ಮೊದಲೆಲ್ಲ, ರಾತ್ರಿ ಹೊತ್ತು ಕರೆಂಟ್ ಹೋದರೆ ಒಂದು ಖುಷಿ ಮನಸ್ಸನ್ನು ಆವರಿಸುತ್ತಿತ್ತು. ಯಾಕೆಂದರೆ ಅಂಥ ರಾತ್ರಿಗಳಲ್ಲಿ ಪಪ್ಪ ಅಂಗಳದಲ್ಲಿ ಚಾಪೆ ಹಾಸಿಕೊಂಡು ತಂಗಿ ಮತ್ತು ನನ್ನನ್ನು ಅವರ ತೋಳುಗಳ ಮೇಲೆ ಮಲಗಿಸಿಕೊಂಡು ಕಥೆ, ಅವರು ಓದಿದ ವಿಷಯ, ಅವರ ಜೀವನಾನುಭವ ಹೀಗೆ ಏನೇನೋ ಹೇಳುತ್ತಿದ್ದರು. ನಿತ್ಯ ಮಲಗುವಾಗ ಅವರಿಂದ ಕಥೆ ಕೇಳುತ್ತಿದ್ದನಾದರೂ ಈ ಕರೆಂಟ್ ಹೋದ ರಾತ್ರಿ ಅಂಗಳದಲ್ಲಿ ನಡೆಯುತ್ತಿದ್ದ ಈ ಕಥಾ ಸಮಯ ನನಗೆ ಬಹಳಷ್ಟು ಖುಷಿ ಕೊಡುತ್ತಿತ್ತು ಯಾಕಂದ್ರೆ ಮೂವರ ಕಣ್ಣುಗಳು ಆಕಾಶಕ್ಕೆ ನೆಟ್ಟಿರುತ್ತಿತ್ತು ಅಲ್ಲಿರುವ ರಾಶಿ ತಾರೆಗಳು ಅವುಗಳ ಮಿನುಗು. ಅಲ್ಲಿ ಹೊಳೆಯುವ ಚಂದ್ರ ಮತ್ತವನ ಮೇಲೆ ಮೂಡಿದ ಕಲೆಗಳಲ್ಲಿ ಯಾವುದೋ ಕಥೆ ಹುಡುಕುವ ಹುಕಿ. ಮತ್ತೆ ಹಿನ್ನೆಲೆಯಲ್ಲಿ ಪಪ್ಪನ ದನಿ. ಅಲ್ಲಿ ಸಾವಿರ ಪ್ರಶ್ನೋತ್ತರ ನಡೆಯುತ್ತಿತ್ತು. ಆಗ ಅದು ಯಾವುದೋ ಸಿನಿಮಾ ಅಥವಾ ಡಾಕ್ಯುಮೆಂಟರಿ ಫೀಲಿಂಗ್ ಕೊಡುತ್ತಿತ್ತು. ಆಕಾಶ ನಿಜಕ್ಕೂ ನನಗೆ ಬೆಳ್ಳಿತೆರೆಯೇ ಆಗಿರುತ್ತಿತ್ತು.
ಅಂಥದೇ ಒಂದು ಸಂಜೆ ನಮ್ಮ ನಡುವೆ ಆದ ಮಾತುಕತೆಯನ್ನು ಇಲ್ಲಿ ಬರೆಯುತ್ತಿರುವೆ.
ಚಿಕ್ಕ ಊರಿನಲ್ಲಿ ಸಾವುಗಳು ಸಂಭವಿಸಿದಾಗ, ಬರೀ ಒಂದು ಮನೆಯಲ್ಲ ಇಡೀ ಊರೇ ಒಂದೆರಡು ದಿನ ಸೂತಕದ ಭಾವಕ್ಕೆ ಹೊಕ್ಕಿಬಿಡುತ್ತದೆ. ಅಷ್ಟೇ ಬೇಗ ನಾರ್ಮಲ್ ಕೂಡ ಆಗುತ್ತದೆ.
ಆ ದಿನ ಪಕ್ಕದ ಓಣಿಯಲ್ಲಿ ಯಾರೋ ಚಿಕ್ಕ ವಯಸ್ಸಿನವರು ತೀರಿ ಹೋಗಿದ್ದರು.ಅವರ ಮನೆಯವರ ಅಳು, ಕೂಗಾಟ ಸ್ಪಷ್ಟವಾಗಿ ಕೇಳುತ್ತಿತ್ತು. ಆಗ ನನ್ನ ಮನಸಿನಲ್ಲಿ ಒಂದು ಆಲೋಚನೆ ಹುಟ್ಟಿತು. ಒಂದೊಮ್ಮೆ ನಾನು ಸತ್ತು ಹೋದರೆ ನನ್ನ ಮನೆಯವರೆಲ್ಲ ಹೀಗೆ ಅಳುತ್ತಾರ? ಅಯ್ಯೋ ಅವರೆಲ್ಲಾ ಅಳುವಾಗ ನನಗೆ ಅದೆಷ್ಟು ನೋವಾಗುತ್ತದೆ, ಆದರೆ ಅಳಬೇಡಿ ಅಂತ ಹೇಳಲು ನನ್ನ ದೇಹಕ್ಕೆ ಜೀವ ಇರುವುದಿಲ್ಲ. ಅಯ್ಯೋ! ನನ್ನ ಮನೆಯವರನ್ನು ಬಿಟ್ಟು ನಾನು ಹೋಗಲಾರೆ, ಎಂಬ ಮಾತು ಮನಸಿನಲ್ಲಿ ಮುಗಿಯುತ್ತಿರುವಾಗಲೇ ಪಪ್ಪನನ್ನು ಘಟ್ಟಿಯಾಗಿ ಅಪ್ಪಿಕೊಂಡೆ. '' ನನಗ ಸಾಯಾಕ್ ಮನಸಿಲ್ಲ ಪಪ್ಪ, ನಿಮ್ನೆಲ್ಲ ಹ್ಯಾಂಗ್ ಬಿಟ್ಟು ಹೋಗ್ಲಿ, ಎಷ್ಟು ನೋವು ಆಗ್ತದೋ ಏನೋ! ಅಂತ ಅಳಲು ಶುರು ಮಾಡಿದೆ. ಪಪ್ಪ ಸಮಾಧಾನ ಮಾಡುತ್ತಾ ನನ್ನ ಅಳು ನಿಲ್ಲುವ ತನಕ ಕಾದರು.
ನಂತರ ಹೇಳಿದರು, 'ಸಾವು ಎಂಬುದು ನೋವಲ್ಲವ್ವ, ಬಿಡುಗಡೆ.'
ಅದು ಹೇಗೆ? ನನ್ನ ಪ್ರಶ್ನೆ.
ಪಪ್ಪಾ: ನೀನು ಬೇರೆ, ನಿನ್ನ ದೇಹ ಬೇರೆ, ನೀನು ಚಂದ ಚಂದ ಬಟ್ಟೆ ಹಾಕುತ್ತೀಯಲ್ಲ ಹಾಗೇ ನಿನ್ನ ಆತ್ಮಕ್ಕೆ ನಿನ್ನ ದೇಹ ಒಂದು ಧಿರಿಸು ಅಷ್ಟೇ!
ಅಮಿತಾ: ಆದರೆ ಆತ್ಮ ದೇಹ ಬಿಟ್ಟು ಹೋಗುವಾಗ ಅದಕ್ಕೆ ನೋವಾಗುವುದಿಲ್ಲವೇ? ಅದು ಇಷ್ಟೊಂದು ಪ್ರೀತಿಪಾತ್ರರನ್ನು ಬಿಟ್ಟು ಹೋಗುವಾಗ? ಆ ಆತ್ಮ ಎಷ್ಟು ದುಃಖ ಪಡುತ್ತದೋ!
ಪಪ್ಪ: ಹ್ಮ್ಮ್! ಹಾಗಲ್ಲ ಅದು.
ಈಗ ನಿನ್ನ ಬಾಯಿಯಲ್ಲಿ ಎಂಜಲು ತುಂಬುತ್ತದೆ, ಬಹಳಷ್ಟು ಬಾರಿ ನಾವು ಅದನ್ನು ನಂಗುತ್ತೇವೆ. ಕೆಲವೊಮ್ಮೆ ಕಾರಣವಿದ್ದೋ ಇಲ್ಲದೆಯೂ ಉಗಿದು ಬಿಡುತ್ತೇವೆ, ಅಷ್ಟು ಹೊತ್ತು ನಿನ್ನ ಬಾಯಲ್ಲೇ ಇತ್ತು ಅನ್ನುವ ಕಾರಣಕ್ಕೆ ನೆಲಕ್ಕೆ ಉಗಿದ ಎಂಜಲ ನೋಡಿ ನೀನು ಅದು ನನ್ನ ಎಂಜಲು ಎಂದು, ಅದರ ಬಗ್ಗೆ ನಿನಗೆ ಪ್ರೀತಿ ಉಕ್ಕುತ್ತದೆಯೇ? ಅಥವಾ ನನ್ನ ಉಗುಳು ಇದು ಎಂದು ಆಪ್ಯಾಯತೆ ಇರುತ್ತದೆಯೇ?
ಅಮಿತಾ: ಇಲ್ಲ... ಇಲ್ಲಾ... ಉಗಿದ ಮೇಲೆ ಅದರತ್ತ ನೋಡುವ ಮನಸು ಆಗುವುದಿಲ್ಲ. ಅದನ್ನು ನೋಡಿದರೆ ವಾಕರಿಕೆ ಬರುತ್ತದೆ.
ಪಪ್ಪ: ಇಷ್ಟೇ! ದೇಹ ಮತ್ತು ಜೀವದ ಸಂಬಂಧ. ಆತ್ಮಕ್ಕೆ ಸಾವಿಲ್ಲ ಆದರೆ ದೇಹಕ್ಕಿದೆ. ಹೀಗಾಗಿ ಸಾವು ಎಂಬುದು ನಮ್ಮ ಸುತ್ತ ಮುತ್ತಲಿನ ಮಂದಿಗೆ ಆತ್ಮೀಯರಿಗೆ ನೋವು ಕೊಡುತ್ತದೆಯೇ ಹೊರತು ಆ ಆತ್ಮಕ್ಕಲ್ಲ! ಸಾವನ್ನು ಯಾವತ್ತಿಗೂ ಬಿಡುಗಡೆ, ಸ್ವಾತಂತ್ರ್ಯ ಎಂಬುದಾಗಿ ನೋಡಬೇಕೆ ಹೊರತು ಭಯವಾಗಿ ಅಲ್ಲ.
ಅಮಿತಾ: ಸಾವು ಬಿಡುಗಡೆ ಅಂತಾದರೆ, ಬದುಕಲು ಯಾಕೆ ಇಷ್ಟೆಲ್ಲಾ ಕೆಲಸ ಮಾಡಬೇಕು? ಈ ಶಾಲೆ ಹೋಂವರ್ಕ್, ಇದೆಲ್ಲ ಯಾಕೆ ಬೇಕು?
ಪಪ್ಪ ನಗುತ್ತಾ, ಸಾವಿನ ಘನತೆ ಇರುವುದು ನಾವು ಬದುಕುವ ರೀತಿಯಲ್ಲಿ. ಎಷ್ಟು ಪ್ರೀತಿಯಿಂದ, ಸಮಾಧಾನದಿಂದ, ಸಾವಧಾನವಾಗಿ ಬದುಕನ್ನು ಬದುಕುತ್ತೇವೋ , ನಮ್ಮ ಸಾವಿನ ಘನತೆ ಅಷ್ಟೇ ಹೆಚ್ಚುತ್ತದೆ. ಜೀವನ ಎಷ್ಟು ಕುಗ್ಗಿಸಿದರೂ ಬದುಕುವುದ ಬಿಡಬಾರದು. ಸಾವನ್ನು ಬಯಸಬಾರದು, ಬದುಕುವುದು ಬಿಡಬಾರದು. ಸಾವು ಪರಮ ಸತ್ಯ. ಇಂದಲ್ಲ ನಾಳೆ! ಬಂದೇ ಬರುತ್ತದೆ! ಯಾವತ್ತಿಗೂ ಖಂಡಿತವಾಗಿರುವುದು ಅದು ಮಾತ್ರ.
ಕಲಿಯಬೇಕಿರುವುದು ಹೇಗೆ ಬದುಕಬೇಕು ಎಂಬುದನ್ನ!
ಆಗ ಮಾತ್ರ ಬಿಡುಗಡೆಯ ಸುಖ, ಆನಂದ ಸಿಗುತ್ತದೆ ಎಂಬುದು ನನ್ನ ಗ್ರಹಿಕೆ ಎಂದರು.
11 ವರ್ಷದ ನಾನು ಅದನ್ನು ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಂಡೆನೋ ಗೊತ್ತಿಲ್ಲ. ಆವತ್ತಿನಿಂದ ಸಾವಿನ ಬಗ್ಗೆ ಭಯ, ಆತಂಕ ಕುತೂಹಲ ಎಲ್ಲ ಹೋಗಿ,ಸಾವು ಎಂಬುದು ಬಿಡುಗಡೆ, ಆದರೆ ಅದು ನಿರ್ಧಾರವಾಗುವುದು ನಾವು ಹೇಗೆ ಬದುಕಿದೆವು ಎಂಬುದರ ಮೇಲೆ! ಎಂಬುದು ತಲೆಯಲ್ಲಿ fix ಆಗಿ ಹೋಗಿದೆ.
ನನ್ನ ಮಟ್ಟಿಗೆ ಈ ಬದುಕು ವರ, ಚಂದಾಗಿ ಬದುಕಿ ಬಿಡಬೇಕು!
ಸಾವು ಯಾವತ್ತಿದ್ದರೂ ನಮ್ಮದೇ! ಈ ಬದುಕಿನದು ಗ್ಯಾರೆಂಟಿ ಇಲ್ಲ ನೋಡಿ,ಅದಕ್ಕೇ, ಜೀಲೋ ಅಪನಿ ಜಿಂದಗಿ. ಪ್ಯಾರ್ ಸೆ! ಶಿದ್ಧತ್ ಸೇ!
No comments:
Post a Comment