಮಗನ ಶಾಲೆಯಲ್ಲಿ ವಾರಪೂರ್ತಿ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮ,ನಾವು ಕಲಿಸಬೇಕಾದ್ದು ಅವರಿಂದ ಹೇಳಿಸುವುದು...ಮತ್ತಿತರ ವಿಷಯಗಳ ಬಗ್ಗೆ ಒಂದು ನ್ಯೂಸ್ ಲೆಟರ್ ಕೊಡಲಾಗುತ್ತದೆ ಈ ಬಾರಿಯ ಲೆಟರ್ ನಲ್ಲಿದ್ದಿದ್ದು  ಹೆಲ್ಲೋವಿನ (Halloween) ಎಂಬ ಆಚರಣೆ ಮತ್ತು ಅದರ ಕುರಿತಾದ ಚಟುವಟಿಕೆಗಳ ಬಗ್ಗೆ , ಹೋದ ವರ್ಷ ನಾನೂ ಹಲ್ಲೋವಿನ್ ದಿನವೇ ಈ ದೇಶಕ್ಕೆ  ಬಂದಿದ್ದೆ ಆದ್ದರಿಂದ ಅದರ ಆಚರಣೆ,ಅದರ ಕುರಿತಾದ ಯಾವುದೇ ವಿಷಯ ನನಗೆ ಗೊತ್ತಿರಲಿಲ್ಲ. ಎಂ ಎ ಮೊದಲ ವರ್ಷದಲ್ಲಿ ಜಾಗತಿಕ ಜಾನಪದ ಇತಿಹಾಸ ಓದುವಾಗ ಅಲ್ಲಿ ಈ ಶಬ್ದ ಕೇಳಿದ ನೆನಪು ಬಿಟ್ಟರೆ ಇದರ ಬಗ್ಗೆ ಬೇರೆನೂ ಗೊತ್ತಿರದ ನಾನು ಬರುವ ಶುಕ್ರವಾರ ಹಲೋವಿನ್ ಫ್ಯಾನ್ಸಿ ಡ್ರೆಸ್ ಪಾರ್ಟಿ ಇದೆ ಮಗುವನ್ನು ಸಿದ್ದ ಮಾಡಿ ಕಳಿಸಿ ಎಂದಾಗ , ಏನು ಮಾಡೋದು ಎಂಬ ಗೊಂದಲದಲ್ಲಿದ್ದೆ. ಮಗನ ಟೀಚರ್ ಗೆ ಕೇಳಿದಾಗ ಯಾವುದೇ ಆದೀತು ರಾಕ್ಷಸ ,ಮಾಟಗಾರ,ಸ್ಕೆಲಿಟನ್...ಆಕೆಯ ಲಿಸ್ಟ್ ಮುಂದುವರೆದಿತ್ತು..ನನಗೆ ತಲೆ ಚಕ್ರ ಬರುತಿತ್ತು..ಮಕ್ಕಳಿಗೆ ಸಿಂಗಾರ ಮಾಡುವುದೆಂದರೆ ನನಗೆ ಮೊದಲಿಂದಲೂ ಅದೇನೋ ವೀಪರೀತ  ಆಸಕ್ತಿ, ಓಣಿಯ ಮಕ್ಕಳು ಬಂಧುಗಳ  ಮಕ್ಕಳು ಮನೇ  ಪಕ್ಕದ ಖಾಲಿ ಜಾಗೆಯಲ್ಲಿ..ಟೆಂಟ ಕಟ್ಟಿಕೊಂಡ ಅಲೆಮಾರಿಗಳ ಮಕ್ಕಳು ಯಾರಾದರೂ ಆದೀತು..ಅವರನ್ನು ಕರೆದು ತರ ತರದ ವೇಷ ಮಾಡಿ ಫೋಟೋ ತೆಗೆದಿಡುತ್ತಿದ್ದೆ,
 ನನ್ನ ಮಗನಿಗೂ ಇವನ್ನೆಲ್ಲ ಪ್ರಯೋಗಿಸಿದ್ದೆನಾದರು..ಕೃಷ್ಣ , ಬುದ್ಹ, ರಾಮ, ಶಕುಂತಲೆ.ಶಂಕರಾಚಾರ್ಯ ಬಿಟ್ಟರೆ , ದೆವ್ವದ ವೇಷ ಹಾಕುವ ಧೈರ್ಯ ಮಾಡಿರಲಿಲ್ಲ.  ..ಈಗ ಶಾಲೆಯಲ್ಲೇ ಹೇಳಿದ್ದಾರೆ ಅಂದ ಮೇಲೆ ಮಾಡಲೇಬೇಕಲ್ಲ ಸರಿ ಆದರೆ ಇವರು ಬೇರೆಲ್ಲ ಬಿಟ್ಟು ಭಯಾನಕ ವೇಷಗಳನ್ನು ಈ ಹಬ್ಬದಲ್ಲಿ ಹಾಕೊದ್ಯಾಕೆ ಅನ್ನೋದು ನನ್ನ ಪ್ರಶ್ನೆ ಆಗಿತ್ತು ಮತ್ತೆ ಕೇಳಬೇಕೆ..???ಶುರು ಆಯ್ತು..ತನಿಖೆ ಹಲೋವಿನ ಬಗ್ಗೆ 

ಹಲ್ಲೋವಿನ್ ಎಂಬುದು ಮೂಲತ ಸ್ಕಾಟಿಷ್ ,ಮತ್ತು ಐರಿಶ್ ನಾಡಿನ ಆಚರಣೆ ( ಸೆಲ್ಟಿಕ್ ) ಇಲ್ಲಿಯ ಜನರು ವಿಶ್ವದ ವಿವಿಧ ಭಾಗಗಳಿಗೆ ವಲಸೆ ಹೋದಂತೆ ಹಲೋವಿನ್ ಅಮೇರಿಕ ,ಕೆನಡಾ , ಆಸ್ಟ್ರೇಲಿಯ ದೇಶಗಳಿಗೂ ಪಸರಿಸಿ  ಅಲ್ಲಿಯದೇ ಆಚರಣೆಯಾಗಿ ಹೋಯಿತು .
ಸೆಲ್ಟಿಕ್ ಸಂಸ್ಕೃತಿಯಲ್ಲಿ ಹಲ್ಲೋವಿನ್ ಅನ್ನು ಸಃ-ವಿನ್  ಎಂದು ಕರೆಯಲಾಗಿದೆ.ಪುರಾತನ ಕಾಲದಲ್ಲಿ ಸಃ- ವಿನ್ ಹಬ್ಬವನ್ನು ಚಳಿಗಾಲದ ಆಗಮನ ಮತ್ತು ಆಟಂ ತಿಂಗಳ ಅಂತ್ಯ, ಮತ್ತು ಚಳಿಗಾಲಕ್ಕೆ ಬೇಕಾಗುವ ಎಲ್ಲಾ ಥರದ ವಸ್ತುಗಳನ್ನು ಸಂಗ್ರಹಿಸಿಡುವ ಪ್ರಕ್ರಿಯೆಯ ದ್ಯೋತಕವಾಗಿ ಆಚರಿಸಲಾಗುತ್ತಿತ್ತು.  ಇದೆ ಸಂದರ್ಭದಲ್ಲಿ ಸತ್ತುಹೊದವರ ಆತ್ಮಗಳು ಮತ್ತೆ ಭೂಮಿಗೆ ಬರುತ್ತವೆ ಎಂಬ ನಂಬಿಕೆ ಇದೆ ಇವರಲ್ಲಿ ಇದೆ  (ನಮ್ಮಲ್ಲಿನ ಪಿತೃ ಪಕ್ಷ  ಮಹಾಲಯ ಅಮಾವಾಸ್ಯೆಯಂತೆ)..ಆ ಕಾರಣಕ್ಕೆ..ಭಯಾನಕ ವೇಷಗಳನ್ನು ಧರಿಸಿ..ಅವುಗಳನ್ನು  ಅಣಕಿಸುವ ಮತ್ತು  ಪಟಾಕಿ ಸಿಡಿಸುವ ಮೂಲಕ ಬೆಳಕನ್ನು ಹೊಮ್ಮಿಸಿ ಅವನ್ನು ಆಕರ್ಷಿಸುವ , ಅವು ಯಾರಿಗೂ  ತೊಂದರೆ ಮಾಡದೆ ಮತ್ತೆ ತಮ್ಮ ಲೋಕಕ್ಕೆ ಮರಳಲಿ ಎಂಬ ಆಶಯ ಈ ಆಚರಣೆಯ ಹಿನ್ನೆಲೆಯಲ್ಲಿದೆ

 ಜೊತೆಗೆ  ಅಕ್ಟೋಬರ್ ತಿಂಗಳ ಕೊನೆ ದಿನ ವಿಚಿತ್ರ ವೇಷ ತೊಟ್ಟ ಮಕ್ಕಳು..ಮನೆಯಿಂದ ಮನೆಗೆ ಭೇಟಿ ಕೊಡುತ್ತವೆ(ಸಂಕ್ರಮಣದ ಎಳ್ಳು ಹಂಚೋಕೆ ಮನೆಮನೆಗೆ ಹೋಗುವಂತೆ ...)..ಮತ್ತು ಮನೆಯ ಯಜಮಾನನಿಗೆ '' ಟ್ರಿಕ್  ಆರ್ ಟ್ರೀಟ್ ''ಎನ್ನುತ್ತವೆ , ಮನೆಯವರು ಅವರಿಗೆ ಯಾವುದೇ ಸಿಹಿ ಅಥವಾ ತಿಂಡಿ ಕೊಡುತ್ತಾರೆ..ಆಗ ಮಕ್ಕಳು ಅವರ ಮುಂದೆ ಒಂದು ಕಥೆಯನ್ನೋ ಹಾಡನ್ನೂ ಹೇಳಿ..ತಮ್ಮ ಟ್ರೀಟ್ ಪಡೆದು ಕೊಳ್ಳುತ್ತವೆ.. ಕೊಡದಿದ್ದರೆ ಅವರಿಗೆ ಸಂಬಂಧ ಪಟ್ಟ ಯಾವುದೇ ವಸ್ತುವನ್ನು ಅವರು ಹಾನಿ ಗೊಳಿಸುವ ಅಥವ  ತೊಂದರೆ ಕೊಡುವ ಟ್ರಿಕ್  ಮಾಡುತ್ತಾರೆ ಇಲ್ಲಿಯ ಎಲ್ಲರಿಗು ಈ ಆಚರಣೆ ತಿಳಿದಿರುವುದರಿಂದ ಯಾರು ಟ್ರಿಕ್ ಗೆ ಗುರಿ ಆಗುವುದಿಲ್ಲ  ಅವಕ್ಕೆಲ್ಲ ನಾವಿದ್ದೇವಲ್ಲ!!!!!!ನಾನು ಇಲ್ಲಿ ಬಂದ ದಿನವೇ ಹಲೋವಿನ್ ಆ ದಿನ ನಮ್ಮ ಮನೆಯ ಕಿಟಕಿಯ ಮೇಲೆ ಮೊಟ್ಟೆ ಹೊಡೆದು..ಪೋಸ್ಟ್ ಬಾಕ್ಸ್ ನಲ್ಲಿ ಪಟಾಕಿ ಸಿಡಿಸಿ..ಸುಮಾರು ತೊಂದ್ರೆ ಕೊಟ್ಟಿದ್ದವು ಮಕ್ಕಳು..

ಈ ದಿನದ ಮತ್ತೊಂದು ವಿಶೇಷ ನಮ್ಮಲ್ಲಿ ದೀಪಾವಳಿಗೆ ನಕ್ಷತ್ರ ಬುಟ್ಟಿ ತೂಗು ಹಾಕುವಂತೆ..ಕುಂಬಳ ಕಾಯಿಗೆ ಕಾರ್ವಿಂಗ್ ಮಾಡಿ ಮನೇ ಮುಂದೆ ಇಡಲಾಗುತ್ತದೆ..ಜೊತೆಗೆ ಮನೆಯ ಕಿಟಕಿ ಮೇಲೆ..ಬಾಗಿಲ ಮೇಲೆ haunted ಎದು ಬರೆಯಲಾಗುತ್ತದೆ ನಾವು ಗದ್ದೆ ಯಲ್ಲಿ ಬೇರ್ಚು ನಿಲ್ಲಿಸುವಂತೆ ಇಲ್ಲಿ ಕೂಡ ಮನೆಯ ಮಾಡಿಗೆ ದೆವ್ವದ ಮುಖವಿರುವ ಒಂದು ಗೊಂಬೆ ತೂಗಿ ಬಿಡುತ್ತಾರೆ(. ನನಗೆ ಇದನ್ನು ನೋಡಿದಾಗ ನೆನಪಾಗಿದ್ದು, ಯಾವುದೊ ಒಂದು ಕಥೆ ಕೇಳಿ ಒಂದಷ್ಟು ದಿನಗಳ ಕಾಲ ನಮ್ಮ ಬಾಗಿಲುಗಳ ಮೇಲೆ ''ನಾಳೆ ಬಾ ''ಅಂದು ಬರೆದು ರಾತ್ರಿ ದೆವ್ವದ ಹಾದಿ ನೋಡಿದ್ದು , ನೆನೆಸಿ ಕೊಂಡರೆ ಇಗಲೂ ನಗು ಬರುತ್ತದೆ)

.ಮತ್ತು ಈ ದಿನ ಮಕ್ಕಳಿಗೆ ಹಲವಾರು  ಆಟಗಳನ್ನು..ಛದ್ಮವೇಷ  ಸ್ಪರ್ಧೆಗಳನ್ನು ಆಯೋಜಿಸಿರುತ್ತಾರೆ. ಆಪಲ್ ಬಬ್ಲಿಂಗ್ ಎಂಬ ಆಟ ವಿಶೇಷವಾದದ್ದು. ಹಲ್ಲೋವಿನ ಕುರಿತಾದ  ಹಲವು  ಚಟುವಟಿಕೆಗಳನ್ನು ವಾರಪೂರ್ತಿ ಶಾಲೆಗಳಲ್ಲಿ ಮಾಡಿಸಲಾಗುತ್ತದೆ..
ಜೊತೆಗೆ ಈದಿನ ಅವಿವಾಹಿತ ಯುವತಿ ರಾತ್ರಿ ಕತ್ತಲಲ್ಲಿ ಮೇಣದ ಬತ್ತಿಯೊಂದಿಗೆ ಕನ್ನಡಿಯ ಮುಂದೆ ನಿಂತರೆ ಅವಳಿಗೆ ತನ್ನ ವರನ ಮುಖ ಗೋಚರವಾಗುತ್ತದೆ ಎಂಬ ವಿಚಿತ್ರ ನಂಬಿಕೆಯೂ ಈ ಮಂದಿಯಲ್ಲಿದೆ.


ಹಲ್ಲೋವಿನ್ ಸಂದರ್ಭದಲ್ಲಿ  ವಿಶೇಷವಾಗಿ ತಯಾರಿಸುವ ಸಿಹಿ...'' ಕ್ಯಾಂಡಿ ಆಪಲ್'' .ಸೇಬನ್ನು ಚಾಕಲೇಟ್ ಪಾಕದಲ್ಲಿ ಅದ್ದಿ ಅದಕ್ಕೊಂದಿಷ್ಟು ಸಕ್ಕತೆಯ ಹರಳು  ಹಾಕಿ ಅಥವಾ ಸಕ್ಕರೆಯ ಪಾಕದಲ್ಲಿ ಅದ್ದಿ ಮಾಡಿದ ಸಿಹಿ ಯೇ ಕ್ಯಾಂಡಿ ಆಪಲ್ .
ಇದನ್ನು ಪ್ರತಿ ಶಾಲೆಯಲ್ಲಿ ಪುಟ್ಟ ಮಕ್ಕಳ ಕೈಯ್ಯಲ್ಲೂ ಮಾಡಿಸುತ್ತಾರೆ..ನನಗೆ ತುಂಬಾ ಇಷ್ಟವಾದ ಸಂಗತಿಯೆಂದರೆ ಇಲ್ಲಿನ ಪ್ರತಿ ಜಾನಪದ ಆಚರಣೆ..ಮತ್ತು ಅದರ ಅರ್ಥ ಅದರ ಹಿನ್ನೆಲೆಯನ್ನು ಮಕ್ಕಳಿಗೆ ಶಾಲೆಯಲ್ಲಿ ವಿವರಿಸಿ ಅದನ್ನು ಮುಂದುವರಿಸಿಕೊಂಡು ಹೋಗಲು  ಪ್ರೇರೇಪಿಸಲಾಗುತ್ತದೆ .ಅದರ ಬಗ್ಗೆ ಆಸಕ್ತಿ ಹುಟ್ಟಿಸುವ ಕೆಲಸ ತುಂಬು ಮನದಿಂದ ಮಾಡುವ ಶಿಕ್ಷಕ ವೃಂದ ಅಭಿನಂದನೀಯ . ಸಂಸ್ಕೃತಿ ಯಾವುದಾದರೇನು ಅಲ್ಲಿಯ ಒಳಿತುಗಳನ್ನು ಅರಿತುಕೊಳ್ಳುವ ಮತ್ತು ಸ್ವಾಗತಿಸುವ, ಜೊತೆಗೆ ನಮ್ಮ ಸಂಸ್ಕೃತಿಯ ಬಗ್ಗೆ ಒಲುಮೆ ಉಳಿಸಿಕೊಂಡು ಅದನ್ನು ಶ್ರದ್ಹೆಯಿಂದ ಆಚರಿಸುವ ಮನಸ್ಸು ಎಲ್ಲರಲ್ಲಿರಬೇಕು .

ನನ್ನ ಮಗ ಇವತ್ತು ದೆವ್ವದ ವೇಷ ತೊಟ್ಟು ಶಾಲೆಗೆ ಹೋದ..ನನಗೆ ಒಳಗೊಳಗೇ ನಗು.ನಕ್ಕರೆ ಅವ ತಾನು  ಇದನ್ನು ತೊಡಲ್ಲ ಅಂತಾನೆ  ಅಂತ ಗೊತ್ತಿದ್ದಕ್ಕೆ  ಸುಮ್ಮನೆ '' ಭಾಳ ಚಂದ ಕಾಂತೀಯ ಗುಂಡ'' ..ಅಂದು ಕಳಿಸಿದೆ..ಇವನ ಫ್ಯಾನ್ಸಿ ಡ್ರೆಸ್ ಡೇ ನಿಮಿತ್ಯ ,ಅದೆಷ್ಟು ಚಂದದ,,ಜನಪದ ಆಚರಣೆಯೊಂದನ್ನು ತಿಳಿಯುವಂತಾಯಿತು..ಥ್ಯಾಂಕ್ಸ್ ಟು..ಪ್ರಥಮ್.
೨೦೧೫ ರ  ಹಲೋವೀನ್ ಉಡುಗೆ .



Thursday, October 13, 2011

ಬಂದೈತಿ ಶೀಗಿ ಹುಣ್ನಿಮಿ........





'
''ಅನ್ನ ಕುಮಾರನ ಬಸರಿ ಅದಾಳ
ನಮ್ಮ ಭೂಮಿತಾಯಿ
ಬಯಕೀ ಊಟ ಉಣಿಸ ಬೇಕ
ಬಂದೈತಿ ಶೀಗಿ ಹುಣ್ಣಿಮಿ''

ಹೀಗೆಂದು ಅಪ್ಪಟ ಜನಪದಮಿಡಿತದ ಗೀತೆ ಬರೆದವರು ಆನಂದ ಕಂದರು.....
ಭೂಮಿಯು ತನ್ನ ಗರ್ಭದಲ್ಲಿ ಅನ್ನ ಕುಮಾರನನ್ನು ಹೊತ್ತುಕೊಂಡು ಮೂಡುಗಾಳಿಗೆ ತೊನೆಯುತ್ತಿದ್ದರೆ, ಬಸುರಿ ಹೆಣ್ಣುಮಗಳು ಸೆರಗಿನಿಂದ ಬೆವರೊರೆಸಿಕೊಳ್ಳುತ್ತ ಉಸ್ಸಪ್ಪ ಅನ್ನುತ್ತಿದ್ದರೂ ಆಕೆಯ ಮನದ ಅವೇದ್ಯ ಸಂವೇದನೆಗಳು ಸುಖದ ಭಾವಗಳು ಅನಾವರಣಗೊಂಡಂತೆ ಅನಿಸುತ್ತದೆ.
ದಸರೆಯ ನಂತರ ಬರುವ ಹುಣ್ಣಿಮೆಯೇ ಈ ಬಸುರಿ ಭೂಮಿತಾಯಿಗೆ ಮಡಿಲು ತುಂಬುವ ದಿನ ಅದೇ ಶೀಗಿ ಹುಣ್ಣಿಮೆ.


''ಹತ್ತಿಯ ಎಳಿಬೆಳಿ ಹಚ್ಚ ಹಸುರಿನ ಪತ್ತಲ ನೇಯ್ದಾವ
ಎಳ್ಳುಪುಂಡಿ ಹೂ ಮಗ್ಗಿ ಹೆಣೆದಾ ಕಸೂತಿ ತೆಗೆದಾದ
ಕುಸುಬಿ ಗೋದಿ ಸಸಿ ಬಸರಿಗೊಪ್ಪವಾಕುಪ್ಪಸ ಹೆಣದಾವ
ಸುತ್ತನ ಬನದಾಗ ಹಕ್ಕಿ ಹಸೆಯ ಹಾಡ್ಯಾವ ಟೂವಿ ಟುವಿ''

ಇದು ಪ್ರಕೃತಿಮಾತೆ ತನ್ನ ಮಗಳಿಗೆ ಉಡಿ ತುಂಬುವ ಸಂಭ್ರಮಕ್ಕೆ ಅಣಿಯಾಗುವ ರೀತಿ ಇದಾದರೆ ಬಸುರಿ ಹುಡುಗಿಗೆ ಮಡಿಲು ತುಂಬುವಂತೆಯೇ ಜನಪದರು ಹಸಿರು ಸೀರೆ ಕುಪ್ಪಸತಂದು ಆಕೆಗೆ ಉಡಿಸಿ ನಂತರ ಅ ಸೀರೆಯನ್ನು ಮನೆ ಮಗಳಿಗೆ ಕೊಡುವ ಪದ್ದತಿ ಇದೆ.
ಪಾಂಡವರ ಪೂಜೆ:- ಶಮೀ ವೃಕ್ಷದಲ್ಲಿ ಆಯುಧಗಳನ್ನು ಪಡೆದು ಯುದ್ಧಕ್ಕೆ ಸನ್ನದ್ಧರಾದ ಪಾಂಡವರನ್ನ ನೆನೆದು ಅವರ ಪ್ರತೀಕವಾಗಿ ಐದುಕಲ್ಲುಗಳನ್ನಿಟ್ಟು ಅವಕ್ಕೆ ಗಂಧ ಕುಂಕುಮ ಧೂಪ ದೀಪದೊಂದಿಗೆಪೂಜಿಸಿ. ಎಡೆ ತೋರಿಸಲಗುತ್ತದೆ. ಈ ಎಡೆಯನ್ನು ಪುರುಷರು ಯಾರೊಂದಿಗೂ ಮಾತನಾಡದೆ ಉಣುವ ಪದ್ದತಿ ಇದೆ.
ಇಲ್ಲಿ ಇನ್ನೊಂದು ವಿಶೇಷ ಎಂದರೆ ಪಾಂಡವರರ ಪೂಜೆಯೊಂದಿಗೆ,ಕಳ್ಳಪೂಜೆ ಎಂಬುದೊಂದು ವಿಚಿತ್ರ ಆಚರಣೆ ಇದೆ ಕುಡುಗೋಲು ಒಂದಕ್ಕೆ ಪುಜೆ ಮಾಡಿ ಅದಕ್ಕೆ ತೋರಿಸಿದ ನೈವೇದ್ಯವನ್ನು ಅದೇ ಕುಡುಗೋಲಿನಿಂದ ಭೂಮಿಯನ್ನು ಅಗೆದು ಅದನ್ನು ಅಲ್ಲೇ ಮುಚ್ಚಬಿಡುತ್ತಾರೆ.

''ಮುಂಗಾರಿನ ನೆಲೆ ಹೊಂದೆಂನಿಟಿನ ಹಂದರ ಹಾಕಯ್ತೆ
ಹೆಸರು ಹುರುಳಿ ಅಲಸಂದಿ ಅವರಿಬಳ್ಳಿ ತ್ಪಾರಣ ಬಿಗಿದೈತೆ
ಹುಚ್ಚೆಳ್ಳಿನ ಹೊಲ ಹೂಗಳ ಅರೆಳಸಿ ಕುಚ್ಚನು ಕಟ್ಟೈತೆ
ಉಡಿಯ ತುಂಬಾಲಕ ಮಾಗಿ ನಿಂತಾವ ನೋಡ ನವಣಿ ಸಾವಿ!''

ಇಷ್ಟು ಸಿಂಗಾರದ ನಡುವೆ ಕುಳಿತ ಭೂಮಿ ತಾಯಿಗೆ ವಿಧವಿಧದ ಅಡುಗೆಯನ್ನು ಮಾಡೀ ಬಡಿಸಿ ಬಯಕೀ ಊಟದ ಸಂಭ್ರಮವನ್ನು ಜನಪದರೂ ಅಸ್ಪಾದಿಸುತ್ತಾರೆ...
ಹೀರಿಕಯಿ ಬದನಿಕಾಯಿ ಕುಂಳಕಾಯಿ ಮಡ್ಕಿ ಹೆಸ್ರುಕಾಳು ಕಡತಿ ಕಾಳುಗಳ ಪ್ರತ್ಯೇಕ ಪಲ್ಯ ಕುಚ್ಚದ ಕಾಯಿ, ಉಂಡ್ಡಡುಬು ಕಸುಬಿ ಹುಗ್ಗಿ ಗರಿಗೆ ಪುಂಡಿಪಲ್ಯೆ ಅಗಸೀ ಎಳ್ಳು ಕರೆಳ್ಳು ಶೇಂಗ ಪುಠಾಣಿ ಚಟ್ನಿಗಳು ರೊಟ್ಟಿ ಚಪಾತಿ ಕಟ್ಟಿನ ಸಾರು.
ಶೇಂಗಾ ಹೋಳಿಗೆ,ಎಳ್ಳುಹೋಳಿಗೆ ಸುರಳಿಹೋಳಿಗೆ.....ಈ ಪಟ್ಟಿ ಮುಗಿಯುವಂಥದ್ದಲ್ಲ ಗರ್ಭಿಣಿಗೆ ಪೌಷ್ಟಿಕ ಮತ್ತು ನಾಲಿಗೆಯ ರುಚಿ ಹೆಚ್ಚಿಸುವ ಆಹಾರವನ್ನು ತಯಾರಿಸಿ, ಅದರೊಂದಿಗೆ, ಚಿಗಳಿ, ಉಪ್ಪಿನಕಾಯಿ, ಕರಿಂಡಿಯನ್ನು ಎಡೆ ಇಡುತ್ತಾರೆ. ಎಳೆ ಸವತೆ ಹೆಸುರಬೇಳೆ ಉಳ್ಳಾಗಡ್ಡಿಯ ಕೊಸಂಬರಿಯೊಂದಿಗೆ ಹೊಲದ ಮರದೊಂದರ ನೆರಳಿನಲ್ಲಿ ಕುಳಿತು ತೊನೆಯುವ ಭತ್ತದ ಹಾಲ್ತೆನೆಯನ್ನು ನೋಡುತ್ತ,ಉಣ್ಣುವ ಸುಖ ಉಂಡವನೇ ಬಲ್ಲ....
ಮುಂಗಾರಿನ ಆರಂಭದಿಂದಲೂ ಬೆವರನ್ನು ಕಾಳಿಯೊಂದಿಗೆ ಬಿತ್ತಿದ ರೈತನು ಫಸಲನ್ನು ನೋಡುತ್ತಾ, ಬಂದ ಬೆಳೆ ಕ್ಷೇಮವಾಗಿ ಮನೆಗೆ ಬರಲಿ ಎಂದು ಆಶಿಸಿ ಆ ತಾಯಿಯನ್ನು ಬೇಡುವಾಗ ಚೊಚ್ಚಲ ಬಸುರಿಯ ಬಾಣಂತನ ಸುಗಮವಾಗಿ ಮುಗಿದು ಕ್ಷೇಮಕರವಾಗಿ ಗಂಡನ ಮನೆಗೆ ಸೇರಿದರೆ ಸಾಕು. ಎಂದು ದೇವರಲ್ಲಿ ಹರಕೆಯಲ್ಲಿ ಕಟ್ಟಿ ಹಾಕುವ ಬಸುರಿಯ ತಾಯಿಯನ್ನು ಕಂಡಂತೆ ಆಗುವುದಂತೂ ನಿಜ....
ಜನಪದರ ಆಚರಣೆಗಳೇ ಹಾಗೆ ಅವುಗಳಲ್ಲಿ ಸಮಷ್ಟಿ ಪ್ರಜ್ಞೆ, ಪ್ರಕೃತಿಯೆಡೆಗೆ ಅಪರಿಮಿತ ಪ್ರೀತಿ ಕಾಣುತ್ತದೆ. ಶೀಗಿ ಹುಣ್ಣಿಮೆ ಅಂಥ ಆಚರಣೆಗಳಲ್ಲೊಂದು, ನೀವೂ ಈ ಶೀಗಿ ಹುಣ್ಣಿಮೆಯನ್ನು ಆಸ್ಪಾದಿಸಿದ್ದರೆ, ಸರಿ ಇಲ್ಲದಿದ್ದರೆ ಆನಂದಕಂದರ ಶೀಗಿ ಹುಣ್ಣಿಮೆ ಗೀತೆಯನ್ನೊಮ್ಮೆ ಖಂಡಿತ ಓದಿ


Sunday, September 25, 2011

ಎಲ್ಲರಿಗೊಪ್ಪೋ ...ಹರಿವೆ ಸೊಪ್ಪು


ಈ ದಿನ ಅಡುಗೆಮನೆಯಿಂದ ಚರ ಚರ ಸಪ್ಪಳ ಅಮ್ಮ ಇಳಿಗೆಮಣೆ ಮೇಲೆ  ಕುಳಿತು ದಾಸರಪದ ಗುನುಗುನಿಸುತ್ತ ಹರಿವೆ ಸೊಪ್ಪು ಹೆಚ್ಚುತ್ತಿದ್ದಳು..ಹಿತ್ತಲಲ್ಲಿ ಬೇಕಾದಅಷ್ಟು ಜಾಗೆ ಅದರಲ್ಲಿ ಆಕೆಯೇ ನೆಟ್ಟು ಬೆಳೆಸಿದ ಹರಿವೆ ಸೊಪ್ಪು...ಇವತ್ತು ಮನೆಮಂದಿ ಎಲ್ಲರು ಎರಡು ತುತ್ತು ಹೆಚ್ಚು ತಿನ್ನುವುದಂತು  ಗ್ಯಾರಂಟಿ  ,,,ಹರಿವೆ ಸೊಪ್ಪಿನ ರುಚಿಯೇ ಅಂಥದ್ದು...
ಹರಿವೆ ಸೊಪ್ಪನ್ನು ನಮ್ಮ ನೆಲದಲ್ಲಿ ಆಹಾರವಾಗಿ ಬಳಸಲು ಯಾರು ಆರಂಭಿಸಿದರೋ ತಿಳಿಯದಾದರು..ಅವರಿಗೊಂದು ಫುಲ್ ನಮಸ್ಕಾರ ಹಾಕಲೇ ಬೇಕು..ಯಾಕಂದ್ರೆ ಮಧ್ಯನಕ್ಕೊಂದು ಪಲ್ಯ ರಾತ್ರಿಗೊಂದು ಸಾರು ,ಸಾಸಿವೆಅಂತೆಲ್ಲ ಬಳಸಲ್ಪಡುವ ಈ ಹರಿವೆ ಸೊಪ್ಪಿನಲ್ಲಿ ಅಪಾರ ಪ್ರಮಾಣದ ಪೌಷ್ಟಿಕಂಶಗಳಿವೆ ..ಹಲವಾರು ಬಾರಿ ನಮಗೆ ಗೊತ್ತಿಲ್ಲದೇ ಹರಿವೆ  ಆಹಾರ್ ರೂಪದ ವೈದ್ಯನಾಗುವುದು ಉಂಟು ,,

ಹರವಿ,ಹರ್ಗಿ,ದಂಟಿನ ಸೊಪ್ಪು ,ಕೀರೇ ಸೊಪ್ಪು,ರಾಜಗೀರ್,ಕಿರ್ಕಸಾಲಿ ಅಂತೆಲ್ಲ ಕರೆಯಲ್ಪಡುವ ಹರಿವೆ ಸೊಪ್ಪಿನ ವೈಜ್ಞಾನಿಕ  ಹೆಸರು amarantus gengetics.ಇದನ್ನು ಚೈನಾ ಸ್ಪಿನಾಶ್ .ಎಂದೂ ಕರೆಯುವುದುಂಟು ಭಾರತ,ಮಲೇಶಿಯಾ ,ತೈವಾನ್ ,ಸೌತ್ ಫೆಸಿಪಿಕ್ಗಳಲ್ಲಿ ಕಾಣಸಿಗುವ ಈ ಹಸಿರು ಕೆಂಪು  ಹರಿವೆಯ ಮೂಲ ಮಾತ್ರ ದಕ್ಷಿಣ ಅಮೇರಿಕ/ಮೆಕ್ಷಿಕೊ ದಲ್ಲಿದೆ ಇದನ್ನು ವಾರ್ಷಿಕ ಬೆಳೆಯಾಗಿಯು ಬೆಳೆಸಲಾಗುತ್ತದೆ.ಹಲವಾರು ಪ್ರಭೇದಗಳಿದ್ದರು  ಮುಖ್ಯವಾಗಿ ೬ ರೀತಿಯ ಹರಿವೆಸೋಪ್ಪಿನ ಪ್ರಭೇದಗಳನ್ನು ಗುರುತಿಸಬಹುದು.

ಔಷದಿಯಾಗಿ ಹರಿವೆ...
 
''ಹಿತ್ತಲದಾಗವರತ್ತಿ ಕರೆದು ಕಳ್ಳ ದನಿಲೆ ಕೇಳತಾಳ

ಹಚ್ಚನ್ನ ಹರವಿ ಸೊಪ್ಪು ತಿನ್ನಂಗಾಗೈತೆ ,ಬಾಲನ ಬವಕಿಯ ಬಯಸಂಗಗೈತೆ....'....''

ಹೀಗೆಂದು ಹಾಡಿದ್ದು ಜನಪದರು...ಗರ್ಭಿಣಿ ಮತ್ತು ಬಾಣಂತಿಯರಿಗೆ ಹರಿವೆಸೊಪ್ಪಿನ ಮಹತ್ವವನ್ನು ಅವರಿಗಿಂತ ಹೆಚ್ಚಿಗೆ ಬಲ್ಲವರ್ಯಾರು??ಗರ್ಭಿಣಿಯರು ಹರಿವೆ ಸೊಪ್ಪನ್ನು ಆಹಾರದಲ್ಲಿ ಬಳಸುವುದಲ್ಲದೆ ಬಟ್ಟಲು ಹರಿವೆ ರಸಕ್ಕೆ ಚಿಟಿಕೆ ಯಾಲಕ್ಕಿ ಪುಡಿ ಮತ್ತು ಜೇನು ಬೆರೆಸಿ ಕುಡಿಯುವುದರಿಂದ ಮಗುವಿನ ಬೆಳವಣಿಗೆಗೆ ಪೂರಕವಾಗುತ್ತದೆ.ಮತ್ತು ಬಾಣಂತಿಯರಿಗೆ ಇದನ್ನು ಕೊಡುವುದರಿಂದ ಎದೆಹಾಲು ವೃದ್ಹಿಸುತ್ತದೆ.ಉತ್ತರ ಕರ್ನಾಟಕದ ಕೆಲಭಾಗಗಳಲ್ಲಿ ಸಟ್ಟಿ ಪೂಜೆಯಂದೇ ಬಾಣಂತಿಯರಿಗೆ  ಹರಿವೆ ಸೊಪ್ಪಿನ ಪಲ್ಯವನ್ನು ನೀಡಲಾಗುತ್ತದೆ.

  • ಕುಂಟಿತ ಬೆಳವಣಿಗೆ ಹೊಂದಿರುವ ಮಕ್ಕಳಿಗೆ ಪ್ರತಿದಿನ ಚಮಚದಷ್ಟು ಹರಿವೆ ಸೊಪ್ಪಿನ ರಸ ಮತ್ತು ನಿಂಬೆರಸವನ್ನು ಬೆರೆಸಿ ಕೊಡುವುದರಿಂದ ಪುಷ್ಟಿ ದೊರಕುವುದು.
  • ಮಲಬದ್ಧತೆ ಬಾಧಿಸುವಾಗ ಹರಿವೆ ಸೊಪ್ಪನ್ನು ಆಹಾರ ರೂಪದಲ್ಲಿ ಸೇವಿಸಿದರೆ ಪರಿಹಾರ ದೊರಕುವುದು.
  • ಗಾಯ,ಮತ್ತು ಬಾವು ಗಳಲ್ಲೂ ಹರಿವೆ ಸೊಪ್ಪಿನ ಲೇಪನ ಮಾಡಿದರೆ ಗುಣ ಕಾಣುತ್ತದೆ 
  • ಹರಿವೆ ಸೊಪ್ಪಿನ ಬಳಕೆ ಹೆಚ್ಹು ಹೆಚ್ಹು ಮಾಡುವುದರಿಂದ ಡಯೇರಿಯ,ಮತ್ತು ಅಜೀರ್ಣಕಾರಕ ಭೆದಿಯನ್ನು ಬಹುಮಟ್ಟಿಗೆ ತಡೆಯಬಹುದು.
  • ಕೀರೇ ಸೊಪ್ಪಿನ ರಸ ನ್ಮತ್ತು ನಿಂಬೆ ರಸವನ್ನು ತಲ್ಕೂದಲಿಗೆ ಹಚ್ಚಿ ಸ್ನಾನ ಮಾಡಿದರೆ ತಲೆಹೊತ್ತಿನ ಸಮಸ್ಯೆ ಕಡಿಮೆಯಾಗಿ ,ಕೂದಲು ಸೊಂಪಾಗಿ ಬೆಳೆಯುವುದು.
  • ಹರಿವೆಸೊಪ್ಪಿಗೆ ರಕ್ತ ಸ್ರಾವವನ್ನು ತಡೆಗಟ್ಟುವ ಶಕ್ತಿಯು ಇದೆ..
  • ಮುಳ್ಳುಹರಿವೆ ಗದ್ದೆ ಬದುಗಳಲ್ಲಿ ಸಾಕಷ್ಟು ಸಿಗುತ್ತದೆ ಇದನ್ನು ಆಹಾರದಲ್ಲಿ ಬಳಸುವುದರಿಂದ ಬೆನ್ನು ,ಕಾಲು ಸೆಳೆತದಿಂದ ಮುಕ್ತಿ ಪಡೆಯಬಹುದು.
  • ಬೇಸಿಗೆಯಲ್ಲಿ ಹರಿವೆ ಸೊಪ್ಪನ್ನು ಸೇವಿಸುವುದರಿಂದ ದೇಹ ತಂಪಾಗಿರುತ್ತದೆ.
  • ಬಾಯಿ ಹುಣ್ಣು ಮತ್ತು ಗಂಟಲ ಕಿರಿಕಿರಿಯಲ್ಲಿ ಹರಿವೆಸೋಪ್ಪನ್ನು ಬೇಯಿಸಿದ ನೀರಿನಿಂದ ಗಾರ್ಗಲ್ ಮಾಡಿದರೆ ಬೇಗ ಗುಣ ಕಾಣುವುದು .
  • ಇದರ ಬೀಜವನ್ನು ಧನ್ಯದನ್ತೆಯು ಬಳಸಲಾಗುತ್ತದೆ ಇದರ ಹಿಟ್ಟಿನಿಂದ ಮಾಡಿದ ಖಾದ್ಯವನ್ನು ಉಪವಾಸಗಳಳಲ್ಲಿ ಸೇವಿಸಲಾಗುತ್ತದೆ,ಇದರಿಂದ ಹಪ್ಪಳ,ರೊಟ್ಟಿಗಳನ್ನು ವಿಶೇಷವಾಗಿ ತಯಾರಿಸುತ್ತಾರೆ.
  •  ಅನಿಮಿಯ ,ರಕ್ತ ದೋಷ ಉಳ್ಳವರು ಅಗತ್ಯವಾಗಿ ಇದನ್ನು ಸೇವಿಸಬೇಕು ಎಂದು ತಜ್ಞರು ಹೇಳುತ್ತಾರೆ .
ಹರಿವೆ ಸೊಪ್ಪಿನಲ್ಲಿ ವಿಟಮಿನ್ ,ಐರನ್.ಕ್ಯಾಲ್ಷಿಯಂ ಗಳು ಹೇರಳವಾಗಿರುವುದರಿಂದ ಪ್ರತಿಯೊಬ್ಬರೂ ಇದನ್ನು ಸೇವಿಸಿ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು.ನಿಮ್ಮ ಹಿತ್ತಲಿನಲ್ಲಿ  ಸ್ವಲ್ಪ ಜಾಗೆ ಇದ್ದರು ನೀವೇ ಬೆಳೆಸಬಹುದು.ಮತ್ಯಾಕೆ ತಡ ಹರಿವೆಯಾ ಹಿರಿಮೆಯನ್ನು ನೀವು ಅನುಭವಿಸಿ..ಬಾಯಿ ರುಚಿಯೊಂದಿಗೆ ಆರೋಗ್ಯವನ್ನು ವೃದ್ಧಿಸಿಕೊಳ್ಳಿ..

Monday, September 12, 2011

ಪಾತ್ರ ಅದಲು- ಬದಲು

 ಮಳೆ ಜೋರಾಗುತ್ತಿದೆ...ಬೇಗ್ ಬೇಗ ಬಾ...ಹಾಗೆನ್ನುತ್ತ ಮಗುವಿನ ಕೈ ಹಿಡಿದುಕೊಂಡು ಓಟದ ನಡಿಗೆ ನಡೆಯುತ್ತಿದ್ದೆ....ಆತನೋ ಅಲ್ಲಿ ನಿಂತ ನೀರಲ್ಲಿ ಪಟ್ಟನೆ ಜಿಗಿದು ಪಚ್ಚ್ಹ್ ಅಂತ ಶಬ್ದ ಮಾಡಿ..ಮೈ ತುಂಬಾ ನೀರು ಮಾಡಿಕೊಳ್ಳುತ್ತಿದ್ದ....ಆತನೊಂದಿಗೆ ನಾನು ತೊಯ್ಯುತ್ತಿದ್ದೆ...ಹಾಗ ಮಾಡಬೇಡ...!ಸುಮ್ನೆ ಬರೋಕಗಲ್ವಾ????ಹಾಗಂತ ಮತ್ತೆ ನಾ ನಡೆಯುತ್ತಿದ್ದೆ...ಮತ್ತೆ ಅವನದು ಅದೇ ಕಥೆ...ತಲೆಯ ಮೇಲೊಂದು ಮೊಟಕಿದೆ...ಬೇಗ ಬಾ ಅಂದ್ರೆ ತರ್ಲೆ..ಅದು ಮಳೆಲಿ...ನಾಳೆ ನೆಗಡಿ ಆಗುತ್ತೆ ಆಗಲೋ ನಾನೆ ಬೈಸ್ಕೊಬೇಕು ನಿನ್ ಪಪ್ಪ ನಾ ಹತ್ರ...ಅಮ್ಮನ್ನಿಗೆ ಯಾಕ ಹೀಗ್ ತೊಂದ್ರೆ ಕೊಡ್ತೀಯ???ಹಾಗಂತ ಕೇಳಿದೆ...ಮಗು ತಲೆಕೆಳಹಾಕಿ ಸುಮ್ಮನೆ ನಡೆಯ ತೊಡಗಿತು.....
ಮಳೆ ಜೋರಾಯಿತು..ನಡೆಯೋಕೆ ಆಗ್ತಿಲ್ಲ..ಅಲ್ಲೇ ಒಂದು ಕಂಪೌಂಡಿನ ಪಕ್ಕದ ಮಾಡಿಗೆ ಆಸರೆಯಂತಿದ್ದ ಮರದ ಕೆಳಗೆ ನಿಂತು ಕೊಂಡ್ವಿ.....

ಮರದ ಮೇಲೆ ಬಿದ್ದ ಮಳೆಹನಿಗಳು...ಎಲೆಗಳ ತುದಿಯಿಂದ ಒಂದಂದಾಗಿ ಉದುರುತ್ತಿದ್ದವು..ಬೀಳು ವ ಮಳೆ ಹನಿಗಳತ್ತ ನಿರಾಯಾಸವಾಗಿ ಕೈ ಚಾಚಿದೆ...ಪ್ರತಿ ಹನಿಯು ಕೈಮೇಲೆ ಬಿದ್ದು ಸಿಡಿಯುತ್ತಿತ್ತು..ಅದನ್ನು ಅನಂದಿಸ ತೊಡಗಿದೆ...ಮನಸು ಹಿಂದೆ ಓಡಿತು...ಮುಂಚೆ ಮಳೆಗಾಲ..ಎಂಬುದು...ಚೈತನ್ಯ ದಾಯಿ.ಸಮಯ..ಆಗಲೇ ಅಲ್ವೇ ಶ್ರಾವಣದ ಸಂಭ್ರಮ..ಅರಿಶಿನ ಕುಂಕುಮ ಪೂಜೆ ಎಂದು ಅಮ್ಮಂದಿರೆಲ್ಲ ಬ್ಯುಸಿ ಯೋ ಬ್ಯುಸಿ..ನಾನೂ ಅವರೊಂದಿಗೆ ಹೋಗುತ್ತಿದ್ದೆ...ರಸ್ತೆಯ ಹೊಂಡಗಳಲ್ಲಿ  ಮಳೆ ನೀರಲ್ಲಿ ಮಾಡಿದ ಚಹಾ ಬಣ್ಣದ ನೀರು...ಕಾಲು ತಡೆಯುವುದೇ ಇಲ್ಲ.. ಒಮ್ಮೆ ಜಿಗಿದು ಬಿಡೋಣ ಅನಿಸಿ ಅದರಲ್ಲಿ ಆತ ಆಡಿದಾಗೆಲ್ಲ  ಅಮ್ಮ ತಲೆಗೊಂದು ಮೊಟಕುತ್ತಿದ್ದಳು...ಯಾವಾಗ್ ಬುದ್ಧಿ ಬರುತ್ತೋ...ಹುಶಾರಿಲ್ದೇ  ಮಲ್ಕೋ...ಶಾಲೆಗೆ  ಮತ್ತೆ ರಜೆ ಹಾಕು ..ಮತ್ತೆ ನೀ ನರಳೋದು...ಇರೋ ಕೆಲಸ ಏನ್ ಕಮ್ಮಿನ ಮತ್ತೆ ನೀ ಇದನ್ನೊಂದು ತಗಲಿಹಾಕಿಕೊಂಡು......ಅಪ್ಪನ ಹತ್ರ ನಾ ಬೈಸ್ಕೊಬೇಕು....''ಅಮ್ಮನ ಸಹಸ್ರಾರ್ಚನೆ ಮುಂದುವರಿಯುತ್ತದೆ......

ಆಗೆಲ್ಲ ನಾ ಅಂದುಕೊಳ್ಳೋದಿತ್ತು ನಾ ಅಮ್ಮ ಆದಾಗ ನನ್ ಮಗು ನಾನು ಇಬ್ಬರು ಮಳೆ ನೀರಲ್ಲಿ ಆಟ ಆಡ್ತೀವಿ..ನಾ ಯಾವತ್ತು ಅಮ್ಮನಂತೆ ನನ್ನ ಮಗುನ ಬೈಯ್ಯಲ್ಲ..ಬರೀ ಮುದ್ದು ಮುದ್ದು ಮುದ್ದು ಅಷ್ಟೇ.. ಇಷ್ಟಕ್ಕೂ ಅಮ್ಮ ಯಾಕೆ ಹೀಗ್ ಆಡ್ತಾಳೆ ಅಂತ ಆಲೋಚಿಸುವಷ್ಟು ಬುದ್ಧಿ  ಬಲಿತಿರಲಿಲ್ಲ....ಬಾಲ್ಯ ದಾಟಿತು...ಅಂದುಕೊಂಡ ಮಾತುಗಳು ಮಾತ್ರ ಮನಸಲ್ಲೇ ಉಳಿದಿದ್ದವು.
 
.ಈಗ ನಾನು ಅಮ್ಮ.... ನಾನೂ ಅಮ್ಮ ನಂತೆ ವರ್ತಿಸಿದೆ....ಪಾತ್ರಗಳು ಅದಲು- ಬದಲಾದಂತೆ ಮನುಷ್ಯನ ಬುದ್ಧಿ  ಮಾತು,ಆಲೋಚನೆ ಎಲ್ಲವು ಬದಲಾಗುತ್ತ????ನಾವ್ಯಾಕೆ ಅಷ್ಟು ಬೇಗ ಬದಲಾಗ್ತೀವಿ????ನಾವು ದೊಡ್ಡೋರು ಅನ್ನೋ ಒಂದು ಅಹಮ್ಮಿನಲ್ಲಿ ಮನಸಿನ ಒಂದು ಮೂಲೆಯಲ್ಲಿ ಅಡಗಿ ಕುಳಿತಿರೋ..ಪುಟ್ಟ ಮಗುವನ್ನು ಹೊರಬರಲು ಬಿಡುವುದೇ ಇಲ್ಲ...ಅಂತರಂಗದಲ್ಲಿ ಬಾಲ್ಯದ ಒರತೆ ಅದೆಲ್ಲೋ ಮುಚ್ಚಿ ಹಾಕಿಬಿಡುತ್ತೇವೆ..ನಮ್ಮ ಕನಸುಗಳು..ನಮ್ಮ ಆಲೋಚನೆಗಳು..ಮೆಟ್ಟಿದ ಮನೆಯ ಅಚ್ಚಲ್ಲಿ ಅಚ್ಹಾಗಿ ಬಿಡುತ್ತವೆ...ನಾವೂ ಅಮ್ಮ ಆಗಿಬಿಡುತ್ತೇವೆ....ಹೊರಗಿನ ಮಳೆಯೊಂದಿಗೆ ಮನಸು ಒದ್ದೆ ಒದ್ದೆ.......

ಅಮ್ಮನಿಗೆ ಒಮ್ಮೆ sorry ಹೇಳ್ಬೇಕು ಅನ್ಕೊಂಡೆ...ಮಳೆ ಕೊಂಚ್ ನಿಂತಂತಾಯಿತು...ಮಗ ಇನ್ನೂ ಗಲ್ಲ ಉಬ್ಬಿಸಿಕೊಂಡೆ ಇದ್ದ ...ಮನೆಗೆ ಬಂದೊಡನೆ ಪುಟ್ಟ  ಪುಟ್ಟ  ಕಾಗದದ ದೋಣಿಗಳೊಂದಿಗೆ ರಸ್ತೆಯಲ್ಲಿ ಹರಿದು ಬರುತ್ತಿದ್ದ ನೀರಲ್ಲಿ ನಮ್ಮ ದೋಣಿಯಾನ ಆರಂಭವಾಯಿತು.. ಮಗು ಸಿಟ್ಟು ಮರೆತು ಮನಸ್ಪೂರ್ತಿ ಆಡ ತೊಡಗಿತ್ತು......ಆಗ ನೆನಪಾದ ಹಾಡುಗಳೆಷ್ಟೋ...ಕವನಗಳೆಷ್ಟೋ.... ಮಗ ''ಅಮ್ಮ  ನೀನು ಗುಡ್ ಗರ್ಲ್ ''ಅಂತ ಸರ್ಟಿಫಿಕೆಟ್ ಬೇರೆ ಕೊಟ್ಟ. ಬಾಲ್ಯದುದ್ಯಾನದಲಿ ಹೂತು ಹೋಗಿದ್ದ.. ಕನಸ ಬೀಜಕ್ಕೆ.ಒಲವಿನೊರತೆಯ ಸಿಂಚನ... ಮನದಲ್ಲಿ ಮಾತ್ರ ಅವೆ ಪ್ರಶ್ನೆಗಳ ಮಹಾಪೂರ ..


(www.vijayanextepaper.com ವಿಜಯನೆಕ್ಷ್ತವಾರಪತ್ರಿಕೆಯ ಅವಳ ಡೈರಿ ಅಂಕಣದಲ್ಲಿ ಪ್ರಕಟಿತ )

Monday, August 29, 2011

ಜನರ ಸಂತೆಯಲ್ಲಿ ಹಕ್ಕಿಗಳೊಂದಿಗೆ... ನಾನು


                                                                                               


ಇಂಥವೆಲ್ಲ ನನ್ನ ಕಣ್ಣಿಗೆ ಯಾಕೆ ಬಿಳುತ್ತವೆಯೋ ಗೊತ್ತಿಲ್ಲ, ದೇಶ ಬಿಟ್ಟು ನನ್ನದಲ್ಲದ ನಾಡಿಗೆ ಬಂದು ನೆಲೆಸಿದರು ಈ ನಂಟು ನನ್ನ ಬಿಡಲೊಲ್ಲದು, ಮದುವೆಯ ನಂತರ ಮೊದಲು ಸಂಸಾರದ ಬಂಡಿ ಹೂಡಿದ್ದು ಬೆಳಗಾವಿಯಲ್ಲಿ, ೨ ನೇ ಅಂತಸ್ತಿನಲ್ಲಿ ನನ್ನ ಪುಟ್ಟ ಗೂಡು , ಅಡಿಗೆ ಮನೆಯ ಕಿಟಕಿ ತೆರೆದ ಕೂಡಲೇ ಕಾಣುತ್ತಿತ್ತು ಅವರ ಬಳಗ. ಹತ್ತಿರದ ಅಂಗಡಿಯ ಬಾಗಿಲಲ್ಲಿ ಅವರು ಎಸೆಯುತ್ತಿದ್ದ ಅಕ್ಕಿಯ ಕಾಳ್ ಆಸೆ ಪಟ್ಟು ಎದುರಿನ ವಿದ್ಯುತ್ ತಂತಿಯ ಮೇಲೆ ಮದುವೆ ಉಟಕ್ಕೆ ಕುಳಿತ ಪಂಕ್ತಿಯಂತೆ ಕೂಡುತ್ತಿದ್ದ ಮುದ್ದು ಮುಖದ ಗುಬ್ಬಿಗಳು.

ನನ್ನ ಕೆಲಸ ಮುಗಿಯಿತೆಂದ ಕೂಡಲೇ, ನಾನು ಅವನ್ನು ನೋಡುತ್ತಾ ಕುಳಿತು ಬಿಡುತ್ತಿದ್ದೆ. ನೋಡಲು ಒಂದೇ ರೀತಿ ಕಂಡರೂ ಅವುಗಳ ಆಕಾರ, ಗಾತ್ರ,ಅವುಗಳ ಚರ್ಯೆ ಬೇರೆಯೇ ಆಗಿರುತ್ತದೆ. ಹತ್ತಿರದಿಂದ ನೋಡಲು ಸಿಗುತ್ತಿದ್ದರಿಂದ ನಾನು ಅವನ್ನು ಗುರುತಿಸ ತೊಡಗಿದ್ದೆ. ಹಾಗೊಂದ್ ದಿನ ನಾನೂ ಕಿಟಕಿಯ ಹೊರಗಿನ ಪುಟ್ಟ ಜಾಗೆಯಲ್ಲೇ ಒಂದಷ್ಟು ಅಕ್ಕಿ ನುಚ್ಚು ಎಸೆದು ಅವಕ್ಕಾಗಿ ಕಾಯುತ್ತ ಕುಳಿತೆ..ಹಾಗೆ ಬಂದೇ ಬಿಡುತ್ತವೆಯೇ ಅವು..?????ಕಾಯಿಸಿದವು..ನಾನೂ ಕಾದೆ ೧..೨..೩...೪...ಹೀಗೆ ದಿನ ಕಳೆದರು ಅವು ಬರಲಿಲ್ಲ. ಅದೊಂದು ದಿನ ಪುಟ್ಟ ಮರಿ ಗುಬ್ಬಿ ನನ್ನ ಕಿಟಕಿಯ ಮೇಲೆಸೆದ  ನುಚ್ಚಿನ ರುಚಿ ನೋಡಲು ಬಂದಿತ್ತು.

ಮೊದಲು ಅದಕ್ಕೂ ಹೆದರಿಕೆ! ಆಮೇಲೆ ಅದು ತನ್ನ ಪರಿವಾರದೊಂದಿಗೆ ಬರ ತೊಡಗಿತು. ಆಮೇಲೆ ದಿನಾಲೂ . ಸಂಖ್ಯೆ ಹೆಚ್ಹಾಗ ತೊಡಗಿದಂತೆ ಒಮ್ಮೆ ಹಾಕಿದರೆ ಸಾಕಾಗದು ಮತ್ತೆ ಮತ್ತೆ ಹಾಕು ಎಂಬಂತೆ ಜಗಳವಾಡುತ್ತಿದ್ದವು. ಅವುಗಳೊಂದಿಗೆ ಒಂದು ಘಟ್ಟಿ ಬಾಂಧವ್ಯ ಬೆಳೆಯತೊಡಗಿತ್ತು. ಇಲ್ಲಿ ಮಾತಾಡಿ ಹಾಳಾಗುವ,ಮಾತಿನ ಇನ್ನೊಂದು ಅರ್ಥ ಹುಡುಕುವ ಪ್ರಮೇಯ ಇರಲಿಲ್ಲ..ಚೀಕ್ ಚಿಕ್ ..ಚೆಂವ್ವ್...ಎಂಬುದನ್ನು ನಾನೂ ನನಗೆ ಬೇಕಾದಂತೆ ಅರ್ಥೈಸ ತೊಡಗಿದ್ದೆ..ಅವುಗಳೊಂದಿಗೆ ಮಾತಾಡುತ್ತಿದ್ದೆ. ಜಗಳ ಮಾಡುತ್ತಿದ್ದೆ   ವಿಚಿತ್ರ ಎಂದರೆ ಅವು ನನ್ನ ಮಾತಿಗೆ ಪ್ರತಿಕ್ರಿಯಿಸುತ್ತಿದ್ದವು ಇದನೆಲ್ಲಾ ನನ್ನ ಪಪ್ಪನಿಗೆ ಫೋನ್ ಮಾಡಿ ಸಂತಸ ಪಡುತ್ತಿದ್ದೆ..ಭಾವುಕ ಜೀವಿಗೆ ಇದೊಂದು ಅಪೂರ್ವ ಅನುಭವ. ವಾಸ್ತವ ವಾದಿ ನನ್ನ ಪತಿ ಕೂಡ ಇದನ್ನು ಆನಂದಿಸ  ತೊಡಗಿದ್ದರು.ಆದಿನ ಕಿಟಕಿಯ ಬಾಗಿಲು ತೆರೆದಿತ್ತು ನಾವು ನಮ್ಮ ಕೋಣೆಯಲ್ಲಿದ್ದೆವು, ಏನೋ ಸದ್ದು ಎರಡು ಗುಬ್ಬಿಗಳು!!!ಸೀದಾ ಒಳಬಂದು ಹಾರಡ ತೊಡಗಿದ್ದವು..ಆದಿನ ನಾ ಅನುಭವಿಸಿದ್ದ ಆ ಸಂತಸ ಅದೆಷ್ಟು ಮಧುರ...

ಅದೆಷ್ಟು ಬೇಗ ಸಮಯ ಸರಿಯಿತು ತಿಳಿಯಲೇ ಇಲ್ಲ. ನಾನೂ‌ ಬಾಣಂತನಕ್ಕೆ ಅಮ್ಮನ ಮನೆಗೆ ಹೊರಟು ನಿಂತೆ. ಅವಕ್ಕೂ ಟಾಟ ಹೇಳಿದ್ದೆ. ಆಮೇಲೆ ನಾ ಬಂದಿದ್ದು ೭ ತಿಂಗಳ ನಂತರ. ಅಲ್ಲಿ ತನಕ ಸ್ಥಗಿತ ವಾಗಿದ್ದ, ನಮ್ಮ ಮಾತುಕತೆ ಮತ್ತೆ ಪ್ರಾರಂಭವಾಗಿತ್ತು .
ನಮಗೂ ಗೊತ್ತಾಗದಷ್ಟು ವೇಗದಲ್ಲಿ ನಮ್ಮ ನೆಲೆ ಬದಲಿಸಬೇಕಾಗಿ ಬಂತು.‌ಮತ್ತೆ ಅವುಗಳಿಂದ ದೂರವಾಗಿದ್ದೆ. ಅಷ್ಟೊತ್ತಿಗಾಗಲೇ ಗುಬ್ಬಿಗಳೊಂದಿಗೆ ಕಾಡು ಪಾರಿವಾಳಗಳು ಜೊತೆಯಾಗಿದ್ದವು...ಅವುಗಳನ್ನು ಬಿಟ್ಟು ಬರುವಾಗ ಆದ ಸಂಕಟ ಯಾರೊಂದಿಗೂ ನಾ ಹಂಚಿ ಕೊಳ್ಳಲಿಲ್ಲ  ಹೇಳಲು ಏನಿತ್ತು???..ಸಾಕಿದ ಹಕ್ಕಿಗಳಲ್ಲ ನನ್ನ ನಂಬೇ ಬಂದವುಗಳಲ್ಲ ಆದರೂ ನನ್ನ ಏಕತಾನತೆಗೆ ಸಂಗಾತಿ ಯಾಗಿ ಒಲುಮೆಯ ಬಾಂಧವ್ಯ ಬೆಸೆದಿದ್ದವು. ಮಾತು ಬರುವ ಮನುಷ್ಯರಿಗಿಂತ ಮಾತು ಬರದ ಈ ಜೀವಿಗಳೇ ಸಾವಿರಪಾಲು ಲೇಸು ಎನಿಸಿದ್ದು ಸುಳ್ಳಲ್ಲ..

ನಂತರ ಮತ್ತೊಂದು ಹಕ್ಕಿಯ ಜೊತೆ ಒಡನಾಟ ಆಯ್ತು. ಆ ಹಕ್ಕಿಯ  ಹೆಸರು ನನಗೆ ಗೊತ್ತಿಲ್ಲ. ಕನ್ನಡಿಯಲ್ಲಿ ತನ್ನ ಬಿಂಬ ಕಂಡು ಅದನ್ನು ಕುಕ್ಕುತ್ತ ಕುಳಿತು ಕೊಳ್ಳುತಿತ್ತು.ಮನೆಯ ಜಗಲಿಯಲ್ಲಿ ನೇತು ಹಾಕಿದ ಒಂದು ಪ್ರಕೃತಿಯ         ಚಿತ್ರಕ್ಕೆ ಬಂದು ಏನೋ ಹುಡುಕುತಿತ್ತು...ಅದೇ ಹಕ್ಕಿ..ಗೊರಟ್ಟಿಗೆ ಗಿಡಕ್ಕೆ ಗೂಡು ಕಟ್ಟಿ ಸಂಸಾರ ಹೂಡಿತ್ತು(..ಅದರ ಕುರಿತು ಬರೆದ ಬರಹ http://bhavanaloka.blogspot.com/2010/12/blog-post_9354.ಹ್ತ್ಮ್ಲ್ ಇಲ್ಲಿ ಓದಬಹುದು..)

ನಂತರ ಈ ನಾಡಿನಲ್ಲಿ(Northern Ireland)
ನಾ ಬಂದ ದಿನದಿಂದಲೇ ಇಲ್ಲಿ ಸ್ನೌಫಾಲ್  ಮೆತ್ತಗೆ ಆರಂಭ ಗೊಂಡಿತ್ತು‌ ಆಗೆಲ್ಲ ಹಾರಾಡುತ್ತಿದ್ದ ಹಕ್ಕಿ ಕಂಡು ಅಂದು ಕೊಳ್ಳುತ್ತಿದ್ದೆ ಅದೆಷ್ಟು ಛಳಿ ಆಗುತ್ತಿರಬಹುದು ಇವಕ್ಕೆ..????ಈ ಸಮಯದಲ್ಲೇ ಅಲ್ಲವೇ ಅವು ಸಾವಿರಾರು ಮೈಲಿ..ವಲಸೆ ಹೋಗುವುದು..ನನ್ನೂರ ಹತ್ತಿರ ಇರುವ ಅತ್ತಿವೆರಿ  ಪಕ್ಷಿ ಧಾಮಕ್ಕೆ ಬಂದು ಗೂಡು ಕಟ್ಟಿ ಸಂಸಾರ ಮಾಡಿದ ಹಕ್ಕಿಗಳು ಇಲ್ಲೂ ಇರಬಹುದ????ಹಾಗೆ ಏನೇನೋ ಆಲೋಚನೆಗಳು.ಮತ್ತು ಇಲ್ಲಿ ಯಾವ ಪಕ್ಷಿಯೊಂದಿಗೆ ನನ್ನ ಬಂಧ ಬೆಳೆಯಲಿದೆಯೋ????ಮನಸ್ಸು ಯಾವಾಗಲಾದರೊಮ್ಮೆ ಕೇಳಿದ್ದು ಸುಳ್ಳಲ್ಲ...

ಹಾಗೆ ಕೇಳಿಕೊಂಡ ಕೊಂಚ ದಿನಕ್ಕೆ ಹಿತ್ತಲಲ್ಲಿ ಪಕ್ಷಿಗಳ ಇಂಚರ..ಆದರೂ ನಾ ಗಮನಿಸಲಿಲ್ಲ..ಗೂಡು ಕಟ್ಟಲು ಮರವು ಇಲ್ಲ‌ ಮತ್ಯಾವ ರೀತಿಯಲ್ಲೂ ಸೂಕ್ತವಲ್ಲದ ಯಮಗಾತ್ರದ  ಸಿಮೆಂಟು ಗೋಡೆಗಳು, ಅಲ್ಲಿ ಹೇಗೆ ಗೂಡು ಕಟ್ಟಿಯಾವು????
ನನ್ನ ಸಂದೇಹ ಮರುದಿನವೇ ಮಾಯಾ. ಅಲ್ಲೊಂದು ಗೂಡು ಅದೂ ಮಣ್ಣಿನ ಗೂಡು. ಹಕ್ಕಿಗಳು ಮಣ್ಣಿನಿಂದ ಗೂಡು ಕಟ್ಟುತ್ತವೆಯೇ????ನಾನು ಹಕ್ಕಿಗಳ ಬಗ್ಗೆ ಅಷ್ಟೇನೂ ಓದಿಕೊಂಡಿಲ್ಲ ಆಗ ಆ ಗೂಡ್ನಲ್ಲಿ ಪುಟ್ಟ ಪುಟ್ಟ ನಾಲ್ಕು ಮರಿಗಳು..ತುಂಬಾ ಆಯಕಟ್ಟಿನ ಸ್ಥಳದಲ್ಲಿ ಗೂಡು ಇದ್ದಿದ್ದ ರಿಂದ ಮರಿಗಳ ಫೋಟೋ ತೆಗೆಯಲು ಹೋಗಿ ಪ್ರತಿಬಾರಿ ಸೋತು ಹೋಗುತ್ತಿದ್ದೆ.ಹಕ್ಕಿಗಳು  ಹೆದರುತ್ತಿದ್ದವು..ಅಧ್ಯೇಗೋ ಮಾಡಿ ಒಂದು ಚಿತ್ರದಲ್ಲಿ ಈ ಹಕ್ಕಿ ಮರಿಗಳು ಸೆರೆಯಾದವು.

ಸ್ವಲ್ಪ ದಿನದ ನಂತರ ಹಾರಾಡಲು ಕಲಿಸುತ್ತಿದ್ದ ಅಮ್ಮ..ಕಲಿಯುತ್ತಿದ್ದ ವಿಧೇಯ ಮರಿಗಳು. ಅವು ಹಾರಿ ಹೋಗಲು ತಯಾರಿ ನಡೆಸಿದ್ದವು. ಯಾಕೋ ಆದಿನ ಭಾಳ ಬೇಜಾರಾಗಿತ್ತು.ಒಂದು ವಾರ ಕಳೆದಿತ್ತಷ್ಟೆ ಮತ್ತೆ ಗೋಡೆಗೆ ಗೂಡು. ಹಸಿ ಮಣ್ಣಿನ ಸುವಾಸನೆ, ಮತ್ತೊಂದು ಮಗದೊಂದು ಗೂಡು. ಮೊಟ್ಟೆ, ಆದರೆ ಆ ಹಕ್ಕಿ ಇನ್ನೂ ನನಗೆ ಅಪರಿಚಿತ ಗೂಡಿನ ಚಿತ್ರ ತೆಗೆದು ಫೆಸ್ಬುಕ್ ನಲ್ಲಿ ಹಾಕಿದೆ. ಬೆಂಗಳೂರಿನ  ಅಂಜಲಿ ರಾಮಣ್ಣ, ೨ ನಿಮಿಷಕ್ಕೆ  ಪ್ರತಿಕ್ರಿಯಿಸಿದರು..THE BARN SWALLOW. ಸರಿ ಕನ್ನಡದ ಹೆಸರೇನು???ಆಗ ಮತ್ತೊಂದು ಪ್ರತಿಕ್ರಿಯೆ. ಧಾರವಾಡದ ಹರ್ಷವರ್ಧನ್ ಶೀಲವಂತ್ ಅವರು ಆ ಹಕ್ಕಿಯ  ಕನ್ನಡದ ಅದೆಷ್ಟು ಚಂದದ ಹೆಸರು ಬರೆದಿದ್ದರು..''ಅಂಬರ ಗುಬ್ಬಿ''ಹೆಸರು ಕೇಳಿಯೇ ರೋಮಾಂಚನ ಆಗಿತ್ತು..ಗೆಳತಿ ಅಂಜಲಿ‌ ಬಾಣಂತನ ಕ್ಕೆ ಅಂಟಿನ್ಉಂಡೆ  ಕಳಿಸಲ ಅಂದ್ರು.

ಇಲ್ಲಿಯ ಹೆಣ್ಣುಮಕ್ಕಳು ಹೆರಿಗೆಯ ನಂತರ ಮಗುವನ್ನು ಬಾಸ್ಕೆಟ್ ನಲ್ಲಿ ಹಾಕಿಕೊಂಡು‌ ಡ್ರೈವ್ ಮಾಡುತ್ತಾರೆ ಹಕ್ಕಿಗಳ ಕತೆ ಏನೋ ಯಾರಿಗ್ಗೊತ್ತು ಅಂದೆ.ಆಗ ಹೇಳಿದ ಮಾತು ಮಾತ್ರ ಮನ ತಟ್ಟಿತ್ತು..''ಏನೇ ಹೇಳಿ ಅಮಿತಾ ಗೂಡು ಕಟ್ಟಿ ಮರಿ ಮಾಡಿ ಮಾತೃತ್ವ ಪಡೆಯುವ ಆ ಆನಂದದ ಮುಂದೆ ಬೇರೆಲ್ಲವನ್ನೂ ನಿವಾಳಿಸಿ ಎಸೆಯಬೇಕು..''ನಿಜ ಅಲ್ಲವೇ? ಬೇರೆಲ್ಲ ವಿಷಯದಲ್ಲಿ ಮನುಷ್ಯ ಸಾಕಷ್ಟು  ತನ್ನದನ್ನು ಸಾಧಿಸಿರಬಹುದು.ಆದರೆ ಮನೇ ,ಮಗು ಮತ್ತು ಅವುಗಳ ಆರೈಕೆ ಬೆಳವಣಿಗೆಯ ವಿಷಯದಲ್ಲಿ ಮಾತ್ರ ಹಕ್ಕಿಯ ಜಾಡನ್ನೇ ಹಿಡಿದ.‌ಆತ ಮಾಡಿದ ಒಂದೇ ಒಂದು ಹೆಚ್ಚುಗಾರಿಕೆ ಎಂದರೆ , ಮಕ್ಕಳನ್ನು ಬೆಳೆಸಿ ಅವುಗಳಿಂದಲೂ ಅದೇ ತೆರನಾದ ಪ್ರೀತಿ ಮಮತೆ ಬಯಸಿದ. ಆದರೆ ಹಕ್ಕಿ ಮಾತ್ರ ತನ್ನ ಕರ್ತವ್ಯ ಮಾಡಿ ತನ್ನಷ್ಟಕ್ಕೆ ಸುಮ್ಮನಾಯಿತು..

ಅದ್ಯಾಕೆ ಇಂತದ್ದೆಲ್ಲ ನನ್ನ ಕಣ್ಣಿಗೆ ಬೀಳುತ್ತೆ ????ಒಂದು ಪುಟ್ಟ ಹಕ್ಕಿ ಮನಸಿನಲ್ಲಿ ಮೂಡಿಸುವ ಭಾವಗಳು ಸಾವಿರ.ಭಾವಗಳನ್ನು ಬೆಳೆಸಲೆಂದೇ ಬಾಂಧವ್ಯ ಬೆಳೆಯುತ್ತವೆಯ???ಸಾವಿರ ಆಲೋಚನೆಗಳ ಇಂಚರ. ಸಧ್ಯಕ್ಕೆ ನಾನು ಅಂಬರ ಗುಬ್ಬಿಯ ಮರಿಗಳೊಂದಿಗೆ ಬ್ಯುಸಿಯೋ ಬ್ಯುಸಿ. ನೀವು ಒಮ್ಮೆ ನಿಮ್ಮ ಅಕ್ಕ ಪಕ್ಕ ಕಣ್ಣು  ಹೊರಳಿಸಿ..ಅಲ್ಲೊಂದು ಪುಟ್ಟ ಮೂಕ ಜೀವಿ ನಿಮ್ಮ ಒತ್ತಡಗಳಿಗೆ  ಮಾತಿಲ್ಲದೆ ಸಾವಿರ ಸಮಾಧಾನ ಹೇಳಬಹುದು. ಒಮ್ಮೆ ಪ್ರಯತ್ನಿಸಿರಿ..ನನ್ನ ಅಂಬರ ಗುಬ್ಬಿಗಳಿಗೆ ನಿಮ್ಮ ಒಲುಮೆ ಹಾರೈಸಿ...

( ೨೮/೦೮/೨೦೧೧ ವಿಜಯ ಕರ್ನಾಟಕ ಸಾಪ್ತಾಹಿಕ ಲವಲವಿಕೆ ಪುರವಣಿಯಲ್ಲಿ ಪ್ರಕಟಿತ )

Monday, August 22, 2011

ಪೋಸ್ಟ್ ಕಾರ್ಡ್ ನಲ್ಲಿ ಉಳಿದು ಹೋದ ಬದುಕು


 ಪತ್ರವೊಂದನು ಬರೆಯದೆ ಎಷ್ಟು ದಿನ ಕಳೆಯಿತು???ಪ್ರಶ್ನೆ...ಹಳೆಯದು...ಇಮೇಲ್,,ಮೊಬೈಲ್ ಮೆಸೇಜ್ ,,,,ಟೆಲಿಫೋನ್ ಭರಾಟೆಯಲ್ಲಿ ಪೆನ್ನು ಕಾಗದಗಳು ಬರೀ ಸಾಂಕೇತಿಕವಾಗಿ ಉಳಿದಿವೆ...ಸಮಯ ಉಳಿತಾಯ..ತತ್ಪರ ಸೇವೆಯಿಂದ...ಈ ನವಯುಗದ ಸಂದೇಶ ಮಾಧ್ಯಮಗಳು ಒಳ್ಳೆಯದು ಹೌದು...ಪತ್ರ ಬರೆಯುವುದು ಹಳೆ ಸ್ಟೈಲು..ಎನ್ನುವುದು ಹಲವರ ಅಂಬೋಣ...ಮತ್ತೆ ಕೆಲವಷ್ಟು ಬಾರಿ ಪತ್ರ ಬರೆಸಿಕೊಂಡವರು ಅದಕ್ಕೆ ಜವಾಬು ಕೊಡದೆ....ಅಂಥ ಸುಂದರ ಅಕ್ಷರ ಬಾಂಧವ್ಯದ ಯೋಗ್ಯರಾಗುವುದೇ ಇಲ್ಲ.....ಪ್ರೇಮಪತ್ರಗಳ ಜಾಗವನ್ನು ಮುದ್ರಿತ ಗ್ರೀಟಿಂಗ್ ಕಾರ್ಡ್ ಗಳು ಆಕ್ರಮಿಸಿದವು....ಹೀಗೆ ಪತ್ರಗಳು....ಗತಕಾಲದ ವೈಭವ ವಾಗಿಬಿಟ್ಟವು......
ಸರಿ..ಪತ್ರ ಬರೆಯೋದು ಬೇಡ....ಹಳೆಯ ಪತ್ರಗಳನ್ನು ಓದದೆ ಎಷ್ಟ್ ದಿನ ಆಯಿತು...???????
ಪತ್ರಗಳಲ್ಲೂ ಹಲವು ವಿಧಗಳಿವೆ...ಶುದ್ಧ ವ್ಯವಹಾರಕ್ಕೆ ಬರೆದ ಪತ್ರಗಳು...ಪ್ರೇಮಕ್ಕೆ...ಮಮಕಾರಕ್ಕೆ  ಆಮಂತ್ರಣಕ್ಕೆ.ಆಯಾ ವಿಷಯಕ್ಕೆ ತಕ್ಕಂತೆ...ಪತ್ರದ ಅಳತೆಯು ನಿರ್ಧಾರವಾಗುತ್ತದೆ ಪುಟಗಟ್ಟಲೆ ಬರೆದ ಪತ್ರಗಳು ಕೆಲವೊಮ್ಮೆ ಬೋರು ಹೊಡೆಸಿರಬಹುದು..  ನೀಲಿ .ಅಂತರ್ದೆಶಿಯ ಪತ್ರದ ಮಡತೆಯಲ್ಲಿನಾಲ್ಕೇ ಸಾಲು ನೋಡಿ ನಿರಾಸೆಯೂ ಆಗಿರಬಹುದು...ಆದರೆ ಪೋಸ್ಟ್ ಕಾರ್ಡ್ ಆಕಾರದಲ್ಲಿ ಚಿಕ್ಕದಾದರೂ...ಅದು ಹೇಳಬೇಕಾದ್ದನ್ನು ಸರಳವಾಗಿ ಹೇಳಿ ಬಿಡುತ್ತದೆ....
ಅಂಥ ಪೋಸ್ಟ್ ಕಾರ್ಡುಗಳನ್ನು... ನಮ್ಮ ತಂದೆ  ಚಿನ್ನದ ಹಾಳೆಗಳೆನೋ..ಎನ್ನುವಷ್ಟು ಜಾಗ್ರತೆಯಿಂದ ಕೂಡಿತ್ತಿದ್ದಾರೆ ೧೯೪೧ ರಿಂದ ೨೦೧೦ ರತನಕದ ಕಾರ್ಡುಗಳಿವೆ.. ಸಮಯ ಸಿಕ್ಕಾಗ..ಮನೆಗೆ ಯಾರಾದರು ಬಂದಾಗ ಫೋಟೋ ಅಲ್ಬುಮ್ಗಳಂತೆ ಈ ಪೋಸ್ಟ್ ಕಾರ್ಡ್ ಗಳು ನೆನಪ ಬುತ್ತಿಯನ್ನು ಬಿಚ್ಚಿಡುತ್ತವೆ....
ಪೋಸ್ಟ್ ಕಾರ್ಡ್ಗಳಲ್ಲಿ ಬರೆದವರು ಪಾತ್ರಗಳಾದವರು........ಹಲವರು...ಕೆಲವರ ಬದುಕು ಸಂಪೂರ್ಣ ಬದಲಾಗಿದೆ...ಕೆಲವರು ಈಗ  ಬದುಕೇ ಇಲ್ಲ ...ಅವೆಲ್ಲ ಪತ್ರಗಳನ್ನು ಓದಿದ ನಂತರ ಹಲವು ಭಾವಗಳು ಮನದಲ್ಲಿ ಹಾದು ಹೋಗುತ್ತವೆ...ಅಂಥ ಮೂರು ದಶಕಗಳ ಪ್ರತಿನಿಧಿಗಳಂತೆ...ಮೂರು ಕಾರ್ಡ್ಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ...ಹೆಚ್ಹು ಸೆಳೆದಿರುವ ...ಮತ್ತು ಕಾರ್ಡ್ ಓದಿದ ನಂತರ ನಡೆದ ಘಟನೆಯನ್ನು ಅರಿಯಲು ಪ್ರಯತ್ನಿಸಿ.. ಬದುಕನ್ನು...ಕೆಲ ಸಾಲುಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡಿರುವೆ...ಕಾಲ ಸವೆದು ಹೋಗಿದೆ...ಬದುಕು ಈ ಕಾರ್ಡ್ ಗಳಲ್ಲಿ ಉಳಿದು ಹೋಗಿದೆ....



ಪೋಸ್ಟ್ ಕಾರ್ಡ್ -1

ಸಾಂಪ್ರತ                                                     ೧೭/೦೨/೧೯೭೦     
..............................................
................................................
ಮಂಜಗುಣಿಯಲ್ಲಿ ವರನೊಬ್ಬ ನಿರುವ ಬಗ್ಗೆ ಗೊತ್ತಾಗಿದೆ..ಅಮ್ಮ ಹೇಳುವಂತೆ
 ಸೌ.ಕಮಲಿನಿ ಗೆ  ಈ ಸಂಭಂಧ ಹೇಳಿ ಮಾಡಿಸಿದ್ದಂಥದ್ದು
ವರ ಪೋಸ್ಟ್ಮ್ ಮನ್ ನಾಗಿ ಕೆಲಸ ಮಾಡುತ್ತಿದ್ದು ತನ್ನದೇ ಸ್ವಂತ  ಜಮೀನು ಹೊಂದಿದ್ದಾನೆ.ತಂದೆ ಇಲ್ಲ
 ತಾಯಿಯು ವಯಸ್ಸದುದರಿಂದ ಆದಷ್ಟು ಬೇಗ ಮದುವೆ ಮಾಡಿಬಿಡಬೇಕು.ಎಂಬದು ಹುಡುಗನ ದೊಡ್ಡಪ್ಪನ 
ವಿಚಾರ.ಆದ ಕಾರಣ ತಾವು ಮತ್ತು ಅಕ್ಕ ಬಂದು ಅಮ್ಮನೊಂದಿಗೆ ಮಂಜುಗುಣಿ ಗೆ ಹೋಗಿ ಬನ್ನಿ..
ಮತ್ತೇನು ವಿಶೇಷ ವಿಲ್ಲ.ನಮ್ಮ ಮನೆಯ ಕೆಂಪಿ ಕಂದು ಹಾಕಿತು.ಇದು ಎರಡನೇ ಸಲ.ಮತ್ತೆ ಹೀಗೆ ಆದರೆ ಅದನ್ನು 
ಮಾರಾಟ ಮಾಡುವುದು ಎಂಬ ಆಲೋಚನೆ ಇದೆ......ಮಕ್ಕಳಿಗೆಲ್ಲ ಆಶಿರ್ವಾದ..ಮತ್ತು ಪ್ರೀತಿ....
ಮತ್ತೆಲ್ಲ ಆರಂ 
ಇಂತಿ ತಮ್ಮ 
ರಾಮದಾಸ.
...............................ಕಮಲಿನಿಗೆ  ಮದುವೆ ಗೊತ್ತಾಯಿತು ...ಅದು ಎರಡನೇ ಸಂಬಂಧ.ಮೊದಲೇ ೪ ಮಕ್ಕಳಿದ್ದವು...ಆಕೆ ಒಪ್ಪುವ ಮೊದಲೇ ತನ್ನ ಮನದಲ್ಲಿದ್ದದ್ದನ್ನು ಹೇಳಿ ಬಿಟ್ಟಿದ್ದಳು..೪ ಮಕ್ಕಳಿಗೆ ತಾಯಿ ಆಗಲೂ ನಾ ಸಿದ್ಧ..ಆದ್ದರೆ ವರನಿಗೆ ಕುಡಿತದ ಅಭ್ಯಸವೊಂದು ಇರದಿದ್ದರಷ್ಟೇ..ಸಾಕು.
..ಮನೆಯಲ್ಲಿ ತನ್ನ ಬೆನ್ನಿಗೆ ವಯಸ್ಸಿಗೆ ಬಂದ ತಂಗಿಯರು..ತಮ್ಮಂದಿರು...ತನ್ನನ್ನು ಮದುವೆ ಆಗುವವ ಒಳ್ಳೆ ಅನುಕೂಲಸ್ತ..ತನ್ನಿಂದ ತವರಿನ  ಪರಿಸ್ತಿತಿ ಸುಧಾರಿಸಿದರೆ ಅದೇ ಒಂದು ನೆಮ್ಮದಿ....ಮಕ್ಕಳೇನು ???ಇಲ್ಲಿ ಚಿಕ್ಕ ತಂಗಿ ತಮ್ಮಂದಿರನ್ನು ಸಾಕಿಲ್ಲವೇ??ಹಾಗೆ..ಮುದ್ದು ಪ್ರೀತಿಯಿಂದ ಎಲ್ಲವನ್ನು ಗೆಲ್ಲಲು ಸಾಧ್ಯ...
ಸಂಬಂಧ ತಂದವ ಹತ್ತಿರದ ಸಂಬಂಧಿ...ಎಲ್ಲಕ್ಕೂ ಹೂ ಅಂದು ಅದನ್ನು ಹೊಂದಿಸಿದ್ದ ..ಮದುವೆಯು ಆಯ್ತು...ಮೊದಲ ವಾರದಲ್ಲೇ..ಗೊತ್ತಾಯಿತು..ತಾನು ಏನು ಇರಬಾರದು ಅಂದು ಕೊಂಡಿದ್ದಲೋ..ಅದರ ನಷೆಯಲ್ಲೇ...ಮತ್ತ ....ತೂ..ರಾ..ಡು...ತ್ತ.....ನಾಲ್ಕು ವರ್ಷದಲ್ಲಿ ಎರಡು ಮಕ್ಕಳು...ಬದುಕು...ಹೇಗೋ ಸಾಗಿತ್ತು....
ತವರಿಗೆ ತನ್ನ ಮನೆಯ ಗುಟ್ಟು ಎಂದು ಬಿಟ್ಟು ಕೊಡಲಿಲ್ಲ...ಒತ್ತಡದಲ್ಲಿ ಒರಟು ಮಾತುಗಳು ಬರುತ್ತಿದ್ದವು....ಒಡಲಲ್ಲಿ ಎರಡು ಮಕ್ಕಳು...ಅಷ್ಟರಲ್ಲಿ ಆತ ಇಲ್ಲವಾದ ಅನುಕೂಲ ಗಳೆಲ್ಲ ಮರೆಯಾದವು..ಸಂಭಂಧಿಗಳು ಪರಿಚಯವಿಲ್ಲವೇನೋ...ಎಂಬಂತೆ ವರ್ತಿಸಿದರು..
ನಂತರ ????? ಕಲಿತ ಹೊಲಿಗೆ,ಕೈ ಹಿಡಿದಿತ್ತು...ಬಡತನ ಬಾಲ್ಯದಿಂದಲೇ ಸ್ವಾಭಿಮಾನ ಕಲಿಸಿತ್ತು...ಸಾಕೆ???ಅಂಗಡಿಗೆ ಸಾಮಾನು ಕಟ್ಟುವ ಕಾಗದದ ಪೊಟ್ಟಣ..ಶಾವಿಗೆ ಹಪ್ಪಳ..ಆಕೆ ಎಲ್ಲವನ್ನು ಮಾಡಿದಳು.............
ಕಷ್ಟ ,???ಹಾಗೆಂದರೇನು???ಊಹ್ಹ್ ಅದಾ???ನನ ಆತ್ಮೀಯ ಗೆಳತಿ...ಅನ್ನೋ ಮಟ್ಟಕ್ಕೆ ಘಟ್ಟಿ ಆಗಿತ್ತು ಮನಸು......................ಇಷ್ಟೆಲ್ಲಾ ಆದ ನಂತರ ನನಗನಿಸಿದ್ದು.....;-ಕಮಲಿನಿ ಮಂಜುಗುಣಿಯ ವರನೊಂದಿಗೆ ಮದುವೆ ಆಗಿದ್ದರೆ????ಆರಾಂ ಇರುತ್ತಿದ್ದಳೆನೋ.....ಯಾಕೆ ಆ ಸಂಭಂಧವನ್ನು ಮುಂದುವರಿಸಲಿಲ್ಲ..ಆಕೆಯ ಬದುಕು ಏನಾಗಿ ಹೋಯ್ತು ಛೇ...

ಪೋಸ್ಟ್ ಕಾರ್ಡ್ -೨
೧೩/೮/೧೯೫೬ 
ಆತ್ಮೀಯ ಭಾವ,
..................ಸೌ. ಇಂದಿರೆ ಗಂಡು ಮಗುವಿಗೆ ಜನ್ಮ ನೀಡಿದ್ದು ಮತ್ತು ಯಾವುದೊ ದೈಹಿಕ ತೊಂದರೆಯಿಂದ
 ಶಿಶು ತೀರಿಕೊಂಡಿದ್ದು ಕೇಳಿ ಅತೀವ ಕಷ್ಟ ಎನಿಸಿತು...ನಿಮಗಾದ ಬೇಸರಕ್ಕೆ ಹೇಗೆ ಸಮಾಧಾನ ಹೇಳಬೇಕು 
ಎಂಬುದು ತಿಳಿಯುತ್ತಿಲ್ಲ...
ನಿಮ್ಮ ಮನೆಯಲ್ಲಿ ಹಿಂಡುವ ಆಕಳೊಂದಿದೆ ಎಂಬುದನ್ನು ಮಾತು ಮಾತಲ್ಲಿ ಹೇಳಿದ ನೆನಪು..
.ಸಧ್ಯಕ್ಕೆ ಶಾರದೆಗೆ ಎದೆಹಾಲು ಸಾಕಾಗುತ್ತಿಲ್ಲ ಹೀಗೆ ಬಿಟ್ಟರೆ ಶಿಶು ದಿನದಿಂದ ದಿನಕ್ಕೆ ಕೃಷ ವಾಗುತ್ತ..ಜೀವಕ್ಕೆನಾದರು ಆದೀತು
ಎಂಬ ಹೆದರಿಕೆ ಕಾಡುತ್ತಿದೆ...ದಯಮಾಡಿ ಕೆಲದಿನಗಳ ಮಟ್ಟಿಗೆ..ಆಕಳನ್ನು ಇಲ್ಲಿ ಕಳಿಸಿದರೆ ಜೀವ ಉಳಿಸಿದ ಪುಣ್ಯ ನಿಮಗೇ ಬರುತ್ತದೆ...
ಅವಕಾಶವಾದಿ ಅಂದುಕೊಳ್ಳದೆ..ದಯಮಾಡಿ ನನ್ನ ಅಗತ್ಯತೆ ಮನಗೊಂಡು ತಾವು ನನಗೆ...ಉಪಕರಿಸುತೀರಿ ಎಂದು ನಂಬಿದ್ದೇನೆ..
ಇಂತಿ ತಮ್ಮ 
ದತ್ತಾತ್ರೇಯ...
........................................ಇಂದಿರೆಗೆ ಮನಸು ಒಪ್ಪುತ್ತಿಲ್ಲ ...ಜೀವನಾಧಾರಕ್ಕೆ ಅಂತ ಇರುವುದು..ಅದೊಂದೇ ಆಸ್ತಿ..ಹೊಲದಲ್ಲಿ ಈ ಬಾರಿ ಬೆಳೆಯೇ ಇಲ್ಲ...ಹೈನ ಮಾರಿ ಕೊಂಚ ಅನುಕೂಲ ಆಗಿತ್ತು........ಅದನ್ನು ಕೊಟ್ಟು ಬಿಟ್ಟರೆ?????..ವಾಪಸು ಕೊಡುತ್ತಾರೋ ಇಲ್ಲವೋ..ಸತ್ತ ಮಗುವಿನ ದುಃಖ ಒಂದೆಡೆ ಆದರೆ ಇದ್ದವರ ಬದುಕು ನಡೆಸಬೇಕಾದ ಅನಿವಾರ್ಯತೆ ಒಂದೆಡೆ...ಸಂಬಂಧದ ಮರ್ಯಾದೆ ಒಂದೆಡೆ...ಎಷ್ಟಾದರೂ ತಂಗಿಯದೆ ಮಗು.ವಿಕಲ್ಪಗಳಿಲ್ಲದ ಸಮಸ್ಯೆ ಇರುವುದೇ???ಮಾಡುವುದಾದರೂ ಏನು???
ಮರುದಿನ ನಸುಕಿಗೆ  ಪತಿ...ವೈದೆಹಿಯನ್ನು ಕರೆದು ಕೊಂಡು ತಂಗಿಮನೆಗೆ ಹೊರಟುಹೋದರು...ಹೋಗುವಾಗ ವೈದೇಹಿಗೆ ಕುಂಕುಮವಿಟ್ಟು ಎರಡು ಚಮಚ ಎಣ್ಣೆ ಕಿವಿಗೆ ಬಿಟ್ಟು..ಕಾಲ್ಮುಗಿದು..ಬೇಗ ಬಾ...ನಿನ್ನ ಅಗತ್ಯವಿದೆ ನನಗೆ...ನೀನು ನನ್ನ ಮನೇ ಲಕ್ಷ್ಮಿ...ಅಂದು ಕಣ್ಣೀರು  ಸುರಿಸಿದ್ದಳು...ಇಂದಿರೆ...
ಪತಿ..ಸುಸ್ತಾಗಿ ಬಂದು ಕಲ್ಲು ಮಂಚದ ಮೇಲೆ ಮಲಗಿದ್ದರು...ಆಸರೆಗೆ...ಮಜ್ಜಿಗೆ ಕೊಡುವಾಗ...ಮತ್ತೆಂದೋ ಹೀಗೆ ಮಜ್ಜಿಗೆ ಕೊಡುವುದು ಅನ್ನಿಸಿ ವೈದೇಹಿ ಮತ್ತೆ ಮತ್ತೆ ನೆನಪಾದಳು...ಜೊತೆಗೆ ಆಕೆಯ ಪುಟ್ಟ ಕಂದ ಸೋಮಿ..ಅಲ್ಲೊಂದು ಆಕಳು ವೈದೇಹಿಯ ಬಣ್ಣದ್ದೇ...ಅರೆ ವೈದೆಹಿಯೇ...ಕಣ್ಣಲ್ಲಿ ನೀರು'''''
............................. ಮತ್ತೆ ವೈದೇಹಿ..ಸಾಯುವ ವರೆಗೂ..ಇಂದಿರೆಯ ಮನೆಯಲ್ಲೇ ಇದ್ದಳು....ಅಲ್ಲಲ್ಲ ತನ್ನ ಮನೆಯಲ್ಲೇ ಇದ್ದಳು

(ನನಗನ್ನಿಸಿದ್ದು...;-ಮನುಷ್ಯರಿಗಿಂತ ಪ್ರಾಣಿಗಳಿಗೆ ಸಂವೇದನೆ ಜಾಸ್ತಿಯೇನೋ...ತನ್ನ ಅಗತ್ಯ ನಿಜವಾಗಿ ಯಾರಿಗಿದೆ ಎಂಬುದು...ವೈದೆಹಿಯೇ ನಿರ್ಧರಿಸಿದ್ದಳು
...ಸಂಭಂಧಗಳಿಗೆ ಇಗಿರುವ ಬೆಲೆ ಏನು???)

ಪೋಸ್ಟ್ ಕಾರ್ಡ್ -೩
೨೫/೮/೧೯೬೨ 
ತೀರ್ಥರೂಪ ತಂದೆಯವರಲ್ಲಿ...
ನಿಮ್ಮ ಮಗಳು ಬೇಡುವ ಆಶಿರ್ವಾದಗಳು...ನಾನು ಆರಾಂ ಇದ್ದೇನೆ..ನಿಮ್ಮ ಕುಶಲತೆಯ ಬಗ್ಗೆ ತಿಳಿಸುತ್ತಿರಿ..
ಇಲ್ಲಿ ಮಳೆ ಇನ್ನು ನಿಲ್ಲುವ ಸೂಚನೆ ತೋರಿಸಿಲ್ಲ..ಬಟ್ಟೆಗಳು ಒಣಗುತ್ತಿಲ್ಲ..ಮನೆಮಂದಿಯ ಅಷ್ಟು ಬಟ್ಟೆಗಳನ್ನು
 ತೊಳೆದು ಹಾಕುತ್ತೇನೆ ಆದ್ದರಿಂದ..ಒಣಗಿಸಲು ಜಾಗವಿಲ್ಲ...ನಾಳೆ ಬಿಸಿಲು ಬಂದರೆ ..ಮಗುವಿನ ಹೊದಿಕೆಗಳನ್ನು ತೊಳೆದು ಹಾಕಬೇಕು..
ಅತ್ತೆ..ಶ್ರೀಮತಕ್ಕ,ವಸಂತ ಎಲ್ಲರು ಗೋಕರ್ಣ ಮುರುಡೆಶ್ವರಕ್ಕೆ ಹೋಗಿ ಬಂದರು,ಕಾಯಿ ಕೀಳುವವರು ಬರುತ್ತಾರೆ ಎಂದು ನಾನೆ ಹೋಗಲಿಲ್ಲ..
ಮಸಾಲೆ ಕಲ್ಲು ತುಂಬಾ ಸಣ್ಣದಿದೆ..ದೊಡ್ಡ ಕಲ್ಲು ತಂದರೆ ಶೇರು ಅಕ್ಕಿಯ ದೋಸೆ ಹಿಟ್ಟು ರುಬ್ಬಬಹುದು..ಅದಕ್ಕೆ ದೊಡ್ಡ ಕಲ್ಲು ತರುತ್ತಾರಂತೆ
ಅತ್ತೆಯವರಿಗೆ ನಾನು ರುಬ್ಬಿದರೆ ಸಮಾಧಾನ..
ನಿನ್ನೆ ಬದನೇಕಾಯಿ ಬಜ್ಜಿ ಮಾಡಿ ಮಾವಿನ ಹಿಂಡಿಗೆ ಪುಡಿ ಕುಟ್ಟಿ ಇಟ್ಟಿದ್ದೆ..ಮತ್ತೆ ಎರಡು ರೀತಿಯ ಪಲ್ಯ ಮಾಡಬೇಕಿತ್ತು
..ಶೈಲು ಕೈ ಬಿಡಲಿಲ್ಲವಾದ್ದರಿಂದ ಅತ್ತೆಯವರೇ ಮಾಡಬೇಕಾಯಿತು..ರಾತ್ರಿಯಿಡಿ ಕೈ ನೋವು ಎಂದು ನರಳುತ್ತಿದ್ದರು..ಪಾಪ..!
ನಾನೆ ಬೀಸಿನೀರ ಶಾಖ ಕೊಟ್ಟು ಉಪ್ಪಿನ ಎಣ್ಣೆ ಹಚಿದೆ...ರಾತ್ರಿ ಇಡಿ ನಿದ್ದೆ ಮಾಡಲಿಲ್ಲ ಅವರು ಪಾಪ.!
ಹಂಡೆ ದೊಡ್ಡದಿದೆ ಒಮ್ಮೆ ನೀರು ಕಾಯಿಸಿದರೆ ಮನೆಮಂದಿಗೆಲ್ಲ ಆಗುತ್ತೆ ಅಂತ ಸಂಜೆಯೇ ನೀರು ಕೆಳ ತೋಟದ ಭಾವಿಯಿಂದ ನೀರು ಸೇದಿ..
ಕಾಯಿಸಿಪ್ಪೆ ಹಾಕಿ ಹುರಿ ಹಾಕಿ ಇಡುತ್ತೇನೆ ಆದ್ದರಿಂದ...ಎಲ್ಲರ ಸ್ನಾನ ಬೇಗ ವಾಗಿ..ಕೆಲಸಕ್ಕೆ ಅನುಕೂಲವಾಗುತ್ತದೆ..
ಇದನ್ನು ವಸಂತನ ಕೈಯ್ಯಲ್ಲಿ ಪೋಸ್ಟ್ ಮಾಡಲು ಕೊಡುತ್ತೇನೆ..ಪತ್ರವನ್ನು ತಾಯಿಯವರಿಗೂ ಓದಲು ಕೊಡಿ ಉತ್ತರ ಜರೂರ್ ಬರೆಯಿರಿ ..
ತಂಗಿ ತಮ್ಮಂದಿರಿಗೆ ಪ್ರೀತಿ...ನಿಮ್ಮ ಆರೋಗ್ಯದ ಕಡೆ ಗಮನವಿರಲಿ...ನನ್ನ ಬಗ್ಗೆ ಚಿಂತೆ ಮಾಡಬೇಡಿ..ನಾನು ಆರಾಂ ಇದ್ದೇನೆ..
ಇಂತಿ ನಿಮ್ಮ ಮಗಳು
ಉಮಾ 
(ನನಗನ್ನಿಸಿದ್ದು.;-ಈ ಪತ್ರವನ್ನು ಅದೆಷ್ಟು ಬಾರಿ ಓದಿದ್ದೇನೆ ನನಗೆ ಗೊತ್ತಿಲ್ಲ.....ಅದೆಷ್ಟು ಗೌಪ್ಯತೆಯಿಂದ ತನ್ನ ಪರಿಸ್ತಿತಿಯನ್ನು ತವರಿಗೆ ತಿಳಿಸಿದ್ದಾರೆ...ಪತ್ರದ ಕೊನೆಯಲ್ಲಿ ತಾಯಿಯವರಿಗೆ ಪತ್ರ ಓದಲು ಕೊಡಿ ಎಂಬುದನ್ನು ಒತ್ತಿ ಬರೆದಿದ್ದರ ಹಿಂದೆ ಅದೆಷ್ಟು ಅರ್ಥ ಅಡಗಿದೆ..??ತಂದೆ ಆದವಗೆ ..ತನ್ನ ಮಗಳು ಕೊಟ್ಟ ಮನೆಯಲ್ಲಿ ಎಲ್ಲರ ನ್ನು ಅರ್ಥ ಮಾಡಿಕೊಂಡು ಸಂಸಾರದ ಬಂಡಿಯನ್ನು ಸರಿದಾರಿಯಲ್ಲಿ ಒಯ್ಯುತ್ತಿದ್ದಾಳೆ ಎಂಬ ಹೆಮ್ಮೆ ಆದರೆ...ತಾಯಿಗೆ ತನ್ನ ಮದ್ದಿನ ಮಗಳು ತನ್ನ ವಯಸ್ಸಿಗಿಂತ ಮೀರಿದ ಜವಾಬ್ದಾರಿ ಹೊತ್ತು ಅದೆಷ್ಟು ಕಷ್ಟ ಪಡುತ್ತಿದ್ದಾಳೆ..ಎಂಬ ಸಂಕಟ...ಹೆಣ್ಣು ಜೀವ ಅದೆಷ್ಟು ಸಂವೇದನಾಶೀಲ, ಎಲ್ಲಿ ಏನು ಎಷ್ಟು ಇರಬೇಕೋ ಅಷ್ಟಷ್ಟೇ ಒದಗಿಸುವ....ಒಂದು ನಿಸ್ಪೃಹ ಜೀವ ...ಆದರೆ ಶ್ರೇಯಸ್ಸು ಮಾತ್ರ ಯಾವತ್ತು ಅವಳ ಪಾಲಿಗಿಲ್ಲ ....)

ಇನ್ನೂ ಇವೆ  ಪೋಸ್ಟ್ ಕಾರ್ಡ್ ಗಳು ಅದರಲ್ಲಿ ....ಸುಮಾರು ,,ಹಲವಾರು ಬದುಕುಗಳು ಅವನ್ನು ಹುಡುಕುತ್ತ ಅವರಲ್ಲಿ ನನ್ನ ಅನ್ವೇಷಿಸುವ ನಾನು......
  

Tuesday, May 24, 2011

ಬಯಸಿದ್ದೆಲ್ಲ ನಮಗೇ ಸಿಗಬೇಕೆಂಬ ಹಠವಾದರೂ ಏಕೆ??


ಉಷಾ ಕಟ್ಟೆಮನೆ ಅವರ ಬ್ಲಾಗು ಓದುತ್ತಿದ್ದೆ ...ಪ್ರೆಮಿಸಿದವನ ಕಣ್ಣು ಕಿತ್ತ ಘಟನೆಯೊಂದರ ಕುರಿತಾದ ಬರಹವದು....ಅದನ್ನು ಓದುತ್ತ ಓದುತ್ತ ಹಸಿರಾದ ನೆನಪೊಂದನ್ನು ಅಕ್ಷರದಲ್ಲಿ ಬಂಧಿಸಿಡುವ ಪ್ರಯತ್ನ ಮಾಡುತ್ತಿರುವೆ...
ನಾನು  ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದ ದಿನಗಳವು...ನನ್ನೂರಿಂದ  ವಿಶ್ವವಿದ್ಯಾಲಯ ಸುಮಾರು ೭೪ ಕಿ ಮಿ ದೂರ..ದಿನ ಬೆಳಿಗ್ಗೆ ೮ ಕ್ಕೆ ನಾನು ಮನೆಯಿಂದ ಹೊರಡುತ್ತಿದ್ದೆ ..ಆ ಸಮಯದಲ್ಲಿ ಲಭ್ಯವಿದ್ದ ಬಸ್ಸುಗಳಲ್ಲಿ ವಿದ್ಯಾರ್ಥಿಗಳೇ ತುಂಬಿರುತ್ತಿದ್ದರು...ನಾ ಮುಂದು ನೀ ಮುಂದು ಎಂದು ಸೀಟು ಹಿಡಿಯೋದು...ಕಿಟಕಿಯಿಂದಲೇ ಕರ್ಚೀಪು ಎಸೆಯೋದು..ಹೇಗೋ ಒಂದು ಸೀಟು ಗಿಟ್ಟಿಸಿ ಕುಳಿತುಕೊಂಡರೆ ಹುಬ್ಬಳ್ಳಿ ತನಕ ಯಾವುದೊ ರಗಳೆ ಇಲ್ಲ....

ನಂತರ ಪುಟ್ಟ ಕಾಡು..ಬಿದಿರುಮೆಳೆ..ಬಾಚಣಿಕಿ ಡ್ಯಾಮ್ ..ಗಳನ್ನು ದಾಟಿದ ನಂತರ ಸಿಗುವುದು ತಡಸ್ ಎಂಬ ಪುಟ್ಟ ಊರು ..ಅಲ್ಲೊಂದಿಷ್ಟು ವಿದ್ಯಾರ್ಥಿಗಳು ತುಂಬುತ್ತಿದ್ದರು ...ಬಸ್ಸು ತುಂಬಿದ ಗರ್ಭಿಣಿಯಂತೆ..ಅಲ್ಲೇ ಸಿಗುತ್ತಿದ್ದಳಾಕೆ...ಕೃಷ್ಣನ ತಾಯಿಯ ಹೆಸರವಳದು...ಸ್ನೇಹಿತೆ ಅಂತ ಹೇಳಲಾರೆ...ಸುಮ್ಮನೆ ನಗುತ್ತಿದ್ದಳು..ಅಥವಾ ದೂರದಿಂದಲೇ ಕೈ ಬೀಸುತ್ತಿದ್ದಳು..ಆಕೆಗೆ ಯಾವತ್ತು ಸೀಟ್ ಸಿಗುತ್ತಿರಲಿಲ್ಲ...ನಿಂತ ವಿದ್ಯಾರ್ಥಿಗಳ ಬ್ಯಾಗು,ಪುಸ್ತಕ ಕುಳಿತವರ ಮಡಿಲಲ್ಲಿ ಆರಾಂ ಮಾಡುತ್ತಿದ್ದವು...ಹಾಗೆ...ಪ್ರತಿ ದಿನ ಅಲ್ಲದಿದ್ದರೂ..ಹೆಚ್ಚಿನ ಸಂಧರ್ಭದಲ್ಲಿ ಆಕೆ ಮತ್ತು ನಾನು ಬಸ್ ನಲ್ಲಿ ಭೇಟಿ ಆಗುತ್ತಿದ್ದೆವು...

ಚಂದದ ಹುಡುಗಿ...ಆಕೆಗೂ ಕನಸುಗಳಿದ್ದವು..ಮಧ್ಯಮವರ್ಗದ ಎಲ್ಲಾ ಹುಡುಗಿಯರಿಗೆ ಇರೋ  ಹಂಗೆ ಆಕೆಗೂ ಬಾನು ಮುಟ್ಟೋ ಕನಸಿತ್ತು...ಗಂಡ ಮನೇ ಮಕ್ಕಳ ಬಗ್ಗೆ ಸುಂದರ ಕಲ್ಪನೆಗಳಿದ್ದವು.ಇದೆಲ್ಲ ಇದ್ದ ಮೇಲೆ....ಹದಿವಯಸ್ಸಿಗೆ ಈ ಜಾಯಮಾನದಲ್ಲಿ ಕಂಪಲ್ಸರಿ ಅನ್ನೋ ಒಂದು ಅಫ್ಫೆರೂ ಇತ್ತು...ಹಾಗಂತ ಅವಳೇನು ನನ್ ಬಳಿ ಹೇಳಿರಲಿಲ್ಲ...ಗೆಳತಿಯರ ತಮಾಷೆ...,ಆಕೆಯ ಸುಖಾಸುಮ್ಮನೆ ನಗು..ಕಣ್ಣಂಚಿನ ತಿರುಚು .ಮೌನದಲ್ಲಿ ಮಾತು...ಇವೆಲ್ಲ ಅದಕ್ಕೆ ಪೂರಕವಾಗಿದ್ದವು...ಅದೇನು ಅಪರಾಧ ಅಲ್ಲ ಬಿಡಿ....

ಆದಿನ ಬೆಳಿಗ್ಗೆ ಕಪ್ಪು ಬಣ್ಣದ ಉಡುಗೆಯಲ್ಲಿ ಚಂದ ಕಾಣುತ್ತಿದ್ದಳು ...ಅದೇ ಹೂ ನಗು...ಹಾಯ್ !ಅನ್ನೋ ರೀತಿಯ ಒಂದು ಕೈ ಬೀಸೋ ಮೂಲಕ ಮಾತಿಲ್ಲದೆ ಮಾತಾಡಿದ್ದಳು ಹುಡುಗಿ....ಹುಬ್ಬಳ್ಳಿ ಬಂತು ಸೀಟು ಹಿಡಿಯುವಾಗ ಇರೋ ಅವಸರದ ಮೂರು ಪಟ್ಟು ಅವಸರ ಇಳಿಯುವಾಗ...ಮತ್ತೆ ಬೇರೆ ಬಸ್ಸ ಹಿಡಿಬೇಕಲ್ಲ..''ಕ್ಲಾಸಸ್ ತಪ್ಪುತ್ತೆ..''ಇವತ್ತು ಮುಗೀತು ಮತ್ತೆ ಗೈರು ನಾ ಕ್ಲಾಸ್ ಗೆ..ಅಂತ..ಎಲ್ಲರು ಮಾತಾಡ್ತಾ ದೂಡಾಟ ಮಾಡಿಕೊಂಡು  ಇಳಿದು ಹೋಗಿದ್ದೆವು ಎಂದಿನಂತೆ...
ನನಗದು ಮಾಮೂಲು ದಿನ..ತರಗತಿ ಮುಗಿಸಿಕೊಂಡು..ಪಾವಟೆ ನಗರ ಬಸ್ ನಲ್ಲಿ ಪುನ್ಹ್ಹ್ ವಾಪಾಸ್ ಹುಬ್ಬಳ್ಳಿಗೆ....

ಸಿರ್ಸಿ-ಹುಬ್ಬಳ್ಳಿ-ಸಿರ್ಸಿ ಬಸ್ಸಿನ ಗಾಜುಗಳ ಮೂಲಕ...ಕೆಳಗೆ ನಿಂತು ತಮ್ಮ ಗಮ್ಯ ತಲುಪುವ ತರತುರಿಯಲ್ಲಿರುವವರನ್ನು.ಗುಟ್ಕ ತಿಂದು ಹಲ್ಲಿನ ಸಂದಿಯಿಂದ ಛೀಎಂದು ಕೆಟ್ಟದಾಗಿ ಉಗುಳಿ ಹೀರೋ ಪೋಸ್ ಕೊಡೋರನ್ನ..ಮಂಗಳೂರು ಬಸ್ಸುಗಳನ್ನು ಕಾಯುವ ಪಕ್ಕಾ ಬಯಲುಸೀಮಿ ಬಾಂಡ್ ಸೀರೆ ಉಟ್ಟ  ಕುರಿ ಮಂದೆಯ ಯಜಮಾನಿಯನ್ನ ಬಸ್ಸು ಹೊರಡೋತನಕ..ನೋಡೋದು...ಏನೇನೋ..ಕಲ್ಪನೆಗಳಿಗೆ ಕಾವುಕೊಡೋದು...ಆ ಸಮಯಕ್ಕೆ ಸಂಜೆ ವಾಣಿ ಪೇಪರ್ ಮಾರೋ ಕನ್ನಡಕದ ಅಜ್ಜನಿಗೆ ಪರಿಚಯದ ನಗೆ ನಕ್ಕು ಇತ್ತ ತಿರುಗಿದರೆ ಅಷ್ಟೊತ್ತಿಗೆ ಡ್ರೈವರ್ ಬಂದಿರುತ್ತಾನೆ...

ಆದಿನ ಮಾತ್ರ ಅಜ್ಜನ ಮುಖದಿಂದ ದೃಷ್ಟಿ ಪೇಪರ್  ನತ್ತ ಹೊರಳಿತು...ಕಿವಿ ಅಜ್ಜನ ಮಾತುಗಳಿಗೆ ಶ್ರುತಿ ಯಾಗಿತ್ತು...
''ಹುಬ್ಬಳ್ಳಿ ಅಯೋಧ್ಯ ಹೋಟೆಲ್ ನಲ್ಲಿ ಯುವತಿ ಕೊಲೆ..ಬಿಸಿ ಬಿಸಿ ಸುದ್ದಿ.''.ಅಂದು ಅಜ್ಜ ಕೂಗಿ ಪೇಪರ್ ಮಾರುತ್ತಿದ್ದ....ಹುಬ್ಬಳ್ಳಿ ಹಳೆ ಬಸ್ ನಿಲ್ದಾಣ ದ ಎದುರಿಗೆ ದೃಷ್ಟಿ ಹಾಯಿಸಿದರೆ ಕಾಣೋದೆ ಅಯೋಧ್ಯ ಹೋಟೆಲು...ಅಲ್ಲಿ ಕೊಲೆ....ಛೇ...
ಕೂತುಹಲಕ್ಕೆ ಬಿದ್ದು ಪೇಪರ್ ತಗೊಂಡೆ...ಕೊಲೆಯಾದವಳ  ಫೋಟೋ ನೋಡಿ  ಕೈಕಾಲು ಒಮ್ಮೆ ತಣ್ಣಗಾಗಿ ಹೋಯಿತು...ಆಕೆ ನನ್ನ ಹೂ ನಗೆಯ ಹುಡುಗಿ...ಬಸ್ಸು ಊರು ತಲುಪಿದರೂ ನನಗೆ ಸಾವರಿಸಿಕೊಳ್ಳಲಾಗಲಿಲ್ಲ ...ಕೊಲೆ ಮಾಡಿದವ ಅವಳ ಪ್ರೀತಿ ಗೆ ಪಾತ್ರನಾದ ಹುಡುಗನೇ...ಯಾಕೋ ಆದಿನ ಮನೆಗೆ ಬಂದು ಯಾರೊಂದಿಗೂ ಏನು ಹೆಚಿಗೆ ಮಾತಾಡಲು ಆಗಲಿಲ್ಲ....

ಹುಡುಗ ಬಲು ಪೋಸ್ಸೇಸಿವ್ ...ಪ್ರೀತಿ ವಿಷಯ ಮನೆಯಲ್ಲಿ ತಿಳಿದಿದೆ..ಹಿರಿಯರು ಕಲಿಕೆ ಮುಗಿದು ಒಂದು ಹಂತಕ್ಕೆ ಬಂದ ಮೇಲೆ ಮದುವೆ ಮಾಡಲು ಒಪ್ಪಿದ್ದಾರೆ...ಅಷ್ಟರಲ್ಲಿ ಹುಡುಗ ಓದು ಅಲ್ಲಿಗಲ್ಲಿಗೆ ಅನ್ನೋವಂತೆ ಅಲಕ್ಷಿಸಿದ್ದಾನೆ ಅನಿಸುತ್ತೆ..ಹುಡುಗಿ ಹೊಸ ಕಾಲೇಜ್ ಸೇರಿ ಹೊಸ ಜಗಕ್ಕೆ ಮೊಗ ಮಾಡಿದ್ದಾಳೆ ಹೊಸ ಸ್ನೇಹಿತರು..ಹೊಸ ಪ್ರಪಂಚ...ಅಲ್ಲಿ ಕೆಲವೊಮ್ಮೆ ಇವನಿಗೆ ಸಮಯ ಕೊಡೋದು ಅಸಾಧ್ಯ..ಎನಿಸಿರಬೇಕು...ಆ ಪರಮ ಪೋಸ್ಸೇಸಿವ್ ಹುಡುಗ...ತನ್ನ ವಸ್ತು ಬೇರೆಯವರ ಒಡನಾಟದಲ್ಲಿ ಖುಷಿಯಾಗಿದ್ದನ್ನು ಸಹಿಸದೆ...ಆಕೆಯನ್ನು ಪೀಡಿಸಿ...ಪೀಡಿಸಿ..ಕೊನೆಗೆ ಈ ನಿರ್ಧಾರ ಮಾಡಿದ್ದಾನೆ....

ಕಾರಣ ಏನೇ ಇರಲಿ....ಪ್ರೀತಿಸಿದ ಪ್ರತಿ ವಸ್ತು ,ಜೀವ ನಮ್ಮ ಅಧೀನವಾಗಿರಬೇಕು ಅನ್ನೋ ಹಠವಾದರೂ ಏಕೆ???ಪ್ರೀತಿಸಿ ಪ್ರೀತಿ ನೀಡಿದ ಜೀವವನ್ನು ಅಷ್ಟು ನಿರ್ದಯತೆಯಿಂದ ಚಾಕು ಇರಿದು ಕೊಲ್ಲುವಾಗ ಅವನೆಂಥ ಅಮಾನುಷ ಸ್ತಿತಿಗೆ ತಲುಪಿರಬಹುದು???ಇಷ್ಟಕ್ಕೂ ಆ ವಯಸ್ಸಿನಲ್ಲಿ ಪ್ರೀತಿ ಎಂಬುದನ್ನು ಅವರಿಬ್ಬರು ಯಾವ ರೀತಿ ಅರ್ಥೈಸಿರಬಹುದು???ಪಾರ್ಕು,ಹೋಟೆಲ್ ,ಸುತ್ತಾಟ??? ಸಿನೆಮ ಟಾಕಿಸ್ ಕತ್ತಲಲ್ಲಿ ಬೆಚ್ಚಗೆ ಕೈ ಕೈ ಹಿಡಿದು ಕೂಡುವುದ????ಅಥವಾ..ಪ್ರೀತಿಸಿದವರು ಜೀತಕ್ಕೆ ಬಿದ್ದಂತೆ ಕೇವಲ ನಮ್ಮನ್ನಷ್ಟೇ ಗಮನಿಸಬೇಕು ಅನ್ನೋ ಹುಂಬತನವ???ಅಥವಾ ಸಮಾಜಕ್ಕೆ..ಅದರ ಕೆಡುತ್ತಿರುವ ಸ್ವಾಸ್ಥದ ಅರಿವು ಮೂಡಿಸಲು ಪ್ರಕೃತಿಯೇ ರೂಪಿಸಿದ ಸಂಚ???ಹೀಗೆ ಏನೇನೋ ಪ್ರಶ್ನೆಗಳು.....ನನ್ನ ಮನದಲ್ಲಿ ತೆರೆಗಳಂತೆ ಬಂದು ಬಂದು ಕಾಡಿದವು...

ಯಾವ ಧೈರ್ಯದಿಂದ ತಂದೆ ತಾಯಿ ಜೀವ ಬಸಿದು ಎದೆಯೆತ್ತರ ಬೆಳೆಸಿದ ಮಗುವನ್ನು ಕಲಿಕೆಗೋ,ಕೆಲಸಕ್ಕೋ ದೂರ ಕಳಿಸಿಯಾರು????ಬೆಳಿಗ್ಗೆ ತಿಂಡಿ ತಿಂದು ಹೋದ ಮಗಳು ರಾತ್ರಿ ಉಟಕ್ಕೆ ಬರುತ್ತಾಳೋ ಇಲ್ಲವೋ ಅನ್ನುವ ಆತಂಕ ಅಮ್ಮನ ಮನದ ತುಂಬಾ ....ಅಪ್ಪನ ದುಗುಡ ಮಾತ್ರ ಯಾರೊಂದಿಗೂ ಹೇಳುವಂಥದ್ದಲ್ಲ...ಆತ ಎಷ್ಟೆಂದರೂ ತಂದೆ....ತನ್ನ ಮಗು ಬೆಳೆದು ಏನಾದರು ಸಾಧನೆ ಮಾಡುತ್ತೆ...ಮನೆತನಕ್ಕೆ ಕೀರ್ತಿ ತರುತ್ತೆ ಅನ್ನೋ ಕನಸು ಕನಸೋ ತಂದೆ ತಾಯಿಗೆ ಬೆಳೆದ ಮಕ್ಕಳು ಕೊಡೊ ಬಹುಮಾನವಾದರು ಎಂಥದ್ದು...???

ಮರುದಿನ...ಆಕೆ ಮನೇ ಮುಂದೆ ಜನರ ಸಂತೆ...ಅಳು ಕೂಗು..ಕೇಳುತಿತ್ತು..ಸಂದಣಿ ಜಾಸ್ತಿ ಆಗಿ ಬಸ್ಸು ಕೂಡ ಹೋಗದಾಗಿತ್ತು...ಸುಮ್ಮನೆ ಕಣ್ಣನು ಮುಚ್ಹಿ ಕೊನೆ ಬಾರಿ ಆಕೆಯನ್ನು ನೋಡಿದಾಗ ಅಚ್ಚಾದ ಚಿತ್ರ..ಸ್ಮರಿಸಿದೆ...ಮಾತಾಡದೆ..ಯು ಸಾವಿರಾ ಮಾತುಗಳನ್ನು ಮನದಲ್ಲಿ ಬೆಳೆಸಿ ಹೊರಟು ಹೋಗಿದ್ದಳು ಹುಡುಗಿ...ಜನ ಎಲ್ಲವನ್ನು ಬೇಗ ಮರೆತು ಬಿಡುತ್ತಾರೆ...ಒಂದು ವಾರ ಹದಿನೈದು ದಿನ ..ಬರೀ ಅವೇ ಮಾತು..ನಂತರ ಮತ್ತೆ...ಬಸ್ಸಿನಲ್ಲಿ ಮೆತ್ತಗೆ ಹಾಡುಗಳು...ಹರಟೆಗಳು ಆರಂಬ ವಾದವು...ಎಂದಿನಂತೆ..ಜನ ಅದನ್ನು ಮರೆತರು ನಾನು ಕೂಡ...ಆದರೆ ಆಕೆ ಮನದಲ್ಲಿ ಹಸಿರಾಗೇ ಇದ್ದಾಳೆ..

ಆ ಹುಡುಗ ಎದುರಿಗೆ ಸಿಕ್ಕರೆ ನಾ ಕೇಳಲೇ ಬೇಕಾದ ಪ್ರಶ್ನೆಯೊಂದಿದೆ''ಪ್ರೀತಿಸಿದ ಪ್ರತಿ ವಸ್ತು ನಮ್ಮದಾಗಲೇಬೇಕೆಂಬ ಹಠವಾದರು ಏಕೆ???ಆಕೆ ಸತ್ತಳು ನೀ ಬದುಕಿದ್ದೀಯ???''ಪ್ರಶ್ನೆಗಳಿಗೆ ಪ್ರಜ್ಞೆ ಇದ್ದವರು ಉತ್ತರಿಸಿಯಾರು..ಸ್ವಯಂ ಪ್ರಜ್ಞೆ  ಇಲ್ಲದವನಿಗೆ ಶಾಸ್ತ್ರ-ನಿಯಮ ಗಳು ಕೂಡ ಬದಲಿಸಲಾರವು ..ಅಲ್ಲವೇ...??? 

Saturday, April 30, 2011

ಎಲ್ಲಿ ಹೋದವು ಆ ವೈಶಾಖದ ದಿನಗಳು …..

ಶಿವರಾತ್ರಿ ಮುಗಿಯೇತೆಂದರೆ ಸಾಕು…ಪರೀಕ್ಷೆ ತಯಾರಿಗಳು ಆರಂಭ ವಾಗುತ್ತಿದ್ದವು ಮತ್ತೇನು ಬಂದೆ ಬಿಡ್ತು ಯುಗಾದಿ …ಕೆಲವೊಮ್ಮೆ ಎಪ್ರಿಲ್  ೧೦ ರ ನಂತರ ಕೆಲವೊಮ್ಮೆ ಅದಕ್ಕಿಂತ ಮುಂಚೆ…ಸರಿ ಈಗ ಅಜ್ಜಿ ಮನೆ ಪ್ರವಾಸಕಕ್ಕೆ ತಯಾರಿ ಶುರು…
ಅಜ್ಜಿ ಮನೆಯಲ್ಲಿ ಇಗ ಮರದ ತುಂಬಾ ಮಾವು ಹಲಸು,ಅಜ್ಜನ ಕಿಟಿಪಿಟಿ ಒಂದನ್ನು ಬಿಟ್ಟರೆ ….ಅಜ್ಜಿ ಮನೆ ಎಂಬುದು ಅಧ್ಭುತ ಮಾಯಾಲೋಕ…ನನ್ನ ಎಲ್ಲಾ ಅಕ್ಕ ಅಣ್ಣಂದಿರು…ಅಲ್ಲಿ ಬಂದಿರುತ್ತಿದ್ದರು…ಎಲ್ಲಾ ಸೇರಿ ಆ ಎರಡು ತಿಂಗಳು ..ಖುಷಿಯನ್ನು ಲೂಟಿ ಮಾಡುತ್ತಿದ್ದೆವು…ಅದೂ ಮೇ …..ತಿಂಗಳು ಮದುವೆ, ಮುಂಜಿ, ಚೌಲ ….ಒಂದೇ ಎರಡೇ…ಅಜ್ಜಿ ಜೊತೆಗೆ ಹೋಗಲು ನಾ ಮುಂದು ನೀ ಮುಂದು ಎಂದು ಲಡಾಯಿ..ಮಾಡುತ್ತಿದ್ದ ಆ ದಿನಗಳು…
ಅಜ್ಜನಿಗೆ ಮಕ್ಕಳೆಂದರೆ ಅಷ್ಟಕ್ಕಷ್ಟೇ…ಆತ ಯಾವತ್ತೂ ಮೊಮ್ಮೊಕ್ಕಳಿಗೆ ಸಲಿಗೆ ಕೊಟ್ಟಿರಲಿಲ್ಲ…ನಮಗೂ ಅವ ದೊಡ್ಡ ಪ್ರತಿಸ್ಪರ್ಧಿಯಂತೆ… ಭಾಸವಾಗುತ್ತಿದ್ದ …ಬೇಕಂತಲೇ ಅವನಿಗೆ ತೊಂದರೆ ಕೊಡುತ್ತಿದ್ದೆವು…ಆ ದಿನ ಬಾಯಿರಿಗಳ ಮನೆತನಕ ಶಾರ್ಟ್ ಕಟ್ನಲ್ಲಿ ಹೋಗಲು ಹೋಗಿ ಮರದ ಬೇರಿಗೆ ಎಡವಿ ಮೂತಿ ಚಚ್ಚಿ ಕೊಂಡು ಆಸ್ಪತ್ರೆ ಸೇರಿದ ಅಜ್ಜ…ಇನ್ನೆರಡು ದಿನ ಬಿಟ್ಟು ಬರಲಿ ಎಂದು ಆಶಿಸುತ್ತಿದ್ದ ಆ ದಿನಗಳು….
ಘಂಟೆ ಒಂದಾಯಿತು ….ಈಗ ಬಸವ ಅವನ ಉಷಾ ಐಸ್ ಕ್ರೀಮ್ ಡಬ್ಬಿ ತಳ್ಳಿಕೊಂಡು ಅಷ್ಟು ದೂರದ ಕುಂದಾಪುರದಿಂದ ಬರುವ ಸಮಯ,,,,ಬೆಲ್ಲದ ಕ್ಯಾಂಡಿಯ ಮೇಲಿನ ಶಾವಿಗೆಯನ್ನು ನೆನೆದು ಕುಳಿತಲ್ಲೇ ಕುಪ್ಪಳಿಸಿದ…ಆ ದಿನಗಳು…
ಅಜ್ಜಿ ಮನೆಯ ದನಗಳಿಗೂ ನಮಗೂ ಅವಿನಾಭಾವ ಸಂಬಂಧ…ವಾನರ ಸೇನೆಯೊಂದಿಗೆ ಮೇಯಲು ಹೊರಡುವ ಅವಕ್ಕೂ ಎಷ್ಟು ಉತ್ಸಾಹ…ನಮಗೆ ಅವಕ್ಕಿಂತ ಹೆಚ್ಚು ಖುಷಿ ಕಾರಣ ಅಲ್ಲಿ ಹೊಳೆಯಲ್ಲೂ ಮುಳುಗಿ ಮೀಯುವ ತುಡಿತ….ಹಾಗೆ ನೀರಾಟದಲ್ಲಿ ನಿರತರಾದಾಗ ದನಗಳು ಎಲ್ಲಿ ಹೋದವೆಂದು ತಿಳಿಯದೆ ಹುಡುಕುತ್ತಿದ್ದ …. ಆ ದಿನಗಳು….
ಕುಟುಂಬದ ಹಿರಿಯ ದಂಪತಿಗಳಾದ ಅಜ್ಜ ಅಜ್ಜಿಯರನ್ನು ಭೇಟಿಯಾಗಲು ಬರುತ್ತಿದ್ದ ದೂರದೂರಿನ ನೆಂಟರು..ಅವರು ಹೋಗುವಾಗ ಕೊಡುತ್ತಿದ್ದ ಆ ಕನಕಾಂಬರ ಬಣ್ಣದ ನೋಟು….ಅದನ್ನು ಉಳಿದವರಿಗೆ ತೋರಿಸಿ ಹೊಟ್ಟೆ ಉರಿಸುತ್ತಿದ್ದ ಆ ದಿನಗಳು….
ದೈವದ ಪೂಜೆಗೆ ಹೋದಾಗ ಭಟ್ಟರು ಕೊಡುತ್ತಿದ್ದ ಸಿಂಗಾರ ಹೂ ವನ್ನು ಲೆಕ್ಕಮಾಡಿ ಒಳ್ಳೆಯದೋ ಕೆಟ್ಟದ್ದೋ ….ಎಂದು ಭವ್ಯ ಭವಿಷ್ಯ ವನ್ನು ತಮ್ಮ,ತಂಗಿಯನ್ದಿರಿಗೆ ಹೇಳುವ ಆ ದಿನಗಳು….ನಾಗದೇವರ ದರ್ಶನ ಬಂದಾಗ …ಭವಿಷ್ಯ ನುಡಿಯುತ್ತಿದ್ದರು….ತಪ್ಪಾದರೆ ಹೇಳುತ್ತೀದ್ದರು…ಆಗೆಲ್ಲ ಏನೋ ಹೆದರಿಕೆ…ಎಲ್ಲ್ಲಿ ಪಾತ್ರಿ..ಮುಟ್ಟಾದವರನ್ನು  ಮುಟ್ಟಿ ಸ್ನಾನ ಮಾಡದ ಹುಡುಗಿ ಇಲ್ಲಿದ್ದಾಳೆ ಎಂದು ಹೇಳಿ ಬಿಟ್ಟರೆ ಎಂದು ಅಂಜುತ್ತ …ದೇವರೇ ಕಾಯ್ಯಪ್ಪ ಎಂದು ಅದೇ ನಾಗದೇವರಿಗೆ ಬೇಡಿ ಕೊಳ್ಳುವ ಆ ದಿನಗಳು….
ಹಳೆ ಬೆಟ್ಟಿಗೆ ಹೋಗಿ ರಂಗೋಲಿ ಪುಡಿಯಂಥ ನುಣುಪಿನ ಮರಳನ್ನು ತುಂಬಿಕೊಂಡು ಬಂದು ಹಾಗೆ ಬರುವಾಗ ಹಾಡಿಗೆ ಹೊಕ್ಕು ಕಾಡು ದಾಲ್ಚೀನಿ ಎಲೆಗಳನ್ನು ಸೇರಿಸಿ ತಂದಾಗ…ಚಿಕ್ಕಿ ಹೇಳಿದ ಹಾಡಿ ದೆವ್ವದ ಕತೆ ಕೇಳಿ ಜ್ವರ ಬಂದು ಮಲಗಿದ ಆ ದಿನಗಳು…
ಆನೆಗುಡ್ಡೆ ಮೂದ್ಗಣಪತಿ ಗೆ ಒಡೆಸಿದ ಕಾಯನ್ನು ಒಣಗಿಸಿ ಎಣ್ಣೆ ಮಾಡಿ ತಂದಾಗ ….ಆ ಕೊಬ್ಬರಿ ಹಿಂಡಿಯನ್ನು ಕದ್ದು ಕದ್ದು ಮೆದ್ದು,,ಗಂಟಲು ನೋವು ಬರಿಸಿಕೊಂಡ ಆ ದಿನಗಳು….ಮರದಿಂದ ಬಿದ್ದು ಗದ್ದ ಒಡೆದುಕೊಂಡ ಅಣ್ಣನಿಗೆ  ಏನಾಯಿತೋ ???ಅಂತ ಕೇಳದೆ ಹೆದರಿ ಓಡಿ ಬಂದ ಆ ದಿನಗಳು..
ಬೆಣಸು,ಮಡಕೆ ಹಣ್ಣು,ಪಿರಗಿ,ಚಿಪ್ಪಲ್ಗೆಂಡೆ ಅಂಥ ಅಪರೂಪದ ಕಾಡು ಹಣ್ಣುಗಳನ್ನು ಆಯಲು ಹೋಗಿ …ದಾರಿ ತಪ್ಪಿ ಕಾಡಲೆದ ದಿನಗಳು….ಚಿಕ್ಕಮ್ಮನ ಕತೆಗಳಿಗೆ ತಣ್ಣನೆ ತೆರೆದು ಕೊಳ್ಳುತ್ತಿದ್ದ ರಾತ್ರಿಗಳು…ಮತ್ತೆ ಗಂಜಿ ಊಟದೊಂದಿಗೆ  ಮಾವಿನ ಹಿಂಡಿ,ತಂಗಳು ಕುಚ್ಚಲಕ್ಕಿ ಅನ್ನದೊಂದಿಗೆ ಅಪ್ಪೆ ಮಿಡಿ ಉಪ್ಪಿನಕಾಯಿಯ ಆ ಅವರ್ಣನೀಯ ರುಚಿಯನ್ನು ಮೊದಲಿಗೆ ಉಂಡ ಆ ದಿನಗಳು……
ಶಾಲೆ ಶುರುವಾಗುವ ಎರಡು ದಿನ ಮೊದಲು………………………………….
ಅಮ್ಮ ಬಂದು ಕರೆದು ಕೊಂಡು ಹೋಗುವಲ್ಲಿಗೆ ಮುಗಿಯುವ ನನ್ನ ಬಾಲ್ಯದ ವೈಶಾಕದ ದಿನಗಳು…..
ಎಲ್ಲಿ ಹೋದವು ಈ ವೈಶಾಖದ ದಿನಗಳು…
ಈಗ ..ಏನಿಲ್ಲ ನಾವು ಅನುಭವಿಸಿದ ಖುಷಿಯನ್ನು ನೆನೆಪಿನ ಬುಟ್ಟಿಯಿಂದ ತೆಗೆದು ನೋಡಿ ನೋಡಿ ಮುತ್ತಿ ತಟ್ಟಿ ಮತ್ತೆ ಹಾಗೆ ಇತ್ತಿಡಬೇಕು..ಈಗಿನ ವೈಶಾಕಗಳು,,,,ವೆಕೇಶನ್ ಕ್ಲಾಸ್ ಗಳಲ್ಲೋ…ಮುಂಬರುವ ತರಗತಿಯ ಪಾಠಗಳನ್ನು ಕಲಿಯುವುದರಲ್ಲೋ …ಕಳೆದು ಹೋಗುತ್ತಿವೆ…ಅಜ್ಜಿ ,ಮತ್ತು ಅಜ್ಜಿ ಮನೆ ಎಂಬ ಎರಡು ಮಧುರ ಪದಗಳು ನಮ್ಮ ಮಕ್ಕಳ ವರ್ತಮಾನದಿಂದ ನಾವೇ ಅತಿ ನಿಷ್ಕರುಣೆಯಿಂದ ಎತ್ತಿಟ್ಟಿಬಿಟ್ಟಿದ್ದೇವೆ…
ದೂರದೂರಿನ ಪ್ರವಾಸ ಅಲ್ಲದಿದ್ದರೂ ಸರಿ ನಮ್ಮ ಮಕ್ಕಳಿಗೆ ನಾವು ಅನುಭವಿಸಿದ ಈ ಸುಮಧುರ ಸುಂದರ ವೈಶಾಖದ ದಿನಗಳನ್ನು ಅನುಭವಿಸಲು ಬಿಡೋಣ…ಅವರ ಬಾಲ್ಯದೊಂದಿಗೆ  ನಾವು ಮತ್ತೆ ಮಕ್ಕಳಾಗೋಣ ….

Sunday, April 17, 2011

ಬಂಗಾರ ಯಾಕ ಬೇಕ??ನಾವ್ ಚಂದ್ ಕಾಣಾಕ

ಲಮಾಣಿ ಜಿಲ್ ಝಿಲ್ ಝಿಲ್ 
ನಾನು ಬರ್ತೆನ್ ನಿಲ್ ನಿಲ್ 
ಕಟ್ಟ್ಗಿ ಹೊರಿ ಚಲ್ ಚಲ್ 
ಹೀಗೆಂದು ಬಾಲವಾಡಿ ಅಕ್ಕವರು ರಾಗವಾಗಿ ಹೇಳಿಕೊಡುತ್ತಿದ್ದರೆ ನಮ್ಮ ಪುಟ್ಟ ಕಂಗಳಿಗೆ ಕಾಣುತ್ತಿದ್ದುದು ತಲೆಯ ಮೇಲೆ ಭಾರವಾದ  ಕಟ್ಟಿಗೆ ಹೊರೆಯನ್ನಿತ್ತು ಕೊಂಡು ಆ ಭಾರವನ್ನು ಬ್ಯಾಲೆನ್ಸ್ ಮಾಡಲು ಸೊಂಟವನ್ನು ಅತ್ತ ಇತ್ತ ತಿರುಗಿಸುತ್ತಾ ವೇಗವಾಗಿ ನಡೆಯುತ್ತಾ ಬರುತ್ತಿದ್ದ ತೆಳು ಕಾಯದ  ಲಂಬಾಣಿ ಮಹಿಳೆಯರು .ಅಪರಿಮಿತ ದೈಹಿಕ ಶ್ರಮ ಅವರಿಗೆ ಈ ಸುಂದರ ಮತ್ತು ಮಟ್ಟಸವಾದ ದೇಹವನ್ನು ವರವಾಗಿ ಕೊಟ್ಟಿರಬೇಕು .
ಲಂಬಾಣಿ ಮಹಿಳೆಯರು ಕಲಾತ್ಮಕತೆಯ ಪ್ರತ್ಯಕ್ಷ ರೂಪ.ಕರಕುಶಲ ದೇವಿಯರು ಮೈದಾಳಿ  ನಿಂತಂತೆ ಭಾಸವಾಗುತ್ತಾರೆ ಇತ್ತೀಚಿಗೆ ಕರಕುಶಲ ಕಲೆಗಳು ಮತ್ತು ಕಸೂತಿ ಗಳ ಬಗ್ಗೆ ಪಟ್ಟಣದ ಜನರಲ್ಲಿ ಆಸಕ್ತಿ ಹೆಚ್ಚಾಗಿದ್ದು ಎಷ್ಟು ಬೆಲೆಯಾದರೂ ಅದನ್ನು ಕೊಂಡು ತಂದು ತೊಟ್ಟು ಖುಷಿ ಪಡುತ್ತಾರೆ ಕೆಲವೊಮ್ಮೆ ಡಿಸೈನರ್ ಮೊರೆ ಹೋಗುವುದು ಉಂಟು. ಆದರೆ ಲಂಬಾಣಿ ಮಹಿಳೆಯರು  ತಮ್ಮ ಉಡುಪನ್ನು ತಾವೇ ಡಿಸೈನ್ ಮಾಡಿಕೊಳ್ಳುತ್ತಾರೆ ,ಹಳೆಯ ಬಟ್ಟೆಗಳನ್ನು ರಂಗು ರಂಗಿನ ದಾರದಲ್ಲಿ ಬಂದಿಸಿ .ಕನ್ನಡಿ ಯನ್ನು ಪೋಣಿಸಿ ಮಣಿಗಳನ್ನು ಜೋಡಿಸಿ ಅದ್ಭುತ ರೂಪವನ್ನು ಕೊಡುತ್ತಾರೆ ..ಇವರ ಈ ಉಡುಪಿನ ವಿಭಿನ್ನತೆ ಅವರ ಬುಡಕಟ್ಟಿಗೆ ವಿಶಿಷ್ಟ ಮೆರಗನ್ನು ತಂದಿತ್ತಿದೆ...
ಈಗಿನ ಚನಿಯ ಚೋಲಿ ,ಘಾಗರ ಇವೆಲ್ಲ ಇವರ ಉಡುಪಿನ ಪರಿಷ್ಕೃತ ರೂಪಗಳು.ನಾವು ಹಬ್ಬ ಹರಿದಿನ ಗಳಲ್ಲಿ ಮದುವೆ ಸಮಾರಂಭಗಳಲ್ಲಿ ಮನ ಬಂಗಾರ ಹೇರಿಕೊಂಡು ಸಿಂಗಾರ ಗೊಂದರೆ ಇವರು ಮಾತ್ರ ಸದಾಭರಣ ಸುಂದರಿಯರು.ವಿಶೇಷ ಸಂದರ್ಭ ಗಳಲ್ಲಿ ಇವರ ಆ ಸೌಂದರ್ಯ ಪ್ರಜ್ಞೆ ಇನ್ನು ಹೆಚ್ಹು ಪ್ರಕಟ ಗೊಳ್ಳುತ್ತದೆ.
ಬಾಲ್ಯದಿಂದಲೂ ಇವರೊಂದಿಗಿದ್ದ ನಿಕಟತೆ ಆತ್ಮೀಯತೆ ಅವರ ಜೀವನ ಶೈಲಿಯ ಬಗ್ಗೆ ಸಹಜ ವಾಗಿಯೇ ಕುತೂಹಲ ಹುಟ್ಟಿಸಿದ್ದವು ಪ್ರಸ್ತುತ ಅವರ ಆಭರಣ ಗಳಬಗ್ಗೆ ಅವರ ಮಾತುಗಳಲ್ಲೇ ವಿವರಿಸುವ ಪ್ರಯತ್ನ ನನ್ನದು..

ಲಂಬಾಣಿ ಮಹಿಳೆರ ಆಭರಣಗಳು ತಾಮ್ರ ಬೆಳ್ಳಿ ,ಹಿತ್ತಾಳೆ ,ಅಲುಮಿನಿಯಂ ಗಳಿಂದ ಮಾಡಲ್ಪಟ್ಟಿವೆ .ಕಾಡಿನಲ್ಲಿ ಅಲೆಯುತ್ತ ಯಾವುದೊ ಸಂದರ್ಭದಲ್ಲಿ ನಾಡಲ್ಲಿ ನೆಲೆಸಿದ್ದರೂ ಕಾಡಿನ ನೆನಪಲ್ಲೇ ಇರುವಂತೆ ಇವರ ಆಭರಣಗಳಲ್ಲಿ  ಪ್ರಾಣಿ ಜನ್ಯ ಸಸ್ಯ ಜನ್ಯ ವಸ್ತುಗಳು ಕಾಣಲು ಸಿಗುತ್ತವೆ .(ಉದಾ ;ದಂತ ,ಉಣ್ಣೆ,ಕವಡೆ )ಚಿನ್ನದ ಬಳಕೆ  ಇವರಲ್ಲಿ  ತೀರ  ಕಡಿಮೆ  ,ಆಧುನಿಕತೆಗೆ ತೆರೆದುಕೊಂಡ ಕೆಲವು ಪರಿವಾರಗಳು ಸಮಾಜದ ಇತರ ಸಮುದಾಯದೊಂದಿಗೆ  ಸಮಾನತೆಯ ಗುಂಗಿಗೆ ಬಿದ್ದು ಚಿನ್ನದ ಆಭರಣ ಮಾಡಿಸುವುದುಂಟು .ಆದರೆ  ಅವರ  ಪಾರಂಪರಿಕ  ಆಭರಣದ  ಎದುರಿಗೆ  ಇದರ ಚಂದ ನಿಲ್ಲುವುದಿಲ್ಲ..
ಭೂರಿಯ 



ನಸುನಗೆಯ ಮುಖದ ಲಂಬಾಣಿ ಸ್ತ್ರೀ ಯಾ ನಸಭಾರಣ ಈ ಭೂರಿಯ ಸೂಕ್ಷ್ಮ ಕುಸುರಿಯ ಗೋಲಾಕಾರದ ಮೂಗುತಿಯನ್ನು ತೊಡುತ್ತಾರೆ ಇದು ಸುಮಂಗಲಿಯ ಸಂಕೇತ ಮದುವೆಯಲ್ಲಿ ಕನ್ಯೆ ತನ್ನ ತಾಯಿಯಿಂದ ಬಳುವಳಿಯ ರೂಪದಲ್ಲಿ ಪಡೆಯುವ ಆಭರನ ಇದು.ಇದರೊಂದಿಗೆ ಚೋಟ್ಲ ,ಚುಡೋ,ಘುಗರಿ ,ಅಂಕಡಾ ಇವುಗಳು ಸುಮಂಗಲಿಯ ಆಭರಣಗಳು ಇವು ತಾಳಿಗೆ ಸಮವಾದವುಗಳು..ಆಟಿ,ಮಾಟ್ಲಿ ಎಂಬ ಆಭರಣಗಳು ಇವರ ಸಂಗ್ರಹದಲ್ಲಿವೆ .
ಕಾಂಚಲಿ
ಇದು ಉಡುಗೆ ಆಗಿದ್ದರು ಆಭರಣ ಪಟ್ಟಿಗೆ ಸೇರಿಸುವುದು ಸೂಕ್ತ ಎಂಬುದು ನನ್ನ ಅನಿಸಿಕೆ..ಕಾರಣ ಕಾನ್ಚಲಿ ಎಂಬ ಈ ಕುಪ್ಪಸ ರೂಪದ ಉಡುಗೆ ಗೆ ಅಪೂರ್ವ ಕಸೂತಿಗಳಿವೆ ಗಾಜಿನ ಚೂರುಗಳ ಸಿಂಗಾರ,ಕವಡೆಯ ಅಲಂಕಾರವಿದೆ ಬೆನ್ನಿನ ಭಾಗ ತೆರೆದಿರುತ್ತದೆ ಭುಜದ ಮೇಲೆ ಮತ್ತು ಸೊಂಟದ ಹತ್ತಿರ ಎರಡು  ಲಾಡಿಗಳನ್ನು  ಜೋಡಿಸಿ  ಮೈಕಟ್ಟಿಗೆ  ತಕ್ಕಂತೆ ಅದನ್ನು ಹೊಂದಿಸಿಕೊಳ್ಳುತ್ತಾರೆ .ಇದಕ್ಕೆ ಚಾಟಿಯ ಎಂಬ ಗಾಜಿನ ಪಟ್ಟಿ ಇರುತ್ತದೆ ತಮಗೆ ಬೇಕಾದ ಬಣ್ಣದ ದಾರಗಳಿಂದ ಅವರಿಗೆ ಬೇಕಾದ ವಿನ್ಯಾಸದಲ್ಲಿ ಸ್ವತ್ ತಾವೇ ಅದನ್ನು ಹೊಲಿದು ಕೊಳ್ಳುತ್ತಾರೆ
ಘಾಗರಾ 
ಇದು ಲಂಗ .ಮೊದಲು ಎರಡು ಅಂಗೈಗಲದ ಕಸೂತಿ ಪಟ್ಟಿಗೆ ನೆರಿಗೆಗೆಳನ್ನು ಜೋಡಿಸಿ ವಿಸ್ತಾರವಾದ ಲಂಗ ಹೊಲಿದುಕೊಲ್ಲುತ್ತಾರೆ ನೆರಿಗೆಯ ಅಂಚಿಗೂ ಕಸೂತಿಯ ಕರಾಮತ್ತು ಕಾಣುತ್ತದೆ...ಘಗಾರವನ್ನು ಮೊದಲು ೫ ಭಾಗಗಳಾಗಿ ಪ್ರತ್ಯೇಕವಾಗಿ  ಹೊಲಿದು ಏಕತ್ರ ವಾಗಿಸುವುದು ಇದರ ವಿಶೇಷ ಇದರಲ್ಲಿ .ನಾಯಿ ಉಗುರು ,ಚಿಗಣಿ ,ಗಾಳಿಯ ಪೆಟ್ತ್ಯ,ಟೆಕ ,ಲೆಪೋ ,ಎಂಬ ಹೆಸರಿಸ ಕಸೂತಿಗಳನ್ನು ತೆಗೆದಿರುತ್ತಾರೆ,
ಚಾಟಿಯ
ಚಾಟಿಯ ಎಂಬುದು ದಾವಣಿ ಇದರ ಅಂಚಿಗೆ ಕನ್ನಡಿಯ ಕಸೂತಿ ಇದ್ದು ,ಪೈಸೆಗಳನ್ನು ಮಟ್ಟಸವಾಗಿ ಜೋಡಿಸಿರುತ್ತಾರೆ ಇದನ್ನು ghunghat ಎನ್ನುತ್ತಾರೆ .ಚಾಟಿಯಾದ ಮೇಲೆ ಚಂದದ ಕಸೂತಿಗಳು ನೋಡುಗರ ಕಣ್ಮನ ಸೆಳೆಯುತ್ತವೆ.


ವಾಂಕಿಯ 
ಇದು ಬೆಳ್ಳಿಯ ಆಭರಣ ಚಂದ್ರಾಕಾರದ ಬಿಲ್ಲೆಗೆ ನಾಣ್ಯ ಮತ್ತು ಗಿಲಕಿಗಳನ್ನು ಜೋಡಿಸಿದ ಸರ ಇದು ,ಇದರೊಂದಿಗೆ ನಮ್ಮ ಕಾಸಿನ ಸರದಂತೆ ಕಾಣುವ ರಪಿಯ ಹಾರ,ವಿಭಿನ್ನ ವಿನ್ಯಾಸದ ಹಾನ್ಸಲಿ ಗಳನ್ನೂ ತೊಡುವುದೆಂದರೆ..ಇವರಿಗೆ ಬಲು ಪ್ರೀತಿ..ಈ ಸರಗಳ ಜೊತೆ ಬಣ್ಣ ಬಣ್ಣದ ಮಣಿ ಸರಗಳನ್ನು ಇವರು ತೊಡುತ್ತಾರೆ ಇದನ್ನು ಲಾಲ್ಡಿ ಎಂದು ಕರೆಯುತ್ತಾರೆ .ಇವುಗಳಲ್ಲೂ ಹಲವು ವಿಧಗಳುಂಟು.ಲಾಲ್ಡಿ ಹಾರ ಪರಿಹಾರ ,ಪಟಿಯಾ(ಕತ್ತಿಗೆ ಒತ್ತಿಕೊಂಡಿರುವ ಮಣಿ ಸರ )ಇವುಗಳನ್ನು ಸಂಗ್ರಹಿಸಿತ್ತುಕೊಂಡು ಅವರೇ ಹೆಣೆದು ಕೊಂಡು ಧರಿಸುವುದು ಉಂಟು.
ಖಣ ಖಣ ಕಂಕಣ
ಬಂಜಾರ ಹೆಂಗಳೆಯರನ್ನು ನೋಡಿದ ಕೂಡಲೇ ಕಣ್ಮನ ಸೆಳೆಯುವುದು ಅವರ ಕೈ ಬಳೆಗಳು ಕೈ ಮಧ್ಯ ಭಾಗ ದಿಂದ ಪೂರ್ತಿ ತೋಳುಗಳಲ್ಲಿ ಈ ಬಳೆಗಳು ರಾರಾಜಿಸುತ್ತವೆ ,,ಬಿಳಿ ಬಿಳಿ ಬಣ್ಣದ ದಂತಿ ಚೂಡಿ ಗಳೆಂದರೆ ಇವರ ಮೆಚ್ಹಿನ ಆಭರಣಗಳು .ಇವಲ್ಲದೆ ಪತ್ಲಿ.ಬೋದ್ಲು ,ಮತ್ತು ಗಾಜಿನ ಬಾಳೆಗಳು ಕೂಡ ಇವರು ಇಷ್ಟ ಪಟ್ಟು ಧರಿಸುತ್ತಾರೆ
ಇದರೊಂದಿಗೆ ಕಸೂಟಿಯ ಎಂಬ ತೋಳಬಂದಿ ಮತ್ತೊಂದು  ಆಕರ್ಷಣೆ.ಕಸೂಟಿಯ ದ ಮೇಲ್ಭಾಗದಲ್ಲಿ ಕಾನ್ಚಲಿಯ ಕವಡೆಗಳು ಬರುವುದರಿಂದ ಅದರ ಮೆರಗು ಮತ್ತಷ್ಟು ಹೆಚುತ್ತದೆ... 
ಇನ್ನುಳಿದಂತೆ ಅನುಕೂಲ ಇದ್ದವರು ಡಾಬು ತೊಡುವುದುಂಟು..ಕಿವಿಗೆ ಕನಿಯಕಾಲಿಗೆ ತಾಮ್ರದ ವಂಕಿಯ ಝಾಂಜರ ,ಫೂಲಿ ಗಳನ್ನೂ ತೊಡುತ್ತಾರೆ...ಇಷ್ಟೇ ಅಲ್ಲದೆ ಇನ್ನು ಹಲವು ವಿಶಿಷ್ಟ ಆಭರಣಗಳು ಇವರ ಸಂಗ್ರಹದಲ್ಲಿವೆ...ivannu ಕೂತಲಿ ಎಂಬ ತಮ್ಮ ಉಡುಪು ಮತ್ತು ಆಭರಣ ಸಂಗ್ರಹಿಸುವ ಚೀಲದಲ್ಲಿ ಕತ್ತಿದುತ್ತಾರೆ ಹಬ್ಬ ಮದುವೆ ಸಂಭ್ರಮದಲ್ಲಿ ನಿತ್ಯಕ್ಕಿಂತ ಹೆಚ್ಹು ಶೃಂಗಾರ ಗೊಳ್ಳುವುದು ರೂಡಿ ,
ಕಾಂತನಿಲ್ಲದ ಮೇಲೆ ....
ಸಿಂಗಾರ ಎಂಬುದು ಹೆಣ್ಣಿನ ಹಕ್ಕಾದರೂ ಮದುವೆ ಆದನಂತರ ಅದಕ್ಕೆ ವಿಶೇಷ ಮೆರಗು ಸೇರಿಕೊಳ್ಳುವುದು ಸಹಜ.ಪತಿ ಮರಳಿ ಬಾರದಲ್ಲಿಗೆ ಹೋದನೆಂದರೆ ಸಿಂಗಾರದ ಬಯಕೆ ಮನದ ಮೂಲೆ ಸೇರುತ್ತದೆ ..ಮನ ಬಯಸಿದರೂ ಕೆಲವೊಮ್ಮೆ ಸಮಾಜದ ಹೆದರಿಕೆ ಕಾಡುವುದುಂಟು..ಆದರೆ ಈ ವಿಷಯದಲ್ಲಿ ಲಂಬಾಣಿ ಮಹಿಳೆ ತನ್ನ ಸ್ವಾತಂತ್ರಇನ್ನು ಉಳಿಸಿಕೊಂಡಿದ್ದಾಳೆ.ಭೂರಿಯ ಮತ್ತೆ ಕೆಲವು ಸೌಭಾಗ್ಯದ ಸಂಕೇತ ಎಂದು ನಂಬುವ ಆಭರಣ ಬಿಟ್ಟು ಮತ್ತೆಲ್ಲ ವನ್ನು ಆಕೆ ಧರಿಸಿ ಸಿಂಗಾರ ಗೊಳ್ಳಬಹುದು..
ವೈಧವ್ಯ ಬಂದಾಗ ಲಂಬಾಣಿ ಮಹಿಳೆಯರ ಮೈ ಮೇಲಿಂದ ಬುತ್ತಿ ಆಭರಣವನ್ನು ತೆಗೆದಿಡುತ್ತಾರೆ ಎಂದು ಮಾತು ಮಾತಲ್ಲಿ ನಾನು ಸಂದರ್ಶಿಸಿದ ಭೀಮವ್ವ ಚವ್ಹಾನ್ ಹೇಳಿದರು.
ಲಂಬಾಣಿಗರು ತಮ್ಮ ಬಟ್ಟೆಯಲ್ಲಿ ಕಾಜಿನ ಬಿಲ್ಲೆಗಳನ್ನು ಹೆಚ್ಹಾಗಿ ಬಳಸುತ್ತಾರೆ ಕಾರಣ ಅವರ ಅಲೆಮಾರಿ ಬದುಕು.ಕಾಡಿನಲ್ಲಿ ಅಲೆಯುವಾಗ ಪ್ರಾಣಿಗಳಿಂದ ಬಚಾವಾಗಲು ಪ್ರತಿಫಲಿಸುವ ಕನ್ನಡಿಯ ಸಹಾಯ ಪಡೆದಿರಬಹುದು ಆಗಿನ ಉಪಾಯ ಈಗ ಸಂಸ್ಕೃತಿಯ ಒಂದು ವಿಶಿಷ್ಟ್ ಭಾಗವಾಗಿ ರೂಪು ಗೊಂಡಿದೆ.
ಇತ್ತೀಚಿನ ದಿನಗಳಲ್ಲಿ ಲಂಬಾಣಿ ಯುವತಿಯರು ಅವರ ಸಾಂಪ್ರದಾಯಿಕ ಉಡುಪುಗಳನ್ನು ತೊದುವುದರಲ್ಲಿ ಆಸಕ್ತಿ ತೋರುತ್ತಿಲ್ಲ .ಹಳೆ ಮಂದಿಯ ಆಭರಣ ಅಟ್ಟ ಸೇರಿವೆ...ಅನ್ನುವ ಕೊರಗು ಹಿರಿಯರದು...
 ತನ್ನ ಮನೆಯ ಆರ್ಥಿಕ ಪರಿಸ್ತಿತಿಯ ಸುಧಾರಣೆಗೆ ತನ್ನಲ್ಲಿರುವ ಎಲ್ಲ ಚಿನ್ನವನ್ನು ಮಾರಿ .ಕೊನೆಗೆ ಏನು ಇಲ್ಲದಾಗ ಪ್ರಕೃತಿ ಮೂಲದ ಸದಾ ತನ್ನ ಬಳಿಯೇ ಇರುವಂಥ ಕೃತಕ ಆಭರಣದ ಮೊರೆಹೊಗಿರಬಹುದೇನೋ.ಅದಕ್ಕೆ ಕವಡೆಯನ್ನು ಅವರು ಚಿನ್ನ ಭಾಗ್ಯ ದಾಯಕ ಎಂದು ಇವರು ನಂಬುತ್ತಾರೆ .ಇವರ ವಿಶಿಷ ವಿನ್ಯಾಸದ ಆಭರಣವನ್ನು ತಯಾರಿಸಿ ಕರ್ನಾಟಕದ ಹಲವೆಡೆ ಚದುರಿ ನೆಲೆನಿಂತಿರುವ ಇವರಿಗೆ ಪೂರೈಸುವ ವ್ಯಕ್ತಿಗೆ ರಾಂಗ್ ಎಂದು ಇವರು ಕರೆಯುತ್ತಾರೆ .
ಲಂಬಾಣಿ ಮಹಿಳೆಯರು ಪೀತಾಂಬರದ ನಡುವೆ ಜರಿ ಎಳೆಗಳಂತೆ......ಎಂದು ಮಾಜಿ ಪ್ರಧಾನಿ ದಿ .ಇಂದಿರಾ ಗಾಂಧಿ ಹೇಳಿದ್ದನ್ನು ಡಾ.ಹರಿಲಾಲ್ ಪವಾರ್ ತಮ್ಮ ಬರಹ ಒಂದರಲ್ಲಿ ಉಲ್ಲೇಖಿಸಿದ್ದಾರೆ ...ಇವರ ವರ್ಣಮಯ ಬದುಕನ್ನು ನೋಡಿದಾಗ ಇದು ನಿಜ ಎನಿಸುತ್ತದೆ ...ಬಡತನ ,ಎಂಬುದು ಅವರ ನಗುವನ್ನು ಕಸಿಯುತ್ತಿದೆ..ಆದರು ಇವರ ಶ್ರೀಮಂತ ಸಂಸ್ಕೃತಿ ಜಾನಪದ ಲೋಕಕ್ಕೆ ಕಳಸ ಪ್ರಾಯ.
(ಎಪ್ರಿಲ್ ೧೫ ,೨೦೧೦  ಸಖಿ  ಪಾಕ್ಷಿಕದಲ್ಲಿ ಪ್ರಕಟಿತ )




Monday, March 28, 2011

ಚಳಿಗಾಲ ಬೇಸಿಗೆಗಳ ನಡುವೆ ಪುಷ್ಪ ಸೇತುವೆ -spring




        ಚಳಿಗಾಲ ಮೆತ್ತಗೆ ನಡೆದು ಹೋಗಿದೆ..ಇನ್ನೀಗ ಬೇಸಿಗೆಯ ಬಿರುಸು ಶುರುವಾಯಿತು ,,,,,ಆದರೆ ಈ ನಡುವೆ ಇರುವ ಒಂದಷ್ಟು ದಿನಗಳ ಸುಂದರ ಸಮಯ'' ನನ್ನನ್ನೇಕೆ ಗಮನಿಸುತ್ತಿಲ್ಲ ???''ಎಂದು ತನ್ನ ಕಂಪಿನಿಂದಲೇ ಕೇಳುತ್ತಿದೆ...

ಅದೇ ಸ್ಪ್ರಿಂಗ್ ...ಪುಷ್ಪಕ ವಿಮಾನದಲ್ಲಿ ವಸುಧೆ ವಿಹರಿಸುವಂತೆ ,ಆಟಮ್ ತಿಂಗಳುಗಳಲ್ಲಿ ಬೆತ್ತಲಾದ ವೃಕ್ಷಗಳು ನಸು ನಾಚಿ ಮೆತ್ತಗೆ ಹೂವಿನ ಸೀರೆ ಉಟ್ಟಂತೆ.ಭಾರತದಲ್ಲಿ ಸ್ಪ್ರಿಂಗ್ ಎಂಬುದು ಮಕರ ಸಂಕ್ರಮಣದ ನಂತರ ಯುಗಾದಿ ಮುಗಿಯುವ ತನಕದ ಅವಧಿ....ಚಿಗುರು ಮೂಡುವ ಹೊತ್ತು....
ಪಶ್ಚಿಮ ದೇಶಗಳಲ್ಲಿ ಸ್ಪ್ರಿಂಗ್ ಎಂಬುದು ಸುಮ ಸೌರಭ ಹೊತ್ತು ತರುವ ಕಾಲ,ಹಿಮಪಾತ ಮಂಜು ಮುಸುಕಿದ ವಾತಾವರಣದಿಂದ ಏಕತಾನತೆಯಲ್ಲಿದ್ದ ಜನರಿಗೆ ಹೊಂಬಿಸಿಲಿನೊಂದಿಗೆ ಹೊಸ ಚಲನೆಯನ್ನು ಕೊಡುವ ಕಾಲ...ಅದಕ್ಕೆ ಸ್ಪ್ರಿಂಗ್ ಎಂಬುದು ಇಲ್ಲಿಯ ಜನರಿಗೆ ಚೈತನ್ಯ ಕಾಲ....ಆಂಗ್ಲರ ನಾಡಿಗೆ  ವಲಸೆ ಬಂದ ನಂತರ ಪ್ರತಿದಿನವೂ  ಒಂದು ಹೊಸ ಅನುಭವ ಬಣ್ಣವಿಲ್ಲದ ವಿಂಟರ್ ನಿಂದ ಬೇಸತ್ತು ಹೋಗಿದ್ದ ಮನಸಿಗೆ ಇಗಷ್ಟೆ  ಆಗಮಿಸಿರುವ ಸ್ಪ್ರಿಂಗ್ ಮನೆಯಂಗಳದಲ್ಲಿ ಹಬ್ಬಿದ ಮಲ್ಲಿಗೆಬಳ್ಳಿಗೆ ಹೂ ಬಿಟ್ಟು ಬೆಳದಿಂಗಳಲ್ಲಿ ಆ ಘಮವನ್ನು ಆಘ್ರಾನಿಸಿದಷ್ಟು ಹಿತ ಹಿತ...ನಮ್ಮ ನಾಡಿನಲ್ಲೂ ಹೂಗಳಿಗೆ ಬರವೇ..???.ಚಂದದ ಹೆಸರಿನೊಂದಿಗೆ ಅದಕ್ಕೂ ಚಂದದ ಘಮಗಳನ್ನು ನೆನಪ ಬುಟ್ಟಿಯಲ್ಲಿ ಉಳಿಸಿವೆ...ಆದರಿವು ಹೊಸ  ಹೂಗಳು...ದುಬಾರಿ ಹೂಗುಚ್ಹದಲ್ಲಿ ಕಾಣಸಿಗುವ ಜನಸಾಮಾನ್ಯರಿಗೆ ಅಪರೂಪದ ಹೂವುಗಳು.ಇಲ್ಲಿ ಎಲ್ಲ ದಿಕ್ಕಿನಲ್ಲೂ ಅರಳಿ ನಗುತ್ತಿವೆ..

ಇದಕ್ಕಿಂತ ಹಳದಿ ಮತ್ತೆ ಎಲ್ಲೂ ಸಿಗಲಾರದು ಎನ್ನುವಷ್ಟು ಗಾಢ ವರ್ಣದ ದಫ್ಫುಡಿಲ್ಸ್ ,,,ತಿಳುಗುಲಾಬಿ ಪೀಚ್ ಬ್ಲಾಸಂ ,ಬಿಳುಪಿನ ಮ್ಯಗ್ನೋಲಿಯ ..,ನಸು ನಾಚಿದ ಸುಂದರಿ ತಲೆತಗ್ಗಿಸಿ ನಿಂತಂತೆ ಇರುವ ಸ್ನೋಡ್ರಾಪ್ ಹೂವುಗಳು,ಅರಳಲೋ ಬೇಡವೋ???ಎಂಬ ಪ್ರಶ್ನೆ ಮುಂದಿಟ್ಟುಕೊಂಡೇ ನಮ್ಮ ನೋಡುವ ಟುಲಿಪ್ಸ್,ನಮ್ಮ ಅಂಗಳದಲ್ಲಿ ಅರಳುವ ಪನ್ನೀರ್ ಗುಲಾಬಿಯ ಸೋದರಿಯಂತೆ ಕಾಣುವ ಕೆಮೆಲಿಯ ,ಮಳೆಗಾಲದಲ್ಲಿ  ಅಲ್ಲೆಲ್ಲೋ ಮರದ ಮೇಲೆ ತೂಗಿ ನಲಿಯುವ ಸೀತದಂಡೆ ಯಂಥಹ ಚೆರ್ರಿ ಪ್ಲಾಂ ....ಹಸಿರು ಹಸಿರು ಹಾಸಿನಲ್ಲಿ ಸೇವಂಥಿಗೆಯಂಥ ಬಿಳಿ ಹಳದಿ ಹೂಗಳು....ಅದನ್ನು ವಿವರಿಸುವುದು ಶಬ್ಧಗಳಿಗೆ ದುಬಾರಿ ಎನಿಸುತ್ತದೇನೋ....

ರಸ್ತೆಯಲ್ಲಿ ನಡೆಯುತ್ತಿದ್ದರೆ ಅದೆಂಥದೋ ಆಹ್ಲಾದ .....ನಮಗಾಗಿ ಅರಳಿ ನಗುತ್ತಿವೆಯೇನೋ ಎಂಬ ಭಾವ ಸಹಜ...ಬಣ್ಣಗಳು ಕಣ್ಣಿಗೆ ಮುದವಿತ್ತರೆ,ಮೆತ್ತಗೆ ಬೀಸುವ ಗಾಳಿ ವಿಭಿನ್ನ ಕಂಪನ್ನು ಸೂಸುತ್ತವೆ...ಮೊದಲ ಬಾರಿ ಸ್ಪ್ರಿಂಗ್ ನೋಡುವ ಭಾವುಕ ಹೃದಯದ ಆನಂದ ವರ್ಣಿಸಲಸದಳ....ಹಾದಿಯ ಇಬ್ಬದಿಯಲ್ಲೂ ಗುಲ್ಮೊಹರ್ ಗಳು ಅರಳಿ ನಿಂತಾಗ ಮುಂಜಾನೆಯ ಮೊದಲ ಜಾವದಲ್ಲಿ ಹಾಡು ಗುನುಗುನಿಸುತ್ತ ಹೋಗುವಾಗಿನ ಸಾರ್ಥಕತೆ....
ಜನರು ಅಪರಿಚಿತರಿರಬಹುದು..ಆದರೆ ಹೂಗಳು ಅವು ಎಲ್ಲಿ ಇದ್ದರು ನಮ್ಮನ್ನು ಗುರುತಿಸುತ್ತವೆ...ನಮ್ಮನ್ನು ನೋಡಿ ನಗುತ್ತವೆ..
ಇದು ಕವಿ ಸಮಯ ....ಸ್ಪ್ರಿಂಗ್ ಎಂಬ ಈ ಮಧುರಾನುಭೂತಿ ಯಲ್ಲಿ ಕವಿತೆಯನ್ನು ಬರೆಯಲಾರದೆ ಇರಲಾರ ಕವಿ...ಆಂಗ್ಲ ಕವಿ ವರ್ಯರ ಹಲವು ರಚನೆಗಳಿಗೆ ಸ್ಫೂರ್ತಿ ಈ ಸದಾಬಹಾರ ಕಾಲ...
..
ಹಿಂದೂಸ್ತಾನಿ ಸಂಗೀತದ ಬಹಾರ್ ರಾಗವನ್ನು ಸೃಷ್ಟಿಸಿದ್ದು ಈ ಸಮಯದಲ್ಲೇ ಇರಬಹುದೇನೋ???ಯುರೋಪ್ ಪ್ರವಾಸಕ್ಕೂ ಇದು ಸಕಾಲ .ನನಗಿದುಮೊದಲ ಸ್ಪ್ರಿಂಗ್ ...ಬನ್ನಿ ನೀವು ನನ್ನೊಂದಿಗೆ ಈ ಅನುಭವವನ್ನು ಸವಿಯಿರಿ













(೨೭ ಮಾರ್ಚ್ ೨೦೧೧ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)

Monday, January 17, 2011

ಮೋಂಬತ್ತಿಯ ಬೆಳಕಲ್ಲಿ...

ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ
ನಿನ್ನ ಜೊತೆ ಇಲ್ಲದೆ ಮನ ವಿಭ್ರಾಂತ....
ಸುಮ್ಮನೆ ಗುನುಗಿಕೊಳ್ಳುತ್ತಾ..ಹೊಸ್ತಿಲ ಮೇಲೆ ನಿಂತಿದ್ದೆ...ತುಳಸಿ ಕಟ್ಟೆಯ ಮೇಲೆ ಹಚ್ಚಿದ ದೀಪ.ಗಾಳಿಯೊಂದಿಗೆ ''ನಾನೂ ಸರಸಿ ನೀನು ಅರಸ,,'' ಎಂದು ಹಾಡಿಕೊಳ್ಳುತ್ತಿರಬಹುದ???ಅನ್ನೋ ಯೋಚನೆ...ಮನೆಯೊಳಗೇ ಗವ್ವೆನ್ನುವ ಮೌನ...ಹೊರಗೆ ...ಗಾಳಿಯ ಸದ್ದಾದರೂ ಇದೆಯಲ್ಲ....ಹೆಚ್ಹು ಹೊತ್ತು ಹೊಸ್ತಿಲ ಮೇಲೆ ಹೆಣ್ಣುಮಕ್ಕಳು ನಿಲ್ಲುವಂತಿಲ್ಲ..ಮುಸ್ಸಂಜೆಯಲ್ಲಿ....ಹಾಗೆಂದು ಅಜ್ಜಿ ಹೇಳಿದ್ದು...ನಡುಮನೆಯ ಗೋಡೆಗಡಿಯಾರ ೧೨ ಹೊಡೆದಾಗ ಬಡಿದುಕೊಳ್ಳುವಂತೆ ನನ್ ಮನಸಲ್ಲೂ ಸದ್ದು....
ಒಳಗೆ ಬಂದೆ...ಮುಸ್ಸಂಜೆ ಸಮಯ ಕದವನ್ನು ಹಾಕುವಂತಿಲ್ಲ...ಲಕ್ಸ್ಖ್ಮಿ ಒಳಬರುವ ಹೊತ್ತು...
''ಯಾಕೆ ಅಲ್ಲೇ  ನಿಂತಿದ್ದಿ ಒಳಬಂದು ನನ್ನೊಂದಿಗಾದ್ರು  ಮಾತಾಡಬಾರದ'''???
ಯಾರು??ಯಾರದು,,??
''ನಾನು ಮೊಂಬತ್ತಿ..''
ನನ್ನ ಏಕಾಂತ ನೋಡಿ ಅದಕ್ಕೂ ಕಿರಿ ಕಿರಿ ಆಗಿರಬೇಕು...''ನಿನ್ನೊಂದಿಗೇನು ಮಾತು??''ಅನ್ನುವ ಧಿಮಾಕು ನನ್ನದು...
''ನಿನ್ನ ಒಳದಳಲ ನಾನಲ್ಲದೇ ಇನ್ಯಾರು ತಿಳಿದಾರು ಹುಡುಗಿ ಬಾ ನಿನಗೆ ಸಮಾಧಾನ ಹೇಳುವೆ..''
''ನಿನ್ನ ಹತ್ತಿರ ಏನು ಹಂಚಿ ಕೊಳ್ಳಲಿ..??ಇನ್ನೆರಡು ಘಂಟೆ ಅಷ್ಟೇ ನಿನ್ನ ಆಯಸ್ಸು ..ನಂತರ ಮತ್ತೆ ನಾನೊಬ್ಬಳೆ ನನ್ನ ಏಕಾಂತದೊಡನೆ...''
''ನಿನೋಬ್ಬಳೆ???ನಿನ್ನ ಏಕಾಂತದೊಂದಿಗೆ??ಏಕಾಂತದೊಡನೆ  ಸಖ್ಯ ಎಲ್ಲರಿಗು ಸಾಧ್ಯವಾಗದು ಹುಡುಗಿ.ಏಕಾಂತ ನಿನ್ನೊಂದಿಗೆ ಇರುವಾಗ  ನೀ ಹೇಗೆ ಒಬ್ಬಳೇ ಆದಿಯ??ನಿನ್ನೊಂದಿಗೆ ನಿನ್ನ ದಿವ್ಯ ಏಕಾಂತವಿದೆ...''
ಆದರೆ ಅದಕ್ಕೆ ಜೀವವಿಲ್ಲ..ಅದು ನನ್ನೊಡನೆ ಮಾತಾಡುವುದಿಲ್ಲ...ನನಗೇ ಮಾತಾಡಬೇಕು..ಮೌನದ ಸಿಂಪಿಯಿಂದ ಮಾತೆಂಬ ಮುತ್ತುಗಳನ್ನು  ಚಲ್ಲಬೇಕು..ಅದನ್ನಾರಿಸುವ ಒಬ್ಬ ಸಂಗಾತಿ ಬೇಕು..ಅದನ್ನು ಸುರಿದು..ಪೋಣಿಸುವ ಜೊತೆಗಾರ ಬೇಕು...ನಿನ್ನ ಏಕಾಂತಕ್ಕಿದು ಸಾಧ್ಯವೇ??
''ಸಾಧ್ಯ...ಆದರೆ ಏಕಾಂತದ ದಿವ್ಯ ಮೌನದ ಮಧುರ ನಾದವನ್ನು ಆಲಿಸಲು ನಿನಗೆ ಸಾಧ್ಯವೇ ಹುಡುಗಿ??''
ಮೌನದ ನಾದ??ಅದು ಮೌನ ಅದನ್ನಾಲಿಸುವುದು  ಹೇಗೆ ??
ಮೊಂಬತ್ತಿಯ ಮೌನ .....
ಯಾಕೆ ಮೌನ...ಏನಾದ್ರು ಮಾತಾಡು... ಈಗಾದ್ರು ಸಮಾಧಾನ ಎಂದೆ. ಮತ್ತೆ ಮಾತಾಡದೆ..ಸುಮ್ಮನ್ನಿದ್ದಿ...ನೋಡು ಹೇಳಬೇಕಾದ್ದನ್ನು ಹೇಳಿಬಿಡು...ನಿನ್ನರ್ಧ ಜೀವ ಕರಗಿ ಹೋಗಿದೆ...ನೀ ಪೂರ್ತಿ ಮುಗಿದು ಹೋಗುವ ಮುನ್ನ ನನ್ನ ಮತ್ತು ಈ ಏಕಾಂತದ  ಸಖ್ಯ ಮಾಡಿಸಿ ಹೋಗು...ಕೇಳುತ್ತಿರುವೆಯ????ಏ ಮೊಂಬತ್ತಿ...
ಹ್ಮ್ಮ್ಮ್...ಕೇಳಿಸಿಕೊಂಡೆ...ನೋಡು ನನ್ನ ಮೌನವನ್ನ ನೀನು ಹೇಗೆ ಬೇಕಾದರೂ ಅರ್ಥೈಸಿಕೊಳ್ಳಬಹುದು..???
ಹಾಗೆಂದರೆ ಏನರ್ಥ...??
ಕತ್ತಲೆ..ಮತ್ತು ಬೆಳಕಿಗಿರುವುದು ನಿನ್ನ ಕಣ್ಣು ರೆಪ್ಪೆಯ ಅಂತರ..ಅಷ್ಟೇ...ರೆಪ್ಪೆ ಮುಚ್ಚಿತ್ತಿದ್ದಿ ಅಂದರೆ..ಜಗವೆಲ್ಲ ಜಗಮಗಿಸುತ್ತಿದ್ದರು..ನಿನ್ನ ಕಣ್ಣಲ್ಲಿ ಬರಿ ಕತ್ತಲೆ....ರೆಪ್ಪೆ ತೆರೆದರೆ ಮತ್ತೆ ನೀ ಆ ಬೆಳಕಿಗೆ..
ಬೆಳಕೆಂದರೆ ಬರಿ ಕಣ್ಣಿಗೆ ಕಾಣುವ ಬೆಳಕಲ್ಲ...ನಿನ್ನಾತ್ಮದ  ಬೆಳಕು...ಕೇಳು ಹುಡುಗಿ ನಿನ್ನೊಳಗಿನ ಆ ದಿವ್ಯ ಏಕಾಂತದ ಬೆಳಕು...ಅದನ್ನು ಹುಡುಕು...ಆ ಏಕಾಂತದೊಡನೆ ಮಾತಾಡು..ಅಲ್ಲಿ ಪ್ರಶ್ನೆಯು ನೀನೆ ಉತ್ತರವೂ ನೀನೆ...ಮತ್ತೇಕೆ ಸಂಗಾತಿಯ ಹಂಬಲ...????
ನಿನ್ನೊಳಗಿನ ನೀನು ನಿನಗೆ ಸಿಗುವತನಕ...ಈ ಸಂಜೆಗಳ ಇಳಿಗತ್ತಲೆಯು ನಿನ್ನ ಪಾಲಿನ ಬೆಳದಿಂಗಳಗುವತನಕ.....ಮ...ತ್ತೆ.......

ಕಣ್ಣು ಮುಚ್ಚಿ ಮೋಂಬತ್ತಿಯ ಮಾತನ್ನು ಆಲಿಸುತ್ತಿದ್ದ ನನಗೇ..ಮತ್ತೆ ಏಕಾಂತ..ಕಣ್ಣು ತೆರೆದರೆ ಕತ್ತಲೆ...ಬತ್ತಿ ಆರಿಹೋದ ವಾಸನೆ....ಮತ್ತೆ ನಾ ಕೊರಗಲಿಲ್ಲ...ಮೊಂಬತ್ತಿ ನನ್ನ ಬಿಟ್ಟು ಹೋಗಿದ್ದಕ್ಕೆ...ನನ್ನೊಳಗಿನ ನಾನು ನನಗೇ ಸಿಗುವ ತನಕ....
ಈಗ...ಕುವೆಂಪು ಬರೆದ ಗೀತೆ...ನನ್ನ ಏಕಾಂತವನ್ನಳುತ್ತಿತ್ತು..
ಅಂತರತಮ ನೀ ಗುರು ..ನೀ  ಆತ್ಮ ತಮೋಹಾರಿ ....
ಹೀಗಿತ್ತು ಮೊಂಬತ್ತಿ ಒಡನೊಂದು ಏಕಾಂತದ ಸಂಜೆ...

Wednesday, January 12, 2011

ಉತ್ಸಾಹದ ಮೂಟೆ ಹೊತ್ತು ತರುವ ಹಬ್ಬಗಳೆಲ್ಲಿ ಹೋದವು???

ನಾಳೆ ಅಲ್ಲ ನಾಡಿದ್ದು ಮಕರ ಸಂಕ್ರಮಣ....ಎಳ್ಳು ಬೆಲ್ಲ ಕೊಟ್ಟು ಒಳ್ಳೊಳ್ಳೆ ಮಾತಾಡಿ ಅಂತ ಕುಸುರೆಳ್ಳನ್ನು ಕೊಟ್ಟು ಹಿರಿಯರಿಗೆ ಕಾಲಿಗೊಂದು ಉದ್ದಂಡ ನಮಸ್ಕಾರ ಹಾಕಿ ಹೊಸ ಬಟ್ಟೆ ಯಾ ಜರ ಜರ ಸಪ್ಪಳದಲ್ಲೇ ಮೈ ಮರೆಯುತ್ತಿದ್ದ  ಸಂಕ್ರಮಣಗಳು ,ಆ ಸಡಗರ ಮರೆಯಾಗಿ ಎಷ್ಟೋ ವರ್ಷಗಳಾದವು...ಇವತ್ತು ಮನಸಿಗೆ ಬಂದಿದ್ದು ಅದೇ ವಿಷಯ...ಅವರಿವರ ವಿಷಯ ಯಾಕೆ ??ನಾನೆ  ಅಮ್ಮನ ರೇಷ್ಮೆ ಸೀರೆ ಹರಿದು ಅದನ್ನು ಲಂಗ ಮಾಡಿ   ಅದಕ್ಕೊಂದು ಪುಟ್ಟ ಸೀರೆ ರವಿಕೆ ಹೋಲಿಸಿಕೊಂಡು ದಾವಣಿ ಹಾಕಿಕೊಂಡು...ಮನೆ ಮನೆಗೆ ಎಳ್ಳು ಹಂಚೋಕೆ ಹೋಗುವ ಸಂಭ್ರಮವನ್ನ ಮನಸ್ಪೂರ್ತಿ ಅನುಭವಿಸಿದ್ದೇನೆ...


ಸಂಕ್ರಾಂತಿ  ಹಬ್ಬ  ಬರುವ ೨ ತಿಂಗಳು ಮುಂಚಿನಿಂದಲೇ  ನಮ್ಮ ತಯಾರಿ ಶುರು ...ಅಂಥದ್ದೇನು  ತಯಾರಿ ಅಂದಿರಾ????ಆಗ ನಾವು ಮಾರುಕಟ್ಟೆಯಲ್ಲಿ ಸಿಗುವ  ಸಕ್ಕರೆ ಗುಳಿಗೆಗಳನ್ನು ತರುತ್ತಿರಲಿಲ್ಲ...ಮನೆಯಲ್ಲೇ  ಎಳ್ಳು ತಯಾರಿಸುತ್ತಿದ್ದೆವು...ಸಕ್ಕರೆಪಾಕ ವನ್ನು ೭ ಬಾರಿ ಸೋಸಿ -ಕಾಸಿ  ಅದಕ್ಕೆ ನಿಂಬೆ ಹಣ್ಣು ಹಿಂಡಿ ಸುಧಾರಸ ಎಂಬ ಪಾಕ ತಯಾರಿಸಿ...ಎಳ್ಳು,ಗೋಡಂಬಿ ಬೀಜ,ಕುಂಬಳ ಬೀಜದ ಒಳತಿರುಳು,ಜೀರಿಗೆ,ಬಡೆಸೋಪು,ಲವಂಗ ,ಶೇಂಗ,ಪುಟಾಣಿ.ಹೀಗೆ ಎಲ್ಲವನ್ನು ಒಂದು ಹರಿವಾಣದಲ್ಲಿ ಹಾಕಿ  ಕೆಂಡ ಹಾಕಿದ ಶೇಗಡಿ ಮೇಲೆ ಆ ಹರಿವಾಣ ಇಟ್ಟು,,,ಒಂದೆರಡು ಚಮಚ ಸುಧಾರಸ ಹಾಕಿ ...ಮೆತ್ತಗೆ ಕೈ ಆಡಿಸಬೇಕು...ಅದು ನಸುಕಿನಲ್ಲಿ ಎದ್ದು..ಏಕೆಂದರೆ ಛಳಿ ಬಿದ್ದಷ್ಟು ಎಳ್ಳಿನ ಮೇಲೆ ಸಕ್ಕರೆ ಮುಳ್ಳುಗಳು ಏಳುತ್ತವೆ...ಅದಕ್ಕೆ ಸೂರ್ಯನ ದರ್ಶನ ಆಗಬರದಂತೆ......


ಇನ್ನೇನು ಜನೆವರಿ ತಿಂಗಳ ೧೫ ಬಂದೆ ಬಿಡ್ತು ....ಅನ್ನೋ ಹೊತ್ತಿಗೆ ಈ ಎಳ್ಳುಗಳು ಬಿಳಿ ಬಿಳಿ ಅರಳು ಮಲ್ಲಿಗೆಯ ನಗುವನ್ನು ಶೆಗಡಿಯ ಬಿಸಿಯಲ್ಲೇ  ನಗುತ್ತವೆ...ನಂತರದ್ದು ಅದನ್ನು ಎಲ್ಲಾ ಬಂಧು ಬಾಂಧವರಿಗೆ  ಕಳಿಸುವ ಕಾರ್ಯಕ್ರಮ..ಕಾಮತ್ ಮಾಮನ ಅಂಗಡಿಗೆ ಹೋಗಿ...ಚಂದದ ಗ್ರೀಟಿಂಗ್ ತಂದು ಅಥವಾ ಎಷ್ಟೋ ದಿನಗಳಿಂದ ಪುಸ್ತಕದಲ್ಲಿ ಒಣಗಿಸಿಟ್ಟ ಗುಲ್ಮೊಹರ್ ,ಹೂವು ,ಎಳೆಗಳು ಗುಲಾಬಿ ಪಕಳೆಗಳನ್ನು ಬಳಸಿ ಆಸ್ಥೆ ಯಿಂದ ಗ್ರೀಟಿಂಗ್ ತಯಾರಿಸಿ...ಅಲ್ಲಿ  ಇಲ್ಲಿಂದ ಕದ್ದು ಕೆಲ ಸಾಲುಗಳನ್ನು ಬರೆದು...ತಯಾರಿಸಿದ ಎಳ್ಳು ಹಾಕಿ...ಅಂಚೆ ಪೆಟ್ಟಿಗೆಗೆ ಹಾಕಿದರೆ ಏನೋ ಒಂದು ದೊಡ್ಡ ಸಮಾಧಾನ...ಕೆಲವೊಮ್ಮೆ ಸ್ಟಾಂಪ್ ಮರೆತು ಗ್ರೀಟಿಂಗ್ಸ್ ನನಗೇ ವಾಪಾಸ್ ಸಿಕ್ಕಿದ್ದೂ ಉಂಟು...
ಸಂಕ್ರಾಂತಿಯದಿನ ಅದು ನಮ್ಮದೇ ದಿನ...ಆ ದಿನ ಆಬ್ಲಿಗೆ...ಅಂದರೆ ಕನಕಾಂಬರ ಹೂ ಮುಡಿಯಲೆಬೇಕಂತೆ,,,ಅದು ಆ ಹೊತ್ತಿಗೆ ಅರಳುವ ಹೂವು...ನಮ್ಮಕಡೆ ಪ್ರತಿ ಮನೆಯಲ್ಲೂ ಮಾರು..ಅಲ್ಲದಿದ್ದರೂ ಮೊಳ  ಅಬ್ಬಲಿಗೆ  ಸಿಕ್ಕೆಸಿಗುತ್ತೆ...ಅದಲ್ಲದಿದ್ದರು...ಆಡುಸೋಗೆ  ಹೂವು ಅಬ್ಬಲಿಗೆಯಂತೆ ಕಾಣುವ ಬಿಳಿ ಹೂ ..ಅದನ್ನು ನನ್ನ ಸೋದರತ್ತೆ ಅಕ್ಕರೆಯಿಂದ ದಂಡೆ ಕಟ್ಟಿ ನನ್ನ ನಾಗರ ಜಡೆಗೆ  ಮುಡಿಸಿ...ಸಿಂಗಾರ 
ಮಾಡುತ್ತಿದ್ದನ್ನು ಮರೆಯಲಾದೀತೇ..??ನಂತರ ಮನೆ ಮನೆ ತಿರುಗಾಡಿ ...ಪುಟ್ಟ ಸ್ಟೀಲ್ ಡಬ್ಬಿ ಖಾಲಿ ಆಗುತ್ತೇನೋ ಅನ್ನೋ ಭಯದಲ್ಲೇ..ನಾಲ್ಕೇ ಕಾಳು  ಕೊಟ್ಟು ನನ್ನ ಡಬ್ಬಿ ,ನಿನ್ನ ಡಬ್ಬಿ ಅಂತ ತಂಗಿ ನಾನೂ ಜಗಳ ಮಾಡುತ್ತ ..ರಸ್ತೆಲೇ ಮಾತು ಬಿಟ್ಟು...ಮತ್ತು ದೋಸ್ತಿ ನೂ ಆಗಿ ಮನೆಗೆ ಮರಳುತ್ತಿದ್ದ ದೃಶ್ಯ...ಇವತ್ತಿಗೂ ನಿಚ್ಚಳ .......
ಮತ್ತೊಂದು ವಿಶೇಷ  ಅಂದ್ರೆ ಸಂಕ್ರಾಂತಿಯ ಜಾತ್ರೆಗಳು....ನಮ್ಮೂರಿಂದ  ೫-೬ ಮೈಲಿ ದೂರ ಇರೋ ಸಾಲಗಾಂವಿ ಯಲ್ಲಿ ಬಾಣನ್ತೆವ್ವ ದೇವಿ ಯಾ ಜಾತ್ರೆ,ದನಗಳ ಸಂತೆ  ಆಗುತ್ತೆ ...ಅಲ್ಲಿ ಮಾವಿನ ತೋಪಿನ ನಡುವೆ  ಅಂಗಡಿ ಗಳು ...ಎಷ್ಟ್ ಚಂದ...ಅಲ್ಲೇ ಊಟ ಕಟ್ಟಿಕೊಂಡು ಹೆಗೆಡೆರ್ ಅಡಿಕೆ ತೋಟದಲ್ಲಿ  ಕೂತು ಊಟ ಮುಗಿಸಿ...ಜೋಕಾಲಿ..ಮಿರ್ಚಿ ಭಜಿ ,,,ಕಬ್ಬಿನಹಾಲು ,,,ಮಂಡಕ್ಕಿ ಖಾರದಾಣಿ. ತಂದು ಒಂದಷ್ಟನ್ನು ಕಟ್ಟಿಸಿ ಕೊಂಡು ಬಂದರೆ...ಇನ್ನೊಂದ್ ಜಾತ್ರೆ ಬರೋತನ್ಕ ಅದರ ಉಮೇದಿ ಜಾರಿಯಲ್ಲಿರುತ್ತೆ,,,,ಮತ್ತು ಎಷ್ಟೋ ''ಚಾಳಿ ಟೂ ''ಗಳು ಮತ್ತೆ ಗೆಳೆತನ ವಾಗಿ ಮಾರ್ಪಡುವ ಸದವಕಾಶ ಈ ಹಬ್ಬದಲ್ಲಿ  ಬಹಳ ....
ಹೈಸ್ಕೂಲು ಮುಗಿಯೋ ಹೊತ್ತಿಗೆ  ಈ ಜಾತ್ರೆ ಗೆ ಹೋಗೋ ಉತ್ಸಾಹ  ಕಡಿಮೆ ಆಗುತ್ತ  ಬಂತು ..ಅದಕ್ಕೆ ಕಾರಣ ..ಮತ್ತೆ ಯಾವತ್ತಾದ್ರು ವಿವರಿಸ್ತೀನಿ..........ಕಾಲೇಜ್ ಗಳಲ್ಲಂತು ಇಲ್ಲವೇ ಇಲ್ಲ ಅನ್ನೋಷ್ಟು ಕಡಿಮೆ ಎಳ್ಳು,ಕಡಿಮೆ ತಿರುಗಾಟ ,,ಅಬ್ಬಲಿಗೆ  ಮುಡಿದದ್ದು ಕಡಿಮೆಯೇ...
ಹಾ ಮರೆತೇ  ಬೆಳಗಾವಿ,,,ಸೋಲ್ಹಪುರ್  ಗಳಲ್ಲಿ ಮಕ್ಕಳಿಗೆ ಬೊರೆ ಹಣ್ಣು ಮಂಡಕ್ಕಿಯ ಸ್ನಾನ ಮಾಡಿಸಲಾಗುತ್ತೆ...ಸಂಜೆಗೆ ಆರತಿ ಮಾಡುವುದು ಇದೆಯಂತೆ...ಇದು ನನ್ನ ಅತ್ತೆಯ ತವರುಮನೆಯ ನೆನಪಿಂದ ಹೆಕ್ಕಿದ್ದು...
ಆದರೆ ಈಗ ಈ ಉತ್ಸಾಹ ಇಲ್ಲ....ನನಗೇ ಇಲ್ಲವೋ??ನನ್ನ ವಾರಗೆಯವರೆಲ್ಲರಿಗೆ ಹೀಗೆಯೋ??ಅಥವಾ ಈಗಿನ ದಿನಮಾನದ ಮಕ್ಕಳಲ್ಲಿ ಈ ಹಬ್ಬಗಳ ಬಗ್ಗೆ ಆಕರ್ಷಣೆ ಕಡಿಮೆ ಆಗಿದೆಯೋ ಗೊತ್ತಿಲ್ಲ...ಒಟ್ಟಿನಲ್ಲಿ ಸಂಕ್ರಮಣ ವೆ ಏಕೆ ಯಾವ ಹಬ್ಬಗಳಲ್ಲೂ ಮೊದಲಿನ ಸ್ವಾರಸ್ಯ ಇಲ್ಲ ಅನಿಸುತ್ತೆ ..ನಾವು ದೊಡ್ಡವರಾಗಿ ಬಿಟ್ವ???ಅಥವ ನಮ್ಮ ಮಕ್ಕಳಿಗೆ ಈ ಹಬ್ಬಗಳ  ನಿಜವಾದ ರುಚಿಯನ್ನು ಉಣಿಸಲು ವಿಫಲವಾದೆವ  ಗೊತ್ತಿಲ್ಲ...ಯಾಕೋ ನೀರಸ  ಅನ್ನೋ ವಂಥ ವಾತಾವರಣ...
ನನಗನಿಸಿದ ಮಟ್ಟಿಗೆ ..ಶಹರದ ಗಾಳಿ ಬಹು ಜೋರಾಗೆ ಬೀಸಿದೆ...ಮೊದಲಿನವರ ತಾಳ್ಮೆ,ಸಹನೆ ,ಇರದು ನಮ್ಮಲ್ಲಿಲ್ಲ...ಹಬ್ಬಗಳೆಂದರೆ ನಮ್ಮ ಮನಸಿಗೆ ಬರುವುದು ಎರಡೇ ವಿಷಯ,,,೧)ಹಬ್ಬ ಯಾವ ವಾರ ಬಂದಿದೆ...(ಇದು ಸರದಿ ರಜೆಗಾಗಿ )....೨)ಈ ಬಾರಿಯ ರಜೆಯಲ್ಲಿ ಯಾವ ಬಾಕಿ ಕೆಲಸ ಪೂರೈಸ ಬಹುದು ಅಥವಾ ಎಷ್ಟು ವಿರಮಿಸ ಬಹುದು...
ಹೀಗೆ  ಮುಂದುವರಿದರೆ...ಒಂದು ದಿನ  ನಮ್ಮ ಹಬ್ಬಗಳು ಕೇವಲ ಕ್ಯಾಲೆಂಡರ್  ನಲ್ಲಿ ಕೆಂಪು ಅಕ್ಷರವಾಗಿ ಉಳಿದು ಹೋಗುತ್ತೇನೋ...ಅಲ್ಲವೆ??.....ಹೊಸವರ್ಷದ ಮೊದಲ ಪೋಸ್ಟ್ ಇದು...೧೨ ದಿನಗಳ ನಂತರ ..ಈ ಬಾರಿಯಾದರೂ ಆಲಸ್ಯದ ಸೂತಕ ತೊಳೆದು ಹೋಗಿದೆ ಅನ್ಕೋತೀನಿ....
ಬ್ಲಾಗ್  ಸ್ನೇಹಿತರೆಲ್ಲರಿಗೂ ಸಂಕ್ರಮಣದ  ಶುಭಾಶಯಗಳು,,,,