Thursday, September 24, 2020

ಅಡುಗೆ ಎಂಬ ದಿವ್ಯ ಧ್ಯಾನ


ಅಲ್ಲೆಲ್ಲೋ ದೂರದಲ್ಲಿ ಕೇಳುವ ಹಕ್ಕಿ ಚಿಲಿಪಿಲಿ ಕಿಟಕಿಯಿಂದ ಕದ್ದುಮುಚ್ಚಿ ಇಣುಕುವ ಸೂರ್ಯ ರಶ್ಮಿ,  ಆ ಸಮಯದಲ್ಲೇ ಆರಂಭವಾಗುತ್ತದೆ ಅವಳ ಅಡುಗೆಮನೆ ಎಂಬ ಆರ್ಕೆಸ್ಟ್ರಾ , ಕುದಿಯುವ ನೀರಿನಲ್ಲಿ ಬೀಳುವ ಆ ಎರಡು ಚಮಚ ಚಾ ಹುಡಿ, ಅದರ ಹಿಂದೆ ಹಿತ್ತಲ ಮೂಲೆಯಿಂದ ತಂದ ಮಜ್ಜಿಗೆ ಹುಲ್ಲು, ಶುಂಠಿ ಏಲಕ್ಕಿಯನ್ನು ಕುಟ್ಟಾಣಿಯಲ್ಲಿ ಜಜ್ಜಿದ ಮೆತ್ತನೆಯ ಸದ್ದು, ಇನ್ನೇನು ಚಹಾ ಘಮಕ್ಕೆ ಮನಸು ಹಾತೊರೆದು ಕಾಯುತ್ತಿರುವಾಗಲೇ ಅತ್ತ ಇಡ್ಲಿ ತಟ್ಟೆಗೆ ಹಿಟ್ಟು ತುಂಬಿ ಬೇಯಲು ಬಿಡಬೇಕು. ಮತ್ತೆ ತುರಿಮಣೆಯಮೇಲೆ ಬಿಳಿಯೊಡಲ ತೆಂಗಿನ ತಿರುಳು ಹಾಗೆ ನಾದ ಹೊಮ್ಮಿಸುತ್ತ ಬೀಳುತ್ತಿರುವಾಗಲೇ ಮನಸ್ಸು ಮುಂದಿನ ಕೆಲಸಗಳಬಗ್ಗೆ ಒಂದು ನಕ್ಷೆ ತಯಾರಿಸಿಬಿಡುತ್ತದೆ ಅಟ್ಟೆ ಯಿಂದ ಬಿಸಿಬಿಸಿ ಉಗಿ ಅಕ್ಕಿ ಉದ್ದಿನ ಘಮಲಿನೊಂದಿಗೆ ಮನೆತುಂಬ ಹೊಮ್ಮುವಾಗಲೇ , ಆ ಪುಟ್ಟ ಕಬ್ಬಿಣದ ಕಾವಲಿಯಲ್ಲಿ ಬಿಸಿಯಾದ ತೆಂಗಿನ ಎಣ್ಣೆಯಲ್ಲಿ  ಬಿದ್ದ ಪುಟ್ಟ ಸಾಸಿವೆಕಾಳುಗಳು ಚಟಪಟ ಸದ್ದುಮಾಡಿ ಇಂಗು, ಕರೀಬೇವು ಒಣಮೆಣಸಿನೊಂದಿಗೆ ರುಬ್ಬಿದ ಚಟ್ನಿಯನ್ನು ಚುಂಯ್ ಎನ್ನುತ್ತಾ ಅಪ್ಪಿಕೊಳ್ಳುವಲ್ಲಿಗೆ ಮುಂಜಾವು ಅಡುಗೆಮನೆಯಲ್ಲಿ ತೆರೆದುಕೊಳ್ಳುತ್ತದೆ. 


 ದಿನನಿತ್ಯದ ಅಡುಗೆ ಎಂಬ ದಿನಚರಿಯನ್ನು ಮುಗಿಯದ ಕೆಲಸ, ವಿರಾಮ ಕೊಡದ ದುಡಿಮೆ ಎಂದು ಗೊಣುಗುವವರು ಇದ್ದಾರೆ , ಆದರೆ ಸ್ವಲ್ಪ ಮಟ್ಟಿಗಿನ ಪ್ರಯತ್ನ ಮತ್ತು ತಯಾರಿ, ನಿಮ್ಮ ಈ ನಿಲುಮೆಯನ್ನು ಖಂಡಿತ ಬದಲಾಯಿಸುತ್ತದೆ ಎಂಬುದು ಅಡುಗೆಮನೆಯ ಯಶಸ್ವೀ ಒಡತಿಯರ ಅಂಬೋಣ. 

ಮಗುವಿಗೆ ಸಪ್ಪೆ ಅಡುಗೆ , ಗಂಡನಿಗೆ ಖಾರ ಜಾಸ್ತಿ , ತನಗೆ ಅವೆರಡರ ಮಧ್ಯದ ಒಂದು ರುಚಿ, ಒಂದೇ ಅಡುಗೆಯನ್ನು ಈ ಮೂರು ಸ್ಥರದಲ್ಲಿ ಬದಲಾಯಿಸುವ ಕಲೆ ಆಕೆಗೆ ಕಲಿಸಿದವರ್ಯಾರು? ಮನೆಯಲ್ಲಿ ಹತ್ತು ಜನರಿರಲಿ ಅಥವಾ ಇಬ್ಬರೇ ಇರಲಿ ಅವರವರ ಆದ್ಯತೆಗೆ ತಕ್ಕಂತೆ ಅಡಿಗಡಿಗೆ ಅಡುಗೆ ಮಾಡಿ ಮುಂದಿಟ್ಟು ಅದನ್ನು ತಿಂದಾಗ ಎದುರಿನವರ ಕಣ್ಣಲ್ಲಿ ಮೂಡುವ ಆ ಬೆಳಕನ್ನೇ , ಮೊಗದಲ್ಲಿ ಅರಳುವ ನಗುವನ್ನೇ ತನ್ನ ಬಹುಮಾನ ಎಂದು ಬೀಗುವ ಆಕೆ ಅಲ್ಪತೃಪ್ತೆ ಎಂದೇ ಹೆಸರುವಾಸಿ!! 


ಒಂದು ಅಡುಗೆ ಮಾಡೋದಕ್ಕೆಷ್ಟು ಮಾತಾಡ್ತಾಳೆ ಅನ್ನೋ ಉಡಾಫೆ ಮಾತಾಡುವ ಮಂದಿಯನ್ನು ನಾವು ಆಗಾಗ್ಗೆ ಕಾಣುತ್ತೇವೆ , ಅಡುಗೆ ಮಾಡುವುದೆಂದರೆ ರಂಗೋಲಿಗೆ ಬಣ್ಣ ಹೊಂದಿಸಿದಂತೆ,  ಕೆಲವೊಮ್ಮೆ ಬಣ್ಣ ಸಿಗದಿದ್ದರೂ ಬಿಳಿ ಎಳೆಗಳೊಂದಿಗೆ ಚಂದದ ಚಿತ್ತಾರ ಬಿಡಿಸಿದಂತೆ , ದಿನ ನಿತ್ಯದ ಅಡುಗೆಗೆ ಎಣ್ಣೆ ಪಸೆ ಜಾಸ್ತಿ ಇರಬಾರದು, ಮಸಾಲೆ ನುಣ್ಣಗಾಗಬೇಕು , ಅನ್ನ ಉದುರಾಗಬೇಕು, ಚಪಾತಿ ಮಿದುವಾಗಬೇಕು ,    ಯಾವ ತರಕಾರಿಯನ್ನು ಹೇಗೆ ಕತ್ತರಿಸಬೇಕು ಹುಳಿಗೆ ಹೋಳು ಪಲ್ಯಕ್ಕೆ ,ಕೊಚ್ಚಲು , ಆಯಾ ಪದಾರ್ಥಕ್ಕೆ ಹಾಗೆ ಅಷ್ಹ್ತಷ್ಟೆ ಖಾರ ಉಪ್ಪು ಸಿಹಿ ಸೇರಿಸಿ ಪ್ರತಿಬಾರಿಯೂ ಅದನ್ನು ಒಂದೇರೀತಿ ಇರುವಂತೆ ನೋಡಿಕೊಳ್ಳುವ ಆಕೆಯ ಏಕಾಗ್ರತೆಯ ವೈಖರಿ ಧ್ಯಾನಸ್ಥ ಯೋಗಿನಿಯಂತೆ. 


ಬರೀ ಮೂರೊತ್ತಿನ ಊಟಕ್ಕಷ್ಟೇ ಅಲ್ಲ , ಮಧ್ಯ ಮಧ್ಯ ಮೆಲ್ಲಲು ಬೇಕಾಗುವ ಚಕ್ಕುಲಿ, ಚುಡಾ, ಚುರುಮುರಿ ನಿಪ್ಪಟ್ಟು ,ಕೋಡುಬಳೆ ಮಾಡಿಡುವ ಈ ಅಡುಗೆ ಮನೆ ಅಧ್ಯಕ್ಷಿಣಿಗೆ ದಣಿವೆ ಇಲ್ಲ. ಹಬ್ಬ ಹರಿದಿನದ ಅಡುಗೆಗಳು ಅಷ್ಟಿಷ್ಟಲ್ಲ , ಸಂಕ್ರಾಂತಿ ಗೆ ಎಳ್ಳು , ಯುಗಾದಿಗೆ ಹಣ್ಣು , ರಾಮನವಮಿಗೆ ಕೋಸಂಬರಿ , ಕೃಷ್ಣನಿಗೆ ಉಂಡೆ , ಎಲ್ಲವನ್ನು ತಪ್ಪದೆ ಒಪ್ಪಿಸಿ ಬಿಡುತ್ತಾಳಾಕೆ,  ಅಷ್ಟಕ್ಕೂ ಈ ಅಡುಗೆ ಆಕೆಗೆ ಕೊಡಮಾಡುವ ಖುಷಿ ಎಂಥದ್ದು? ಒಮ್ಮೆ ಅಡುಗೆ ಮನೆಯ ಗುಂಗು ಹತ್ತಿತೆಂದರೆ ಅದರಿಂದ ಬಿಡಿಸಿಕೊಳ್ಳುವ ಮಾತೆ ಇಲ್ಲ , 



 

ಕೆಲವರಿಗೆ ಅಡುಗೆ ಮನೆಯೆಂದರೆ ಶಿಕ್ಷೆ , ಹಲವರಿಗೆ ಎಲ್ಲವನ್ನು ಮರೆಸಿ ಹೊಸ ಲೋಕವನ್ನು ತೆರೆದಿಡುವ ಮಾಯಾಲೋಕ , ಅಡುಗೆಮನೆ ಎಂಬುದು ಜಗತ್ತಿನ ಅತಿ ಪುರಾತನ ವಿಶ್ವವಿದ್ಯಾಲಯ , ಅಲ್ಲಿ ಪ್ರತಿಯೊಬ್ಬರೂ ವಿದ್ಯಾರ್ಥಿಯು ಹೌದು ವಿದ್ವಾಂಸರೂ ಹೌದು. ಅಡುಗೆ ಮನೆ ಎಂಬುದು ಎಲ್ಲರ ಪಾಲಿಗೂ ದಕ್ಕುವ ಸುಸಜ್ಜಿತ ಪ್ರಯೋಗಾಲಯ ,ಅದನ್ನು ಹೇಗೆ ನಮ್ಮ ವಿಕಾಸನಕ್ಕಾಗಿ ನಾವು ಬಳಸಿಕೊಳ್ಳುತ್ತೇವೆ ಎಂಬುದು ನಮ್ಮ ಕ್ರಿಯಾಶೀಲತೆಯ ಮೇಲೆ ನಿರ್ದಾರವಾಗುತ್ತದೆ .  ನಿಮ್ಮ ಅಡುಗೆ ಮನೆ ಯಾ ಅಳತೆ ಎಷ್ಟಾದರೂ ಇರಲಿ ಆದರೆ ನೀವಲ್ಲಿ ಕಳೆದಷ್ಟು ಹೊತ್ತು ನಿಮ್ಮನು ನೀವು ಕಂಡುಕೊಳ್ಳುತ್ತಾ ಹೋಗುತ್ತೀರಿ. 


ಆರೋಗ್ಯ ಮತ್ತು ಅಡುಗೆಮನೆಗೆ ನೇರಾನೇರ ಸಂಬಂಧ ಹಿರಿಯರು ಮಾಡಿಟ್ಟ ಮಸಾಲೆ ಮರಿಗೆ ನಮ್ಮ ಫಸ್ಟ್ ಏಡ್ ಕಿಟ್ ಎಂದರೆ ತಪ್ಪಲ್ಲ, ಅಜೀರ್ಣಕ್ಕೆ ಜೀರಿಗೆ , ಏಲಕ್ಕಿ. ಹಲ್ಲು ನೋವಿಗೆ ಲವಂಗ , ಶೀತ ಜ್ವರಕ್ಕೆ ಶುಂಠಿ ದಾಲಚೀನಿ ಕಾಳುಮೆಣಸ ಗಳು  ಅಮೃತಸಮ ನೈಸರ್ಗಿಕ ಪರಿಹಾರೋಪಾಯಗಳು. ಈಗ ಅಡುಗೆಮನೆ ಫಾರ್ಮಸಿಯಾಗಿಯೂ ಬದಲಾಯಿತು ಅಲ್ಲವೇ? ಅಡುಗೆ ಮಾಡುವ ಮನಸ್ಸಿದ್ದರೆ ಅಡುಗೆ ಮನೆಯೇ ನಿಮಗೆ ದಾರಿ ತೋರುತ್ತದೆ ಎಂಬ ನುಡಿಯೊಂದಿದೆ , ಅಂತೆಯೇ ಅಡುಗೆಮನೆಯನ್ನು ಸಂಭಾಳಿಸಲು ಬಂದರೆ ಸಾಕು ಬದುಕು ತಂತಾನೇ  ಸುಧಾರಿಸುತ್ತದೆ ಎಂಬ ಗಾದೆಮಾತು ನಿತ್ಯ ಸತ್ಯ . 



 ದಿನನಿತ್ಯದ ಈ ಅಡುಗೆಮಾಡುವ ದಿನಚರಿ  ಖಿನ್ನತೆ ಯಿಂದ ಹೊರಬರಲು ಥೆರಪಿಯಂತೆ ಕೆಲಸ ಮಾಡಿ ನಮ್ಮ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು  ಸಹಾಯಮಾಡುತ್ತದೆ . ನೀವು ಮಾಡುವ ಅಡುಗೆಯನ್ನು ಒಪ್ಪವಾಗಿ ಜೋಡಿಸಿ ಒಂದು ಚಿತ್ರ ತೆಗೆದಿಟ್ಟುಕೊಂಡು ಸಂಗ್ರಹಿಸಿ , ಅದನ್ನು ಮಾಡುವ ಮೊದಲು ಮಾಡಿದ ನಂತರ ನಿಮ್ಮ ಆಲೋಚನೆಗಳನ್ನು ಬರೆದಿಡಿ. ಸಾಂಪ್ರದಾಯಿಕ ಅಡುಗೆಗಳು ಅವನ್ನು ನೀವು ಕಲಿತ ರೀತಿ , ಅವುಗಳ ಹಿಂದಿನ ಕಥೆಯನ್ನು ಬಂಧು ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ನಿಮ್ಮ ಖುಷಿಯನ್ನು ಇನ್ನು ಹೆಚ್ಚಿಸುತ್ತದೆ. ಎಷ್ಟೇ ಕ್ಲಿಷ್ಟ ಪಾಕ ವಿಧಾನಗಳನ್ನು ತಯಾರಿಸಿದರೂ ಅದರಲಿ ಒಂಚೂರು ಪ್ರೀತಿ ಹಾಕಲು ಮರೆಯಬೇಡಿ. ನೀವು ಇಂದು ಮಾಡುವ ಅಡುಗೆ , ಉಣಿಸುವ ಊಟ , ಮುಂದೆಂದೋ ಯಾರದೋ ಸವಿ ನೆನಪಾಗುವುದರಲ್ಲಿ ಸಂಶಯವಿಲ್ಲ. 


ನೀವು ದಿನವಿಡೀ ಅದೆಷ್ಟೇ ವ್ಯಸ್ತ ರಾಗಿದ್ದರೂ ಸಂಜೆ ಒಂದಷ್ಟು ಹೊತ್ತು ನಿಮ್ಮ ಅಡುಗೆ ಮನೆಯಲ್ಲಿ ಕಳೆಯಿರಿ , ಮಸಾಲೆ , ತರಕಾರಿ, ಧಾನ್ಯಗಳೊಂದಿಗೆ ಸ್ನೇಹ ಮಾಡಿಕೊಳ್ಳಿ , ಈ ಸ್ನೇಹ ಎಂದಿಗೂ ಬಿಡದ ನಂಟಾಗುತ್ತದೆ. ಇಲ್ಲಿ ಮಾತು ಹೆಚ್ಚು ,ಕಡಿಮೆಯಾಗಿ ಅಪಾರ್ಥವಾಗುವ ಸಾಧ್ಯತೆಗಳೇ ಇಲ್ಲ ಏನಿದ್ದರೂ ಮೌನ ಮತ್ತು ನಿಮ್ಮ ಮನೋಲ್ಲಾಸ ಮಾತ್ರ!!

Sunday, July 19, 2020

ವಿಕ್ಷಿಪ್ತ ರಾಗ ರಂಜನಿ

ಹೇಗಿರುತ್ತಿ ಹೀಗೆ ?

ಹೇ ಏಕತಾರಿ….

ಒಂಟಿ ಒಂಟಿ,  

ಕಂಟಿಗೆ ಕೊರಳ ಕಟ್ಟಿ ಬಿಗಿದು

ಖಾಲಿ  ಒಣ ಬಿರಡೆಯೊಳು ಬದುಕ ಸವೆಸಿ

ಯಾವಗಲೂ ಅದೇ ನಾದ ಸ್ವಲ್ಪ ಹೆಚ್ಚು ಚೂರು ಕಡಿಮೆ...

ಅಲ್ಪ ತೃಪ್ತೆ ನೀ 

ಹೇ ಏಕತಾರಿ…


ನೊಡಲ್ಲಿ

ಬಗೆ ಬಗೆಯ ವಿಧ ವಿಧದ

ನೂರು ನೂರು ತಂತಿ ವಾದ್ಯಗಳು‌.

ಯಾರೂ ಒಂಟಿ ಅಲ್ಲಾ ನಿನ್ನಂತೆ…


ಸಪ್ತ ಸ್ವರ,  ಗಮಕ , ಖಟ್ಕಾ ಮುರ್ಕಿ ಗಳ ಗುಂಗಲ್ಲಿ….

ದನಿಗೆ ದನಿಯಂತೆ ಬೆರೆಯಲು ತವಕಿಸುವ 

ವೀಣೇ  ಸಂತೂರ್ ಸಿತಾರು…


ನಾಲ್ಕೇ ತಂತಿ

ಅದಾಗ್ಯೂ

ಜೀರ್ ಹಿಡಿದಾಗ ಜುಂಯ್ಯೆಂದು ಸಾತ್ ಕೊಡುವ ತಂಬೂರಿಯ ಖರಜ್ ಷಡಜಗಳು..

ಮನಸ್ಸಿದ್ದರೆ, ಮನಸೋತರೆ ಒಂದು ತಂತಿ ಮೀಟಿದರೆ ಇನ್ನೊಂದು ನುಡಿಯುತ್ತದೆ.


ಗಿಟಾರು!!!! ಎಲ್ಲದ್ದಕ್ಕೂ ,


ಖುಶಿಗೂ ದುಖಃಕ್ಕೂ, 

ನೊಡು ಆ ಹಾರ್ಪ್ ಎನ್ನುವ ಬಿನ್ನಾಣಗಿತ್ತಿ

ಬೂಜುಕಿ ಯ ಬಾಜು ನನ್ನಮುಂದ್ಯಾರು ಎನ್ನುತ್ತ ದನಿ ಹೊಮ್ಮಿಸಿ ಅಲೆ ಅಲೆ ನಾದವಾಗಿದ್ದು…


ಇನ್ನೂ ಇವೆ ಅದೆಷ್ಟೋ ಮೊಹನ, ರುದ್ರ ವೀಣೆಗಳು ಸಣ್ಣನೆ ತಂತಿ ಮನಮೀಟಿ ಮಿಡಿಯುವ ತರಂಗಾಂತರಗಳ ಯುಗಾಂತರಕ್ಕೂ ಹರಡುವ ನಾದರೂಪಿಗಳು..


ನೀನ್ಯಾಕೆ ಅಷ್ಟು ಒಂಟಿ ಒಂಟಿ 

ಓ ಏಕತಾರಿ

ತಳಕು ಬಳುಕಿನ ಈ ಭ್ರಮಾಲೋಕದ

ನಡುವೆಯೆ ಅವ್ಯಹಾತ್  ಮಿಡಿಯುವ

ವಿಕ್ಷಿಪ್ತ ರಾಗರಂಜಿನಿ…

Wednesday, June 24, 2020

ಟೊಲಿಮೊರ ಪಾರ್ಕ್ ಉತ್ತರ ಐರ್ಲ್ಯಾಂಡ್ ನ ದೇವಿಮನೆ



ರಜೆಯಲ್ಲಿ ದೂರದ ಅಜ್ಜಿ ಮನೆಗೆ ಹೋಗುವಾಗ ಸಿಗುತ್ತಿದ್ದ ದೇವಿಮನೆ ಘಟ್ಟ...ಅದು ನಾ ನೋಡಿದ ಮೊದಲ ದಟ್ಟ ಅರಣ್ಯ...ಕತೆಯಲ್ಲಿ ಕೇಳುತ್ತಿದ್ದ ಕಾಡು ಎಂಬ ಪದದ ಕಲ್ಪನೆಗೆ ದೃಶ್ಯ ರೂಪ ಕೊಟ್ಟಿದ್ದೆ ದೇವಿಮನೆ ಘಟ್ಟ..ಜಿರ್ರ್ ಜಿರ್ರ್ ಎಂಬ ಸಂಗೀತ,ಕಾದುಹೂಗಳ ವಿಲಕ್ಷಣ ಘಮ..ಮೆತ್ತಗೆ ಹರಿಯುವ ಬೆಣ್ಣೆ ಹೊಳೆ ..ಮತ್ತು ನೆಲ ಕಾಣಿಸುವ ತಿಳಿನೀರು...ಎಲ್ಲಲ್ಲೂ ನೆರಳು ಅದೆಲ್ಲೋ ಒಂದಷ್ಟು ಬಿಸಿಲು...ಇಲ್ಲಿ ಯಾವ ದೇವಿ ಮನೇ ಮಾಡಿ ನಿಂತರು ಆಶ್ಚರ್ಯ ಪಡಬೇಕಿಲ್ಲ ಅಷ್ಟು ಹಸಿರು ಹಸಿರು ...ಇಂಥ ಕದನ್ನೊಮ್ಮೆ ಅಲೆದು ಬರಬೇಕು ಅದರ ಸನ್ನಿಧಿಯಲ್ಲಿ ಸಮಧಾನಿಸಬೇಕು ಎಂಬುದು ಬುಧಿ ಬಳಿಯುವ ಮುಂಚೆಯೇ ಬಲಿತ ಆಸೆ...ಭಾರತದಲ್ಲಿದ್ದಷ್ಟು ದಿನವೂಏನಾದರೊಂದು ಕಾರಣದಿಂದ ಅಂಥಹ ಅವಕಾಶ ಕೈ ತಪ್ಪಿ ಹೋಗುತ್ತಿತ್ತು...ಅಂತು ಇಂತೂ ಅದೊಂದು ಕನಸು ಕನಸಾಗಿ ಉಳಿದಿತ್ತು..ಗಣೇಶ ಚವತಿಗೆ ಮಂಟಪ ಸಿಂಗರಿಸಲು ಶತಾವರಿ ಗಿಡಗಳನ್ನು ಹುಡುಕಿಕೊಂಡು ಹೊಲದ ಬದುವಿನಲ್ಲಿದ್ದ ಪುಟ್ಟ ಕಾಡಿಗೆ ಹೋದಾಗ ,ಮುಂಡಗೋಡ-ಯಲ್ಲಾಪುರ ದ ನಡುವೆ ಪ್ರಯಾಣಿಸುವಾಗಲು  ಈ ಆಸೆ ಮತ್ತೆ ಮತ್ತೆ ಗರಿಗೆದರಿದ್ದುಂಟು ...  
.
ನೊರ್ದ್ರರ್ನ್ ಐರ್ಲೆಂಡ್  ಗೆ ಬಂದ ನಂತರ..ಎಲ್ಲೆಡೆ ಹಸಿರು ಶುದ್ಧ ಪರಿಸರ  ಕಾಣ ಸಿಗುತಿತ್ತು ಆದೆರೆ ...ಇಲ್ಲಿ ಅಷ್ಟು ದಟ್ಟ ಕಾಡು ಎಲ್ಲಿರುತ್ತೆ ಎಂಬ ಪ್ರಶ್ನೆ ಮನದಲ್ಲಿದ್ದುದು ಸುಳ್ಳಲ್ಲ...ಜುಲೈ ಅಗಸ್ಟ್ ತಿಂಗಳು ಇಲ್ಲಿ ಬೇಸಿಗೆ..ಎಲ್ಲರೂ  ತಿರುಗಾಟದ  ಮೂಡ್ನಲ್ಲಿರುತ್ತಾರೆ..ನಾವು ಎಲ್ಲಾದರೂ  ಹೋಗಬೇಕಲ್ಲ..ಅಂದು ಇಂಟರ್ನೆಟ್ ತಡಕಾಡಿ ಹುಡುಕಿ ತೆಗೆದಿದ್ದು ''ಟೊಲಿಮೊರ್ ಪಾರ್ಕ್''ಎಂಬ ಸ್ಥಳ ..ಹತ್ತಿರ ಇತ್ತಾದ್ದರಿಂದ ಒಂದೇ ದಿನದಲ್ಲಿ ಹಿಂದಿರುಗಲು ಅನುಕೂಲ ಎಂಬ ಕಾರಣದಿಂದ ನಾವು ಅಲ್ಲಿ ಹೊರಟಿದ್ದೆವು..ಪಾರ್ಕ್ ಎಂಬುದು ಕೇಳಿದ ಕೂಡಲೇ  ಮಕ್ಕಳು ಆಡುವಂತ ಸ್ಥಳ ಅಂದುಕೊಂಡಿದ್ದು ಆಗಿತ್ತೆನ್ನಿ...ಎಲ್ಲಾ ಪೂರ್ವಾಗ್ರಹದೊಂದಿಗೆ ನಾವು ಹೊರಟಿದ್ದು ನೊರ್ದ್ರರ್ನ್ ಐರ್ಲೆಂಡ್ ನಾ ಮೊದಲ ಅರಣ್ಯಉದ್ಯಾನ  ಟೊಲಿಮೊರ ಪಾರ್ಕ್ ಗೆ...

ಟೊಲಿಮೊರ ಪಾರ್ಕ್
ಕಲ್ಲಿನ ಮಾಹದ್ವಾರದ ಮೇಲೆ ಕೆತ್ತಿದ ೧೭೮೬ ಎಂಬುದನ್ನು ನೋಡಿಯೇ ಇದು ಬಹು ಪುರಾತನ ಐತಿಹಾಸಿಕ ಸ್ಥಳ ಎಂಬುದು ಮನದಟ್ಟಾಗಿತ್ತು.ದ್ವಾರದ ಒಳಗೆ ಹೆಜ್ಜೆ ಇಟ್ಟಂತೆ ನಾವು ಎಲ್ಲಿ ಇದ್ದಿವೆ ಅನ್ನೋದನ್ನು ಮರೆಸಿ ಬಿಡುವ ಪ್ರಕೃತಿ ಸಿರಿ..ಹಸಿರು..ತಿಳಿ ಹಸಿರು,ಕಡು ಹಸಿರು ಗಿಳಿ ಹಸಿರು,ಕೆಂಪು ಹಸಿರು ಹಸಿರು ಹಸಿರು........ಎದುರಿನಲ್ಲೇ ಅರಣ್ಯ ಇಲಾಖೆಯ ಪುಟ್ಟ ಕುಟೀರ ...ಅಲ್ಲಿ ಅರಣ್ಯದ ನಕ್ಷೆ ತೆಗೆದುಕೊಂಡು...ನಾವು ಹೊರಟೆವು...ನಿರ್ದಿಷ್ಟ ಪಡಿಸಿದ ಕೆಲವು ಜಾಗೆಗಳಲ್ಲಿ...ಅಲೆಮಾರಿಗಳು ಕಟ್ಟಿ ಕೊಳ್ಳುವಂಥ ಟೆಂಟ್.ಮತ್ತು ಕಾರವನ್ ಗಳು...ಆಹಾರ ಸಾಮಗ್ರಿ..ಪಾನೀಯ ಏನೊಂದು ಇಲ್ಲಿ ಸಿಗುವುದಿಲ್ಲವಾದ್ದರಿಂದ..ಎಲ್ಲರು ತಮ್ಮ ಅಡಿಗೆಗೆ ಬೇಕಾದ ಇಂಧನ ವನ್ನು  ಹೊತ್ತು ತಂದಿದ್ದು ಕಾಣುತ್ತಿತ್ತು....ಅದೆಷ್ಟು ಜನ..ಇದ್ದರು ಅಲ್ಲಿ ಆದರೂ ಒಂಚೂರು ಗದ್ದಲವಿಲ್ಲ...ಪ್ರಕೃತಿ ಮಾತೆಯ ಮಂಪರು  ಮಾಯವಾಗುವುದೋ ಅನ್ನುವ ಆತಂಕ ವೆ??..ಅಥವಾ ಆ ಮೌನದಲ್ಲೇ ಅವರು ಅಲ್ಲಿಯ ಆನಂದ ಸವಿಯುತ್ತಿದ್ದರೆ????ಗೊತ್ತಿಲ್ಲ..

ಇತಿಹಾಸ 
೧೬೧೧ ರಲ್ಲಿ ಮಗನ್ನಿಸ್ ಎಂಬ ಕುಟುಂಬದ ಒಡೆತನದಿಂದ ಇದರ ಇತಿಹಾಸ ಆರಂಭವಾಗುತ್ತದೆ ,ಇದು ೧೭೮೬ ರ ತನಕವೂ ದಾಯದಿಗಳಲ್ಲೇ  ಹಸ್ತಾನ್ತರಿಸಲ್ಪಡುತ್ತದೆ ,ನಾನು ಗಮನಿಸಿದ ಒಂದು ವಿಷಯವೆಂದರೆ ಯಾರೇ ಇದರ ಒಡೆತನಕ್ಕೆ ಬಂದಿರಲಿ ಒಂದೇ ಅವರು ಮದುವೆ ಆಗುವುದಿಲ್ಲ ,ಆದವರಿಗೆ ಮಕ್ಕಳಗುವುದಿಲ್ಲ ಮತ್ತು ಆಸ್ತಿ ಸೋದರಿಯ ಸಂತಾನಗಳಿಗೆ ಪರಾಭಾರೆ ಆಗುತ್ತದೆ ಇದು ಆ ಸ್ಥಳ ಮಹಿಮೆಯೋ ಏನೋ .
ಟೈಟಾನಿಕ್ ಹಡಗಿನ ಹೆಸರನ್ನು ಕೇಳದವರ್ಯಾರು ಆ ಹಡಗಿನ ನಿರ್ಮಾಣಕ್ಕೆ ಕಟ್ಟಿಗೆ ಒದಗಿಸಿದ್ದು ಇದೇ ಟೋಲೀಮೊರೆ ಅರಣ್ಯ,ಇಲ್ಲಿದ್ದ ಒಂದು ಅರಮನೆಯಲ್ಲಿ ಎರಡನೇ ವಿಶ್ವ ಯುದ್ಧದ ಸಮಯದಲ್ಲಿ  ಅಮೇರಿಕನ್ ಸೈನಿಕರು ಉಳಿದು ಕೊಂಡಿದ್ದರು ಆದರೆ ಆ ಸುಂದರ ಕಟ್ಟಡ ಈಗ  ನೆಲಸಮ ಮಾಡಲಾಗಿದೆ , ೧೯೩೦ ರಲ್ಲಿ ಅರಣ್ಯ ಇಲಾಖೆಯವರಿಗೆ ಈ ಅರಣ್ಯದ  ಮೇಲ್ವಿಚಾರಣೆ ವಹಿಸಿದ ನಂತರ ನಿರಂತರ ಬೆಳವಣಿಗೆ ಕಂಡ  ಇದನ್ನು ೧೯೫೫ ರಲ್ಲಿ  ಐರ್ಲನ್ದ  ನ ಮೊದಲ ಅರನ್ಯೋದ್ಯಾನ ಎಂದು ಘೋಷಿಸಲಾಯಿತು 

ವಿಶೇಷ 
ಇದೊಂದೇ ಅರಣ್ಯ ಆದರೆ ಇಲ್ಲಿಂದ ಕಾಣುವ ದೃಶ್ಯಗಳು ಐದಾರು ಭಿನ್ನ ಭಿನ್ನ ಪ್ರದೇಶದ ಅನುಭವ ನೀಡುತ್ತವೆ.  ಶಿಮ್ನಾ  ಮತ್ತು ಸ್ಪಿಂಕ್ವೀ ನದಿಗಳು ಈ ಅರಣ್ಯದಲ್ಲಿ ಸಂಗಮ ಗೊಳ್ಳುತ್ತವೆ.ಮತ್ತು ಈ ನದಿಗಳು ಸಾಲಮನ್ ರುಚಿಯಾದ ಮೀನಿನ ಆಗರಗಳು ,ಕಾಡನ್ನು ಎರಡು ಭಾಗಗಳಾಗಿ ವಿಭಾಗಿಸಿದ ಈ ನದಿಗಳಿಂದಲೇ ಹುಟ್ಟಿಕೊಂಡ ಮತ್ತೊಂದು ಆಕರ್ಷಣೆ ಇಲ್ಲಿರುವ ಸೇತುವೆಗಳು ,ಅರಣ್ಯದಲ್ಲಿ ಒಟ್ಟು ೧೬ ಸೇತುವೆಗಳು ಒಂದೊಂದು ತಮ್ಮ ಹಿಂದೊಂದು ಕತೆಯನ್ನು ಹರವಿಕೊಂಡು ಕುಳಿತಿವೆ..ಕೆಲವು ಕಲ್ಲಿನ ಸೇತುವೆಗಳು ಕೆಲವು ತೂಗು ಸೇತುವೆ ,ಮತ್ತೆ ಕೆಲವು ಕಟ್ಟಿಗೆಯವು .

 ಹರ್ಮಿಟೆಜ್ ಇದರಲ್ಲಿ ಮುಖ್ಯವಾದುದು ಈ ಸೇತುವೆಯ ಪಕ್ಕ ಒಂದು ಸುಂದರ ಕಲ್ಲಿನ ಸೂರು ಇದೆ,ಆಗ ಇಲ್ಲಿ ವಾಸಿಸುತ್ತಿದ್ದ ಜೇಮ್ಸ್ ಹಮಿಲ್ತನ್ ವಿರಾಮಸಮಯದಲ್ಲಿ ಇಲ್ಲಿ ಮೀನು ಹಿಡಿಯಲು  ಬರುತ್ತಿದ್ದರು ಮತ್ತು ಅವರ ಪತ್ನಿ ಸ್ನೇಹಿತೆಯರು ಈ ಕಲ್ಲಿನ ಸೂರಿನಡಿಯಲ್ಲಿ ಕಸೂತಿ ಮಾಡುತ್ತ ,ಹರಟೆ ಹೊಡೆಯುತ್ತ ಪ್ರಕೃತಿ ಸೌಂದರ್ಯ ಆಸ್ವಾಧಿಸುತ್ತಿದ್ದರು,ಈ ಕಾರಣಕ್ಕೆ ಈ ಸೇತುವೆ ಈ ಕಲ್ಲಿನ ಸೂರನ್ನು ಕತ್ತಲಾಗಿತ್ತು ಎಂಬುದು ಇತಿಹಾಸದಿಂದ  ತಿಳಿದ ವಿಷಯ  ನಡು ನಡುವೆ ನದಿಯ ನಡುವೆ ಚಂದದ ಕಲ್ಲುಗಳನ್ನು ಜೋಡಿಸಿ ನೀರು ಕಡಿಮೆ  ಇದ್ದಕಡೆ ನಡಿಗೆಯಲ್ಲೇ ನದಿಯನ್ನು ದಾಟಬಹುದಾದ ಚಂದದ ವಿನ್ಯಾಸ ಕೂಡ , ನಮ್ಮದು ಭಾರತೀಯ ಮನಸ್ಸು ಆ ಸುಂದರ ತೀಳಿನೀರನ್ನು ಕಂಡ ಮೇಲೆ ಕೊನೆಪಕ್ಷ ಕಾಲು ಮುಳುಗಿಸಿ  ಸ್ವಲ್ಪ ಆಟ ಆಡಿ ಬರೋಣ ಅನ್ನಿಸಿತು..ನೀರಲ್ಲಿ ಕಾಲಿಟ್ಟರೆ ಅಲ್ಲೇ ಫ್ರೀಜ್ ಆಗಿ ಹೋದೇನೋ ಎಂಬ ಭಾವ ಬಂದಿದ್ದು ಸುಳ್ಳಲ್ಲ ಅಷ್ಟು  ತಂಪು..
ದ್ವಾರ ದಿಂದಲೇ ಕಾಣುವ  ಮೌರ್ನ್ ಪರ್ವತ ಶೃಂಗಗಳ ವಿಹಂಗಮ ನೋಟ , ಚಾರಣ ಮಾಡಿದರೆ ಪರ್ವತದ ತುದಿಯಿಂದ ಕಾಣುವ ಅಟ್ಲಾಂಟಿಕ್ ಸಾಗರ  ಸನ್ನಿಧಿ ,ಪರ್ವತವೇರಿದ ಆಯಾಸವನ್ನು ತಣಿಸುತ್ತದೆ ,
ಕಾಡಿನ ತುಂಬಾ ಹಲವು ಅಪರೂಪದ ಜೀವವೈವಿದ್ಯಗಳಿವೆ ಕೆಂಪು ಅಳಿಲು ಅವುಗಲ್ಲೊಂದು ,

ನಡೆದಷ್ಟು ಕಾಡು ,ನೋಡಿದಷ್ಟು ನೀರು ,ಮೌನ ದಲ್ಲಿ ಜೀಗುತ್ಟುವ ಹಲವು ಕೀಟಗಳ ಸಂಗೀತ..ಮುಗಿಲನ್ನು ಮುಟ್ಟುವ ಓಕ್ ಮರಗಳು , ಹಸಿವು ನೀರಡಿಕೆ ಎಲ್ಲವನ್ನು ಮರೆಸುತ್ತವೆ, ಪ್ರತಿ ರುತುವಿನಲ್ಲು ತನ್ನ ರೂಪವನ್ನು ಬದಲಿಸಿಕೊಳ್ಳುತ್ತದೆ ,ಒಮ್ಮೆ ಹಳದಿ ಎಲೆಗಳಿಂದ ಕೂಡಿದ ಕಾದು ಕಂಡರೆ ಮತ್ತೊಮ್ಮೆ ಬಾರಿ ಚಿಗುರು ಕೆಂಪು ,ತಿಳಿ ನೀರು ಅಲ್ಲಲ್ಲಿ ಪುಟ್ಟ ಪುಟ್ಟ ಜಲಪಾತ ನಿರ್ಮಿಸುತ್ತಾ ನಡೆಯುವ ಶಿಮ್ನಾ -ಸ್ಪಿಂಕ್ವೀ ನದಿಗಳು . ಎಷ್ಟೋ ವರ್ಷದ ಕನಸನ್ನು ನನಸು ಮಾಡಿದ ಶ್ರೇಯ ಈ ಟೊಲಿಮೊರ ಅರನ್ಯೋದ್ಯಾನಕ್ಕೆ .ನಿಮ್ಮ ಯುರೋಪ್ ಪ್ರವಾಸದಲ್ಲಿ ಇದನ್ನು ಸೇರಿಸಿಕೊಳ್ಳಲು ಮರೆಯಬೇಡಿ ,ಹತ್ತಿರದಲ್ಲೇ ಸೈಲೆಂಟ್ ವ್ಯಾಲಿ ,ಟೈಟಾನಿಕ್  ತಯಾರಾದ  ಊರು ಬೆಲ್ಫಾಸ್ಟ್ , ನ್ಯೂ ಕ್ಯಾಸಲ್ , ಜಗತ್ತಿನ ಅಧ್ಬುತಗಳಲ್ಲಿ ಒಂದಾದ ಜೈಂಟ್ಸ್ ಕ್ಯಾಸ್ ವೆ ಗಳಿವೆ ,ನನಗಾದ ಸಾರ್ಥಕ ಅನುಭವ ನಿಮಗೂ ಆಗಲಿ...

ಹುಡುಕಾಟ


ಸಿಟ್ಟು ಬಂದಿತ್ತು 
ಅದ್ಯಾರದೋ ಮೇಲೆ 
ಕೂಗುತ್ತಿದ್ದೆ ಚೀರುತ್ತಿದ್ದೆ 
ಅದೇನೋ ಸಿಟ್ಟು ಅದೇನೋ ಅಸಹನೆ 
ನನ್ನ ಆರ್ಭಟ ,ಆಟಾಟೋಪ ನೋಡಿ 
ಅಪ್ಪ ಹೇಳಿದರೊಂದು ಬುದ್ಧಿ ಮಾತ,
ಮಗಳೇ 
ಅವರಿವರು ನಿನಗಿಷ್ಟ ಬಂದಂತೆ ಇರಬೇಕೆಂದರೆ,
 ಅದು ಆಗದ ಮಾತು 
ಏನಿವೆಯೋ ಅವರ ಕಷ್ಟಗಳು , 
ಹಂಚಿಕೊಳ್ಳಲಾಗದ ದುಃಖ ದುಮ್ಮಾನಗಳು 
ಸಾಧ್ಯವಾದರೆ ಯೋಚಿಸು ,
ಅವರ ಸ್ಥಾನದಲ್ಲಿ ನಿನ್ನರಿಸಿ ನೋಡು ,
ಒಮ್ಮೆ ಅವರ ಚಪ್ಪಲಿಯಲ್ಲಿ ಕಾಲಿಟ್ಟು ನಡೆ 
ಅವರ ಹಾದಿಯ ಕಲ್ಲು ಮುಳ್ಳು ನಿನಗೂ ಕಂಡಾವು ,
ಅವರ ಅಸಮಾಧಾನಕ್ಕೆ ಕಾರಣ ಹೊಳೆದೀತು,

ಓಹ್ ಹೌದಲ್ಲ ,
ಆ ಗಳಿಗೆಯಿಂದ ನಾ ಹಾಗೆ ಮಾಡತೊಡಗಿದೆ 
ನನಗೆ ನೋವಾದಾಗೆಲ್ಲ , 
ನೋಯಿಸಿದವರ ಮನಸ್ಥಿತಿಯ ಬಗ್ಗೆ ಆಲೋಚಿಸಿದೆ 
ಸಿಟ್ಟಿನ ಬದಲು ನಿಟ್ಟುಸಿರು 
ಅಸಮಾಧಾನ ಅನುಕಂಪವಾಗಿ 
ಚಿಂತೆ ಚಿಂತನೆಯಾಯಿತು 
ಈಗ ನನಗೆ ಮತ್ತೆ ಮರಳಬೇಕಿದೆ 
ಅವರಿವರ ಚಪ್ಪಲಿಯಲ್ಲಿ ಕಾಲು ತೂರಿಸಿ 
ನೋವು ನುಂಗುತ್ತ 
ಅದೆಷ್ಟು ದೂರ ಬಂದಿದ್ದೇನೆಂದರೆ 
ನನಗೀಗ ನನ್ನ ಚಪ್ಪಲಿ ಸಿಗುತ್ತಲೇ ಇಲ್ಲ ,
ಅದೆಲ್ಲಿ ಬಿಟ್ಟೆ 
ಮರೆತೇ ಹೋಗಿದೆ ...
ಹುಡುಕುತ್ತಿರುವೆ 
ಹುಡುಕುತ್ತಲೇ ಇದ್ದೇನೆ

ಖಿನ್ನತೆ


ಹೇಗಾದರೂ ಮನಸು ಬಂದೀತು

ಅನ್ನುತ್ತೀರಿ ನೀವು,

ಹಾಗೆ ಉಸಿರಾಡುವ ಇಡೀ ಜೀವವನ್ನ 

ಒಂದು ಯಕಃಶಿತ್ ಹಗ್ಗದ ಸರಗಂಟಿಗೆ 

ತೂಗಿಬಿಡುವುದು.. 


ಕಷ್ಟವಿದೆ, 

ಅನುಭವಿಸಿದವರಿಗಷ್ಟೇ ಗೊತ್ತು..

ಖಿನ್ನತೆಯನ್ನ ನಿಭಾಯಿಸಿ ಅದರೊಟ್ಟಿಗೆ ಬದುಕುವುದು. 

ಅದೇ ಬದುಕಾಗುವುದು.


ಮಲಗಿದರೆ ಏಳಲು ಮನಸಾಗದು.. 

ಮಲಗಬೇಕೆಂದರೆ ನಿದ್ದೆಯೇಬರದು

ಕೆಲವೊಮ್ಮೆ ಹುಳುವಿನಂತೆ 

ಸುತ್ತಲೊಂದು ಕೋಶಕಟ್ಟಿಕೊಂಡು 

ಅದರಲ್ಲಿ ಕಾಲು ತೊಡೆಗೆ ಮುಖ ಆನಿಸಿಕೊಂಡು

ಸುಮ್ಮನೆ ಇದ್ದು ಬಿಡಬೇಕು ಅನಿಸುತ್ತದೆ 

ಯಾರಿಗೂ ಕಾಣದೆ. ಹೊರಗೂ ಬಾರದೆ,


ಕಷ್ಟವಿದೆ,

ಸಾವಿರಾರು ಅಂಕಿಗಳು

ಐದರ ಜೋಡು ಸಂಖ್ಯೆಗಳು. 

ನೂರಾರು ರಿಂಗ್ ಟೋನಗಳು,

ಒಂದೇ ಒಂದು ಲಯ 

ನನಗಾಗಿ ಮಿಡಿಯುವುದಿಲ್ಲ, 

ಒಂದೇ ಒಂದು ದನಿ ನನ್ನ 

ಕೇಳುವುದಿಲ್ಲ, 

ಹೇಗಿದ್ದಿ ? ಏನನಿಸುತ್ತದೆ ?

ಹಾಗ್ಯಾಕೆ ಅನಿಸುತ್ತದೆ? 

ನಾನಿಲ್ಲವೇ ನಿನಗೆ ಎಂದು 

ಯಾರೂ ಹೇಳುವುದಿಲ್ಲ ಒಂದೊಮ್ಮೆಯೂ,


ಕಷ್ಟವಿದೆ,

ನಾನರಿಗೂ ಬೇಡದ ಜೀವ

ಇದ್ದೇನುಮಾಡಲಿ? 

ಎಂಬ ಹುಕಿ ...

ಸುಲಭವಲ್ಲ ಖಿನ್ನನಾಗಿಯೂ 

ನಗುವಿನ ಮುಖವಾಡ ಹೊತ್ತು

ಈ ಸ್ವಾರ್ಥಿ ಜಗದಲ್ಲಿ 

ನಮ್ಮಕಾಲು ಠರಾಯಿಸುವಿದು.


ಕಷ್ಟವಿದೆ ಖಿನ್ನತೆಯೊಂದಿಗೆ

ಬದುಕುವುದು..

ಆದರೆ…..

ಬದುಕಿಗೆ ವಿದಾಯ ಹೇಳಿ ಹೋಗುವಷ್ಟಲ್ಲ!!!







ಪಯಣ

ಚಿತ್ರ -ಮೀರಾ ವಿನಯ್

ಪಯಣ

ಕಾಯುವುದಿಲ್ಲ ಸಮಯ 
ಕಾಯುತ್ತೇನೆ ನಾನು, 

ಬಿಳ್ಕೊಡುವ ಮುನ್ನವೇ
ಮತ್ತೆ ಸಿಗುವ ಕಾತರ , ಆತುರ

ನಾಲ್ಕು ಗಾಲಿಗಳು ಇನ್ನೊಂದೂ ಸುತ್ತು 
ತಿರುಗಿಲ್ಲ, 
ನಾಲ್ಕು ಯುಗಕ್ಕಿಂತ  ದೀರ್ಘ
 ಈ ಚಣಗಳು

ನಿನ್ನ ಕಣ್ಣನ್ನು ನೋಡಬೇಕೆಂದೇ ಹಣಕಿದೆ
ಹಿಂದಿನ ಗಾಜಿಗೆಲ್ಲ ಮಂಜು
ನಿನ್ನ ಕಣ್ಣೀರ ಊಗಿಯೇ ಇರಬೇಕು,

ಸರಿ ಹೊರಟು ಬಿಡು, 
ಮತ್ತೆ ನಿಲ್ಲಬೇಡ, 
ಈಗ ನೀ ಹೋದರೆ ತಾನೇ ಮತ್ತೆ ನಾವು ಸಿಗುವ 
ಲೆಕ್ಕ ಶುರುವಾಗುವುದು, 

ಮತ್ತೆ ಹಾಗೆ ಸಿಗೋಣ , 
ಅಪರಿಚಿತರಂತೆ, 
 ಅದ್ಯಾವುದೋ ಗೊತ್ತಿರದ ಓಣಿಯ ತಿರುವಿನಲ್ಲಿ.

ಮತ್ತೆ ನಗೋಣ , ಕೈ ಕೈ ಹಿಡಿದು 
ಕಳೆದು ಹೋಗೋಣ, 
ಮತ್ತೊಮ್ಮೆ ನೀ ಹೊರಟು ನಿಲ್ಲುವ ಮುನ್ನ,
ಈ ಬಾರಿ ಉಳಿದು ಹೋದ ಮಾತು, ಕಸಿವಿಸಿ ಕನವರಿಗೆ 
ಹಳದಿ ಹಾಳೆಯಲ್ಲಿ ಬರೆದು , ಒಣಗಿದ ಗುಲ್ಮೊಹರ್ ಅಂಟಿಸಿ 
ಸಂಚಿಯಲ್ಲಿ ತುಂಬಿ ಕೊಡುವೆ, 

ಈಗ ಹೊರಟು ಬಿಡು,
ಮತ್ತೆ ಸಿಗುವ